Sunday, January 4, 2026

ವ್ಯಾಸ ವೀಕ್ಷಿತ 169 ಜರಾಸಂಧಪ್ರಶ್ನೆ: ಯುಧಿಷ್ಠಿರ-ಮತಕ್ಕೆ ಪ್ರತಿಯಾಗಿ ಅರ್ಜುನ-ಚಿಂತನ ( Vyaasa Vikshita 169)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ಈಗಾಗಲೇ ಎಂಭತ್ತಾರು ರಾಜರುಗಳನ್ನು ಆತನು ಕೈದಿಗಳನ್ನಾಗಿ ಮಾಡಿಕೊಂಡಿರುವನು. ಇನ್ನು ಹದಿನಾಲ್ಕು ಮಂದಿಯನ್ನು ಸೇರಿಸಬೇಕಾದುದಷ್ಟೇ ಉಳಿದಿರುವುದು. ಅವರನ್ನು ಬಂದಿಗಳನ್ನಾಗಿಸಿ ಆತನು ತನ್ನ ಕ್ರೂರಕರ್ಮದಲ್ಲಿ ತೊಡಗುತ್ತಾನೆ. (ಸೆರೆಯಾಳುಗಳನ್ನು "ಬಂದಿ"ಯೆನ್ನಬೇಕು, "ಬಂಧಿ"ಯೆಂದಲ್ಲ: ಅಲ್ಲಿರುವುದು ಅಲ್ಪಪ್ರಾಣ, ಮಹಾಪ್ರಾಣವಲ್ಲ. ಅದು ಸಂಸ್ಕೃತಪದ.)

ಜರಾಸಂಧನು ಮಾಡುತ್ತಿರುವ ಈ ಕುಕೃತ್ಯಕ್ಕೆ ಯಾರು ಅಡ್ಡಿಯನ್ನೊಡ್ಡುವರೋ ಅಂತಹವರಿಗೆ ಉಜ್ಜ್ವಲವಾದ ಯಶಸ್ಸು ಪ್ರಾಪ್ತವಾಗುವುದು: ಯಾವನು ಜರಾಸಂಧನನ್ನು ಜಯಿಸುವನೋ ಆತನು ನಿಶ್ಚಯವಾಗಿಯೂ ಸಮ್ರಾಟ್ ಆಗುವುದರಲ್ಲಿ ಸಂಶಯವಿಲ್ಲ" - ಹೀಗೆಂಬುದಾಗಿ ಶ್ರೀಕೃಷ್ಣನು ನುಡಿದನು. 

ಆಗ ಯುಧಿಷ್ಠಿರನು ಹೇಳಿದನು:

"ಸಮ್ರಾಟನ ಗುಣವನ್ನು ಹೊಂದುವ ಬಯಕೆ ನನಗುಂಟು; ಹಾಗಿದ್ದು, ಸ್ವಾರ್ಥ-ಪರಾಯಣನಾಗಿ, ಅದು ಹೇಗೆ ತಾನೆ ನಾನು ಜರಾಸಂಧನತ್ತ ನಿಮ್ಮೆಲ್ಲರನ್ನೂ ಕಳುಹಿಸಲಿ? ಅದು ಕೇವಲ ಸಾಹಸವಲ್ಲವೇ? - ಎಂದರೆ ಅವಿವೇಕಿಯ ದುಡುಕಿನಂತಾಗುವುದಿಲ್ಲವೇ?

ಭೀಮ ಮತ್ತು ಅರ್ಜುನ - ಇವರಿಬ್ಬರೂ ನನ್ನ ಕಣ್ಣುಗಳ ಹಾಗೆ; ಜನಾರ್ದನನಂತೂ ನನ್ನ ಮನಸ್ಸೇ ಸರಿ. ಮನಸ್ಸನ್ನೂ ಕಣ್ಣುಗಳನ್ನೂ ಕಳೆದುಕೊಂಡವನ ಜೀವನವಾದರೂ ಹೇಗೆ ತಾನೆ ಆದೀತು?

ಜರಾಸಂಧನ ಸೈನ್ಯವು ದುಷ್ಪಾರ, ಎಂದರೆ ಅದರ ಆಚೆಯ ದಡವನ್ನು ಕಾಣುವುದೇ ಅಸಾಧ್ಯ- ಅಷ್ಟು ದೊಡ್ಡದು. ಹಾಗೂ ಅದು ಭಯಂಕರವಾದ ಪರಾಕ್ರಮವನ್ನು ಹೊಂದಿರುವಂತಹುದು. ಆತನನ್ನು, ಮತ್ತು ಆತನ ಸೇನೆಯನ್ನು, ಯುದ್ಧದಲ್ಲಿ ಯಮನು ಸಹ ಜಯಿಸಲಾರನು. ಇನ್ನು ತಮ್ಮಗಳ ಪ್ರಯತ್ನವು ಅಲ್ಲೇನು ಸಂದೀತು?

ದೊಡ್ಡದಾದ ಈ ಅರ್ಥವನ್ನೇನೋ ಸಾಧಿಸಹೋಗಿ, ಅನರ್ಥಕ್ಕೆ ಈಡುಮಾಡಿಕೊಂಡಂತೆ ಆಗುತ್ತದೆ. ಅದುದರಿಂದ ಈ ಕಾರ್ಯಕ್ಕೆ ಕೈಹಾಕುವುದೇ ಯುಕ್ತವಲ್ಲವೆಂಬುದೇ ನನ್ನ ಮತವಾಗಿದೆ.

ಈ ವಿಷಯದಲ್ಲಿ ಒಂಟಿಯಾಗಿ ವಿಮರ್ಶೆ ಮಾಡಿರುವುದನ್ನು ಹೇಳುವೆ, ಕೇಳು ಜನಾರ್ದನ. ಈ ಕಾರ್ಯದ ಸಂನ್ಯಾಸವನ್ನೇ, ಎಂದರೆ ತೊರೆಯುವಿಕೆಯನ್ನೇ, ನಾನು ಇಷ್ಟಪಡುವೆ. ರಾಜಸೂಯವೆಂಬುದು ದುರಾಹರ, ಎಂದರೆ ಸಾಧಿಸಿತಂದುಕೊಳ್ಳಲು ಮಹಾಕಷ್ಟವಾಗತಕ್ಕದ್ದು. ಆದುದರಿಂದ ಇದು ನನ್ನ ಮನಸ್ಸಿಗೆ ಪ್ರತಿಘಾತವನ್ನೇ ಮಾಡುತ್ತಿದೆ." ಎಂದನು.

ಯುಧಿಷ್ಠಿರನ ಮಾತು ಮುಗಿಯುತ್ತಿದ್ದಂತೆಯೇ, ಅರ್ಜುನನು ಮಾತನಾಡಿದನು. ಆತನೋ, ಶ್ರೇಷ್ಠವಾದ ಬಿಲ್ಲನ್ನೂ, ಎಂದರೆ ಗಾಂಡೀವವನ್ನೂ, ಅಕ್ಷಯವಾದ ತೂಣೀರ(ಬತ್ತಳಿಕೆ)ವನ್ನೂ, ದಿವ್ಯವಾದ ರಥ-ಧ್ವಜ-ಸಭೆಗಳನ್ನೂ ಹೊಂದಿದ್ದವನು. ಅಂತಹವನು ಯುಧಿಷ್ಠಿರನನ್ನು ಕುರಿತು ಹೀಗೆ ನುಡಿದನು.

ಅರ್ಜುನನು ಹೇಳಿದನು:

"(ಗಾಂಡೀವ)ಧನುಸ್ಸು, ವಿಶೇಷವಾದ ಶಸ್ತ್ರ-ಬಾಣಗಳು, ಜೊತೆಗಾರರಾದ ಅರಸರು, ಭೂಮಿ, ಯಶಸ್ಸು ಹಾಗೂ ಬಲ - ಇವೆಲ್ಲವೂ ಅಭೀಪ್ಸಿತವಾದವು, ಎಂದರೆ ಬಯಸುವಂತಹವು, ಆದರೆ ಅವು ದುಷ್ಪ್ರಾಪ, ಎಂದರೆ ಹೊಂದಲು ಸುಲಭವಾದವುಗಳಲ್ಲ. ಆದರೆ ಅವೆಲ್ಲವನ್ನೂ ನಾನು ಸಂಪಾದಿಸಿದ್ದೇನೆ.

ಅನುಭವಸಂಪನ್ನರಾದ ವಿದ್ವಾಂಸರು ಸತ್ಕುಲದಲ್ಲಿ ಜನಿಸುವುದನ್ನು ಪ್ರಶಂಸಿಸುತ್ತಾರೆ. ಆದರೆ ಬಲಕ್ಕೆ ಸಮಾನವಾದುದು ಯಾವುದೂ ಇಲ್ಲ. ನನಗೆ ಮೆಚ್ಚುಗೆಯಾಗುವುದು ಪರಾಕ್ರಮವೇ. ಕೃತವೀರ್ಯರಾಜನ ವಂಶದಲ್ಲಿ ಹುಟ್ಟಿಯೂ ಯಾವನು ಬಲಹೀನನೋ ಅಂತಹವನು ಏನನ್ನು ತಾನೆ ಸಾಧಿಸಿಯಾನು? ನಿರ್ವೀರ್ಯವಾದ ಕುಲದಲ್ಲಿ ಜನಿಸಿಯೂ ಯಾವನು ಪರಾಕ್ರಮಿಯಾಗಿರುತ್ತಾನೋ, ಅವನಲ್ಲೇ ವಿಶೇಷವಿರುವುದು.

ಶತ್ರುಜಯದಲ್ಲಿ ಯಾವನಿಗೆ ಸಹಜಪ್ರವೃತ್ತಿಯಿರುವುದೋ ಆತನೇ ಸರ್ವರೀತಿಯಲ್ಲೂ ಕ್ಷತ್ರಿಯನೆನಿಸುವುದು. ಬೇರೆ ಗುಣಗಳು ಯಾವುದೇ ಇಲ್ಲದಿದ್ದರೂ ಪರಾಕ್ರಮಶಾಲಿಯೇ ರಿಪುಗಳನ್ನು ದಮಿಸಲು ಸಮರ್ಥನಾಗುತ್ತಾನೆ. ಸರ್ವಗುಣಗಳಿಂದಲೂ ಕೂಡಿದವನಾಗಿದ್ದರೂ ಪರಾಕ್ರಮರಹಿತನು ಏನನ್ನು ತಾನೆ ಮಾಡಿಯಾನು? ಎಲ್ಲ ಗುಣಗಳೂ ಪರಾಕ್ರಮಕ್ಕೆ ಗುಣಭೂತವಾಗಿ, ಎಂದರೆ ಗೌಣವಾಗಿ, ನಿಲ್ಲತಕ್ಕವು" - ಎಂದನು. 

ಸೂಚನೆ : 4
/1/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.  

ಪ್ರಶ್ನೋತ್ತರ ರತ್ನಮಾಲಿಕೆ 47 (Prasnottara Ratnamalike 47)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ - ೪೭ - ಎಲ್ಲಿ ನಿಲ್ಲಬೇಕು ?

ಉ. ದೃಷ್ಟ ಮತ್ತು ಅದೃಷ್ಟದ ಲಾಭವನ್ನು ಕೊಡುವ ನ್ಯಾಯವಾದ ಮಾರ್ಗದಲ್ಲಿ.

ಈ ಜೀವನದಲ್ಲಿ ಅಂದರೆ ಈ ಜನ್ಮದಲ್ಲಿ ನಾವು ಅತ್ಯಂತ ಪ್ರಧಾನವಾಗಿ ಐಹಿಕ ಲಾಭ ಮತ್ತು ಪಾರಮಾರ್ಥಿಕ ಲಾಭ ಎಂಬ ಎರಡು ವಿಧವಾದ ಲಾಭವನ್ನು ಪಡೆಯುತ್ತೇವೆ. ಇದನ್ನೇ ದೃಷ್ಟಲಾಭ ಮತ್ತು ಅದೃಷ್ಟಲಾಭ ಎಂಬುದಾಗಿ ಕರೆಯುತ್ತೇವೆ. ಯಾವ ಕಾರ್ಯದಿಂದ ಸದ್ಯದಲ್ಲೇ ಅದರ ಫಲವನ್ನು ಅನುಭವಿಸುವಂಥಾಗುತ್ತದೆಯೋ, ಅದನ್ನು 'ದೃಷ್ಟಲಾಭ' ಎಂದು ಕರೆಯಬಹುದು. ಮತ್ತು ಯಾವ ಕಾರ್ಯವನ್ನು ಮಾಡಿದರೆ ಅದು ಯಾವುದೋ ಕಾಲದಲ್ಲಿ ಅಂದರೆ ಜನ್ಮ ಜನ್ಮಾಂತರದಲ್ಲಿ ಆ ಲಾಭವನ್ನು ಕೊಡುವಂತಾದರೆ ಅದಕ್ಕೆ 'ಅದೃಷ್ಟಲಾಭ' ಎಂದು ಕರೆಯುತ್ತಾರೆ. ಹೀಗೆ ಎರಡು ವಿಧವಾದ ಲಾಭವನ್ನು ಪಡೆಯಬೇಕಾದರೆ ನಾವು ಸಾಗುವ ಮಾರ್ಗ ಹೇಗಿರಬೇಕು? ಅದು ಯಾವುದಾಗಿರಬೇಕು? ಎಂಬುದನ್ನು ಇಲ್ಲಿ ಪ್ರಶ್ನಿಸಲಾಗಿದೆ. ಯಾವ ಮಾರ್ಗದಲ್ಲಿ ಇದ್ದರೆ ಈ ದೃಷ್ಟ ಮತ್ತು ಅದೃಷ್ಟ ಎಂಬ ಲಾಭವು ಉಂಟಾಗುತ್ತದೆ ಎಂಬ ಪ್ರಶ್ನೆ ಇಲ್ಲಿದೆ. ಅದಕ್ಕೆ ಉತ್ತರವಾಗಿ ನ್ಯಾಯವಾದ ಮಾರ್ಗದಲ್ಲಿ ನಡೆದರೆ ಅದರಿಂದ ಸಿಗುವ ಯಾವ ಲಾಭ ಉಂಟೋ ಅದು ದೃಷ್ಟವೂ ಆಗಿರಬಹುದು, ಅಥವಾ ಅದೃಷ್ಟವು ಆಗಿರಬಹುದು. ಅವೆರಡು ನಮ್ಮ ಜೀವನವನ್ನು ಉತ್ತುಂಗದತ್ತ ಸಾಗಿಸುವ ಮಾರ್ಗಗಳಾಗಿವೆ ಎಂಬುದನ್ನು ನಾವು ಇಲ್ಲಿ ಅರಿಯಬೇಕಾಗಿದೆ. ಹಾಗಾದರೆ ಈ ವಿಷಯವನ್ನು ಇನ್ನೂ ಸ್ವಲ್ಪ ವಿಸ್ತಾರವಾಗಿ ಚಿಂತಿಸಬೇಕಾಗಿದೆ. ಯಾವ ಮಾರ್ಗವು ಎರಡನ್ನು ಕೊಡುವಂತಹದ್ದು? ಎಂಬುದು ಇಲ್ಲಿ ಚರ್ಚಿಸಬೇಕಾದ ವಿಷಯ.

 ಧರ್ಮಮಾರ್ಗ ಅಥವಾ ನ್ಯಾಯಮಾರ್ಗವು ನಮಗೆ ಈ ಫಲವನ್ನು ಕೊಡುತ್ತದೆ ಎಂಬುದಾಗಿ ಅರ್ಥ. ಯಾವುದು ಧರ್ಮ? ಯಾವುದು ನ್ಯಾಯ? ಎಂಬುದನ್ನು ತಿಳಿಯುವುದು ಅಷ್ಟು ಸುಲಭವಲ್ಲ. ನಮಗೆ ಉದ್ಱಿಷ್ಟವಾದ ಗುರಿಯನ್ನು ತಲುಪಲು ಮಾರ್ಗ ಬೇಕೇ ಬೇಕು. ಗುರಿ ಮತ್ತು ಅದಕ್ಕೆ ತಲುಪುವ ದಾರಿ ಯಾವುದು? ಎಂಬ ಎರಡು ಸಂಗತಿಗಳು ನಮಗೆ ತಿಳಿದರೆ ಆಗ ನಮ್ಮ ಪಯಣವು ಅನಾಯಾಸವಾಗುತ್ತದೆ. ಹಾಗಾಗಿ ಗುರಿ ಮತ್ತು ಮಾರ್ಗ ಇವೆರಡರ ಅರಿವು ಅತ್ಯಂತ ಮುಖ್ಯ. ಈ ಜೀವನಕ್ಕೆ ಇರುವ ಗುರಿ ಯಾವುದು? ನಮ್ಮ ವೇದ, ಶಾಸ್ತ್ರಗಳೆಲ್ಲವೂ ಸಾರುವಂಥಹದ್ದು ಮೋಕ್ಷವೇ ಪರಮಪುರುಷಾರ್ಥ ಎಂಬುದಾಗಿ. ಇದನ್ನು ಸಾಧಿಸಲು ಧರ್ಮದ ಚೌಕಟ್ಟಿನಲ್ಲಿ ಅರ್ಥ ಕಾಮಗಳನ್ನು ಅನುಭವಿಸಿದರೆ  ಮೋಕ್ಷವನ್ನು ಪಡೆಯಲು ಸಾಧ್ಯ ಎಂಬುದು ತಾತ್ಪರ್ಯ. ಇದೇ ವಿಷಯವನ್ನು ಶ್ರೀರಂಗ ಮಹಾಗುರುಗಳು ಹೀಗೆ ಹೇಳುತ್ತಿದ್ದರು - ಅರ್ಥಕಾಮಗಳೆಂಬ ತುಂಟ ಹಸುವನ್ನು ಧರ್ಮ ಎಂಬ ಕಂಬಕ್ಕೆ ಕಟ್ಟಿ, ಮೋಕ್ಷ ಎಂಬ ಅಮೃತವನ್ನು ಪಡೆಯಬೇಕು ಎಂಬುದಾಗಿ. ಅದೇ ವಿಷಯವನ್ನು ಈ ಬಗೆಯಲ್ಲಿ ಈ ಪ್ರಶ್ನೋತ್ತರದಲ್ಲಿ ಚಿಂತಿಸಲಾಗಿದೆ. ಕರ್ತವ್ಯರೂಪವಾದ ಕರ್ಮವು, ಮತ್ತೊಬ್ಬರಿಗೆ ಹಿಂಸೆಯಾಗದ ರೀತಿಯ ಕರ್ಮವು ಮೋಕ್ಷ ಮಾರ್ಗಕ್ಕೆ ಉಪಕಾರವಾದ ಕರ್ಮವೇ ಧರ್ಮಮಾರ್ಗ ಎಂಬುದಾಗಿ ಇಲ್ಲಿ ಕರೆಯಲ್ಪಟ್ಟಿದೆ. ಯಾವುದು ಯೋಗವನ್ನು ಸಿದ್ಧಿಸುತ್ತದೆಯೋ ಅದನ್ನೇ 'ಕರ್ಮಯೋಗ' ಎಂಬುದಾಗಿ ಕರೆದಿದ್ದಾರೆ. ಅಂತಹ ಕರ್ಮಯೋಗದಿಂದ ಜೀವನವನ್ನು ಸಾಗಿಸಿ ಕೊನೆಗೆ ಜ್ಞಾನದಿಂದ ಕೈವಲ್ಯವನ್ನು ಪಡೆಯುವಂತಹದ್ದು. ಹೀಗೆ ಕೈವಲ್ಯವನ್ನು ಪಡೆಯುವಾಗ ಮಧ್ಯೆ ಅನೇಕ ಲಾಭವನ್ನು ಪಡೆಯುತ್ತೇವೆ. ಇದಕ್ಕೆ ಪೂರಕವಾದ ಅನೇಕ ಲಾಭಗಳು ಏನಿವೆಯೋ ಅವುಗಳನ್ನು ದೃಷ್ಟಲಾಭ ಮತ್ತು ಅದೃಷ್ಟಲಾಭ ಎಂಬುದಾಗಿ ವಿಭಾಗಿಸಿ, ಇವೆರಡನ್ನು ಧರ್ಮಮಾರ್ಗದಲ್ಲೇ ಪಡೆದರೆ ಇವೆರಡೂ ಮೋಕ್ಷಕ್ಕೆ ಮೆಟ್ಟಿಲಾಗಿ ಪರಿಣಮಿಸುತ್ತವೆ ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.

ಸೂಚನೆ : 4/1/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.  

ಕೃಷ್ಣಕರ್ಣಾಮೃತ 89 ಕೆಂಗೆನ್ನೆಯ ಗಜಗಮನನ ನಿಕಟಾಗಮನ (Krishakarnamrta 89)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಕೃಷ್ಣನು ನನ್ನನ್ನು ದೂರದಿಂದ ನೋಡುತ್ತಾನೆ. ಬಳಿಕ ಬಳಿಗೇ ಬಂದುಬಿಡುತ್ತಾನೆ.

ಆತನ ನಡಿಗೆ ಹೇಗಿದೆ? ವಾರಣಗಳ ನಡಿಗೆಯಂತೆ. ವಾರಣವೆಂದರೆ ಆನೆ. ಗಜಗಳ ಗಮನವು ಖೇಲದಿಂದ, ಎಂದರೆ ವಿಲಾಸದಿಂದ, ಕೂಡಿರುತ್ತದೆ. ಖೇಲವೆಂದರೆ ಕೇಲಿಯೇ, ಅರ್ಥಾತ್ ಆಟವೇ, ವಿಲಾಸವೇ.

ಗಜ-ಗತಿಯೆಂಬುದು ಇತ್ತ ಲೀಲೆಗೂ ಅತ್ತ ಗಾಂಭೀರ್ಯಕ್ಕೂ ಪ್ರಸಿದ್ಧವಾದುದು. ಎಂದೇ ಸ್ತ್ರೀಯರ ನಡೆಗೂ ಪುರುಷರ ನಡೆಗೂ ಉತ್ತಮವಾದ ಉಪಮೆಯಾಗುವಂತಹುದು. ಉತ್ತಮನಾರಿಯ ಲೀಲಾಯುತವಾದ ನಡೆಯನ್ನು ಲಕ್ಷಿಸಿ ಅವಳನ್ನು ಗಜ-ಗಮನೆಯೆನ್ನುವರು. ಗಾಂಭೀರ್ಯದಿಂದ ಹೆಜ್ಜೆಹಾಕುವ ಪುರುಷನನ್ನು ಲಕ್ಷಿಸಿ ಮಾತಂಗ-ಗಾಮೀ – ಎನ್ನುವರು.

ಎಂದೇ ಕೃಷ್ಣನು ವಾರಣ-ಖೇಲ-ಗಾಮಿ. ವಿಲಾಸ-ಭರಿತವಾಗಿ ಹೆಜ್ಜೆಯಿಡುವ ಹಸ್ತಿಯ ನಡೆಯನ್ನು ಹೊಂದಿರುವವನು. ಭಯ, ಕೋಪ ಮೊದಲಾದ ವಿಶೇಷ-ಸನ್ನಿವೇಶಗಳನ್ನು ಬಿಟ್ಟರೆ, ಗಜ-ಗತಿಯೆಂಬುದು ಮಂಥರವಾದದ್ದೇ, ಎಂದರೆ ನಿಧಾನವಾದದ್ದೇ. ಹಾಗೆ ಕೃಷ್ಣನು ಮೆಲ್ಲಮೆಲ್ಲನೆ ನನ್ನತ್ತಲೇ ಬರುತ್ತಿದ್ದಾನೆ.

ಇನ್ನು ಆತನ ನೋಟ ಹೇಗಿದೆ? ಧಾರಾ-ಕಟಾಕ್ಷಗಳಿಂದ ತುಂಬಿದೆ. ಕಟಾಕ್ಷಗಳ ಧಾರೆಯೇ ಧಾರಾ-ಕಟಾಕ್ಷ. ಕಟಾಕ್ಷವೆಂಬುದು ಒಮ್ಮೆ ನಮ್ಮತ್ತ ಬೀರಿದರೂ ನಮ್ಮಲ್ಲಿ ಧನ್ಯತೆಯುಂಟಾಗುವುದು. ಹಾಗಿರಲು, ಧಾರಾಕಟಾಕ್ಷ-ಭರಿತವಾದ ನೋಟಗಳೆಂದರೆ ಪರಮ-ಧನ್ಯತೆಯೇ. ಕಟಾಕ್ಷವು ಆಗೊಮ್ಮೆ ಈಗೊಮ್ಮೆಯೆಂದಲ್ಲದೆ, ಪ್ರವಾಹವೆಂಬಂತಿರುವಂತಹುದು.

ದೂರದಿಂದ ನೋಡುವುದು, ಗಜಗಮನದಿಂದ ಆಗಮಿಸುವುದು - ಎಂಬಿವೇ ಮುಂದುವರಿದು, ಕಟಾಕ್ಷ-ಪ್ರವಾಹವಾದುದಲ್ಲದೆ, ತನ್ನತ್ತಲೇ ಬರುತ್ತಿರುವುದನ್ನೂ ಹೇಳುತ್ತಿದ್ದಾನೆ, ಕವಿ. ಆತನ ಆಗಮನದಲ್ಲೊಂದು ವಿಶೇಷವನ್ನೂ ಹೇಳಿದ್ದಾನೆ.

ಕೃಷ್ಣನ ತುಟಿಯನ್ನೂ ಇಲ್ಲಿ ಚಿತ್ರಿಸಿದೆ. ಹಲ್ಲುಗಳನ್ನು ಮುಚ್ಚತಕ್ಕವು ತುಟಿಗಳಾದ್ದರಿಂದ, ತುಟಿಯನ್ನು ದಂತಚ್ಛದವೆಂದೋ ದಶನಾವರಣವೆಂದೋ ಕರೆಯುತ್ತಾರೆ. ಏಕೆಂದರೆ ದಶನಗಳಿಗೆ, ಎಂದರೆ ದಂತಗಳಿಗೆ, ತುಟಿಯೇ ಆವರಣ. ಹಲ್ಲುಬ್ಬಿಲ್ಲದವರೆಲ್ಲರ ತುಟಿ ಹೀಗೆ ತಾನೆ ಇರುತ್ತದೆ?  ಆ ತುಟಿಗೇ ಒಂದು ವಿಶೇಷವಿದೆ. ಕೃಷ್ಣನು ವೇಣುಗಾನವನ್ನು ಮಾಡುವ ಸನ್ನಿವೇಶದಲ್ಲಿ ಅದು ಹೃದಯಂಗಮವಾಗಿರುತ್ತದೆ. ಆ ವೇಣುನಾದದ ಒಂದು ವೇಣಿಯನ್ನೇ, ಅರ್ಥಾತ್ ಪ್ರವಾಹವನ್ನೇ, ಸುರಿಸುವುದದು.

ಈ ಶ್ಲೋಕದಲ್ಲಿ ಕೃಷ್ಣನ ನಡೆ-ನೇತ್ರ-ವೇಣುನಾದ-ಅಧರಗಳನ್ನು ಚಿತ್ರಿಸಿದೆ. ಶ್ಲೋಕ ಹೀಗಿದೆ:

ದೂರಾದ್ ವಿಲೋಕಯತಿ ವಾರಣ-ಖೇಲ-ಗಾಮೀ /
ಧಾರಾ-ಕಟಾಕ್ಷ-ಭರಿತೇನ ವಿಲೋಚನೇನ |
ಆರಾದ್ ಉಪೈತಿ ಹೃದಯಂಗಮ-ವೇಣುನಾದ-/
-ವೇಣೀ-ದುಘೇನ ದಶನಾವರಣೇನ ದೇವಃ ||

**

ಮತ್ತೊಂದು ಪದ್ಯ:

ಶ್ರೀಕೃಷ್ಣನನ್ನು ನಾವು ನೋಡುತ್ತಿದ್ದೇವೆ - ಎನ್ನುತ್ತಾನೆ ಲೀಲಾಶುಕ. ಪದ್ಯದಲ್ಲೆಲ್ಲೂ ಕೃಷ್ಣನ ಹೆಸರೇ ಬರುವುದಿಲ್ಲ. ಬದಲಾಗಿ ಆತನ ಚಿತ್ರಣವನ್ನೇ ಕವಿಯು ಮುಂದಿಡುತ್ತಾನೆ. ಅದನ್ನು ಮನಸ್ಸಿನ ಮುಂದೆ ತಂದುಕೊಂಡರೆ ಮೂಡುವುದು ಕೃಷ್ಣ-ತತ್ತ್ವವೇ.

ಕೃಷ್ಣನನ್ನು ನೀಲ-ಮೇಘದಂತಿರುವವನು ಎನ್ನುತ್ತಾರಲ್ಲವೆ? ಎಂದೇ ಆತನನ್ನು, ನೀಲಿಬಣ್ಣವೇ ಅದು - ಎಂಬಂತೆ ತೋರಿಸುತ್ತಾನೆ. ನೀಲವರ್ಣವೇ ನೀಲಿಮೆ. ನಾ ನೋಡುತ್ತಿರುವುದು ನೀಲಿಮೆಯನ್ನು; ಅದೂ ನಿರ್ಮಲವಾದ ನೀಲಿಮೆ. ಯಾವುದರಲ್ಲಿ ಮಲವಿಲ್ಲವೋ, ಅಶುದ್ಧಿಯ ಲವ-ಲೇಶವೂ ಇಲ್ಲವೋ, ಅದುವೇ ನಿರ್ಮಲ.

ನಾವೆಲ್ಲ ಮಲಿನರೇ. ನಮ್ಮ ದೇಹ ಮಲಿನ. ನಮ್ಮ ಮನಸ್ಸು ಮಲಿನ. ನಮ್ಮ ಬುದ್ಧಿ ಮಲಿನ. ಜನ್ಮಾಂತರಗಳಿಂದ ಬಂದು ತಗಲಿರುವ ವಾಸನೆಗಳೂ ಮಲಿನವೇ. ಯಾವ ಮಾಲಿನ್ಯದ ಸೋಂಕೂ ಇಲ್ಲದ ಪರ-ತತ್ತ್ವವೊಂದೇ ನಿರ್ಮಲ.

ಮಲಗಳಿರುವುದರಿಂದಲೇ ನಾವೆಲ್ಲ ಸಂಸಾರದಲ್ಲಿ ಸಿಲುಕಿಕೊಂಡಿರುವವರು. ಆತನು ಅಮಲನಾದ್ದರಿಂದಲೇ ಸಂಸಾರದಲ್ಲಿ ಸಿಲುಕಿಲ್ಲ. ಮಾತ್ರವಲ್ಲ, ಪರಿಶುದ್ಧನಾದ್ದರಿಂದಲೇ ಮಲಗಳನ್ನು ಕಳೆಯಬಲ್ಲ, ಸಿಲುಕಿರುವವರನ್ನು ಬಿಡಿಸಬಲ್ಲ.

ವಸ್ತುತಃ ಬಿಡಿಸಲೆಂದೇ ಬಂದಿರುವವ ಆತ. ಎಂದೇ, ಉಪಾಸ್ಯನೆಂದರೆ ಆತನೇ.

ಪರ-ತತ್ತ್ವವನ್ನು ನಮಗೆ ತಿಳಿಸಿಕೊಡಲೆಂದು ಬಂದಿರುವ ಸಾಹಿತ್ಯವೇ ನಿಗಮ ಅಥವಾ ವೇದ. ವಾಕ್ಕಿನ ಶಕ್ತಿಗೇ ಒಂದು ಮಿತಿಯಿರುವುದರಿಂದ, ಲೋಕೋತ್ತರವೆನಿಸುವ ನಿಗಮ-ವಾಕ್ಕಿಗೂ ಒಂದು ಮಿತಿಯುಂಟು. ಭಗವಂತನ ಪೂರ್ಣ-ಸ್ವರೂಪವನ್ನು ತಿಳಿಸಿಕೊಡಲು ಅದಕ್ಕೂ ಸರ್ವಥಾ ಆಗದು! ಎಂದೇ ಪರತತ್ತ್ವವನ್ನು "ನಿಗಮ-ವಾಕ್ಕಿಗೆ(ಗೂ) ಗೋಚರವಲ್ಲದ ಶಕ್ತಿ!" ಎನ್ನುವುದು. ಅದನ್ನೇ ಇಲ್ಲಿ ಕವಿಯು ನಿಗಮ-ವಾಕ್-ಅಗೋಚರವೆಂದಿರುವುದು.

ಹೀಗಾಗಿ, ಶ್ರೀಕೃಷ್ಣನೆಂಬುದು ನಿರ್ಮಲವೂ, ನಿಗಮ-ವಚನಕ್ಕೆ ನಿಲುಕದುದೂ, ಆದ ನೀಲತತ್ತ್ವ.

ಸ್ವತಃ ರೂಪ-ಆಕಾರಗಳನ್ನು ಮೀರಿದ ಅದು, ತನಗೆ ಬೇಕಾದ ರೂಪ-ಆಕಾರಗಳನ್ನು ತಳೆಯಬಲ್ಲುದು! ಹಾಗಿರುವುದರಿಂದಲೇ ಮಧುರವಾದ ನೀಲಿಮೆಯುಳ್ಳ ಶರೀರವನ್ನು ಧರಿಸಿಬಂದಿರುವುದು. ಇದಾಗಿರುವುದು ಕೃಷ್ಣಾವತಾರದಲ್ಲಿ.

ಶ್ರೀಕೃಷ್ಣನ ಬಾಲ್ಯ-ಯೌವನಗಳನ್ನು ಮಹಾಭಾರತದಲ್ಲೂ, ಅದಕ್ಕಿಂತಲೂ ಹೆಚ್ಚಾಗಿ ಮಹಾಭಾರತದ ಖಿಲಭಾಗವೆನಿಸುವ ಹರಿವಂಶದಲ್ಲೂ, ಅಂತೆಯೇ  ಶ್ರೀಮದ್ಬಾಗವತ-ಮಹಾಪುರಾಣದಲ್ಲೂ, ನಾವು ಕಾಣುತ್ತೇವೆ. ಹಾಗೆ ನೋಡಿದರೆ ರಾಮನನ್ನೂ ಮೇಘಶ್ಯಾಮನೆಂದು ಚಿತ್ರಿಸಿದರೂ, ಆತನ ಬಾಲ್ಯ-ಯೌವನಗಳನ್ನೇ ಶ್ರೀಮದ್ರಾಮಾಯಣದಲ್ಲಿ ವಾಲ್ಮೀಕಿಗಳು ಚಿತ್ರಿಸಹೋಗಿಲ್ಲ.

ಹಾಗಾದರೆ ಈ ಬಾಲ್ಯ-ಯೌವನಗಳ ಸಂಧಿಯಲ್ಲಿ ಹೇಗೆ ತೋರುವನು ಶ್ರೀಕೃಷ್ಣ? ಅದಕ್ಕೆ ಆತನ ಕೆನ್ನೆಯೊಂದನ್ನು ವರ್ಣಿಸಿದರೆ ಸಾಕು. ಆತನ ಕಪೋಲ-ಮಂಡಲವು, ಎಂದರೆ ದುಂಡನೆ ತೋರುವ ಕೆನ್ನೆಯು, ಅರುಣ-ವರ್ಣವನ್ನು ಹೊಂದಿದೆ, ಎಂದರೆ ಕೆಂಪಡರಿದೆ.

ಎಂತು ಬಂದಿತು ಕೆನ್ನೆಗೀ ಬಣ್ಣ? ನೀಲ-ವರ್ಣವನ್ನು ಮರೆಮಾಚಿ ಕೆನ್ನೆಯನ್ನು ಕೆಂಪಾಗಿಸಿರುವುದು ಯಾವುದು? ಕದಂಬ-ಮಂಜರಿಯ ಕೇಸರಗಳು. ಕದಂಬವೆಂದರೆ ನೀಪ; ಅದೊಂದು ಉತ್ತಮ-ಜಾತಿಯ ಈಚಲುಮರ. ಮಂಜರಿಯೆಂದರೆ ಹೂಗೊಂಚಲು. ಕುಸುಮಗಳಲ್ಲಿ ಕೇಸರಗಳಿರುತ್ತವೆಯಷ್ಟೆ. ಕೇಸರವೆಂದರೆ ಪುಷ್ಪಗಳಲ್ಲಿ ಎದ್ದುಕಾಣುವ, ಚಾಚಿರುವ ಭಾಗ. ಎಂದೇ ಆ ಕೇಸರಗಳಲ್ಲಿ ವರ್ಣ-ವಿಶೇಷವಿರುತ್ತದೆ. ಹೀಗೆ ನೀಪ-ಪುಷ್ಪ-ಗುಚ್ಛವೆಂದರೆ ಅದರಲ್ಲಿ ಅರುಣ-ವರ್ಣದ ಕೇಸರಗಳಿರುತ್ತವೆ.

ಕೇಸರಗಳ ಸ್ಪರ್ಶ ಕೃಷ್ಣನ ಕೆನ್ನೆಗಾಗಿದೆ. ಕೇಸರಗಳಲ್ಲಿ ಒಂದಿಷ್ಟು ಸೂಕ್ಷ್ಮವಾದ ಅಂಟಿನ ಅಂಶವೂ ಇರುತ್ತದೆಯಾಗಿ, ಕೃಷ್ಣನ ಕೆನ್ನೆಗೆ ಅವು ತಾಕಿವೆ. ತಾಕಿದಂತೆ ತಮ್ಮಲ್ಲಿಯ ಅರುಣ-ವರ್ಣವನ್ನು ಆತನ ಕೆನ್ನೆಗೂ ಒಂದಿಷ್ಟು ಲೇಪಿಸಿವೆ. ಈ ಅರುಣ-ಪರಾಗಗಳ ಸ್ಪರ್ಶದಿಂದಾಗಿ ಕೃಷ್ಣನ ಕೆನ್ನೆ ಕೆಂಪಡರಿದೆ.

ಆದರೆ ಈ ಕದಂಬ-ಪುಷ್ಪ-ಗುಚ್ಛವು ಬಂದುದೆಲ್ಲಿಂದ? ಮತ್ತೆಲ್ಲಿಂದ? ಆತನೇ ಅದನ್ನು ಧರಿಸಿದ್ದಾನೆ. ಕಿವಿಯ ಮೇಲೆ ಹೂವಿಟ್ಟುಕೊಳ್ಳುವ ಪರಿ ಇತ್ತೀಚಿನವರೆಗೂ ಇದ್ದದ್ದೇ. ದೇವ-ಪ್ರಸಾದವಾಗಿ ಕರ್ಣ-ಸ್ಥಾನದಲ್ಲಿ ಪುಷ್ಪವನ್ನಿಟ್ಟುಕೊಳ್ಳುವುದು ಇಂದೂ ಉಂಟಲ್ಲವೇ? ಅಲಂಕಾರ-ಪ್ರಿಯರಿಗೆ ಕಿವಿಯೆಡೆಯಲ್ಲೂ ಹೂ ಸಿಕ್ಕಿಸಿಕೊಳ್ಳುವ ಕ್ರಮವು ಪರಿಚಿತವಾದದ್ದೇ.

ವಿಷ್ಣುವನ್ನು ಅಲಂಕಾರ-ಪ್ರಿಯನೆಂದೇ ಗುರುತಿಸುವುದು. ಶ್ರೀಕೃಷ್ಣನು ವಿಷ್ಣುವಿನ ಅವತಾರವೇ. ಶೃಂಗಾರ-ರಸ-ಸರ್ವಸ್ವನೆಂದು ಹೊಗಳಿಸಿಕೊಳ್ಳುವ ಶ್ರೀಕೃಷ್ಣನು ತನ್ನನ್ನು ಸಿಂಗರಿಸಿಕೊಳ್ಳುವುದರಲ್ಲಿ ರುಚಿಯುಳ್ಳವನಷ್ಟೇ ಅಲ್ಲ, ಅದರಲ್ಲಿ ನಿಸ್ಸೀಮನೂ ಹೌದು.

ಹೀಗಾಗಿ ಆತನ ಕರ್ಣದಿಂದಲೇ ಜೋತಾಡುತ್ತಿದೆ, ಈ ಕದಂಬ-ಮಂಜರಿ. ಅದರ ಕೆಂಪು ಕೇಸರ ಕೆನ್ನೆಗೆ ಸೋಂಕಿದೆ. ಪರಾಗವಂಟಿದೆ. ಕೆಂಪನೆಯ ಛಾಯೆಯನ್ನು ಕೆನ್ನೆ ಹೊಂದಿದೆ.

ಕೆನ್ನೆಯಲ್ಲಿ ಕೆಂಪನ್ನು ಹೀಗೆ ಹೊಂದಿರುವ ನೀಲ-ವರ್ಣದ ರಾಶಿಯೇ ಈತ - ಎಂಬಂತೆ ತೋರುವ ಈ ಶ್ರೀಕೃಷ್ಣನನ್ನು ನಾವು ನೋಡುತ್ತಿದ್ದೇವೆ - ಎನ್ನುತ್ತಾನೆ ಲೀಲಾಶುಕ. ಕವಿಗಳು ತಮ್ಮನ್ನು ಬಹುವಚನದಿಂದ ನಿರ್ದೇಶಿಸಿಕೊಳ್ಳುವುದೂ ಸಾಮಾನ್ಯವೇ.

ಅಂತೂ ಹೀಗೆ ಕೆನ್ನೆಕೆಂಪಿನ ನೀಲಮೈಯ ಈ ದೇವತೆ ನಿಗಮಕೇ ನಿಲುಕದವನು. ಆತನನ್ನು ಕಾಣುತ್ತಿದ್ದೇವೆನ್ನುತ್ತಾನೆ, ಲೀಲಾಶುಕ.

ಕರ್ಣ-ಲಂಬಿತ-ಕದಂಬ-ಮಂಜರೀ- /
-ಕೇಸರಾರುಣ-ಕಪೋಲ-ಮಂಡಲಂ |
ನಿರ್ಮಲಂ ನಿಗಮ-ವಾಗ್-ಅಗೋಚರಂ /
ನೀಲಿಮಾನಂ ಅವಲೋಕಯಾಮಹೇ ||

ಸೂಚನೆ : 3/1/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಬ್ರಹ್ಮ ಸಾಯುಜ್ಯವೇ ಜೀವನದ ಮಹಾ ಧ್ಯೇಯ (Brahma Sayujyave Jivanada Maha Dhyeya)

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)


ಜೀವನಧ್ಯೇಯವನ್ನು ನೆನಪಿಸುವ ಒಂದು ಪ್ರಸಿದ್ಧವಾದ ಕಥೆ -ಮಾಂಧಾತ ಎಂಬ ಪ್ರಖ್ಯಾತನಾದ ರಾಜ. ರಾಜರ್ಷಿ ಎಂದೇ ಹೇಳಬಹುದು. ತನ್ನ ತಪಸ್ಯೆಯಿಂದ ಪರಾಕ್ರಮದಿಂದ, ಸತ್ವಮಯವಾಗಿ ರಾಜ್ಯವನ್ನು ಆಳುತ್ತಿದ್ದವನು. ಧರ್ಮಾತ್ಮ. ಹಾಗೆಯೇ ಆ ಕಾಲದಲ್ಲೊಬ್ಬ ಮಹರ್ಷಿ. ತಪಸ್ಯೆಯಿಂದ ಅಸಂಖ್ಯ ವರ್ಷಗಳು ಶರೀರ ಶೋಧನೆ ಮಾಡಿದವನು. ನಿತ್ಯ ಬ್ರಹ್ಮಚಾರಿ.  ನಿರಂತರ ತಪಸ್ಸಿನ ಕಾರಣದಿಂದಲೇ ವೃದ್ಧನಾದವನು. ಹೆಸರು ಸೌಭರೀ.ಅವನೊಮ್ಮೆ ಯಮುನೆಯಲ್ಲಿ ಮುಳುಗಿ ತಪಸ್ಸು ಮಾಡುತ್ತಿದ್ದನು. ಅನತಿ ದೂರದಲ್ಲಿ ಗಂಡು ಮೀನೊಂದು ಅನೇಕ ಹೆಣ್ಣು ಮೀನುಗಳೊಂದಿಗೆ ಕೂಡಿ ಸುಖವನ್ನು ಅನುಭವಿಸುವುದನ್ನು ನೋಡಿದನು. ಕಾಲಕರ್ಮ ಸಂಯೋಗ. ಮಹರ್ಷಿಯ ಮನಸ್ಸಿನಲ್ಲಿ ತಾನೂ ಸಂಸಾರ ಸುಖವನ್ನು ಅನುಭವಿಸಬೇಕು ಎಂಬ ಆಸೆ ಉಂಟಾಯಿತು.


ಮಾಂಧಾತ ಮಹಾರಾಜನಿಗೆ ೫೦ ಮಂದಿ ಹೆಣ್ಣುಮಕ್ಕಳಿದ್ದರು. ಸೌಭರಿ ಮಹರ್ಷಿಗಳು ಅವನಲ್ಲಿಗೆ ಬಂದು,ಒಬ್ಬಳನ್ನು ತಮಗೆ ವಿವಾಹ ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತಾರೆ. ಮಾಂಧಾತ ಒಬ್ಬ ತಂದೆಯಂತೆ ಆಲೋಚಿಸಿದ. ಇವನು ಹಣ್ಣು ಹಣ್ಣು ಮುದುಕ. ಇವನಿಗೆ ಹೇಗೆ ಮಗಳನ್ನು ಕೊಡುವುದು? ನಿರಾಕರಿಸಿದರೆ ಕೋಪಗೊಂಡು ಶಪಿಸಿಯಾನು. ಅದಕ್ಕೇ ಬುದ್ಧಿವಂತಿಗೆ ತೋರಿದ. ಹೀಗೆಂದ-" ಮಹರ್ಷಿಯೇ ಕ್ಷತ್ರಿಯ ಸಂಪ್ರದಾಯದಂತೆ ನನ್ನ ಯಾವಳಾದರೂ ಕನ್ಯೆಯು ನಿನ್ನನ್ನು ವರಿಸಿ ಸ್ವಯಂವರಮಾಲೆಯನ್ನು ನಿನ್ನ ಕೊರಳಿಗೆ ಹಾಕಿದರೆ ನೀನು ಅವಳನ್ನು ಪ್ರತಿಗ್ರಹಿಸಬಹುದಾಗಿದೆ".  ತ್ರಿಕಾಲಜ್ಞನಾದ ಮಹರ್ಷಿಗೆ ರಾಜನ ಮನಸ್ಸಿನ ಭಾವ ಒಡನೆಯೇ ಅರ್ಥವಾಯಿತು. ಅವರ ತಪೋಬಲವನ್ನು ತೋರಿಸಲು ಇದು ಸಕಾಲ. ಒಡನೆಯೇ ದೇವಕನ್ಯೆಯರೂ ಮೊಹಿಸುವಂತಹ ಕಡುಚೆಲುವನಾದ ಯುವಕನಾದನು. ರಾಜನ ಆಜ್ಞೆಯಂತೆ ಸೌಭರಿಯನ್ನು ಕನ್ಯೆಯರ ಅಂತಃಪುರಕ್ಕೆ ಕರೆದೊಯ್ದರು. ಇವನ ಸೌಂದರ್ಯಕ್ಕೆ ಮನಸೋತು ಒಬ್ಬಳಲ್ಲ, ಎಲ್ಲಾ ಐವತ್ತುಜನ ಕನ್ಯೆಯರೂ ಹಠಹಿಡಿದು ಸೌಭರಿಯನ್ನೇ ಮದುವೆಯಾದರು. ಆ ಎಲ್ಲರನ್ನೂ ಮದುವೆಯಾಗಿ ದೇವಲೋಕಸದೃಶವಾದ ಭೋಗವಸ್ತುಗಳಿಂದ ಅಲಂಕೃತವಾದ ಭವನಗಳನ್ನೇ ಅವರಿಗಾಗಿ ನಿರ್ಮಿಸಿದನು. ತಾನೇ ತನ್ನ ತಪಸ್ಸಿನ ಪ್ರಭಾವದಿಂದ ಐವತ್ತು  ಪ್ರತ್ಯೇಕವಾದ ಶರೀರಗಳನ್ನು ಧರಿಸಿ ಎಲ್ಲಾ ರಾಜಕನ್ಯೆಯರೊಂದಿಗೂ ವಿಹರಿಸುತ್ತಿದ್ದನು.

ಮಾಂಧಾತ ಮಹಾರಾಜನೊಮ್ಮೆ ತನ್ನ ಕನ್ಯೆಯರ ಯೋಗಕ್ಷೇಮಗಳನ್ನು ನೋಡಿಕೊಂಡು ಹೋಗಲು ಬರಲಾಗಿ ಅಲ್ಲಿ ಸೌಭರಿ ಮಹರ್ಷಿಯು ಅನುಭವಿಸುತಿದ್ದ ಅನಿರ್ವಚನೀಯವಾದ ಸುಖವನ್ನು ನೋಡಿ ಅಚ್ಚರಿಪಟ್ಟನು. ತಾನು ಸಾರ್ವಭೌಮ ಸಂಪತ್ತಿನಿಂದ ಸಂಪನ್ನನೆಂಬ ಗರ್ವವೆಲ್ಲವೂ ಇಳಿದುಹೋಯಿತು. ಒಬ್ಬೊಬ್ಬ ಹೆಣ್ಣುಮಗಳೂ ತನ್ನನ್ನೇ ಬಹಳ ಸುಖವಾಗಿಟ್ಟಿದ್ದಾನೆ ಎಂದು ತಂದೆಗೆ ತಿಳಿಸಿ ಸಂತೋಷಪಡುತ್ತಿದ್ದಳು.


ಹೀಗೆ ಆ ಮಹರ್ಷಿಯು ಬಹಳಕಾಲ ಗೃಹಸ್ಥಾಶ್ರಮದ ಸುಖವನ್ನು ಅನುಭವಿಸಿದರೂ ಅವನಿಗೆ ತೃಪ್ತಿಯಾಗಲಿಲ್ಲ. ಅಗ್ನಿಗೆ ತುಪ್ಪ ಸುರಿದಂತೆ ಆಯಿತು. ಆಗ ಅವನು ದೀರ್ಘವಾದ ಆತ್ಮಾವಲೋಕನಕ್ಕೆ ತೊಡಗಿದನು. ತನ್ನ ತಪಸ್ಯೆಯೆಲ್ಲವೂ  ಈ ಸುಖಗಳಿಗಾಗಿ ವ್ಯಯವಾದುದನ್ನು ಅರಿತು ಅತೀವ ವೇದನೆಪಟ್ಟನು. ಬ್ರಹ್ಮಾನಂದದ ಸುಖಕ್ಕಾಗಿ ಆಚರಿಸಿದ ತಪಸ್ಸೆಲ್ಲವನ್ನೂ ಕ್ಷುದ್ರವಾದ ಸಾಂಸಾರಿಕ ಸುಖಕ್ಕಾಗಿ ವ್ಯಯಿಸಿದ್ದು ಅವನಲ್ಲಿ ತೀವ್ರ ಪಶ್ಚಾತ್ತಾಪವನ್ನುತಂದಿತು. "ಮಹಾಧ್ಯೆಯದ ಸಾಧನೆಗಾಗಿ ಅವಾಂತರಧ್ಯೇಯಗಳನ್ನು ಇಟ್ಟುಕೊಳ್ಳಬೇಕಾಗುವುದು. ಆದರೆ ಅವಾಂತರಧ್ಯೇಯಗಳ ಗೊಂದಲದಲ್ಲಿ ಮಹಾಧ್ಯೇಯವನ್ನು ಮರೆತುಬಿಡಬಾರದು" ಎಂಬ ಶ್ರೀರಂಗಮಹಾಗುರುಗಳ ಮಾತು ಈ ಸಂದರ್ಭದಲ್ಲಿ ಸ್ಮರಣೀಯ.

ಸೌಭರಿಯ ವಿಷಯದಲ್ಲಿ ಸ್ವಲ್ಪಕಾಲ ಹೀಗಾಯಿತು. ಆದರೆ ಒಡನೆಯೇ ತನ್ನ ಅರಮನೆಯನ್ನು ಬಿಟ್ಟು ತಪಸ್ಸನ್ನು ಆಚರಿಸಲು ಕಾಡಿಗೆ ಹೋದನು. ಘೋರವಾದ ತಪಸ್ಸಿನಿಂದ ಶರೀರವನ್ನು ಶೋಷಿಸಿ ಪರಮಾತ್ಮನಲ್ಲಿ ಮನಸ್ಸನ್ನು ಲೀನಗೊಳಿಸಿ ಮುಕ್ತನಾದನು. ಅವನ ಆಧ್ಯಾತ್ಮಿಕ ಗತಿಯನ್ನು ನೋಡಿದ ಅವನ ಪತ್ನಿಯರೂ ಅವನ ಪ್ರಭಾವದಿಂದ ಜ್ವಾಲೆಗಳೆಲ್ಲವೂ ಮಹಾಗ್ನಿಯಲ್ಲಿ ಲೀನವಾಗುವಂತೆ ಮಹರ್ಷಿಯಲ್ಲೇ ಲೀನವಾಗಿ ಮುಕ್ತರಾದರು.


ಈ ಕಥೆ ನಮಗೆ ಅನೇಕ ಪಾಠಗಳನ್ನು ಕಲಿಸುತ್ತಿದೆ. ಮಾಂಧಾತ ಮಹಾರಾಜ. ತಾನು ಸಾರ್ವಭೌಮನೆಂಬ ಅಹಂಕಾರದಿಂದ ಮುನಿಯು ಕನ್ಯಾರ್ಥಿಯಾಗಿ ಕೇಳಿದಾಗ ಸಾಮಾನ್ಯರಂತೆ ನಡೆದುಕೊಂಡನು. ಅವನೊಬ್ಬ ರಾಜರ್ಷಿ ಆಗಿದ್ದರೂ ಸಂತಾನದ ವ್ಯಾಮೋಹ ಅವನ ರಾಜಧರ್ಮವನ್ನು ಸ್ವಲ್ಪ ಬದಿಗೊತ್ತಿತ್ತು. ಕೇಳುತ್ತಿರುವವನು ಸಾಮಾನ್ಯನಲ್ಲ. ಭವಿಷ್ಯತ್ತಿನ ಸತ್ಸಂತಾನಕ್ಕೋ, ಅಥವಾ ಯಾವುದೋ ಸೃಷ್ಟಿ ಸಂಕಲ್ಪದ ಕಾರಣಕ್ಕಾಗಿ ಕೇಳುತ್ತಿದ್ದಾನೆ ಎಂದು ಗೌರವಪೂರ್ವಕವಾಗಿ ಅದನ್ನು ನಡೆಸಿಕೊಡಬೇಕಾಗಿತ್ತು. ಹಾಗೆ ಮಾಡದ ಕಾರಣ ಎಲ್ಲಾ ಕನ್ಯೆಯರನ್ನೂ ಅವನೊಡನೆ ಕಳಿಸಬೇಕಾಯಿತು. ಕಡೆಯಲ್ಲಿ ತನ್ನ ಅಹಂಕಾರದ ನಡೆಗೆ ಪಶ್ಚಾತ್ತಾಪ ಪಡಬೇಕಾಯಿತು. ಸೌಭರಿಯ ತಪಸ್ಸು ಎಷ್ಟು ಬಲಶಾಲಿ ಎಂಬುದೂ ವೇದ್ಯವಾಗುತ್ತದೆ. ಕಡೆಯಲ್ಲಿ ಜೀವನದ ಸಂತೃಪ್ತಿ ಕೇವಲ ವಿಷಯಸುಖಗಳಲ್ಲಿ ಇಲ್ಲ ಅದು ಪೂರ್ಣವಾದ ಬ್ರಹ್ಮ ಸಾಯುಜ್ಯದಲ್ಲೇ ದೊರಕುವುದು ಎಂಬ ಅವನ ನಿಶ್ಚಯ ಈ ದೇಶದ ಎಲ್ಲಾ ಮಹರ್ಷಿಗಳ , ಜ್ಞಾನಿಶ್ರೇಷ್ಠರ ನಿಷ್ಕರ್ಷೆ. ಒಡನೆಯೇ ತನ್ನ ಮನಸ್ಸನ್ನು ಆ ಎಡೆಗೆ ತಿರುಗಿಸಿ ಕೃತಾರ್ಥನಾದ ಅವನ ಧೃತಿ, ಜೀವನ ಪಾಠ ನಮಗೆಲ್ಲರಿಗೂ ಪರಮಾದರ್ಶ.  "ಜೀವನದ ಎಲ್ಲಾ ಬಗೆಯ ವಿಧಾನಗಳೂ ವಿಶ್ವವನ್ನು ನಡೆಸುವವನ ಹತ್ತಿರಕ್ಕೆ ಹೋಗಿ ಸೇರುವಂತೆ ಋಷಿಗಳು ಜೀವನವನ್ನು ಅಣಿಮಾಡಿಕೊಂಡರು " ಎಂಬ ಶ್ರೀರಂಗಮಹಾಗುರುಗಳ ಮಾತು ಅವಿಸ್ಮರಣೀಯ.


ಸೂಚನೆ : 03/1/2026 ರಂದು ಈ ಲೇಖನವು  ವಿಜಯವಾಣಿಯ ಸುದಿನ ಪತ್ರಿಕೆಯಲ್ಲಿ ಪ್ರಕಟವಾಗಿದೆ.