Monday, January 19, 2026

ಪ್ರಶ್ನೋತ್ತರ ರತ್ನಮಾಲಿಕೆ 49 (Prasnottara Ratnamalike 49)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ - ೪೯ - ಕಿವುಡನು ಯಾರು ?

ಉ. ಹಿತವಚನವನ್ನು ಕೇಳದವ.

ಈ ಹಿಂದಿನ ಪ್ರಶ್ನೋತ್ತರದಲ್ಲಿ 'ಅಂಧ ಯಾರು? ಎಂಬ ವಿಷಯವನ್ನು ಚರ್ಚಿಸಿದ್ದಾಗಿತ್ತು. ಅದೇ ರೀತಿಯಲ್ಲಿ ಈ ಉತ್ತರವನ್ನು ಚಿಂತಿಸಬೇಕಾಗಿದೆ. ಅಂದರೆ 'ಕಿವುಡ ಎಂದರೆ ಯಾರು?' 'ಕಿವಿ ಕೇಳದವನು. ಕಿವಿಯ ಕೇಳುವ ಸಾಮರ್ಥ್ಯವನ್ನು ಕಳೆದುಕೊಂಡಿರುವವನು ಎಂಬ ಅರ್ಥ ಈ ಶಬ್ದಕ್ಕೆ ಬರುತ್ತದೆ. ಆದರೆ ಇಲ್ಲಿ ಈ ಅರ್ಥವನ್ನು ಭಾವಿಸಲಾಗದು. ಅದಕ್ಕೆ ಇಲ್ಲಿ ಉತ್ತರವಾಗಿ 'ಯಾರು ಹಿತವಚನವನ್ನು ಅಥವಾ ಉಪದೇಶವನ್ನು ಕೇಳುವುದಿಲ್ಲವೋ ಅವನು ಕಿವಿ ಇದ್ದೂ ಕಿವುಡ' ಎಂಬ ಅರ್ಥವನ್ನು ಭಾವಿಸಬೇಕು. ಹಾಗಾದರೆ ಕಿವಿಯಿದ್ದೂ ಕಿವುಡ ಹೇಗಾಗುತ್ತಾನೆ?! 

ಹಿತವಚನವನ್ನು ಅಥವಾ ಉಪದೇಶವನ್ನು ಕೇಳುವ ಆಸಕ್ತಿ ಇಲ್ಲದವನು, ಕೇಳದವನು. ಅವನು ಕಿವುಡನಂತೆ. ಅವನಿಗೆ ಯಾವುದೇ ಉಪದೇಶಗಳು ಅವನ ಗುಣ ಸ್ವಭಾವಗಳನ್ನು ಬದಲಿಸಲು ಸಾಧನವಾಗದು ಎಂಬುದು ತಾತ್ಪರ್ಯ. ಸಾಮಾನ್ಯವಾಗಿ 'ಉಪದೇಶ' ಎಂಬುದು ಒಬ್ಬ ವ್ಯಕ್ತಿಯನ್ನು ಸರಿದಾರಿಗೆ ತರಲು ಉಪಯೋಗಿಸುವ ಮಾತುಗಳು. ಇವು ಶಬ್ದರೂಪವಾಗಿ ಇರುತ್ತವೆ. ಈ ಶಬ್ದಗಳನ್ನು ಕೇಳುವ ಇಂದ್ರಿಯ ಕಿವಿಯಷ್ಟೆ. ಹಾಗಾಗಿ ಈ ಉಪದೇಶಗಳನ್ನು ಕೇಳಲು ಅವನು ಕಿವಿಯನ್ನು ಬಳಸಿಕೊಳ್ಳಬೇಕು. 'ಉಪದೇಶ' ಎಂಬ ಶಬ್ದಕ್ಕೆ ಹತ್ತಿರದಲ್ಲಿ ಹೇಳುವುದು ಎಂದರ್ಥ' 'ಉಪ- ಸಮೀಪ, ದಿಶ ಅತಿಸರ್ಜನ-ದಾನ ಎಂಬುದಾಗಿ ಅರ್ಥ. ಅಂದರೆ ಅವನ ಕಿವಿಯಲ್ಲಿ ಬಂದು ಶಬ್ದಗಳ ಮೂಲಕ ಅವನಿಗೆ ಒಳ್ಳೆಯ ವಿಚಾರವನ್ನು ಕೋಡಬೇಕು. ಅದು ಉಪದೇಶವಾಗುತ್ತದೆ. ಅದಕ್ಕೆ ಸಂಸ್ಕೃತದಲ್ಲಿ 'ಹಿತವಚನ' ಅಥವಾ 'ಶಿಕ್ಷಣ' ಎಂಬುದಾಗಿ ಅರ್ಥವನ್ನೂ ನೀಡಲಾಗಿದೆ. ಉಪದೇಶವು ಅವನಿಗೆ ಹಿತವಾಗಿರಬೇಕು. 'ಹಿತ' ಎಂಬುದು ಯಾವುದನ್ನು ಕೊಡುತ್ತದೆ? ಅದು ಹೇಗಿರಬೇಕು? ಎಂಬುದಕ್ಕೆ ಶ್ರೀಶಂಕರ ಭಗವತ್ಪಾದರು 'ಹಿತ' ಎಂಬ ಶಬ್ದಕ್ಕೆ ಹೀಗೆ ಭಾಷ್ಯವನ್ನು ಬರೆದಿದ್ದಾರೆ - "ಹಿತಮ್ ಪರಂ ಜ್ಞಾನಪ್ರಾಪ್ತಿಸಾಧನಂ" ಎಂದು. ವಸ್ತುತಃ ನಮ್ಮ ಇಹಪರ ಜೀವನವು ಸುಖವಾಗಿ ಸಾಗಬೇಕಾದರೆ ಅನೇಕ ಸಾಧನಗಳು ಬೇಕು. ಯಾವ ಸಾಧನಗಳನ್ನು ಬಳಸಬೇಕು; ಯಾವುದು ನಮಗೆ ಹಿತವಾಗುತ್ತದೆ; ಯಾವ ಸಾಧನಗಳನ್ನು ಬಳಸಬಾರದು; ಅದು ನಮಗೆ ಅಹಿತವಾಗುತ್ತದೆ ಎಂಬ ಅರಿವನ್ನು ಪಡೆದವರಿಂದ, ನಾವು ಆ ಬಗೆಯ ಮಾಹಿತಿಗಳನ್ನು ಸಂಗ್ರಹಿಸಬೇಕು. ಆಗ ಅದಕ್ಕೆ ನಾವು ಕಿವಿಗೊಡಬೇಕು. ಹಾಗಿದ್ದಾಗ ನಮ್ಮ ಜೀವನ ಅದರಿಂದ ಪರಿವರ್ತಿತವಾಗುತ್ತದೆ. ಹಿತವಾದ ವಚನವನ್ನು ಕೇಳಿದಾಗ ಅದು ನಮ್ಮ ಈ ಭೌತಿಕ ಜೀವನವನ್ನು ಮಾತ್ರ ಅನುಕೂಲಿಸದೆ ಪರ ಜೀವನಕ್ಕೂ ಅಂದರೆ ಭಗವಂತನನ್ನು ಈ ಜನ್ಮದಲ್ಲಿ ಪಡೆಯಲು ಕೂಡ ಅನುಕೂಲಿಸುತ್ತದೆ ಎಂಬ ಅರ್ಥದಲ್ಲಿ ಭಗವತ್ಪಾದರು ಹಿತ ಎಂಬ ಶಬ್ದಕ್ಕೆ ಅರ್ಥವನ್ನು ನೀಡಿದ್ದಾರೆ. ಹಾಗಾಗಿ ಇಂತಹ ಉತ್ತಮವಾದ ಉಪದೇಶವನ್ನು ಅಥವಾ ಹಿತವಚನವನ್ನು ಕೇಳಬೇಕು. ಆಗ ನಮ್ಮ ಜೀವನ ಸಾರ್ಥಕವಾಗುತ್ತದೆ. ನಮಗೆ ಇಂದ್ರಿಯಗಳು ಇರುವುದು, ಅದರಿಂದ ಬರುವ ಸುಖವನ್ನು ಪಡೆದು, ತನ್ಮೂಲಕ ಇಂದ್ರಿಯಾತೀತವಾದ ಆನಂದವನ್ನು ಅನುಭವಿಸಲು. ಹಾಗಾಗಿ ಈ ಕಿವಿ ಎಂಬ ಇಂದ್ರಿಯವು ಕೇಳುವುದರ ಮೂಲಕ ಅತಿಶಯವಾದ ಆನಂದವನ್ನು ಪಡೆಯಲು ಸಾಧ್ಯ. ಇದನ್ನು ಪಡೆಯದವನು, ಈ ಕಿವಿಯನ್ನು ಹಾಗೆ ಬಳಸದವನು, 'ಕಿವಿಯಿದ್ದು ಕಿವುಡನಂತೆ ಸರಿ' ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.

ಸೂಚನೆ : 18/1/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.  

ವ್ಯಾಸ ವೀಕ್ಷಿತ 171 ಯಾರೀ ಜರಾಸಂಧ? ಕೃಷ್ಣನಿಗೂ ಅವಧ್ಯನೇ?! ( Vyaasa Vikshita 171)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಅರ್ಜುನೋಕ್ತಿಯ ಬಳಿಕ ಕೃಷ್ಣನು ಮಾತನಾಡುತ್ತಾ, ಜರಾಸಂಧವಧೆಗೆ ಕುಟಿಲೋಪಾಯವೊಂದನ್ನು ಸೂಚಿಸುತ್ತಿದ್ದಾನೆ:

"ನಮ್ಮ ಕಡೆಯಿಂದ ಯಾವ ದೋಷವೂ ಆಗದಂತೆ ನೋಡಿಕೊಂಡು, ಯಾರಿಗೂ ಗೊತ್ತಾಗದಂತೆ ನಾವು ಆ ಜರಾಸಂಧನ ಅರಮನೆಯನ್ನು ಪ್ರವೇಶಿಸಬೇಕು. ಪ್ರವೇಶಿಸಿ, ಆತನ ಮೇಲೆ ಆಕ್ರಮಣವನ್ನು ಮಾಡಿದೆವೆಂದರೆ ನಮ್ಮ ವಾಂಛಿತವನ್ನು ಈಡೇರಿಸಿಕೊಂಡಂತೆಯೇ. ಸರ್ವಭೂತಗಳಲ್ಲೂ ಅಂತರಾತ್ಮನು ಬೆಳಗುವ ಹಾಗೆ, ಈ ಶತ್ರುವಾದ ಜರಾಸಂಧನು ಎಲ್ಲರ ಮಧ್ಯದಲ್ಲಿ ನಿಂತು, ರಾಜ್ಯಲಕ್ಷ್ಮಿಯಿಂದ ಕಂಗೊಳಿಸುತ್ತಿದ್ದಾನೆ.

ಅಥವಾ ಹೀಗೂ ಆಗಬಹುದು: ಈ ಜರಾಸಂಧನನ್ನು ಯುದ್ಧದಲ್ಲಿ ನಾವು ಕೊಂದ ಬಳಿಕ, ಒಂದು ವೇಳೆ ಉಳಿದ ಅವನ ಕಡೆಯವರೇ ನಮ್ಮನ್ನು ಕೊಲ್ಲಬಹುದೆಂದುಕೋ. ಹಾಗೂ, ನಾವು ನಮ್ಮ ಬಂಧುಜನರನ್ನು ರಕ್ಷಿಸುವ ಕಾರ್ಯದಲ್ಲೇ ತತ್ಪರರಾಗಿದ್ದು ಸಾವನ್ನಪ್ಪಬೇಕಾಯಿತೆಂದರೆ, ಹಾಗೂ ಬಳಿಕ ಸ್ವರ್ಗವನ್ನು ಪಡೆಯತಕ್ಕವರೇ ಸರಿ!" ಎಂದನು, ಕೃಷ್ಣ.

ಆಗ ಯುಧಿಷ್ಠಿರನು ಮರುಪ್ರಶ್ನೆಯನ್ನು ಹಾಕಿದನು: "ಕೃಷ್ಣಾ, ವಾಸ್ತವವಾಗಿ ಯಾರೀ ಜರಾಸಂಧ? ಆತನ ಬಲವೆಂತಹುದು? ಪರಾಕ್ರಮವೆಂತಹುದು? ಅಗ್ನಿಯನ್ನು ಮುಟ್ಟಿದ ಪತಂಗದ ಹುಳುವು ಸುಟ್ಟುಹೋಗುವದಲ್ಲವೇ? ಹಾಗೆ, ನಿನ್ನ ಸ್ಪರ್ಶವನ್ನು ಹೊಂದಿ ಆತನು ಮರಣವನ್ನಪ್ಪಬೇಕಿತ್ತಲ್ಲವೇ? ಆದರೂ ಆತನೇಕಿನ್ನೂ ಸತ್ತಿಲ್ಲ?" – ಎಂದನು.

ಅದಕ್ಕೆ ಕೃಷ್ಣನು ಹೇಳಿದನು:

"ರಾಜಾ ಯುಧಿಷ್ಠಿರನೇ, ಜರಾಸಂಧನ ವೀರ್ಯವೇನು, ಪರಾಕ್ರಮವೇನು! ಅನೇಕಬಾರಿ ಆತನು ನಮಗೆ ವಿಪ್ರಿಯವನ್ನು ಮಾಡಿದ್ದರೂ, ಎಂದರೆ ಕೆರಳುವಂತೆ ಮಾಡಿದ್ದರೂ ಸಹ, ನಾವೇಕೆ ಆತನನ್ನು ಉಪೇಕ್ಷೆ ಮಾಡಿದ್ದೇವೆ? - ಎಂಬುದೆಲ್ಲವನ್ನೂ ಹೇಳುವೆ, ಕೇಳು.

ಮೂರು ಅಕ್ಷೌಹಿಣೀ-ಸೈನ್ಯಕ್ಕೆ ಒಡೆಯನಾಗಿ ಮಹಾಬಲಶಾಲಿಯೆನಿಸಿದ್ದ ಬೃಹದ್ರಥನೆಂಬ ರಾಜನಿದ್ದನು. ಮಗಧ-ದೇಶದ ಒಡೆಯನಾತ. ಸಮರಗಳಲ್ಲಿ ಆತನ ದರ್ಪವೇ ದರ್ಪ. ಬಲ-ಪರಾಕ್ರಮಗಳಿಗೆ ಸಾಟಿಯಿಲ್ಲದವ. ಅವನು ಮತ್ತೊಬ್ಬ ಇಂದ್ರನೋ ಎಂಬಂತಿದ್ದ. ಸದಾ ದೀಕ್ಷಾಂಕಿತವಾಗಿತ್ತು, ಆತನ ಶರೀರ. ರೂಪಶಾಲಿಯೂ ಹೌದು ಆತ. ತೇಜಸ್ಸಿನಲ್ಲಿ ಸೂರ್ಯನಂತೆ, ಕ್ಷಮೆಯಲ್ಲಿ ಭೂಮಿಯಂತೆ, ಕ್ರೋಧದಲ್ಲಿ ಯಮನಂತೆ ಸಂಪತ್ತಿನಲ್ಲಿ ಕುಬೇರನಂತೆ. ಉತ್ತಮಕುಲದಲ್ಲಿ ಜನ್ಮ, ಅನೇಕ ಸದ್ಗುಣಗಳು - ಇವುಗಳು ಭೂಮಿಯನ್ನೇ ವ್ಯಾಪಿಸಿದ್ದವು - ಸೂರ್ಯನ ಕಿರಣಗಳು ವ್ಯಾಪಿಸುವ ಹಾಗೆ.

ಆ ಬೃಹದ್ರಥ ಮದುವೆಯಾದದ್ದು ಕಾಶಿರಾಜನ ಇಬ್ಬರು ಹೆಣ್ಣುಮಕ್ಕಳನ್ನು. ಅವರು ಅವಳಿಮಕ್ಕಳು, ರೂಪೈಶ್ವರ್ಯ-ಸಂಪನ್ನರು. ಅವರಿಬ್ಬರಿಗೂ ಏಕಾಂತದಲ್ಲಿ ಆ  ಬೃಹದ್ರಥನು ಹೇಳಿದುದು - ನಿಮ್ಮಿಬ್ಬರನ್ನೂ ನಾನು ಏಕ-ರೀತಿಯಿಂದಲೇ ನೋಡುವೆ - ಎಂಬುದಾಗಿ. ತನಗೆ ಪ್ರಿಯರೂ ಅನುರೂಪರೂ ಆದ ಇಬ್ಬರೂ ಪತ್ನಿಯರೊಂದಿಗೆ ಆ ಬೃಹದ್ರಥನು ಶೋಭಿಸಿದನು - ಎರಡು ಹೆಣ್ಣಾನೆಗಳೊಂದಿಗೆ ಶ್ರೇಷ್ಠಗಜವು ಹೇಗೆ ರಮಿಸುವುದೋ ಹಾಗೆ; ಗಂಗೆ-ಯಮುನೆಯರ ನಡುವೆ ಸಾಗರವು ಹೇಗೆ ಕಂಗೊಳಿಸುವುದೋ ಹಾಗೆ ಅವರಿಬ್ಬರ ನಡುವೆ ರಾರಾಜಿಸಿದನು.

ಇಂದ್ರಿಯ-ಸುಖಗಳಲ್ಲೇ ಮುಳುಗಿದ್ದ ಆ ರಾಜನ ಯೌವನವು ಕಳೆಯಿತು. ಆದರೆ ಆತನಿಗೆ ಮಕ್ಕಳಾಗಲಿಲ್ಲ. ಮಂಗಳಕಾರಿಯಾದ ಅನೇಕ ಹೋಮಗಳನ್ನು ಮಾಡಿದನು - ಪುತ್ರಕಾಮೇಷ್ಟಿ ಮುಂತಾದವುಗಳನ್ನು. ಆದರೂ ಸಹ ಕುಲ-ವರ್ಧಕನಾದ ಪುತ್ರನೊಬ್ಬನನ್ನು ಮಾತ್ರ ಪಡೆಯಲಿಲ್ಲ.

ಒಮ್ಮೆ ರಾಜನು ಕಾಕ್ಷೀವಂತನ ಪುತ್ರನೂ ಗೌತಮವಂಶ-ಪ್ರದೀಪನೂ ಆದ ಚಂಡ-ಕೌಶಿಕನ ಬಗ್ಗೆ ಕೇಳಿತಿಳಿದನು. ತಪಸ್ಸಿನಿಂದ ವಿರತನಾಗಿ ಆ ಕೌಶಿಕನು ಅಕಸ್ಮಾತ್ತಾಗಿ ಇತ್ತ ಬಂದಿರುವನೆಂದೂ ಮರದ ಬುಡವೊಂದರಲ್ಲಿ ಕುಳಿತಿರುವನೆಂದೂ ಅರಿತುಕೊಂಡನು. ತನ್ನಿಬ್ಬರೂ ಪತ್ನಿಯರೊಂದಿಗೆ ಹೋಗಿ ಎಲ್ಲ ಬಗೆಯ ರತ್ನಗಳನ್ನೂ ಆತನಿಗಿತ್ತು ಆತನನ್ನು ಸಂತೋಷಪಡಿಸಿದನು. 

ಸೂಚನೆ : 18/1/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಕೃಷ್ಣಕರ್ಣಾಮೃತ 90 ಜಲಧಿಯ ಸಲಿಲವೂ ಸಾಲದಾಗದೆ ಹೋಯಿತೇ? (Krishakarnamrta 90)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

ಹಿಂದೆ ಯಾವನು ವರಾಹಾವತಾರವನ್ನು ಮಾಡಿದ್ದನೋ ಆತನೇ ಈಗ ಕೃಷ್ಣಾವತಾರವನ್ನು ಮಾಡಿರುವುದು. ವರಾಹಾವತಾರವು ವಿಷ್ಣುವಿನ ಮೂರನೇ ಅವತಾರ; ಕೃಷ್ಣನು ಎಂಟನೆಯ ಅವತಾರ. ಆ ಅವತಾರಕ್ಕೂ ಈ ಅವತಾರಕ್ಕೂ ಇರುವ ಭೇದವೇನು? ಅದನ್ನು ಲೀಲಾಶುಕನು ಇಲ್ಲಿ ಹೇಳುತ್ತಿರುವುದು.

ಹಿರಣ್ಯಕಶಿಪುವಿನ ಸೋದರ ಹಿರಣ್ಯಾಕ್ಷ. ತನ್ನ ತಪಸ್ಸಿನಿಂದ ಪಡೆದ ವರಗಳಿಂದಾಗಿ ಬಲಿಷ್ಠನಾದ; ಮತ್ತೇನು, ಲೋಕಕಂಟಕನಾದ. ವಿಷ್ಣುವು ವರಾಹಾವತಾರವನ್ನು ತಾಳಿ ಆತನನ್ನು ಸಂಹರಿಸಬೇಕಾಯಿತು. ಸಮುದ್ರದಲ್ಲಿ ಮುಳುಗಿ ಹೋಗಿದ್ದ ಭೂಮಿಯನ್ನು ಮೇಲೆತ್ತಬೇಕಾಯಿತು.

ಸಮುದ್ರವೇನು ಒಂದೇ? ಹಲವು ಸಮುದ್ರಗಳಿವೆ. ಅವನ್ನು ನಾಲ್ಕೆಂದೂ ಏಳೆಂದೂ ಹೇಳುವುದುಂಟು. ಸಮುದ್ರಗಳೊಂದೊಂದೂ ಅದೆಷ್ಟು ವಿಶಾಲವೂ ಆಳವೂ ಆಗಿರುತ್ತವೆ! ಹಾಗಿದ್ದರೂ ಅವೆಲ್ಲವೂ ಸೇರಿಯೂ ಒಂದು ಕೆಲಸವನ್ನು ಮಾಡಲಾಗಲಿಲ್ಲವಂತೆ. ಯಾವ ಕೆಲಸದಲ್ಲಿ ಅವು ಅದಕ್ಷವಾದವು? ಆ ವರಾಹನ ರೋಮ-ರಂಧ್ರಗಳುಂಟಲ್ಲಾ, ಅವನ್ನು ತುಂಬಲು! ಅದು ಸಹ ಅವಕ್ಕಾಗಲಿಲ್ಲವಂತೆ! ಅಷ್ಟು ಬೃಹತ್ತಾಗಿತ್ತು, ವರಾಹಾವತಾರ, ಆ ಅವತಾರದ ಆಕಾರ!

ಅಂದಿನ ಆ ಪರಿಸ್ಥಿತಿಗೂ ಕೃಷ್ಣಾವತಾರದ ಇಂದಿನ ಸ್ಥಿತಿಗೂ ಇರುವ ಅಂತರ ಸುಲಭೋಹ್ಯವಲ್ಲ. ಊಹಾತೀತವಾದ ಅದನ್ನು ಊಹೆಗೆಟುಕುವಂತೆ ಲೀಲಾಶುಕನು ತೋರಿಸಿಕೊಡುತ್ತಿದ್ದಾನೆ.

ಕೃಷ್ಣನಿಲ್ಲೊಂದು ಕೂಸಷ್ಟೆ. ಆ ಎಳೆಹಸುಳೆಗೆ ಆತನ ಸಾಕುತಾಯಿಯಾದ ಯಶೋದೆಯ ಕೈಯಲ್ಲೇ ನಿತ್ಯಸ್ನಾನ.  ಈ ಕೈಕೂಸಿನ ಕಣ್ಣಿನ ಅಂದ ಎದ್ದು ತೋರುವಂತಹುದೇ: ಕಮಲದಂತಹ ಕಣ್ಣುಗಳು! ಈ ಎಳೆಗೂಸಿಗೆ ಸ್ನಾನ ಮಾಡಿಸಲು ನೀರೆಷ್ಟು ಬೇಕು? ಒಂದು ಬೊಗಸೆಯಷ್ಟೇ ಸಾಕು!

ಬೊಗಸೆಯೆಂದರೂ ಅಂಜಲಿಯೇ: ಪಾಣಿ-ದ್ವಯವನ್ನು – ಎಂದರೆ ತನ್ನದೇ ಎಡಗೈ-ಬಲಗೈಗಳನ್ನು - ಒಂದರ ಪಕ್ಕ ಮತ್ತೊಂದನ್ನು ಜೋಡಿಸಿಟ್ಟುಕೊಂಡಾಗ, ಅವುಗಳೊಳಗೆ ನಿಲ್ಲುವ ನೀರೆಷ್ಟೋ, ಅಷ್ಟೇ ಅದರ ಪ್ರಮಾಣ; ಅದನ್ನೇ ಪಾಣಿ-ದ್ವಯಾಂತರ-ಜಲವೆಂದಿರುವುದು.

ರೋಮಕೂಪವೆಂದರೆ ಅದೆಷ್ಟು ಪುಟ್ಟ ಎಡೆ! ರೋಮಕೂಪವೊಂ(ದೊಂ)ದಕ್ಕೂ ಇಡೀ ಸಮುದ್ರಗಳೇ ಸಾಕೆನಿಸದ ಮಹಾಕಾರನಾದ ದೇವನಿಗೇ, ಈಗ - ಎಂದರೆ ಈ ಜನ್ಮಾಂತರದಲ್ಲಿ - ಅರ್ಥಾತ್ ಈ ಪುನರವತಾರದಲ್ಲಿ, ಸ್ನಪಿಸಲು ಬೊಗಸೆ ನೀರು ಸಾಕಾಗಿದೆ! ಸ್ನಪಿಸುವುದೆಂದರೆ ಸ್ನಾನ ಮಾಡಿಸುವುದು.

ಒಂದೊಂದವತಾರದಲ್ಲೂ ಒಂದೊಂದು ವಿಶೇಷವಿರುವುದು! ಜಲ-ಪರಿಮಾಣವು ಆಗ ಸಾಲದೆ ಬಂದುದು, ಈಗ ಅಪಾರವಾಗಿ ಉಳಿಯುವಂತಾಯಿತು! ಆಗ ಅಧಿಕ-ಸಲಿಲವೂ ಅಲ್ಪವೇ; ಈಗ ಅತ್ಯಲ್ಪ-ಜಲವೇ ಅತ್ಯಧಿಕ - ಎಂಬಂತಾಗಿದೆ!

ಆಹಾ, ಒಂದೇ ದೈವದ ಎರಡು ರೂಪಗಳಲ್ಲಿ ಅದೆಷ್ಟು ವಿಸದೃಶತೆ! ಹಿಂದಿನ ಬೃಹತ್ತ್ವ ಅನೂಹ್ಯ; ಈಗಿನದು ನಮ್ಮನಿಮ್ಮಂತೆಯಷ್ಟೆ ಇರುವುದು. ಆ ಪುರಾತನಾವತಾರವು ದನುಜ-ಭೀತಿಕರ; ಈ ಅಧುನಾತನಾವತಾರವು ಮನುಜ-ಪ್ರೀತಿಕರ!

ಹೀಗಿರುವ ಮರಿಕೃಷ್ಣ ಮುದ್ದಲ್ಲದೆ ಮತ್ತೇನು?

ಶ್ಲೋಕ ಹೀಗಿದೆ:

ಯದ್ರೋಮ-ರಂಧ್ರ-ಪರಿಪೂರ್ತಿ-ವಿಧಾವದಕ್ಷಾ/ 

ವಾರಾಹ-ಜನ್ಮನಿ ಬಭೂವುರಮೀ ಸಮುದ್ರಾಃ |

ತಂ ನಾಮ ನಾಥಂ ಅರವಿಂದ-ದೃಶಂ ಯಶೋದಾ/

ಪಾಣಿ-ದ್ವಯಾಂತರ-ಜಲೇ ಸ್ನಪಯಾಂಬಭೂವ!! ||

***

ಏನೋ ಕೆಲಸವಾಗಬೇಕೆಂದಿರುವಾಗ ಚರ್ಚೆ ನಡೆಯುತ್ತಿರಲು, ಕೆಲವರು ತಮ್ಮ ಅಭಿಪ್ರಾಯವನ್ನು ಮಂಡಿಸಲು ಹೀಗೆ ಆರಂಭಿಸುವುದುಂಟು: "ನನ್ನ ಮಾತನ್ನು ಕೇಳುವಿರಾದರೆ..." ಎಂದು.

ಹಾಗೆಯೇ ಇಲ್ಲಿ ಲೀಲಾಶುಕ ಕೃಷ್ಣನಿಗೇ ಒಂದು ಕಿವಿಮಾತನ್ನು ಹೇಳುತ್ತಿದ್ದಾನೆ: "ಕೃಷ್ಣಾ, ನನ್ನ ಮಾತಿಗೆ ನೀನು ಕಿವಿಗೊಡುವೆಯಾದರೆ..." ಎಂದು. ಏನದು? ಶುಶ್ರೂಷೆಯೆಂಬ ಪದವನ್ನು ಸೇವೆಯೆಂಬ ಅರ್ಥದಲ್ಲಿ ಬಳಸುವೆವಲ್ಲವೇ? ಸಂಸ್ಕೃತದಲ್ಲಿ ಆ ಅರ್ಥವೂ ಇದೆ. ಜೊತೆಗೆ, "ಕೇಳುವ ಬಯಕೆ" ಎಂಬ ಇನ್ನೊಂದರ್ಥವೂ ಇದೆ. ಇಲ್ಲಿ ಬಳಸಿರುವುದು ಎರಡನೆಯ ಅರ್ಥದಲ್ಲಿ. "ಶುಶ್ರೂಷಿಸು ನನ್ನ ಮಾತನ್ನು" - ಎನ್ನುತ್ತಿದ್ದಾನೆ, ಕವಿ ಲೀಲಾಶುಕ.

ಕವಿಯೊಬ್ಬನು ಹೇಳುವ ಮಾತಾದರೆ ಅದರಲ್ಲೊಂದು ಎಚ್ಚರಬೇಕು. ಏನದು? ಬೇರೆಯವರು ಹೇಳಿದ್ದನ್ನೇ ಹೇಳಹೊರಟಿರುವುದೋ ಹೇಗೆ? - ಎಂದು ಖಚಿತಪಡಿಸಿಕೊಳ್ಳಬೇಕು. ಏಕೆ? ಅನ್ಯಕವಿಗಳ ಚಿಂತನಗಳನ್ನು ಕದಿಯದ ಕವಿಯೊಬ್ಬನುಂಟೆ? ಅದಕ್ಕೇ ಲೀಲಾಶುಕನೇ ತಾನೇ ಖಚಿತಪಡಿಸುತ್ತಾನೆ: "ಹಿಂದಿನ ಕವಿಗಳು ಯಾರೂ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ" - ಎಂದು. ವ್ಯಕ್ತಪಡಿಸುವುದಿರಲಿ, ಇತ್ತ ಕಣ್ಣು ಕೂಡ ಹಾಯಿಸಿಲ್ಲ! – ಎನ್ನುತ್ತಿದ್ದಾನೆ. ಅದನ್ನೇ  "ಇತರಕವಿಗಳು ಕಟಾಕ್ಷಿಸಿಯೂ ಇಲ್ಲ" ಎಂದಿರುವುದು. ಸಾಮಾನ್ಯ-ಕವಿಗಳ ವಿಷಯವನ್ನು ಹೇಳುತ್ತಿಲ್ಲವೆಂದು  ಮೊದಲೇ ಖಚಿತಪಡಿಸುತ್ತಾ, ಹಿಂದಿನ ಅಪೂರ್ವ-ಕವಿಗಳಿಗೂ ಹೊಳೆದಿಲ್ಲದ್ದು ಇದು - ಎನ್ನುತ್ತಾನೆ. ಅ-ಪೂರ್ವ ಎಂದರೆ "ಹಿಂದೆಂದೂ ಇದ್ದಿಲ್ಲದ"; ಅರ್ಥಾತ್, ಅದ್ಭುತ. ಹಿಂದಿನ ಅದ್ಭುತ-ಕವಿಗಳಿಗೂ ಹೊಳೆದಿಲ್ಲದ್ದು ಇದು. ಅವರೂ ಕಟಾಕ್ಷಿಸಿಲ್ಲದ್ದೆಂದರೆ ಅವರೂ ಕಂಡಿಲ್ಲದ್ದು. ಸರಿ, ಹಾಗಿದ್ದರೆ ಇಲ್ಲೇನೋ ವಿಶೇಷವಿರಲೇಬೇಕು.

ಸುಪ್ರಸಿದ್ಧನಾದ ಚಂದ್ರನ ಬಗ್ಗೆಯೇ ಇದು. ಆ ಚಂದ್ರನೊಂದು ಕಡೆ; ಈ ಕೃಷ್ಣನ ಮುಖಚಂದ್ರವೊಂದು ಕಡೆ. ಎರಡೂ ಚಂದ್ರನೆಂದದ್ದರಿಂದ ಮತ್ತೆ ಹೋಲಿಕೆಯಷ್ಟೇಯೋ? ಇಲ್ಲ, ಹೋಲಿಕೆ ತರಲಾಗದೆಂದೇ ಪ್ರತಿಪಾದಿಸಹೊರಟಿರುವುದು ಈಗ!

"ಕೃಷ್ಣನ ಆನನೇಂದುವಿಗೆ – ಎಂದರೆ ಮುಖ-ಚಂದ್ರನಿಗೆ - ಈ ಚಂದ್ರನು ನೀರಾಜನ ಮಾಡಲಷ್ಟೆ ಅರ್ಹ!" - ಎನ್ನುತ್ತಿದ್ದಾನೆ, ಲೀಲಾಶುಕ. ನೀರಾಜನವೆಂದರೆ ಮಂಗಳಾರತಿ. ಮಂಗಳಾರತಿ ಮಾಡುವುದೆಂದರೆ ಸಾಮಾನ್ಯವಾಗಿ  ಹಣತೆಯಿಂದಲ್ಲವೇ? ಹೌದು, ಈಗ ಚಂದ್ರನೇ ಒಂದು ದೀಪದಂತೆ; ಎಂದೇ ಶಶಿಯೇ ಒಂದು ಪ್ರದೀಪ - ಎಂದಿರುವುದು. ಚೆನ್ನಾಗಿ ಬೆಳಗುವ ದೀಪವೇ ಪ್ರದೀಪ.

ಏನೋ ನೆಪಕ್ಕೆ ನೀರಾಜನವೆಂದದ್ದಲ್ಲ. ನಿರ್ವ್ಯಾಜವಾಗಿ ಅರ್ಥಾತ್ ನಿಷ್ಕಪಟವಾಗಿ ಹೇಳುವುದಾದರೆ, ಚಂದ್ರನಿಗೆ ಇರುವ ಅರ್ಹತೆಯೆಂದರೆ ಅದೊಂದಕ್ಕೇ! – ಎನ್ನುತ್ತಾನೆ ಕವಿ.

ಮತ್ತು ಈ ಮಂಗಳಾರತಿಯಲ್ಲಿ ಒಂದು ವಿಶೇಷವೂ ಇದೆ. ಲೋಕಸಾಮಾನ್ಯವಾಗಿ ಮಾಡುವ ದೀಪದ ಮಂಗಳಾರತಿಯಲ್ಲಿ ಬಿಸಿಯುಂಟು: ದೀಪದಲ್ಲಿಯ  ಅಗ್ನಿಯಲ್ಲಿ ಉಷ್ಣತೆಯಿರದೇ? ತೀರ ಹತ್ತಿರದಿಂದ ನೋಡಿದರೆ ಕಣ್ಣಿಗಷ್ಟು ಹಿತವೂ ಅಲ್ಲ, ಅದು.

ಆದರೆ ಚಂದ್ರನೋ ಶೀತ-ರಶ್ಮಿ; ಆತನ ಕಿರಣಗಳು ಸದಾ ತಂಪೇ.

ಆದರೆ ಕೃಷ್ಣನ ಮುಖವಂತೂ, ಜಗತ್ತೆಲ್ಲವನ್ನೂ ತನ್ನ ಅಮೃತ-ಕಿರಣಗಳಿಂದ ಎಲ್ಲ ಚೇತನಾಚೇತನಗಳನ್ನು ಆಪ್ಲಾವಿಸಿ, ಎಂದರೆ ಮುಳುಗಿಸಿ, ಆಹ್ಲಾದಗೊಳಿಸುವಂತಹುದು. ಹಾಗಿರುವಾಗ, ಈ ಕೃಷ್ಣಮುಖಚಂದ್ರನ ಮುಂದೆ ಆಕಾಶಚಂದ್ರ ಎಲ್ಲಿಯ ಲೆಕ್ಕ?

ಹೋಲಿಕೆಯೆಂಬುದು ಸಲ್ಲುವುದು ಹೆಚ್ಚುಕಡಿಮೆ ಸಮಾನವಾಗಿರುವ ವ್ಯಕ್ತಿ/ವಸ್ತುಗಳ ನಡುವೆ ಮಾತ್ರವೇ.  ಇಲ್ಲಾವ ಸಮತ್ವ?

ಹೀಗಾಗಿ, ಕೃಷ್ಣನ ಆನನೇಂದುವಿಗೆ ಮಂಗಳಾರತಿ ಮಾಡುವುದಕ್ಕಷ್ಟೇ ಯೋಗ್ಯ, ಆಗಸದ ಚಂದ್ರ. ಒಳ್ಳೆಯ ಕರ್ಪೂರ-ದೀಪದಂತೆಯೂ ಆತ ಬೆಳಗುವನೆಂದರಾಯಿತು.

ಒಟ್ಟಿನಲ್ಲಿ, ದೃಷ್ಟಿ ನಿವಾಳಿಸಿ ಹೊರಬಿಸಾಕುತ್ತಾರಲ್ಲವೆ, ಅದಕ್ಕಷ್ಟೆ ಯೋಗ್ಯ, ಈ ಚಂದ್ರ!

ಕೃಷ್ಣನ ಮುಖ-ಚಂದ್ರಕ್ಕೆ ಎಣೆಯೆಂಬುದೊಂದುಂಟೇ? - ಎಂದು ಧ್ವನಿಮರ್ಯಾದೆಯಿಂದ ಹೀಗೆ ಹೇಳುತ್ತಿದ್ದಾನೆ, ಲೀಲಾಶುಕ.

ಶುಶ್ರೂಷಸೇ ಯದಿ ವಚಃ ಶೃಣು ಮಾಮಕೀನಂ /

ಪೂರ್ವೈರ್ ಅಪೂರ್ವ-ಕವಿಭಿರ್ ನ ಕಟಾಕ್ಷಿತಂ ಯತ್ |

ನೀರಾಜನ-ಕ್ರಮ-ಧುರಾಂ ಭವದಾನನೇಂದೋಃ /

ನಿರ್ವ್ಯಾಜಮ್ ಅರ್ಹತಿ ಚಿರಾಯ ಶಶಿ-ಪ್ರದೀಪಃ! ||

ಸೂಚನೆ : 17/1/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, January 12, 2026

ಪ್ರಶ್ನೋತ್ತರ ರತ್ನಮಾಲಿಕೆ 48 (Prasnottara Ratnamalike 48)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ - ೪೮ - ಅಂಧನು ಯಾರು ?

ಉ. ಪಾಪಕರ್ಮವನ್ನು ಪ್ರೀತಿಸುವವನು.

ಅಂಧ ಎಂದರೆ ಕುರುಡ. ಕಣ್ಣಿಗೆ ಕಾಣುವ ಶಕ್ತಿ ಇಲ್ಲದಿರುವವ. ಕಣ್ಣಿನ ರೆಪ್ಪೆ, ಕಣ್ಣಿನ ಗುಡ್ಡೆ, ಎಲ್ಲವೂ ಇದೆ. ಆದರೆ ಕಣ್ಣಿಗೆ ನೋಡುವ ಶಕ್ತಿ ಇಲ್ಲ. ಅದನ್ನು ಕಳೆದುಕೊಂಡಿದ್ದಾನೆ. ಹಾಗಾಗಿ ಅವನು 'ಅಂಧ' ಎಂದು ಕರೆಸಿಕೊಳ್ಳುತ್ತಾನೆ. ಇಲ್ಲಿ ಹೇಳುವ ಅಂಧನು ಕಣ್ಣು ಇಲ್ಲದವನಲ್ಲ. ಕಣ್ಣು ಇರಬಹುದು ಅಥವಾ ಇಲ್ಲದೇ ಇರಬಹುದು. ಆದರೂ ಅವನನ್ನು 'ಅಂಧ' ಎಂಬುದಾಗಿ ಹೇಳಬೇಕಾಗುತ್ತದೆ. ಅದು ಹೇಗೆ? ಎಂಬ ಪ್ರಶ್ನೆ ಇಲ್ಲಿದೆ. ಅದಕ್ಕೆ ಉತ್ತರ- "ಪಾಪಕರ್ಮವನ್ನು ಯಾರು ಪ್ರೀತಿಸುತ್ತಾನೋ ಅವನು". ಕಣ್ಣಿದ್ದೂ ಕುರುಡನಂತೆ ಎಂಬ ತಾತ್ಪರ್ಯ ಇಲ್ಲಿದೆ. ಪಾಪಕರ್ಮವನ್ನು ಪ್ರೀತಿಸುವುದರಿಂದ ಅವನು ಹೇಗೆ ಅಂಧನಾಗುತ್ತಾನೆ ಎಂಬುದನ್ನು ಇಲ್ಲಿ ಚಿಂತಿಸಬೇಕಾಗಿದೆ.

ಪಾಪ ಕರ್ಮ ಎಂದರೆ ಯಾವುದು ಪಾಪ ಫಲವನ್ನು ಕೊಡುತ್ತದೆಯೋ ಅದು. ಅದರ ಸ್ವರೂಪ ದುಃಖವನ್ನು ಉಂಟುಮಾಡುವುದು. ಕರ್ಮವು ಯಾವಾಗ ಮಾಡಲ್ಪಡುತ್ತದೆಯೋ ಅದೇ ಕಾಲದಲ್ಲಿ ಫಲವನ್ನು ನೀಡಬೇಕು ಎಂಬ ನಿಯಮವಿಲ್ಲ. ಮಾಡಿದ ಕರ್ಮವು ಕೆಲವೊಮ್ಮೆ ತತ್ಕಾಲದಲ್ಲಿ ಫಲವನ್ನು ಕೊಡಬಹುದು. ಇನ್ನು ಕೆಲವು ಸ್ವಲ್ಪ ವಿಳಂಬವಾಗಿ ಫಲವನ್ನು ಕೊಡಬಹುದು. ಇನ್ನು ಕೆಲವು ಕರ್ಮಗಳು ಜನ್ಮಾಂತರದಲ್ಲೂ ಫಲವನ್ನು ಕೊಡಬಹುದು ಎಂಬುದಾಗಿ ನಮ್ಮ ಕರ್ಮಸಿದ್ಧಾಂತ ಸಾರುತ್ತದೆ. ಇದಂತೂ ಸತ್ಯ, ಮಾಡಿದ ಕರ್ಮ ಫಲವನ್ನು ಕೊಟ್ಟೇಕೊಡುತ್ತದೆ ಎಂಬುದು ನಿಶ್ಚಿತ. ಹಾಗಾದರೆ ಅಧರ್ಮದ ಕಾರ್ಯವು ಅಂದರೆ ಪಾಪಕರ್ಮವು ಹೇಗೆ ಅಂಧತ್ವವನ್ನು ಕೊಡುತ್ತದೆ? ಅಂದರೆ ಅವನು ಕಣ್ಣನ್ನು ಕಳೆದುಕೊಳ್ಳುತ್ತಾನೆ; ಅವನಿಗೆ ನೋಡುವ ಶಕ್ತಿ ಕಳೆಯುತ್ತದೆಯೆ ಎಂಬ ಅರ್ಥ ಅಲ್ಲ. ಇಲ್ಲಿ ಅಂಧತ್ವ ಎಂದರೆ ಧರ್ಮವನ್ನು ಅರಿಯುವ ಸಾಮರ್ಥ್ಯ ಇಲ್ಲದಿರುವಿಕೆ ಎಂದರ್ಥ. ಪಾಪಕರ್ಮ ಎಂಬುದು ಅವನಿಗೆ ಧರ್ಮ ಮತ್ತು ಅಧರ್ಮ ಎಂಬ ವಿಷಯದ ವಿವೇಚನ ಶಕ್ತಿಯನ್ನು ಕಳೆಯುತ್ತದೆ. ಕಾರಣವಾಗಿ ಅವನು ಧರ್ಮಕಾರ್ಯವನ್ನು ಪ್ರೀತಿಸದೇ ಹೋಗಬಹುದು ಮತ್ತು ಅಧರ್ಮಕಾರ್ಯದಲ್ಲಿ ಉತ್ಸಾಹವು ಬರಬಹುದು. ಹೀಗೆ ಈ ಉತ್ಸಾಹವು ಅವನಿಗೆ ಧರ್ಮವನ್ನು ಮರೆಸುತ್ತದೆ. ಅದರ ಪರಿಣಾಮವಾಗಿ ಅವನು ಅಧರ್ಮವನ್ನೇ ಪ್ರೀತಿಸುವಂಥಾಗುತ್ತದೆ. ಕೊನೆಯಲ್ಲಿ ಅವನು ಧರ್ಮಕ್ಕೆ ವಿರೋಧಿಯಾಗುತ್ತಾನೆ. ಅವನು ಒಳ್ಳೆಯ ಕಾರ್ಯವನ್ನು ಅಂದರೆ ಯಾವುದು ಧರ್ಮವನ್ನು ಉಂಟುಮಾಡುತ್ತದೆಯೋ ಅಂತಹ ಕಾರ್ಯವನ್ನು ಅವನು ದ್ವೇಷಿಸುವ ಸ್ವಭಾವದವನಾಗುತ್ತಾನೆ. ಇದೇ ಅಂಧತ್ವದ ಸ್ವಭಾವ ಎಂಬುದಾಗಿ ತಿಳಿಯಬೇಕು. ಹಾಗಾಗಿ ಪಾಪಕರ್ಮವು ಧರ್ಮದ ಅಂಧತ್ವವನ್ನು ಉಂಟುಮಾಡುತ್ತದೆ. ಪುಣ್ಯಕರ್ಮವು ಧರ್ಮಕ್ಕೆ ಬೆಳಕನ್ನು ನೀಡುತ್ತದೆ ಎಂಬುದು ಇದರ ಆಶಯವಾಗಿದೆ.

ಧರ್ಮ ಎಂದರೆ ನಮ್ಮ ಮೂಲಸ್ವರೂಪ. ಅದನ್ನು ಮರೆಯುವಂತೆ. ಅದನ್ನು ಕಾಣದಂತೆ ಮಾಡುವ ಯಾವ ಕರ್ಮಗಳಿವೆಯೋ ಅವುಗಳನ್ನು 'ಪಾಪಕರ್ಮ' ಎಂಬುದಾಗಿ ಕರೆಯಲಾಗುತ್ತದೆ. ಪ್ರತಿಯೊಂದು ವಸ್ತುವೂ ಅದರ ಸ್ವರೂಪದಲ್ಲಿ ಇದ್ದರೆ, ಅದು 'ಧರ್ಮದಲ್ಲಿದೆ' ಎಂದರ್ಥ. ಅದು ಸ್ವರೂಪವನ್ನು ಕೆಡಿಸಿಕೊಂಡಿದೆ ಎಂದರೆ ಆ ಧರ್ಮಕ್ಕೆ ಚ್ಯುತಿ ಬಂದಿದೆ ಎಂದರ್ಥ. ಪಾಪಕರ್ಮವು ಈ ಧರ್ಮವನ್ನು ಮರೆಸುತ್ತದೆ. ವಸ್ತುತಃ 'ಯಾವುದು ಧರ್ಮ?' ಎಂದರೆ ಯಾವ ಕಾರ್ಯವು ಮೋಕ್ಷವನ್ನು ಉಂಟುಮಾಡುತ್ತದೆಯೋ, ಮೋಕ್ಷಕ್ಕೆ ಇರುವ ಪ್ರತಿಬಂಧಕವನ್ನು ನಿವೃತ್ತಿಗೊಳಿಸುತ್ತದೆಯೋ ಅದು. ಇದಕ್ಕೆ ವಿರುದ್ಧವಾದದ್ದು ಕುಕಾರ್ಯ ಅಥವಾ ಅಧರ್ಮ ಎಂಬುದಾಗಿ ಕರೆಸಿಕೊಳ್ಳುತ್ತದೆ. ಹಾಗಾಗಿ ಅತ್ಯಂತ ವಿಸ್ತಾರವಾದ ಈ ವಿಷಯವನ್ನು ಬಹಳ ಸಂಕ್ಷಿಪ್ತವಾಗಿ ಈ ಪ್ರಶ್ನೋತ್ತರರೂಪದಲ್ಲಿ ವಿವರಿಸಲಾಗಿದೆ. ಪಾಪಕರ್ಮವು ಧರ್ಮಕ್ಕೆ ವಿರೋಧಿಯಾಗಿ ಧರ್ಮವನ್ನು ಮರೆಯುವಂತೆ - ಕಾಣದಂತೆ ಮಾಡುವುದಕ್ಕಾಗಿ ಪಾಪಕರ್ಮವನ್ನು ಪ್ರೀತಿಸುವವನು ಅಂಧನೇ ಸರಿ ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.

ಸೂಚನೆ : 11/1/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ವ್ಯಾಸ ವೀಕ್ಷಿತ 170 ಅರ್ಜುನೋಕ್ತಿಗೆ ಕೃಷ್ಣನಿತ್ತ ಸಮ್ಮತಿ ( Vyaasa Vikshita 170)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ರಾಜಸೂಯವಿಷಯಕವಾಗಿ ಯುಧಿಷ್ಠಿರನು ತಾಳಿದ ನಿಲುವಿಗೆ ತನ್ನ ವಿಮತಿಯನ್ನು ತೋರುತ್ತಾ ಅರ್ಜುನನು ತನ್ನ ಮಾತನ್ನು ಹೀಗೆ ಮುಂದುವರಿಸಿದನು.

"ಬಲಯುಕ್ತನಾಗಿದ್ದರೂ ಪ್ರಮಾದಿಯಾಗಿದ್ದರೆ, ಎಂದರೆ ಕರ್ತವ್ಯದಲ್ಲಿ ಎಚ್ಚರವುಳ್ಳವನಾಗದಿದ್ದರೆ, ತನ್ನ ಉದ್ದೇಶ್ಯದಲ್ಲಿ ಸಫಲನಾಗನು.

ಎಚ್ಚರತಪ್ಪುವುದೆಂಬುದು ಒಂದು ರಂಧ್ರ, ಎಂದರೆ ದೋಷ; ಆ ರಂಧ್ರದಿಂದಾಗಿ, ಬಲಶಾಲಿಯಾದ ಶತ್ರುವೂ ಕ್ಷೀಣನಾಗುತ್ತಾನೆ. ಬಲಶಾಲಿಯಾದವನಲ್ಲಿ ಕೆಲವೊಮ್ಮೆ ತೋರುವ ದೀನತೆಯು ವಿನಾಶಕಾರಿ; ಅದು ಹೇಗೆ ವಿನಾಶಕಾರಿಯೋ, ಹಾಗೆಯೇ ವಿನಾಶಕಾರಿಯಾದದ್ದು, ಬಲಿಷ್ಠನಲ್ಲಿ ಕೆಲವೊಮ್ಮೆ ಉಂಟಾಗುವ ಮೋಹ. ಆದುದರಿಂದ ಜಯಾಪೇಕ್ಷಿಯಾದವನು ದೈನ್ಯ-ಮೋಹಗಳೆರಡನ್ನೂ ತೊರೆಯತಕ್ಕದ್ದು.

ಈಗ ಈ ರಾಜಸೂಯದ ಸನ್ನಿವೇಶದಲ್ಲಿ ಇವೆರಡು ಕೆಲಸಗಳು - ಜರಾಸಂಧನನ್ನು ಸಂಹಾರಮಾಡುವುದು, ಹಾಗೂ ಅವನಲ್ಲಿ ಬಂದಿಯಾಗಿರುವ ರಾಜರುಗಳನ್ನು ರಕ್ಷಿಸುವುದು –ಇವನ್ನು ನಾವು ಮಾಡುವುದಾದರೆ, ಅದಕ್ಕಿಂತಲೂ ಉತ್ತಮವಾದದ್ದು ಮತ್ತೇನಿದ್ದೀತು?

ಇತ್ತ ನಾವು ಯಜ್ಞವನ್ನು ಮಾಡಲೇ ಇಲ್ಲವೆಂದಾದರೆ, ನಮ್ಮಲ್ಲಿ ಆ ಗುಣ-ಸಾಮರ್ಥ್ಯಗಳು ಇಲ್ಲವೆಂಬುದೇ ಸಿದ್ಧವಾಗುವುದು! ಆವಶ್ಯಕವಾದ ಗುಣಗಳು ನಮ್ಮಲ್ಲಿ ನಿಃಸಂಶಯವಾಗಿಯೂ ಇರುವಾಗಲೂ, ಗುಣಗಳಿಲ್ಲವೆಂಬುದಾಗಿ ನೀನು ಭಾವಿಸುವುದಾದರೂ ಹೇಗೆ?

ಶಮವನ್ನು ಬಯಸುವ ಮುನಿಗಳ ಹಾಗೆ ಕಾಷಾಯವಸ್ತ್ರವನ್ನು ಮುಂದೆ ಧರಿಸುವುದು ಸುಲಭವೇ ಆಗಿದೆ. ಆದರೀಗ ಸಾಮ್ರಾಜ್ಯವೆಂಬುದು ನಮಗೆ ಶಕ್ಯವಾಗಿದೆ. ಹಾಗಾಗಿ ಶತ್ರುಗಳನ್ನು ಈಗ ನಾವು ಜಯಿಸುವುದೇ ಸರಿ" ಎಂದನು.

ಅರ್ಜುನನು ಹೀಗೆ ತನ್ನ ಮಾತನ್ನು ಮುಗಿಸಲಾಗಿ ಶ್ರೀಕೃಷ್ಣನು ಹೀಗೆ ನುಡಿದನು:

"ಭರತವಂಶದಲ್ಲಿ ಜನಿಸಿದವನಿಗೆ ಹಾಗೂ ಕುಂತಿಯ ಪುತ್ರನಾದವನಿಗೆ ಯಾವ ಮತಿಯು ಯುಕ್ತವಾದುದೋ ಅದನ್ನೇ ಅರ್ಜುನನೀಗ ಪ್ರದರ್ಶಿಸಿದ್ದಾನೆ.

ಯುಧಿಷ್ಠಿರಾ, ಮೃತ್ಯುವು ಯಾವಾಗ ಬರುವುದೆಂಬುದನ್ನು ನಾವರಿಯೆವು - ಅದು ರಾತ್ರಿ ಬರುವುದೋ ಹಗಲು ಬರುವುದೋ ಬಲ್ಲವರಾರು? ಯುದ್ಧ ಮಾಡದ ಮಾತ್ರಕ್ಕೆ ಅಮರತ್ವವು ಬಂದುಬಿಡುವುದೆ? ಹಾಗಾಗುವುದನ್ನು ನಾವೆಲ್ಲೂ ಕೇಳಿಲ್ಲ.

ಹೃದಯಕ್ಕೆ ಸಂತೋಷವುಂಟುಮಾಡುವಂತಹ ಕಾರ್ಯವಿದು; ಪುರುಷರಾದವರು ಮಾಡತಕ್ಕದ್ದೇ: ಏನೆಂದರೆ ಶತ್ರುವಿನ ಮೇಲೆ ಆಕ್ರಮಣಮಾಡುವುದು.

ನೀತಿಶಾಸ್ತ್ರಗಳಲ್ಲಿ ಸುನಯ ಮತ್ತು ಅನಪಾಯಗಳನ್ನು ಹೇಳಿದೆ. ಸುನಯ  ಎಂದರೆ ಒಳ್ಳೆಯ ನೀತಿ; ಅನಪಾಯ - ಎಂದರೆ ತೊಂದರೆಗಳಿಲ್ಲದಂತೆ ವ್ಯವಸ್ಥೆ ಮಾಡಿರುವಿಕೆ. ಇವುಗಳ ಸಂಯೋಗವಾದಲ್ಲಿ ಅದುವೇ ಪರಮ-ಕ್ರಮವಾಗುವುದು, ಎಂದರೆ ಶ್ರೇಷ್ಠವಾದ ಕ್ರಮವೇ ಆಗುವುದು.

ಒಬ್ಬ ರಾಜನು ಮತ್ತೊಬ್ಬ ರಾಜನೊಂದಿಗೆ ಎದುರೆದುರಾದಾಗಲೇ ಪರಸ್ಪರ ಅಸಾಮ್ಯವು ತಿಳಿದುಬರುವುದು: ಯಾರಿಬ್ಬರು ಅರಸರೂ ಸರ್ವ-ರೀತಿಗಳಿಂದಲೂ ಸಮರಾಗಿರರು. ಯಾವನು ನಯವನ್ನೂ ಉಪಾಯವನ್ನೂ ಎರಡನ್ನೂ ಕಡೆಗಾಣಿಸುವನೋ ಅಂತಹವನಿಗೆ ಸೆಣಸಿನಲ್ಲಿ ಸಂಪೂರ್ಣ-ವಿನಾಶವೆಂಬುದು ಸಿದ್ಧವಾದದ್ದೇ ಸರಿ. ಆದರೆ ಇಬ್ಬರು ವೈರಿಗಳಲ್ಲೂ ಒಂದು ವೇಳೆ ಸಾಮ್ಯವೇ ಆಗಿಬಿಟ್ಟಿದ್ದಲ್ಲಿ ಸಂಶಯವೇ ಉಂಟಾಗುತ್ತದೆ: ಇಬ್ಬರಿಗೂ ಗೆಲುವೆಂದಾಗದಲ್ಲವೇ?

ನಾವಿದೋ ನಯದಲ್ಲಿ ನೆಲೆನಿಂತು ಶತ್ರುವಿನ ಸಮೀಪಕ್ಕೆ ಹೋಗತಕ್ಕವರು. ಹಾಗಿರುವಾಗ ನಾವೆಂತು ಲಕ್ಷ್ಯವನ್ನು ಸಾಧಿಸುವುದಿಲ್ಲ? ನದೀ-ವೇಗವು ಮರವನ್ನು ಉರುಳಿಸಿಕೊಂಡು ಹೋಗುವಂತೆ ಇದು. ಪರ-ರಂಧ್ರದ ಮೇಲೇ,  ಎಂದರೆ ಶತ್ರುವಿನಲ್ಲಿನ ನ್ಯೂನತೆಗಳನ್ನು ಹಿಡಿದೇ, ನಾವು ಆಕ್ರಮಣ ಮಾಡತಕ್ಕವರು; ಅಲ್ಲದೆ, ಸ್ವ-ರಂಧ್ರಗಳನ್ನು - ಎಂದರೆ ನಮ್ಮಲ್ಲಿಯ ದೋಷ/ನ್ಯೂನತೆಗಳನ್ನು, ಅನ್ಯರಿಗೆ ತಿಳಿಯದಂತೆ ಗೋಪ್ಯವಾಗಿಯೇ ಇಟ್ಟಿರತಕ್ಕವರು.

ಯಾವ ಶತ್ರುವು ಅತಿಬಲಶಾಲಿಯಾಗಿರುವನೋ, ಜೊತೆಗೆ ಸೈನ್ಯವನ್ನು ಸಜ್ಜುಗೊಳ್ಳಿಸಿಕೊಂಡೇ ನಿಂತಿರುವನೋ, ಅಂತಹ ಅರಿಯೊಂದಿಗೆ ಯುದ್ಧವನ್ನು ಮಾಡಲೇಕೂಡದು. ಇದುವೇ ಬುದ್ಧಿಶಾಲಿಗಳ ನೀತಿಯಾದುದು. ಆ ಮತವು ನನಗೂ ಸಂಮತವೇ." – ಎಂದನು.

ಸೂಚನೆ : 11/1/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಅಷ್ಟಾಕ್ಷರೀ 97 ಅಂಧೇನೇವ ನೀಯಮಾನಾಃ (Astakshara 97)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



"ನಾನು ಸಾಯಬಾರದು" ಎಂಬ ಪ್ರವೃತ್ತಿ ಯಾರಿಗೆ ತಾನು ಇರುವುದಿಲ್ಲ? ಖೇದಾತಿರೇಕವಾದಾಗ ಸಾಯಬೇಕೆನಿಸುವುದೋ, ಸತ್ತರೇ ವಾಸಿಯೆಂದು ತೋರುವುದೋ, ಆದೀತು. ಆದರೆ ಬುದ್ಧಿ ನೆಟ್ಟಗಿರುವವರು ಯಾರೂ ಸಾಯಬಯಸರು. ಮನುಷ್ಯರಿಗೇನು, ಪ್ರಾಣಿಗಳಿಗೂ ಸಹ ತಮ್ಮ ಪ್ರಾಣವೆಂದರೆ ಪರಮವೇ. ಪ್ರಾಣಕಳೆದುಕೊಳ್ಳಲು ಯಾವ ಪ್ರಾಣಿ ತಾನೆ ಬಯಸೀತು? ತನ್ನನ್ನು ತಾನುಳಿಸಿಕೊಳ್ಳಲೇ ಸದಾ ಸರ್ವಪ್ರಯತ್ನಗಳೂ. 

ಪ್ರಾಣಿಗಳ ವಿಷಯ ಬಿಟ್ಟು ಮನುಷ್ಯರ ಲೆಕ್ಕಕ್ಕೇ ಬರೋಣ. "ಸಾವು ಬೇಡ" - ಎಂದರೆ "ಬದುಕು ಬೇಕು" - ಎಂದೇ. ಆದರೆ "ಬದುಕಬೇಕೇಕೆ?" – ಎಂಬ ಪ್ರಶ್ನೆಯೂ ಜೊತೆಗೇ ಬರುವಂತಹುದೇ ತಾನೆ? "ಸ್ವ-ಪರೀಕ್ಷೆಯನ್ನು ಮಾಡಿಕೊಳ್ಳದ ಬದುಕು ಯೋಗ್ಯವಾದ ಬದುಕಲ್ಲ" – ಎಂದು ಸಾಕ್ರೆಟೀಸನೂ ಹೇಳಿರುವನಲ್ಲವೇ?  

ಬಹುಮಂದಿಗೆ ಈ ಪ್ರಶ್ನೆಗಳೇ ಕ್ಲಿಷ್ಟ, ಗೊಂದಲಮಯ. ಇದಕ್ಕೆಲ್ಲಾ ಏಕೆ ತಲೆಕೆಡಿಸಿಕೊಳ್ಳಬೇಕು? ಎಲ್ಲರಂತೆ ಇದ್ದರಾಯಿತು – ಎಂದುಕೊಳ್ಳುವವರೇ ಹೆಚ್ಚು.

ಎಂದೇ ಬಹುಮಂದಿಯ ಬದುಕು, ತಾ ಸತ್ತಿಲ್ಲದಿರುವಿಕೆಯಷ್ಟನ್ನೇ ಹೇಳುವಂತಹುದು! ಜೀವನದಲ್ಲಿ ಏನೋ ಸಾಧಿಸಿದೆವು - ಎನ್ನಿಸಬೇಕಾದರೆ, ಸರಿಯಾದವರ ಮಾರ್ಗದರ್ಶನ ಬೇಕು. ನಿಜ, ಎಮರ್ಸನ್ ಹೇಳುವಂತೆ, ನಮಗೆ ಪ್ರತಿ ಹೆಜ್ಜೆಯಲ್ಲೂ ದಾರಿತೋರಿಸಿಕೊಡುವವರೊಬ್ಬರು ದೊರೆತುಬಿಟ್ಟರೆ ಜೀವನವೇ ಸುಗಮವಾಗಿಬಿಡುತ್ತದೆ!

ನಾವು ಪ್ರಯಾಣಿಸಬೇಕಾದ ದಾರಿಯೇನು, ತಲುಪಬೇಕಾದ ಗುರಿಯೇನು, ಸಾಗುವ ಪರಿಯೇನು, ಹಾದಿಯಲ್ಲಿ ಬರುವ ಅಡ್ಡಿಗಳೇನು, ಅವನ್ನು ಪರಿಹರಿಸಿಕೊಳ್ಳುವ ಬಗೆಯೇನು? – ಇವಕ್ಕೆಲ್ಲ ಮಾರ್ಗದರ್ಶಿಯೊಬ್ಬರಿದ್ದಲ್ಲಿ ಎಲ್ಲವೂ ಸುಕರವೇ ಸರಿ!

ಆದರೆ ನಮ್ಮ ದುರದೃಷ್ಟದಿಂದ ತಪ್ಪುದಾರಿ ತೋರಿಸುವವರಾಗಿಬಿಟ್ಟರೆ ಏನು ಗತಿ? - ಎಂದೂ ಯೋಚನೆಗಿಟ್ಟುಕೊಳ್ಳುತ್ತದೆ: ಇಂದು ಸ್ವ-ಘೋಷಿತ ಬಾಬಾಗಳೋ ಪವಾಡ-ದರ್ಶಕರೋ ಅದೆಷ್ಟೊಂದು ಮಂದಿ ಕಂಡುಬರುತ್ತಾರೆ! ಇವರಲ್ಲಿ ಯಾರು ಸರಿ, ಯಾರಲ್ಲ? - ಹೇಳುವುದೆಂತು? ಕೇವಲ ಪುಸ್ತಕ-ಜ್ಞಾನವನ್ನೋ ವಾಕ್-ಚಾತುರ್ಯವನ್ನೋ ಬಂಡವಾಳಮಾಡಿಕೊಂಡು ಇತರರಿಗೆ  ಉಪದೇಶಮಾಡುವವರಾಗಿಬಿಟ್ಟರೆ ಆಯಿತೇ?

ಬೈಬಲ್ಲಿನಲ್ಲೊಂದು ಮಾತಿದೆ: "ಕುರುಡರು ಕುರುಡರಿಗೆ ದಾರಿ ತೋರುವವರಾದರೆ ಇಬ್ಬರೂ ಹಳ್ಳಕ್ಕೆ ಬೀಳುವರೇ!" - ಎಂದು. ಅಜ್ಞಾನಿಗಳು ಅಜ್ಞಾನಿಗಳಿಗೆ ಏನು ಮಾರ್ಗದರ್ಶನವಿತ್ತಾರು? – ಎಂಬುದು ಅದರ ತಾತ್ಪರ್ಯ.

ಕುರುಡರಿಗೆ ಕುರುಡರದ್ದೇ ನಾಯಕತ್ವವೆಂಬ  ಘೋರಸ್ಥಿತಿಯ  ಬಗೆಗಿನ ಈ ಮಾತು ಮಾರ್ಮಿಕವಾದುದು. ಆದರೆ ಇದು ಬಂದಿರುವುದು ಬೈಬಲ್ಲಿನಲ್ಲಿ ಮಾತ್ರವೇ, ಅಥವಾ ಮತ್ತೆಲ್ಲಾದರೂ ಬಂದಿದೆಯೇ? – ಎಂಬ ಕುತುಕವೂ ಉಂಟಾಗುತ್ತದೆಯಲ್ಲವೇ?

ವಾಸ್ತವವಾಗಿ, ಕ್ರಿಸ್ತನು ಹುಟ್ಟುವದಕ್ಕಿಂತಲೂ ಮೊದಲೇ ಈ ಮಾತು ಬಂದಿದೆ!  ಬೌದ್ಧ-ಗ್ರಂಥವಾದ "ಮಜ್ಝಿಮನಿಕಾಯ"ದ "ಚಂಕೀಸುತ್ತ"ದಲ್ಲಿ. ಬುದ್ಧನ ಮಾತಿನಲ್ಲಿ ಇನ್ನೂ ವಿಶದವಾಗಿಯೇ ಬಂದಿದೆ!

"ಸಾಲಾಗಿ ಹೋಗುತ್ತಿರುವ ಕುರುಡರಲ್ಲಿ ಮೊದಲಿಗನಿಗೂ ಕಣ್ಣು ಕಾಣದು, ಮಧ್ಯದಲ್ಲಿರುವವನಿಗೂ ಕಾಣದು, ಕೊನೆಯಲ್ಲಿರುವವನಿಗೂ ಕಾಣದು - ಎಂದಾದರೆ, ಒಬ್ಬರನ್ನೊಬ್ಬರು ಸ್ಪರ್ಶಿಸಿಕೊಂಡೇ ಹೋಗುತ್ತಿದ್ದ ಮಾತ್ರಕ್ಕೇ ಪ್ರಯೋಜನವೇನು?" – ಎಂಬುದು ಬುದ್ಧನ ಪ್ರಶ್ನೆ.

ಈ ಉಪಮಾನದ ಮೂಲವನ್ನು ಅರಸಿ ಮತ್ತೂ ಹಿಂದಕ್ಕೆ ಹೋದೆವೆಂದರೆ, ವಿಶ್ವದಲ್ಲೇ ಮೊಟ್ಟಮೊದಲು ಅದು ದೊರೆಯುವುದು ಉಪನಿಷತ್-ಸಾಹಿತ್ಯದಲ್ಲಿ! ಕಠೋಪನಿಷತ್ತಿನಲ್ಲಿ ಯಮ-ನಚಿಕೇತರ ಸಂವಾದವಿದೆಯಲ್ಲವೇ? ಅಲ್ಲಿ ಶ್ರೇಯಸ್ಸು-ಪ್ರೇಯಸ್ಸುಗಳನ್ನು ಯಮನು ವಿವರಿಸುವ ಪ್ರಸಂಗದಲ್ಲೇ ಇದನ್ನು ಮೊಟ್ಟಮೊದಲು ಬಳಸಿರುವುದು. 

ಅಲ್ಲಿ ಯಮನ ನುಡಿಯಿಂತು: "ಅವಿದ್ಯೆಯಲ್ಲೇ ತಾವಿದ್ದುಕೊಂಡು, ತಮ್ಮನ್ನೇ ಪಂಡಿತರೆಂದುಕೊಂಡುಬಿಡುವವರುಂಟು. ಅಂತಹವರು ಅಂಧರಿಂದ ಒಯ್ಯಲ್ಪಡುವ ಅಂಧರ ಹಾಗೆ! "ಅಂಧೇನೇವ ನೀಯಮಾನಾ [ಯಥಾಂಧಾಃ]". ಆದರೂ ತಾವೇ ಧೀರರೆಂಬುದಾಗಿ ವರ್ತಿಸುವರು! ಭ್ರಮೆಗೊಳಗಾದ ಮೂಢರಾಗಿ ಲೋಕದಲ್ಲಿ ಅಲೆಯುತ್ತಿರುವರು!" ಎಲ್ಲರನ್ನೂ ಎಚ್ಚರಿಸುವ ಮಾತಿದು! 

ಇದೇ ಉಪಮಾನವನ್ನು ಶ್ರೀರಂಗಮಹಾಗುರುಗಳು ಸ್ವಲ್ಪ ಬೇರೆಯೇ ರೀತಿಯಲ್ಲಿ ಬಳಸಿರುವರು. ಒಬ್ಬ ಸದ್ಗುರುವಿನ ನಡೆಯೆಂತಿರುವುದು? – ಎಂಬುದನ್ನು ಈ ಪರಿಯಲ್ಲಿ ಅರುಹಿರುವರು: "ಒಬ್ಬ ಕುರುಡನು ಮತ್ತೊಬ್ಬ ಕುರುಡನನ್ನು ಕರೆದೊಯ್ಯಲಾರನಷ್ಟೆ? ಅಂಧಕಾರದಲ್ಲಿ ಅಲೆಯುತ್ತಿರುವವರನ್ನು ಬೆಳಕಿಗೆ ಕರೆದೊಯ್ಯುವವನು ಗುರು. ಒಳಬೆಳಕನ್ನು ಕಂಡುಕೊಂಡವನೇ ಕಣ್ಣುಕಾಣುವ ಜ್ಞಾನಿ; ಭುವಿಯಲ್ಲಿ ಓಡಾಡುವ ಜೀವಿಯ ಗತಿಯನ್ನು ಅರಿತುಕೊಂಡು, ಆತನನ್ನು ದಿವಿಗೆ ಒಯ್ಯಬೇಕಾಗಿದೆ. ಅಂತರ್ದೃಷ್ಟಿಯನ್ನು ತಾ ಹೊಂದಿದವನಾಗಿ, ಅದಿಲ್ಲದವನನ್ನು ತಾನೊಯ್ಯಬೇಕು.ಇದುವೇ ಗುರು-ಕಾರ್ಯ."

ಉತ್ತಮವಾದ  ಉಪನಿಷದುಪಮಾನವನ್ನು  "ದುರ್ಗತಿಗೀಡಾಗುವುದರ ಬಗ್ಗೆ ಎಚ್ಚರಿಕೆ"ಗಾಗಿಯೇ ಬೇರೆಯವರೆಲ್ಲಾ ಬಳಸಿರುವರಷ್ಟೆ? ಆದರೆ, ಇದನ್ನೇ ಒಂದು ವ್ಯತಿರೇಕ-ದೃಷ್ಟಾಂತವಾಗಿ ಶ್ರೀರಂಗಮಹಾಗುರುಗಳು ಬಳಸಿದ್ದಾರೆ: ಸ್ವ-ತಪಸ್ಸಿನಿಂದ ಒಳಗಣ್ಣು ತೆರೆದುಕೊಂಡಿರುವ ಜ್ಞಾನಿ-ಗುರುವು, ಹೇಗೆ ಶಿಷ್ಯರ ಒಳಗಣ್ಣನ್ನು ತೆರೆಯಿಸಿ ಸದ್ಗತಿಗೊಯ್ಯುವನು? - ಎಂಬುದನ್ನು ತಿಳಿಸುವ ಸಲುವಾಗಿ. 

ಹೀಗೆ ಈ ಯೋಗಿವರ್ಯರು ಸುಮಾರ್ಗ-ಬೋಧನೆಗಾಗಿ, ಗುರುವಿನ ಗುರುತರ ಜವಾಬ್ದಾರಿಯ ನಿದರ್ಶನಕ್ಕಾಗಿ, ಇದೇ ದೃಷ್ಟಾಂತವನ್ನು ಬಳಸಿರುವ ಬಗೆಯಲ್ಲೇ ಒಂದು ವಿಶಿಷ್ಟವಾದ ಔಚಿತ್ಯವಿದೆಯಲ್ಲವೇ?


ಸೂಚನೆ: 10/1//2026 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

Sunday, January 4, 2026

ವ್ಯಾಸ ವೀಕ್ಷಿತ 169 ಜರಾಸಂಧಪ್ರಶ್ನೆ: ಯುಧಿಷ್ಠಿರ-ಮತಕ್ಕೆ ಪ್ರತಿಯಾಗಿ ಅರ್ಜುನ-ಚಿಂತನ ( Vyaasa Vikshita 169)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ಈಗಾಗಲೇ ಎಂಭತ್ತಾರು ರಾಜರುಗಳನ್ನು ಆತನು ಕೈದಿಗಳನ್ನಾಗಿ ಮಾಡಿಕೊಂಡಿರುವನು. ಇನ್ನು ಹದಿನಾಲ್ಕು ಮಂದಿಯನ್ನು ಸೇರಿಸಬೇಕಾದುದಷ್ಟೇ ಉಳಿದಿರುವುದು. ಅವರನ್ನು ಬಂದಿಗಳನ್ನಾಗಿಸಿ ಆತನು ತನ್ನ ಕ್ರೂರಕರ್ಮದಲ್ಲಿ ತೊಡಗುತ್ತಾನೆ. (ಸೆರೆಯಾಳುಗಳನ್ನು "ಬಂದಿ"ಯೆನ್ನಬೇಕು, "ಬಂಧಿ"ಯೆಂದಲ್ಲ: ಅಲ್ಲಿರುವುದು ಅಲ್ಪಪ್ರಾಣ, ಮಹಾಪ್ರಾಣವಲ್ಲ. ಅದು ಸಂಸ್ಕೃತಪದ.)

ಜರಾಸಂಧನು ಮಾಡುತ್ತಿರುವ ಈ ಕುಕೃತ್ಯಕ್ಕೆ ಯಾರು ಅಡ್ಡಿಯನ್ನೊಡ್ಡುವರೋ ಅಂತಹವರಿಗೆ ಉಜ್ಜ್ವಲವಾದ ಯಶಸ್ಸು ಪ್ರಾಪ್ತವಾಗುವುದು: ಯಾವನು ಜರಾಸಂಧನನ್ನು ಜಯಿಸುವನೋ ಆತನು ನಿಶ್ಚಯವಾಗಿಯೂ ಸಮ್ರಾಟ್ ಆಗುವುದರಲ್ಲಿ ಸಂಶಯವಿಲ್ಲ" - ಹೀಗೆಂಬುದಾಗಿ ಶ್ರೀಕೃಷ್ಣನು ನುಡಿದನು. 

ಆಗ ಯುಧಿಷ್ಠಿರನು ಹೇಳಿದನು:

"ಸಮ್ರಾಟನ ಗುಣವನ್ನು ಹೊಂದುವ ಬಯಕೆ ನನಗುಂಟು; ಹಾಗಿದ್ದು, ಸ್ವಾರ್ಥ-ಪರಾಯಣನಾಗಿ, ಅದು ಹೇಗೆ ತಾನೆ ನಾನು ಜರಾಸಂಧನತ್ತ ನಿಮ್ಮೆಲ್ಲರನ್ನೂ ಕಳುಹಿಸಲಿ? ಅದು ಕೇವಲ ಸಾಹಸವಲ್ಲವೇ? - ಎಂದರೆ ಅವಿವೇಕಿಯ ದುಡುಕಿನಂತಾಗುವುದಿಲ್ಲವೇ?

ಭೀಮ ಮತ್ತು ಅರ್ಜುನ - ಇವರಿಬ್ಬರೂ ನನ್ನ ಕಣ್ಣುಗಳ ಹಾಗೆ; ಜನಾರ್ದನನಂತೂ ನನ್ನ ಮನಸ್ಸೇ ಸರಿ. ಮನಸ್ಸನ್ನೂ ಕಣ್ಣುಗಳನ್ನೂ ಕಳೆದುಕೊಂಡವನ ಜೀವನವಾದರೂ ಹೇಗೆ ತಾನೆ ಆದೀತು?

ಜರಾಸಂಧನ ಸೈನ್ಯವು ದುಷ್ಪಾರ, ಎಂದರೆ ಅದರ ಆಚೆಯ ದಡವನ್ನು ಕಾಣುವುದೇ ಅಸಾಧ್ಯ- ಅಷ್ಟು ದೊಡ್ಡದು. ಹಾಗೂ ಅದು ಭಯಂಕರವಾದ ಪರಾಕ್ರಮವನ್ನು ಹೊಂದಿರುವಂತಹುದು. ಆತನನ್ನು, ಮತ್ತು ಆತನ ಸೇನೆಯನ್ನು, ಯುದ್ಧದಲ್ಲಿ ಯಮನು ಸಹ ಜಯಿಸಲಾರನು. ಇನ್ನು ತಮ್ಮಗಳ ಪ್ರಯತ್ನವು ಅಲ್ಲೇನು ಸಂದೀತು?

ದೊಡ್ಡದಾದ ಈ ಅರ್ಥವನ್ನೇನೋ ಸಾಧಿಸಹೋಗಿ, ಅನರ್ಥಕ್ಕೆ ಈಡುಮಾಡಿಕೊಂಡಂತೆ ಆಗುತ್ತದೆ. ಅದುದರಿಂದ ಈ ಕಾರ್ಯಕ್ಕೆ ಕೈಹಾಕುವುದೇ ಯುಕ್ತವಲ್ಲವೆಂಬುದೇ ನನ್ನ ಮತವಾಗಿದೆ.

ಈ ವಿಷಯದಲ್ಲಿ ಒಂಟಿಯಾಗಿ ವಿಮರ್ಶೆ ಮಾಡಿರುವುದನ್ನು ಹೇಳುವೆ, ಕೇಳು ಜನಾರ್ದನ. ಈ ಕಾರ್ಯದ ಸಂನ್ಯಾಸವನ್ನೇ, ಎಂದರೆ ತೊರೆಯುವಿಕೆಯನ್ನೇ, ನಾನು ಇಷ್ಟಪಡುವೆ. ರಾಜಸೂಯವೆಂಬುದು ದುರಾಹರ, ಎಂದರೆ ಸಾಧಿಸಿತಂದುಕೊಳ್ಳಲು ಮಹಾಕಷ್ಟವಾಗತಕ್ಕದ್ದು. ಆದುದರಿಂದ ಇದು ನನ್ನ ಮನಸ್ಸಿಗೆ ಪ್ರತಿಘಾತವನ್ನೇ ಮಾಡುತ್ತಿದೆ." ಎಂದನು.

ಯುಧಿಷ್ಠಿರನ ಮಾತು ಮುಗಿಯುತ್ತಿದ್ದಂತೆಯೇ, ಅರ್ಜುನನು ಮಾತನಾಡಿದನು. ಆತನೋ, ಶ್ರೇಷ್ಠವಾದ ಬಿಲ್ಲನ್ನೂ, ಎಂದರೆ ಗಾಂಡೀವವನ್ನೂ, ಅಕ್ಷಯವಾದ ತೂಣೀರ(ಬತ್ತಳಿಕೆ)ವನ್ನೂ, ದಿವ್ಯವಾದ ರಥ-ಧ್ವಜ-ಸಭೆಗಳನ್ನೂ ಹೊಂದಿದ್ದವನು. ಅಂತಹವನು ಯುಧಿಷ್ಠಿರನನ್ನು ಕುರಿತು ಹೀಗೆ ನುಡಿದನು.

ಅರ್ಜುನನು ಹೇಳಿದನು:

"(ಗಾಂಡೀವ)ಧನುಸ್ಸು, ವಿಶೇಷವಾದ ಶಸ್ತ್ರ-ಬಾಣಗಳು, ಜೊತೆಗಾರರಾದ ಅರಸರು, ಭೂಮಿ, ಯಶಸ್ಸು ಹಾಗೂ ಬಲ - ಇವೆಲ್ಲವೂ ಅಭೀಪ್ಸಿತವಾದವು, ಎಂದರೆ ಬಯಸುವಂತಹವು, ಆದರೆ ಅವು ದುಷ್ಪ್ರಾಪ, ಎಂದರೆ ಹೊಂದಲು ಸುಲಭವಾದವುಗಳಲ್ಲ. ಆದರೆ ಅವೆಲ್ಲವನ್ನೂ ನಾನು ಸಂಪಾದಿಸಿದ್ದೇನೆ.

ಅನುಭವಸಂಪನ್ನರಾದ ವಿದ್ವಾಂಸರು ಸತ್ಕುಲದಲ್ಲಿ ಜನಿಸುವುದನ್ನು ಪ್ರಶಂಸಿಸುತ್ತಾರೆ. ಆದರೆ ಬಲಕ್ಕೆ ಸಮಾನವಾದುದು ಯಾವುದೂ ಇಲ್ಲ. ನನಗೆ ಮೆಚ್ಚುಗೆಯಾಗುವುದು ಪರಾಕ್ರಮವೇ. ಕೃತವೀರ್ಯರಾಜನ ವಂಶದಲ್ಲಿ ಹುಟ್ಟಿಯೂ ಯಾವನು ಬಲಹೀನನೋ ಅಂತಹವನು ಏನನ್ನು ತಾನೆ ಸಾಧಿಸಿಯಾನು? ನಿರ್ವೀರ್ಯವಾದ ಕುಲದಲ್ಲಿ ಜನಿಸಿಯೂ ಯಾವನು ಪರಾಕ್ರಮಿಯಾಗಿರುತ್ತಾನೋ, ಅವನಲ್ಲೇ ವಿಶೇಷವಿರುವುದು.

ಶತ್ರುಜಯದಲ್ಲಿ ಯಾವನಿಗೆ ಸಹಜಪ್ರವೃತ್ತಿಯಿರುವುದೋ ಆತನೇ ಸರ್ವರೀತಿಯಲ್ಲೂ ಕ್ಷತ್ರಿಯನೆನಿಸುವುದು. ಬೇರೆ ಗುಣಗಳು ಯಾವುದೇ ಇಲ್ಲದಿದ್ದರೂ ಪರಾಕ್ರಮಶಾಲಿಯೇ ರಿಪುಗಳನ್ನು ದಮಿಸಲು ಸಮರ್ಥನಾಗುತ್ತಾನೆ. ಸರ್ವಗುಣಗಳಿಂದಲೂ ಕೂಡಿದವನಾಗಿದ್ದರೂ ಪರಾಕ್ರಮರಹಿತನು ಏನನ್ನು ತಾನೆ ಮಾಡಿಯಾನು? ಎಲ್ಲ ಗುಣಗಳೂ ಪರಾಕ್ರಮಕ್ಕೆ ಗುಣಭೂತವಾಗಿ, ಎಂದರೆ ಗೌಣವಾಗಿ, ನಿಲ್ಲತಕ್ಕವು" - ಎಂದನು. 

ಸೂಚನೆ : 4
/1/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.  

ಪ್ರಶ್ನೋತ್ತರ ರತ್ನಮಾಲಿಕೆ 47 (Prasnottara Ratnamalike 47)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ - ೪೭ - ಎಲ್ಲಿ ನಿಲ್ಲಬೇಕು ?

ಉ. ದೃಷ್ಟ ಮತ್ತು ಅದೃಷ್ಟದ ಲಾಭವನ್ನು ಕೊಡುವ ನ್ಯಾಯವಾದ ಮಾರ್ಗದಲ್ಲಿ.

ಈ ಜೀವನದಲ್ಲಿ ಅಂದರೆ ಈ ಜನ್ಮದಲ್ಲಿ ನಾವು ಅತ್ಯಂತ ಪ್ರಧಾನವಾಗಿ ಐಹಿಕ ಲಾಭ ಮತ್ತು ಪಾರಮಾರ್ಥಿಕ ಲಾಭ ಎಂಬ ಎರಡು ವಿಧವಾದ ಲಾಭವನ್ನು ಪಡೆಯುತ್ತೇವೆ. ಇದನ್ನೇ ದೃಷ್ಟಲಾಭ ಮತ್ತು ಅದೃಷ್ಟಲಾಭ ಎಂಬುದಾಗಿ ಕರೆಯುತ್ತೇವೆ. ಯಾವ ಕಾರ್ಯದಿಂದ ಸದ್ಯದಲ್ಲೇ ಅದರ ಫಲವನ್ನು ಅನುಭವಿಸುವಂಥಾಗುತ್ತದೆಯೋ, ಅದನ್ನು 'ದೃಷ್ಟಲಾಭ' ಎಂದು ಕರೆಯಬಹುದು. ಮತ್ತು ಯಾವ ಕಾರ್ಯವನ್ನು ಮಾಡಿದರೆ ಅದು ಯಾವುದೋ ಕಾಲದಲ್ಲಿ ಅಂದರೆ ಜನ್ಮ ಜನ್ಮಾಂತರದಲ್ಲಿ ಆ ಲಾಭವನ್ನು ಕೊಡುವಂತಾದರೆ ಅದಕ್ಕೆ 'ಅದೃಷ್ಟಲಾಭ' ಎಂದು ಕರೆಯುತ್ತಾರೆ. ಹೀಗೆ ಎರಡು ವಿಧವಾದ ಲಾಭವನ್ನು ಪಡೆಯಬೇಕಾದರೆ ನಾವು ಸಾಗುವ ಮಾರ್ಗ ಹೇಗಿರಬೇಕು? ಅದು ಯಾವುದಾಗಿರಬೇಕು? ಎಂಬುದನ್ನು ಇಲ್ಲಿ ಪ್ರಶ್ನಿಸಲಾಗಿದೆ. ಯಾವ ಮಾರ್ಗದಲ್ಲಿ ಇದ್ದರೆ ಈ ದೃಷ್ಟ ಮತ್ತು ಅದೃಷ್ಟ ಎಂಬ ಲಾಭವು ಉಂಟಾಗುತ್ತದೆ ಎಂಬ ಪ್ರಶ್ನೆ ಇಲ್ಲಿದೆ. ಅದಕ್ಕೆ ಉತ್ತರವಾಗಿ ನ್ಯಾಯವಾದ ಮಾರ್ಗದಲ್ಲಿ ನಡೆದರೆ ಅದರಿಂದ ಸಿಗುವ ಯಾವ ಲಾಭ ಉಂಟೋ ಅದು ದೃಷ್ಟವೂ ಆಗಿರಬಹುದು, ಅಥವಾ ಅದೃಷ್ಟವು ಆಗಿರಬಹುದು. ಅವೆರಡು ನಮ್ಮ ಜೀವನವನ್ನು ಉತ್ತುಂಗದತ್ತ ಸಾಗಿಸುವ ಮಾರ್ಗಗಳಾಗಿವೆ ಎಂಬುದನ್ನು ನಾವು ಇಲ್ಲಿ ಅರಿಯಬೇಕಾಗಿದೆ. ಹಾಗಾದರೆ ಈ ವಿಷಯವನ್ನು ಇನ್ನೂ ಸ್ವಲ್ಪ ವಿಸ್ತಾರವಾಗಿ ಚಿಂತಿಸಬೇಕಾಗಿದೆ. ಯಾವ ಮಾರ್ಗವು ಎರಡನ್ನು ಕೊಡುವಂತಹದ್ದು? ಎಂಬುದು ಇಲ್ಲಿ ಚರ್ಚಿಸಬೇಕಾದ ವಿಷಯ.

 ಧರ್ಮಮಾರ್ಗ ಅಥವಾ ನ್ಯಾಯಮಾರ್ಗವು ನಮಗೆ ಈ ಫಲವನ್ನು ಕೊಡುತ್ತದೆ ಎಂಬುದಾಗಿ ಅರ್ಥ. ಯಾವುದು ಧರ್ಮ? ಯಾವುದು ನ್ಯಾಯ? ಎಂಬುದನ್ನು ತಿಳಿಯುವುದು ಅಷ್ಟು ಸುಲಭವಲ್ಲ. ನಮಗೆ ಉದ್ಱಿಷ್ಟವಾದ ಗುರಿಯನ್ನು ತಲುಪಲು ಮಾರ್ಗ ಬೇಕೇ ಬೇಕು. ಗುರಿ ಮತ್ತು ಅದಕ್ಕೆ ತಲುಪುವ ದಾರಿ ಯಾವುದು? ಎಂಬ ಎರಡು ಸಂಗತಿಗಳು ನಮಗೆ ತಿಳಿದರೆ ಆಗ ನಮ್ಮ ಪಯಣವು ಅನಾಯಾಸವಾಗುತ್ತದೆ. ಹಾಗಾಗಿ ಗುರಿ ಮತ್ತು ಮಾರ್ಗ ಇವೆರಡರ ಅರಿವು ಅತ್ಯಂತ ಮುಖ್ಯ. ಈ ಜೀವನಕ್ಕೆ ಇರುವ ಗುರಿ ಯಾವುದು? ನಮ್ಮ ವೇದ, ಶಾಸ್ತ್ರಗಳೆಲ್ಲವೂ ಸಾರುವಂಥಹದ್ದು ಮೋಕ್ಷವೇ ಪರಮಪುರುಷಾರ್ಥ ಎಂಬುದಾಗಿ. ಇದನ್ನು ಸಾಧಿಸಲು ಧರ್ಮದ ಚೌಕಟ್ಟಿನಲ್ಲಿ ಅರ್ಥ ಕಾಮಗಳನ್ನು ಅನುಭವಿಸಿದರೆ  ಮೋಕ್ಷವನ್ನು ಪಡೆಯಲು ಸಾಧ್ಯ ಎಂಬುದು ತಾತ್ಪರ್ಯ. ಇದೇ ವಿಷಯವನ್ನು ಶ್ರೀರಂಗ ಮಹಾಗುರುಗಳು ಹೀಗೆ ಹೇಳುತ್ತಿದ್ದರು - ಅರ್ಥಕಾಮಗಳೆಂಬ ತುಂಟ ಹಸುವನ್ನು ಧರ್ಮ ಎಂಬ ಕಂಬಕ್ಕೆ ಕಟ್ಟಿ, ಮೋಕ್ಷ ಎಂಬ ಅಮೃತವನ್ನು ಪಡೆಯಬೇಕು ಎಂಬುದಾಗಿ. ಅದೇ ವಿಷಯವನ್ನು ಈ ಬಗೆಯಲ್ಲಿ ಈ ಪ್ರಶ್ನೋತ್ತರದಲ್ಲಿ ಚಿಂತಿಸಲಾಗಿದೆ. ಕರ್ತವ್ಯರೂಪವಾದ ಕರ್ಮವು, ಮತ್ತೊಬ್ಬರಿಗೆ ಹಿಂಸೆಯಾಗದ ರೀತಿಯ ಕರ್ಮವು ಮೋಕ್ಷ ಮಾರ್ಗಕ್ಕೆ ಉಪಕಾರವಾದ ಕರ್ಮವೇ ಧರ್ಮಮಾರ್ಗ ಎಂಬುದಾಗಿ ಇಲ್ಲಿ ಕರೆಯಲ್ಪಟ್ಟಿದೆ. ಯಾವುದು ಯೋಗವನ್ನು ಸಿದ್ಧಿಸುತ್ತದೆಯೋ ಅದನ್ನೇ 'ಕರ್ಮಯೋಗ' ಎಂಬುದಾಗಿ ಕರೆದಿದ್ದಾರೆ. ಅಂತಹ ಕರ್ಮಯೋಗದಿಂದ ಜೀವನವನ್ನು ಸಾಗಿಸಿ ಕೊನೆಗೆ ಜ್ಞಾನದಿಂದ ಕೈವಲ್ಯವನ್ನು ಪಡೆಯುವಂತಹದ್ದು. ಹೀಗೆ ಕೈವಲ್ಯವನ್ನು ಪಡೆಯುವಾಗ ಮಧ್ಯೆ ಅನೇಕ ಲಾಭವನ್ನು ಪಡೆಯುತ್ತೇವೆ. ಇದಕ್ಕೆ ಪೂರಕವಾದ ಅನೇಕ ಲಾಭಗಳು ಏನಿವೆಯೋ ಅವುಗಳನ್ನು ದೃಷ್ಟಲಾಭ ಮತ್ತು ಅದೃಷ್ಟಲಾಭ ಎಂಬುದಾಗಿ ವಿಭಾಗಿಸಿ, ಇವೆರಡನ್ನು ಧರ್ಮಮಾರ್ಗದಲ್ಲೇ ಪಡೆದರೆ ಇವೆರಡೂ ಮೋಕ್ಷಕ್ಕೆ ಮೆಟ್ಟಿಲಾಗಿ ಪರಿಣಮಿಸುತ್ತವೆ ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.

ಸೂಚನೆ : 4/1/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.  

ಕೃಷ್ಣಕರ್ಣಾಮೃತ 89 ಕೆಂಗೆನ್ನೆಯ ಗಜಗಮನನ ನಿಕಟಾಗಮನ (Krishakarnamrta 89)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಕೃಷ್ಣನು ನನ್ನನ್ನು ದೂರದಿಂದ ನೋಡುತ್ತಾನೆ. ಬಳಿಕ ಬಳಿಗೇ ಬಂದುಬಿಡುತ್ತಾನೆ.

ಆತನ ನಡಿಗೆ ಹೇಗಿದೆ? ವಾರಣಗಳ ನಡಿಗೆಯಂತೆ. ವಾರಣವೆಂದರೆ ಆನೆ. ಗಜಗಳ ಗಮನವು ಖೇಲದಿಂದ, ಎಂದರೆ ವಿಲಾಸದಿಂದ, ಕೂಡಿರುತ್ತದೆ. ಖೇಲವೆಂದರೆ ಕೇಲಿಯೇ, ಅರ್ಥಾತ್ ಆಟವೇ, ವಿಲಾಸವೇ.

ಗಜ-ಗತಿಯೆಂಬುದು ಇತ್ತ ಲೀಲೆಗೂ ಅತ್ತ ಗಾಂಭೀರ್ಯಕ್ಕೂ ಪ್ರಸಿದ್ಧವಾದುದು. ಎಂದೇ ಸ್ತ್ರೀಯರ ನಡೆಗೂ ಪುರುಷರ ನಡೆಗೂ ಉತ್ತಮವಾದ ಉಪಮೆಯಾಗುವಂತಹುದು. ಉತ್ತಮನಾರಿಯ ಲೀಲಾಯುತವಾದ ನಡೆಯನ್ನು ಲಕ್ಷಿಸಿ ಅವಳನ್ನು ಗಜ-ಗಮನೆಯೆನ್ನುವರು. ಗಾಂಭೀರ್ಯದಿಂದ ಹೆಜ್ಜೆಹಾಕುವ ಪುರುಷನನ್ನು ಲಕ್ಷಿಸಿ ಮಾತಂಗ-ಗಾಮೀ – ಎನ್ನುವರು.

ಎಂದೇ ಕೃಷ್ಣನು ವಾರಣ-ಖೇಲ-ಗಾಮಿ. ವಿಲಾಸ-ಭರಿತವಾಗಿ ಹೆಜ್ಜೆಯಿಡುವ ಹಸ್ತಿಯ ನಡೆಯನ್ನು ಹೊಂದಿರುವವನು. ಭಯ, ಕೋಪ ಮೊದಲಾದ ವಿಶೇಷ-ಸನ್ನಿವೇಶಗಳನ್ನು ಬಿಟ್ಟರೆ, ಗಜ-ಗತಿಯೆಂಬುದು ಮಂಥರವಾದದ್ದೇ, ಎಂದರೆ ನಿಧಾನವಾದದ್ದೇ. ಹಾಗೆ ಕೃಷ್ಣನು ಮೆಲ್ಲಮೆಲ್ಲನೆ ನನ್ನತ್ತಲೇ ಬರುತ್ತಿದ್ದಾನೆ.

ಇನ್ನು ಆತನ ನೋಟ ಹೇಗಿದೆ? ಧಾರಾ-ಕಟಾಕ್ಷಗಳಿಂದ ತುಂಬಿದೆ. ಕಟಾಕ್ಷಗಳ ಧಾರೆಯೇ ಧಾರಾ-ಕಟಾಕ್ಷ. ಕಟಾಕ್ಷವೆಂಬುದು ಒಮ್ಮೆ ನಮ್ಮತ್ತ ಬೀರಿದರೂ ನಮ್ಮಲ್ಲಿ ಧನ್ಯತೆಯುಂಟಾಗುವುದು. ಹಾಗಿರಲು, ಧಾರಾಕಟಾಕ್ಷ-ಭರಿತವಾದ ನೋಟಗಳೆಂದರೆ ಪರಮ-ಧನ್ಯತೆಯೇ. ಕಟಾಕ್ಷವು ಆಗೊಮ್ಮೆ ಈಗೊಮ್ಮೆಯೆಂದಲ್ಲದೆ, ಪ್ರವಾಹವೆಂಬಂತಿರುವಂತಹುದು.

ದೂರದಿಂದ ನೋಡುವುದು, ಗಜಗಮನದಿಂದ ಆಗಮಿಸುವುದು - ಎಂಬಿವೇ ಮುಂದುವರಿದು, ಕಟಾಕ್ಷ-ಪ್ರವಾಹವಾದುದಲ್ಲದೆ, ತನ್ನತ್ತಲೇ ಬರುತ್ತಿರುವುದನ್ನೂ ಹೇಳುತ್ತಿದ್ದಾನೆ, ಕವಿ. ಆತನ ಆಗಮನದಲ್ಲೊಂದು ವಿಶೇಷವನ್ನೂ ಹೇಳಿದ್ದಾನೆ.

ಕೃಷ್ಣನ ತುಟಿಯನ್ನೂ ಇಲ್ಲಿ ಚಿತ್ರಿಸಿದೆ. ಹಲ್ಲುಗಳನ್ನು ಮುಚ್ಚತಕ್ಕವು ತುಟಿಗಳಾದ್ದರಿಂದ, ತುಟಿಯನ್ನು ದಂತಚ್ಛದವೆಂದೋ ದಶನಾವರಣವೆಂದೋ ಕರೆಯುತ್ತಾರೆ. ಏಕೆಂದರೆ ದಶನಗಳಿಗೆ, ಎಂದರೆ ದಂತಗಳಿಗೆ, ತುಟಿಯೇ ಆವರಣ. ಹಲ್ಲುಬ್ಬಿಲ್ಲದವರೆಲ್ಲರ ತುಟಿ ಹೀಗೆ ತಾನೆ ಇರುತ್ತದೆ?  ಆ ತುಟಿಗೇ ಒಂದು ವಿಶೇಷವಿದೆ. ಕೃಷ್ಣನು ವೇಣುಗಾನವನ್ನು ಮಾಡುವ ಸನ್ನಿವೇಶದಲ್ಲಿ ಅದು ಹೃದಯಂಗಮವಾಗಿರುತ್ತದೆ. ಆ ವೇಣುನಾದದ ಒಂದು ವೇಣಿಯನ್ನೇ, ಅರ್ಥಾತ್ ಪ್ರವಾಹವನ್ನೇ, ಸುರಿಸುವುದದು.

ಈ ಶ್ಲೋಕದಲ್ಲಿ ಕೃಷ್ಣನ ನಡೆ-ನೇತ್ರ-ವೇಣುನಾದ-ಅಧರಗಳನ್ನು ಚಿತ್ರಿಸಿದೆ. ಶ್ಲೋಕ ಹೀಗಿದೆ:

ದೂರಾದ್ ವಿಲೋಕಯತಿ ವಾರಣ-ಖೇಲ-ಗಾಮೀ /
ಧಾರಾ-ಕಟಾಕ್ಷ-ಭರಿತೇನ ವಿಲೋಚನೇನ |
ಆರಾದ್ ಉಪೈತಿ ಹೃದಯಂಗಮ-ವೇಣುನಾದ-/
-ವೇಣೀ-ದುಘೇನ ದಶನಾವರಣೇನ ದೇವಃ ||

**

ಮತ್ತೊಂದು ಪದ್ಯ:

ಶ್ರೀಕೃಷ್ಣನನ್ನು ನಾವು ನೋಡುತ್ತಿದ್ದೇವೆ - ಎನ್ನುತ್ತಾನೆ ಲೀಲಾಶುಕ. ಪದ್ಯದಲ್ಲೆಲ್ಲೂ ಕೃಷ್ಣನ ಹೆಸರೇ ಬರುವುದಿಲ್ಲ. ಬದಲಾಗಿ ಆತನ ಚಿತ್ರಣವನ್ನೇ ಕವಿಯು ಮುಂದಿಡುತ್ತಾನೆ. ಅದನ್ನು ಮನಸ್ಸಿನ ಮುಂದೆ ತಂದುಕೊಂಡರೆ ಮೂಡುವುದು ಕೃಷ್ಣ-ತತ್ತ್ವವೇ.

ಕೃಷ್ಣನನ್ನು ನೀಲ-ಮೇಘದಂತಿರುವವನು ಎನ್ನುತ್ತಾರಲ್ಲವೆ? ಎಂದೇ ಆತನನ್ನು, ನೀಲಿಬಣ್ಣವೇ ಅದು - ಎಂಬಂತೆ ತೋರಿಸುತ್ತಾನೆ. ನೀಲವರ್ಣವೇ ನೀಲಿಮೆ. ನಾ ನೋಡುತ್ತಿರುವುದು ನೀಲಿಮೆಯನ್ನು; ಅದೂ ನಿರ್ಮಲವಾದ ನೀಲಿಮೆ. ಯಾವುದರಲ್ಲಿ ಮಲವಿಲ್ಲವೋ, ಅಶುದ್ಧಿಯ ಲವ-ಲೇಶವೂ ಇಲ್ಲವೋ, ಅದುವೇ ನಿರ್ಮಲ.

ನಾವೆಲ್ಲ ಮಲಿನರೇ. ನಮ್ಮ ದೇಹ ಮಲಿನ. ನಮ್ಮ ಮನಸ್ಸು ಮಲಿನ. ನಮ್ಮ ಬುದ್ಧಿ ಮಲಿನ. ಜನ್ಮಾಂತರಗಳಿಂದ ಬಂದು ತಗಲಿರುವ ವಾಸನೆಗಳೂ ಮಲಿನವೇ. ಯಾವ ಮಾಲಿನ್ಯದ ಸೋಂಕೂ ಇಲ್ಲದ ಪರ-ತತ್ತ್ವವೊಂದೇ ನಿರ್ಮಲ.

ಮಲಗಳಿರುವುದರಿಂದಲೇ ನಾವೆಲ್ಲ ಸಂಸಾರದಲ್ಲಿ ಸಿಲುಕಿಕೊಂಡಿರುವವರು. ಆತನು ಅಮಲನಾದ್ದರಿಂದಲೇ ಸಂಸಾರದಲ್ಲಿ ಸಿಲುಕಿಲ್ಲ. ಮಾತ್ರವಲ್ಲ, ಪರಿಶುದ್ಧನಾದ್ದರಿಂದಲೇ ಮಲಗಳನ್ನು ಕಳೆಯಬಲ್ಲ, ಸಿಲುಕಿರುವವರನ್ನು ಬಿಡಿಸಬಲ್ಲ.

ವಸ್ತುತಃ ಬಿಡಿಸಲೆಂದೇ ಬಂದಿರುವವ ಆತ. ಎಂದೇ, ಉಪಾಸ್ಯನೆಂದರೆ ಆತನೇ.

ಪರ-ತತ್ತ್ವವನ್ನು ನಮಗೆ ತಿಳಿಸಿಕೊಡಲೆಂದು ಬಂದಿರುವ ಸಾಹಿತ್ಯವೇ ನಿಗಮ ಅಥವಾ ವೇದ. ವಾಕ್ಕಿನ ಶಕ್ತಿಗೇ ಒಂದು ಮಿತಿಯಿರುವುದರಿಂದ, ಲೋಕೋತ್ತರವೆನಿಸುವ ನಿಗಮ-ವಾಕ್ಕಿಗೂ ಒಂದು ಮಿತಿಯುಂಟು. ಭಗವಂತನ ಪೂರ್ಣ-ಸ್ವರೂಪವನ್ನು ತಿಳಿಸಿಕೊಡಲು ಅದಕ್ಕೂ ಸರ್ವಥಾ ಆಗದು! ಎಂದೇ ಪರತತ್ತ್ವವನ್ನು "ನಿಗಮ-ವಾಕ್ಕಿಗೆ(ಗೂ) ಗೋಚರವಲ್ಲದ ಶಕ್ತಿ!" ಎನ್ನುವುದು. ಅದನ್ನೇ ಇಲ್ಲಿ ಕವಿಯು ನಿಗಮ-ವಾಕ್-ಅಗೋಚರವೆಂದಿರುವುದು.

ಹೀಗಾಗಿ, ಶ್ರೀಕೃಷ್ಣನೆಂಬುದು ನಿರ್ಮಲವೂ, ನಿಗಮ-ವಚನಕ್ಕೆ ನಿಲುಕದುದೂ, ಆದ ನೀಲತತ್ತ್ವ.

ಸ್ವತಃ ರೂಪ-ಆಕಾರಗಳನ್ನು ಮೀರಿದ ಅದು, ತನಗೆ ಬೇಕಾದ ರೂಪ-ಆಕಾರಗಳನ್ನು ತಳೆಯಬಲ್ಲುದು! ಹಾಗಿರುವುದರಿಂದಲೇ ಮಧುರವಾದ ನೀಲಿಮೆಯುಳ್ಳ ಶರೀರವನ್ನು ಧರಿಸಿಬಂದಿರುವುದು. ಇದಾಗಿರುವುದು ಕೃಷ್ಣಾವತಾರದಲ್ಲಿ.

ಶ್ರೀಕೃಷ್ಣನ ಬಾಲ್ಯ-ಯೌವನಗಳನ್ನು ಮಹಾಭಾರತದಲ್ಲೂ, ಅದಕ್ಕಿಂತಲೂ ಹೆಚ್ಚಾಗಿ ಮಹಾಭಾರತದ ಖಿಲಭಾಗವೆನಿಸುವ ಹರಿವಂಶದಲ್ಲೂ, ಅಂತೆಯೇ  ಶ್ರೀಮದ್ಬಾಗವತ-ಮಹಾಪುರಾಣದಲ್ಲೂ, ನಾವು ಕಾಣುತ್ತೇವೆ. ಹಾಗೆ ನೋಡಿದರೆ ರಾಮನನ್ನೂ ಮೇಘಶ್ಯಾಮನೆಂದು ಚಿತ್ರಿಸಿದರೂ, ಆತನ ಬಾಲ್ಯ-ಯೌವನಗಳನ್ನೇ ಶ್ರೀಮದ್ರಾಮಾಯಣದಲ್ಲಿ ವಾಲ್ಮೀಕಿಗಳು ಚಿತ್ರಿಸಹೋಗಿಲ್ಲ.

ಹಾಗಾದರೆ ಈ ಬಾಲ್ಯ-ಯೌವನಗಳ ಸಂಧಿಯಲ್ಲಿ ಹೇಗೆ ತೋರುವನು ಶ್ರೀಕೃಷ್ಣ? ಅದಕ್ಕೆ ಆತನ ಕೆನ್ನೆಯೊಂದನ್ನು ವರ್ಣಿಸಿದರೆ ಸಾಕು. ಆತನ ಕಪೋಲ-ಮಂಡಲವು, ಎಂದರೆ ದುಂಡನೆ ತೋರುವ ಕೆನ್ನೆಯು, ಅರುಣ-ವರ್ಣವನ್ನು ಹೊಂದಿದೆ, ಎಂದರೆ ಕೆಂಪಡರಿದೆ.

ಎಂತು ಬಂದಿತು ಕೆನ್ನೆಗೀ ಬಣ್ಣ? ನೀಲ-ವರ್ಣವನ್ನು ಮರೆಮಾಚಿ ಕೆನ್ನೆಯನ್ನು ಕೆಂಪಾಗಿಸಿರುವುದು ಯಾವುದು? ಕದಂಬ-ಮಂಜರಿಯ ಕೇಸರಗಳು. ಕದಂಬವೆಂದರೆ ನೀಪ; ಅದೊಂದು ಉತ್ತಮ-ಜಾತಿಯ ಈಚಲುಮರ. ಮಂಜರಿಯೆಂದರೆ ಹೂಗೊಂಚಲು. ಕುಸುಮಗಳಲ್ಲಿ ಕೇಸರಗಳಿರುತ್ತವೆಯಷ್ಟೆ. ಕೇಸರವೆಂದರೆ ಪುಷ್ಪಗಳಲ್ಲಿ ಎದ್ದುಕಾಣುವ, ಚಾಚಿರುವ ಭಾಗ. ಎಂದೇ ಆ ಕೇಸರಗಳಲ್ಲಿ ವರ್ಣ-ವಿಶೇಷವಿರುತ್ತದೆ. ಹೀಗೆ ನೀಪ-ಪುಷ್ಪ-ಗುಚ್ಛವೆಂದರೆ ಅದರಲ್ಲಿ ಅರುಣ-ವರ್ಣದ ಕೇಸರಗಳಿರುತ್ತವೆ.

ಕೇಸರಗಳ ಸ್ಪರ್ಶ ಕೃಷ್ಣನ ಕೆನ್ನೆಗಾಗಿದೆ. ಕೇಸರಗಳಲ್ಲಿ ಒಂದಿಷ್ಟು ಸೂಕ್ಷ್ಮವಾದ ಅಂಟಿನ ಅಂಶವೂ ಇರುತ್ತದೆಯಾಗಿ, ಕೃಷ್ಣನ ಕೆನ್ನೆಗೆ ಅವು ತಾಕಿವೆ. ತಾಕಿದಂತೆ ತಮ್ಮಲ್ಲಿಯ ಅರುಣ-ವರ್ಣವನ್ನು ಆತನ ಕೆನ್ನೆಗೂ ಒಂದಿಷ್ಟು ಲೇಪಿಸಿವೆ. ಈ ಅರುಣ-ಪರಾಗಗಳ ಸ್ಪರ್ಶದಿಂದಾಗಿ ಕೃಷ್ಣನ ಕೆನ್ನೆ ಕೆಂಪಡರಿದೆ.

ಆದರೆ ಈ ಕದಂಬ-ಪುಷ್ಪ-ಗುಚ್ಛವು ಬಂದುದೆಲ್ಲಿಂದ? ಮತ್ತೆಲ್ಲಿಂದ? ಆತನೇ ಅದನ್ನು ಧರಿಸಿದ್ದಾನೆ. ಕಿವಿಯ ಮೇಲೆ ಹೂವಿಟ್ಟುಕೊಳ್ಳುವ ಪರಿ ಇತ್ತೀಚಿನವರೆಗೂ ಇದ್ದದ್ದೇ. ದೇವ-ಪ್ರಸಾದವಾಗಿ ಕರ್ಣ-ಸ್ಥಾನದಲ್ಲಿ ಪುಷ್ಪವನ್ನಿಟ್ಟುಕೊಳ್ಳುವುದು ಇಂದೂ ಉಂಟಲ್ಲವೇ? ಅಲಂಕಾರ-ಪ್ರಿಯರಿಗೆ ಕಿವಿಯೆಡೆಯಲ್ಲೂ ಹೂ ಸಿಕ್ಕಿಸಿಕೊಳ್ಳುವ ಕ್ರಮವು ಪರಿಚಿತವಾದದ್ದೇ.

ವಿಷ್ಣುವನ್ನು ಅಲಂಕಾರ-ಪ್ರಿಯನೆಂದೇ ಗುರುತಿಸುವುದು. ಶ್ರೀಕೃಷ್ಣನು ವಿಷ್ಣುವಿನ ಅವತಾರವೇ. ಶೃಂಗಾರ-ರಸ-ಸರ್ವಸ್ವನೆಂದು ಹೊಗಳಿಸಿಕೊಳ್ಳುವ ಶ್ರೀಕೃಷ್ಣನು ತನ್ನನ್ನು ಸಿಂಗರಿಸಿಕೊಳ್ಳುವುದರಲ್ಲಿ ರುಚಿಯುಳ್ಳವನಷ್ಟೇ ಅಲ್ಲ, ಅದರಲ್ಲಿ ನಿಸ್ಸೀಮನೂ ಹೌದು.

ಹೀಗಾಗಿ ಆತನ ಕರ್ಣದಿಂದಲೇ ಜೋತಾಡುತ್ತಿದೆ, ಈ ಕದಂಬ-ಮಂಜರಿ. ಅದರ ಕೆಂಪು ಕೇಸರ ಕೆನ್ನೆಗೆ ಸೋಂಕಿದೆ. ಪರಾಗವಂಟಿದೆ. ಕೆಂಪನೆಯ ಛಾಯೆಯನ್ನು ಕೆನ್ನೆ ಹೊಂದಿದೆ.

ಕೆನ್ನೆಯಲ್ಲಿ ಕೆಂಪನ್ನು ಹೀಗೆ ಹೊಂದಿರುವ ನೀಲ-ವರ್ಣದ ರಾಶಿಯೇ ಈತ - ಎಂಬಂತೆ ತೋರುವ ಈ ಶ್ರೀಕೃಷ್ಣನನ್ನು ನಾವು ನೋಡುತ್ತಿದ್ದೇವೆ - ಎನ್ನುತ್ತಾನೆ ಲೀಲಾಶುಕ. ಕವಿಗಳು ತಮ್ಮನ್ನು ಬಹುವಚನದಿಂದ ನಿರ್ದೇಶಿಸಿಕೊಳ್ಳುವುದೂ ಸಾಮಾನ್ಯವೇ.

ಅಂತೂ ಹೀಗೆ ಕೆನ್ನೆಕೆಂಪಿನ ನೀಲಮೈಯ ಈ ದೇವತೆ ನಿಗಮಕೇ ನಿಲುಕದವನು. ಆತನನ್ನು ಕಾಣುತ್ತಿದ್ದೇವೆನ್ನುತ್ತಾನೆ, ಲೀಲಾಶುಕ.

ಕರ್ಣ-ಲಂಬಿತ-ಕದಂಬ-ಮಂಜರೀ- /
-ಕೇಸರಾರುಣ-ಕಪೋಲ-ಮಂಡಲಂ |
ನಿರ್ಮಲಂ ನಿಗಮ-ವಾಗ್-ಅಗೋಚರಂ /
ನೀಲಿಮಾನಂ ಅವಲೋಕಯಾಮಹೇ ||

ಸೂಚನೆ : 3/1/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಬ್ರಹ್ಮ ಸಾಯುಜ್ಯವೇ ಜೀವನದ ಮಹಾ ಧ್ಯೇಯ (Brahma Sayujyave Jivanada Maha Dhyeya)

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)


ಜೀವನಧ್ಯೇಯವನ್ನು ನೆನಪಿಸುವ ಒಂದು ಪ್ರಸಿದ್ಧವಾದ ಕಥೆ -ಮಾಂಧಾತ ಎಂಬ ಪ್ರಖ್ಯಾತನಾದ ರಾಜ. ರಾಜರ್ಷಿ ಎಂದೇ ಹೇಳಬಹುದು. ತನ್ನ ತಪಸ್ಯೆಯಿಂದ ಪರಾಕ್ರಮದಿಂದ, ಸತ್ವಮಯವಾಗಿ ರಾಜ್ಯವನ್ನು ಆಳುತ್ತಿದ್ದವನು. ಧರ್ಮಾತ್ಮ. ಹಾಗೆಯೇ ಆ ಕಾಲದಲ್ಲೊಬ್ಬ ಮಹರ್ಷಿ. ತಪಸ್ಯೆಯಿಂದ ಅಸಂಖ್ಯ ವರ್ಷಗಳು ಶರೀರ ಶೋಧನೆ ಮಾಡಿದವನು. ನಿತ್ಯ ಬ್ರಹ್ಮಚಾರಿ.  ನಿರಂತರ ತಪಸ್ಸಿನ ಕಾರಣದಿಂದಲೇ ವೃದ್ಧನಾದವನು. ಹೆಸರು ಸೌಭರೀ.ಅವನೊಮ್ಮೆ ಯಮುನೆಯಲ್ಲಿ ಮುಳುಗಿ ತಪಸ್ಸು ಮಾಡುತ್ತಿದ್ದನು. ಅನತಿ ದೂರದಲ್ಲಿ ಗಂಡು ಮೀನೊಂದು ಅನೇಕ ಹೆಣ್ಣು ಮೀನುಗಳೊಂದಿಗೆ ಕೂಡಿ ಸುಖವನ್ನು ಅನುಭವಿಸುವುದನ್ನು ನೋಡಿದನು. ಕಾಲಕರ್ಮ ಸಂಯೋಗ. ಮಹರ್ಷಿಯ ಮನಸ್ಸಿನಲ್ಲಿ ತಾನೂ ಸಂಸಾರ ಸುಖವನ್ನು ಅನುಭವಿಸಬೇಕು ಎಂಬ ಆಸೆ ಉಂಟಾಯಿತು.


ಮಾಂಧಾತ ಮಹಾರಾಜನಿಗೆ ೫೦ ಮಂದಿ ಹೆಣ್ಣುಮಕ್ಕಳಿದ್ದರು. ಸೌಭರಿ ಮಹರ್ಷಿಗಳು ಅವನಲ್ಲಿಗೆ ಬಂದು,ಒಬ್ಬಳನ್ನು ತಮಗೆ ವಿವಾಹ ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತಾರೆ. ಮಾಂಧಾತ ಒಬ್ಬ ತಂದೆಯಂತೆ ಆಲೋಚಿಸಿದ. ಇವನು ಹಣ್ಣು ಹಣ್ಣು ಮುದುಕ. ಇವನಿಗೆ ಹೇಗೆ ಮಗಳನ್ನು ಕೊಡುವುದು? ನಿರಾಕರಿಸಿದರೆ ಕೋಪಗೊಂಡು ಶಪಿಸಿಯಾನು. ಅದಕ್ಕೇ ಬುದ್ಧಿವಂತಿಗೆ ತೋರಿದ. ಹೀಗೆಂದ-" ಮಹರ್ಷಿಯೇ ಕ್ಷತ್ರಿಯ ಸಂಪ್ರದಾಯದಂತೆ ನನ್ನ ಯಾವಳಾದರೂ ಕನ್ಯೆಯು ನಿನ್ನನ್ನು ವರಿಸಿ ಸ್ವಯಂವರಮಾಲೆಯನ್ನು ನಿನ್ನ ಕೊರಳಿಗೆ ಹಾಕಿದರೆ ನೀನು ಅವಳನ್ನು ಪ್ರತಿಗ್ರಹಿಸಬಹುದಾಗಿದೆ".  ತ್ರಿಕಾಲಜ್ಞನಾದ ಮಹರ್ಷಿಗೆ ರಾಜನ ಮನಸ್ಸಿನ ಭಾವ ಒಡನೆಯೇ ಅರ್ಥವಾಯಿತು. ಅವರ ತಪೋಬಲವನ್ನು ತೋರಿಸಲು ಇದು ಸಕಾಲ. ಒಡನೆಯೇ ದೇವಕನ್ಯೆಯರೂ ಮೊಹಿಸುವಂತಹ ಕಡುಚೆಲುವನಾದ ಯುವಕನಾದನು. ರಾಜನ ಆಜ್ಞೆಯಂತೆ ಸೌಭರಿಯನ್ನು ಕನ್ಯೆಯರ ಅಂತಃಪುರಕ್ಕೆ ಕರೆದೊಯ್ದರು. ಇವನ ಸೌಂದರ್ಯಕ್ಕೆ ಮನಸೋತು ಒಬ್ಬಳಲ್ಲ, ಎಲ್ಲಾ ಐವತ್ತುಜನ ಕನ್ಯೆಯರೂ ಹಠಹಿಡಿದು ಸೌಭರಿಯನ್ನೇ ಮದುವೆಯಾದರು. ಆ ಎಲ್ಲರನ್ನೂ ಮದುವೆಯಾಗಿ ದೇವಲೋಕಸದೃಶವಾದ ಭೋಗವಸ್ತುಗಳಿಂದ ಅಲಂಕೃತವಾದ ಭವನಗಳನ್ನೇ ಅವರಿಗಾಗಿ ನಿರ್ಮಿಸಿದನು. ತಾನೇ ತನ್ನ ತಪಸ್ಸಿನ ಪ್ರಭಾವದಿಂದ ಐವತ್ತು  ಪ್ರತ್ಯೇಕವಾದ ಶರೀರಗಳನ್ನು ಧರಿಸಿ ಎಲ್ಲಾ ರಾಜಕನ್ಯೆಯರೊಂದಿಗೂ ವಿಹರಿಸುತ್ತಿದ್ದನು.

ಮಾಂಧಾತ ಮಹಾರಾಜನೊಮ್ಮೆ ತನ್ನ ಕನ್ಯೆಯರ ಯೋಗಕ್ಷೇಮಗಳನ್ನು ನೋಡಿಕೊಂಡು ಹೋಗಲು ಬರಲಾಗಿ ಅಲ್ಲಿ ಸೌಭರಿ ಮಹರ್ಷಿಯು ಅನುಭವಿಸುತಿದ್ದ ಅನಿರ್ವಚನೀಯವಾದ ಸುಖವನ್ನು ನೋಡಿ ಅಚ್ಚರಿಪಟ್ಟನು. ತಾನು ಸಾರ್ವಭೌಮ ಸಂಪತ್ತಿನಿಂದ ಸಂಪನ್ನನೆಂಬ ಗರ್ವವೆಲ್ಲವೂ ಇಳಿದುಹೋಯಿತು. ಒಬ್ಬೊಬ್ಬ ಹೆಣ್ಣುಮಗಳೂ ತನ್ನನ್ನೇ ಬಹಳ ಸುಖವಾಗಿಟ್ಟಿದ್ದಾನೆ ಎಂದು ತಂದೆಗೆ ತಿಳಿಸಿ ಸಂತೋಷಪಡುತ್ತಿದ್ದಳು.


ಹೀಗೆ ಆ ಮಹರ್ಷಿಯು ಬಹಳಕಾಲ ಗೃಹಸ್ಥಾಶ್ರಮದ ಸುಖವನ್ನು ಅನುಭವಿಸಿದರೂ ಅವನಿಗೆ ತೃಪ್ತಿಯಾಗಲಿಲ್ಲ. ಅಗ್ನಿಗೆ ತುಪ್ಪ ಸುರಿದಂತೆ ಆಯಿತು. ಆಗ ಅವನು ದೀರ್ಘವಾದ ಆತ್ಮಾವಲೋಕನಕ್ಕೆ ತೊಡಗಿದನು. ತನ್ನ ತಪಸ್ಯೆಯೆಲ್ಲವೂ  ಈ ಸುಖಗಳಿಗಾಗಿ ವ್ಯಯವಾದುದನ್ನು ಅರಿತು ಅತೀವ ವೇದನೆಪಟ್ಟನು. ಬ್ರಹ್ಮಾನಂದದ ಸುಖಕ್ಕಾಗಿ ಆಚರಿಸಿದ ತಪಸ್ಸೆಲ್ಲವನ್ನೂ ಕ್ಷುದ್ರವಾದ ಸಾಂಸಾರಿಕ ಸುಖಕ್ಕಾಗಿ ವ್ಯಯಿಸಿದ್ದು ಅವನಲ್ಲಿ ತೀವ್ರ ಪಶ್ಚಾತ್ತಾಪವನ್ನುತಂದಿತು. "ಮಹಾಧ್ಯೆಯದ ಸಾಧನೆಗಾಗಿ ಅವಾಂತರಧ್ಯೇಯಗಳನ್ನು ಇಟ್ಟುಕೊಳ್ಳಬೇಕಾಗುವುದು. ಆದರೆ ಅವಾಂತರಧ್ಯೇಯಗಳ ಗೊಂದಲದಲ್ಲಿ ಮಹಾಧ್ಯೇಯವನ್ನು ಮರೆತುಬಿಡಬಾರದು" ಎಂಬ ಶ್ರೀರಂಗಮಹಾಗುರುಗಳ ಮಾತು ಈ ಸಂದರ್ಭದಲ್ಲಿ ಸ್ಮರಣೀಯ.

ಸೌಭರಿಯ ವಿಷಯದಲ್ಲಿ ಸ್ವಲ್ಪಕಾಲ ಹೀಗಾಯಿತು. ಆದರೆ ಒಡನೆಯೇ ತನ್ನ ಅರಮನೆಯನ್ನು ಬಿಟ್ಟು ತಪಸ್ಸನ್ನು ಆಚರಿಸಲು ಕಾಡಿಗೆ ಹೋದನು. ಘೋರವಾದ ತಪಸ್ಸಿನಿಂದ ಶರೀರವನ್ನು ಶೋಷಿಸಿ ಪರಮಾತ್ಮನಲ್ಲಿ ಮನಸ್ಸನ್ನು ಲೀನಗೊಳಿಸಿ ಮುಕ್ತನಾದನು. ಅವನ ಆಧ್ಯಾತ್ಮಿಕ ಗತಿಯನ್ನು ನೋಡಿದ ಅವನ ಪತ್ನಿಯರೂ ಅವನ ಪ್ರಭಾವದಿಂದ ಜ್ವಾಲೆಗಳೆಲ್ಲವೂ ಮಹಾಗ್ನಿಯಲ್ಲಿ ಲೀನವಾಗುವಂತೆ ಮಹರ್ಷಿಯಲ್ಲೇ ಲೀನವಾಗಿ ಮುಕ್ತರಾದರು.


ಈ ಕಥೆ ನಮಗೆ ಅನೇಕ ಪಾಠಗಳನ್ನು ಕಲಿಸುತ್ತಿದೆ. ಮಾಂಧಾತ ಮಹಾರಾಜ. ತಾನು ಸಾರ್ವಭೌಮನೆಂಬ ಅಹಂಕಾರದಿಂದ ಮುನಿಯು ಕನ್ಯಾರ್ಥಿಯಾಗಿ ಕೇಳಿದಾಗ ಸಾಮಾನ್ಯರಂತೆ ನಡೆದುಕೊಂಡನು. ಅವನೊಬ್ಬ ರಾಜರ್ಷಿ ಆಗಿದ್ದರೂ ಸಂತಾನದ ವ್ಯಾಮೋಹ ಅವನ ರಾಜಧರ್ಮವನ್ನು ಸ್ವಲ್ಪ ಬದಿಗೊತ್ತಿತ್ತು. ಕೇಳುತ್ತಿರುವವನು ಸಾಮಾನ್ಯನಲ್ಲ. ಭವಿಷ್ಯತ್ತಿನ ಸತ್ಸಂತಾನಕ್ಕೋ, ಅಥವಾ ಯಾವುದೋ ಸೃಷ್ಟಿ ಸಂಕಲ್ಪದ ಕಾರಣಕ್ಕಾಗಿ ಕೇಳುತ್ತಿದ್ದಾನೆ ಎಂದು ಗೌರವಪೂರ್ವಕವಾಗಿ ಅದನ್ನು ನಡೆಸಿಕೊಡಬೇಕಾಗಿತ್ತು. ಹಾಗೆ ಮಾಡದ ಕಾರಣ ಎಲ್ಲಾ ಕನ್ಯೆಯರನ್ನೂ ಅವನೊಡನೆ ಕಳಿಸಬೇಕಾಯಿತು. ಕಡೆಯಲ್ಲಿ ತನ್ನ ಅಹಂಕಾರದ ನಡೆಗೆ ಪಶ್ಚಾತ್ತಾಪ ಪಡಬೇಕಾಯಿತು. ಸೌಭರಿಯ ತಪಸ್ಸು ಎಷ್ಟು ಬಲಶಾಲಿ ಎಂಬುದೂ ವೇದ್ಯವಾಗುತ್ತದೆ. ಕಡೆಯಲ್ಲಿ ಜೀವನದ ಸಂತೃಪ್ತಿ ಕೇವಲ ವಿಷಯಸುಖಗಳಲ್ಲಿ ಇಲ್ಲ ಅದು ಪೂರ್ಣವಾದ ಬ್ರಹ್ಮ ಸಾಯುಜ್ಯದಲ್ಲೇ ದೊರಕುವುದು ಎಂಬ ಅವನ ನಿಶ್ಚಯ ಈ ದೇಶದ ಎಲ್ಲಾ ಮಹರ್ಷಿಗಳ , ಜ್ಞಾನಿಶ್ರೇಷ್ಠರ ನಿಷ್ಕರ್ಷೆ. ಒಡನೆಯೇ ತನ್ನ ಮನಸ್ಸನ್ನು ಆ ಎಡೆಗೆ ತಿರುಗಿಸಿ ಕೃತಾರ್ಥನಾದ ಅವನ ಧೃತಿ, ಜೀವನ ಪಾಠ ನಮಗೆಲ್ಲರಿಗೂ ಪರಮಾದರ್ಶ.  "ಜೀವನದ ಎಲ್ಲಾ ಬಗೆಯ ವಿಧಾನಗಳೂ ವಿಶ್ವವನ್ನು ನಡೆಸುವವನ ಹತ್ತಿರಕ್ಕೆ ಹೋಗಿ ಸೇರುವಂತೆ ಋಷಿಗಳು ಜೀವನವನ್ನು ಅಣಿಮಾಡಿಕೊಂಡರು " ಎಂಬ ಶ್ರೀರಂಗಮಹಾಗುರುಗಳ ಮಾತು ಅವಿಸ್ಮರಣೀಯ.


ಸೂಚನೆ : 03/1/2026 ರಂದು ಈ ಲೇಖನವು  ವಿಜಯವಾಣಿಯ ಸುದಿನ ಪತ್ರಿಕೆಯಲ್ಲಿ ಪ್ರಕಟವಾಗಿದೆ.