ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಕೈಶೋರವೆಂದರೆ ಕಿಶೋರಭಾವ, ಬಾಲಾವಸ್ಥೆ. ಕೃಷ್ಣನ ಕೈಶೋರವಾಗಲಿ, ಆ ಸಮಯದಲ್ಲಿ ಆತನಲ್ಲಿ ಹೊಮ್ಮಿದ ಬೆಡಗಾಗಲಿ, ಮಿಕ್ಕಾವ ದೇವತೆಗಳಲ್ಲೂ ಇಲ್ಲವೆನ್ನುತ್ತಾನೆ, ಲೀಲಾಶುಕ.
ಕಿಶೋರಾವಸ್ಥೆಯೆಂಬುದೇ ಚಿತ್ತಾಕರ್ಷಕ. ಎಂದೇ "ಆ ಕೈಶೋರ" ಎನ್ನುತ್ತಾನೆ, ಲೀಲಾಶುಕ. "ಆ" ಎನ್ನುವುದು ಪ್ರಸಿದ್ಧಿಯನ್ನು ಹೇಳುತ್ತದೆ. ಕೃಷ್ಣನ ಕಿಶೋರತೆಯು ವಿಶಿಷ್ಟವಾದದ್ದಲ್ಲವೇ?
ಎರಡನೆಯದಾಗಿ, ಆ ಅವಸ್ಥೆಯಲ್ಲಿ ಕಾಣುವ ಮುಖಕಮಲವೂ ಸೊಗಸೇ. ಏಕೆ? ಆಗ ಕಣ್ಣು-ತುಟಿ-ಕೆನ್ನೆ-ಹುಬ್ಬು - ಇವುಗಳಲ್ಲೆಲ್ಲಾ ಅದೇನೋ ಮಧುರತೆಯು ಕಂಡುಬರುತ್ತದೆ.
ಮೂರನೆಯದಾಗಿ ಆತನ ಕಾರುಣ್ಯವೂ ವಿಲಕ್ಷಣವಾದುದೇ. ನಾಲ್ಕನೆಯದಾಗಿ ಆತನ ಲೀಲಾ-ಕಟಾಕ್ಷಗಳೂ ವಿಶಿಷ್ಟವೇ. ಆಟವಾಗಿಯೋ ಕಪಟವಾಗಿಯೋ ಹುಬ್ಬುಗಂಟಿಕ್ಕುವುದೇನು ಓರೆಗಣ್ಣೋಟವೇನು - ಎಲ್ಲವೂ ಲೀಲಾಮಯವೇ.
ಐದನೆಯದಾಗಿ ಆತನ ಸೌಂದರ್ಯ: ಬಾಲಕೃಷ್ಣನ ಸೌಂದರ್ಯ ಮತ್ತಾರಲ್ಲುಂಟು? ಆರನೆಯದಾಗಿ ಆತನ ಮೊಗದಲ್ಲಿ ತೋರುವ ಮಂದಸ್ಮಿತದ ಕಾಂತಿ. ಶ್ರೀಯೆಂದರೆ ಕಾಂತಿ, ಶೋಭೆ.
ಇವಿಷ್ಟೂ ಯಾವ ದೇವತೆಗಳಲ್ಲೂ ಇಲ್ಲ ಎನ್ನುತ್ತಾನೆ, ಕವಿ. ದೇವ ಎಂದರೂ ದೇವತಾ ಎಂದರೂ ಒಂದೇ. ದೇವತೆಗಳ ಸಮೂಹವನ್ನೇ ದೈವತವೆನ್ನುವುದು. ದೇವತಾಸ್ತೋಮದಲ್ಲಿಯೇ ಮೇಲೆ ಹೇಳಿದ ಆರು ಅಂಶಗಳು ಸ್ಫುರಿಸವು. ಬ್ರಹ್ಮ-ರುದ್ರ-ಸುಬ್ರಹ್ಮಣ್ಯ- ಮುಂತಾದ ದೇವತೆಗಳಿಲ್ಲವೇ? - ಎನ್ನಬಹುದು. ಬ್ರಹ್ಮನಿಗೆ ನಾಲ್ಕು ಮುಖಗಳು, ರುದ್ರನಂತೂ ಹಣೆಗಣ್ಣ, ಷಣ್ಮುಗನಿಗೆ ಆರು ಮುಖಗಳು - ಹೀಗೆಲ್ಲಾ ಇರುವುದರಿಂದ ಕೃಷ್ಣನಲ್ಲಿರುವ ವಿಶೇಷಗುಣಗಳು ಮತ್ತಾರಲ್ಲೂ ಇಲ್ಲವೆನ್ನಬಹುದು.
ಈ ಆರು ಅಂಶಗಳನ್ನು ಮತ್ತಾವ ದೇವತಾಮೂರ್ತಿಯಲ್ಲೂ ಕಾಣಲಾಗದೆಂಬುದನ್ನೇ ಪ್ರತಿಜ್ಞೆ ಮಾಡಿ ಹೇಳುತ್ತಾನೆ: ಸತ್ಯಂ ಸತ್ಯಂ ದುರ್ಲಭಂ ದೈವತೇಷು ಎಂದು. ಯಾವುದನ್ನಾದರೂ ಖಚಿತವಾಗಿ ಹೇಳಬೇಕೆಂದರೆ, "ಇದು ಸತ್ಯ" ಎಂದು ಎರಡು ಬಾರಿ, ಹೇಳುವುದುಂಟು. ಇಲ್ಲಿ "ಸತ್ಯಂ ಸತ್ಯಂ" ಎಂದು ಎರಡು ಬಾರಿ ಘೋಷಿಸಲಾಗಿದೆ. ದ್ವಿರುಕ್ತಿಯು ಶಪಥ-ಸೂಚಕ.
ಮೊದಲು ಮೂರು ಪಾದಗಳಲ್ಲಿ ಆರಂಭದಲ್ಲಿಯ ಕೈಶೋರ-ಕಾರುಣ್ಯ-ಸೌಂದರ್ಯಗಳು ಭಾವ-ವಾಚಿ-ಪದಗಳು. ಅವುಗಳ ಪಕ್ಕದಲ್ಲೇ ಹೇಳಲಾಗಿರುವ ಮುಖ-ಕಟಾಕ್ಷ-ಸ್ಮಿತಗಳು ನಯನ-ಗೋಚರವಾದಂತಹವು.
ತತ್ ಕೈಶೋರಂ ತಚ್ಚ ವಕ್ತ್ರಾರವಿಂದಂ/
ತತ್ ಕಾರುಣ್ಯಂ ತೇ ಚ ಲೀಲಾಕಟಾಕ್ಷಾಃ |
ತತ್ ಸೌಂದರ್ಯಂ ಸಾ ಚ ಮಂದಸ್ಮಿತ-ಶ್ರೀಃ/
ಸತ್ಯಂ ಸತ್ಯಂ ದುರ್ಲಭಂ ದೈವತೇಷು ||
****
ಮತ್ತೊಂದು ಶ್ಲೋಕ.
ಕೃಷ್ಣನನ್ನು ಪರಮಕಾರುಣಿಕ ಎಂದು ನಂಬಿದವರುಂಟು. ಆ ನೆಚ್ಚಿಕೆಯಿಂದಾಗಿ ಅವರ ಚೇತಸ್ಸು ಸ್ತಬಕಿತವಾಗಿದೆ, ಎಂದರೆ ಅರಳಿದಂತಾಗಿದೆ. ಆ ವಿಶ್ವಾಸವುಳ್ಳವರಿಗೂ ಜೀವನದಲ್ಲಿ ಯಾವ ಯಾವಾಗಲೋ ಏನೇನೋ ಉಪಪ್ಲವಗಳು ಬರಬಹುದು. ಉಪಪ್ಲವಗಳೆಂದರೆ ಉಪದ್ರವಗಳು, ಕ್ಲೇಶಗಳು.
ಅವೆಲ್ಲವೂ ಶಮನವಾಗಬೇಕು - ಎಂಬ ಬಯಕೆ ಕೃಷ್ಣನಿಗಿರುತ್ತದಲ್ಲವೇ? ಹಾಗಾಗಬೇಕೆಂಬುದು ಆತನ ಪಾಲಿಗೆ ಬರೀ ಬಯಕೆಯಲ್ಲ. ಆ ಬಗ್ಗೆ ಆತ ಬದ್ಧದೀಕ್ಷ - ಎಂದರೆ ದೃಢವಾದ ಸಂಕಲ್ಪವುಳ್ಳವನು.
ವಾಸ್ತವವಾಗಿ ಅದೊಂದರಲ್ಲೇ ಅವನು ಬದ್ಧದೀಕ್ಷ. ಅರ್ಥಾತ್ ಅದೇ ಆತನ ಏಕದೀಕ್ಷೆ, ಏಕಮಾತ್ರದೀಕ್ಷೆ. ತನ್ನಲ್ಲಿ ನಿಷ್ಠೆಯುಳ್ಳವರ ಸಮಸ್ತ ಉಪಪ್ಲವಗಳೂ ಶಮನವಾಗಬೇಕು - ಎಂಬುದೇ ಆತನ ಸಂಕಲ್ಪ.
ಈ ಶ್ಲೋಕದ ಪ್ರಥಮ-ಪದ 'ವಿಶ್ವ.' ಈ ನಾಮಪದಕ್ಕೆ ಪ್ರಪಂಚ ಎಂಬ ಅರ್ಥವು ಸುಪ್ರಸಿದ್ಧ. ವಿಶ್ವವೆಂಬುದು ಸಂಸ್ಕೃತದಲ್ಲಿ ಸರ್ವನಾಮವೂ ಆಗಬಹುದು; ಆಗ ಅದಕ್ಕೆ 'ಸರ್ವ' ಎಂಬ ಅರ್ಥವೂ ಪ್ರಚುರವೇ. ಎಂದೇ ವಿಶ್ವೋಪಪ್ಲವವೆಂದರೆ ಸರ್ವೋಪದ್ರವಗಳೆಂದೇ ಅರ್ಥ.
ಅಂತಹ ಮುರಾರಿಯ ಶೈಶವವನ್ನು ನಾವು ದಾರಿದಾರಿಯಲ್ಲೂ ಕಾಣುತ್ತೇವೆ - ಎನ್ನುತ್ತಾನೆ ಲೀಲಾಶುಕ. ಕಾಣುವುದೆಂದರೆ ಅನುಭವಿಸುವುದು, ಮನಸಾ ಭಾವಿಸುವುದು.
ಹೇಗಿದೆ ಆತನ ಶೈಶವ? ಪ್ರಶ್ಯಾಮವೂ ಪ್ರತಿನವವೂ ಆದ ಕಾಂತಿಯಿಂದ ಕೂಡಿರುವುದು ಅದು. ಏನು ಹಾಗೆಂದರೆ? ಪ್ರಶ್ಯಾಮವೆಂದರೆ ಪ್ರಕೃಷ್ಟವಾಗಿ ಶ್ಯಾಮವಾಗಿರುವುದು. ಎಂದರೆ ತೀರಾ ಶ್ಯಾಮವರ್ಣದ್ದು. ಪ್ರತಿನವವೆಂದರೆ ಪ್ರತಿಕ್ಷಣವೂ ಹೊಸತಾಗಿರುವುದು.
ಅಂತಹ ಕಾಂತಿಯ ಕಂದಲದಿಂದ ಆರ್ದ್ರವಾಗಿದೆ ಆತನ ಶೈಶವ. ಅರ್ಥಾತ್ ಕಾಂತಿಯು "ಚಿಗುರೊಡೆದಿದ್ದು" ಸರಸವಾಗಿದೆ, ಆತನ ಎಳಸು. ಶಿಶು-ಶರೀರದ ಬಣ್ಣ-ಹೊಳಪುಗಳನ್ನು ಇಲ್ಲಿ ಹೇಳಿದೆ.
ಒಟ್ಟಿನಲ್ಲಿ, ನೆರೆನಂಬಿದವರ ಸರ್ವಕಷ್ಟಪರಿಹಾರಿ, ಹೊಳಪಿನ ಮೈಬಣ್ಣವುಳ್ಳವನು, ನಮ್ಮ ಬಾಲಕೃಷ್ಣ.
ವಿಶ್ವೋಪಪ್ಲವ-ಶಮನೈಕ-ಬದ್ಧದೀಕ್ಷಂ
ವಿಶ್ವಾಸ-ಸ್ತಬಕಿತ-ಚೇತಸಾಂ ಜನಾನಾಂ |
ಪ್ರಶ್ಯಾಮ-ಪ್ರತಿನವ-ಕಾಂತಿ-ಕಂದಲಾರ್ದ್ರಂ
ಪಶ್ಯಾಮಃ ಪಥಿ ಪಥಿ ಶೈಶವಂ ಮುರಾರೇಃ ||
***
ಎಂದು ಕಾಣುವೆ ಇಂತಹ ಕೃಷ್ಣನನ್ನು? - ಎಂಬುದಾದ ಗೋಪಿಯೊಬ್ಬಳ ಹಂಬಲಿಕೆಯನ್ನು ಪದ್ಯವೊಂದರಲ್ಲಿ ಕವಿಯೊಕ್ಕಣಿಸಿದ್ದಾನೆ.
ಕೃಷ್ಣನ ಬಹುಲವಾದ ಚಿಕುರವನ್ನು ನಾನು ಕಣ್ತುಂಬ ಕಾಣಬೇಕು. ಬಹುಲವೆಂದರೆ ಹೆಚ್ಚಾಗಿರುವುದು, ಒತ್ತೊತ್ತಾಗಿರುವುದು. ಯಾವುದದು? ಚಿಕುರವೆಂದರೆ ಕೇಶರಾಶಿ. ದಟ್ಟವಾಗಿ ಬೆಳೆದಿರುವ ಕೂದಲುಗಳನ್ನುಳ್ಳ ಆ ಕೃಷ್ಣನನ್ನೆಂದು ಕಾಣುವೆ? - ಎಂಬ ಭಾವ ಅವಳದು.
ಕೂದಲುಗಳು - ಎಂಬ ಬಹುವಚನವೇ ತಾತ್ಪರ್ಯವಾದರೂ, ಏಕವಚನವನ್ನೇ ಬಳಸಿ ಹೇಳುವುದುಂಟು. ಇದನ್ನು ಜಾತ್ಯೇಕವಚನವೆನ್ನುವರು. ಅವಳ "ಕೂದಲು" ಚೆನ್ನಾಗಿದೆಯೆಂದರೆ "ಕೂದಲುಗಳು" ಚೆನ್ನಾಗಿವೆಯೆಂದೇ ಅರ್ಥ. ಏಕವಚನವು ಸ್ತೋಮವಾಚಿ. ದಟ್ಟವಾದ ಕೂದಲು ಪುಟ್ಟ ಮಕ್ಕಳಿಗೂ ಶೋಭಾವಹವೇ.
ಮುಖದ ಮೇಲೂ ಒಂದಿಷ್ಟು ಬರುವಂತೆ ಬೆಳೆದುಕೊಳ್ಳುವ ಗುಂಗುರುಕೂದಲೂ ಮುಖಕ್ಕೆ ಶೋಭೆಯೇ. ಹಾಗೆ ಬೆಳೆಯುವ ಕೂದಲಿಗೆ ಭ್ರಮರವೆನ್ನುತ್ತಾರೆ. ಭ್ರಮರವೆಂದರೆ ದುಂಬಿಯೆಂಬ ಅರ್ಥವೇನೋ ಪ್ರಸಿದ್ಧವೇ. ಮುಂಗುರುಳುಗಳ ಮೇಲೆ ಗಾಳಿಯಾಡಿದಾಗ ಆ ಮುಂಗುರುಳುಗಳೂ ಆಡುತ್ತವಲ್ಲವೇ? ಭ್ರಮಿಸುವುದೆಂದರೆ ಭ್ರಮಣಮಾಡುವುದು, ಅತ್ತಿತ್ತ ಹಿಂದುಮುಂದೆ ಹೋಗಿಬರುವುದು. ಮುಂಗುರುಳುಗಳೂ ಹಾಗಾಡುವುದರಿಂದಲೇ ಅವಕ್ಕೂ ಭ್ರಮರ ಎನ್ನುವುದು. ಅಂತಹ ಭ್ರಮರಗಳು ಮುಖವನ್ನೆಲ್ಲಾ ಮುಚ್ಚಿಬಿಡುವುದಿಲ್ಲ. ಹಾಗಿದ್ದರೆ ನೋಡಲೂ ಚೆನ್ನಲ್ಲ. ಅವು ವಿರಳವಾಗಿದ್ದರೆ ಅದೇ ಒಂದು ಶೋಭೆ. ಅಂತಹ ವಿರಳ-ಭ್ರಮರಗಳನ್ನುಳ್ಳವ ಕೃಷ್ಣ.
ಇನ್ನು ಆತನ ಅಧರವೋ ಅತ್ಯಂತ ಮಧುರವಾದದ್ದು! ಧನ್ಯರಾದ ಗೋಪಿಯರು ಅದನ್ನು ಆಸ್ವಾದಿಸಿ ಬಲ್ಲವರು. ಒಮ್ಮೆ ಸವಿಗಂಡದ್ದನ್ನು ಎಂದಾದರೂ ಮರೆಯುವುದುಂಟೆ?
ಅಂತೆಯೇ ಆತನ ವದನವೂ ಲಲಿತವಾದದ್ದು. ಎಂದರೆ ಸೌಂದರ್ಯಭರಿತವಾದದ್ದು. ಅದನ್ನೂ ಕಾಣಬೇಕೆಂಬಾಸೆಯೇ. ಕಾಣುತ್ತಲೇ ಇರಬೇಕೆಂಬ ಆಸೆಯೇ.
ಹಾಗೆಯೇ ಆತನ ನಡೆಯಲ್ಲೂ, ಎಂದರೆ ಚರಿತದಲ್ಲೂ, ಒಂದು ಚಪಲತೆಯಿದೆ. ಗೋಪಿಕೆಯರೊಂದಿಗಿನ ಸರಸತೆಯಲ್ಲಿ, ಒಮ್ಮೊಮ್ಮೆ ಒಬ್ಬೊಬ್ಬರನ್ನು ಆತನು ಸಂತೋಷಪಡಿಸುವಂತಾಗುತ್ತದೆ. ಒಂದು ಜೀವಿಗೆ ಸಿಕ್ಕ ಸಂಗಸುಖ ಮಗದೊಂದು ಜೀವಿಗೆ ದೊರಕಬಾರದೇ?
ಇದೆಲ್ಲವನ್ನೂ ನಾನದೆಂದು ಅನುಭವಿಸುವೆ? - ಎಂದು ಕೇಳುತ್ತಿದ್ದಾಳೆ, ಗೋಪಿಕೆಯೊಬ್ಬಳು. ಅವಳ ಚಡಪಡಿಕೆಯನ್ನು ಗುರುತಿಸಿದ್ದಾನೆ, ಲೀಲಾಶುಕ.
ಈ ತಾಳಬದ್ಧ-ಶ್ಲೋಕವು ತೋಟಕವೃತ್ತದಲ್ಲಿದೆ. ಲಘು-ಲಘು-ಗುರುಗಳ ಮೂರು ಮೂರಕ್ಷರಗಳಿಗೆ ಯತಿಯು ಬರುತ್ತದೆ. ರೇಫ-ಲಕಾರಗಳ ವಿಲಾಸವನ್ನೂ ಕಾಣಬಹುದು. ಅಂತಿಮ-ಪಾದದ ಚಕಾರತ್ರಯವೂ ಆಸ್ವಾದ್ಯವೇ.
ಶ್ಲೋಕ ಹೀಗಿದೆ:
ಚಿಕುರಂ ಬಹುಲಂ, ವಿರಲಂ ಭ್ರಮರಂ,/
ಮೃದುಲಂ ವಚನಂ, ವಿಪುಲಂ ನಯನಮ್, |
ಅಧರಂ ಮಧುರಂ, ಲಲಿತಂ ವದನಂ,/
ಚಪಲಂ ಚರಿತಂ ಚ ಕದಾನುಭವೇ? ||