Saturday, January 31, 2026

ಕೃಷ್ಣಕರ್ಣಾಮೃತ 92 ಗೋಪಿಯರ ಕಣ್ಣಂಚಿನಿಂದ ವಂಚಿತನಾದವನೇ ನನ್ನ ಕಾವ್ಯದ ಪ್ರಾಣ! (Krishakarnamrta 92)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in


 



ಕೃಷ್ಣನನ್ನು ಮೊದಲ ಬಾರಿಗೆ ಕಂಡ ಯುವತಿಯೊಬ್ಬಳು ತನ್ನ ಸಖಿಯನ್ನು ಮಾತಾಡಿಸುತ್ತ ಕೇಳುತ್ತಿದ್ದಾಳೆ - ಯಾರೇ ಇವನು? ಎಂಬುದಾಗಿ. ಸೊಬಗಿನ ಸುಪುರುಷನನ್ನು ಕಂಡರೆ ಯುವತಿಯರಿಗೆ ಕುತುಕವು ಉದಯಿಸದಿರುವುದೇ? ಸ್ವಲ್ಪದೂರದಲ್ಲಿ ಸಾಗುತ್ತಿರುವ ಕೃಷ್ಣನನ್ನು ಕುರಿತಾಗಿ ಇವಳ ಪ್ರಶ್ನೆ: "ಯಾರೇ ಇವನು? ಮಥುರೆಯ ವೀಥಿಯಲ್ಲಿ ಮೆಲ್ಲಮೆಲ್ಲನೆ ಸಾಗುತ್ತಿರುವವನು?"

ಲತಾಕುಂಜದೆಡೆಗೆ ಕೃಷ್ಣನು ಸಾಗುತ್ತಿದ್ದನೆಂದು ಕಾಣುತ್ತದೆ. ಲತಾಕುಂಜದ ಏಕಾಂತದಲ್ಲಿ ಇಂತಹ ಸುಂದರಾಂಗನ ಸನಿಹ ದೊರೆತರೆ ಅದಕ್ಕಿಂತಲೂ ಧನ್ಯತೆಯುಂಟೆ? ಅತನನ್ನೊಮ್ಮೆ ಕಂಡರೂ ಸಾಕು, ಎರಡು ಮಾತನಾಡಿದರೂ ಸಾಕು - ಎನ್ನುವ ಭಾವನೆ ಅವಳಿಗೆ.

ಮೊದಲಿಗೆ ತೋರಿದುದು ಆತನ ಶಿರೋಭೂಷಣ, ಆಮೇಲೆ ಮೈಸೊಬಗು, ಆಮೇಲೆ ಮೊಗ, ಆಮೇಲೆ ಕಣ್ಣು, ಆಮೇಲೆ ಮಾತು, ಹಾಗೂ ಅವನ ವಿಲಾಸಗತಿ - ಇವಿಷ್ಟೂ ಅಂಶಗಳಲ್ಲಿ ಕಂಡ ಸೊಬಗು ಅವಳಲ್ಲಿ ಕಾತರತೆಯನ್ನುಂಟುಮಾಡಿದೆ.

ದೂರದಲ್ಲಿ ಮೊದಲು ಕಂಡುದು ಆತನ ಶಿರಸ್ಸು, ಶಿರಸ್ಸಿನ ಮೇಲಿನ ಮಂಡನ. ಚಂದ್ರಕವೆಂದರೆ ನವಿಲುಗರಿಯ ಮೇಲೆ ಕಾಣುವ ಚಂದ್ರಾಕಾರವಾಗಿ ಪ್ರಕಾಶಿಸುವ ಭಾಗ, ಮಯೂರ-ಪಿಂಛದ "ಕಣ್ಣು". ಮೌಲಿಯೆಂದರೆ ತಲೆಯೂ ಆಗಬಹುದು, ತಲೆಯ ಮೇಲಿನ ಕಿರೀಟವೂ ಆಗಬಹುದು. ಎರಡು ಬಗೆಯಲ್ಲಿಯೂ ಕೃಷ್ಣನಿಗೆ ಅದು ಅಲಂಕಾರವೇ. ಹಲವು ವರ್ಣಗಳು ನವಿಲುಗರಿಯಲ್ಲಿರುವುವಲ್ಲವೇ? ನೀರಿನಲ್ಲಿ ತೈಲಬಿಂದುವೊಂದು ಬಿದ್ದರೂ ನಾನಾವರ್ಣಗಳು ಕಾಣುವುವಲ್ಲವೇ? ಎಂದೇ ಅದಕ್ಕೂ ಚಂದ್ರಕವೆಂಬ ಪದವೇ, ಸಂಸ್ಕೃತದಲ್ಲಿ. ಅಂತೂ ಹೀಗೆ ವರ್ಣರಂಜಿತವಾಗಿದ್ದು ಮನೋರಂಜಕವಾಗಿರುವ ಗರಿಯೇ ಶಿರೋಭೂಷಣವಾಗಿರುವುದು, ಕೃಷ್ಣನಿಗೆ.

ಇನ್ನು ಆತನ ಶರೀರವೋ, ಅಭಿರಾಮವಾದುದು, ಎಂದರೆ ಸುಂದರವಾದುದು. ಎಷ್ಟು ಸುಂದರ? ಅದಕ್ಕೊಂದು ಉಪಮೆ ಕೊಡಬಹುದೇ? ಆಗಬಹುದು. ಅದು ಮರಕತ-ಸ್ತಂಭದಂತೆ ಅಭಿರಾಮ. ಮರಕತವೆಂದರೆ ಪಚ್ಚೆಮಣಿ. ಪಚ್ಚೆಮಣಿಯಿಂದಾದ ಕಂಭವೊಂದು ಹೇಗಿರಬಹುದೋ ಹಾಗಿದೆ, ಕೃಷ್ಣನ ಮೈಕಟ್ಟು. ಮರಕತ-ಸ್ತಂಭದಂತೆ ಎಂದೇನು, ಮರಕತ-ಸ್ತಂಭಕ್ಕಿಂತಲೂ ಅಭಿರಾಮ ಎಂದೂ ಸಮಾಸವನ್ನು ಬಿಡಿಸಬಹುದು!

ಮೂರನೆಯದಾಗಿ, ಕೃಷ್ಣನ ವಕ್ತ್ರವು, ಎಂದರೆ ಮುಖವು, ಮಧುರವಾಗಿದೆ. ಏಕೆ? ಹುಬ್ಬುಗಂಟಿಕ್ಕಿರುವ ಮುಖವು ಮಧುರವಾಗಿರುತ್ತದೆಯೇ? ಮುಗುಳ್ನಗೆಯುಳ್ಳ ಮುಖವೇ ಮಧುರವೆನಿಸುವುದು. ಮುಖದ ಮೇಲೆ ಮಿಂಚಿದ ಮಂದಹಾಸವು ಅದೇನೋ ವಿಶಿಷ್ಟವಾಗಿದೆ. ಏನದರ ವೈಶಿಷ್ಟ್ಯವೆಂದು ಹೇಳಬರುವಂತಿಲ್ಲ. ಎಂದೇ ಅದನ್ನು "ಚಿತ್ರ" ಎಂದಿರುವುದು.

ಸಂಸ್ಕೃತದಲ್ಲಿ ಚಿತ್ರ ಎಂಬ ಪದವನ್ನು ವಿಶೇಷಣವಾಗಿ ಬಳಸುವುದುಂಟು. ಅದಕ್ಕೆ ಆಶ್ಚರ್ಯಕರವಾದ ಎಂಬ ಅರ್ಥ. ಯಾವುದು ವಿಶೇಷವಾಗಿ ಮುಗ್ಧವೋ, ಎಂದರೆ ಮುದ್ದೋ, ಅದುವೇ ವಿಮುಗ್ಧ. ಹಾಗೆ ಶ್ರೀಕೃಷ್ಣನ ಸುಮುಖದಲ್ಲಿ ಮಧುರತೆಯನ್ನು ಮೂಡಿಸಿರುವುದು ಆತನ ಚಿತ್ರವೂ ವಿಮುಗ್ಧವೂ ಆದ ಹಾಸ.

ನಾಲ್ಕನೆಯದು ಇನ್ನೂ ಹತ್ತಿರದ ನೋಟ. ಆತನ ಕಣ್ಣುಗಳಲ್ಲಿ ಎರಡು ಸೊಗಸುಗಳು: ಎಳಸು, ಚಂಚಲತೆ. ವಯಸ್ಸಾದವರ ಕಣ್ಣ ಸುತ್ತ ಸುಕ್ಕೋ ಕಪ್ಪೋ ತೋರುವುದು. ಆಗಷ್ಟೆ ಯೌವನೋದಯವಾಗಿರುವವರ ಕಣ್ಣುಗಳಲ್ಲಿ ಹೊಳಪು ತುಂಬಿರುವುದು. ಜಿಂಕೆಯ ಕಣ್ಣು ಸೊಗಸಾಗಿ ಕಾಣುವುದೇ ಅದರ (ಗುಡ್ಡೆಯ) ಚಂಚಲತೆಯಿಂದಲ್ಲವೇ? ಹೀಗೆ ಬಾಲವೂ ಲೋಲವೂ ಆಗಿವೆ ಕೃಷ್ಣನ ನೋಟಗಳು. ವಿಶೇಷವಾಗಿ ಲೋಲವಾಗಿದ್ದರೆ ವಿಲೋಲವೆನ್ನುವುದು.

ಐದನೆಯದು ಆತನ ಮಾತುಗಳು. ಆತನಿನ್ನೂ ದೊಡ್ಡವನಾಗಿಲ್ಲ. ಆತನಲ್ಲಿ ಇನ್ನೂ ಉಳಿದಿರುವ ಆ "ಶೈಶವ"ದಿಂದಾಗಿಯೇ ಆತನ ಮಾತುಗಳು ಕೇಳಲೇ ತಂಪು. ಹೀಗೆ ಶೈಶವದಿಂದಾಗಿ ಶೀತಲವಾಗಿಯೇ ಉಳಿದಿವೆ ಅವು.

ಇನ್ನು ಕೊನೆಯದಾಗಿ, ಎಂದರೆ ಆರನೆಯದಾಗಿ, ಅವನ ನಡೆಯೇ ನೋಡಲು ಚೆನ್ನ. ಅವನು ಹೆಜ್ಜೆಯಿಡುವುದೇನು, ಕೈಚಲನ ಮಾಡುವುದೇನು,  ಎಲ್ಲವೂ ವಿಲಾಸಭರಿತವಾದವೇ. ಎಂತಹ ವಿಲಾಸವದು? ಮದಗಜಕ್ಕಿಂತಲೂ ಶ್ಲಾಘ್ಯವಾದುದು!

"ಮೆಲ್ಲಮೆಲ್ಲನೆ ಬಂದನೇ, ಗೋಪಮ್ಮ ಕೇಳೇ" ಎಂಬ ದಾಸರ ಪದವು ಈ ಪದ್ಯವನ್ನೋದಿದವರಿಗೆ ಸ್ಮರಣೆಗೆ ಬರುತ್ತದೆ.

ಮಂದ-ಗಮನದೊಂದಿಗೆ ಮಧುರವಾದ ಮಥುರೆಯ ಮಾರ್ಗದಲ್ಲಿ ಮುಂದುವರೆಯುತ್ತಿದ್ದಾನೆ, ಮುಗ್ಧ-ಮಧುಸೂದನ! ಯಾವುದು ಮನಸ್ಸನ್ನು ಮುದಗೊಳಿಸುವುದೋ, ಮಥಿಸುವುದೋ ಅದುವೇ ಮಥುರೆ - ಎಂದು ಈ ಪದಕ್ಕೆ ವಿವರಣೆಯನ್ನು ಕೊಡುವುದುಂಟು!

ಹೀಗೆ ಕೃಷ್ಣನಲ್ಲಿಯ ಆರು ಅಂಶಗಳನ್ನು ಗಮನಿಸಿ ಮಾರುಹೋಗಿದ್ದಾಳೆ, ಈ ಮುಗ್ಧ-ಗೋಪಿಕೆ, ಈ ಮಧುರ-ಮಾಧವನಿಗೆ.

ಶ್ಲೋಕವಿದು:

ಮೌಲಿಃ ಚಂದ್ರಕ-ಭೂಷಣೋ, ಮರಕತ-ಸ್ತಂಭಾಭಿರಾಮಂ ವಪುಃ,/

ವಸ್ತ್ರಂ ಚಿತ್ರ-ವಿಮುಗ್ಧ-ಹಾಸ-ಮಧುರಂ, ಬಾಲೇ ವಿಲೋಲೇ ದೃಶೌ,|

ವಾಚಃ ಶೈಶವ-ಶೀತಲಾಃ, ಮದ-ಗಜ-ಶ್ಲಾಘ್ಯಾ ವಿಲಾಸ-ಸ್ಥಿತಿಃ,/

ಮಂದಂ ಮಂದಂ ಅಯೇ ಕ ಏಷ ಮಥುರಾ-ವೀಥೀಂ ಇತೋ ಗಾಹತೇ?||

ಮತ್ತೊಂದು ಪದ್ಯ:

ನನ್ನ ವಾಙ್ಮಯಕ್ಕೆ ಜೀವಿತವಾದವನು ಶ್ರೀಕೃಷ್ಣ. ಆತನು ವಿಜಯಿಸಲಿ ಎನ್ನುತ್ತದೆ, ಈ ಶ್ಲೋಕ.

ನನ್ನ ವಾಙ್ಮಯವೆಂದರೆ ಪ್ರಕೃತ, ಶ್ರೀಕೃಷ್ಣಕರ್ಣಾಮೃತ. ತನ್ನ ಈ ಕಾವ್ಯದ ವಸ್ತುವಾದ ಕೃಷ್ಣನಿಗೆ ಜಯಕಾರವನ್ನು ಹೇಳುತ್ತಿದ್ದಾನೆ, ಕವಿ.

ದೇವರಿಗೆ ನಾವೇನು ಜಯವನ್ನು ಹೇಳುವುದು? ನಾವು ಹೇಳದಿದ್ದರೆ ಅವನು ಸೋತುಬಿಡುವನೆಂದೇ? ಹಾಗಲ್ಲ. ಜಯವೆಂದರೆ ಸರ್ವೋತ್ಕರ್ಷ. ಹಾಗೆಂದರೆ ಎಲ್ಲವನ್ನೂ ಮೀರಿಸಿರುವಿಕೆ. ತನ್ನೆಲ್ಲ ವೈಭವವನ್ನೂ ತುಂಬಿಕೊಂಡು ನನ್ನನ್ನು ಅನುಗ್ರಹಿಸಲಿ - ಎಂಬ ಭಾವವಿಲ್ಲಿದೆ.

ಶ್ಲೋಕದಲ್ಲೆಲ್ಲೂಕೃಷ್ಣನ ಹೆಸರನ್ನೇ ಬಳಸದೆ,  ಶ್ರೀಕೃಷ್ಣನಿಗೇ ವಿಶಿಷ್ಟವಾಗಿರುವ ಅಂಶಗಳನ್ನು ಹೇಳತಕ್ಕ ನಾಲ್ಕು ವಿಶೇಷಣಗಳಿಂದ ಕೃಷ್ಣನನ್ನು ಜಾಣ್ಮೆಯಿಂದ ಸೂಚಿಸಿದ್ದಾನೆ, ಕವಿ. ತನ್ನ ವಾಙ್ಮಯಕ್ಕೇ ಪ್ರಾಣಭೂತನಾದವನು ಶ್ರೀಕೃಷ್ಣ. ಹಾಗೆಂದರೆ, ಶ್ರೀಕೃಷ್ಣನ ಸುತ್ತಲೇ ಹೆಣೆದಿರುವ ಕೃತಿಯಿದು ಎಂದರ್ಥ. ಕೃಷ್ಣಹೀಗಿರುವನೆಂಬುದೇ ಒಂದು ವಿಶೇಷಣ, ಆತನಿಗೆ.

ಇನ್ನುಳಿದ ಮೂರು ವಿಶೇಷಣಗಳನ್ನು ಗಮನಿಸಬಹುದು. ಕೃಷ್ಣನನ್ನು ಶಿಖಂಡ-ವಿಭೂಷಣನೆಂದು ವಿಶೇಷಿಸದೆ. ಶಿಖಂಡವೆಂದರೆ ನವಿಲಿನ ಗರಿ;  ಶಿಖಂಡಿಯೆಂದರೆ ನವಿಲು. ಮದಶಿಖಂಡಿಯೆಂದರೆ ಮದಿಸಿದ ನವಿಲು. ಮತ್ತ-ಮಯೂರವು ನರ್ತನಮಾಡುವಾಗ ಅದರ ಗರಿಗಳುದುರುತ್ತವೆ. ಕೃಷ್ಣನ ವರ್ಣವೂ ಮೇಘಗಳ ವರ್ಣವೂ ಒಂದೇ ಆದ್ದರಿಂದ ಆತನು ಕಾಣುತ್ತಲೇ ಮದಿಸಿದ ಮಯೂರಗಳು ನರ್ತಿಸಲಾರಂಭಿಸುತ್ತವೆ. ಹಾಗೆ ಬಿದ್ದ ಗರಿಯೊಂದನ್ನು ಭೂಷಣವನ್ನಾಗಿಸಿಕೊಂಡಿದ್ದಾನೆ, ಕೃಷ್ಣ.

ಮೂರನೆಯದಾಗಿ, ಶ್ರೀಕೃಷ್ಣ-ವದನಾರವಿಂದವು ಅತಿಮುದ್ದು. ಎಷ್ಟೆಂದರೆ, ಮದನನನ್ನೇ ಮಂಥರನನ್ನಾಗಿಸುವುದು ಅದು! ಏನು ಹಾಗೆಂದರೆ? ತಾನೇ ತ್ರಿಲೋಕ-ಸುಂದರನೆಂಬ ಭಾವನೆಯಲ್ಲವೇ  ಮದನನಿಗೆ? ಆದರೆ ಶ್ರೀಕೃಷ್ಣನ ಮುಖವನ್ನೊಮ್ಮೆ ಕಂಡುಬಿಟ್ಟರೆ, ಮದನನೇ ಸ್ತಂಭೀಭೂತನಾಗಿಬಿಡುವನು! ಯಾರು ಹಾಗೆ ಮನಸಾರೆ ಮೆಚ್ಚಿ ಸ್ತಬ್ಧರಾಗಿಬಿಡುವರೋ, ಅಂತಹವರು ಸರಸರನೆ ನಡೆಯಲಾರರು. ಎಂದೇ ಮಂಥರನಾಗಿದ್ದಾನೆ, ಮದನ. ಮಂಥರನೆಂದರೆ ಮೆಲ್ಲನೆಯ ನಡೆಯವನು.

ಕೊನೆಯದಾಗಿ, ಗೋಪಿಯರ ಕಟಾಕ್ಷಕ್ಕೆ ಮೋಸಹೋದವನು, ಕೃಷ್ಣ! ವ್ರಜ-ವಧುಗಳೆಂದರೆ ಗೋಪಸ್ತ್ರೀಯರು. ಅವರ ಕಣ್ಣಂಚೇ ನಯನಾಂಚಲ, ಕಟಾಕ್ಷ. ಅದಕ್ಕೆ ಮನಸೋತ ಪ್ರಭುವಿವನು! ತನ್ನೀ ಮಾನುಷಾವತಾರದಲ್ಲಿ ಪರಮ-ಸೌಲಭ್ಯವನ್ನು ತೋರಿಸಿಕೊಂಡಿರತಕ್ಕವನು. ಎಂದೇ ಗೋಪಿಕೆಯರ ಸಲಿಗೆಗಳಿಗೆ ಕಡಿವಾಣಹಾಕದವನು. ಗೋಪ-ಬಾಲೆಯರ ಮುಗ್ಧ-ಪ್ರೇಮಕ್ಕೆ ತನ್ನನ್ನೇ ಒಪ್ಪಿಸಿಕೊಂಡವನು.

ಅಂತಹ ನನ್ನ ಕೃಷ್ಣನು ಜಯಿಸಲಿ! – ಎಂದಿದ್ದಾನೆ, ಲೀಲಾಶುಕ:

ಮದ-ಶಿಖಂಡಿ-ಶಿಖಂಡ-ವಿಭೂಷಣಂ /
ಮದನ-ಮಂಥರ-ಮುಗ್ಧ-ಮುಖಾಂಬುಜಂ |
ವ್ರಜ-ವಧೂ-ನಯನಾಂಚಲ-ವಂಚಿತಂ /
ವಿಜಯತಾಂ ಮಮ ವಾಙ್ಮಯ-ಜೀವಿತಂ ||

ಮಕಾರ ಮೊದಲಾದುವುಗಳ ಅನುಪ್ರಾಸ ಶ್ಲೋಕಸೌಂದರ್ಯವನ್ನು ವರ್ಧಿಸಿದೆ.

ಸೂಚನೆ : 31/1/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Monday, January 26, 2026

ಪ್ರಶ್ನೋತ್ತರ ರತ್ನಮಾಲಿಕೆ 50 (Prasnottara Ratnamalike 50)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ - ೫೦ - ಮೂಕನು ಯಾರು ?

ಉ. ಸರಿಯಾದ ಸಮಯದಲ್ಲಿ ಒಳ್ಳೆಯಮಾತನ್ನು ಆಡದವ.

ಈ ಹಿಂದಿನ ಎರಡು ಪ್ರಶ್ನೋತ್ತರಗಳಿಗೆ ಹತ್ತಿರವಾದ ಪ್ರಶ್ನೋತ್ತರ ಇದಾಗಿದೆ. ಕುರುಡ, ಕಿವುಡ ಮತ್ತು ಮೂಕ ಈ ಮೂರು ದೋಷಗಳು, ಈ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ಇರುವ ಪ್ರಧಾನವಾದ ಮೂರು ಇಂದ್ರಿಯಗಳಿಗೆ ಬರುವ ದೋಷಗಳು. ಇವು ಮೂರು ಇದ್ದರೆ ಅಥವಾ ಇವುಗಳಲ್ಲಿ ಒಂದು ಅಥವಾ ಎರಡು ಇದ್ದರೂ ಆ ವ್ಯಕ್ತಿಯು ತನ್ನ ಜೀವನದಲ್ಲಿ ಯಾವುದೋ ಬಗೆಯ ಖೇದವನ್ನು ಅನುಭವಿಸುತ್ತಾನೆ, ಅಥವಾ ಈ ಅನುಭವಕ್ಕೆ ಹಿಂದಿನ ಯಾವುದೋ ಖೇದ ಕಾರಣ ಎಂಬ ಕರ್ಮಸಿದ್ದಾಂತ ಇದರ ಹಿಂದೆ ಅಡಗಿದೆ. ಆಯುರ್ವೇದದಲ್ಲಿ ಹೇಳುವಾಗ - ಗರ್ಭೋತ್ಪತ್ತಿಯ ಸಂದರ್ಭದಲ್ಲಿ ವಾತದ ಉದ್ರೇಕದಿಂದಾಗಿ ಗರ್ಭಸ್ಥ ಶಿಶುವಿನ ಈ ಇಂದ್ರಿಯಗಳಿಗೆ ಸಂಬಂಧಪಟ್ಟ ನಾಡಿಗಳು ಅಥವಾ ಧಮನಿಗಳು ತಡೆಯಲ್ಪಡುತ್ತವೆ. ಇದರಿಂದ ಈ ದೋಷಗಳು ಉಂಟಾಗುತ್ತವೆ ಎಂಬುದಾಗಿ. ಇಂದ್ರಿಯದ ಹೊರಕವಚ ಎಷ್ಟೇ ಚೆನ್ನಾಗಿ ಇದ್ದರೂ, ಉಳಿದ ಎಲ್ಲಾ ಭಾಗಗಳು ಇದ್ದರೂ, ಇಂದ್ರಿಯದ ಪ್ರಧಾನವಾದ ಭಾಗ ಮಾತ್ರ ಅಲ್ಲಿ ನಷ್ಟವಾಗಿರುತ್ತದೆ. ಅಂತಯೇ ಇಲ್ಲೂ ಸಹ ಬಾಯಿ ಇದೆ, ಆದರೂ ಮಾತನಾಡದಿರುವ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಅವನನ್ನು 'ಮೂಕ' ಎನ್ನಲಾಗುತ್ತದೆ. 

ಪ್ರಕೃತ ಪ್ರಶ್ನೆಯ ಆಶಯ ಅದಲ್ಲ. ಒಬ್ಬ ಮಾತನ್ನು ಆಡುವ ವ್ಯಕ್ತಿ ಯಾವ ಸಂದರ್ಭದಲ್ಲಿ ಮಾತನ್ನು ಆಡಬೇಕು; ಯಾವ ಸಂದರ್ಭದಲ್ಲಿ ಮಾತನ್ನು ಆಡಬಾರದು; ಎಷ್ಟು ಮಾತನ್ನು ಆಡಬೇಕು; ಹೇಗೆ ಮಾತನ್ನು ಆಡಬೇಕು? ಎಂಬ ವಿವೇಕವನ್ನು - ಅರಿವನ್ನು ಕಳೆದುಕೊಂಡಾಗ ಬಾಯಿ ಇದ್ದರೂ ಅವನು ಮೂಕನಾಗುತ್ತಾನೆ ಎಂಬುದು ಇಲ್ಲಿನ ತಾತ್ಪರ್ಯ. 

ಮಾತನಾಡಲು ಇರುವ ಇಂದ್ರಿಯ ಬಾಯಿ. ಇದನ್ನು 'ಕರ್ಮೇಂದ್ರಿಯ' ಎಂಬುದಾಗಿ ಕರೆಯಲಾಗುತ್ತಾರೆ. ಮಾತು ಅತ್ಯಂತ ಪ್ರಧಾನವಾದ ಸಾಧನ. ಇದರಿಂದ ನಮ್ಮ ಮುಂದಿರುವ ವ್ಯಕ್ತಿಯನ್ನು ಪ್ರಭಾವಿಸಬಹುದು. ವ್ಯಕ್ತಿಯಲ್ಲಿ ಅನೇಕ ಪರಿವರ್ತನೆಗಳನ್ನು ಮಾಡಬಹುದು. ಕೇವಲ ಮಾತನಾಡುವುದರಿಂದಲೇ ಆ ಸಂದರ್ಭದಲ್ಲಿ ಇಲ್ಲದ ಒಲ್ಲದ ಸಂದರ್ಭವನ್ನೂ ಸೃಷ್ಟಿಸಬಹುದು ಎಂದು ಶ್ರೀರಂಗ ಮಹಾಗುರು ಮಾತಿಗಿರುವ ಶಕ್ತಿಯನ್ನು ಹೀಗೆ ಹೇಳುತ್ತಿದ್ದರು ಎಂಬುದಾಗಿ ಅವರ ಶಿಷ್ಯರಿಂದ ಕೇಳಿದ್ದೇವೆ. "ಅತ್ಯಂತ ಬಿರು ಬೇಸಿಗೆಯಲ್ಲೂ ಮಾತಿನಿಂದ ಶೈತ್ಯವಾಗುವಂತೆ ಮಾಡಬಹುದಪ್ಪಾ, ಅಥವಾ ಶೀತಕಾಲದಲ್ಲೂ ಬೆವರು ಬರಿಸಬಹುದಪ್ಪ" ಎಂಬುದಾಗಿ. ಇದು ಮಾತಿಗಿರುವ ಶಕ್ತಿ ಎಷ್ಟು ಎಂಬುದನ್ನು ತಿಳಿಸುತ್ತದೆ. ಅಂದರೆ ಒಬ್ಬ ವ್ಯಕ್ತಿಯನ್ನು ಸರಿಯಾದ ಮಾತುಗಳಿಂದ ಒಪ್ಪಿಸುವ ಕಾಲವಿರುತ್ತದೆ. ಆಗ ಹೇಳಬೇಕಾದದ್ದನ್ನು ಹೇಳಬೇಕಾಗುತ್ತದೆ. ಅದಕ್ಕೆ ಅದು ಸಕಾಲವಾಗಿರುತ್ತದೆ. ಹೇಳಬಾರದದ್ದನ್ನು ಹೇಳಬಾರದು. ಅಥವಾ ಎಷ್ಟು ಹೇಳಬೇಕು ಎಂಬ ಒಂದು ಮಿತಿ ಇರಬೇಕಾಗುತ್ತದೆ. ಹಾಗಾಗಿ ಮಿತವಾದ ಮಾತು ಇರಬೇಕಾಗುತ್ತದೆ. ಮಾತಿನಲ್ಲಿ ಮಿತಿ ತಪ್ಪಿದರೆ ಮೃತ್ಯುವಿಗೂ ಆಹ್ವಾನವಿತ್ತಂತೆ ಎಂಬುದಾಗಿ ಸುಭಾಷಿತವು ಸಾರುತ್ತದೆ. ಅಂದರೆ ಮಿತವರಿತು ಮಾತನಾಡಬೇಕು ಎಂಬುದೂ ಇದರ ತಾತ್ಪರ್ಯ. ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪಹರಣದ ಸಂದರ್ಭದಲ್ಲಿ ಒಳ್ಳೆಯ ಮಾತನ್ನು ಹೇಳಬೇಕಾದ, ಹೇಳಲೇಬೇಕಾದ, ಉತ್ತಮಸ್ಥಾನ ಮತ್ತು ಅಧಿಕಾರಸಂಪತ್ತಿನಿಂದ ಕೂಡಿದ ಕುರುಕುಲಪಿತಾಮಹರಾದ ಭೀಷ್ಮಾಚಾರ್ಯರು ದುರ್ಯೋಧನನ ಪಾಳಯಕ್ಕೆ ಸರಿಯಾಗಿ ಬುದ್ಧಿವಾದವನ್ನು ಹೇಳಲಿಲ್ಲ. ಇಂತಹ ವಿಭಿನ್ನ ಸಂದರ್ಭಗಳಲ್ಲಿ ಮಾತನಾಡುವ ಸಂದರ್ಭದಲ್ಲಿ ಆಡದಿದ್ದರೆ ಅಥವಾ ಮಾತನಾಡದ ಸಂದರ್ಭದಲ್ಲಿ ಮಾತನಾಡಿದರೆ ಆಗ ಅವನು ಬಾಯಿದ್ದೂ ಮೂಕನಂತೆ ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.

ಸೂಚನೆ : 24/1/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.  

ವ್ಯಾಸ ವೀಕ್ಷಿತ 172 ಮಾವಿನ ಹಣ್ಣಿನಿಂದ ಜನಿಸಿದ ರಾಜಕುಮಾರ! ( Vyaasa Vikshita 172)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ಇಬ್ಬರು ಪತ್ನಿಯರಿದ್ದರೂ ಸಂತತಿಯಿಲ್ಲವೆಂದು ಕೊರಗುತ್ತಿದ್ದ ಬೃಹದ್ರಥನು ಚಂಡಕೌಶಿಕಮುನಿಯ ಬಳಿಗೆ ಬಂದು ಎಲ್ಲ ಬಗೆಯ ರತ್ನಗಳನ್ನೂ ಆತನಿಗೆ ಸಮರ್ಪಿಸಿ ವಂದಿಸಿದನು.

ಆಗಮನ-ಕಾರಣವನ್ನು ಋಷಿಯು ಕೇಳಲಾಗಿ, ತನಗೆ ಸಂತತಿಯಿಲ್ಲದಿರುವ ಖೇದವನ್ನು ತೋಡಿಕೊಂಡನು. ಸತ್ಯವಾಕ್ಯನೂ ಸತ್ಯನಿಷ್ಠನೂ ಆದ ಆ ಋಷಿಯು, "ನಿನ್ನ ವಿಷಯದಲ್ಲಿ ನಾನು ಸಂತುಷ್ಟನಾಗಿದ್ದೇನೆ, ವರವೇನನ್ನಾದರೂ ಕೇಳಿಕೋ" ಎಂದು ನುಡಿದನು.

ಆಗ ಪತ್ನೀ-ಸಮೇತನಾಗಿ ರಾಜನು ಆತನಿಗೆ ವಂದಿಸಿ, ಸಂತತಿಯಿಲ್ಲದ ಕಾರಣ ಬಾಷ್ಪ-ಗದ್ಗದಿತವಾದ ಮಾತಿನಿಂದ ಹೀಗೆ ಹೇಳಿದನು.

"ಪೂಜ್ಯರೇ, ರಾಜ್ಯವನ್ನು ತೊರೆದು ತಪೋವನಕ್ಕೆ ಹೊರಟುನಿಂತಿದ್ದೇನೆ, ನಾನು. ಅಲ್ಪ-ಭಾಗ್ಯನಾದ ನನಗೆ ಯಾವ ವರದಿಂದ ಏನು ಪ್ರಯೋಜನ? ಸಂತಾನವಿಲ್ಲದ ನನಗೆ ರಾಜ್ಯದಿಂದಲಾದರೂ ಏನು ಪ್ರಯೋಜನ?" ಎಂದು.

ಈ ಮಾತನ್ನು ಕೇಳಿದ ಮುನಿಗೆ ಇಂದ್ರಿಯ-ಕ್ಷೋಭವಾಗಿ, ಧ್ಯಾನಪರನಾದನು. ಅದೇ ಮಾವಿನ ಮರದ ನೆರಳಿನಲ್ಲಿಯೇ ಕುಳಿತುಕೊಂಡನು. ಆ ಮುನಿಯು ಹಾಗೆ ಕುಳಿತುಕೊಂಡಂತೆಯೇ, ಆತನ ಮಡಿಲಲ್ಲಿ ಮಾವಿನ ಹಣ್ಣೊಂದು ಬಿದ್ದಿತು. ಅದೇನು ಗಾಳಿ ಬೀಸಿದುದಕ್ಕಾಗಿ ಅಲ್ಲ, ಗಿಣಿಯು ಕಚ್ಚಿತ್ತೆಂದಲ್ಲ, ತಾನಾಗಿಯೇ ಬಿದ್ದದ್ದದು!

ಅದನ್ನು ಕೈಗೆತ್ತಿಕೊಂಡವನೇ ಆ ಮುನಿಶ್ರೇಷ್ಠನು ಹೃದಯದಿಂದ ಅಭಿಮಂತ್ರಿಸಿದನು; ಪುತ್ರ-ಸಂತಾನಕ್ಕೆ ಕಾರಣವಾಗುವ ಆ ಅಪ್ರತಿಮವಾದ ಫಲವನ್ನು ಆ ರಾಜನಿಗೆ ಕೊಟ್ಟನು. ಮತ್ತು ಮಹಾ-ಪ್ರಾಜ್ಞನಾದ ಆ ಮುನಿ-ವರನು ಆ ರಾಜನಿಗೆ ಹೇಳಿದನು "ರಾಜನೇ, ನೀನು ಕೃತಾರ್ಥನಾಗಿದ್ದೀಯೇ. ನರೇಶ್ವರಾ, ನೀನಿನ್ನು ಹಿಂದಿರುಗಬಹುದು" ಎಂದು.

ಮುನಿಯ ಈ ಮಾತನ್ನು ಕೇಳಿದ ರಾಜನು ಶಿರಸಾ ಮುನಿ-ಪಾದಗಳಿಗೆ ವಂದಿಸಿದನು. ತನ್ನ ಅರಮನೆಗೆ ಹಿಂದಿರುಗಿದನು. ಸರಿಯಾದ ಸಮಯವನ್ನರಿತು ಆ ರಾಜನು ತನ್ನ ಇಬ್ಬರೂ ಪತ್ನಿಯರಿಗೆ ಆ ಒಂದು ಹಣ್ಣನ್ನು ಕೊಟ್ಟನು.

ಅವರಾದರೂ ಆ ಮಾವಿನ ಹಣ್ಣನ್ನು ಇಬ್ಭಾಗ ಮಾಡಿದರು. ಮುನಿಯ ವಚನವು ಸತ್ಯವಾಗುವ ಕಾರಣ ಮುಂದಾಗುವ ಫಲವನ್ನು ಚಿಂತಿಸಿ, ಇಬ್ಬರೂ ಸೇವಿಸಿದರು. ಫಲ-ಪ್ರಾಶನದಿಂದಾಗಿ ಇಬ್ಬರೂ ಗರ್ಭವತಿಯರೂ ಆದರು. ಇಬ್ಬರೂ ಗರ್ಭಧರಿಸಿದುದನ್ನು ಕಂಡ ರಾಜನಿಗೆ ಸಂತೋಷವೇ ಆಯಿತು.

ಕಾಲಕಳೆದಂತೆ ಇಬ್ಬರೂ ರಾಣಿಯರೂ ಒಂದೊಂದು ಶರೀರಾರ್ಧವನ್ನು ಹೆತ್ತರು! ಒಂದು ಕಣ್ಣು, ಒಂದು ತೋಳು, ಒಂದು ಕಾಲು, ಅರ್ಧ ಹೊಟ್ಟೆ, ಅರ್ಧ-ಮುಖ, ಅರ್ಧ-ತಿಕಗಳು! ಹೀಗಿದ್ದ ಶರೀರದ ಅರ್ಧಭಾಗಗಳನ್ನು ಕಂಡು ಆ ಇಬ್ಬರೂ ರಾಣಿಯರೂ ನಡುಗಿಹೋದರು.

ಅತ್ಯಂತ-ದುಃಖ-ಭರಿತರಾಗಿ ಸಜೀವವಾದ ಆ ಪ್ರಾಣಿ-ಭಾಗಗಳೆರಡನ್ನು ಪರಿತ್ಯಜಿಸಿದರು. ಅವರಿಬ್ಬರಿಗೆ ದಾಸಿಯರಿಬ್ಬರಿದ್ದರು. ಅವರು ಆ ಎರಡು ಗರ್ಭ-ಭಾಗಗಳನ್ನು ಚೆನ್ನಾಗಿ ಬಟ್ಟೆಯಲ್ಲಿ ಸುತ್ತಿದರು; ಹಾಗೂ ಅಂತಃಪುರದಿಂದ ಹೊರಬಿದ್ದವರೇ ಅವನ್ನು ಬಿಸಾಡಿ ಹೊರಟುಹೋದರು.

ನಾಲ್ಕುದಾರಿಗಳು ಸೇರುವ ಎಡೆಯಲ್ಲಿ ಬಿಸಾಡಲಾಗಿದ್ದ ಆ ಶಿಶುಭಾಗಗಳನ್ನು ತೆಗೆದುಕೊಂಡಳು, ಜರಾ ಎಂಬ ಹೆಸರಿನ ರಾಕ್ಷಸಿ. ಅವಳೋ ಮಾಂಸ-ರಕ್ತಗಳನ್ನೇ ಸೇವಿಸತಕ್ಕವಳು. ವಿಧಿಬಲ-ಪ್ರೇರಿತಳಾದ ಅವಳು, ಆ ಎರಡು ತುಂಡುಗಳನ್ನು ಹೊತ್ತೊಯ್ಯಲು ಸುಲಭವಾಗಲೆಂದು ಸರಿಯಾಗಿ ಜೋಡಿಸಿದಳು.

ಆದರಿದೋ! ಆ ಎರಡು ತುಂಡುಗಳನ್ನು ಅವಳು ಸೇರಿಸಿದಳು. ಸೇರಿಸುತ್ತಿದ್ದಂತೆಯೇ ಅವಾದುದು ಏಕಶರೀರ-ಧಾರಿಯಾದ ಒಬ್ಬ ವೀರ-ಕುಮಾರ!

ಯುಧಿಷ್ಠಿರಾ, ಅದು  ಆ ರಾಕ್ಷಸಿಗೇ ಅಚ್ಚರಿಯಾಯಿತು. ವಿಸ್ಮಯದಿಂದ ಅವಳ ಕಣ್ಣುಗಳರಳಿದವು. ಆದರೆ ಆ ಶಿಶುವನ್ನು ಅವಳಿಗೆ ಎತ್ತಿಕೊಳ್ಳಲೇ, ವಸ್ತುತಃ ಎತ್ತಲೇ, ಆಗಲಿಲ್ಲ! ಏಕೆಂದರೆ ಆ ಶಿಶುವು ವಜ್ರ-ಸಾರವಾಗಿತ್ತು! ಎಂದರೆ ವಜ್ರಮಯವೋ ಎಂಬಂತಾಗಿತ್ತು!

ಸೂಚನೆ : 25/1/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಅಷ್ಟಾಕ್ಷರೀ 98 ಸಪ್ತಮ್ಯಾಂ ಸ್ನಾನಮಚರೇತ್ (Astakshara 98)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ರಥಸಪ್ತಮೀ ಹಬ್ಬದ ಆಚರಣೆಯು ಇಡೀ ಭಾರತದಲ್ಲಿಯೇ ಉಂಟು.

ಸೂರ್ಯನನ್ನು ವಿಶೇಷವಾಗಿ ಆರಾಧಿಸುವ ದಿವಸವಿದು. ಸೂರ್ಯನು ಸಪ್ತಾಶ್ವ-ರಥಾರೂಢನಾಗಿ ಸಂಚರಿಸುವನೆಂದು ಪ್ರಸಿದ್ಧಿಯಿರುವುದಲ್ಲವೇ? ಬೆಳಕನ್ನು ವಿಭಜಸಿ ನೋಡಿದರೆ ಏಳು ಬಣ್ಣಗಳು ಕಾಣುವುವಲ್ಲವೇ? ತನ್ನಿಮಿತ್ತವಾಗಿಯೇ ಸಪ್ತಮಿಯಂದು ಆತನಿಗೆ ವಿಶೇಷವಾದ ಪೂಜೆ ಸಲ್ಲುವುದು. ಹೀಗೆಂಬ ಒಂದು ಭಾವನೆಯು ಜನಸಾಮಾನ್ಯರಲ್ಲಿರಲಿ, ವಿದ್ವಾಂಸರಲ್ಲಿಯೂ ಸಹ ಪ್ರಚುರವಾಗಿದೆ.

ಆದರೆ ಶ್ರೀರಂಗಮಹಾಗುರುಗಳು ಈ ಆಚರಣೆಯ ಹಿಂಬದಿಯ ತತ್ತ್ವವನ್ನು ವಿವರಿಸಿದ್ದಾರೆ. ಸಂಕ್ರಾಂತಿಯಂದು ಉತ್ತರಾಯಣವು ಆರಂಭವಾಯಿತೆಂದರೆ ದೇವಾಲಯಗಳಲ್ಲಿ ರಥೋತ್ಸವಗಳು ಸಾಮಾನ್ಯವಾಗಿ ಸಪ್ತಮೀತಿಥಿಯಂದೇ ಆರಂಭವಾಗುವುವು. ಆ ಕಾರಣಕ್ಕೇ ರಥಸಪ್ತಮೀ ಎಂಬ ಹೆಸರು ಬಂದಿರುವುದು.

ಈ ಹಬ್ಬದಲ್ಲಿ ಒಂದು ವಿಶಿಷ್ಟವಾದ ಆಚರಣೆಯಿರುವುದು. ಅದೆಂದರೆ ಅಂದು ಸ್ನಾನ ಮಾಡುವ ಬಗೆ: ಬೆಳಗಿನ ಜಾವವೇ ಸ್ನಾನ. ಏಳು ಎಕ್ಕದ ಎಲೆಗಳನ್ನು ತಲೆಯ ಮೇಲೂ, ಏಳು ಎಲಚೀ ಎಲೆಗಳನ್ನು ತೋಳುಗಳ ಮೇಲೆಯೂ ಇರಿಸಿಕೊಂಡು ಸ್ನಾನ.

ಏಕಿದು? ಮಾಘ-ಶುಕ್ಲ-ಸಪ್ತಮಿಯೆಂಬುದೇ ಸೂರ್ಯಗ್ರಹಣಕ್ಕೆ ಸಮಾನವಾದುದೆಂಬ ಉಕ್ತಿಯಿದೆ. ಮಾಘಮಾಸವೆಂದರೆ ಬಹಳ ಛಳಿಯೇ. ಅದರಲ್ಲೂ ಬೆಳಗಿನ ಜಾವವೆಂದರೆ ಮತ್ತೂ ತಣ್ಣಗಿರುವುದು. ಆದರೂ ಅರುಣೋದಯ-ಸಮಯದಲ್ಲೇ ಈ ಸ್ನಾನವು ವಿಹಿತ.

ಇದರಿಂದಾಗಿ ನಮ್ಮಲ್ಲಿಯ ಏಳು ಜನ್ಮದ ಪಾಪಗಳು ದೂರವಾಗುತ್ತವೆ. ನಮ್ಮ ಏಳುವಿಧ ಪಾಪಗಳೂ ತೊಲಗುತ್ತವೆ: (೧) ಈ ಜನ್ಮದಲ್ಲಿ ಮಾಡಿದ ಪಾಪ (೨) ಜನ್ಮಾಂತರಗಳಲ್ಲಿ ಸಂಪಾದಿಸಿದ ಪಾಪ; (೩)(೪)(೫) ಮನಸ್ಸು, ವಾಕ್ಕು, ಕಾಯ - ಇವುಗಳಿಂದ ಮಾಡಿರುವ ಪಾಪ; ಹಾಗೂ (೬)(೭) ತಿಳಿದು ಮಾಡಿದ ಪಾಪ, ಮತ್ತು ತಿಳಿಯದೇ ಮಾಡಿದ ಪಾಪ. ಅಲ್ಲದೆ ತನ್ನ ತಂದೆಯ ಕಡೆ ಹಾಗೂ ತಾಯಿಯ ಕಡೆ ಏಳೇಳು ತಲೆಮಾರುಗಳ ಉದ್ಧಾರವಾಗುತ್ತದೆ. ಹೀಗೆಂಬುದಾಗಿ ಹೇಳುವ ಶಾಸ್ತ್ರವಾಕ್ಯಗಳಿವೆ.

ರಥಸಪ್ತಮಿಯಂದು ಮಾಡುವ ಸ್ನಾನವನ್ನು ಸರೋವರದಲ್ಲೋ ಮಹಾನದಿಯಲ್ಲೋ ಮಾಡುವುದು ಹೆಚ್ಚು ಪ್ರಶಸ್ತವೆಂದಿದೆ. ಪುಣ್ಯಸರೋವರಗಳಲ್ಲಿ ಪುಷ್ಕರವು ಬಹುಶ್ರೇಷ್ಠ. ಮಹಾನದಿಗಳಲ್ಲಿ ಗಂಗೆಯಂತೂ ಪರಮಶ್ರೇಷ್ಠವೇ. ಇದಲ್ಲದೆ ಸಮುದ್ರಸ್ನಾನವೂ ಪ್ರಶಸ್ತ. ಮತ್ತು ಇವೆಲ್ಲದರಲ್ಲೂ ಅವಗಾಹನ-ಸ್ನಾನ, ಅರ್ಥಾತ್ ಮುಳುಗು ಹಾಕಿ ಮಾಡುವ ಸ್ನಾನವು ಪ್ರಶಂಸೆಗೆ ಪಾತ್ರವಾಗಿದೆ.

ಅಂದು ಶ್ರಾದ್ಧ/ತರ್ಪಣಗಳ ಆಚರಣೆ, ವಿಶಿಷ್ಟದಾನಗಳು, ಸೂರ್ಯನಿಗೆ ಪ್ರಿಯವೆನಿಸುವ ಮಂತ್ರ-ಸ್ತೋತ್ರಗಳ ಪಾರಾಯಣ, ರಥೋತ್ಸವ ದರ್ಶನ, ಎಳ್ಳನ್ನು ಬೀರುವುದು - ಇವುಗಳನ್ನೂ ಆಚರಿಸಲಾಗುತ್ತದೆ.

ಈ ಸಂದರ್ಭದಲ್ಲಿ ಸೂರ್ಯನನ್ನು ನಮ್ಮ ಪ್ರಾಚೀನರು ಕಂಡಿರುವ ಬಗೆಯನ್ನೂ ಕೊಂಚ ವಿಶ್ಲೇಷಿಸಬಹುದು. ಮೊದಲನೆಯದಾಗಿ ಸೂರ್ಯನು ಒಬ್ಬನೇ ಅಲ್ಲ, ಹನ್ನೆರಡು ಮಂದಿ ಆದಿತ್ಯರುಂಟು - ಎಂದು ಹೇಳುವ ಮಾತುಗಳಿವೆ. ಇದಲ್ಲದೆ ಸೂರ್ಯರನ್ನು ಏಳು ಅಥವಾ ಎಂಟು ಎಂದು ಹೇಳುವ ನುಡಿಗಳೂ ಉಂಟು. ಏಕೆ ಹೀಗೆ?

ಮಾಸಗಳು ಹನ್ನೆರಡಾದ್ದರಿಂದ, ದ್ವಾದಶಾದಿತ್ಯರು - ಎನ್ನುವ ಲೆಕ್ಕ. ಆದರೆ ಏಳು-ಎಂಟುಗಳೆಂಬುದು, ಹಾಗೂ ಸೂರ್ಯರಥಕ್ಕೆ ಏಳು ಕುದುರೆಗಳು - ಎನ್ನುವುದರ ತತ್ತ್ವವನ್ನು ಅರಿಯಬೇಕಲ್ಲವೇ?

ಸಪ್ತಾಶ್ವಗಳೆಂದರೆ ಸಪ್ತವರ್ಣಗಳೆಂಬುದು ಒಂದು ರೂಪಕ - ಎಂದು ಅನೇಕ ಮಂದಿ ವ್ಯಾಖ್ಯಾನಿಸುತ್ತಾರೆ. ಆದರೆ ಅದು ಹಾಗಲ್ಲವೆಂಬುದನ್ನು ಶ್ರೀರಂಗಮಹಾಗುರುಗಳು ಸ್ಪಷ್ಟಪಡಿಸಿದ್ದಾರೆ. ನಾವು ಲೋಕದಲ್ಲಿ ನೋಡುವ ಬೆಳಕೂ ಅದರಲ್ಲಿ ಅಂತರ್ಗತವಾದ ಸಪ್ತವರ್ಣಗಳೂ ಭೌತಿಕ-ಪದಾರ್ಥಗಳು. ಅವಕ್ಕಿಲ್ಲಿ ಅನ್ವಯವಿಲ್ಲ.

ಇಲ್ಲಿ ಹೇಳುತ್ತಿರುವುದು ಅತಿಶ್ರೇಷ್ಠವಾದ ಅಧ್ಯಾತ್ಮ-ವಿಚಾರವನ್ನು. ಏನದು? ನಮ್ಮೆಲ್ಲರ ಶಿರಸ್ಸಿನಲ್ಲಿ ಏಳು ಪ್ರಾಣಗಳುಂಟು. ಹೇಗೆ? ಜ್ಞಾನೇಂದ್ರಿಯಗಳು ಐದಲ್ಲವೇ? ಐದೂ ಶಿರಸ್ಸಿನಲ್ಲಿವೆ. ಅವಲ್ಲಿ ಕಣ್ಣು, ಕಿವಿಗಳು ಎರಡೆರಡಿವೆ. ಮೂಗಿನಲ್ಲಿ ಎರಡು ಹೊಳ್ಳೆಗಳಿವೆ. ಇವುಗಳ ಜೊತೆಗೆ ನಾಲಿಗೆಗೆ ಪ್ರತೀಕವಾದ ಬಾಯಿಯಿದೆ. ಈ ಏಳು "ಖ"ಗಳನ್ನೇ, ಎಂದರೆ ರಂಧ್ರಗಳನ್ನೇ, ಶೀರ್ಷಣ್ಯ-ಪ್ರಾಣಗಳೆಂದಿರುವುದು.

ಪ್ರಾಣಶಕ್ತಿಯು ಹೀಗೆ ಏಳು ಬಗೆಯಾಗಿ ಇರುವುದನ್ನೇ ಸೂರ್ಯಾಶ್ವಗಳೆಂದಿರುವುದು. ಪ್ರಾಣ-ಶಕ್ತಿಗಳನ್ನು ಅಶ್ವಗಳೆಂದು ರೂಪಕವಾಗಿ ತೋರಿಸಿದೆ. ಇವನ್ನೇ ಕೆಲವೊಮ್ಮೆ ಸಪ್ತ-ಸೂರ್ಯರೆಂದಿರುವುದು.

ಹಾಗಾದರೆ ಎಂಟನೆಯ ಸೂರ್ಯನೆಂದರಾರು? ಮುಖ್ಯ-ಪ್ರಾಣ ಅಥವಾ ಜ್ಯೇಷ್ಠ-ಪ್ರಾಣನನ್ನೇ ಹಾಗೆ ಹೇಳಿದೆ. ಸಪ್ತ-ಸೂರ್ಯರಿಗೆ ಚಲನೆಯುಂಟು. ನಿಶ್ಚಲನಾದ ಅಷ್ಟಮ-ಸೂರ್ಯನು ಮಹಾಮೇರುವಿನಲ್ಲಿ ಪ್ರತಿಷ್ಠಿತ.

ಇವೆಲ್ಲವನ್ನೂ ಪರಿಗಣಿಸಿಯೇ ಈ ಸಪ್ತಮೀ-ಹಬ್ಬದಲ್ಲಿ ಏಳು-ಏಳರ ವೈಭವಗಳನ್ನು ತಂದಿರುವುದು. ಇದು ಶ್ರೀರಂಗಮಹಾಗುರುಗಳಿತ್ತಿರುವ ತತ್ತ್ವ-ದರ್ಶನ.

ಸೂಚನೆ: 24/1//2026 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ 91 ರುಕ್ಮಿಣೀ-ಹರಣ ಮಾಡಿದ ಮಧುರ-ಮೂರ್ತಿ ಗರುಡ-ಧ್ವಜ (Krishakarnamrta 91)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in


ರುಕ್ಮಿಣಿಯು ಭೀಷ್ಮಕ ಎಂಬ ರಾಜನ ಮಗಳು. ಆತನು ವಿದರ್ಭ-ದೇಶದ ಅಧಿಪತಿ. ಆ ದೇಶದ ರಾಜಧಾನಿ ಕುಂಡಿನಪುರ. ಕೆಲವೊಮ್ಮೆ ಸಂಕ್ಷೇಪವಾಗಿ ಅದನ್ನೇ ಕುಂಡಿನ ಎಂದಷ್ಟೇ ಹೇಳುವುದೂ ಉಂಟು. ಹಾಗೆಯೇ, ರಾಜ್ಯವನ್ನು ಸೂಚಿಸಲು ಅಲ್ಲಿಯ ರಾಜಧಾನಿಯ ಹೆಸರಷ್ಟನ್ನೇ ಹೇಳುವುದೂ ಉಂಟು. ಆದ್ದರಿಂದ ಕುಂಡಿನವೆಂದರೆ ವಿದರ್ಭದೇಶವೆಂದೂ ಆಗಬಹುದು.

ಹೀಗಾಗಿ, ಭೀಷ್ಮಕನನ್ನು ವಿದರ್ಭ-ರಾಜನೆಂದಾದರೂ ಕರೆಯಬಹುದು, ಕುಂಡಿನೇಶನೆಂದಾದರೂ ಕರೆಯಬಹುದು. ಈಶ ಎಂದರೆ ಒಡೆಯ. ಹೀಗಾಗಿ ಕುಂಡಿನೇಶ-ತನಯಾ ಎಂದರೆ ಭೀಷ್ಮಕನ ಮಗಳಾದ ರುಕ್ಮಿಣಿಯೇ.

ರುಕ್ಮಿಣಿಯು ಕೃಷ್ಣನ ಅಷ್ಟ-ಮಹಿಷಿಯರಲ್ಲೊಬ್ಬಳು. ಅವಳೇ ಪಟ್ಟಮಹಿಷಿ, ಎಂದರೆ ಹಿರಿಯ ರಾಣಿ. ಅವಳು ಕೃಷ್ಣನನ್ನು ವಿವಾಹವಾಗುವ ಸಂನಿವೇಶವೇ, ಎಂದರೆ ತತ್ಪೂರ್ವ-ಭಾವಿಯಾದ ಸಂನಿವೇಶವೇ, ಇಲ್ಲಿ ಚಿತ್ರಿತವಾಗಿದೆ.

ರುಕ್ಮಿಣಿಯ ಅಣ್ಣ ರುಕ್ಮಿ. ತನ್ನ ತಂಗಿಯನ್ನು ಶಿಶುಪಾಲನಿಗೆ ಕೊಟ್ಟು ಮದುವೆಮಾಡಬೇಕೆಂಬ ಸಂಕಲ್ಪ ಆತನದು. ಆದರೆ ರುಕ್ಮಿಣಿಯ ಬಯಕೆ ಕೃಷ್ಣನೊಂದಿಗೆ ತನ್ನ ವಿವಾಹವಾಗಬೇಕೆಂಬುದು; ರುಕ್ಮಿಯನ್ನು ಬಿಟ್ಟು ಉಳಿದವರಿಗೂ ಅದುವೇ ಸಮ್ಮತವಾಗಿದ್ದದ್ದು. ಏಕೆಂದರೆ ಶಿಶುಪಾಲ ಶಕ್ತಿ-ಶಾಲಿಯಾಗಿದ್ದರೂ ದುಷ್ಟನೇ.

ಅಣ್ಣನ ಆಗ್ರಹದಿಂದಾಗಿ ತನಗೆ ಬಂದಿರುವ  ದುರವಸ್ಥೆಯನ್ನು ಕೃಷ್ಣನಿಗೆ ಸೂಚಿಸಲು ಅವಳು ಪ್ರಣಯ-ಪತ್ರವೊಂದನ್ನು ಬರೆದಳು; ಒಬ್ಬ ಬ್ರಾಹ್ಮಣನ ಮೂಲಕ ಶ್ರೀಕೃಷ್ಣನಿಗೆ ಅದನ್ನು ಕಳುಹಿಸಿದಳು.

ಶ್ರೀಕೃಷ್ಣನು ಅವಳ ಆಶಯವನ್ನು ಅರಿತಿದ್ದವನೇ. ಗೌರೀ-ಪೂಜೆಗೆಂದು ಊರಹೊರಗಿನ ಗುಡಿಗೆ ಬಂಧು-ಪರಿವಾರದೊಂದಿಗೆ ಅವಳು ಬರುತ್ತಿದ್ದಳು. ಆ ಸಮಯದಲ್ಲಿ ಕೃಷ್ಣ ಅವಳನ್ನು ಅಪಹರಿಸಿಕೊಂಡು ಹೋಗಬೇಕಾಯಿತು. ಅವರ ವಿವಾಹವು ನೆರವೇರಿದುದು ಆ ಸಂದರ್ಭದಲ್ಲಿ. ಅವಳನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ವೇಗವಾಗಿ ಹೋಗುತ್ತಿದ್ದ ಶ್ರೀಕೃಷ್ಣನ ವರ್ಣನೆ ಈ ಶ್ಲೋಕದಲ್ಲಿದೆ.

ಕೃಷ್ಣನನ್ನು ಕೃಷ್ಣನೆನ್ನದೆ "ಯಾವನೋ ಒಬ್ಬ ಶ್ಯಾಮಲ-ಪುರುಷ" - ಎಂದು ಈ ಶ್ಲೋಕದಲ್ಲಿ ಹೇಳಿದೆ. ಎಂತಹ ಶ್ಯಾಮಲ-ವರ್ಣದವನು ಆತ? ನವ-ತಮಾಲ-ಪಲ್ಲವದ ಹಾಗೆ ಶ್ಯಾಮಲ. ತಮಾಲವೆಂದರೆ ಹೊಂಗೆ (ಬೇರೆ ಇನ್ನೊಂದೆರಡು ಮರಗಳನ್ನೂ ತಮಾಲವೆನ್ನುವುದುಂಟು). ಹೊಂಗೆಯ ಬಣ್ಣ ಕಂದು. ತಮಾಲದ ಪಲ್ಲವ, ಅರ್ಥಾತ್ ಚಿಗುರು, ಸಹ ಅದೇ ಬಣ್ಣವೇ, ಆದರೆ ಹೊಳಪಿರುವುದು. ಹಾಗಿರುವವನು - ಎಂದರೆ ಹೊಳೆಯುವ ಕಂದುಬಣ್ಣದವನು, ಇಲ್ಲಿ ಶ್ರೀಕೃಷ್ಣನೇ ವಿನಾ ಮತ್ತಾರೂ ಅಲ್ಲ. 

ಸ್ಯಂದನವೆಂದರೆ ರಥ.  ಸ್ಯಂದನವು ಯಾರದ್ದೆಂಬ ಸೂಚನೆಗಾಗೆಂಬಂತೆ ಅದಕ್ಕೆ ಲಾಂಛನವುಳ್ಳ ಧ್ವಜವನ್ನು ಕಟ್ಟಿರುತ್ತಾರೆ. ಅರ್ಜುನನ ರಥ-ಕೇತನದಲ್ಲಿ ಹನುಮಂತನಿರುವಂತೆ, ಕೃಷ್ಣನ ಸ್ಯಂದನ-ಧ್ವಜದಲ್ಲಿ ವಿಷ್ಣು-ವಾಹನನೇ ಆದ ಗರುಡನಿರುವನು.

ಕುಂಡಿನೇಶ-ತನಯೆಯನ್ನು, ಎಂದರೆ ರುಕ್ಮಿಣಿಯನ್ನು, ರಥಕ್ಕೆ ಹತ್ತಿಸಿಕೊಂಡು ಹೊರಟುಹೋಗುತ್ತಿದ್ದಾನೆ, ಈ ಕರಿಯಕಳ್ಳ - ಎಂಬಂತೆ ಈ ಶ್ಲೋಕವು ಚಿತ್ರಿಸುತ್ತದೆ.

"ಬನ್ನಿ ಬನ್ನಿ, ನೋಡಿ ಈ ದೃಶ್ಯವನ್ನು!" ಎಂದು ಕರೆಕೊಟ್ಟು ಹೇಳುತ್ತಿರುವಂತೆ  ಶ್ಲೋಕವನ್ನು ರಚಿಸಿದ್ದಾನೆ, ಲೀಲಾಶುಕ.

ಮೇಲ್ನೋಟಕ್ಕೆ ಯಾವನೋ ಹುಡುಗಿಯೊಬ್ಬಳನ್ನು ಹಾರಿಸಿಕೊಂಡು ಹೋಗುತ್ತಿದ್ದಾನೆಂಬ ಲೆಕ್ಕ. ಆದರೆ ರುಕ್ಮಿಣಿಯಂತಹ ಉತ್ತಮ ಜೀವವನ್ನು ಶಿಶುಪಾಲನೆಂಬ ನೀಚನ ಪಾಲಿಗಾಗಿ ಬಿಡುವ ದುರವಸ್ಥೆಯನ್ನು ತಪ್ಪಿಸಿದವನು ಶ್ರೀಕೃಷ್ಣ.

ಅವಳನ್ನು ಕೃಷ್ಣನು ಕಾಪಾಡಿ, ತನ್ನ ಮಹಿಷಿಯನ್ನಾಗಿ ಮಾಡಿಕೊಂಡನಷ್ಟೆ. ಅದರ ಔಚಿತ್ಯವನ್ನು ಸವಿಯುವ ಪದ್ಯವಿದು. ರಥದಲ್ಲಿ ವೇಗವಾಗಿ ಹೋಗುತ್ತಿರುವುದರ ವರ್ಣನೆಯನ್ನು ರಥೋದ್ಧತಾ ಎಂಬ ವೃತ್ತದಲ್ಲೇ ಮಾಡಿರುವುದು ಸೊಗಸಾಗಿದೆ! ಮಂಡಿತ-ಕುಂಡಿನಗಳಲ್ಲಿ, ತಮಾಲ-ಶ್ಯಾಮಲಗಳಲ್ಲಿಯ ಅನುಪ್ರಾಸ ಗಮನೀಯ.

ಸ್ಯಂದನೇ ಗರುಡ-ಮಂಡಿತ-ಧ್ವಜೇ / ಕುಂಡಿನೇಶ-ತನಯಾಧಿರೋಪಿತಾ/ ಕೇನಚಿನ್ನವ-ತಮಾಲ-ಪಲ್ಲವ- / -ಶ್ಯಾಮಲೇನ ಪುರುಷೇಣ ನೀಯತೇ||


ಮತ್ತೊಂದು ಪದ್ಯ:

ಶ್ರೀಕೃಷ್ಣನೆಂದರೆ ಮಾಧುರ್ಯದ ಪ್ರವಾಹವೇ ಸರಿ. ಅದನ್ನು ಎಷ್ಟು ಹೇಳಿದರೂ ಹೇಗೆ ಹೇಳಿದರೂ ಲೀಲಾಶುಕನಿಗೆ ತೃಪ್ತಿಯೇ ಇಲ್ಲ. ಇಡಿಯಾಗಿಯೂ ಬಿಡಿಯಾಗಿಯೂ ಆ ಮಧುರತೆಯನ್ನು ಆಸ್ವಾದಿಸುತ್ತಿದ್ದಾನೆ.

"ಈ ವಿಭುವಿನ ಮೈಯೇ ಮಧುರ, ಮಧುರ" ಎಂದೇ ಶ್ಲೋಕದ ಆರಂಭ. 'ಈ' ಎಂಬ ಪದಕ್ಕೆ, "ಇದೋ, ಎದುರಿಗೆ ಕಾಣುತ್ತಿರುವಂತಹ" ಎಂಬ ಅರ್ಥ. ಹತ್ತಿರವಿರುವ ವಸ್ತುವಿಗೆ/ವ್ಯಕ್ತಿಗೆ ನಾವು ಇದು/ಇವನು/ಇವಳು/ ಈ  ಎನ್ನುತ್ತೇವೆ. ದೂರದ್ದಾದರೆ ಅದು/ಅವನು/ಅವಳು/ಆ ಎನ್ನುತ್ತೇವೆ. ಸಂಸ್ಕೃತದ 'ಇದಂ', ಕನ್ನಡದಲ್ಲಿ 'ಇದು'. ಸಂಸ್ಕೃತದ 'ಅದಸ್', ಕನ್ನಡದಲ್ಲಿ 'ಅದು'. ಒತ್ತಿ ಹೇಳಲು ಎರಡೆರಡು ಬಾರಿ ನುಡಿ: ಮಧುರಂ ಮಧುರಂ.

ಈ ವಿಭು ಎನ್ನುವಾಗ ಈ ಎಂಬುದು ಎದುರಿಗಿರುವವನನ್ನೇ ಹೇಳುತ್ತದೆಯಾಗಿ, ಮತ್ತೆ ಮತ್ತೆ ಕಂಡು ಸಂತೋಷಿಸಲು, ಆನಂದವನ್ನು ಅನುಭವಿಸಲು, ಸುಲಭ-ಸಾಧ್ಯತೆಯನ್ನು ಹೇಳುತ್ತದೆ.

ಪ್ರಭುವೆಂಬ ಪದವು ಒಡೆತನವುಳ್ಳವನನ್ನು ಹೇಳಿದರೆ, ವಿಭುವೆಂಬ ಪದವು ವಿವಿಧವಾಗಿ ಆಗುವಿಕೆಯನ್ನು ಹೇಳುತ್ತದೆ: ವಿವಿಧಂ ಭವತಿ! ಭಗವಂತನು ಎಷ್ಟಾದರೂ ಅನಂತ-ರೂಪವುಳ್ಳವನಲ್ಲವೇ? ಯಾವ ರೂಪದಲ್ಲಿ ತೋರಿದರೂ, ಎಷ್ಟು ಬಾರಿ ಕಂಡರೂ, ಸವಿಯು ಕಡಿಮೆಯಾಗದಿರುವಿಕೆಯು ಮಾಧುರ್ಯ. ಮತ್ತೆ ಮತ್ತೆ ಕಂಡರೂ ವೈರಸ್ಯವುಂಟಾಗದಿರುವುದು, ಎಂದರೆ ವಿ-ರಸತೆಯು ಬರದಿರುವುದು, ಇನ್ನು ಸಾಕೆನಿಸದಿರುವುದು ಮಾಧುರ್ಯ. ಯಾವುದನ್ನು ನೋಡುತ್ತಾ ಇದ್ದರೆ ಮನಸ್ಸಿನಲ್ಲೊಂದು ಮಾರ್ದವವೂ ಒಂದು ಉಲ್ಲಾಸವೂ ಮೂಡುವುವೋ ಅದು ಮಾಧುರ್ಯ.

ಇಡೀ ಶರೀರದ ಬಗ್ಗೆಯೇ ಹೇಳಿಯಾಯಿತಾದರೂ ಮುಖವನ್ನು ಕುರಿತು ಹಾಗೂ ಮುಗುಳ್ನಗೆಯನ್ನು ಕುರಿತು ಮತ್ತೆ ಮತ್ತೆ ಹೇಳಲೇಬೇಕೆನಿಸುತ್ತದೆ, ಕವಿಗೆ. ಒಟ್ಟಾರೆ ಶರೀರ, ಹಾಗೂ ವಿಶೇಷವಾಗಿ ವದನ-ಮೃದುಸ್ಮಿತಗಳೆಂಬ ಅಂಶಗಳು - ಇವಿಷ್ಟಕ್ಕೂ ೨+೩+೪ ಬಾರಿ ಮಧುರವೆಂದು ಚಿತ್ರಿಸುತ್ತಾನೆ, ಕವಿ. ಇದು ಮಧುರ-ಮಧುರತರ-ಮಧುರತಮ ಎಂಬ ತಾರತಮ್ಯವನ್ನೂ ತೋರಿಸುತ್ತದೆ.

ವದನವು ಸುಂದರವೆನಿಸುವುದು ಮುಖ್ಯವಾಗಿ ಕ್ಷೋಭೆಗೊಳಗಾಗದ ಮನಸ್ಸಿನಿಂದಾಗಿ; ಹಾಗೂ ಬಾಹ್ಯ-ಲಕ್ಷಣವಾಗಿ ಪ್ರೀತಿತೋರಿಸುವ ದೃಷ್ಟಿಗಳಿಂದಾಗಿ; ಮತ್ತು ವಾಗ್-ವಿಲಾಸದಿಂದಾಗಿ - ಎಂದರೆ ಸವಿನುಡಿಗಳಿಂದಾಗಿ. ಜೊತೆಗೆ ಮುಖದ ಸಹಜ-ಕಾಂತಿಯೆಂಬುದಂತೂ ಮಾಧುರ್ಯವನ್ನು ಇಮ್ಮಡಿಗೊಳಿಸುವಂತಹುದೇ.

ಕೃಷ್ಣನು ಬಹಳ ವಿಶೇಷ-ಪುರುಷನಾದ್ದರಿಂದ ಆತನ ವದನವು ಮಧು-ಗಂಧಿಯಾಗಿದೆ. ಮುಖವನ್ನು ಕಮಲವೆನ್ನುವುದಾದರೆ, ಮುಗುಳ್ನಗೆಯು ಅದರ ಮಕರಂದದಂತೆ. ಹೂಗಳ ಮಧುವೇ ಮಕರಂದವಲ್ಲವೇ? ಅಂತಹ ಸುಗಂಧದಿಂದ ಕೂಡಿರುವುದು ಕೃಷ್ಣ-ವದನ.

ಕೃಷ್ಣನ ಮೃದು-ಸ್ಮಿತವು ಅತ್ಯಂತ ಆಪ್ಯಾಯಕವಾಗಿದೆ. ಶರೀರವೇ ಮಧುರವಾಗಿದ್ದರೂ ವದನದ ಸುಗಂಧ-ಸುಸ್ಮಿತಗಳು ಆಶ್ಚರ್ಯಕರವಾದ ರೀತಿಯಲ್ಲಿ ಮಧುರವಾಗಿರುವುದರಿಂದಲೇ ಕವಿಯ ಬಾಯಲ್ಲಿ ಅಹೋ! ಎಂಬ ಮಾತು ಬಂದಿರುವುದು.

ಭಗವನ್ಮೂರ್ತಿಯನ್ನು ಧ್ಯಾನಿಸುವಾಗ ಆಪಾದ-ಮೌಳಿಪರ್ಯಂತವಾಗಿ - ಎಂದರೆ ಚರಣದಿಂದ ಆರಂಭಿಸಿ ಶಿರಸ್ಸಿನವರೆಗೂ – ಒಮ್ಮೆ ಧ್ಯಾನಿಸಿ, ಬಳಿಕ ಮುಖಸೌಂದರ್ಯ - ಮಂದಸ್ಮಿತಗಳತ್ತ ದೃಷ್ಟಿ-ಚಿತ್ತಗಳು ಹರಿಯಬೇಕೆಂಬ ಶಾಸ್ತ್ರೋಕ್ತ-ಧ್ಯಾನಕ್ರಮದ ಗುಟ್ಟು ಈ ಶ್ಲೋಕದಲ್ಲಿ ಮೂಡಿಬಂದಿದೆ.

೨+೩+೪ ಹೀಗೆ ಒಂಭತ್ತು ಬಾರಿ ಬಂದಿರುವ ಮಧುರಶಬ್ದವು ಸರ್ವದಾ 'ನವ'ವೆನಿಸುವ ಮಧುರತೆಯನ್ನು ಹೇಳುವುದು. ತೋಟಕ-ವೃತ್ತದಲ್ಲಿರುವ ಈ ಪದ್ಯವು ತಾಳಕ್ಕೆ ಹೊಂದುವಂತಿದ್ದು, ಹಾಡಿಗೆ ಸುಲಭವಾಗಿ ಒಗ್ಗಿಕೊಳ್ಳುವುದು. ಹೀಗೆ ಈ ಶ್ಲೋಕವು ಲಯ-ಬದ್ಧತೆಯಿಂದಲೂ ಗೇಯ-ಸೌಕರ್ಯದಿಂದಲೂ ಕೂಡಿದೆ.

ಮಧುರಂ ಮಧುರಂ ವಪುರಸ್ಯ ವಿಭೋರ್/
ಮಧುರಂ ಮಧುರಂ ವದನಂ ಮಧುರಮ್ |
ಮಧು-ಗಂಧಿ ಮೃದು-ಸ್ಮಿತಂ ಏತದಹೋ /
ಮಧುರಂ ಮಧುರಂ ಮಧುರಂ ಮಧುರಂ !! ||

ಸೂಚನೆ : 24/1/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ. 



Monday, January 19, 2026

ಪ್ರಶ್ನೋತ್ತರ ರತ್ನಮಾಲಿಕೆ 49 (Prasnottara Ratnamalike 49)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ - ೪೯ - ಕಿವುಡನು ಯಾರು ?

ಉ. ಹಿತವಚನವನ್ನು ಕೇಳದವ.

ಈ ಹಿಂದಿನ ಪ್ರಶ್ನೋತ್ತರದಲ್ಲಿ 'ಅಂಧ ಯಾರು? ಎಂಬ ವಿಷಯವನ್ನು ಚರ್ಚಿಸಿದ್ದಾಗಿತ್ತು. ಅದೇ ರೀತಿಯಲ್ಲಿ ಈ ಉತ್ತರವನ್ನು ಚಿಂತಿಸಬೇಕಾಗಿದೆ. ಅಂದರೆ 'ಕಿವುಡ ಎಂದರೆ ಯಾರು?' 'ಕಿವಿ ಕೇಳದವನು. ಕಿವಿಯ ಕೇಳುವ ಸಾಮರ್ಥ್ಯವನ್ನು ಕಳೆದುಕೊಂಡಿರುವವನು ಎಂಬ ಅರ್ಥ ಈ ಶಬ್ದಕ್ಕೆ ಬರುತ್ತದೆ. ಆದರೆ ಇಲ್ಲಿ ಈ ಅರ್ಥವನ್ನು ಭಾವಿಸಲಾಗದು. ಅದಕ್ಕೆ ಇಲ್ಲಿ ಉತ್ತರವಾಗಿ 'ಯಾರು ಹಿತವಚನವನ್ನು ಅಥವಾ ಉಪದೇಶವನ್ನು ಕೇಳುವುದಿಲ್ಲವೋ ಅವನು ಕಿವಿ ಇದ್ದೂ ಕಿವುಡ' ಎಂಬ ಅರ್ಥವನ್ನು ಭಾವಿಸಬೇಕು. ಹಾಗಾದರೆ ಕಿವಿಯಿದ್ದೂ ಕಿವುಡ ಹೇಗಾಗುತ್ತಾನೆ?! 

ಹಿತವಚನವನ್ನು ಅಥವಾ ಉಪದೇಶವನ್ನು ಕೇಳುವ ಆಸಕ್ತಿ ಇಲ್ಲದವನು, ಕೇಳದವನು. ಅವನು ಕಿವುಡನಂತೆ. ಅವನಿಗೆ ಯಾವುದೇ ಉಪದೇಶಗಳು ಅವನ ಗುಣ ಸ್ವಭಾವಗಳನ್ನು ಬದಲಿಸಲು ಸಾಧನವಾಗದು ಎಂಬುದು ತಾತ್ಪರ್ಯ. ಸಾಮಾನ್ಯವಾಗಿ 'ಉಪದೇಶ' ಎಂಬುದು ಒಬ್ಬ ವ್ಯಕ್ತಿಯನ್ನು ಸರಿದಾರಿಗೆ ತರಲು ಉಪಯೋಗಿಸುವ ಮಾತುಗಳು. ಇವು ಶಬ್ದರೂಪವಾಗಿ ಇರುತ್ತವೆ. ಈ ಶಬ್ದಗಳನ್ನು ಕೇಳುವ ಇಂದ್ರಿಯ ಕಿವಿಯಷ್ಟೆ. ಹಾಗಾಗಿ ಈ ಉಪದೇಶಗಳನ್ನು ಕೇಳಲು ಅವನು ಕಿವಿಯನ್ನು ಬಳಸಿಕೊಳ್ಳಬೇಕು. 'ಉಪದೇಶ' ಎಂಬ ಶಬ್ದಕ್ಕೆ ಹತ್ತಿರದಲ್ಲಿ ಹೇಳುವುದು ಎಂದರ್ಥ' 'ಉಪ- ಸಮೀಪ, ದಿಶ ಅತಿಸರ್ಜನ-ದಾನ ಎಂಬುದಾಗಿ ಅರ್ಥ. ಅಂದರೆ ಅವನ ಕಿವಿಯಲ್ಲಿ ಬಂದು ಶಬ್ದಗಳ ಮೂಲಕ ಅವನಿಗೆ ಒಳ್ಳೆಯ ವಿಚಾರವನ್ನು ಕೋಡಬೇಕು. ಅದು ಉಪದೇಶವಾಗುತ್ತದೆ. ಅದಕ್ಕೆ ಸಂಸ್ಕೃತದಲ್ಲಿ 'ಹಿತವಚನ' ಅಥವಾ 'ಶಿಕ್ಷಣ' ಎಂಬುದಾಗಿ ಅರ್ಥವನ್ನೂ ನೀಡಲಾಗಿದೆ. ಉಪದೇಶವು ಅವನಿಗೆ ಹಿತವಾಗಿರಬೇಕು. 'ಹಿತ' ಎಂಬುದು ಯಾವುದನ್ನು ಕೊಡುತ್ತದೆ? ಅದು ಹೇಗಿರಬೇಕು? ಎಂಬುದಕ್ಕೆ ಶ್ರೀಶಂಕರ ಭಗವತ್ಪಾದರು 'ಹಿತ' ಎಂಬ ಶಬ್ದಕ್ಕೆ ಹೀಗೆ ಭಾಷ್ಯವನ್ನು ಬರೆದಿದ್ದಾರೆ - "ಹಿತಮ್ ಪರಂ ಜ್ಞಾನಪ್ರಾಪ್ತಿಸಾಧನಂ" ಎಂದು. ವಸ್ತುತಃ ನಮ್ಮ ಇಹಪರ ಜೀವನವು ಸುಖವಾಗಿ ಸಾಗಬೇಕಾದರೆ ಅನೇಕ ಸಾಧನಗಳು ಬೇಕು. ಯಾವ ಸಾಧನಗಳನ್ನು ಬಳಸಬೇಕು; ಯಾವುದು ನಮಗೆ ಹಿತವಾಗುತ್ತದೆ; ಯಾವ ಸಾಧನಗಳನ್ನು ಬಳಸಬಾರದು; ಅದು ನಮಗೆ ಅಹಿತವಾಗುತ್ತದೆ ಎಂಬ ಅರಿವನ್ನು ಪಡೆದವರಿಂದ, ನಾವು ಆ ಬಗೆಯ ಮಾಹಿತಿಗಳನ್ನು ಸಂಗ್ರಹಿಸಬೇಕು. ಆಗ ಅದಕ್ಕೆ ನಾವು ಕಿವಿಗೊಡಬೇಕು. ಹಾಗಿದ್ದಾಗ ನಮ್ಮ ಜೀವನ ಅದರಿಂದ ಪರಿವರ್ತಿತವಾಗುತ್ತದೆ. ಹಿತವಾದ ವಚನವನ್ನು ಕೇಳಿದಾಗ ಅದು ನಮ್ಮ ಈ ಭೌತಿಕ ಜೀವನವನ್ನು ಮಾತ್ರ ಅನುಕೂಲಿಸದೆ ಪರ ಜೀವನಕ್ಕೂ ಅಂದರೆ ಭಗವಂತನನ್ನು ಈ ಜನ್ಮದಲ್ಲಿ ಪಡೆಯಲು ಕೂಡ ಅನುಕೂಲಿಸುತ್ತದೆ ಎಂಬ ಅರ್ಥದಲ್ಲಿ ಭಗವತ್ಪಾದರು ಹಿತ ಎಂಬ ಶಬ್ದಕ್ಕೆ ಅರ್ಥವನ್ನು ನೀಡಿದ್ದಾರೆ. ಹಾಗಾಗಿ ಇಂತಹ ಉತ್ತಮವಾದ ಉಪದೇಶವನ್ನು ಅಥವಾ ಹಿತವಚನವನ್ನು ಕೇಳಬೇಕು. ಆಗ ನಮ್ಮ ಜೀವನ ಸಾರ್ಥಕವಾಗುತ್ತದೆ. ನಮಗೆ ಇಂದ್ರಿಯಗಳು ಇರುವುದು, ಅದರಿಂದ ಬರುವ ಸುಖವನ್ನು ಪಡೆದು, ತನ್ಮೂಲಕ ಇಂದ್ರಿಯಾತೀತವಾದ ಆನಂದವನ್ನು ಅನುಭವಿಸಲು. ಹಾಗಾಗಿ ಈ ಕಿವಿ ಎಂಬ ಇಂದ್ರಿಯವು ಕೇಳುವುದರ ಮೂಲಕ ಅತಿಶಯವಾದ ಆನಂದವನ್ನು ಪಡೆಯಲು ಸಾಧ್ಯ. ಇದನ್ನು ಪಡೆಯದವನು, ಈ ಕಿವಿಯನ್ನು ಹಾಗೆ ಬಳಸದವನು, 'ಕಿವಿಯಿದ್ದು ಕಿವುಡನಂತೆ ಸರಿ' ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.

ಸೂಚನೆ : 18/1/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.  

ವ್ಯಾಸ ವೀಕ್ಷಿತ 171 ಯಾರೀ ಜರಾಸಂಧ? ಕೃಷ್ಣನಿಗೂ ಅವಧ್ಯನೇ?! ( Vyaasa Vikshita 171)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಅರ್ಜುನೋಕ್ತಿಯ ಬಳಿಕ ಕೃಷ್ಣನು ಮಾತನಾಡುತ್ತಾ, ಜರಾಸಂಧವಧೆಗೆ ಕುಟಿಲೋಪಾಯವೊಂದನ್ನು ಸೂಚಿಸುತ್ತಿದ್ದಾನೆ:

"ನಮ್ಮ ಕಡೆಯಿಂದ ಯಾವ ದೋಷವೂ ಆಗದಂತೆ ನೋಡಿಕೊಂಡು, ಯಾರಿಗೂ ಗೊತ್ತಾಗದಂತೆ ನಾವು ಆ ಜರಾಸಂಧನ ಅರಮನೆಯನ್ನು ಪ್ರವೇಶಿಸಬೇಕು. ಪ್ರವೇಶಿಸಿ, ಆತನ ಮೇಲೆ ಆಕ್ರಮಣವನ್ನು ಮಾಡಿದೆವೆಂದರೆ ನಮ್ಮ ವಾಂಛಿತವನ್ನು ಈಡೇರಿಸಿಕೊಂಡಂತೆಯೇ. ಸರ್ವಭೂತಗಳಲ್ಲೂ ಅಂತರಾತ್ಮನು ಬೆಳಗುವ ಹಾಗೆ, ಈ ಶತ್ರುವಾದ ಜರಾಸಂಧನು ಎಲ್ಲರ ಮಧ್ಯದಲ್ಲಿ ನಿಂತು, ರಾಜ್ಯಲಕ್ಷ್ಮಿಯಿಂದ ಕಂಗೊಳಿಸುತ್ತಿದ್ದಾನೆ.

ಅಥವಾ ಹೀಗೂ ಆಗಬಹುದು: ಈ ಜರಾಸಂಧನನ್ನು ಯುದ್ಧದಲ್ಲಿ ನಾವು ಕೊಂದ ಬಳಿಕ, ಒಂದು ವೇಳೆ ಉಳಿದ ಅವನ ಕಡೆಯವರೇ ನಮ್ಮನ್ನು ಕೊಲ್ಲಬಹುದೆಂದುಕೋ. ಹಾಗೂ, ನಾವು ನಮ್ಮ ಬಂಧುಜನರನ್ನು ರಕ್ಷಿಸುವ ಕಾರ್ಯದಲ್ಲೇ ತತ್ಪರರಾಗಿದ್ದು ಸಾವನ್ನಪ್ಪಬೇಕಾಯಿತೆಂದರೆ, ಹಾಗೂ ಬಳಿಕ ಸ್ವರ್ಗವನ್ನು ಪಡೆಯತಕ್ಕವರೇ ಸರಿ!" ಎಂದನು, ಕೃಷ್ಣ.

ಆಗ ಯುಧಿಷ್ಠಿರನು ಮರುಪ್ರಶ್ನೆಯನ್ನು ಹಾಕಿದನು: "ಕೃಷ್ಣಾ, ವಾಸ್ತವವಾಗಿ ಯಾರೀ ಜರಾಸಂಧ? ಆತನ ಬಲವೆಂತಹುದು? ಪರಾಕ್ರಮವೆಂತಹುದು? ಅಗ್ನಿಯನ್ನು ಮುಟ್ಟಿದ ಪತಂಗದ ಹುಳುವು ಸುಟ್ಟುಹೋಗುವದಲ್ಲವೇ? ಹಾಗೆ, ನಿನ್ನ ಸ್ಪರ್ಶವನ್ನು ಹೊಂದಿ ಆತನು ಮರಣವನ್ನಪ್ಪಬೇಕಿತ್ತಲ್ಲವೇ? ಆದರೂ ಆತನೇಕಿನ್ನೂ ಸತ್ತಿಲ್ಲ?" – ಎಂದನು.

ಅದಕ್ಕೆ ಕೃಷ್ಣನು ಹೇಳಿದನು:

"ರಾಜಾ ಯುಧಿಷ್ಠಿರನೇ, ಜರಾಸಂಧನ ವೀರ್ಯವೇನು, ಪರಾಕ್ರಮವೇನು! ಅನೇಕಬಾರಿ ಆತನು ನಮಗೆ ವಿಪ್ರಿಯವನ್ನು ಮಾಡಿದ್ದರೂ, ಎಂದರೆ ಕೆರಳುವಂತೆ ಮಾಡಿದ್ದರೂ ಸಹ, ನಾವೇಕೆ ಆತನನ್ನು ಉಪೇಕ್ಷೆ ಮಾಡಿದ್ದೇವೆ? - ಎಂಬುದೆಲ್ಲವನ್ನೂ ಹೇಳುವೆ, ಕೇಳು.

ಮೂರು ಅಕ್ಷೌಹಿಣೀ-ಸೈನ್ಯಕ್ಕೆ ಒಡೆಯನಾಗಿ ಮಹಾಬಲಶಾಲಿಯೆನಿಸಿದ್ದ ಬೃಹದ್ರಥನೆಂಬ ರಾಜನಿದ್ದನು. ಮಗಧ-ದೇಶದ ಒಡೆಯನಾತ. ಸಮರಗಳಲ್ಲಿ ಆತನ ದರ್ಪವೇ ದರ್ಪ. ಬಲ-ಪರಾಕ್ರಮಗಳಿಗೆ ಸಾಟಿಯಿಲ್ಲದವ. ಅವನು ಮತ್ತೊಬ್ಬ ಇಂದ್ರನೋ ಎಂಬಂತಿದ್ದ. ಸದಾ ದೀಕ್ಷಾಂಕಿತವಾಗಿತ್ತು, ಆತನ ಶರೀರ. ರೂಪಶಾಲಿಯೂ ಹೌದು ಆತ. ತೇಜಸ್ಸಿನಲ್ಲಿ ಸೂರ್ಯನಂತೆ, ಕ್ಷಮೆಯಲ್ಲಿ ಭೂಮಿಯಂತೆ, ಕ್ರೋಧದಲ್ಲಿ ಯಮನಂತೆ ಸಂಪತ್ತಿನಲ್ಲಿ ಕುಬೇರನಂತೆ. ಉತ್ತಮಕುಲದಲ್ಲಿ ಜನ್ಮ, ಅನೇಕ ಸದ್ಗುಣಗಳು - ಇವುಗಳು ಭೂಮಿಯನ್ನೇ ವ್ಯಾಪಿಸಿದ್ದವು - ಸೂರ್ಯನ ಕಿರಣಗಳು ವ್ಯಾಪಿಸುವ ಹಾಗೆ.

ಆ ಬೃಹದ್ರಥ ಮದುವೆಯಾದದ್ದು ಕಾಶಿರಾಜನ ಇಬ್ಬರು ಹೆಣ್ಣುಮಕ್ಕಳನ್ನು. ಅವರು ಅವಳಿಮಕ್ಕಳು, ರೂಪೈಶ್ವರ್ಯ-ಸಂಪನ್ನರು. ಅವರಿಬ್ಬರಿಗೂ ಏಕಾಂತದಲ್ಲಿ ಆ  ಬೃಹದ್ರಥನು ಹೇಳಿದುದು - ನಿಮ್ಮಿಬ್ಬರನ್ನೂ ನಾನು ಏಕ-ರೀತಿಯಿಂದಲೇ ನೋಡುವೆ - ಎಂಬುದಾಗಿ. ತನಗೆ ಪ್ರಿಯರೂ ಅನುರೂಪರೂ ಆದ ಇಬ್ಬರೂ ಪತ್ನಿಯರೊಂದಿಗೆ ಆ ಬೃಹದ್ರಥನು ಶೋಭಿಸಿದನು - ಎರಡು ಹೆಣ್ಣಾನೆಗಳೊಂದಿಗೆ ಶ್ರೇಷ್ಠಗಜವು ಹೇಗೆ ರಮಿಸುವುದೋ ಹಾಗೆ; ಗಂಗೆ-ಯಮುನೆಯರ ನಡುವೆ ಸಾಗರವು ಹೇಗೆ ಕಂಗೊಳಿಸುವುದೋ ಹಾಗೆ ಅವರಿಬ್ಬರ ನಡುವೆ ರಾರಾಜಿಸಿದನು.

ಇಂದ್ರಿಯ-ಸುಖಗಳಲ್ಲೇ ಮುಳುಗಿದ್ದ ಆ ರಾಜನ ಯೌವನವು ಕಳೆಯಿತು. ಆದರೆ ಆತನಿಗೆ ಮಕ್ಕಳಾಗಲಿಲ್ಲ. ಮಂಗಳಕಾರಿಯಾದ ಅನೇಕ ಹೋಮಗಳನ್ನು ಮಾಡಿದನು - ಪುತ್ರಕಾಮೇಷ್ಟಿ ಮುಂತಾದವುಗಳನ್ನು. ಆದರೂ ಸಹ ಕುಲ-ವರ್ಧಕನಾದ ಪುತ್ರನೊಬ್ಬನನ್ನು ಮಾತ್ರ ಪಡೆಯಲಿಲ್ಲ.

ಒಮ್ಮೆ ರಾಜನು ಕಾಕ್ಷೀವಂತನ ಪುತ್ರನೂ ಗೌತಮವಂಶ-ಪ್ರದೀಪನೂ ಆದ ಚಂಡ-ಕೌಶಿಕನ ಬಗ್ಗೆ ಕೇಳಿತಿಳಿದನು. ತಪಸ್ಸಿನಿಂದ ವಿರತನಾಗಿ ಆ ಕೌಶಿಕನು ಅಕಸ್ಮಾತ್ತಾಗಿ ಇತ್ತ ಬಂದಿರುವನೆಂದೂ ಮರದ ಬುಡವೊಂದರಲ್ಲಿ ಕುಳಿತಿರುವನೆಂದೂ ಅರಿತುಕೊಂಡನು. ತನ್ನಿಬ್ಬರೂ ಪತ್ನಿಯರೊಂದಿಗೆ ಹೋಗಿ ಎಲ್ಲ ಬಗೆಯ ರತ್ನಗಳನ್ನೂ ಆತನಿಗಿತ್ತು ಆತನನ್ನು ಸಂತೋಷಪಡಿಸಿದನು. 

ಸೂಚನೆ : 18/1/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಕೃಷ್ಣಕರ್ಣಾಮೃತ 90 ಜಲಧಿಯ ಸಲಿಲವೂ ಸಾಲದಾಗದೆ ಹೋಯಿತೇ? (Krishakarnamrta 90)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

ಹಿಂದೆ ಯಾವನು ವರಾಹಾವತಾರವನ್ನು ಮಾಡಿದ್ದನೋ ಆತನೇ ಈಗ ಕೃಷ್ಣಾವತಾರವನ್ನು ಮಾಡಿರುವುದು. ವರಾಹಾವತಾರವು ವಿಷ್ಣುವಿನ ಮೂರನೇ ಅವತಾರ; ಕೃಷ್ಣನು ಎಂಟನೆಯ ಅವತಾರ. ಆ ಅವತಾರಕ್ಕೂ ಈ ಅವತಾರಕ್ಕೂ ಇರುವ ಭೇದವೇನು? ಅದನ್ನು ಲೀಲಾಶುಕನು ಇಲ್ಲಿ ಹೇಳುತ್ತಿರುವುದು.

ಹಿರಣ್ಯಕಶಿಪುವಿನ ಸೋದರ ಹಿರಣ್ಯಾಕ್ಷ. ತನ್ನ ತಪಸ್ಸಿನಿಂದ ಪಡೆದ ವರಗಳಿಂದಾಗಿ ಬಲಿಷ್ಠನಾದ; ಮತ್ತೇನು, ಲೋಕಕಂಟಕನಾದ. ವಿಷ್ಣುವು ವರಾಹಾವತಾರವನ್ನು ತಾಳಿ ಆತನನ್ನು ಸಂಹರಿಸಬೇಕಾಯಿತು. ಸಮುದ್ರದಲ್ಲಿ ಮುಳುಗಿ ಹೋಗಿದ್ದ ಭೂಮಿಯನ್ನು ಮೇಲೆತ್ತಬೇಕಾಯಿತು.

ಸಮುದ್ರವೇನು ಒಂದೇ? ಹಲವು ಸಮುದ್ರಗಳಿವೆ. ಅವನ್ನು ನಾಲ್ಕೆಂದೂ ಏಳೆಂದೂ ಹೇಳುವುದುಂಟು. ಸಮುದ್ರಗಳೊಂದೊಂದೂ ಅದೆಷ್ಟು ವಿಶಾಲವೂ ಆಳವೂ ಆಗಿರುತ್ತವೆ! ಹಾಗಿದ್ದರೂ ಅವೆಲ್ಲವೂ ಸೇರಿಯೂ ಒಂದು ಕೆಲಸವನ್ನು ಮಾಡಲಾಗಲಿಲ್ಲವಂತೆ. ಯಾವ ಕೆಲಸದಲ್ಲಿ ಅವು ಅದಕ್ಷವಾದವು? ಆ ವರಾಹನ ರೋಮ-ರಂಧ್ರಗಳುಂಟಲ್ಲಾ, ಅವನ್ನು ತುಂಬಲು! ಅದು ಸಹ ಅವಕ್ಕಾಗಲಿಲ್ಲವಂತೆ! ಅಷ್ಟು ಬೃಹತ್ತಾಗಿತ್ತು, ವರಾಹಾವತಾರ, ಆ ಅವತಾರದ ಆಕಾರ!

ಅಂದಿನ ಆ ಪರಿಸ್ಥಿತಿಗೂ ಕೃಷ್ಣಾವತಾರದ ಇಂದಿನ ಸ್ಥಿತಿಗೂ ಇರುವ ಅಂತರ ಸುಲಭೋಹ್ಯವಲ್ಲ. ಊಹಾತೀತವಾದ ಅದನ್ನು ಊಹೆಗೆಟುಕುವಂತೆ ಲೀಲಾಶುಕನು ತೋರಿಸಿಕೊಡುತ್ತಿದ್ದಾನೆ.

ಕೃಷ್ಣನಿಲ್ಲೊಂದು ಕೂಸಷ್ಟೆ. ಆ ಎಳೆಹಸುಳೆಗೆ ಆತನ ಸಾಕುತಾಯಿಯಾದ ಯಶೋದೆಯ ಕೈಯಲ್ಲೇ ನಿತ್ಯಸ್ನಾನ.  ಈ ಕೈಕೂಸಿನ ಕಣ್ಣಿನ ಅಂದ ಎದ್ದು ತೋರುವಂತಹುದೇ: ಕಮಲದಂತಹ ಕಣ್ಣುಗಳು! ಈ ಎಳೆಗೂಸಿಗೆ ಸ್ನಾನ ಮಾಡಿಸಲು ನೀರೆಷ್ಟು ಬೇಕು? ಒಂದು ಬೊಗಸೆಯಷ್ಟೇ ಸಾಕು!

ಬೊಗಸೆಯೆಂದರೂ ಅಂಜಲಿಯೇ: ಪಾಣಿ-ದ್ವಯವನ್ನು – ಎಂದರೆ ತನ್ನದೇ ಎಡಗೈ-ಬಲಗೈಗಳನ್ನು - ಒಂದರ ಪಕ್ಕ ಮತ್ತೊಂದನ್ನು ಜೋಡಿಸಿಟ್ಟುಕೊಂಡಾಗ, ಅವುಗಳೊಳಗೆ ನಿಲ್ಲುವ ನೀರೆಷ್ಟೋ, ಅಷ್ಟೇ ಅದರ ಪ್ರಮಾಣ; ಅದನ್ನೇ ಪಾಣಿ-ದ್ವಯಾಂತರ-ಜಲವೆಂದಿರುವುದು.

ರೋಮಕೂಪವೆಂದರೆ ಅದೆಷ್ಟು ಪುಟ್ಟ ಎಡೆ! ರೋಮಕೂಪವೊಂ(ದೊಂ)ದಕ್ಕೂ ಇಡೀ ಸಮುದ್ರಗಳೇ ಸಾಕೆನಿಸದ ಮಹಾಕಾರನಾದ ದೇವನಿಗೇ, ಈಗ - ಎಂದರೆ ಈ ಜನ್ಮಾಂತರದಲ್ಲಿ - ಅರ್ಥಾತ್ ಈ ಪುನರವತಾರದಲ್ಲಿ, ಸ್ನಪಿಸಲು ಬೊಗಸೆ ನೀರು ಸಾಕಾಗಿದೆ! ಸ್ನಪಿಸುವುದೆಂದರೆ ಸ್ನಾನ ಮಾಡಿಸುವುದು.

ಒಂದೊಂದವತಾರದಲ್ಲೂ ಒಂದೊಂದು ವಿಶೇಷವಿರುವುದು! ಜಲ-ಪರಿಮಾಣವು ಆಗ ಸಾಲದೆ ಬಂದುದು, ಈಗ ಅಪಾರವಾಗಿ ಉಳಿಯುವಂತಾಯಿತು! ಆಗ ಅಧಿಕ-ಸಲಿಲವೂ ಅಲ್ಪವೇ; ಈಗ ಅತ್ಯಲ್ಪ-ಜಲವೇ ಅತ್ಯಧಿಕ - ಎಂಬಂತಾಗಿದೆ!

ಆಹಾ, ಒಂದೇ ದೈವದ ಎರಡು ರೂಪಗಳಲ್ಲಿ ಅದೆಷ್ಟು ವಿಸದೃಶತೆ! ಹಿಂದಿನ ಬೃಹತ್ತ್ವ ಅನೂಹ್ಯ; ಈಗಿನದು ನಮ್ಮನಿಮ್ಮಂತೆಯಷ್ಟೆ ಇರುವುದು. ಆ ಪುರಾತನಾವತಾರವು ದನುಜ-ಭೀತಿಕರ; ಈ ಅಧುನಾತನಾವತಾರವು ಮನುಜ-ಪ್ರೀತಿಕರ!

ಹೀಗಿರುವ ಮರಿಕೃಷ್ಣ ಮುದ್ದಲ್ಲದೆ ಮತ್ತೇನು?

ಶ್ಲೋಕ ಹೀಗಿದೆ:

ಯದ್ರೋಮ-ರಂಧ್ರ-ಪರಿಪೂರ್ತಿ-ವಿಧಾವದಕ್ಷಾ/ 

ವಾರಾಹ-ಜನ್ಮನಿ ಬಭೂವುರಮೀ ಸಮುದ್ರಾಃ |

ತಂ ನಾಮ ನಾಥಂ ಅರವಿಂದ-ದೃಶಂ ಯಶೋದಾ/

ಪಾಣಿ-ದ್ವಯಾಂತರ-ಜಲೇ ಸ್ನಪಯಾಂಬಭೂವ!! ||

***

ಏನೋ ಕೆಲಸವಾಗಬೇಕೆಂದಿರುವಾಗ ಚರ್ಚೆ ನಡೆಯುತ್ತಿರಲು, ಕೆಲವರು ತಮ್ಮ ಅಭಿಪ್ರಾಯವನ್ನು ಮಂಡಿಸಲು ಹೀಗೆ ಆರಂಭಿಸುವುದುಂಟು: "ನನ್ನ ಮಾತನ್ನು ಕೇಳುವಿರಾದರೆ..." ಎಂದು.

ಹಾಗೆಯೇ ಇಲ್ಲಿ ಲೀಲಾಶುಕ ಕೃಷ್ಣನಿಗೇ ಒಂದು ಕಿವಿಮಾತನ್ನು ಹೇಳುತ್ತಿದ್ದಾನೆ: "ಕೃಷ್ಣಾ, ನನ್ನ ಮಾತಿಗೆ ನೀನು ಕಿವಿಗೊಡುವೆಯಾದರೆ..." ಎಂದು. ಏನದು? ಶುಶ್ರೂಷೆಯೆಂಬ ಪದವನ್ನು ಸೇವೆಯೆಂಬ ಅರ್ಥದಲ್ಲಿ ಬಳಸುವೆವಲ್ಲವೇ? ಸಂಸ್ಕೃತದಲ್ಲಿ ಆ ಅರ್ಥವೂ ಇದೆ. ಜೊತೆಗೆ, "ಕೇಳುವ ಬಯಕೆ" ಎಂಬ ಇನ್ನೊಂದರ್ಥವೂ ಇದೆ. ಇಲ್ಲಿ ಬಳಸಿರುವುದು ಎರಡನೆಯ ಅರ್ಥದಲ್ಲಿ. "ಶುಶ್ರೂಷಿಸು ನನ್ನ ಮಾತನ್ನು" - ಎನ್ನುತ್ತಿದ್ದಾನೆ, ಕವಿ ಲೀಲಾಶುಕ.

ಕವಿಯೊಬ್ಬನು ಹೇಳುವ ಮಾತಾದರೆ ಅದರಲ್ಲೊಂದು ಎಚ್ಚರಬೇಕು. ಏನದು? ಬೇರೆಯವರು ಹೇಳಿದ್ದನ್ನೇ ಹೇಳಹೊರಟಿರುವುದೋ ಹೇಗೆ? - ಎಂದು ಖಚಿತಪಡಿಸಿಕೊಳ್ಳಬೇಕು. ಏಕೆ? ಅನ್ಯಕವಿಗಳ ಚಿಂತನಗಳನ್ನು ಕದಿಯದ ಕವಿಯೊಬ್ಬನುಂಟೆ? ಅದಕ್ಕೇ ಲೀಲಾಶುಕನೇ ತಾನೇ ಖಚಿತಪಡಿಸುತ್ತಾನೆ: "ಹಿಂದಿನ ಕವಿಗಳು ಯಾರೂ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ" - ಎಂದು. ವ್ಯಕ್ತಪಡಿಸುವುದಿರಲಿ, ಇತ್ತ ಕಣ್ಣು ಕೂಡ ಹಾಯಿಸಿಲ್ಲ! – ಎನ್ನುತ್ತಿದ್ದಾನೆ. ಅದನ್ನೇ  "ಇತರಕವಿಗಳು ಕಟಾಕ್ಷಿಸಿಯೂ ಇಲ್ಲ" ಎಂದಿರುವುದು. ಸಾಮಾನ್ಯ-ಕವಿಗಳ ವಿಷಯವನ್ನು ಹೇಳುತ್ತಿಲ್ಲವೆಂದು  ಮೊದಲೇ ಖಚಿತಪಡಿಸುತ್ತಾ, ಹಿಂದಿನ ಅಪೂರ್ವ-ಕವಿಗಳಿಗೂ ಹೊಳೆದಿಲ್ಲದ್ದು ಇದು - ಎನ್ನುತ್ತಾನೆ. ಅ-ಪೂರ್ವ ಎಂದರೆ "ಹಿಂದೆಂದೂ ಇದ್ದಿಲ್ಲದ"; ಅರ್ಥಾತ್, ಅದ್ಭುತ. ಹಿಂದಿನ ಅದ್ಭುತ-ಕವಿಗಳಿಗೂ ಹೊಳೆದಿಲ್ಲದ್ದು ಇದು. ಅವರೂ ಕಟಾಕ್ಷಿಸಿಲ್ಲದ್ದೆಂದರೆ ಅವರೂ ಕಂಡಿಲ್ಲದ್ದು. ಸರಿ, ಹಾಗಿದ್ದರೆ ಇಲ್ಲೇನೋ ವಿಶೇಷವಿರಲೇಬೇಕು.

ಸುಪ್ರಸಿದ್ಧನಾದ ಚಂದ್ರನ ಬಗ್ಗೆಯೇ ಇದು. ಆ ಚಂದ್ರನೊಂದು ಕಡೆ; ಈ ಕೃಷ್ಣನ ಮುಖಚಂದ್ರವೊಂದು ಕಡೆ. ಎರಡೂ ಚಂದ್ರನೆಂದದ್ದರಿಂದ ಮತ್ತೆ ಹೋಲಿಕೆಯಷ್ಟೇಯೋ? ಇಲ್ಲ, ಹೋಲಿಕೆ ತರಲಾಗದೆಂದೇ ಪ್ರತಿಪಾದಿಸಹೊರಟಿರುವುದು ಈಗ!

"ಕೃಷ್ಣನ ಆನನೇಂದುವಿಗೆ – ಎಂದರೆ ಮುಖ-ಚಂದ್ರನಿಗೆ - ಈ ಚಂದ್ರನು ನೀರಾಜನ ಮಾಡಲಷ್ಟೆ ಅರ್ಹ!" - ಎನ್ನುತ್ತಿದ್ದಾನೆ, ಲೀಲಾಶುಕ. ನೀರಾಜನವೆಂದರೆ ಮಂಗಳಾರತಿ. ಮಂಗಳಾರತಿ ಮಾಡುವುದೆಂದರೆ ಸಾಮಾನ್ಯವಾಗಿ  ಹಣತೆಯಿಂದಲ್ಲವೇ? ಹೌದು, ಈಗ ಚಂದ್ರನೇ ಒಂದು ದೀಪದಂತೆ; ಎಂದೇ ಶಶಿಯೇ ಒಂದು ಪ್ರದೀಪ - ಎಂದಿರುವುದು. ಚೆನ್ನಾಗಿ ಬೆಳಗುವ ದೀಪವೇ ಪ್ರದೀಪ.

ಏನೋ ನೆಪಕ್ಕೆ ನೀರಾಜನವೆಂದದ್ದಲ್ಲ. ನಿರ್ವ್ಯಾಜವಾಗಿ ಅರ್ಥಾತ್ ನಿಷ್ಕಪಟವಾಗಿ ಹೇಳುವುದಾದರೆ, ಚಂದ್ರನಿಗೆ ಇರುವ ಅರ್ಹತೆಯೆಂದರೆ ಅದೊಂದಕ್ಕೇ! – ಎನ್ನುತ್ತಾನೆ ಕವಿ.

ಮತ್ತು ಈ ಮಂಗಳಾರತಿಯಲ್ಲಿ ಒಂದು ವಿಶೇಷವೂ ಇದೆ. ಲೋಕಸಾಮಾನ್ಯವಾಗಿ ಮಾಡುವ ದೀಪದ ಮಂಗಳಾರತಿಯಲ್ಲಿ ಬಿಸಿಯುಂಟು: ದೀಪದಲ್ಲಿಯ  ಅಗ್ನಿಯಲ್ಲಿ ಉಷ್ಣತೆಯಿರದೇ? ತೀರ ಹತ್ತಿರದಿಂದ ನೋಡಿದರೆ ಕಣ್ಣಿಗಷ್ಟು ಹಿತವೂ ಅಲ್ಲ, ಅದು.

ಆದರೆ ಚಂದ್ರನೋ ಶೀತ-ರಶ್ಮಿ; ಆತನ ಕಿರಣಗಳು ಸದಾ ತಂಪೇ.

ಆದರೆ ಕೃಷ್ಣನ ಮುಖವಂತೂ, ಜಗತ್ತೆಲ್ಲವನ್ನೂ ತನ್ನ ಅಮೃತ-ಕಿರಣಗಳಿಂದ ಎಲ್ಲ ಚೇತನಾಚೇತನಗಳನ್ನು ಆಪ್ಲಾವಿಸಿ, ಎಂದರೆ ಮುಳುಗಿಸಿ, ಆಹ್ಲಾದಗೊಳಿಸುವಂತಹುದು. ಹಾಗಿರುವಾಗ, ಈ ಕೃಷ್ಣಮುಖಚಂದ್ರನ ಮುಂದೆ ಆಕಾಶಚಂದ್ರ ಎಲ್ಲಿಯ ಲೆಕ್ಕ?

ಹೋಲಿಕೆಯೆಂಬುದು ಸಲ್ಲುವುದು ಹೆಚ್ಚುಕಡಿಮೆ ಸಮಾನವಾಗಿರುವ ವ್ಯಕ್ತಿ/ವಸ್ತುಗಳ ನಡುವೆ ಮಾತ್ರವೇ.  ಇಲ್ಲಾವ ಸಮತ್ವ?

ಹೀಗಾಗಿ, ಕೃಷ್ಣನ ಆನನೇಂದುವಿಗೆ ಮಂಗಳಾರತಿ ಮಾಡುವುದಕ್ಕಷ್ಟೇ ಯೋಗ್ಯ, ಆಗಸದ ಚಂದ್ರ. ಒಳ್ಳೆಯ ಕರ್ಪೂರ-ದೀಪದಂತೆಯೂ ಆತ ಬೆಳಗುವನೆಂದರಾಯಿತು.

ಒಟ್ಟಿನಲ್ಲಿ, ದೃಷ್ಟಿ ನಿವಾಳಿಸಿ ಹೊರಬಿಸಾಕುತ್ತಾರಲ್ಲವೆ, ಅದಕ್ಕಷ್ಟೆ ಯೋಗ್ಯ, ಈ ಚಂದ್ರ!

ಕೃಷ್ಣನ ಮುಖ-ಚಂದ್ರಕ್ಕೆ ಎಣೆಯೆಂಬುದೊಂದುಂಟೇ? - ಎಂದು ಧ್ವನಿಮರ್ಯಾದೆಯಿಂದ ಹೀಗೆ ಹೇಳುತ್ತಿದ್ದಾನೆ, ಲೀಲಾಶುಕ.

ಶುಶ್ರೂಷಸೇ ಯದಿ ವಚಃ ಶೃಣು ಮಾಮಕೀನಂ /

ಪೂರ್ವೈರ್ ಅಪೂರ್ವ-ಕವಿಭಿರ್ ನ ಕಟಾಕ್ಷಿತಂ ಯತ್ |

ನೀರಾಜನ-ಕ್ರಮ-ಧುರಾಂ ಭವದಾನನೇಂದೋಃ /

ನಿರ್ವ್ಯಾಜಮ್ ಅರ್ಹತಿ ಚಿರಾಯ ಶಶಿ-ಪ್ರದೀಪಃ! ||

ಸೂಚನೆ : 17/1/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, January 12, 2026

ಪ್ರಶ್ನೋತ್ತರ ರತ್ನಮಾಲಿಕೆ 48 (Prasnottara Ratnamalike 48)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ - ೪೮ - ಅಂಧನು ಯಾರು ?

ಉ. ಪಾಪಕರ್ಮವನ್ನು ಪ್ರೀತಿಸುವವನು.

ಅಂಧ ಎಂದರೆ ಕುರುಡ. ಕಣ್ಣಿಗೆ ಕಾಣುವ ಶಕ್ತಿ ಇಲ್ಲದಿರುವವ. ಕಣ್ಣಿನ ರೆಪ್ಪೆ, ಕಣ್ಣಿನ ಗುಡ್ಡೆ, ಎಲ್ಲವೂ ಇದೆ. ಆದರೆ ಕಣ್ಣಿಗೆ ನೋಡುವ ಶಕ್ತಿ ಇಲ್ಲ. ಅದನ್ನು ಕಳೆದುಕೊಂಡಿದ್ದಾನೆ. ಹಾಗಾಗಿ ಅವನು 'ಅಂಧ' ಎಂದು ಕರೆಸಿಕೊಳ್ಳುತ್ತಾನೆ. ಇಲ್ಲಿ ಹೇಳುವ ಅಂಧನು ಕಣ್ಣು ಇಲ್ಲದವನಲ್ಲ. ಕಣ್ಣು ಇರಬಹುದು ಅಥವಾ ಇಲ್ಲದೇ ಇರಬಹುದು. ಆದರೂ ಅವನನ್ನು 'ಅಂಧ' ಎಂಬುದಾಗಿ ಹೇಳಬೇಕಾಗುತ್ತದೆ. ಅದು ಹೇಗೆ? ಎಂಬ ಪ್ರಶ್ನೆ ಇಲ್ಲಿದೆ. ಅದಕ್ಕೆ ಉತ್ತರ- "ಪಾಪಕರ್ಮವನ್ನು ಯಾರು ಪ್ರೀತಿಸುತ್ತಾನೋ ಅವನು". ಕಣ್ಣಿದ್ದೂ ಕುರುಡನಂತೆ ಎಂಬ ತಾತ್ಪರ್ಯ ಇಲ್ಲಿದೆ. ಪಾಪಕರ್ಮವನ್ನು ಪ್ರೀತಿಸುವುದರಿಂದ ಅವನು ಹೇಗೆ ಅಂಧನಾಗುತ್ತಾನೆ ಎಂಬುದನ್ನು ಇಲ್ಲಿ ಚಿಂತಿಸಬೇಕಾಗಿದೆ.

ಪಾಪ ಕರ್ಮ ಎಂದರೆ ಯಾವುದು ಪಾಪ ಫಲವನ್ನು ಕೊಡುತ್ತದೆಯೋ ಅದು. ಅದರ ಸ್ವರೂಪ ದುಃಖವನ್ನು ಉಂಟುಮಾಡುವುದು. ಕರ್ಮವು ಯಾವಾಗ ಮಾಡಲ್ಪಡುತ್ತದೆಯೋ ಅದೇ ಕಾಲದಲ್ಲಿ ಫಲವನ್ನು ನೀಡಬೇಕು ಎಂಬ ನಿಯಮವಿಲ್ಲ. ಮಾಡಿದ ಕರ್ಮವು ಕೆಲವೊಮ್ಮೆ ತತ್ಕಾಲದಲ್ಲಿ ಫಲವನ್ನು ಕೊಡಬಹುದು. ಇನ್ನು ಕೆಲವು ಸ್ವಲ್ಪ ವಿಳಂಬವಾಗಿ ಫಲವನ್ನು ಕೊಡಬಹುದು. ಇನ್ನು ಕೆಲವು ಕರ್ಮಗಳು ಜನ್ಮಾಂತರದಲ್ಲೂ ಫಲವನ್ನು ಕೊಡಬಹುದು ಎಂಬುದಾಗಿ ನಮ್ಮ ಕರ್ಮಸಿದ್ಧಾಂತ ಸಾರುತ್ತದೆ. ಇದಂತೂ ಸತ್ಯ, ಮಾಡಿದ ಕರ್ಮ ಫಲವನ್ನು ಕೊಟ್ಟೇಕೊಡುತ್ತದೆ ಎಂಬುದು ನಿಶ್ಚಿತ. ಹಾಗಾದರೆ ಅಧರ್ಮದ ಕಾರ್ಯವು ಅಂದರೆ ಪಾಪಕರ್ಮವು ಹೇಗೆ ಅಂಧತ್ವವನ್ನು ಕೊಡುತ್ತದೆ? ಅಂದರೆ ಅವನು ಕಣ್ಣನ್ನು ಕಳೆದುಕೊಳ್ಳುತ್ತಾನೆ; ಅವನಿಗೆ ನೋಡುವ ಶಕ್ತಿ ಕಳೆಯುತ್ತದೆಯೆ ಎಂಬ ಅರ್ಥ ಅಲ್ಲ. ಇಲ್ಲಿ ಅಂಧತ್ವ ಎಂದರೆ ಧರ್ಮವನ್ನು ಅರಿಯುವ ಸಾಮರ್ಥ್ಯ ಇಲ್ಲದಿರುವಿಕೆ ಎಂದರ್ಥ. ಪಾಪಕರ್ಮ ಎಂಬುದು ಅವನಿಗೆ ಧರ್ಮ ಮತ್ತು ಅಧರ್ಮ ಎಂಬ ವಿಷಯದ ವಿವೇಚನ ಶಕ್ತಿಯನ್ನು ಕಳೆಯುತ್ತದೆ. ಕಾರಣವಾಗಿ ಅವನು ಧರ್ಮಕಾರ್ಯವನ್ನು ಪ್ರೀತಿಸದೇ ಹೋಗಬಹುದು ಮತ್ತು ಅಧರ್ಮಕಾರ್ಯದಲ್ಲಿ ಉತ್ಸಾಹವು ಬರಬಹುದು. ಹೀಗೆ ಈ ಉತ್ಸಾಹವು ಅವನಿಗೆ ಧರ್ಮವನ್ನು ಮರೆಸುತ್ತದೆ. ಅದರ ಪರಿಣಾಮವಾಗಿ ಅವನು ಅಧರ್ಮವನ್ನೇ ಪ್ರೀತಿಸುವಂಥಾಗುತ್ತದೆ. ಕೊನೆಯಲ್ಲಿ ಅವನು ಧರ್ಮಕ್ಕೆ ವಿರೋಧಿಯಾಗುತ್ತಾನೆ. ಅವನು ಒಳ್ಳೆಯ ಕಾರ್ಯವನ್ನು ಅಂದರೆ ಯಾವುದು ಧರ್ಮವನ್ನು ಉಂಟುಮಾಡುತ್ತದೆಯೋ ಅಂತಹ ಕಾರ್ಯವನ್ನು ಅವನು ದ್ವೇಷಿಸುವ ಸ್ವಭಾವದವನಾಗುತ್ತಾನೆ. ಇದೇ ಅಂಧತ್ವದ ಸ್ವಭಾವ ಎಂಬುದಾಗಿ ತಿಳಿಯಬೇಕು. ಹಾಗಾಗಿ ಪಾಪಕರ್ಮವು ಧರ್ಮದ ಅಂಧತ್ವವನ್ನು ಉಂಟುಮಾಡುತ್ತದೆ. ಪುಣ್ಯಕರ್ಮವು ಧರ್ಮಕ್ಕೆ ಬೆಳಕನ್ನು ನೀಡುತ್ತದೆ ಎಂಬುದು ಇದರ ಆಶಯವಾಗಿದೆ.

ಧರ್ಮ ಎಂದರೆ ನಮ್ಮ ಮೂಲಸ್ವರೂಪ. ಅದನ್ನು ಮರೆಯುವಂತೆ. ಅದನ್ನು ಕಾಣದಂತೆ ಮಾಡುವ ಯಾವ ಕರ್ಮಗಳಿವೆಯೋ ಅವುಗಳನ್ನು 'ಪಾಪಕರ್ಮ' ಎಂಬುದಾಗಿ ಕರೆಯಲಾಗುತ್ತದೆ. ಪ್ರತಿಯೊಂದು ವಸ್ತುವೂ ಅದರ ಸ್ವರೂಪದಲ್ಲಿ ಇದ್ದರೆ, ಅದು 'ಧರ್ಮದಲ್ಲಿದೆ' ಎಂದರ್ಥ. ಅದು ಸ್ವರೂಪವನ್ನು ಕೆಡಿಸಿಕೊಂಡಿದೆ ಎಂದರೆ ಆ ಧರ್ಮಕ್ಕೆ ಚ್ಯುತಿ ಬಂದಿದೆ ಎಂದರ್ಥ. ಪಾಪಕರ್ಮವು ಈ ಧರ್ಮವನ್ನು ಮರೆಸುತ್ತದೆ. ವಸ್ತುತಃ 'ಯಾವುದು ಧರ್ಮ?' ಎಂದರೆ ಯಾವ ಕಾರ್ಯವು ಮೋಕ್ಷವನ್ನು ಉಂಟುಮಾಡುತ್ತದೆಯೋ, ಮೋಕ್ಷಕ್ಕೆ ಇರುವ ಪ್ರತಿಬಂಧಕವನ್ನು ನಿವೃತ್ತಿಗೊಳಿಸುತ್ತದೆಯೋ ಅದು. ಇದಕ್ಕೆ ವಿರುದ್ಧವಾದದ್ದು ಕುಕಾರ್ಯ ಅಥವಾ ಅಧರ್ಮ ಎಂಬುದಾಗಿ ಕರೆಸಿಕೊಳ್ಳುತ್ತದೆ. ಹಾಗಾಗಿ ಅತ್ಯಂತ ವಿಸ್ತಾರವಾದ ಈ ವಿಷಯವನ್ನು ಬಹಳ ಸಂಕ್ಷಿಪ್ತವಾಗಿ ಈ ಪ್ರಶ್ನೋತ್ತರರೂಪದಲ್ಲಿ ವಿವರಿಸಲಾಗಿದೆ. ಪಾಪಕರ್ಮವು ಧರ್ಮಕ್ಕೆ ವಿರೋಧಿಯಾಗಿ ಧರ್ಮವನ್ನು ಮರೆಯುವಂತೆ - ಕಾಣದಂತೆ ಮಾಡುವುದಕ್ಕಾಗಿ ಪಾಪಕರ್ಮವನ್ನು ಪ್ರೀತಿಸುವವನು ಅಂಧನೇ ಸರಿ ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.

ಸೂಚನೆ : 11/1/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.