Tuesday, January 7, 2020

ವೈಕುಂಠ ಏಕಾದಶಿಯ ವಿಶೇಷತೆ (Vaikunta ekadashiya visheshathe)

ಲೇಖಕರು:  ನಾಗರಾಜ ಗುಂಡಪ್ಪ
(ಪ್ರತಿಕ್ರಿಯಿಸಿರಿ lekhana@ayvm.in)





ಪುಷ್ಯ ಮಾಸದ ಶುಕ್ಲಪಕ್ಷದಲ್ಲಿ ಬರುವ ಏಕಾದಶಿಯು ವೈಕುಂಠ ಏಕಾದಶಿ ಎಂದು ಪ್ರಸಿದ್ಧವಾಗಿದ್ದು ಕಳೆದೆರಡು ದಶಕಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ಈ ದಿನದಂದು ಜನರು ವೆಂಕಟರಮಣಸ್ವಾಮಿಯ ದೇವಾಲಯಕ್ಕೆ ಹೋಗಿ ದೇವರ ದರ್ಶನ ಮತ್ತು ಸೇವೆ ಮಾಡಿ ಧನ್ಯತೆಯನ್ನು ಭಾವಿಸುತ್ತಾರೆ.

ಮನಸ್ಸಿಗೆ ವಿಕುಂಠಿತವಾದ ಗತಿಯನ್ನುಂಟು ಮಾಡುವುದೇ ವೈಕುಂಠ ಏಕಾದಶಿಯ ವಿಶೇಷತೆ. ವೈಕುಂಠ ಎನ್ನುವ ಪದವು 'ಕುಠ್' ಎನ್ನುವ ಧಾತುವಿನಿಂದ ವ್ಯುತ್ಪತ್ತಿಯನ್ನು ಹೊಂದಿದೆ. ಕುಠ್ ಎಂದರೆ ತಡೆ ಅಥವಾ ನಿಲ್ಲಿಸು ಎಂದು ಅರ್ಥ. ತಡೆತಡೆದು ಮುಂದೆ ಹೋಗುವಂತಾಗುವುದು ಕುಂಠಿತವಾದ ಗತಿ. ಮತ್ತು ಇದಕ್ಕೆ ವಿರುದ್ಧವಾದುದು ವಿಕುಂಠಿತವಾದ ಗತಿ. ನಮ್ಮ ಜೀವನವು ಯಾವಾಗಲೂ ಸುಖ ದುಃಖಗಳಿಂದ ಕೂಡಿರುವುದರಿಂದ ಮನಸ್ಸಿಗೆ ಕುಂಠಿತವಾದ ಸ್ಥಿತಿ ಗತಿಗಳು ಇರುತ್ತದೆ.  ಆದರೆ, ಮನಸ್ಸನ್ನು ಅಂತರ್ಮುಖವಾಗಿಸಿ ಅಧ್ಯಾತ್ಮಸಾಧನೆಯನ್ನು ಮಾಡಿ ಭಗವತ್ಸಾಕ್ಷಾತ್ಕಾರ ಹೊಂದಿದರೆ ಆಗ ಮನಸ್ಸು ದೃಢವಾಗಿ, ಹೊರ ಜೀವನದ ಏರಿಳಿತಕ್ಕೊಳಗಾಗದೇ ಶಾಂತವಾಗಿದ್ದು ಪ್ರಾಪಂಚಿಕ ವಿಷಯಗಳಿಂದ ಅಧ್ಯಾತ್ಮ ಕ್ಷೇತ್ರದವರೆವಿಗೂ ತಡೆಯಿಲ್ಲದೇ ಸುಲಭವಾಗಿ ಹರಿಯಬಲ್ಲದ್ದಾಗಿರುತ್ತದೆ. ಅಂತಹ ಸ್ಥಿತಿ ಮನಸ್ಸಿನ ವಿಕುಂಠಿತವಾದ ಸ್ಥಿತಿ-ವೈಕುಂಠ.

ಅಂತಹ ವಿಕುಂಠಿತ ಜೀವನವನ್ನು ನಡೆಸಿದ ಜ್ಞಾನಿಗಳು ಪ್ರತಿಷ್ಠಾಪಿಸಿ ಭಗವಂತನ ಸಾನ್ನಿಧ್ಯವನ್ನುಂಟು ಮಾಡಿರುವ ದೇವಾಲಯಗಳನ್ನೂ ಭೂವೈಕುಂಠವೇ. ಕಾರಣ ದೇವಾಲಯಕ್ಕೆ ಹೋಗುವವರಿಗೂ ಅವರವರ ಸಂಸ್ಕಾರಗಳಿಗನುಗುಣವಾಗಿ ಕೊಂಚ ಮಟ್ಟಿಗಾದರೂ ಆ ವಿಕುಂಠಿತವಾದ ಸ್ಥಿತಿ ಉಂಟಾಗುತ್ತದೆ. ಅಂತಹ ದೇವಾಲಯಗಳಲ್ಲಿಯೂ ವೆಂಕಟರಮಣಸ್ವಾಮಿಯ ದೇವಾಲಯವು ವಿಶೇಷ. ಕಲೌ ವೇಂಕಟನಾಥಃ ಎಂದು ಹೇಳುವಂತೆ, ವೈಕುಂಠಪತಿಯಾದ ವಿಷ್ಣುವಿನ ರೂಪಗಳಲ್ಲಿ, ಕಲಿಯುಗದಲ್ಲಿ ಬೇಗ ಒಲಿಯುವುದು ವೆಂಕಟರಮಣನ ರೂಪವೇ.

ವೈಕುಂಠ ಏಕಾದಶಿಯ ದಿನಕ್ಕೆ, ಮನಸ್ಸಿಗೆ ವಿಕುಂಠಿತವಾದ ಸ್ಥಿತಿಯನ್ನುಂಟು ಮಾಡುವ ಯೋಗ್ಯತೆ ಇರುತ್ತದೆ. ಇಂತಹ ದಿನದಲ್ಲಿ ಆ ವೈಕುಂಠಪತಿಯಾದ ವೆಂಕಟರಮಣ ಸ್ವಾಮಿಯ ದರ್ಶನ ಸೇವೆಗಳು ಇನ್ನಷ್ಟು ಹೆಚ್ಚು ಪರಿಣಾಮ ಬೀರುತ್ತದೆ. ಹೀಗಾಗಿ ವೈಕುಂಠ ಏಕಾದಶಿಯಂದು ವೆಂಕಟರಮಣಸ್ವಾಮಿಯ ದೇವಾಲಯ ಸಂದರ್ಶನ, ಸೇವೆ ಎನ್ನುವ ರೂಢಿಯು ಬೆಳೆದು ಬಂದಿದೆ.

ಆ ದಿನದಂದು ವೆಂಕಟರಮಣಸ್ವಾಮಿ ದೇವಾಲಯಗಳಲ್ಲಿ ವೈಕುಂಠದ್ವಾರ ಎನ್ನುವ ವಿಶೇಷ ವ್ಯವಸ್ಥೆಯನ್ನು ಮಾಡಿರುತ್ತಾರೆ. ಪ್ರತಿಯೊಬ್ಬ ಮಾನವನ ದೇಹದಲ್ಲಿಯೂ ಇಡಾ, ಪಿಂಗಳಾ ಮತ್ತು ಸುಷುಮ್ನಾ ಎಂಬ ಮೂರು ನಾಡಿಗಳು ಬೆನ್ನು ಮೂಳೆ ಹಾಗೂ ಅದರ ಸುತ್ತ ಇರುತ್ತದೆ. ಮನಸ್ಸು ಇಡಾ, ಪಿಂಗಳಗಳಲ್ಲಿ ಸಂಚರಿಸುತ್ತಿರುವಾಗ ಅದಕ್ಕೆ ವೃದ್ಧಿ, ಕ್ಷಯಗಳಿರುತ್ತವೆ. ಯೋಗ ಸಾಧನೆಯಿಂದ ಸುಷುಮ್ನಾ ನಾಡಿಯನ್ನು ಪ್ರವೇಶಿಸಿದಾಗ ಭಗವತ್ಸಾಕ್ಷಾತ್ಕಾರವಾಗುವುದು. ಆದುದರಿಂದ ಮಾನವ ದೇಹದಲ್ಲಿ ಈ ಸುಷುಮ್ನಾ ನಾಡಿಯೇ ವೈಕುಂಠ ದ್ವಾರವಾಗಿದೆ. ಹೀಗೆ ಸಾಧಕನ ದೇಹದಲ್ಲಿ ಒಳಗೆ ನಡೆಯುವ ಕ್ರಿಯೆಯ ಅನುಕರಣೆಯಾಗಿ ಹೊರಗೂ ತಂದಿದ್ದಾರೆ. ಈ ಹೊರ ಅನುಕರಣೆಯೂ ಸಾಧನಾ ರೂಪವಾಗಿ ಭಗವಂತನ ಸಾಕ್ಷಾತ್ಕಾರಕ್ಕೆ ಪೋಷಕವಾಗಲಿ ಎನ್ನುವ ಕರುಣೆ ಜ್ಞಾನಿಗಳದ್ದು.

ಹೀಗೆ, ದಿನದ ಪ್ರಭಾವ, ದಿನದ ಆರಾಧ್ಯ ದೈವ ಹಾಗೂ ಅಂದಿನ ಆಚರಣೆ, ಈ ಮೂರೂ ಅಂಶಗಳಲ್ಲಿ ಒಂದೊಂದೂ ಸಹಾ ಮನಸ್ಸಿಗೆ ವಿಕುಂಠಿತ ಸ್ಥಿತಿಯನ್ನುಂಟು ಮಾಡುವಂತಹದಾಗಿವೆ. ವೈಕುಂಠ ಏಕಾದಶಿಯಂದು ಈ ಮೂರೂ ಅಂಶಗಳು ಒಟ್ಟಿಗೆ ಸೇರಿರುವುದು ವಿಶೇಷ ಯೋಗ. ಮನಸ್ಸಿಗೆ ವಿಕುಂಠಿತವಾದ ನಡೆಯನ್ನುಂಟು ಮಾಡಿಕೊಂಡು, ಪಾಪಗಳನ್ನು ಶಮನ ಮಾಡಿಕೊಂಡು ನಮ್ಮನ್ನು ಪಾವನರಾಗಿಸಿಕೊಳ್ಳಲು ವೈಕುಂಠ ಏಕಾದಶಿ ಆಚರಣೆಯು ಮಹರ್ಷಿಗಳು ಕೊಟ್ಟಿರುವ ಅಪೂರ್ವ ಕೊಡುಗೆಯಾಗಿದೆ. ಮಹರ್ಷಿಹೃದಯವೇದ್ಯರಾಗಿ ನಮಗೆ ಈ ವಿಷಯಗಳನ್ನು ತಿಳಿಸಿದ ಶ್ರೀರಂಗ ಮಹಾಗುರುಗಳಿಗೆ ಕೃತಜ್ಞತೆಗಳು.

ಸೂಚನೆ:  06/01/2020 ರಂದು ಈ ಲೇಖನ ವಿಜಯಕರ್ನಾಟಕದ ಭೋದಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.