Monday, November 27, 2023

ಭಗವಂತನನ್ನು ಎಬ್ಬಿಸಲೊಂದು ಹಬ್ಬ (Bhagavantanannu Ebbisalondu Habba)

ಶ್ರೀಮತಿ ಮೈಥಿಲಿ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)




ಕಾರ್ತೀಕ ಮಾಸದ ಶುಕ್ಲಪಕ್ಷ ದ್ವಾದಶಿಯು ಉತ್ಥಾನದ್ವಾದಶಿಯೆಂಬುದಾಗಿ ಸಂಭ್ರಮದಿಂದ ಕೊಂಡಾಡಲ್ಪಡುತ್ತದೆ.
'ಉತ್ಥಾನ' ಎಂದರೆ ಎಬ್ಬಿಸುವುದು, ಎಚ್ಚರಗೊಳಿಸುವುದು. ಶಯನದ್ವಾದಶಿಯಿಂದ ನಾಲ್ಕುತಿಂಗಳಕಾಲ ಯೋಗನಿದ್ರೆಯಲ್ಲಿ ಪವಡಿಸಿರುವ ಕ್ಷೀರಾಬ್ಧಿನಾಥನನ್ನು ಎಚ್ಚರಗೊಳಿಸುವ ದಿನವಾದ್ದರಿಂದ ಈ ದಿನವು ಕ್ಷೀರಾಬ್ಧಿನಾಥವ್ರತ/ಪೂಜೆ ಎನಿಸಿಕೊಳ್ಳುತ್ತದೆ. ಶ್ರೀಮನ್ನಾರಾಯಣನು ತನ್ನ ನಿದ್ರಾ-ಮುದ್ರೆಯನ್ನು ಬಿಟ್ಟು ಎಚ್ಚರ-ಮುದ್ರೆಯನ್ನು ಭಕ್ತರಿಗೆ ತೋರುವ ದಿನವಾದ್ದರಿಂದ ಉತ್ಥಾನದ್ವಾದಶೀ ಎನಿಸಿಕೊಳ್ಳುತ್ತದೆ.

ಭಗವಂತನ ನಿದ್ರೆ:
ಭಗವಂತನು ನಾಲ್ಕು ತಿಂಗಳುಗಳು ನಿದ್ರಿಸುವುದಾದರೆ ಜಗದ್ವ್ಯಾಪಾರ ನಡೆಯುವುದು ಹೇಗೆಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಭಗವಂತನ ನಿದ್ರೆಯು ಪ್ರಾಕೃತರ ನಿದ್ರೆಯಂತೆ ಜಾಡ್ಯನಿದ್ರೆಯಲ್ಲ, ಅದು ಯೋಗನಿದ್ರೆ. ತನ್ನ ಯೋಗನಿದ್ರೆಯ ಕಾಲದಲ್ಲಿ ಜಗದ್ವ್ಯಾಪಾರ ಕಾರ್ಯವನ್ನು ಪ್ರಕೃತಿಮಾತೆಗೆ ವಹಿಸುತ್ತಾನೆ. ಆತನು ಸದಾ ಯೋಗದಲ್ಲೇ ಇರುವವನಾದರೂ ಈ ನಾಲ್ಕುತಿಂಗಳಕಾಲ ಯೋಗನಿದ್ರಾ'ಮುದ್ರೆಯನ್ನು' ಅನುಗ್ರಹಿಸುತ್ತಾನೆ. ಆತನ ನಿದ್ರಾಮುದ್ರೆಯನ್ನು ನೋಡಲು ಅಪೇಕ್ಷಿಸುವ ಭಕ್ತರಿಗಾಗಿ ಈ ಭಂಗಿಯಲ್ಲಿ ಕಂಗೊಳಿಸುತ್ತಿದ್ದು ಉತ್ಥಾನದ್ವಾದಶಿಯಂದು ಯೋಗನಿದ್ರೆಯಿಂದ ಅರಳಿದ ಅರಳುಕಂಗಳಿಂದ ಭಕ್ತರನ್ನು ಅನುಗ್ರಹಿಸುತ್ತಾನೆ.

ಕಾಲದ ಔಚಿತ್ಯ:
ಚಾತುರ್ಮಾಸ್ಯದ ನಾಲ್ಕು ತಿಂಗಳುಗಳು ಎಡೆಬಿಡದೆ ಮಳೆಯನ್ನು ಸುರಿಸುವ ಕಾಲ. ಹಂಸಗಳು ನಿರಂತರ ವರ್ಷವನ್ನು ತಡೆಯಲಾರದೆ ಮಾನಸಸರೋವರವನ್ನು ಸೇರುತ್ತವೆ ಎನ್ನುತ್ತಾರೆ. ಅಂತೆಯೇ ಪರಮಹಂಸರೂ ತಮ್ಮ ಹೃದಯಮಾನಸಸರೋವರವನ್ನು ಸೇರಿ ನಿದ್ರಾಮುದ್ರಾಭಿರಾಮನಾದ ಭಗವಂತನಲ್ಲಿ ರಮಿಸುತ್ತಾರೆ.
ಪಾಮರರಿಗೂ ಕೂಡ ಮಳೆಯಕಾರಣದಿಂದಾಗಿ ಹೊರವ್ಯಾಪಾರಗಳನ್ನು ಕಡಿಮೆಮಾಡಿ ಭಗವಂತನಲ್ಲಿ ವಿಶ್ರಾಂತಿಯನ್ನು ಪಡೆಯಲು ಪುಷ್ಟಿನೀಡುವ ಕಾಲ ಇದಾಗಿದೆ. ದ್ವಾದಶಿಯಂದು ಭಗವಂತನಿಗೆ ಸುಪ್ರಭಾತವನ್ನು ಹಾಡಿ ನಿದ್ರಾಮುದ್ರೆಯಿಂದ ಎಚ್ಚರಗೊಳಿಸಿ, ವಿಶೇಷಪೂಜೆಗಳನ್ನರ್ಪಿಸಿ, ಅನುಗೃಹೀತರಾಗಿ ಮುಂದಿನ ವ್ಯಾಪಾರಗಳನ್ನು ಆತನ ಸ್ಮರಣೆಯಲ್ಲಿ ಮಾಡಲು ಉದ್ಯುಕ್ತರಾಗಬೇಕೆನ್ನುವುದು ಇಲ್ಲಿಯ ಆಶಯ.

ಪೂಜಾಕಲ್ಪ:
ಉತ್ಥಾನದ್ವಾದಶೀ ಪೂಜೆಯನ್ನು ದೇಶದ ಬೇರೆಬೇರೆ ಭಾಗಗಳಲ್ಲಿ ವಿಸ್ತಾರವಾಗಿಯೂ, ಸಂಕ್ಷಿಪ್ತವಾಗಿಯೂ ನಾನಾ ರೀತಿಗಳಲ್ಲಿ ಆಚರಿಸುವುದುಂಟು. ಇಲ್ಲಿ ವಿಸ್ತಾರಗಳಿಗೆ ಹೋಗದೆ ಸಾಮಾನ್ಯವಾಗಿ ಕಂಡುಬರುವ ಕ್ರಮವನ್ನು ಗಮನಿಸುವುದಾದರೆ, ಭಗವಂತನಿಗೆ ಷೋಡಶೋಪಚಾರಗಳೊಂದಿಗೆ ವಿಶೇಷಪೂಜೆಯನ್ನು ಅರ್ಪಿಸುವುದರ ಜೊತೆಗೆ ತುಲಸೀ ವಿವಾಹವನ್ನೂ ಆಚರಿಸುವ ರೂಢಿಯಿದೆ. ತುಲಸೀ- ಧಾತ್ರಿಯರ(ನೆಲ್ಲಿಯ) ಪೂಜೆ, ತುಲಸೀವಿವಾಹ ಮುಂತಾದುದನ್ನು ಸಂಧ್ಯಾಕಾಲದಲ್ಲಿ ಮಾಡುವ ರೂಢಿಯೂ ಉಂಟು. ಅಂದು ಹೊಸ ನೆಲ್ಲಿಯಕಾಯಿನಿಂದ ಕೂಡಿದ ನೆಲ್ಲಿಯಕೊಂಬೆಯನ್ನು ತುಲಸೀಗಿಡದೊಡನೆ ಸೇರಿಸಿ ಮಧ್ಯದಲ್ಲಿ ಶ್ರೀಕೃಷ್ಣನನ್ನಿಟ್ಟು ಪೂಜಿಸುವುದು ರೂಢಿಯಲ್ಲಿದೆ. ನೆಲ್ಲಿಯಕಾಯನ್ನು ಬಟ್ಟಲಿನಂತೆ ಮಾಡಿ ಅದರಲ್ಲಿ ಹಸುವಿನತುಪ್ಪ ಅಥವ ಎಳ್ಳೆಣ್ಣೆಯನ್ನು ತುಂಬಿ ದೀಪವನ್ನು ಬೆಳಗಿಸುವ ಪದ್ಧತಿಯೂ ಉಂಟು.
ಇಲ್ಲಿ ತುಲಸೀ-ಧಾತ್ರಿಯರ ಪೂಜೆಯೆಂದಾಗ ಪೂಜಿಸುವುದು ಮರಗಿಡಗಳನ್ನಲ್ಲ, ಅದರಲ್ಲಡಗಿರುವ ದೇವಿಯನ್ನು ಎಂಬಂಶವು ಗಮನಾರ್ಹ.

ಧಾತ್ರಿಯ ವೈಶಿಷ್ಟ್ಯ:
`
ಧಾತ್ರೀ'-ಧರಿಸಿ, ಪೋಷಿಸುವವಳು. ಶ್ರೀಫಲಾ, ಆಮಲಕೀ, ಅಮೃತಾ, ರೋಚಿನಿ ಇತ್ಯಾದಿ ಇತರ ಹೆಸರುಗಳು ಅಮೃತತ್ತ್ವ, ರುಚಿಕರ, ವೀರ್ಯವೃದ್ಧಿ ಮುಂತಾದ ಇದರ ಗುಣಾತಿಶಯಗಳನ್ನು ತಿಳಿಸುತ್ತವೆ.
`ಧಾತ್ರಿಯು ತಾಯಿಯಂತೆ ಮನುಷ್ಯರಲ್ಲಿ ವಾತ್ಸಲ್ಯವನ್ನು ತೋರುತ್ತಾಳೆ. ಇದರ ನೀರಿನ ಪಾನ ಆಯುರ್ವೃದ್ಧಿಕರ. ಇದರಿಂದ  ಸ್ನಾನಮಾಡುವುದು ವಿಘ್ನಹಾರಕ. ಇದು ದಾರಿದ್ರ್ಯವನ್ನು ನಾಶಪಡಿಸಿ ಮೋಕ್ಷವನ್ನೇ ಕೊಡುತ್ತದೆ. ತುಲಸೀ-ಬಿಲ್ವಗಳಲ್ಲಿನ ಶ್ರೇಷ್ಠಗುಣಗಳೆಲ್ಲವೂ ಧಾತ್ರಿಯಲ್ಲಿಯೂ ಉಂಟು' ಎಂಬುದಾಗಿ ಶಾಸ್ತ್ರಗಳು ಕೊಂಡಾಡುತ್ತವೆ.

ಧಾತ್ರಿಯ ಅಧಿಷ್ಟಾತೃದೇವತೆಯು ಲಕ್ಷ್ಮೀ-ಪಾರ್ವತಿಯರ ವಿಭೂತಿಯಾಗಿ, ಜಗನ್ಮಾತೆಯ ಅಂಶಭೂತಳಾಗಿ, ಆನಂದಪ್ರದಳಾಗಿದ್ದಾಳೆ ಎಂಬ ಸತ್ಯಾರ್ಥವನ್ನು ಪುರಾಣಗಳು ಕಥಾರೂಪದಲ್ಲಿ ಹೀಗೆ ವರ್ಣಿಸುತ್ತವೆ- ಒಮ್ಮೆ ಲಕ್ಷ್ಮೀ-ಪಾರ್ವತಿಯರು ತಮ್ಮಿಂದಲೇ ಸೃಷ್ಟಿಯಾದ ಪದಾರ್ಥಗಳಿಂದ ಶಿವನನ್ನೂ, ವಿಷ್ಣುವನ್ನೂ ಪೂಜಿಸಲು ಇಚ್ಚಿಸಿದಾಗ ಅವರಿಬ್ಬರ ಕಂಗಳ ಆನಂದಭಾಷ್ಪವು ಭೂಮಿಯಲ್ಲಿಳಿದು ಅದರಿಂದ ನೆಲ್ಲಿಗಿಡವು ಹುಟ್ಟಿತು. ಶುದ್ದವಾದ(ಅಮಲವಾದ) ಜಲ(ಕ)ದಿಂದ ಹುಟ್ಟಿದ್ದರಿಂದ `ಆಮಲಕ'ವೆಂದೂ, ಆಗ ದೇವತೆಗಳ ಜಯಕಾರದಿಂದಾದ ಆನಂದವನ್ನು ಧರಿಸಿದ್ದರಿಂದ `ಧಾತ್ರೀ'ಯೆಂದೂ ಹೆಸರಾಯಿತು.
ಧಾತ್ರಿಯು ಆಧಿಬೌತಿಕ, ಆಧಿದೈವಿಕ, ಆಧ್ಯಾತ್ಮಿಕವೆಂಬ ಮೂರೂಕ್ಷೇತ್ರಗಳಿಗೂ ಪುಷ್ಟಿನೀಡುತ್ತದೆ.
ಆಧಿಭೌತಿಕಪ್ರಯೋಜನ:
ಇದು ಪ್ರಧಾನವಾಗಿ ತ್ರಿಧಾತುಗಳ ವೈಷಮ್ಯವನ್ನು ನೀಗಿಸಿ ಧಾತುಪ್ರಸನ್ನತೆಯನ್ನುಂಟುಮಾಡುತ್ತದೆ, ಅನೇಕ ರೋಗಗಳ ನಿವಾರಣೆಯನ್ನು ಮಾಡಿ ಆಯುರ್ವೃದ್ಧಿಯನ್ನು ನೀಡುತ್ತದೆ ಎಂಬುದಾಗಿ ಆಯುರ್ವೇದವು ಕೊಂಡಾಡುತ್ತದೆ.

ಆಧಿದೈವಿಕಪ್ರಯೋಜನ:
ಇದು ಶಿವ-ವಿಷ್ಣು ಇಬ್ಬರ ಪೂಜೆಗೂ ಯೋಗ್ಯವಾದದ್ದು. ಆಮಲಕದಿಂದ ಅವರನ್ನು ಪೂಜಿಸಿ ನೈವೇದ್ಯಮಾಡಿ ಪ್ರಸಾದರೂಪವಾಗಿ ಅದನ್ನು ಸೇವಿಸಿದಾಗ ಆಯಾದೇವತೆಗಳ ಪ್ರೀತಿಗೆ ಕಾರಣಾವಾಗುತ್ತದೆ. ನೆಲ್ಲಿಯಿಂದ ಸ್ನಾನ-ಪಾನಗಳು ನಮ್ಮೊಳಗೆ ಆ ದೇವತಾಕೇಂದ್ರಗಳನ್ನು ತೆರೆದು ಧ್ಯಾನಕ್ಕೆ ಪುಷ್ಟಿಯನ್ನು ನೀಡಿ ಉಪಾಸನೆಯ ಫಲಪ್ರಾಪ್ತಿಗೆ ಕಾರಣಾವಾಗುವುದು.

ಆಧ್ಯಾತ್ಮಿಕಪ್ರಯೋಜನ:
ನೆಲ್ಲಿಯ ಸೇವನೆಯು ಆತ್ಮಗುಣಗಳ, ಬುದ್ಧಿಯ, ಆರೋಗ್ಯದ, ದ್ರವ್ಯಗಳ-ದಾರಿದ್ರ್ಯವನ್ನು ನೀಗಿಸುತ್ತದೆ. ತನ್ಮೂಲಕ ಧಾತುಪ್ರಸನ್ನತೆಯನ್ನೇರ್ಪಡಿಸಿ ಸಮಾಧಿಸಿದ್ಧಿಯನ್ನುಂಟು ಮಾಡುತ್ತದೆ, ಭಗವತ್‌ಸಾಕ್ಷಾತ್ಕಾರ-ಮೋಕ್ಷಗಳಿಗೆ ಹೇತುವಾಗುತ್ತದೆ.  
ನೆಲ್ಲಿಯನ್ನು ಸೇವಿಸುವವರಿಗೆಲ್ಲಾ ಮುಕ್ತಿ ಎಂದರ್ಥವಲ್ಲ. ಭಗತ್ಸಾಕ್ಷಾತ್ಕಾರಕ್ಕಾಗಿ ನಿಷ್ಠೆ-ಪ್ರಾಮಾಣಿಕತೆಗಳಿಂದ ಶ್ರಮಿಸುವ ಸಾಧಕರ ಯೋಗಸಿದ್ಧಿಗೆ ಇದರ ಸೇವನೆಯು ಸಹಾಯವನ್ನು ನೀಡುತ್ತದೆ ಎಂಬಂಶವು ಇಲ್ಲಿ ಗ್ರಾಹ್ಯ. ನೆಲ್ಲಿ-ಹಸುವಿನತುಪ್ಪದ ಯೋಗದಿಂದ ಬೆಳಗುವ ದೀಪದ ದರ್ಶನ-ವಾಸನೆಗಳು ಪಾಪಪರಿಹಾರಕ-ಜ್ಞಾನಪ್ರದ. ತುಲಸಿಯು ಶ್ರೀಕೃಷ್ಣನಿಗೆ ಸಂಬಂಧಿಸಿದ ಕೇಂದ್ರಗಳನ್ನು ತೆರೆದು ಆತನ ಪೂಜೆಗೆ ಸಹಕರಿಸುತ್ತದೆ.
ಆದ್ದರಿಂದ ಯೋಗಮೂರ್ತಿಯಾದ ಭಗವಂತನ ಪೂಜೆಯಲ್ಲಿ ಧಾತ್ರಿ-ತುಲಸಿಗಳನ್ನು ಅಳವಡಿಸಲಾಗಿದೆ. ಹಬ್ಬಗಳ ಆಚರಣೆಯು ದೇಶದಾದ್ಯಂತ ಹರಡಿದ್ದರೂ ಅದು ಬಹುಪಾಲು ಯಾಂತ್ರಿಕವಾಗಿಯೇ ನಡೆಯುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ. ಶ್ರೀರಂಗಮಹಾಗುರುಗಳು `ಭಾರತೀಯಮಹರ್ಷಿಗಳ ಹೃದಯಭೂಮಿಕೆಯಿಂದ ಮೂಡಿಬಂದ ಹಬ್ಬಗಳ ಆಚರಣೆಯು ಅರ್ಥಹೀನವಲ್ಲ, ಇದರಲ್ಲಿ ವೈಜ್ಞಾನಿಕನೋಟವುಂಟು' ಎಂಬ ಮರ್ಮವನ್ನು ತಿಳಿಸಿಕೊಟ್ಟ ಮಹಾಯೋಗಿಗಳು.  ಈ ವಿಜ್ಞಾನವನ್ನರಿತು ಶ್ರದ್ಧೆಯಿಂದ  ಉತ್ತಾನದ್ವಾದಶೀಪೂಜೆಯನ್ನು ಆಚರಿಸಿ ಧನ್ಯರಾಗೋಣ.

ಸೂಚನೆ: 24/11/2023 ರಂದು ಈ ಲೇಖನ ವಿಜಯವಾಣಿಯ ಚಿಂತನ ದಲ್ಲಿ ಪ್ರಕಟವಾಗಿದೆ.