Wednesday, January 22, 2020

ಸ್ವಸ್ವರೂಪವಾದ ಆನಂದವೇ ಭಾರತೀಯ ಸಂಸ್ಕೃತಿ. (Svasvarupavada aanandave bharatheeya samskruthi)

ಲೇಖಕರು:  ಶ್ರೀ. ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ : lekhana@ayvm.in)


ನಮ್ಮ ದೇಶದ ಜ್ಞಾನಿಗಳು ಕೇವಲ ಭೌತಿಕ ಪ್ರಪಂಚದಲ್ಲೇ ನಿಲ್ಲದೇ ಈ ಭೌತಿಕವೂ ಯಾವ ಮೂಲದಿಂದ ಅರಳಿಬಂದಿದೆ ಎಂಬುದನ್ನು ತಮ್ಮ ಅಂತರ್ಮುಖವಾದ ಪ್ರಯಾಣದಿಂದ ಅರಿಯುವ ಸಾಹಸ ಮಾಡಿದರು. ತಮ್ಮ ತಪಸ್ಸು, ಸಾಧನೆಗಳಿಂದ ಜೀವನಮೂಲದಲ್ಲಿ ಬೆಳಗುತ್ತಿರುವ ಪರಂಜ್ಯೋತಿಸ್ವರೂಪನಾದ ದೇವನನ್ನು ಕಂಡರು. ಅಲ್ಲಿಂದಲೇ ಎಲ್ಲವೂ ವಿಕಾಸವಾಗಿ ಬಂದಿದೆ ಎಂಬುದನ್ನು ಅವರಿವರು ಹೇಳಿದ್ದನ್ನು ಕೇಳದೇ ತಮ್ಮದೇ ಅನುಭವದಿಂದ ಕಂಡುಕೊಂಡರು. ಆ ದರ್ಶನ, ಅನುಭವಗಳು ಅವರಿಗೆ ಅದುವರೆಗೆ ಕಾಣದ ಆನಂದವನ್ನೂ ಅಪರಿಮಿತವಾದ ನೆಮ್ಮದಿಯನ್ನೂ ತಂದುಕೊಟ್ಟಿದ್ದರಿಂದ ಅವರು ಪರಮ ಕರುಣೆಯಿಂದ ಅಂತಹ ಜೀವನವನ್ನು ಜೀವಲೋಕವೆಲ್ಲವೂ ಅನುಭವಿಸಲೀ ಎಂದು ಉದಾರಹೃದಯರಾಗಿ ಲೋಕದಲ್ಲಿ ಸಂಸ್ಕೃತಿ ವೃಕ್ಷವನ್ನು ಕೃಷಿಮಾಡಿ ಬೆಳೆಸಿದರು.

ವೃಕ್ಷ-ಸಂಸ್ಕೃತಿ, ಒಂದು ಉದಾಹರಣೆ:

ಒಂದು ವೃಕ್ಷದ ಹಿಂಬದಿಯಲ್ಲಿ ನೋಡುತ್ತಾ ಹೋದರೆ ಅದರ ಉಗಮಸ್ಥಾನವಾದ ಬೀಜದಲ್ಲಿ ನಿಲ್ಲುತ್ತದೆ. ಬೀಜದಲ್ಲಿನ ಅಭಿಪ್ರಾಯವೇ ವೃಕ್ಷರೂಪದಲ್ಲಿ ಅರಳುತ್ತದೆ. ಕಡೆಯಲ್ಲಿ ಬೀಜದಲ್ಲೇ ನಿಲ್ಲುತ್ತದೆ. ಹಾಗಾದರೆ ಬೀಜದಲ್ಲಿ ಈ ಬಗೆಯ ಕಾಂಡ, ಕೊಂಬೆಗಳು, ಎಲೆ, ಕಾಯಿ ಹಣ್ಣು ಎಲ್ಲವೂ ಇತ್ತೇ? ಎಂದರೆ ಇತ್ತು ಎಂದೇ ಹೇಳಬೇಕಾಗುತ್ತದೆ. ಇಲ್ಲದಿದ್ದರೆ ಮುಂದೆ ಅವೆಲ್ಲ ಬರುವುದಾದರೂ ಎಲ್ಲಿಂದ? ಹಾಗೆ ಬೀಜದ ಸ್ವರೂಪವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅವನು ಸಸ್ಯ ಶಾಸ್ತ್ರಜ್ಞ ಹಾಗೂ ವ್ಯವಸಾಯಜ್ಞನಾಗಿರಬೇಕು. ಈ ಬೀಜವೇ ಇಷ್ಟು ದೊಡ್ಡ ವೃಕ್ಷವಾಗಿದೆ ಎಂಬ ಅರಿವಿನಿಂದ ಮಾಡುವ ಕೃಷಿಯೆಲ್ಲವೂ ಬೀಜದ ತನ ಮುಂದುಮುಂದೆ ಬೆಳೆಯಲು ಸಹಾಯ ಮಾಡುವುದೇ ಆಗಿರುತ್ತದೆ. ಅವೆಲ್ಲವೂ ‘ವೃಕ್ಷ-ಸಂಸ್ಕೃತಿ’ಯೇ ಆಗುತ್ತದೆ. ಉದಾಹರಣೆಗೆ ಮಾವಿನ ಬೀಜ ಎಂದಾದರೆ ಅದರಲ್ಲಿ ಮಾವೇ ಮುಂದೆ ಬರುವುದು ನಿಸರ್ಗ ಸಹಜ. ಆದರೆ ಕೆಲವೊಮ್ಮೆ ಬೀಜದ ಶಕ್ತಿಯನ್ನು ಬಳಸಿಕೊಂಡು ಬದನಿಕೆಗಳು ಬೆಳೆದುಬಿಡುವುದುಂಟು. ವ್ಯವಸಾಯಜ್ಞನಾದವನು ಯಾವುದು ಬೀಜದ ತನ ಯಾವುದು ಬದನಿಕೆ ಎಂಬುದನ್ನು ಅರಿತವನಾಗಿರಬೇಕು. ಅಲ್ಲಿ ಅವನು ಬದನಿಕೆಯನ್ನು ಕಿತ್ತುಹಾಕಿ ಮಾವಿನ ಮರವೇ ಬೆಳೆಯುವಂತೆ ನೋಡಿಕೊಳ್ಳುವ ಜವಾಬ್ದಾರಿಯುಂಟು. ಹಾಗಾದಾಗ ತಾನೇ ಮಾವಿನ ರಸಾಸ್ವಾದನೆ ನಮಗೆ ಲಭಿಸೀತು?

ಹಾಗೆಯೇ ನಮ್ಮ ದೇಶದ ಜ್ಞಾನಿಗಳು ವಿಶ್ವಕ್ಕೆಲ್ಲಾ ಚೈತನ್ಯಬೀಜನಾದ ಭಗವಂತನನ್ನು ಅರ್ಥಮಾಡಿಕೊಂಡು ಅವನ ತನವೇ ಮುಂದೆಲ್ಲ ಬೆಳೆದರೆ ಜೀವನವು ಸರ್ವಾಂಗ ಸುಂದರವಾಗಿ ಚೇತೋಹಾರಿಯಾಗಿ, ಆನಂದಮಯವಾಗಿ ಇರುವುದನ್ನು ತಮ್ಮ ಅನುಭವದಿಂದ ಕಂಡುಕೊಂಡರು. ಹಾಗೆ ಆ ಜಗದ್ಬೀಜನಾದ ಭಗವಂತನ ತನವೇ ಲೋಕದಲ್ಲೂ ಮತ್ತು ನಮ್ಮಲ್ಲೂ ಬೆಳೆಯುವಂತೆ ಕೃಷಿ ಮಾಡಿ ಇಲ್ಲಿ ಸಂಸ್ಕೃತಿಯನ್ನು ತಂದರು. ಅವನ ತನ ಮರೆಮಾಡುವ ಬದನಿಕೆಗಳನ್ನು ಕಿತ್ತೆಸೆದು  ಅವನ ಸ್ವಸ್ವರೂಪವಾದ ಆನಂದವೇ ಎಲ್ಲೆಡೆ ಬೆಳೆಯುವಂತೆ ಶ್ರಮಿಸಿ ತಂದ ಸಂಸ್ಕೃತಿಯೇ ಭಾರತೀಯ ಸಂಸ್ಕೃತಿ. ಹಾಗೆ ತಂದ ಜೀವನ ವಿಧಾನಗಳೆಲ್ಲವೂ ಭಾರತೀಯ ಸಂಸ್ಕೃತಿಯೆನಿಸಿತು. ಶ್ರೀರಂಗ ಮಹಾಗುರುಗಳ ಮಾತಿನಂತೆ ‘ಭಾ’ರೂಪಿಯಾದ ಪರಂಜ್ಯೋತಿಯ ಸ್ವರೂಪವನ್ನು ಅರ್ಥ ಮಾಡಿಕೊಂಡು ಬೆಳೆದ ಸಂಸ್ಕೃತಿಯೇ-ಭಾರತೀಯ ಸಂಸ್ಕೃತಿ. ಅದು ವಿಕಾಸವಾಗಲು ಇರುವ ಪ್ರತಿಬಂಧಕಗಳನ್ನೆಲ್ಲ ಅವರು ಕೊಳೆ ಅಥವಾ ದೋಷ ಎಂದು ಕರೆದರು.  ಅಂತಹ ದೋಷಗಳನ್ನು ನಿರಂತರವಾಗಿ ತೆಗೆದುಹಾಕಿ ಆ ಪರಂಜ್ಯೋತಿಯ ಆಶಯದಂತೆ ಜೀವನವೆಲ್ಲವೂ ಅರಳಬೇಕು ಎಂಬ ಅತ್ಯುನ್ನತವಾದ ಧ್ಯೇಯದಿಂದ ಪ್ರೇರಿತರಾದವರು ತಂದುಕೊಟ್ಟ ಸಂಸ್ಕೃತಿಯಿದು. ಅವರ ಪಾವನ ಸಂಸ್ಕೃತಿಯ ಕೆಲವೇ ಕೆಲವು ಅಂಶಗಳನ್ನು ಸೂಚನಾಮಾತ್ರವಾಗಿದೆ

ಸೂಚನೆ: 20/1/2020 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.