ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಯಾರನ್ನಾದರೂ ಹಿಂದೊಮ್ಮೆ ನೋಡಿದ್ದೆವೆನ್ನಿ. ಅವರೇ ಮತ್ತೆ ಎದುರಿಗೆ ಕಂಡಾಗ "ಓ, ಅವನೇ ಇವನು!" ಎನ್ನುತ್ತೇವೆ. ಇದನ್ನು ಅಭಿಜ್ಞಾನ ಅಥವಾ ಪ್ರತ್ಯಭಿಜ್ಞಾನವೆನ್ನುವರು. ಸಂಸ್ಕೃತದಲ್ಲಿ ಇಂತಹ ಅನುಭವವನ್ನು "ಸೋಽಯಂ" ಎಂದು ತಿಳಿಸುವುದುಂಟು. ಒಬ್ಬರ ಬಗ್ಗೆ ಏನಾದರೂ ಕೇಳಿದ್ದರೂ ಅಷ್ಟೇ; ಅವರೇ ಪ್ರತ್ಯಕ್ಷವಾದರೆ ಆಗಲೂ ಅಭಿಜ್ಞಾನವೇ.
ಹಾಗೆ ಇಲ್ಲಿ ಕೃಷ್ಣನ ದರ್ಶನವಾಗಿರುವ ಪ್ರಸಂಗವೊಂದನ್ನು ಹೇಳಿದೆ. ಯಾರ ಬಗ್ಗೆ ಹೀಗೆಲ್ಲಾ ಕೇಳಿದ್ದೆವೋ ಆತನೇ ಇದೋ ಎದುರಿಗಿದ್ದಾನೆ - ಎನ್ನುವ ಭಾವವಿಲ್ಲಿ ಚಿತ್ರಿತವಾಗಿದೆ.
ಈಗ ಕಾಣುತ್ತಿರುವುದೊಂದು ಬಗೆ. ಹಿಂದೆ ಹೀಗೆಂದು ಕೇಳಿರುವುದು ಮೂರು ಬಗೆ. ಆದರೆ ಅಷ್ಟರಲ್ಲೂ ಸಮಾನಾಂಶವೊಂದಿದೆ. ಏನದು? ಕೃಷ್ಣನು ಅಪಹರಿಸಿದ್ದು – ಎಂದರೆ ಕದ್ದದ್ದು, ಒಯ್ದದ್ದು, ಅಥವಾ ಅಡಗಿಸಿಟ್ಟದ್ದು. ಹಿಂದಿದ್ದದ್ದು ಈಗಿಲ್ಲ ವಾಯಿತೆಂದರೆ ಅದೊಂದು ಬಗೆಯ ಅಪಹರಣವೇ. ಕೃಷ್ಣನು ಎಷ್ಟಾದರೂ ಕಳ್ಳನೆಂದೇ ಪ್ರಸಿದ್ಧಿಪಡೆದವನಲ್ಲವೇ? ಎಂದೇ ಆತನನ್ನು (ಅಪ)ಹಾರಿ ಎನ್ನಬಹುದು: ಹೀಗೆಮ್ಮ ಹರಿಯು ಹಾರಿಯೂ ಹೌದು!
ಏನೇನನ್ನು ಹಾರಿಸಿದ್ದಾನೆ ಕೃಷ್ಣ? ಮೊಟ್ಟಮೊದಲನೆಯದಾಗಿ ಮುನಿಗಳ ತಾಪವನ್ನು. ಮುನಿಶ್ರೇಷ್ಠರಿಗೂ ಚಿತ್ತದಲ್ಲೊಂದಿಷ್ಟು ತಾಪವಿದ್ದೀತಲ್ಲವೇ? ಮುಕ್ತಿಯು ದೊರೆಯುವ ತನಕ ಮಾನಸ-ತಾಪವು ಮುನೀಂದ್ರರಿಗೂ ತಪ್ಪಿದ್ದಲ್ಲ. ಹೀಗಾಗಿ ಮುನಿ-ಜನ-ಹೃದಯ-ತಾಪವನ್ನು ಹೋಗಲಾಡಿಸುವವ, ಕೃಷ್ಣ. ಹೀಗೆ ತಾಪವನ್ನು "ಕದ್ದವನು", ಅವನು. ಮುನೀಂದ್ರರೆಂದರೆ ತಪೋನಿಷ್ಠರು. ತಾಪ ಕಳೆ ಯಿತೆಂದರೆ ಅವರಿಗಿದೋ ತಂಪಾಯಿತು.
ಎರಡನೆಯದಾಗಿ, ಗೋಪಿಯರ ವಸ್ತ್ರವನ್ನು ಅಪಹರಣ ಮಾಡಿದವನಲ್ಲವೇ, ಆತನು? ವಸನವೆಂದರೆ ವಸ್ತ್ರವೇ. ಹೀಗೆ ಅವರ ವಸನಾಪಹಾರಿ, ಈ ಕೃಷ್ಣ.
ತನ್ನಲ್ಲಿ ಪ್ರೀತಿಯುಳ್ಳ ವ್ರಜ-ನಾರಿಯರ ವಿಷಯದಲ್ಲಿ ಕೃಷ್ಣನು ಹೀಗೆ ವರ್ತಿಸಿದುದು ಸರಿಯೇ? - ಎಂಬ ಪ್ರಶ್ನೆ ಬರುವುದಲ್ಲವೇ?
ಅದಕ್ಕೆ ಲೀಲಾಶುಕನು ಉತ್ತರವನ್ನಿತ್ತಿದ್ದಾನೆ. ಅವರು ಸಾಧಾರಣ-ನಾರಿಯರಲ್ಲ, ಮದ ತುಂಬಿದವರು. ಸೊಕ್ಕಿದವರಿಗೆ ತಕ್ಕ ಪಾಠವಾಗಬೇಡವೇ? ಎಂದೇ ಅವರ ವಸ್ತ್ರವನ್ನೇ ಅವರಿಗೆಟುಕದಂತೆ ಮಾಡಿಟ್ಟನವನು. ಪರಿಣಾಮವಾಗಿ, ಆ ಮಾನಿನಿಯರು ಮಾನಕ್ಕಾಗಿ ಆತನನ್ನು ಬೇಡಿಕೊಳ್ಳುವಂತಾಯಿತು. ಮದಿಸಿದವರು ಯಾಚಿಸುವಂತಾದರೆ ಅವರ ಮದವನ್ನಡಗಿಸಿದಂತೆಯೇ.
ಅದಕ್ಕೆ ವಸ್ತ್ರವನ್ನೇಕೆ ತೆಗೆದಿಟ್ಟನು? ಅದು ಅಸಭ್ಯವಲ್ಲವೇ? ಅದಕ್ಕೆ ಕಾರಣ, ಅವರಿಗೆ ಗರ್ವಭಂಗದೊಂದಿಗೆ ಮತ್ತೂ ಒಂದೆರಡು ಪಾಠವನ್ನು ಕಲಿಸಬೇಕಿತ್ತು. ಮೊದಲನೆಯದಾಗಿ, ಅವರು ನಗ್ನರಾಗಿ ನದೀ-ಸ್ನಾನಮಾಡುತ್ತಿದ್ದರು. ಇದು ಶಾಸ್ತ್ರ-ನಿಷಿದ್ಧವಾದದ್ದು. ನದೀ-ಸರೋವರಗಳು ಸಾರ್ವಜನಿಕ-ಸ್ಥಳಗಳಲ್ಲವೇ? ಬೆಳಗಿನ ಜಾವವಾಗಿದ್ದು ಜನಸಂಚಾರವಿಲ್ಲದ ಸಮಯವೆಂದರೂ, ನಗ್ನರಾಗೆಂದೂ ಸ್ನಾನಮಾಡುವಂತಿಲ್ಲ.
ಈ ನಿಯಮವು ಸ್ತ್ರೀಯರಿಗೆ ಮಾತ್ರವಲ್ಲ, ಪುರುಷರಿಗೂ ಉಂಟು. ನದೀ-ಸರೋವರಗಳಲ್ಲಿರಲಿ, ಗೃಹ-ಸ್ನಾನದಲ್ಲಿ ಸಹ ನಗ್ನ-ಸ್ನಾನವು ನಿಷಿದ್ಧವಾಗಿದೆ – ಎಲ್ಲರಿಗೂ!
ಎರಡನೆಯದಾಗಿ, ಅವರದನ್ನು ಮಾಡುತ್ತಿದ್ದುದು ತಮ್ಮ ಕಾತ್ಯಾಯನೀ-ವ್ರತದ ಅಂಗವಾಗಿ. ವ್ರತಾಂಗವಾಗಿ ಮಾಡುವ ಸ್ನಾನವಂತೂ ಮತ್ತೂ ನಿಯಮ-ಬದ್ಧವಾಗಿರತಕ್ಕದ್ದಷ್ಟೆ.
ನಿಯಮಗಳನ್ನೆಲ್ಲ ಸರಿಯಾಗಿ ಪಾಲಿಸಿಯೇ ಆಚರಿಸುತ್ತಿದ್ದರೂ ವ್ರತಾಂತದಲ್ಲಿ, "ಲೋಪಗಳೋ ಭ್ರಂಶಗಳೋ ಆಗಿದ್ದಲ್ಲಿ ಅದಕ್ಕೆ ಕ್ಷಮೆಯಿರಲಿ" ಎಂದು ಭಗವಂತನನ್ನು ಕೇಳಿಕೊಳ್ಳುತ್ತೇವೆ. ಹಾಗಿರುವಲ್ಲಿ, ಅರಿತರಿತೇ ತಪ್ಪೆಸಗುವುದು ಮಹಾಪರಾಧವೇ ಸರಿ!
ಮೂರನೆಯದಾಗಿ, "ಇಷ್ಟು ದಿನ ಈ ದೀಕ್ಷೆಯಲ್ಲಿರುವೆ" ಎಂದು ಸಂಕಲ್ಪಮಾಡಿ ಅದನ್ನು ನೆರವೇರಿಸುವುದುಂಟು; ಆ ಸಮಯದಲ್ಲೇ ನಿಷಿದ್ಧ-ಕರ್ಮವನ್ನು ಮಾಡಿಬಿಟ್ಟಲ್ಲಿ ಅದು ದೇವಾಪಚಾರವೆನಿಸಿಕೊಳ್ಳುತ್ತದೆ. ದೇವ-ಹೇಡನವೆಂದರೂ ಅದೇ. ಹೇಡನವೆಂದರೂ ಅವಹೇಳನವೆಂದರೂ ಒಂದೇ. ಇಂತಹ ಅಪಚಾರಗಳಿಂದ ವ್ರತವೇ ಸಿದ್ಧಿಸದು. ವ್ರತಫಲವೂ ದಕ್ಕದು. ಇಂತಹುದನ್ನು ತಪ್ಪಿಸುವುದೂ ಕೃಷ್ಣನ ಉದ್ದೇಶ.
ನಾಲ್ಕನೆಯದಾಗಿ, ಆಗ ಅವರು ಮಾಡುವ ಏಕ-ಹಸ್ತ-ನಮಸ್ಕಾರವು ಸಹ ಶಾಸ್ತ್ರದಲ್ಲಿ ನಿಷಿದ್ಧವಾದದ್ದೇ! ಅದರ ಬಗ್ಗೆಯೂ ಪಾಠವಾಗಬೇಕಾಯಿತು.
ಹೀಗಾಗಿ ತಾವು ಉತ್ಕೃಷ್ಟ-ವ್ರತವನ್ನು ಉತ್ಕೃಷ್ಟವಾಗಿ ಆಚರಿಸುತ್ತಿರುವೆವೆಂಬ ಭ್ರಮೆಯನ್ನೂ, ತನ್ನಿಮಿತ್ತವಾದ ಗರ್ವವನ್ನೂ, ಹೊಂದಿದ್ದ ವ್ರಜಾಂಗನೆಯರ ವಸನಾಪಹಾರವನ್ನು ಕೃಷ್ಣನು ಮಾಡಬೇಕಾಯಿತು. ಇರಲಿ.
ಕೃಷ್ಣನು ಇಂದ್ರ-ಗರ್ವಾಪಹಾರಿಯೂ ಹೌದು. ಮೂರನೆಯ ಅಪಹಾರವಿದು. ಏಳುದಿನಗಳ ಕಾಲ ಸತತ ಮಳೆಸುರಿಸಿ ಗೋಕುಲವಾಸಿಗಳನ್ನು ಇಂದ್ರನು ಕಂಗಾಲುಮಾಡಲೆಳಸಿದಾಗ ಕೃಷ್ಣನು ಗೋವರ್ಧನೋದ್ಧರಣವನ್ನು ಮಾಡಿದನಲ್ಲವೇ? ಅಂತೂ ಪೆಟ್ಟುಕೊಟ್ಟೇ ಅಹಂಕಾರವನ್ನು ಸರಿಮಾಡಬೇಕಾದ ಸಂದರ್ಭ ಬಂದರೆ ಅದನ್ನೂ ಮಾಡತಕ್ಕವನೇ ಕೃಷ್ಣ.
ಪಾತಾಳಲೋಕ ಮರ್ತ್ಯಲೋಕಗಳೆಂದರೆ ಕೆಳಗಿನ ಹಾಗೂ ಮಧ್ಯದ ಲೋಕಗಳು. ಸ್ವರ್ಗವು ತೃತೀಯ-ಭುವನ ಅಥವಾ ಮೂರನೆಯ ಲೋಕ. ಇಂದ್ರನು ಅದರೊಡೆಯ. ಉನ್ನತಸ್ಥಾನದಲ್ಲಿರುವವರೇ ತಪ್ಪೆಸಗುವುದೇ? ಅಂತಹವರ ಶಾಠ್ಯಕ್ಕೆ ತಕ್ಕ ಶಾಸ್ತಿ.
ಇವೆಲ್ಲದರೊಂದಿಗೆ ನಾಲ್ಕನೆಯದಾಗಿ, ಅಥವಾ ಇನ್ನೂ ಸರಿಯಾಗಿ ಹೇಳಬೇಕೆಂದರೆ, ಇವೆಲ್ಲಕ್ಕಿಂತಲೂ ಮಿಗಿಲಾಗಿ, ಆತನು ನನ್ನ ಹೃದಯ-ಕಮಲವನ್ನೇ ಅಪಹರಿಸಿರುವನು. ಹೃದಯವು ಕಮಲಾಕಾರವೆಂದು ಉಪನಿಷತ್ತು-ಆಯುರ್ವೇದಗಳೂ ಸೂಚಿಸುತ್ತವೆ, ತಂತ್ರ-ಆಗಮಗಳೂ ಚಿತ್ರಿಸುತ್ತವೆ.
ಹೀಗಾಗಿ, ನನ್ನ ಚಿತ್ತಾಪಹಾರಕ, ಅರ್ಥಾತ್ ನನ್ನ ಮನಸ್ಸನ್ನು ಸೂರೆಗೊಂಡವ - ಎನ್ನುವುದನ್ನೂ ಇಲ್ಲಿ ಹೇಳಿದೆ.
ನಾಲ್ಕೂ ಪಾದಗಳೂ ಸೋಽಯಂ ಎಂದೇ ಆರಂಭವಾಗುತ್ತವೆ; 'ಹಾರೀ' ಎಂದೇ ಮುಗಿಯುತ್ತವೆ: ಸಮಾನವಾದ ಆದ್ಯಾಕ್ಷರದ್ವಯ; ಸಮಾನವಾದ ಅಂತ್ಯಾಕ್ಷರದ್ವಯ.
ಸೋಽಯಂ ಮುನೀಂದ್ರ-ಜನ-ಮಾನಸ-ತಾಪ-ಹಾರೀ/
ಸೋಽಯಂ ಮದ-ವ್ರಜ-ವಧೂ-ವಸನಾಪಹಾರೀ|
ಸೋಽಯಂ ತೃತೀಯಭುವನೇಶ್ವರ-ದರ್ಪ-ಹಾರೀ/
ಸೋಽಯಂ ಮದೀಯ-ಹೃದಯಾಂಬುರುಹಾಪಹಾರೀ ||
*****
ಮತ್ತೊಂದು ಶ್ಲೋಕ:
ಕಳ್ಳಕೃಷ್ಣನ ಲೀಲೆಗಳು ಒಂದೇ ಎರಡೇ? ಗೋಪಿಯೊಬ್ಬಳ ಮನೆಗೆ ಕದಿಯಲು ಬಂದಿದ್ದಾನೆ, ಪುಟ್ಟಕೃಷ್ಣ. ಏನನ್ನು ಕದಿಯಲು? - ಎಂದು ಹೇಳಲೇಬೇಕಿಲ್ಲ: ಬೆಣ್ಣೆಯನ್ನೇ. ಆತ ನೇರಾಗಿ ಮನೆಯೊಳಗೇ ಹೋಗಿದ್ದಾನೆ, ಅಡಿಗೆಮನೆಯೊಳಗೇ. ತನ್ನ ಮನೆಗೆ ಹೀಗೆ ಗುಟ್ಟಾಗಿ ನುಗ್ಗಿರುವ ಕಳ್ಳಬಾಲಕನಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂಬ ಮನಸ್ಸಾಯಿತು, ಈ ಗೋಪಿಕೆಗೆ.
ಪುಟ್ಟಬಾಲನಿಗೆ ಪೆಟ್ಟುಕೊಟ್ಟು ಬುದ್ಧಿಕಲಿಸುವುದೇ? ಛೆ! ಮುದ್ದುಮುಖದ ಮಗುವಿಗೆ ಒಂದಿಷ್ಟು ಬೈಸಬೇಕು, ಬೆದರಿಸಬೇಕು, ಅಷ್ಟು ಸಾಕು. ಎಂದೇ, "ಕದಿಯುತ್ತಿರುವಾಗಲೇ ಕಳ್ಳನು ಸಿಕ್ಕಿಬಿದ್ದಿರುವ"ನೆಂದಾಗಿಸಲು, ಆತನನ್ನು ತನ್ನ ಅಡಿಗೆಮನೆಯೊಳಗೇ ಕೂಡಿಹಾಕಿಬಿಟ್ಟಳಾಕೆ.
ಇನ್ನು ನೇರಾಗಿ ಹೋಗಿ ಅವನಮ್ಮನಿಗೇ ಚಾಡಿ ಹೇಳಿದರಾಯಿತೆಂದು ನಿಶ್ಚಯಮಾಡಿದವಳೇ, ಹೋದಳು ಯಶೋದೆಯ ಮನೆಗೆ - ಅಲ್ಲೊಂದಿಷ್ಟು ಆಕ್ರೋಶಮಾಡಲಿಕ್ಕೆ. ಆದರೆ ಅಲ್ಲಿ ಕಂಡ ದೃಶ್ಯ ಅವಳನ್ನು ದಂಗುಬಡಿಸಿತು! ಯಾವ ಚಾಡಿಯನ್ನೂ ಹೇಳಲಾರದಾದಳು, ಆ ಗೋಪಿಕೆ!
ಏಕೆ? ಏಕೆಂದರೆ ಯಶೋದೆಯ ಮನೆಯಲ್ಲೂ ಕೃಷ್ಣನೇ, ಬಾಲಕೃಷ್ಣನೇ, ಇದ್ದಾನೆ: ಆತನ ಚೇಷ್ಟೆಯನ್ನು ತಾಳಲಾರದ ಆತನ ತಾಯಿಯೇ ಆತನನ್ನು ಕಟ್ಟಿಹಾಕಿಟ್ಟಿದ್ದಾಳೆ - ಒಂದು ಒರಳಿಗೆ!
ಅದಕ್ಕೇನು ಅವಳ ಪ್ರತಿಕ್ರಿಯೆ? ಆಶ್ಚರ್ಯದಿಂದ ಸ್ತಂಭೀಭೂತಳಾದಳೆಂಬುದಷ್ಟೇ: ಅವಳ ಬಾಯಿಂದ ಮಾತೇ ಹೊರಡದಾಯಿತು. ತನ್ನ ಮನೆಯಲ್ಲಾದುದನ್ನು ನಂಬುವುದೋ, ಈಗ ಕಾಣುತ್ತಿರುವುದನ್ನೋ? ಮೊದಲೂ ತಾನೇ ಕಣ್ಣಾರಕಂಡಿದ್ದಳು. ಈಗಲೂ ಅಷ್ಟೇ. ಯಾವುದು ಸತ್ಯ? ಯಾವುದಲ್ಲ? ತಿಳಿಯಲಾರಳು, ಏನನ್ನೂ ಹೇಳಲಾರಳು. ಆಹಾ!
ಅದನ್ನು ಕವಿ ಹೀಗೆ ಹೇಳುತ್ತಾನೆ:
ಅಂತರ್ಗೃಹೇ ಕೃಷ್ಣಂ ಅವೇಕ್ಷ್ಯ ಚೋರಂ
ಬಧ್ವಾ ಕವಾಟಂ ಜನನೀಂ ಗತೈಕಾ |
ಉಲೂಖಲೇ ದಾಮ-ನಿಬದ್ಧಂ ಏನಂ
ತತ್ರಾಪಿ ದೃಷ್ಟ್ವಾ ಸ್ತಿಮಿತಾ ಬಭೂವ ||
ಸೂಚನೆ : 29/06/2025 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.