Sunday, July 20, 2025

ವ್ಯಾಸ ವೀಕ್ಷಿತ 146 ಬಹುಶ್ರುತರಾದ ನಾರದರಿಗೆ ಯುಧಿಷ್ಠಿರನು ಸಲ್ಲಿಸಿದ ಆದರಾತಿಥ್ಯ (Vyaasa Vikshita 146)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ತಾರ್ಕಿಕವಾಗಿ ಮಾತನಾಡುವಾಗ, ಆಡುವ ಮಾತಿನಲ್ಲಿ ಒಂದು ಕ್ರಮಬದ್ಧತೆಯಿರಬೇಕೆನ್ನುತ್ತದೆ, ತರ್ಕಶಾಸ್ತ್ರ. ಏನದು? ವಾಕ್ಯದಲ್ಲಿ ಐದು ಅವಯವಗಳಿರಬೇಕೆಂಬ ಕ್ರಮ.

ಆ ಐದು ಇವು: "ನಾನು ಹೇಳುವುದಿದು" – ಎಂಬ ಮಾತಿಗೆ ಪ್ರತಿಜ್ಞೆಯೆಂಬ ಹೆಸರಿದೆ. ಅದಕ್ಕೆ ಸಮ್ಮತಿ ಬರುವಂತೆ ಕೊಡತಕ್ಕ ಕಾರಣವೇ ಹೇತು. ಅದನ್ನು ಸಮರ್ಥಿಸಿಕೊಳ್ಳಲು ಕೊಡುವ ನಿದರ್ಶನವೇ ಉದಾಹರಣ. ಕಾರ್ಯ-ಕಾರಣ-ಸಂಬಂಧವನ್ನು ಹೇಳುವ ಮಾತೇ ವ್ಯಾಪ್ತಿ. ಉಪಸಂಹಾರದ ನುಡಿಯೇ ನಿಗಮನ. ಈ ಐದೇ, ಎಂದರೆ ಪ್ರತಿಜ್ಞಾ-ಹೇತು-ಉದಾಹರಣ-ನಿಗಮನಗಳೇ, ಪಂಚಾವಯವಗಳು.

ಈ ರೀತಿಯ ಪಂಚಾವಯವ-ವಾಕ್ಯಗಳಲ್ಲಿಯ ಗುಣ-ದೋಷಗಳನ್ನು ಬಲ್ಲವರು, ನಾರದರು. ಅಲ್ಲದೆ, ಬೃಹಸ್ಪತಿಯೇ ಮಾತನಾಡುತ್ತಿದ್ದರೂ ಉತ್ತರೋತ್ತರ ಮಾತನಾಡಬಲ್ಲವರು (ಎಂದರೆ ಅವರ ಉಕ್ತಿಗಳಿಗೂ ಪ್ರತ್ಯುಕ್ತಿಗಳನ್ನು ಹೇಳಲು ಸಮರ್ಥರು), ಅವರು.

ಇಷ್ಟೇ ಅಲ್ಲದೆ, ಧರ್ಮ-ಅರ್ಥ-ಕಾಮ-ಮೋಕ್ಷ - ಇವುಗಳ ಬಗ್ಗೆ ಯಥಾವತ್ತಾಗಿ ನಿರ್ಣಯಗಳಿಗೆ ಬಂದಿರುವವರು. ಈ ಭುವನಕೋಶವನ್ನೆಲ್ಲಾ ಪ್ರತ್ಯಕ್ಷವಾಗಿ ಕಂಡರಿತ ಮಹಾಮತಿಗಳು; ಅಡ್ಡಡ್ಡಲಾಗಿಯೂ ಮೇಲ್ಕೆಳಗೂ ಇರುವ ಲೋಕಗಳ ಪ್ರತ್ಯಕ್ಷದರ್ಶಿಗಳು. ಸಾಂಖ್ಯ-ಯೋಗಗಳ ವಿಭಾಗವನ್ನು ಅರಿತವರು. ಸುರರಲ್ಲಿಯೂ ಅಸುರರಲ್ಲಿಯೂ ನಿರ್ವೇದವನ್ನು- ಎಂದರೆ ವೈರಾಗ್ಯವನ್ನು- ಉಂಟುಮಾಡಲಪೇಕ್ಷಿಸುವವರು

ಸಂಧಿ-ವಿಗ್ರಹಗಳ ತತ್ತ್ವವನ್ನು ಬಲ್ಲವರು. (ಇಬ್ಬರು ರಾಜರಲ್ಲಿ ವಿಮತಿಯುಂಟಾದಾಗ ಯುದ್ಧಮಾಡುವುದು ವಿಗ್ರಹ. ರಾಜಿಮಾಡಿಕೊಳ್ಳುವುದು ಸಂಧಿ. ಇವೆರಡರಲ್ಲೂ ನುರಿತವರವರು). ಅನುಮಾನದ ವಿಭಾಗಗಳನ್ನು ಅರಿತವರು. (ಅನುಮಾನವೆಂದರೆ ಸಂಶಯವೆಂಬ ಅರ್ಥ ಕನ್ನಡದಲ್ಲಿ ಪ್ರಚುರ. ಆದರೆ ಭಾರತೀಯರ ನ್ಯಾಯ-ವೈಶೇಷಿಕಗಳಲ್ಲಿ ತರ್ಕಬದ್ಧವಾಗಿ ನಿರ್ಣಯ ಮಾಡುವುದೆಂಬ ಅರ್ಥವೇ ಪ್ರಸಿದ್ಧವಾದದ್ದು. ಇಲ್ಲಿಯೂ ಅದೇ ಅರ್ಥವೇ.)

ಹಾಗೆಯೇ ಅವರು ಷಾಡ್ಗುಣ್ಯ-ವಿಧಿಯ ಪ್ರಯೋಗದಲ್ಲಿ ಸಮರ್ಥರು. (ರಾಜ್ಯ-ರಕ್ಷಣೆಗೆ ಷಾಡ್ಗುಣ್ಯವು ಬೇಕಾಗುತ್ತದೆ. ಸಂಧಿ-ವಿಗ್ರಹಗಳು ಬಹುಮುಖ್ಯವೆಂದು ಅವನ್ನೇ ಮೊದಲು ಹೇಳಿದ್ದಾಗಿದೆ. ಅವೆರಡಲ್ಲದೆ, ಯಾನ-ಆಸನ-ದ್ವೈಧೀಭಾವ-ಸಮಾಶ್ರಯಗಳೆಂಬ ನಾಲ್ಕು ಸೇರಿದರೆ ಷಾಡ್ಗುಣ್ಯ. ರಾಜನೀತ್ಯ ಪಾರಿಭಾಷಿಕ-ಪದಗಳು ಇವು). ಅವರು ಸರ್ವ-ಶಾಸ್ತ್ರ-ವಿಶಾರದರು. ಯುದ್ಧದ ವಿಷಯವಾಗಲಿ, ಗಾಂಧರ್ವದ – ಎಂದರೆ ಸಂಗೀತಶಾಸ್ತ್ರದ – ವಿಷಯವಾಗಲಿ, ಅವುಗಳಲ್ಲಿ ಸಮುತ್ಸುಕರೂ ಎಲ್ಲೆಡೆ ಅಪ್ರತಿಹತವಾದ ಸಂಚಾರವುಳ್ಳವರೂ ಆಗಿರತಕ್ಕವರು. ಇವಿಷ್ಟೇ ಅಲ್ಲದೆ ಇನ್ನೂ ಅನೇಕ ಗುಣಗಣಗಳಿಂದಲೇ ಅವರು ಕೂಡಿರತಕ್ಕವರು, ನಾರದರು.

ಹಾಗಿರುವ ನಾರದರು ನಾನಾಲೋಕಗಳನ್ನು ಸಂಚಾರಮಾಡುತ್ತಾ, ಯುಧಿಷ್ಠಿರನ ಆ ಸಭೆಗೂ ಈಗ ಬಂದರು. ಮಹಾತೇಜಸ್ವಿಗಳಾದ ಆ ದೇವರ್ಷಿ ನಾರದರು ಅಲ್ಲಿಯ ಋಷಿಗಳೊಂದಿಗೆ ಸೇರಲೆಂದು ಅಲ್ಲಿಗೆ ಆಗಮಿಸಿದರು. ಧೀಮಂತನಾದ ಸೌಮ್ಯನೆಂಬ ಋಷಿ, ಹಾಗೆಯೇ ಸುಮುಖ, ಪಾರಿಜಾತರೆಂಬ ಋಷಿಗಳು, ಇನ್ನೂ ಹಲವು ಋಷಿಗಳೆಲ್ಲ ಇದ್ದರೆಂಬ ಕಾರಣಕ್ಕೆ, ಮಹಾದ್ಯುತಿಗಳಾದ ನಾರದರು ಅಲ್ಲಿಗೆ ಬಂದದ್ದು. ಮನೋವೇಗದಲ್ಲಿ ಚಲಿಸುವ ಆ ನಾರದರು ಸಭೆಯಲ್ಲಿದ್ದ ಪಾಂಡವರನ್ನು ಕಾಣಲೆಂದೇ ಆಗಮಿಸಿದುದು.

ಬಂದವರೇ, ಜಯವನ್ನು ಅನುಗ್ರಹಿಸುವ ಆಶೀರ್ವಾದ ಮಂತ್ರಗಳೊಂದಿಗೆ ಧರ್ಮರಾಜನನ್ನು ಅನುಗ್ರಹಿಸಿದರು.

ಬಂದ ನಾರದ ಮಹರ್ಷಿಗಳನ್ನು ಕಂಡ ಧರ್ಮಜ್ಞನಾದ ಯುಧಿಷ್ಠಿರನಾದರೂ, ತನ್ನ ತಮ್ಮಂದಿರೊಡಗೂಡಿ ಅವರನ್ನು ಎದುರ್ಗೊಂಡನು. ವಿನಯದಿಂದ ಬಗ್ಗಿದವನಾಗಿ ಪ್ರೀತಿಯಿಂದ ಅವರಿಗೆ ಅಭಿವಾದನವನ್ನು ಮಾಡಿದನು. ಆ ನಾರದರಿಗೆ ವಿಧ್ಯನುಸಾರ ಯೋಗ್ಯವಾದ ಆಸನವನ್ನಿತ್ತನು. ಗೋವನ್ನೂ ಮಧುಪರ್ಕವನ್ನೂ ಸಲ್ಲಿಸಿದನು. ಅರ್ಘ್ಯವನ್ನಿತ್ತು ರತ್ನಗಳೊಂದಿಗೆ ಅವರನ್ನು ಆದರಿಸಿದನು. ಅವರ ಎಲ್ಲ ಅಪೇಕ್ಷೆಗಳನ್ನೂ ಪೂರೈಸಿದನು.

ಸೂಚನೆ : 20/7/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 25 (Prasnottara Ratnamalike 25)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೨೫ ಕಮಲದ ಎಲೆಯ ಮೇಲಿನ ಜಲದ ಕಣದಂತೆ ಚಲನಶೀಲವಾದುದು ಯಾವುದು?

ಉತ್ತರ - ಯೌವನ, ಧನ ಮತ್ತು ಆಯುಸ್ಸು


ಈ ಪ್ರಶ್ನೆಯು ಉದಾಹರಣೆಯಿಂದ ಕೂಡಿದೆ. ಹೇಗೆಂದರೆ, ಅತ್ಯಂತ ಚಂಚಲವಾದುದು ಯಾವುದು? ಎಂಬುದಕ್ಕೆ ಒಂದು ಉದಾಹರಣೆ ಎಂದರೆ ಕಮಲದ ಎಲೆಯ ಮೇಲೆ ಇರುವ ನೀರಿನ ಕಣ. ಕಮಲದ ಎಲೆಯ ಮೇಲೆ ಇರುವ ನೀರಿನ ಹನಿಯು ಕಮಲಕ್ಕೆ ಅಂಟಿಕೊಳ್ಳುವುದಿಲ್ಲ. ಅದು ಯಾವಾಗ ಕಮಲದಿಂದ ಜಾರುತ್ತದೆ? ಎಂಬುದು ತಿಳಿಯದಂತಿರುತ್ತದೆ. ಅಷ್ಟು ಕ್ಷಣಿಕ ಎಂಬುದು ಅರ್ಥ. ಯಾವುದೇ ಕಾರಣಕ್ಕೂ ಆ ನೀರಿನಿಂದ ಕಮಲದ ಎಲೆಗೆ ಪ್ರಯೋಜನವಿರುವುದಿಲ್ಲ. ಹಾಗೆ ಇರುವಂತದ್ದು ಕಮಲದ ಎಲೆಯ ಮೇಲಿನ ನೀರಿನ ಹನಿ. ಇಲ್ಲಿ ಕೇಳುವಂತಹ ಪ್ರಶ್ನೆಯೂ ಅದೇ ರೀತಿಯಲ್ಲಿ ಇದೆ. ಅಂದರೆ ಅತ್ಯಂತ ಚಂಚಲವಾದದ್ದು ಯಾವುದು? ಎಂಬುದು. ಅದಕ್ಕೆ ಉತ್ತರವಾಗಿ ಯೌವನ, ಧನ ಮತ್ತು ಆಯುಸ್ಸು ಎಂಬ ಮೂರೂ ಸಂಗತಿಗಳು ಬಹಳ ಚಂಚಲವಾದವುಗಳು. ಕ್ಷಣ ಕ್ಷಣಕ್ಕೂ ರೂಪಾಂತರವನ್ನು ಹೊಂದುವ ಸ್ವಭಾವದವುಗಳು ಎಂಬುದು ಇದರ ಅರ್ಥ. ಯಾವುದು ಚಂಚಲವಾಗಿರುತ್ತದೆಯೋ ಅದಕ್ಕೆ ಒಂದೇ ರೂಪ, ಒಂದೇ ಆಕಾರ, ಒಂದೇ ಕಾಲಕ್ಕೆ ಸಂಬಂಧ ಅಥವಾ ಒಂದೇ ದೇಶಕ್ಕೆ ಸಂಬಂಧಪಟ್ಟಿದ್ದು ಎಂಬುದನ್ನು ನಾವು ಎಣಿಸುವಷ್ಟರಲ್ಲಿ ಅದು ಎಲ್ಲ ಸಂಬಂಧಗಳಿಂದ ಜಾರುವುದನ್ನು ಕಾಣುತ್ತೇವೆ. ಹೀಗೆ ಇಂತಹ ಜಾರುವ ಲಕ್ಷಣದಿಂದ ಕೂಡಿರುವ ಸಂಗತಿಗಳನ್ನು ಕ್ಷಣಿಕ ಅಥವಾ ಚಂಚಲ ಎಂಬುದಾಗಿ ಕರೆಯಬಹುದಾಗಿದೆ. ಆದ್ದರಿಂದ ಯೌವನ, ಧನ ಮತ್ತು ಆಯುಸ್ಸು ಮೂರೂ ಒಂದೇ ವರ್ಗಕ್ಕೆ ಸೇರುತ್ತವೆ ಎಂಬುದು ಈ ಪ್ರಶ್ನೋತ್ತರದ ಆಶಯವಾಗಿದೆ. ಹಾಗಾದರೆ ಅವು ಹೇಗೆ ಕ್ಷಣಿಕ? ಎಂಬುದನ್ನು ಇಲ್ಲಿ ಚಿಂತಿಸಬೇಕಾಗಿದೆ. 


ಚಂಚಲ ಎಂದರೆ ಒಂದೇ ವಿಷಯದ ಮೇಲೆ ನಿರಂತರವಾಗಿ ಮನಸ್ಸನ್ನು ನೆಲೆನಿಲ್ಲಿಸಲು ಸಾಧ್ಯವಾಗದ ಸ್ವಭಾವ.  ಯೌವನ ಇರುವವನಿಗೆ ಜಗತ್ತೆಲ್ಲವೂ ಕೂಡ ಅವನ ಎದುರುಗಡೆ ನಶ್ವರವಾದಂತೆ, ಬೆಲೆ ಇಲ್ಲದಿರುವಂತೆ ಕಾಣುತ್ತದೆ. ಅಂದರೆ ತಾನು ಇವುಗಳೆಲ್ಲವನ್ನು ಕೂಡ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಲ್ಲೆ, ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಇವೆಲ್ಲವೂ ಇರಲಿವೆ ಎಂಬ ದರ್ಪ ಆತನದ್ದಾಗಿರುತ್ತದೆ. ಅಂತಯೇ ಧನದಿಂದ ಕೂಡಿದವನು ಕೂಡ ಈ ಎಲ್ಲ ಸ್ವಭಾವದಿಂದ ಕೂಡಿರುತ್ತಾನೆ ಮತ್ತು ಇದೇ ರೀತಿಯಾಗಿ ಕ್ಷಣ ಚಿತ್ತ ಕ್ಷಣಪಿತ್ತ ಎಂಬಂತೆ ಇರುತಾನೆ. ಆಯಸ್ಸನ್ನು ನೆಚ್ಚಿಕೊಂಡು ಯಾವುದನ್ನು ಕೂಡ ಸಾಧಿಸಲು ಆಗದು. ಕ್ಷಣವು ಉರುಳುತ್ತಿರುವುದರಿಂದ ಆಯಸ್ಸು ಕೂಡ ಆ ಕ್ಷಣಪರಿಣಾಮವನ್ನೇ ಹೇಳುವುದಾದ್ದರಿಂದ ಅದು ಕೂಡ ಅಷ್ಟೇ ಉರುಳುವ ಸ್ವಭಾವವುಳ್ಳದ್ದಾಗಿರುತ್ತದೆ. ಹಾಗಾಗಿ ಈ ಮೂರನ್ನು ನಂಬಿಕೊಂಡು ಯಾವುದನ್ನು ಕೂಡ ಮಾಡಲಿಕ್ಕೆ ಸಾಧ್ಯವಿಲ್ಲ. ಈ ಸಮಯದಲ್ಲಿ ಒಂದು ನಿರ್ದಿಷ್ಟವಾದ ವಿಷಯವನ್ನು ಅರ್ಥ ಮಾಡಿಕೊಳ್ಳುವುದು ಅಥವಾ ಸಾಧಿಸುವುದು ಎಲ್ಲವೂ ಕಷ್ಟ ಸಾಧ್ಯ ಎಂಬುದು ಇದರ ಅರ್ಥವಾಗಿದೆ. ಇದನ್ನೇ ಪುಷ್ಟೀಕರಿಸುವಂತೆ ಒಂದು ಸುಭಾಷಿತ ಹೀಗಿದೆ- ಯೌವನ, ಧನ, ಅಧಿಕಾರ ಮತ್ತು ಅವಿವೇಕ ಇವು ಒಂದೊಂದೂ ಅನರ್ಥಕ್ಕೆ ಸಾಧನ. ಈ ನಾಲ್ಕು ಒಟ್ಟಿಗೆ ಇರುವ ಕಡೆ ಎಂತಹ ಅನರ್ಥಗಳು ಸಂಭವಿಸಬಹುದು! ಎಂಬ ಆಶ್ಚರ್ಯ ಇಲ್ಲಿ ಕಾಣುತ್ತದೆ. ಇದೇ ಅರ್ಥವನ್ನು ಕೊಡುವ ಈ ಪ್ರಶ್ನೋತ್ತರವು ಯೌವನ, ಧನ ಆಯುಸ್ಸು ಇವೆಲ್ಲವೂ ಕೂಡ ಕ್ಷಣಿಕ. ಇವುಗಳು ಬಂದಾಗ ಶಾಶ್ವತವಾದ ಬದುಕಿನ ಬಗ್ಗೆ ನಮಗೆ ಅರಿವು ಮೂಡುವುದು ಕಷ್ಟಸಾಧ್ಯ ಎಂಬ ಮಾರ್ಮಿಕವಾದ ಉತ್ತರ ಇಲ್ಲಿ ಕಂಡುಬರುತ್ತದೆ.


ಸೂಚನೆ : 20/7/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Saturday, July 19, 2025

ಅಷ್ಟಾಕ್ಷರೀ 84 ತಸ್ಯ ವಾಚಕಃ ಪ್ರಣವಃ (Ashtakshari 84)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ತಪಸ್ಸಿನಲ್ಲೇ ಮನಸ್ಸಿಟ್ಟ ತಪಸ್ವಿಗಳಿಗೆ ಜನಜಂಗುಳಿಯೇ ಬಾಧಕ. ಎಂದೇ ಅವರಿಗೆ ತಪೋವನದ ಏಕಾಂತವೇ ವಿಹಿತ. ಆದರೆ ನಗರಗಳಲ್ಲೋ ಗ್ರಾಮಗಳಲ್ಲೋ ವಾಸಮಾಡುವ ನಮಗೆ ಜನಸಂಪರ್ಕವಿಲ್ಲದೆ ಆದೀತೇ? 

ಸಂಪರ್ಕಿಸುವುದಕ್ಕಾಗಿ ವ್ಯಕ್ತಿಯ ಹೆಸರನ್ನು ಹಿಡಿದು ಕರೆಯುತ್ತೇವೆ. ಇಲ್ಲವೇ  ಆತನೊಂದಿಗಿನ ನಮ್ಮ ಸಂಬಂಧವನ್ನು ಬಳಸುತ್ತೇವೆ. ಶಿಶುವಿನ "ಅಮ್ಮಾ!" ಎಂಬ ಪ್ರಥಮ-ಸಂಬೋಧನವಾದರೂ ಸಂಬಂಧ-ವಾಚಿಯೇ ತಾನೆ?

ಆದರೆ ಭಗವಂತನನ್ನು ಕರೆಯುವ ಪರಿಯೇನು? ಅಲ್ಲೂ ಈ ಎರಡೂ ಪರಿಗಳುಂಟು. "ತ್ವಮೇವ ಮಾತಾ ಚ ಪಿತಾ ತ್ವಮೇವ" ಎನ್ನುವಾಗ ಅದು ಸಂಬಂಧವೇ. ಇನ್ನು ಭಗವಂತನನ್ನು ಹೆಸರು ಹಿಡಿದು ಕರೆಯುವುದೆಂದರೆ ಅದೂ ಸುಕರವೇ. ಹೇಗೆ? ಭಾರತೀಯ-ಸಂಸ್ಕೃತಿಯಲ್ಲಿ ದೇವತೆಗಳಿಗೂ ಕಡಿಮೆಯಿಲ್ಲ, ಅವರ ಹೆಸರುಗಳಿಗೂ ಕಡಿಮೆಯಿಲ್ಲ. ೩೩ ಕೋಟಿ ದೇವತೆಗಳೆಂದು ಕಲ್ಪಿಸಿಕೊಳ್ಳಲೂ ಅನ್ಯರಿಗಾಗಿಲ್ಲ. ತಮಗೊಬ್ಬೊಬ್ಬನೇ ದೇವನೆಂಬ ಕಾರಣಕ್ಕೆ ತಮ್ಮ ಸಂಸ್ಕೃತಿಯೇ ಹೆಚ್ಚೆಂದು ಕೊಚ್ಚಿಕೊಳ್ಳುವವರೂ ಉಂಟು. ಉಪನಿಷತ್ತಿನ ೩೩ ದೇವತೆಗಳನ್ನೇ ವಿಸ್ತೃತರೂಪದಲ್ಲಿ ೩೩ ಕೋಟಿಯೆಂದಿರುವುದು.

ರುಂಡ-ಮುಂಡ-ಕೈಕಾಲುಗಳೆಂದಾಗಿ ನಮ್ಮಲ್ಲೇ ಮೂರಿಲ್ಲವೇ? ಒಂದೇ ಮೈ ಮೂರಾಗಿ(ತೋರಿ)ದೆ. ಕೈಕಾಲುಗಳನ್ನೇ ತೆಗೆದುಕೊಂಡರೂ ಒಂದೊಂದರಲ್ಲೇ ಐದೈದು ಬೆರಳುಗಳಿಲ್ಲವೇ? ಮೂಲದಲ್ಲಿ ಒಂದು, ವಿಸ್ತಾರದಲ್ಲಿ ಐದು. ಹೀಗೆ ಪಂಚವೇ ಪ್ರಪಂಚವಾಗಿರುವುದೂ.

ಇನ್ನು ದೇವತೆಗಳ ಹೆಸರುಗಳೋ? ಅದೆಷ್ಟೊಂದು ಅಷ್ಟೋತ್ತರಶತ-ಅಷ್ಟೋತ್ತರಸಹಸ್ರ-ನಾಮಗಳು! ಶಿವಸಹಸ್ರನಾಮ-ವಿಷ್ಣುಸಹಸ್ರನಾಮಗಳು ಮಹಾಭಾರತದಲ್ಲೇ ಬರುತ್ತವೆ. ಪುರಾಣಗಳಲ್ಲಿ ಹತ್ತುಹಲವು ದೇವತೆಗಳ ಸಹಸ್ರನಾಮಗಳಿವೆ.

ಇವೆಲ್ಲದರ ಮೂಲದಲ್ಲಿ ಒಂದೇ ತತ್ತ್ವವಿರುವುದಾದರೆ, ಆ ಮೂಲ-ಭಗವತ್-ತತ್ತ್ವಕ್ಕೇ ಹೆಸರೊಂದುಂಟೇ? - ಎಂದು ಕೇಳಬಹುದಲ್ಲವೇ? 

ಅದಕ್ಕೆ ಯೋಗಶಾಸ್ತ್ರದ ಉತ್ತರವಿದೆ. ದೇವನೆಂದರೆ ಎಂತಹವನು, ಹಾಗೂ ಆತನ ಹೆಸರೇನು - ಎಂಬುದನ್ನೂ ಪಾತಂಜಲ-ಯೋಗಸೂತ್ರವು ಹೇಳುತ್ತದೆ: ಯಾವನಿಗೆ ಕ್ಲೇಶ-ಕರ್ಮಗಳಿರವೋ ಆತನೇ ಈಶ್ವರ; ಪ್ರಣವವೇ ಆತನ ವಾಚಕ (ತಸ್ಯ ವಾಚಕಃ ಪ್ರಣವಃ) ಎಂದಿದೆ.

ಇಲ್ಲಿ ಹೇಳಿರುವ ಕ್ಲೇಶ-ಕರ್ಮಾದಿಗಳು ಪಾರಿಭಾಷಿಕ-ಪದಗಳು.  ಅವುಗಳ ವಿಶ್ಲೇಷಣೆ ಇಲ್ಲಿ ಬೇಡ. ಹೆಸರಿಗೇ ಇನ್ನೊಂದು ಹೆಸರು "ವಾಚಕ". ಈ ವಾಚಕದಿಂದ ಯಾರನ್ನು ಹೆಸರಿಸಲಾಗಿದೆಯೋ ಆತನು "ವಾಚ್ಯ". ಹೀಗೆ, ಇಲ್ಲಿ ಈಶ್ವರನು ವಾಚ್ಯ, ಪ್ರಣವವೆಂಬುದು ವಾಚಕ. ಅರ್ಥಾತ್, ಈಶ್ವರನ ಹೆಸರೇ ಪ್ರಣವ.

ನಮಗೆಲ್ಲ ಹುಟ್ಟುಂಟು, ಸಾವುಂಟು. ಭಗವಂತನ ಅವತಾರಗಳಿಗೆ ಸಹ ಹೀಗೆಯೇ ಆದಿಯುಂಟು, ಅಂತವುಂಟು. ಆದರೆ ಭಗವಂತನೇ ಹೇಗಿರುವನೆಂದರೆ ಆತನು ಅನಾದಿ, ಅನಂತ. ಎಂದೇ ಎಂದೂ ಹೊಸದಾಗಿಯೇ ಇರುವವನು ಆತ! ನವವೆಂದರೆ ಹೊಸತು; ಪ್ರ-ನವವೆಂದರೆ ಹೊಚ್ಚಹೊಸತು! ಹೀಗೆ ಎಂದೆಂದೂ ಹೊಚ್ಚಹೊಸತಾಗಿರುವ ನಿತ್ಯ-ತತ್ತ್ವವೇ ಪ್ರಣವ.

ಇದಲ್ಲದೆ ಯೋಗಶಾಸ್ತ್ರ-ದೃಷ್ಟಿಯಿಂದ ಪ್ರಣವ ಎಂಬುದಕ್ಕೂ ಪ್ರಣಾಮ ಎಂಬುದಕ್ಕೂ ಹತ್ತಿರದ ನಂಟುಂಟು. ಭಕ್ತಿಯಿದ್ದೆಡೆ ಬಾಗುವುದೇ.

ಪ್ರಣವವನ್ನು ಜಪಿಸಬೇಕೆಂದೂ, ಅದರ ಅರ್ಥವನ್ನು ಭಾವಿಸಬೇಕೆಂದೂ ಯೋಗಸೂತ್ರದಲ್ಲಿ ಹೇಳಿದೆ. ಪ್ರಣವ-ವಾಚ್ಯನಾದ ಈಶ್ವರನಲ್ಲಿಯ ಪ್ರಣಿಧಾನದಿಂದಲೇ, ಎಂದರೆ ಭಕ್ತಿಪೂರ್ವಕ-ಸರ್ವಕರ್ಮಾರ್ಪಣದಿಂದಲೇ, ಸಮಾಧಿಸಿದ್ಧಿಯಾಗುವುದೆಂದೂ ಅಲ್ಲೇ ಹೇಳಿದೆ.

ಪ್ರಣವಕ್ಕೆ ಪರ್ಯಾಯಪದವೊಂದುಂಟು. ಅದುವೇ ಓಂಕಾರ. "-ಕಾರ" ಎಂಬುದನ್ನು ಸೇರಿಸಿದರೆ "ಹೀಗೆಂಬ ಧ್ವನಿ" ಎಂಬ ಅರ್ಥ ಬರುತ್ತದೆ. ಬಿಲ್ಲಿನ ಸದ್ದಿಗೆ ಟಂಕಾರ ಎನ್ನುತ್ತೇವೆ; ಅದಕ್ಕೆ "ಟಂ - ಎಂಬ ಧ್ವನಿ" - ಎಂದರ್ಥ. ಹಾಗೆಯೇ ದುಂಬಿಗಳ ಝೇಂಕಾರವೆನ್ನುವಾಗಲೂ. ಅಂತೆಯೇ ಓಂಕಾರವೆಂದರೆ "ಓಂ ಎಂಬ ಧ್ವನಿ"ಯೆಂದೇ.

ಈಶ್ವರ-ತತ್ತ್ವವು ಮೂಲತಃ ಅಮೂರ್ತವಾದದ್ದು, ಎಂದರೆ ಶರೀರವಿಲ್ಲದ್ದು. ಕೇವಲಜ್ಯೋತೀರೂಪವಾದ ಅದು ಮೊಟ್ಟಮೊದಲು ಮೈತಾಳುವುದು ನಾದವಾಗಿ, ಶಬ್ದವಾಗಿ. ಎಂದೇ ಓಂಕಾರವನ್ನು ಈಶ್ವರನ ಶಬ್ದಮೂರ್ತಿಯೆನ್ನುವುದೂ ಉಂಟು. ಯೋಗಿಪುಂಗವರಾದ ಶ್ರೀರಂಗಮಹಾಗುರುಗಳ ಮಾತಿನಲ್ಲಿ, "ಜಗತ್ತನ್ನಾಳುವ ಸ್ವರಾಟ್ ಆದ ಪ್ರಭುವಿನ ವಿಶ್ವಮೂಲಶಕ್ತಿಯ ಸದ್ದೇ ಈ ಓಂಕಾರ". ವೇದಾದಿಯಲ್ಲೇ ಪ್ರೋಕ್ತವಾದ ಸ್ವರವಿದು, ವೇದಾಂತದಲ್ಲಿಯೂ ಪ್ರತಿಷ್ಠಿತವಾದದ್ದು.

ಈ ಏಕಾಕ್ಷರಬ್ರಹ್ಮವೇ ಅಕಾರ-ಉಕಾರ-ಮಕಾರವಾಗಿ ವಿಸ್ತಾರಗೊಂಡು ಬ್ರಹ್ಮ-ವಿಷ್ಣು-ಮಹೇಶ್ವರವೆಂಬ ತ್ರಿಮೂರ್ತಿಗಳಾಗಿರುವುದು. ತ್ರಿದೇವಮೂಲವೆನ್ನುವಂತೆ ತ್ರಿವೇದಮೂಲವೂ ಓಂಕಾರವೇ. ಇದೆಲ್ಲವೂ ಯೋಗಿಗಳಿಗೇ ಏಕಾಂತದಲ್ಲೇ ಗೋಚರವಾಗತಕ್ಕದ್ದು.

ಈಶ್ವರನನ್ನು "ಹೆಸರು ಹಿಡಿದು" ಓಂಕಾರ-ದಿಂದ ಆಹ್ವಾನ ಮಾಡಿದರೆ ಆತನು ಪ್ರಸನ್ನಗೊಳ್ಳುತ್ತಾನೆ - ಎಂಬ ಯೋಗಿಯಾಜ್ಞವಲ್ಕ್ಯರ ಮಾತೂ ಇಲ್ಲಿ ಸ್ಮರಣೀಯವಲ್ಲವೇ?

ಸೂಚನೆ: 19/7//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

ಈ ಸುಂದರಾಂಗನು ಒಬ್ಬ ರಾಜನಾದಾನೇ?

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)

ಮನ್ಮಥನು ಕೃಷ್ಣನ ಪುತ್ರನೆಂಬುದು ಸುವಿದಿತ. ಆತನು ಪರಮಸುಂದರ ಎಂಬುದೂ ಸುವಿದಿತವೇ. ಆದರೆ ಆ ಸೌಂದರ್ಯದ ಮೂಲವಾವುದು? - ಎಂಬ ಅವಿದಿತವಾದ ಅಂಶವೊಂದಿದೆ - ಎಂದು ಈ ಶ್ಲೋಕವು ಪ್ರತಿಪಾದಿಸುತ್ತದೆ.

ಕೃಷ್ಣನು ತನ್ನ ಅವತಂಸವನ್ನಾಗಿ, ಎಂದರೆ ಶಿರೋಲಂಕಾರವನ್ನಾಗಿ, ಮಾಡಿಕೊಂಡಿರುವುದು ಶಿಖಿ-ಶಿಖಂಡವನ್ನು. ಶಿಖಿ ಎಂದರೆ ನವಿಲು. ಅದರ ಶಿಖಂಡವೆಂದರೆ ಪಿಂಛ, ಗರಿ. ನವಿಲಿನ ಗರಿಯ ಮುಂದೆ ಮತ್ತಾವ ಗರಿ? ಇದರಿಂದಾಗಿ ಕೃಷ್ಣನು ಚೆನ್ನಾಗಿ ಕಾಣುತ್ತಾನೆ, ನಿಜವೇ.

ಆದರೆ ಇಲ್ಲಿ ಮತ್ತೊಂದಂಶವನ್ನೂ ಗಮನಿಸಬೇಕು. ಅದು ಮುಖ್ಯವಾದ ಅಂಶ. ಏನದು? ಕೃಷ್ಣನಲ್ಲಿರುವ ಕಾಂತಿ ಸರಸವಾದದ್ದು. ಅದನ್ನು ಸುಧೆಯೆಂದೇ ಕರೆಯಬಹುದು. ಸುಧೆಯೆಂದರೆ ಅಮೃತ. ರಸಗಳಲ್ಲಿ ಸುಧೆಯೇ ಉತ್ತಮವಷ್ಟೆ. ಅಮೃತದ ಸಮೃದ್ಧಿಯೇ ಅದು.

ಮತ್ತೂ ಮುಖ್ಯವಾದುದೆಂದರೆ ಅದು ಸಾಂಸಿದ್ಧಿಕವಾದುದು. ಯಾವುದು ಸ್ವತಃಸಿದ್ಧವೋ ಅದನ್ನೇ 'ಸಾಂಸಿದ್ಧಿಕ' ಎನ್ನುವುದು. ಹೀಗೆ ಸಹಜವೂ ಸರಸವೂ ಆದ ಸುಧೆಯ ಸಮೃದ್ಧಿಯಂತಿದೆ ಕೃಷ್ಣನ ಕಾಂತಿ.

ಸ್ವತಃ ಬಹಳ ಸುಂದರಿಯಾದ ಹೆಣ್ಣಿನ ಕೆನ್ನೆಗೆ ಒಂದು ದೃಷ್ಟಿಬೊಟ್ಟನ್ನಿಟ್ಟರೆ ಅದೂ ಅದರ ಸೌಂದರ್ಯವನ್ನು ವರ್ಧಿಸುತ್ತದೆ. ಹಾಗಿದೆ ಇಲ್ಲಿ ನವಿಲುಗರಿಯ ಪಾತ್ರ. ಸಾಧಾರಣರೂಪ-ಶಾಲಿಯಾದವನೋ(ಳೋ) ಅದನ್ನು ಧರಿಸಿದರೂ ಸೌಂದರ್ಯವು ವರ್ಧಿಸುವುದಲ್ಲವೇ?

ಹಾಗಲ್ಲ. ಅಷ್ಟುಮಾತ್ರವಲ್ಲವೆನ್ನಲು ಮನ್ಮಥನ-ವೃತ್ತಾಂತವನ್ನು ಕವಿಯು ಕಣ್ಮುಂದೆ ಇರಿಸಿದ್ದಾನೆ. ಏನದು? ಶ್ರೀಕೃಷ್ಣನ ಕಾಂತಿಸಮೃದ್ಧಿಯೇನುಂಟೋ ಅದರ ಬಿಂದುವೊಂದನ್ನು ತೆಗೆದುಕೊಳ್ಳಿ. ಆ ಬಿಂದುವಿನ ಲೇಶವಷ್ಟೇ ಸಾಕು. ಲೇಶವೆಂದರೆ ಅಲ್ಪಭಾಗ. ಆ ಲೇಶದ ಕಣಿಕೆಯನ್ನು ಊಹಿಸಿಕೊಳ್ಳಿ. ಏನು ಕಣಿಕೆಯೆಂದರೆ? ಕಣವೆಂದರೇ ಅಲ್ಪ; ಇನ್ನು ಕಣಿಕಾ ಎಂದರೆ ಅಲ್ಪದಲ್ಲಿಯ ಅಲ್ಪ. ಹೀಗಾಗಿ ಲೇಶದ ಕಣಿಕೆಯೆಂದರೆ ಅಣುಭಾಗದ ಅಣುಭಾಗ.

ಅಲ್ಲಿಗೆ ಶ್ರೀಕೃಷ್ಣನ ಕಾಂತಿರಾಶಿಯಲ್ಲಿನ "ಬಿಂದುವಿನ ಲೇಶದ ಸಣ್ಣ ಕಣ" - ಎಂದಂತಾಯಿತು. ಅಷ್ಟರ ಪರಿಣಾಮ-ಭಾಗ್ಯದಿಂದ, ಎಂದರೆ ಪರಿಪಾಕದ ಭಾಗ್ಯದಿಂದಲೇ, ಮನ್ಮಥನು ತನ್ನ ಹಿರಿಮೆಯನ್ನು ಪಡೆದಿರುವುದು. ಇದು ನಮಗೆ ಅವಿದಿತ. ಇದನ್ನು ನಮ್ಮ ಗಮನಕ್ಕೆ ತಂದಿದ್ದಾನೆ, ಕವಿ.

ಸೌಂದರ್ಯವೇ ಮನ್ಮಥನ ಹಿರಿಮೆ, ಆತನ ಸೌಭಾಗ್ಯದ ಸೀಮೆ. ಸೀಮೆಯೆಂದರೆ ಎಲ್ಲೆ, ಪ್ರಾಂತಭೂಮಿ.  ಸೌಭಾಗ್ಯದ ಪರಮಾವಧಿಯ ಸ್ಥಾನವು ದೊರೆತಿದೆ, ಆತನಿಗೆ.

ಅಲ್ಲಿಗೆ ಏನೆಂದು ಹೇಳಿದಂತಾಯಿತು? ಶ್ರೀಕೃಷ್ಣನ ಕಾಂತಿಯ ಬಿಂದುವಿನ ಲವಲೇಶದ ಕಿರಿದಾದ ಅಂಶದಿಂದಲೇ ಮನ್ಮಥನು ಸುಂದರತಮನೆನಿಸಿರುವುದು – ಎಂದು! ಅಲ್ಲಿಗೆ ಶ್ರೀಕೃಷ್ಣನ ಸೌಂದರ್ಯವು ಮತ್ತೆಂತಹುದೆಂಬುದನ್ನು ಊಹಿಸಿಕೊಳ್ಳಬಹುದಲ್ಲವೇ?

ಮನ್ಮಥನನ್ನು ಪಂಚಬಾಣನೆಂದಿದೆ. ಏಕೆಂದರೆ ಅವನ ಬಾಣಗಳು ಐದು. ಐದೂ ಹೂಗಳೇ. ಅವೇ ಅರವಿಂದ, ಅಶೋಕ, ಚೂತ, ನವಮಲ್ಲಿಕಾ ಹಾಗೂ ನೀಲೋತ್ಪಲ. ಕೋಮಲವಾದ ಬಾಣಗಳಾದರೂ ಮನಸ್ಸನ್ನು ಮಥನಮಾಡುವಂತಹವು, ಮನ್ಮಥನ ಈ ಬಾಣಗಳು.

ಮನ್ಮಥನ ಸೌಂದರ್ಯ-ಸೌಭಾಗ್ಯವು ಬಂದಿರುವುದೆಲ್ಲಾ ಆತನ ತಂದೆಯಾದ ಶ್ರೀಕೃಷ್ಣನಿಂದ, ಆ ಕೃಷ್ಣನ ಕಾಂತಿಯ ಅಂಶಾಂಶಾಂಶದಿಂದ. ಮನ್ಮಥನ ಸೌಂದರ್ಯದ ಅಪ್ಪ, ಕೃಷ್ಣನ ಸೌಂದರ್ಯ! ಸರ್ವಾಧಿಕ-ಸೌಂದರ್ಯದ ಮೂಲವೇ ನಮ್ಮ ಕೃಷ್ಣ!

ಶ್ಲೋಕ ಹೀಗಿದೆ:
ಜೀಯಾದ್ ಅಸೌ ಶಿಖಿ-ಶಿಖಂಡ-ಕೃತಾವತಂಸಾ/
ಸಾಂಸಿದ್ಧಿಕೀ ಸರಸ-ಕಾಂತಿ-ಸುಧಾ-ಸಮೃದ್ಧಿಃ |
ಯದ್-ಬಿಂದು-ಲೇಶ-ಕಣಿಕಾ-ಪರಿಮಾಣ-ಭಾಗ್ಯಾತ್ /
ಸೌಭಾಗ್ಯ-ಸೀಮ-ಪದಂ ಅಂಚತಿ ಪಂಚಬಾಣಃ ||

ಶ್ಲೋಕದಲ್ಲಿ ಅನುಪ್ರಾಸವೂ ಹಿತಮಿತವಾಗಿ ಬಂದಿದೆ. ಎರಡನೆಯ ಪಾದದಲ್ಲಿ ಆರು ಸಕಾರಗಳಿವೆ. ಶ್ಲೋಕಾದಿಯಲ್ಲಿ  ಶಿಖಿ-ಶಿಖಂಡ ಎನ್ನುವಲ್ಲಿ, ಶ್ಲೋಕಾಂತದಲ್ಲಿ ಅಂಚತಿ ಪಂಚಬಾಣಃ ಎನ್ನುವಲ್ಲಿಯ ಅನುಪ್ರಾಸಗಳು ಹೃದ್ಯವಾಗಿವೆ.

****

ಒಬ್ಬ ಮಹಾರಾಜನೆಂದರೆ ಹೇಗಿರುತ್ತಾನೆ? ಕೊನೆಯ ಪಕ್ಷ, ಒಬ್ಬ ಸಾಧಾರಣರಾಜನೆಂದಾದರೂ ಹೇಗಿರಬೇಕು? ವಿಹಾರಕ್ಕಾಗಲಿ, ಯುದ್ಧಕ್ಕಾಗಲಿ ಹೊರಗೆಲ್ಲಿಯಾದರೂ ಹೋದಾಗ, ಅಲ್ಲಿ ಆತನು ಹೂಡುವ ಸ್ಕಂಧಾವಾರವು ಸಹ ಆತನ ಸ್ಥಾನಮಾನಗಳಿಗೆ ಒಪ್ಪುವಂತಿರಬೇಕು. ಸ್ಕಂಧಾವಾರವೆಂದರೆ ಡೇರೆ. ಅದು ವೈಭವಪೂರ್ಣವಾಗಿರಬೇಕು.

ಅಷ್ಟು ಮಾತ್ರವೇ? ಇತ್ತ ಆತನ ಪ್ರಜೆಗಳೆಲ್ಲರೂ ಕಾಲಕಾಲಕ್ಕೆ ಕಂದಾಯವನ್ನು ಕಟ್ಟುವವರಾಗಿರಬೇಕು. ರಾಜನ ಅಂತಃಪುರವೂ ಭವ್ಯವಾಗಿರಬೇಕು. ಆತನ ಪಟ್ಟಮಹಿಷಿಯೇನು, ಉಳಿದ ಭಾರ್ಯೆಯರೇನು - ಎಲ್ಲವೂ ವೈಭವಯುತವಾಗಿ ರಬೇಕು. ರಾಜನೆಂದರೆ ಆತನನ್ನು ಕಾಯುವ ಆಯುಧಧಾರಿ ಭಟರಿರುವರಲ್ಲವೇ? ಮಂತ್ರಿ ಮುಂತಾದವರೂ ಇರಲೇಬೇಕಷ್ಟೆ? ಅದೂ, ಧೀಮಂತರಾದ ಮಂತ್ರಿಗಳೇ ಇರಬೇಕು. ಇನ್ನು ರಾಜನನ್ನು ನಾವು ಗುರುತಿಸುವುದೇ ಆತನ ವೇಷಭೂಷಣಗಳಿಂದ. ಅವುಗಳಿಂದಲೇ ಆತನು ವಿಜೃಂಭಿಸುವುದು.ಆದ್ದರಿಂದ ಅದೂ ಶೋಭಿಸಬೇಕು.

ಇವೆಲ್ಲಾ ಸಾಧಾರಣವಾದ ಅಂಶಗಳಷ್ಟೇ? ಹಾಗಿದ್ದರೆ ಇವನ್ನೇ ಒಮ್ಮೆ ನಮ್ಮ ಕೃಷ್ಣ-"ರಾಜ"ನಿಗೆ ಅನ್ವಯಿಸಿ ನೋಡೋಣವೇ? ಈತನ ಸ್ಕಂಧಾವಾರದ ಅಥವಾ ಶಿಬಿರಸ್ಥಾನವೆಂಬುದು ಕೇವಲ ಒಂದು ವ್ರಜ. ವ್ರಜವೆಂದರೆ ದನಗಳ ಬೀಡು! ಈತನಿಗೆ ಮಂತ್ರಿ ಮುಂತಾದ ಜೊತೆಗಾರರೋ ಗೋಪರು, ಎಂದರೆ ಗೊಲ್ಲರು! ಅವರಲ್ಲಾವ ಧೀಮಂತಿಕೆಯನ್ನು ಕಾಣೋಣ?

ಇನ್ನು ಇವನಿಗೆ ಕಂದಾಯದ ಕಾಣಿಕೆಯನ್ನು ಸಲ್ಲಿಸುವವರೋ? ತಮ್ಮ ಸ್ಕಂಧದ ಮೇಲೆ, ಎಂದರೆ ಹೆಗಲ ಮೇಲೆ, ಕರುಗಳ ಹಗ್ಗವನ್ನಿಟ್ಟುಕೊಳ್ಳುವ ಗೋಪರು! ಅವರಲ್ಲೂ ಏನನ್ನಾದರೂ ಕಾಣಿಕೆಯನ್ನಾಗಿ ತೆರುವವರು ಕೆಲವೇ ಕೆಲವರು, ಎಲ್ಲರೂ ಸಹ ಅಲ್ಲ! ಅಲ್ಲಿಗದೇನು ಕಂದಾಯ ಹುಟ್ಟೀತೋ?

ಇನ್ನು ತನ್ನ ಅಂಗನೆಯರೆಂದರೆ ಮತ್ತೆ ಅದೇ, ಆ ಗೋಪಸ್ತ್ರೀಯರು. ಒಬ್ಬಳು ರಾಣಿಯೆಂಬುದಿಲ್ಲ, ಯಥಾವತ್ತಾಗಿ ವಿವಾಹವಾದವಳೊಬ್ಬಳಿಲ್ಲ – ಹೆಸರಿಗೂ! ಇನ್ನು ಈತನ ಶೃಂಗಾರಗಳೋ, ಗಿರಿ-ಗೈರಿಕಗಳು ಎಂದರೆ ಪರ್ವತದಲ್ಲಿ ಹುಟ್ಟುವ ಕೆಲವು ಧಾತುಗಳು. ಇಲ್ಲವೇ, ಹೊಳೆಯುವ (ನವಿಲು)ಗರಿಗಳು. ಇವೂ ಒಂದು ರಾಜಾಲಂಕಾರವೇ?

ಹೀಗೆಲ್ಲ ಇರುವುದರಿಂದ ಈ ಕೃಷ್ಣನನ್ನು ಒಬ್ಬ ಸಾಧಾರಣರಾಜನೆಂದು ಸಹ ಗುರುತಿಸಲಾಗದು. ಹಾಗಿರಲು ಈತನನ್ನೇ ಬೊಟ್ಟುಮಾಡಿ ತೋರಿಸುವರಲ್ಲಾ "ತ್ರಿಲೋಕಪ್ರಭು"ವೆಂದು! - ಎಂದು ಆಶ್ಚರ್ಯಪಡುತ್ತಾನೆ, ಕವಿ.

ಶೃಂಗ-ಗ್ರಾಹಿಕೆಯೆಂದರೆ ಕೊಂಬು ಹಿಡಿಯುವುದು. "ಶೃಂಗಗ್ರಾಹಿಕೆಯಿಂದ ಹೇಳುವುದು" ಎಂದರೆ, "ಇದೋ ಇದು" ಎಂದು ಬೊಟ್ಟುಮಾಡಿ ನಿರ್ದಿಷ್ಟವಾಗಿ ತೋರಿಸುವುದು. ಹಾಗೆ ತೋರಿಸಿಕೊಟ್ಟಾದ ಮೇಲೆ "ಇದು ಗೊತ್ತಾಗಲಿಲ್ಲ" ಎಂದು ಯಾರೂ ಹೇಳುವಂತಿರಲಾರದು. ಅಷ್ಟೊಂದು ಸ್ಪಷ್ಟವದಷ್ಟೆ?

ಅಂತೂ ಪರಿಸ್ಥಿತಿ ಹೀಗಿರಲು, ಶ್ರೀಕೃಷ್ಣನನ್ನೇ ಬೊಟ್ಟುಮಾಡಿ ತೋರಿಸಿ, "ಈತನೇ ತ್ರಿಲೋಕಾಧಿಪತಿ"ಯೆನ್ನುವುದೇ? ಒಬ್ಬ ಪಾಳೆಯಗಾರನಿಗೆ ದಕ್ಕಬಹುದಾದ ಸ್ಥಾನಮಾನಗಳೂ ಈತನಲ್ಲಿ ತೋರುತ್ತಿಲ್ಲವಲ್ಲಾ?

ಈ ಆಶ್ಚರ್ಯಕ್ಕೇ ಕವಿಯು "ಶಿವ! ಶಿವ!" ಎನ್ನುವುದು.

ಮೇಲ್ನೋಟಕ್ಕೆ ಕೃಷ್ಣನನ್ನೇ ಲೇವಡಿಮಾಡುವಂತಿದೆ, ಈ ಪದ್ಯ. ಶ್ರೀಕೃಷ್ಣನು ಹೀಗೆಲ್ಲ ಸಾಧಾರಣನಾಗಿಯೇ ತೋರಿದರೂ, ವಾಸ್ತವವಾಗಿ ಮಹಾಮಹಿಮನೇ – ಎಂಬ ಮುಖ್ಯ-ತತ್ತ್ವವನ್ನು ಕವಿಯು ಪರ್ಯಾಯವಾಗಿ ಹೇಳುತ್ತಿದ್ದಾನೆ.

ಪ್ರೀತಿಯುಕ್ಕಿದಾಗ ಸಲಿಗೆ ಹೆಚ್ಚು. ಸಲಿಗೆಯಿರುವಲ್ಲಿ ಒಮ್ಮೊಮ್ಮೆ ಲಘೂಕರಿಸಿ ನುಡಿಯುವುದೂ ಆಶ್ಚರ್ಯವೇನಲ್ಲವಲ್ಲವೇ?

 ಸ್ಕಂಧಾವಾರ-ಪದಂ ವ್ರಜಃ, ಕತಿಪಯೇ ಗೋಪಾಃ ಸಹಾಯಾದಯಃ,/
ಸ್ಕಂಧಾಲಂಬಿನಿ ವತ್ಸ-ದಾಮ್ನಿ ಧನದಾಃ, ಗೋಪಾಂಗನಾಃ ಸ್ವಾಂಗನಾಃ |
ಶೃಂಗಾರಾಃ ಗಿರಿ-ಗೈರಿಕಂ, ಶಿವ! ಶಿವ! ಶ್ರೀಮಂತಿ ಬರ್ಹಾಣಿ ವಾ,/
ಶೃಂಗ-ಗ್ರಾಹಿಕಯಾ ತಥಾಪಿ ತದಿದಂ ಪ್ರಾಹುಃ ತ್ರಿಲೋಕೇಶ್ವರಮ್!! ||

ಸೂಚನೆ : 19/07/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Tuesday, July 15, 2025

ಪ್ರಶ್ನೋತ್ತರ ರತ್ನಮಾಲಿಕೆ 14 (Prasnottara Ratnamalike 14)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ ೨೪. ನಿದ್ರೆ ಯಾವುದು?

ಉತ್ತರ - ಮೌಢ್ಯ.


ಈ ಮುಂದಿನ ಪ್ರಶ್ನೆ  'ನಿದ್ದೆ ಯಾವುದು?' ಎಂಬುದಾಗಿ. ಅದಕ್ಕೆ ಉತ್ತರ 'ಮೌಢ್ಯ'. ಇಲ್ಲಿ ನಾವು ಚಿಂತಿಸಬೇಕಾದ ವಿಷಯ ಮೌಢ್ಯವು ಹೇಗೆ ನಿದ್ದೆಯಾಗುವುದು? ನಿದ್ದೆಗೂ ಮೌಢ್ಯಕ್ಕೂ ಯಾವ ರೀತಿಯಾಗಿರುವ ಹೋಲಿಕೆ? ಅಥವಾ ಅವೆರಡೂ ಹೇಗೆ ಒಂದೇ ರೂಪದವುಗಳು? ಎಂದು. ಮೌಢ್ಯ ಎಂದರೆ ಮೂಢತನ. ಮೂಢ ಎಂಬ ಶಬ್ದವು ಮೋಹ ಎಂಬ ಶಬ್ದದಿಂದ ಉತ್ಪತ್ತಿಯಾಗಿದೆ. ಮೋಹ ಎಂದರೆ ಮೂರ್ಛಾ ಅವಸ್ಥೆ. ಪ್ರಜ್ಞೆ ತಪ್ಪುವುದು. ಸುಶ್ರುತಾಚಾರ್ಯರ ಪ್ರಕಾರ ಸಂಜ್ಞಾ ವಾಹಕ ನಾಡಿಗಳಲ್ಲಿ ತಮಸ್ಸು ಪ್ರವೇಶ ಮಾಡಿದಾಗ ಆ ನಾಡಿಗಳು ಸುಖದುಃಖಗಳನ್ನು ಸಂವೇದನ ಮಾಡುವ ಶಕ್ತಿಯನ್ನು ಕಳೆದುಕೊಳ್ಳುತ್ತವೆ ಎಂದು. ಅಥವಾ ಯಾವುದು ನಮ್ಮ ಜೀವನಕ್ಕೆ- ಉಜ್ಜೀವನಕ್ಕೆ ಅತ್ಯಂತ ಅವಶ್ಯವೋ, ಅದನ್ನು ಬಿಟ್ಟು ಅನಾವಶ್ಯಕವಾದ ವಿಷಯವನ್ನು ಬಹುವಾಗಿ ಬಯಸುವುದು. ಇದೇ ಸುಖವನ್ನು ಕೊಡುವುದು ಎಂದು ಭ್ರಮಿಸುವುದು. ಇದಕ್ಕೆ ಮೋಹ ಎಂದು ಕರೆಯುತ್ತಾರೆ. ಇದೇ ಅತಿಯಾದಾಗ ಮೌಢ್ಯವಾಗುತ್ತದೆ. ಅಂದರೆ ಆ ವ್ಯಕ್ತಿಗೆ ಆ ವಿಷಯ ಅತ್ಯಂತ ಹತ್ತಿರವಾಗುತ್ತದೆ. ಅದಿಲ್ಲದಿದ್ದರೆ ಆತ ಚಡಪಡಿಸುತ್ತಾನೆ. ಅಥವಾ ಅವನಿಗೆ ಆ ವಿಷಯವೇ ಸರ್ವಸ್ವವಾಗಿ ಕಾಣಿಸುತ್ತಿರುತ್ತದೆ. ವಸ್ತುತಃ ಜೀವನದಲ್ಲಿ ಯಾವುದು ಮುಖ್ಯ? ಯಾವುದು ಅಮುಖ್ಯ? ಎಂಬ ವಿಷಯವೇ ತಿಳಿಯದಾಗುತ್ತದೆ? ಮುಖ್ಯವಾದ ವಿಷಯವನ್ನೇ ಚಿಂತಿಸುತ್ತಾ ಯೋಚಿಸುತ್ತಾ ಅದನ್ನು ಪಡೆಯುವ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದುವಂತೆ ಆಗುತ್ತದೆ. ಇದೇ ನಿಜವಾದ ಮೌಢ್ಯ. ವಸ್ತುವಿನ ಅತ್ಯಂತ ಸಾಮಿಪ್ಯ ಅವನದಾಗುತ್ತದೆ. ಉಳಿದ ವಿಷಯದ ಬಗ್ಗೆ ಅರಿವಿಲ್ಲದಾಗುತ್ತದೆ. ಅಜ್ಞಾನ ಆವರಿಸುತ್ತದೆ. ಆದ್ದರಿಂದ ಇದು ಮೌಢ್ಯ. ಇದಕ್ಕೆ ಬೇಕಾದ ಗುಣವೇ ತಮಸ್ಸು. ತಮಸ್ಸಿನ ಸ್ವಭಾವ ಅಂಟಿಕೊಳ್ಳುವುದು. ಬಿಡದಂತೆ ಅಂಟಿಕೊಳ್ಳುವುದು. ನಿದ್ದೆಯೂ ಕೂಡ ತಮೋಗುಣದಿಂದ ಬರುವಂತಹದ್ದು. ನಿದ್ದೆಗೂ ಮೌಢ್ಯಕ್ಕು ತಮೋಗುಣವೇ ಕಾರಣವಾಗಿರುವುದರಿಂದ ಇವೆರಡೂ ಒಂದೇ. ಇಂತಹ ಅವಿನಾಭಾವ ಸಂಬಂಧ ಇವೆರಡಕ್ಕೂ ಇರುವುದು ಕಂಡುಬರುತ್ತದೆ. 


ಇಷ್ಟೇ ಅಲ್ಲದೆ ನಿದ್ದೆಗೆ ಮೌಢ್ಯವೇ ಕಾರಣವಾಗಿರುತ್ತದೆ. ಇಲ್ಲೂ ಪ್ರಾಪಂಚಿಕ ಅರಿವು ಇಲ್ಲದಂತೆ ಕಾಣುತ್ತದೆ. ತಮಸ್ಸು ಮನಸಿನ ಮೇಲೆ ಮಾಡುವ ಪ್ರಭಾವ ಇದಾಗಿರುತ್ತದೆ. ತಮಸ್ಸಿನ ಅತಿರೇಕವೇ ನಿದ್ದೆಗೆ ಕಾರಣವಾಗುತ್ತದೆ. ತಮಸ್ಸಿನ ಅತಿರೇಕವು ವಿಷಯದ ಜಾಡ್ಯಕ್ಕೂ ಕಾರಣವಾಗುತ್ತದೆ. ಹಾಗಾಗಿ ಇವೆರಡು ಒಂದೇ ಎಂಬುದಾಗಿ ಕರೆಯಬಹುದು. 


ಶ್ರೀರಂಗ ಮಹಾಗುರುಗಳು ಹೇಳುವಂತೆ ನಿದ್ದೆಯು ಎರಡು ವಿಧ; ಒಂದು ಜಾಡ್ಯನಿದ್ದೆ, ಇನ್ನೊಂದು ಅಜಾಡ್ಯನಿದ್ದೆ ಎಂಬುದಾಗಿ. ದೇಹಾಯಾಸದಿಂದ ಬರುವ ನಿದ್ದೆಯು ವಿಶ್ರಾಂತಿಯನ್ನು ಪಡೆಯುವ, ಒಂದು ಕ್ಷಣಿಕ ಆನಂದವನ್ನು ಅನುಭವಿಸುವ ರೂಪದ್ದಾಗಿರುತ್ತದೆ. ಇದಕ್ಕೆ ಜಾಡ್ಯನಿದ್ದೆ ಎಂಬುದಾಗಿ ಕರೆಯಲಾಗುತ್ತದೆ. ಅದೇ ರೀತಿ ಅತ್ಯಂತ ಅತಿಶಯ ಆನಂದದವನ್ನು ಕೊಡುವ ಅದೊಂದು ವಿಶಿಷ್ಟವಾದ ನಿದ್ರೆ ಇದೆ. ಈ ನಿದ್ದೆಯು ಜಾಡ್ಯದಿಂದ ಬರುವುದಿಲ್ಲ. ಇದಕ್ಕೆ ಅಜಾಡ್ಯ ನಿದ್ದೆ ಎಂದು ಕರೆಯುತ್ತಾರೆ. ಜಾಡ್ಯ ನಿದ್ದೆಯು ಅಜಾಡ್ಯ ನಿದ್ದೆಯ ಒಂದು ತುಣುಕಾಗಿರುತ್ತದೆ. ನಾವು ನಿತ್ಯದಲ್ಲಿ ಮಾಡುವ  ನಿದ್ದೆಯು ಜಾಡ್ಯ ಅಥವಾ ಮೋಹ ಅಥವಾ ತಮಸ್ಸಿನ ಅತಿರೇಕವಾದ ಸ್ಥಿತಿಯಿಂದ ಉಂಟಾಗುತ್ತದೆ. ಹಾಗಾಗಿ ನಿದ್ದೆ ಎಂದರೆ ಜಾಡ್ಯ ಎಂಬುದಾಗಿ ಈ ಪ್ರಶ್ನೋತ್ತರದಲ್ಲಿ ತಿಳಿಸಲಾಗಿದೆ.


ಸೂಚನೆ : 13/7/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 145 ಯುಧಿಷ್ಠಿರನನ್ನಾದರಿಸಲು ನೆರೆದ ರಾಜಸ್ತೋಮ (Vyaasa Vikshita 145)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಮಯನಿರ್ಮಿತವಾದ ಆ ಭವ್ಯಸಭಾಗೃಹಪ್ರವೇಶದ ಶುಭಪ್ರಸಂಗದಲ್ಲಿ ಅನೇಕ ಕ್ಷತ್ರಿಯಶ್ರೇಷ್ಠರು ಧರ್ಮರಾಜನನ್ನು ಉಪಾಸಿಸುತ್ತಿದ್ದರು. ಉಗ್ರಸೇನ, ಅಪರಾಜಿತ, ಕಂಬೋಜರಾಜ - ಇವರುಗಳಿದ್ದರು. ಅಲ್ಲದೆ, ಯವನರನ್ನು ಒಂಟಿಯಾಗಿದ್ದುಕೊಂಡೇ ನಡುಗಿಸಿದ ಕಂಪನನಿದ್ದನು; ಕಾಲಕೇಯಾಸುರರನ್ನು ವಜ್ರಧಾರಿಯಾದ ಇಂದ್ರನು ಹೇಗೆ ನಡುಗಿಸಿದನೋ ಹಾಗೆ ನಡುಗಿಸಿದವನು ಅವನು! ಅಲ್ಲದೆ ಅಂಗ-ವಂಗ-ರಾಜರುಗಳಿದ್ದರು. ಜೊತೆಗೆ, ಸುಮಿತ್ರ, ಶೈಬ್ಯ, ಕಿರಾತರಾಜ, ಯವನಾಧಿಪತಿ, ಚಾಣೂರ, ಕಾಲಿಂಗ, ಚೇಕಿತಾನ, ವೈದೇಹ, ಶಿಶುಪಾಲ, ಅಕ್ರೂರ, ಭೀಷ್ಮಕ, ದ್ಯುಮತ್ಸೇನ, ಯಜ್ಞಸೇನ - ಇವರೇ ಮುಂತಾದ ಕ್ಷತ್ರಿಯರು ಸಭೆಯಲ್ಲಿ ಉಪಸ್ಥಿತರಾಗಿದ್ದರು. ಅಲ್ಲಿದ್ದ ಅನೇಕ ರಾಜರು ಧನುರ್ವೇದವನ್ನು ಅರ್ಜುನನಿಂದಲೇ ಕಲಿತಿದ್ದವರು. ಇವರೆಲ್ಲರೂ ಬಂದು ಅಲ್ಲಿ ಉಪಸ್ಥಿತರಿದ್ದರು.


ಇವರುಗಳೇ ಅಲ್ಲದೆ ಮುಖ್ಯಸಂಮತರಾದ ಅನೇಕಾನೇಕ ಕ್ಷತ್ರಿಯರಾಜರು ಯುಧಿಷ್ಠಿರನನ್ನು ಆ ಸಭೆಯಲ್ಲಿ ಉಪಾಸಿಸಿದರು.


ರೌರವಾಜಿನವನ್ನು - ಎಂದರೆ ರುರು ಎಂಬ ಮೃಗದ ಚರ್ಮವನ್ನು- ವಸ್ತ್ರವಾಗಿ ಧರಿಸಿ, ಅಲ್ಲಿಯೇ ಎಂದರೆ ಅರ್ಜುನನಲ್ಲಿಯೇ, ಶಿಕ್ಷಣವನ್ನು ಪಡೆದಂತಹ ವೃಷ್ಣಿವಂಶದ ಕುಮಾರರೂ ಅಲ್ಲಿ ಸೇರಿದವರಾಗಿದ್ದರು. ಅವರಲ್ಲಿ ಮುಖ್ಯರಾದ ಕೆಲವರನ್ನು ಹೇಳಬೇಕೆಂದರೆ - ರೌಕ್ಮಿಣೇಯ (ಎಂದರೆ ರುಕ್ಮಿಣಿಯ ಪುತ್ರನಾದ ಪ್ರದ್ಯುಮ್ನ), ಸಾಂಬ, ಸಾತ್ಯಕಿ, ಶೈಬ್ಯ ಮುಂತಾದವರು. ಇವರುಗಳೂ ಇನ್ನಿತರ ಅನೇಕ ರಾಜರೂ ಸಹ ಅಲ್ಲಿಗೆ ಆಗಮಿಸಿದ್ದರು.


ಅಲ್ಲದೆ ಅರ್ಜುನನ ಮಿತ್ರನೇ ಆದ ತುಂಬುರು (ಈತನೊಬ್ಬ ಗಂಧರ್ವ); ಆತನಂತೂ ಸದಾಕಾಲವೂ ಸಭೆಯಲ್ಲಿ ವಿರಾಜಿಸುತ್ತಿದ್ದನು. ಚಿತ್ರಸೇನನು ತನ್ನ ಮಂತ್ರಿಯೊಂದಿಗೆ ಬಂದಿದ್ದನು. ಅವನವರೇ ಆದ ಗಂಧರ್ವ-ಅಪ್ಸರೆಯರು – ಅವರು ಇಪ್ಪತ್ತೇಳು ಮಂದಿಯಿದ್ದವರು - ಅವರೆಲ್ಲರೂ ಆಸೀನನಾಗಿದ್ದ ಯುಧಿಷ್ಠಿರನನ್ನು ಉಪಾಸಿಸಿದರು.


ಗೀತದಲ್ಲಿ ಕುಶಲರೂ, ವಾದಿತ್ರದಲ್ಲಿ - ಎಂದರೆ ವಾದ್ಯಗಳಲ್ಲಿ - ಕುಶಲರೂ, ಸಾಮ್ಯ-ತಾಲಗಳಲ್ಲಿ - ಎಂದರೆ ಲಯದಲ್ಲಿ ಮತ್ತು ಕಾಲಮಾನದಲ್ಲಿ – ವಿಶಾರದರೂ, ಪ್ರಮಾಣಜ್ಞರೂ ಆದವರು ಕಿಂನರರು. ತುಂಬುರುವಿನ ಚೋದನೆಯಂತೆ ಆ ಕಿಂನರರು ಗಂಧರ್ವರೊಡಗೂಡಿ ಹಾಡಿದರು. ಅವರು ಹಾಡಿದುದು ದಿವ್ಯತಾನಗಳೊಂದಿಗೆ. ಅವರ ಗಾನವು ಅತ್ಯಂತ ಉಚಿತವಾಗಿತ್ತು. ಪಾಂಡುಪುತ್ರರನ್ನೂ ಋಷಿಗಳನ್ನೂ ಅವರು ಆ ಮೂಲಕ ಸಂತೋಷಪಡಿಸಿದರು. ಹೀಗೆಲ್ಲ ಮಾಡಿ ಧರ್ಮರಾಜನ ಉಪಾಸನೆಯನ್ನು ಮಾಡಿದರು. ಯಾವ ರೀತಿಯಲ್ಲಿ ದೇವತೆಗಳು ಬ್ರಹ್ಮನನ್ನು ಉಪಾಸನೆ ಮಾಡುವರೋ ಅದೇ ರೀತಿಯಲ್ಲಿ ಸು-ವ್ರತರೂ ಹಾಗೂ ಸತ್ಯವಾದ ಮಾತುಗಳನ್ನೇ ಆಡುವವರೂ ಆದ ಮಹಾಪುರುಷರು ಯುಧಿಷ್ಠಿರನ ಉಪಾಸನೆಯನ್ನು ಮಾಡುತ್ತಿದ್ದರು.


ಒಮ್ಮೆ ಪಾಂಡವರು ಆ ಸಭೆಯಲ್ಲಿ ಕುಳಿತಿದ್ದರು. ಅವರ ಜೊತೆ ಅನೇಕ ಮಹಾತ್ಮರೂ ಗಂಧರ್ವರೂ ಇದ್ದರು. ಲೋಕಗಳಲ್ಲೆಲ್ಲ ಸಂಚರಿಸುವ ನಾರದರು ಆಗ ಅಲ್ಲಿಗೆ ಆಗಮಿಸಿದರು. ಎಂಥವರು ಆ ನಾರದರು! ವೇದ-ಉಪನಿಷತ್ತುಗಳನ್ನು ಬಲ್ಲವರು; ಸುರಸಮೂಹದಿಂದ ವಂದಿತರು; ಇತಿಹಾಸ-ಪುರಾಣಗಳನ್ನು ಬಲ್ಲವರು; ನ್ಯಾಯಜ್ಞರು, ಧರ್ಮತತ್ತ್ವವನ್ನರಿತವರು; ವೇದಗಳ ಆರೂ ಅಂಗಗಳನ್ನು ಬಲ್ಲವರಲ್ಲಿ ಸರಿಸಾಟಿಯಿಲ್ಲದವರು; ಏಕತೆ, ಸಂಯೋಗ, ನಾನಾತ್ವ, ಸಮವಾಯ - ಇವುಗಳಲ್ಲಿ ವಿಶಾರದರಾದವರು (ಎಂದರೆ ಏಕತ್ವ-ನಾನಾತ್ವಗಳನ್ನೂ ಮಿಶ್ರಣ-ಸಂಮಿಶ್ರಣಗಳನ್ನೂ ಚೆನ್ನಾಗಿ ಬಲ್ಲವರು); ವಾಗ್ಮಿಗಳು, ಧೈರ್ಯವಾಗಿ ವಿಷಯವನ್ನಿಡಬಲ್ಲವರು; ಮೇಧಾವಿ, ಸ್ಮೃತಿಸಂಪನ್ನರು, ರಾಜನೀತಿಯನ್ನು ಬಲ್ಲವರು; ಕವಿ, ಮತ್ತು ಪರ ಮತ್ತು ಅಪರ - ಎಂಬ ವಿಭಾಗಗಳನ್ನು ಅರಿತವರು. ಪ್ರಮಾಣಗಳಿಂದಾಗಿ ನಿಶ್ಚಯವನ್ನು ಮಾಡುವುದರಲ್ಲಿ ಸಮರ್ಥರು.


ಸೂಚನೆ : 13/7/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ 69 ಗಂಡಸರ ಮೈಬಲವೇ ದೊಡ್ಡ ಬಲವೇ? (Krishakarnamrta 69)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಗೋಪಿಯೊಬ್ಬಳು ಕೃಷ್ಣನನ್ನು ಮೂದಲಿಸಿ ಹೇಳುತ್ತಿದ್ದಾಳೆ. ಮೂದಲಿಕೆಯೇಕೆ? ಮತ್ತೇಕೆ? ಕೃಷ್ಣನ ಮೇಲೆ ಕೋಪ, ಅವಳಿಗೆ. ಅವಳಿಗೆ ಕೋಪ ಬರುವಂತೆ ಕೃಷ್ಣನದೇನು ಮಾಡಿದ್ದಾನೆ? ಎಷ್ಟಾದರೂ ಗೋಪಿಕೆಯರೆಂದರೆ ಕೃಷ್ಣನಿಗೂ ಅಚ್ಚುಮೆಚ್ಚೇ ಅಲ್ಲವೇ?

ಹೌದು, ಅದುವೇ ಕಾರಣ, ಇಲ್ಲಿ ಆಗಿರುವ ಕಲಹಕ್ಕೂ. ಏಕೆ, ಪ್ರೀತಿಯಿದ್ದಲ್ಲಿ ಕಲಹವಿರಲಾಗದೇ, ಕಲಹವಿರಬಾರದೇ? ಕಲಹದಿಂದಲೇ ಪ್ರೀತಿಯು ವರ್ಧಿಸುವುದೂ ಉಂಟಲ್ಲವೇ?

ಇರಲಿ. ಪ್ರಕೃತ ಆಗಿರುವುದಿಷ್ಟು. ಗೋಪಿಕೆಯೊಬ್ಬಳಿಂದ ದೂರ ಸರಿಯುತ್ತಿದ್ದಾನೆ ಕೃಷ್ಣ. ಕೃಷ್ಣನು ಹೊರಟರೆ ಅವಳಿಗೆ ತಿಳಿಯದೇ? ಅವನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾಳೆ. ಆತನ ಮನಸ್ಸನ್ನು ಮತ್ತೊಬ್ಬ ಗೋಪಿಕೆಯೇನಾದರೂ ಸೆಳೆದುಬಿಟ್ಟರೆ? ಎಂಬ ಆತಂಕವಿರುವುದಲ್ಲವೇ, ಇವಳಿಗೆ?

ಅವಳದೆಷ್ಟು ಬಿಗಿಯಾಗಿ ಹಿಡಿದುಕೊಂಡರೇನು? ಅವಳ ಕೈಕೊಸರಿ ಹೋಗುತ್ತಿದ್ದಾನೆ, ಕೃಷ್ಣ. ಎಷ್ಟಾದರೂ ಗಂಡಸಲ್ಲವೆ? ಹೆಣ್ಣು ಎಷ್ಟೇ ಬಲಪ್ರಯೋಗವನ್ನೇ ಮಾಡಿದರೂ ಎಷ್ಟಾದರೂ ಅಬಲೆಯಲ್ಲವೇ ಅವಳು? ಪುರುಷನ ಪೌರುಷದ ಮುಂದೆ ಅಬಲೆಯ ಬಲವೆಲ್ಲಿಯದು?

"ಕೈಲಾಗದವರಿಗೆ ಬಾಯಿ ಜೋರು" ಎಂದೊಂದು ಗಾದೆಯಿದೆಯಲ್ಲವೇ? ಈ ಗೋಪಿಕೆಯೂ ಅಷ್ಟೇ. ಮಾತಿನಲ್ಲಿ ಚತುರೆಯೇ. ಎಂದೇ ಮೂದಲಿಕೆಯ ಮಾತು. ಕೃಷ್ಣನನ್ನೇ ಕೆರಳಿಸುವ ಮಾತು. ದೇಹ-ಬಲವು ಮಿತವಾದರೂ ವಾಗ್-ಬಲವೇನು ಮಿತವೇ? 

ಅದಕ್ಕೇ ಹೇಳುತ್ತಿದ್ದಾಳೆ. ಓ ಕೃಷ್ಣಾ! ಬಲವಂತವಾಗಿ ನನ್ನ ಕೈಕೊಸರಿ ಹೋಗುತ್ತಿರುವೆಯಲ್ಲಾ, ಇದೇನೋ ಅದ್ಭುತವೆಂದುಕೊಳ್ಳಬೇಡ. ಮೈಬಲದಲ್ಲಿ ನಿನ್ನದೇ ಮೇಲುಗೈಯೆಂದು ಜಂಭಪಡಬೇಕಿಲ್ಲ, ನೀನು.

ಏಕೆ ಎನ್ನುವೆಯೋ? ನನ್ನ ಹೃದಯದಿಂದ ಹೊರಟುಹೋಗು, ನೋಡುವಾ! ಹೋಗಬಲ್ಲೆಯಾದರೆ ಇದೋ ನಿನ್ನಲ್ಲಿ ಪೌರುಷವಿದೆಯೆಂದು ನಾ ಪರಿಗಣಿಸುವೆ. ಇಲ್ಲವೋ, ನೀನು ಆಟಕ್ಕೆ ಗಂಡಸು, ಲೆಕ್ಕಕ್ಕಲ್ಲ. ನಿನ್ನನ್ನು ಪುರುಷನೆಂದು ನಾ ಗಣಿಸೆ. ನಿನ್ನ ಪೌರುಷವು ಹೆಚ್ಚೇನೂ ಅಲ್ಲ, ಅದನ್ನು ನಾ ಮೆಚ್ಚಿಬಿಡುವವಳೂ ಅಲ್ಲ!

ಮೇಲ್ನೋಟಕ್ಕೆ ಸೆಣಸಿನ ಮಾತಾದರೂ ಗೋಪಿಕೆಯ ಮಾತಿನಲ್ಲಿ ಅದೆಷ್ಟು ಅರ್ಥವಡಗಿದೆ! ತನ್ನ ಹೃದಯದಲ್ಲಿ ಕೃಷ್ಣನನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾಳೆ, ಈಕೆ. ತನ್ನ ಹೃದಯಸ್ಥನಾದ ಕೃಷ್ಣ ಅವಳಿಂದೆಂದೂ ದೂರವಾಗಲಾರ. ಅವನು ಬಾಹ್ಯವಾಗಿ ದೂರ ಸರಿದರೂ ಹೃದಯಕ್ಕೆ ಎಂದೂ ಹತ್ತಿರವೇ, ಎಂದೆಂದೂ ಹತ್ತಿರವೇ.

ಕೃಷ್ಣನ ವಿಷಯದಲ್ಲಿ ಆಕೆಗೆ ಸಲಿಗೆಯೇ. ಏಕೆ? ಮುಖ್ಯವಾಗಿ ಅವಳ ಹೃದಯದಲ್ಲಿ ಆತನನ್ನು ಕುರಿತಾದ ಭಾವಬಂಧ ಅಷ್ಟು ಗಾಢವಾಗಿದೆ. 

ಪ್ರೀತಿಯೆಂಬುದು ಭೌತಿಕಪದಾರ್ಥವಲ್ಲ, ತೆಗೆದು ತೋರಿಸಲು. ನಿಜವಾದ ಪ್ರೇಮವು ಗೂಢವೂ ಗಾಢವೂ ಆದದ್ದು. ತನ್ನ ಹೃದಯಾಂತರಾಳದಲ್ಲಿ ತನ್ನ ನೆಚ್ಚಿನ ನಲ್ಮೆಯ ಕೃಷ್ಣನನ್ನು ಹುದುಗಿಸಿಟ್ಟುಕೊಂಡಿದ್ದಾಳೆ, ಆಕೆ. ಪ್ರೀತಿಯ ಪಾಶದಿಂದ ಕಟ್ಟಿಹಾಕಿಕೊಂಡಿದ್ದಾಳೆ. ಅದರಿಂದ ಆತ ಬಿಡಿಸಿಕೊಳ್ಳಲಾರ. ಆತನು ತನ್ನ ಉಸಿರು, ಅಥವಾ ಉಸಿರಿಗೂ ಉಸಿರು. 

ಆ ತೆರನಾಗಿ ಆತನನ್ನು ತನ್ನ ದಹರಕುಹರದಲ್ಲಿ ಕಾಪಿಟ್ಟುಕೊಂಡಿರುವ ಆ ಗೋಪಿಗೆ ಹೃದಿಸ್ಥನಾದ ಅಂತರಂಗಪ್ರಭುವೇ ಗಟ್ಟಿ. ಹೊರಗಡೆಯ ಕೃಷ್ಣನಿಗೆ ಒಂದೇ ಎಡೆಯೇ? ಆತ ದೂರ ಹೋದಾನಾದರೂ, ಇಷ್ಟು ಗಾಢವಾಗಿ ಪ್ರೀತಿಸುವವಳನ್ನದೆಂತು ತೊರೆದಾನು? ಪ್ರೀತಿಯು ಊರುವುದು ಬಹುತೇಕವಾಗಿ ಜೊತೆಯಲ್ಲಿರುವಾಗಲೇ - ಎಂಬ ನಿಯಮವೇನೂ ಇಲ್ಲ. ಭೌತಿಕವಾದ ಒಂದಿಷ್ಟು ವಿರಹವೂ ಪ್ರೇಮವನ್ನು ಬಲಪಡಿಸುವಂತಹುದೇ ಸರಿ.

ಅಂತೂ ತನ್ನ ಹೃದಯರಂಗದಿಂದ ಆತನನ್ನು ಎಂದಿಗೂ ಬಿಟ್ಟುಕೊಡೆನೆಂಬ ಗಟ್ಟಿಯಿರುವುದರಿಂದಲೇ ದಿಟ್ಟತನದ ತಕ್ಕ ಮಾತನ್ನಾಡತಕ್ಕವಳು, ಇವಳು. ಅಂತರಂಗದಿಂದಲೇ ಹೊಮ್ಮಿದ ಸತ್ಯವೇ ಆದ ಅವಳ ಈ ನುಡಿಯು ಶ್ರೀರಂಗಮಹಾಗುರುಗಳ ಹಾರ್ದವಾದ ಮೆಚ್ಚುಗೆಗೆ ಪಾತ್ರವಾಗಿತ್ತು; ಇಷ್ಟರಿಂದಲೇ ಸ್ಪಷ್ಟವಾಗುತ್ತದೆ, ಅವಳ ಭಗವತ್ಪ್ರೇಮದ ಉತ್ತುಂಗತೆ. 

ವಾಚ್ಯಾರ್ಥದಲ್ಲಿ ಭರ್ತ್ಸನವು ತೋರಿದರೂ, ಧ್ವನ್ಯರ್ಥದಲ್ಲಿ ತನ್ನ ಪ್ರಾಣಪ್ರಭುವನ್ನು ಕುರಿತಾದ ಪ್ರೇಮಭರತೆಯು ತುಂಬಿ ತುಳುಕುತ್ತಿರುವುದು ಸ್ಫುಟವಾಗುತ್ತದೆ, ಬಿರುನುಡಿಯಾದರೂ ಅವಳ ಹಾರ್ದವಾದೀ ಸರಿ(ವಿ)ನುಡಿಗಳಲ್ಲಿ.


ಹಸ್ತಮಾಕ್ಷಿಪ್ಯ ಯಾತೋಽಸಿ/ 

ಬಲಾತ್ ಕೃಷ್ಣ! ಕಿಮದ್ಭುತಮ್?| 

ಹೃದಯಾದ್ ಯದಿ ನಿರ್ಯಾಸಿ /

ಪೌರುಷಂ ಗಣಯಾಮಿ ತೇ! ||

***

ಮತ್ತೊಂದು ಪದ್ಯ:

ನಮಗೆ ಏನೋ ವಿಶಿಷ್ಟವಾದ ಅನುಭವವಾದಾಗ ನಮ್ಮ ಬಾಯಿಂದ ಏನೋ ಒಂದು ಉದ್ಗಾರವು ಬರುವುದುಂಟು. ಆಕಾಶದತ್ತ ಮುಖಮಾಡಿ "ಅಮ್ಮ!" ಎಂದೋ "ಅಪ್ಪ!" ಎಂದೋ ಸಂಬೋಧಿಸಿ ನಮಗಾದ ಆಶ್ಚರ್ಯಾನುಭವವನ್ನು ಹೇಳಿಕೊಳ್ಳುವುದುಂಟು. ಈ ಶ್ಲೋಕದಲ್ಲಿ ಒಂದಿಷ್ಟು ನೋವೂ ಜೊತೆಗೇ ಆಶ್ಚರ್ಯವೂ ಆಗಿರುವುದನ್ನು ಅಂಬ! ಹಾ! ಹಂತ! ಅಹೋ! - ಎಂಬ ಪದಗಳಿಂದ ಹೇಳಿದೆ. ಇದೇನು ಹೀಗೆ? - ಎಂದೂ ಕೇಳಿದೆ.

ಯಾವ ಅನುಭವದ ಹಿನ್ನೆಲೆಯಲ್ಲಿ ಲೀಲಾಶುಕನ ಬಾಯಲ್ಲಿ ಈ ಮಾತುಗಳು ಬಂದಿವೆ? - ಎಂಬುದನ್ನು ತಿಳಿಯಬೇಕಲ್ಲವೆ?

ಕೃಷ್ಣನು ಉಂಟುಮಾಡಿರುವ ಅನುಭವವದು. ಅದು ವಿಶಿಷ್ಟವಾದದ್ದೇ. ಎದುರಿಗೇ ಸಂಪೂರ್ಣವಾಗಿ ತೋರಿಕೊಡುತ್ತಿದ್ದಾನೆ, ಕೃಷ್ಣ. ಏನನ್ನು? ತನ್ನ ಕ್ರೀಡಾ-ಸಂಪತ್ತನ್ನು. ಅದಕ್ಕಾಗಿ ಕವಿ ಬಳಸುವ ಪದವೂ ವಿಶಿಷ್ಟವಾದದ್ದೇ - ಕೇಲಿ-ಲಕ್ಷ್ಮೀ ಎಂಬುದಾಗಿ. ಎಂತಹುದು ಆ ಕ್ರೀಡಾಶ್ರೀ? ಅಯ್ಯೋ, ಅದನ್ನು ಹೀಗೆಂದು ಹೇಳಲೇ ಆಗದು. ಯಾವುದನ್ನು ಬಣ್ಣಿಸಲಾಗದೋ, ಬಿಡಿಸಿ ಹೇಳಲಾಗದೋ, ಅದನ್ನು ಕಿಮಪಿ, ಕೋಽಪಿ, ಕಾಽಪಿ - ಎಂದು ಮುಂತಾಗಿ ಹೇಳುವರು. ಅವರ್ಣನೀಯವಾದ ಏನೋ ಒಂದದು. ಎದುರಿಗೇ ನಡೆಯುವುದನ್ನೂ ಅದು ಹೀಗೆಂದು ವಿವರಿಸಿ ಹೇಳಲಾಗುತ್ತಿಲ್ಲ.


ಬರೀ ಎದುರಿಗೇ - ಎಂದು ಕೂಡ ಹೇಳುವಂತಿಲ್ಲ. ಏಕೆ? ಅದೂ ಬೇರೆ ಬೇರೆ ದಿಕ್ಕುಗಳಲ್ಲಿಯೂ ತೋರುತ್ತಿದೆ. ತೋರುತ್ತಿದೆಯೆಂದರೆ, ಕಲ್ಪನೆಯಲ್ಲಿ ಸಹ ಹಾಗೆ ತೋರುವುದುಂಟಲ್ಲವೆ, ಹಾಗೆಯೇ? ಹಾಗಲ್ಲ, ಅದನ್ನೆಲ್ಲಾ ಕಣ್ಣಾರ ಕಂಡದ್ದುಂಟು. ಅದಕ್ಕೆ ನನ್ನ ಕಣ್ಣೇ ಸಾಕ್ಷಿ - ಎನ್ನುತ್ತಾನೆ, ಕವಿ.

ಆದರೆ ಹಾಗಿದ್ದದ್ದು ಮತ್ತೊಂದು ಕ್ಷಣದಲ್ಲಿ ಬೇರೆಯೇ ಆಗಿಬಿಟ್ಟಿದೆ! ಈಗ ಕೈಗೆಟುಕದಂತಾಗಿಬಿಟ್ಟಿದೆ. ಅದನ್ನೇ ಹಸ್ತಪಥ-ದೂರವೆಂದಿರುವುದು.

ಹಾಗಿದ್ದರೂ ನನಗಿದೇನಾಗುತ್ತಿದೆ? ತ್ರಿಲೋಕವೂ ಆಶಾ-ಕಿಶೋರಮಯವಾಗಿದೆ! ಆಶಾ-ಮೋದಕವೆಂದರೆ ನಮ್ಮ ಆಸೆಯೇ ನಿರ್ಮಿಸಿಕೊಂಡಿರುವ ಲಡ್ಡು; ಆದರಿಲ್ಲಿ ಆಶಾ-ಕಿಶೋರವೆಂದರೆ ನಾ ಹಂಬಲಿಸುವ ಕಿಶೋರ. ಅದಾದರೂ ಶ್ರೀಕೃಷ್ಣನೇ ಸರಿ; ಬಾಲಕೃಷ್ಣನೇ ಅದು.

ಮೂಜಗವೂ ಕೃಷ್ಣಮಯವಾಗಿ ಎನಗೆ ತೋರುತ್ತಿದೆಯೆಲ್ಲಾ! - ಎನ್ನುತ್ತಿದ್ದಾನೆ, ಕವಿ. ಈ ಕ್ಷಣದಲ್ಲಿ ಎದುರಿಗೂ ಅನ್ಯದಿಕ್ಕುಗಳಲ್ಲೂ ತೋರಿಕೊಳ್ಳುತ್ತಿರುವ ಕೃಷ್ಣನಿವನು. ಆದರೆ ಹಿಡಿಯಹೋದರೆ ಕೈಗೆಟುಕನು! ಜೊತೆಜೊತೆಗೇ ಜಗವೆಲ್ಲವೂ ಅವನೇ ಆಗಿರುವನು! ಇದೆಲ್ಲವೂ ಹೇಗೆ ಸಾಧ್ಯ? ಇನ್ನೇನು ದೊರೆತನೆಂದುಕೊಂಡರೆ ಕೈಗವನು ಸಿಗನು. ತ್ರಿಲೋಕವೂ ಆತನ ಆಟವೇ - ಎನಿಸುವವನು. ಈತನ ಲೀಲಾಸಂಪತ್ತು ಎಂತಹುದೆಂಬುದೇ ಅನೂಹ್ಯ! 

ಶ್ಲೋಕ ಹೀಗಿದೆ:


ಅಗ್ರೇ ಸಮಗ್ರಯತಿ ಕಾಮಪಿ ಕೇಲಿ-ಲಕ್ಷ್ಮೀಂ /

ಅನ್ಯಾಸು ದಿಕ್ಷ್ವಪಿ ವಿಲೋಚನಮೇವ ಸಾಕ್ಷಿ |

ಹಾ ಹಂತ, ಹಸ್ತ-ಪಥ-ದೂರಂ ಅಹೋ ಕಿಮೇತದ್ /

ಆಶಾ-ಕಿಶೋರಮಯಂ ಅಂಬ!  ಜಗತ್-ತ್ರಯಂ ಮೇ ||

ಸೂಚನೆ : 12/07/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, July 7, 2025

ಪ್ರಶ್ನೋತ್ತರ ರತ್ನಮಾಲಿಕೆ 22 (Prasnottara Ratnamalike 22)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೨೩. ಯಾವಾಗಲು ಎಚ್ಚರಿವಿರುವವನು ಯಾರು?

ಉತ್ತರ - ವಿವೇಕ ಉಳ್ಳವನು.

ಪ್ರಕೃತವಾದ ಪ್ರಶ್ನೆ ಸ್ವಲ್ಪ ವಿಚಿತ್ರವಾಗಿದೆ. ಏಕೆಂದರೆ ಯಾವಾಗಲೂ ಎಚ್ಚರವಿರುವವನು ಯಾರು? ಎಂಬುದು ಪ್ರಶ್ನೆ ಇದಾಗಿದೆ. ಸಾಮಾನ್ಯವಾಗಿ ಮನುಷ್ಯರು ದಿನದಲ್ಲಿ ಕೆಲವು ಭಾಗ ಎಚ್ಚರ, ಇನ್ನು ಕೆಲವು ಭಾಗ ಸ್ವಪ್ನ, ಇನ್ನು ಕೆಲವು ಭಾಗ ನಿದ್ರೆ, ಹೀಗೆ ಮೂರು ಹಂತಗಳಲ್ಲಿ ಪ್ರತಿ ದಿನವನ್ನು ಕಳೆಯುವುದನ್ನು ನಾವು ಕಾಣುತ್ತೇವೆ. ಇದರಲ್ಲಿ ಎಚ್ಚರವಿರುವಂತದ್ದು ಜಾಗೃದವಸ್ಥೆಯಲ್ಲಿ ಮಾತ್ರ. ಉಳಿದ ಸಂದರ್ಭದಲ್ಲಿ ಪೂರ್ತಿಯಾಗಿ ಎಚ್ಚರವಿರುವುದಿಲ್ಲ. ನಿದ್ರೆಯಲ್ಲಂತೂ ನಮಗೆ ಬಾಹ್ಯಪ್ರಪಂಚದ ಅರಿವೇ ಇರುವುದಿಲ್ಲ. ಹಾಗಾದರೆ ಯಾವಾಗಲೂ ಎಚ್ಚರ ಇರುವುದೆಂದರೆ ಏನು? ಎಂಬ ಪ್ರಶ್ನೆ ಉಳಿಯುತ್ತದೆ. ಅದಕ್ಕೆ ಉತ್ತರ 'ವಿವೇಕ ಉಳ್ಳವನು' ಎಂದು. ಅಂದರೆ ಇಲ್ಲಿ ನಾವು ತಿಳಿಯಬೇಕಾದ ವಿಷಯ - ವಿವೇಕ ಎಂದರೇನು ಮತ್ತು ವಿವೇಕದಿಂದ ಹೇಗೆ ಎಚ್ಚರಿಕೆಯು ಬರುತ್ತದೆ? ಎಂಬುದಾಗಿ. 


ವಿವೇಕ ಎಂದರೆ "ವಿವೇಕೋ ವಸ್ತುನೋ ಭೇದಃ ಪ್ರಕೃತೇಃ ಪುರುಷಸ್ಯ ವಾ" ಎಂದು. ಈ ಪ್ರಪಂಚದಲ್ಲಿ ಎರಡು ಬಗೆಯ ವಸ್ತುಗಳು ಮಾತ್ರ ಇವೆ. ಹಾಗಿರುವುದರಿಂದಲೇ ಅಲ್ಲಿನ ವಸ್ತುಸ್ಥಿತಿಯನ್ನು ಅರಿಯುವುದು ಕಠಿಣವಾಗುತ್ತದೆ. ನಿತ್ಯ ಅಥವಾ ಅನಿತ್ಯ ಎಂಬ ಭೇದಬುದ್ಧಿ. ಪುರುಷ ಅಥವಾ ಪ್ರಕೃತಿ ಎಂಬ ಭೇದಬುದ್ಧಿ. ಧರ್ಮ ಅಥವಾ ಅಧರ್ಮ ಎಂಬ ಭೇದಬುದ್ಧಿ. ಸುಖ ಅಥವಾ ದುಃಖ ಎಂಬ ಭೇದಬುದ್ಧಿ. ಇದನ್ನೇ ವಿವೇಕ ಎಂಬುದಾಗಿ ಕರಿಯುತ್ತಾರೆ ಈ ವಿವೇಕ ಉಳ್ಳವನನ್ನೇ ಸದಾ ಎಚ್ಚರಿಕೆ ಉಳ್ಳವನು ಎಂಬುದಾಗಿ ಇಲ್ಲಿ ಹೇಳಲಾಗಿದೆ. ಆದ್ದರಿಂದ ಎಚ್ಚರವಿರುವುದು ಎಂದರೆ ತನ್ನ ಗುರಿಯನ್ನು ಸಾಧಿಸುವುದು ಎಂದರ್ಥ. ಗುರಿಯತ್ತ ಸಾಧಿಸಬೇಕಾದದ್ದು ಕರ್ತವ್ಯ. ಹಾಗಾಗಿ ಈ ವಿವೇಕವೆಂಬುದು ಅವನನ್ನು ಮೈ ಮರೆಯದಂತೆ ಇಟ್ಟು ಗುರಿಯತ್ತ ಕೊಂಡುಯ್ಯುತ್ತದೆ. ಇದೇ ನಿಜವಾದ ಎಚ್ಚರಿಕೆಯ ಸ್ಥಿತಿ. ಇದೇ ನಿಜವಾದ ವಿವೇಕ. ಜೀವನದಲ್ಲಿ ತಿಳಿಯಬೇಕಾದದ್ದು ಇಷ್ಟೇ, ನಿತ್ಯ ಮತ್ತು ಅನಿತ್ಯವಾದ ವಿಷಯಗಳು ಯಾವುವು? ಇವೆರಡರಲ್ಲಿ ಪಡೆಯಬೇಕಾದುದು ನಿತ್ಯವೇ ಹೊರತು ಅನಿತ್ಯವಲ್ಲ ಎಂಬುದನ್ನು. ನಿತ್ಯವನ್ನು ಸಾಧಿಸಬೇಕಾದರೆ ಧರ್ಮ ಅಥವಾ ಅಧರ್ಮ, ಸುಖ-ದುಃಖ ಇಂತ ವಿಷಯಗಳನ್ನು ಕೊಡುವ ಪದಾರ್ಥಗಳು ಯಾವುದು? ಎಂಬುದನ್ನು ಅವಶ್ಯವಾಗಿ ತಿಳಿಯಲೇಬೇಕು. ಅಂದರೆ ಯಾವ ಪದಾರ್ಥಗಳಿಂದ ನಿತ್ಯವಾದದ್ದನ್ನು ನಾವು ಪಡೆಯಬಹುದು ಎಂಬುದನ್ನು ತಿಳಿದರೆ, ಅದು ಪರಿಪೂರ್ಣಜೀವನಕ್ಕೆ ಅನುಕೂಲಿಸುತ್ತದೆ. ಹಾಗಾಗಿ ಇಂಥ ಜೀವನಕ್ಕೆ ವಿವೇಕ ಎಂಬುದು ಅತ್ಯಂತ ಅವಶ್ಯಕ. ಅದೇ ನಿಜವಾದ ಎಚ್ಚರಿಕೆಯ ಸ್ಥಿತಿ. 


ಇಂತಹ ವಿವೇಕ ಉಳ್ಳವನು ಎಂದೂ ತನ್ನ ಗುರಿಯನ್ನು ಮರೆಯಲಾರ. ಆರಂಭಿಸಿದ ಕಾರ್ಯವನ್ನು ಎಂದು ಕೈ ಬಿಡಲಾರ. ಗುರಿ ಮುಟ್ಟುವ ತನಕ ಅವನ ಪ್ರಯತ್ನವು ಇದ್ದೇ ಇರುತ್ತದೆ. ಏಕೆಂದರೆ ಅಲ್ಲಿ ಅವನಿಗೆ ವಿವೇಕಪ್ರಜ್ಞೆಯು ಅವನಿಗೆ ಬೇಕಾದ ಉತ್ಸಾಹವನ್ನು, ಬಲವನ್ನು, ಚೈತನ್ಯವನ್ನು ಕೊಡುವಂತಿರುತ್ತದೆ. ಆ ಪ್ರಯತ್ನದಲ್ಲಿ ವ್ಯರ್ಥವಾದ ಅಂಶವೆಂಬುದೇ ಇರದು. ಹಾಗಾಗಿ ಮಾಡಿದ ಕೆಲಸ ಪರಿಪೂರ್ಣತೆಯನ್ನು ಸಾಧಿಸುತ್ತದೆ. ಆದ್ದರಿಂದ ವಿವೇಕ ಎಂಬುದು ಅತ್ಯಂತ ಅವಶ್ಯಕ.


ಸೂಚನೆ : 6/7/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 144 ಮಯಸಭೆಗೆ ವಿಜೃಂಭಣೆಯ ಗೃಹಪ್ರವೇಶ (Vyaasa Vikshita 144)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಶ್ರೇಷ್ಠವಾದ ಆ ಸಭೆಯನ್ನು ನಿರ್ಮಿಸಿ, ಮಯನು ಅರ್ಜುನನಿಗೆ ಹೇಳಿದನು:
"ಓ ಸವ್ಯಸಾಚಿ, ಇದುವೇ ತಮ್ಮ ಸಭೆ. ಇದರಲ್ಲೊಂದು ಧ್ವಜವಿದೆ. ಭೂತಗಳಲ್ಲಿ ಮಹಾಶಕ್ತಿಸಂಪನ್ನವಾದ ಕಿಂಕರವೆಂಬ ಹೆಸರಿನ ಗಣವು ಈ ಧ್ವಜದ ಅಗ್ರದಲ್ಲಿ ವಾಸಮಾಡುವುದು. ನಿನ್ನ ಧನುಸ್ಸಿನ ವಿಸ್ಫಾರ-ಘೋಷವು, ಎಂದರೆ ಟಂಕಾರ-ಧ್ವನಿಯು, ಯಾವಾಗ ಆಗುವುದೋ ಆಗ ಅದರೊಂದಿಗೇ ಇದೂ ಸಹ ಮೋಡಗಳಿಗೆ ಸಮಾನವಾಗಿ ಗರ್ಜನೆಯನ್ನು ಮಾಡುವುದು!

ಸೂರ್ಯನಿಗೆ ಸಮನಾದ ಕಾಂತಿಯುಳ್ಳ ರಥವಿದೋ. ಇದು ಅಗ್ನಿದೇವನಿಗೆ ಸೇರಿದ ಉತ್ತಮವಾದ ರಥ. ಇದಕ್ಕೆ ಹಯೋತ್ತಮಗಳನ್ನೇ, ಎಂದರೆ ಶ್ರೇಷ್ಠವಾದ ಕುದುರೆಗಳನ್ನೇ, ಯೋಜಿಸಲಾಗಿದೆ. ಈ ಬಿಳಿಯ ಹಯಗಳು ದೇವಲೋಕದ ಅಶ್ವಗಳು. ಅಲ್ಲದೆ ಇದೋ, ಇದು ವಾನರ-ಲಕ್ಷಿತವಾದ ಧ್ವಜ, ಎಂದರೆ ಕಪಿಯ ಗುರುತುಳ್ಳದ್ದು. ಇದು ಮಾಯಾಮಯವಾದ ಪತಾಕೆಯೂ ಹೌದು. ಇದು ಮರಗಳಲ್ಲಿ ಸಿಲುಕಿಕೊಂಡುಬಿಡುವಂತಹುದಲ್ಲ. ಅಗ್ನಿಯು ಹೇಗೆ ಸರ್ವದಾ ಮೇಲ್ಮುಖವಾಗಿಯೇ ಇರುವುದೋ ಹಾಗೆ ಇದೂ ಸದಾ ಮೇಲ್ಮುಖವಾಗಿಯೇ ಇರುವುದು. ಕಪಿ-ಚಿಹ್ನವುಳ್ಳ ಈ ಧ್ವಜವು ಬಹುವರ್ಣಮಯವಾಗಿಯೇ ತೋರುವಂತಹುದು. ಯುದ್ಧದಲ್ಲಿ ಎಂದೂ ಬಗ್ಗದೆ ಸ್ಥಿರವಾಗಿರುವ ಈ ಉತ್ಕಟ-ಧ್ವಜವನ್ನು ನೀ ಕಾಣುವೆ."


ಹೀಗೆಂಬುದಾಗಿ ಅರ್ಜುನನಿಗೆ ಮಯನು ಹೇಳಿ, ಅವನ ಅನುಮತಿಯನ್ನು ಪಡೆದು ಹೊರಟನು.


ಬಳಿಕ ಯುಧಿಷ್ಠಿರನು ಆ ಮನೆಯ ಪ್ರವೇಶವನ್ನು ಮಾಡಿದನು. ತುಪ್ಪ-ಜೇನುತುಪ್ಪಗಳನ್ನು ಸೇರಿಸಿದ ಪಾಯಸ, ಬಗೆಬಗೆಯ ಭಕ್ಷ್ಯಗಳು, ಹಣ್ಣುಗಳು, ಚೋಷ್ಯಗಳು, ಪೇಯಗಳು - ಇವುಗಳಿಂದ ಕೂಡಿರುವ ಸಂತರ್ಪಣೆಯನ್ನು ಮಾಡಿಸಿದನು. ನವ-ವಸ್ತ್ರಗಳು, ನಾನಾ-ಪ್ರಕಾರವಾದ ಮಾಲೆಗಳು - ನಾನಾ-ದಿಕ್ಕುಗಳಿಂದ ಬಂದ ವಿಪ್ರರಿಗೆ ಇವುಗಳನ್ನಿತ್ತು  ಅವರನ್ನು ಸಂತೋಷಪಡಿಸಿದನು. ಗೋ-ಸಹಸ್ರಗಳನ್ನು ದಾನ ಮಾಡಿದನು. ಆಗ ಎದ್ದ ಪುಣ್ಯಾಹಘೋಷ-ಧ್ವನಿಯು ಸ್ವರ್ಗಲೋಕದವರೆವಿಗೂ ವ್ಯಾಪಿಸುವಂತಿತ್ತು. ನಾನಾದೇವತೆಗಳನ್ನು ಸ್ಥಾಪನೆ ಮಾಡಿ ಯುಧಿಷ್ಠಿರನು ಅವುಗಳಿಗೆ ಪೂಜೆಯನ್ನು ಸಲ್ಲಿಸಿದನು. ಬಗೆಬಗೆಯ ವಾದ್ಯಗಳಿಂದಲೂ, ದಿವ್ಯವಾದ ಗಂಧವುಳ್ಳ ನಾನಾ ಪದಾರ್ಥಗಳಿಂದಲೂ ಪೂಜಿಸಿದನು.


ಯುಧಿಷ್ಠಿರನ ಸೇವೆಗೆಂದು ಆಗ ಅನೇಕ ಮಂದಿ ಮಲ್ಲರೂ (ಎಂದರೆ ಬಾಹುಗಳಿಂದ ಯುದ್ಧಮಾಡತಕ್ಕವರೂ), ಝಲ್ಲರೂ (ಎಂದರೆ ಲಾಠಿಗಳಿಂದ ಯುದ್ಧಮಾಡತಕ್ಕವರೂ), ನಟರೂ, ಸೂತರೂ, ವೈತಾಳಿಕರೂ ಬಂದು ಯುಧಿಷ್ಠಿರನನ್ನು ಸೇವಿಸಿದರು. ಆ ಪರಿಯಲ್ಲಿ ಭ್ರಾತೃಗಳೊಂದಿಗೆ ಪೂಜೆಯನ್ನು ನೆರವೇರಿಸಿದ ಆ ಯುಧಿಷ್ಠಿರನು ಸಂತೋಷಿಸಿದನು - ಸ್ವರ್ಗದಲ್ಲಿ ಇಂದ್ರನು ಯಾವ ರೀತಿಯಲ್ಲಿ ಸಂತೋಷಪಡುವನೋ ಹಾಗೆ.


ಆ ಸಭೆಯಲ್ಲಿ ಅನೇಕ ಋಷಿಗಳು ಪಾಂಡವರೊಂದಿಗೆ ಕುಳಿತುಕೊಂಡಿದ್ದರು. ನಾನಾದೇಶಗಳಿಂದ ಬಂದಿದ್ದ ರಾಜರುಗಳೂ ಅಲ್ಲಿಗೆ ಬಂದಿದ್ದರು. ಯಾವ ಋಷಿಗಳು? ಅಸಿತ, ದೇವಲ, ಮೈತ್ರೇಯ, ಶುನಕ, ಬಕ-ದಾಲ್ಭ್ಯ, ಕೃಷ್ಣ-ದ್ವೈಪಾಯನ, ಶುಕ, ಸುಮಂತು, ಜೈಮಿನಿ, ಪೈಲ (ಇವರು ನಾಲ್ವರು ವ್ಯಾಸಶಿಷ್ಯರು), ತಿತ್ತಿರಿ, ಯಾಜ್ಞವಲ್ಕ್ಯ, ಲೋಮಹರ್ಷಣ, ಧೌಮ್ಯ, ಪಾರಾಶರ್ಯ, ಮಾರ್ಕಂಡೇಯ, ಗಾಲವ, ರೈಭ್ಯ, ಭೃಗು, ಕೌಂಡಿನ್ಯ, ಗೌತಮ, ಶಾಂಡಿಲ್ಯ - ಇವರೇ ಮುಂತಾದ ಅನೇಕ ಮುನಿಗಳು ಬಂದಿದ್ದರು. ಅವರು ಧರ್ಮ-ವಿದ್ವಾಂಸರು, ಧೃತಾತ್ಮರು, ಜಿತೇಂದ್ರಿಯರು.


ಇವರುಗಳೇ ಅಲ್ಲದೆ ಇನ್ನೂ ಅನೇಕರು ಬಂದಿದ್ದರು. ಅವರು ವೇದ-ವೇದಾಂಗಗಳಲ್ಲಿ ಪಾರಂಗತರಾಗಿದ್ದರು. ಅಂತಹ ಶ್ರೇಷ್ಠರಾದ ಋಷಿಗಳು ಯುಧಿಷ್ಠಿರನನ್ನು ಉಪಾಸಿಸಿದರು. ಧರ್ಮಜ್ಞರೂ ಶುಚಿಗಳೂ ಅಮಲರೂ ಆದ ಅವರು, ಅನೇಕ ಪುಣ್ಯಕಥೆಗಳನ್ನು ಹೇಳುತ್ತಿದ್ದರು.


ಸೂಚನೆ : 6/7/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.