ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಸ್ವರ್ಗದಲ್ಲಿ ಇಂದ್ರನ ಕ್ರಿಯೆಯು ಹೇಗೋ ಹಾಗೆಯೇ ಯುಧಿಷ್ಠಿರನ ಯಜ್ಞಕಾರ್ಯವೂ ಭೂಮಂಡಲದ ಮೇಲೆ ನಡೆಯುವಂತಾಯಿತು.
ಇದೆಲ್ಲ ಹೀಗೆ ಜರುಗುತ್ತಿರಲು, ಧರ್ಮರಾಜನು ನಕುಲನನ್ನು ಹಸ್ತಿನಾವತಿಗೆ ಕಳುಹಿಸಿದನು - ಭೀಷ್ಮ, ದ್ರೋಣ, ಧೃತರಾಷ್ಟ್ರ, ವಿದುರ, ಕೃಪ, ಹಾಗೂ ಎಲ್ಲ ಭ್ರಾತೃಗಳು, ಹಾಗೂ ಯಾರು ಯಾರು ಯುಧಿಷ್ಠಿರನಲ್ಲಿ ಅನುರಕ್ತರಾಗಿದ್ದರೋ, ಅವರನ್ನೆಲ್ಲ ಕರೆಯಲು ನಕುಲನು ಹೋದನು.
ಹಾಸ್ತಿನಪುರಕ್ಕೆ (ಎಂದರೆ ಹಸ್ತಿನಾಪುರಕ್ಕೇ) ಹೋದ ನಕುಲನು ಭೀಷ್ಮನನ್ನೂ ಧೃತರಾಷ್ಟ್ರನನ್ನೂ ಆಮಂತ್ರಿಸಿದನು. ಸತ್ಕಾರಪೂರ್ವಕವಾಗಿ ಆಮಂತ್ರಣವನ್ನು ಪಡೆದಿದ್ದ ಭೀಷ್ಮಾಚಾರ್ಯರೇ ಮೊದಲಾದವರು ಬಹಳ ಸಂತೋಷಗೊಂಡವರಾಗಿ, ವಿಪ್ರರನ್ನು ಮುಂದಿಟ್ಟುಕೊಂಡು ಯಜ್ಞಶಾಲೆಯತ್ತ ನಡೆದರು.
ಧರ್ಮರಾಜನು ನಡೆಸುವ ಯಜ್ಞವಿದೆಂದು ತಿಳಿದು ಮತ್ತೂ ನೂರಾರು ಮಂದಿ ಸಂತುಷ್ಟರಾಗಿ ಅಲ್ಲಿಗೆ ಬಂದರು. ಧರ್ಮರಾಜನನ್ನು ನೋಡಬೇಕು, ಆತನ ಸಭೆಯನ್ನು ನೋಡಬೇಕು - ಎಂಬ ಬಯಕೆಯಿಂದ, ಎಲ್ಲ ದಿಕ್ಕುಗಳಿಂದಲೂ ಕ್ಷತ್ರಿಯರು ಅಲ್ಲಿಗೆ ಬಂದರು. ಬರುವಾಗ ನಾನಾರತ್ನಗಳನ್ನು, ವಿಶೇಷವಾಗಿ ಮಹಾರತ್ನಗಳನ್ನು, ತಂದರು.
ಅಲ್ಲಿಗೆ ಯಜ್ಞಕ್ಕೆ ಬಂದವರು ಯಾರಾರು? ಧೃತರಾಷ್ಟ್ರ, ಭೀಷ್ಮ, ಮಹಾಮತಿಯೆನಿಸಿದ್ದ ವಿದುರ, ದುರ್ಯೋಧನನನ್ನು ಮುಂದಿಟ್ಟುಕೊಂಡು ಬಂದ ಅವನೆಲ್ಲ ಭ್ರಾತೃಗಳು; ಗಾಂಧಾರರಾಜನೆನಿಸಿದ ಸುಬಲ, ಮಹಾಬಲಶಾಲಿಯಾದ ಶಕುನಿ, ರಥಿಶ್ರೇಷ್ಠನಾದ ಕರ್ಣ, ಶಲ್ಯ; ಸೋಮದತ್ತ, ಅಶ್ವತ್ಥಾಮ, ಕೃಪಾಚಾರ್ಯ, ದ್ರೋಣಾಚಾರ್ಯರು, ಸಿಂಧುರಾಜನಾದ ಜಯದ್ರಥ, ಸಪುತ್ರನಾಗಿ ಬಂದ ದ್ರುಪದ; ಸಾಳ್ವ ಪ್ರಾಗ್ಜ್ಯೋತಿಷಪುರದ ಒಡೆಯನಾದ ಭಗದತ್ತ, ಆತನೊಂದಿಗೆ ಆಗಮಿಸಿದ ಸಾಗರತೀರವಾಸಿಗಳಾದ ಮ್ಲೇಚ್ಛರು, ಪರ್ವತವಾಸಿಗಳು; ಪೌಂಡ್ರಕವಾಸುದೇವ, ವಂಗದೇಶದ ರಾಜ, ಕಳಿಂಗದ ಅರಸು, ಕುಂತಲ, ಮಾಲವ, ಆಂಧ್ರಕ, ದ್ರಾವಿಡ, ಸಿಂಹಳ; ಕಾಶ್ಮೀರದ ರಾಜ, ಕುಂತಿಭೋಜ, ಬಾಹ್ಲಿಕ, ಪುತ್ರರಿಬ್ಬರೊಂದಿಗೆ ಬಂದಿದ್ದ ವಿರಾಟ; ಇವರಲ್ಲದೆ ಇನ್ನೂ ನಾನಾ ಶೂರರಾಜರು.
ಅಷ್ಟೇ ಅಲ್ಲ, ತನ್ನ ಪುತ್ರನೊಂದಿಗೆ ಶಿಶುಪಾಲನೂ ಆಗಮಿಸಿದ್ದನು. ಶಿಶುಪಾಲನೆಂದರೆ ಸಾಮಾನ್ಯನಲ್ಲ; ಅವನು ಸಮರ-ದುರ್ಮದ - ಎಂದರೆ ರಣಾಂಗಣದಲ್ಲಿ ಕೆಟ್ಟಮದ ತೋರುವವನು; ಅಲ್ಲದೆ, ಬಲರಾಮ, ಅನಿರುದ್ಧ, ಪ್ರದ್ಯುಮ್ನ, ಸಾಂಬ, ಚಾರುದೇಷ್ಣ - ಇವರೇ ಮುಂತಾದ ಅನೇಕ ವೃಷ್ಣಿವೀರರೂ ಅಲ್ಲಿಗೆ ಆಗಮಿಸಿದ್ದರು. ಇವರೆಲ್ಲರೂ ಯುಧಿಷ್ಠಿರನ ಮಹಾಕ್ರತುವಿಗೆ, ಎಂದರೆ ಮಹಾಯಜ್ಞಕ್ಕಾಗಿ, ಬಂದು ಭಾಗವಹಿಸಿದರು.
ಧರ್ಮರಾಜನ ಅಪ್ಪಣೆಯಂತೆ ಅವರಿಗೆ ಆವಸಥಗಳನ್ನು, ಎಂದರೆ ವಾಸಭವನಗಳನ್ನು, ಕೊಡಲಾಯಿತು. ಅಲ್ಲಿ ಬಗೆಬಗೆಯ ಭಕ್ಷ್ಯಗಳಿದ್ದವು. ನಾನಾವೃಕ್ಷಶೋಭಿತವಾದ ಸ್ನಾನಗೃಹಗಳಿದ್ದವು. ಅವರಿಗೆ ಧರ್ಮರಾಜನು ಸ್ವತಃ ತಾನೇ ಸತ್ಕಾರವನ್ನು ನೆರವೇರಿಸಿದನು. ಸತ್ಕಾರ ಹೊಂದಿದ ಅವರು ತಮ್ಮ ತಮ್ಮ ಆವಸಥಗಳಿಗೆ ತೆರಳಿದರು.
ಅವರ ಆ ಬೀಡುಗಳಾದರೂ ಹೇಗಿದ್ದವು? ಕೈಲಾಸಶಿಖರದಂತೆ ಉತ್ತುಂಗವಾಗಿದ್ದವು, ಮನೋಜ್ಞವಾಗಿದ್ದವು. ಪ್ರತಿಯೊಂದರ ಸುತ್ತಲೂ ಪ್ರಾಕಾರಗಳು. ಚೆನ್ನಾಗಿ ಮಾಡಲ್ಪಟ್ಟ ಬಿಳೀಬಣ್ಣದ ಪ್ರಾಕಾರಗಳು. ಚಿನ್ನದ ಜಾಲರಿಗಳುಳ್ಳವು. ಮಣಿಮಯವಾದ ಅಂಗಣಗಳಿಂದ ಕೂಡಿದ್ದವು. ಸುಲಭವಾದ ಹತ್ತಲಾಗುವಂತಹ ಮೆಟ್ಟಿಲುಗಳುಳ್ಳವುಗಳು. ಅಡುಗೆಮನೆಯ ಸೌಕರ್ಯಗಳುಳ್ಳವು. ಪುಷ್ಪಮಾಲೆಗಳಿಂದ ಸಜ್ಜಾದ ಗೃಹಗಳು, ಅವು. ಉತ್ತಮವಾದ ಅಗುರುಗಳಿಂದ ಸುಗಂಧಿತವಾಗಿದ್ದಂತಹ ಆ ಅತಿಥಿಗೃಹಗಳು ಹಂಸವರ್ಣ-ಚಂದ್ರವರ್ಣಗಳಿಂದ ಲೇಪಿತವಾದವು. ಒಂದು ಯೋಜನದಷ್ಟು ದೂರಕ್ಕೇ, ಎಂದರೆ ಸುಮಾರು ೮ ಮೈಲಿಗೇ, ಕಾಣಿಸುತ್ತಿದ್ದಂತಹವು! ಎಲ್ಲೂ ಇಕ್ಕಟ್ಟಿರಲಿಲ್ಲ. ದ್ವಾರಗಳು ಸಮನಾಗಿದ್ದವು. ಎಲ್ಲ ಸೌಕರ್ಯಗಳೂ ನಾನಾ ವರ್ಣಗಳಿಂದೊಡಗೂಡಿದ್ದವು. ಅವುಗಳ ಗೋಡೆಗಳು ಅನೇಕ ಧಾತುಗಳಿಂದಾದಂತಹವು. ಹಿಮಾಲಯದ ಶಿಖರದಂತೆ ತೋರುವಂತಹವು.
ಸೂಚನೆ : 26/7/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.