Saturday, June 21, 2025

ಅಷ್ಟಾಕ್ಷರೀ 83 ನಾದಬ್ರಹ್ಮ ತದಾನಂದಂ (Ashtakshari 83)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



"ಯೋಗ"ದ ಯೋಗ ಜೂನ್ ೨೧ಕ್ಕೆ ಸಂದಿದೆಯಲ್ಲವೇ? ಯೋಗಸಾರವೆನಿಸುವ ವಿಷಯವನ್ನೇ ತೆಗೆದುಕೊಳ್ಳೋಣ. ಗಾನವು ಯಾರಿಗೆ ಪ್ರಿಯವಲ್ಲ? ಚಂಡಿ ಹಿಡಿದು ಅಳುತ್ತಿರುವ ಮಗುವನ್ನು ಸಹ ಸಂತೈಸಿ ಜೋಗುಳ ಹಾಡಿ ನಿದ್ದೆ ಮಾಡಿಸುವ ಪರಿ ಎಲ್ಲಿಲ್ಲ? ಪ್ರಾಣಿಗಳು ಸಹ ಸಂಗೀತಕ್ಕೆ ವಶವಾಗುವುವಲ್ಲವೇ? ಕೆಲವು ರಾಗಗಳಿಂದ ಜಿಂಕೆಗಳನ್ನು ವಶಪಡಿಸಿಕೊಳ್ಳುವುದುಂಟೆಂದು ಕೇಳಿರುತ್ತೇವೆ. ಭಾಸಮಹಾಕವಿಯ ನಾಟಕವೊಂದರಲ್ಲಿ ಉದಯನ-ಮಹಾರಾಜನು ತನ್ನ ವೀಣಾ-ವಾದನದಿಂದಲೇ ಆನೆಗಳನ್ನು ಮಂತ್ರ-ಮುಗ್ಧವಾದಂತಾಗಿಸಿ ಹಿಡಿಯುತ್ತಿದ್ದುದರ ಉಲ್ಲೇಖವಿದೆ.

ಶಿಶು-ಪಶುಗಳಿರಲಿ, ದೇವತೆಗಳೂ ಸಂಗೀತಪ್ರಿಯರೇ. ಸರ್ವಜ್ಞನಾದ ಪಾರ್ವತೀಪತಿಯು ಗೀತದಿಂದ ಸಂತೋಷಪಡುತ್ತಾನೆ. ಗೋಪೀಪತಿಯಾದ ಕೃಷ್ಣನು ಕೊಳಲಿನ ದನಿಗೆ ಮಾರುಹೋಗಿದ್ದಾನೆ. ಬ್ರಹ್ಮನು ಸಾಮಗಾನದಲ್ಲಿ ನಲಿಯುತ್ತಾನೆ. ಸರಸ್ವತಿಯು ವೀಣಾಸಕ್ತಳು. ಇನ್ನುಳಿದ ಯಕ್ಷ-ಗಂಧರ್ವ-ದೇವ-ದಾನವ-ಮಾನವರ ವಿಷಯವನ್ನು ಹೇಳುವುದೇನು? - ಎಂದು ಕೇಳುತ್ತದೆ, ಸಂಗೀತ-ರತ್ನಾಕರವೆಂಬ ಉತ್ಕೃಷ್ಟ-ಗ್ರಂಥ.

ಸಂಗೀತವೆಂಬುದಕ್ಕೆ ಆಧಾರವೇ ನಾದವಲ್ಲವೇ? ನಾದವಲ್ಲದೆ ಗೀತವಿಲ್ಲ, ನಾದವಿಲ್ಲದೆ ಸ್ವರವಿಲ್ಲ, ನಾದವಿಲ್ಲದೆ ನೃತ್ತವಿಲ್ಲ - ಎಂದೇ, ಜಗತ್ತೇ ನಾದಾತ್ಮಕ - ಎಂಬುದಾಗಿ ಮತಂಗನ ಬೃಹದ್ದೇಶಿ-ಗ್ರಂಥವು ಹೇಳುತ್ತದೆ.

ಗೀತವು ನಾದಾತ್ಮಕವಾದರೆ, ವಾದ್ಯದ ಸಾಫಲ್ಯವಿರುವುದೇ ನಾದದ ಅಭಿವ್ಯಕ್ತಿಯಲ್ಲಿ. ಇನ್ನು ನೃತ್ತವಾದರೋ ಗೀತ-ವಾದ್ಯಗಳನ್ನು ಅನುಸರಿಸಿ ಬರುವಂತಹುದೇ ಸರಿ. ಹೀಗೆ ಗೀತ-ವಾದ್ಯ-ನೃತ್ತಗಳು ಮೂರೂ ನಾದಾಧೀನವೇ.

ವಾಸ್ತವವಾಗಿ ಸಂಗೀತ ಎಂಬ ಪದವನ್ನು ನಾವಿಂದು ಸಾಧಾರಣವಾಗಿ ಬಳಸುತ್ತಿರುವುದು ಅಷ್ಟೊಂದು ಯುಕ್ತವಲ್ಲ. ಏಕೆ? ಗೀತ-ವಾದ್ಯ-ನೃತ್ಯಗಳು ಮೂರೂ ಸೇರಿದರೇ ಅದು ಸಂಗೀತವೆನಿಸಿಕೊಳ್ಳುವುದು - ಎಂಬುದಾಗಿ ಶಾಸ್ತ್ರಗಳು ಹೇಳುತ್ತವೆ.

ನಾವೆಲ್ಲರೂ ವ್ಯವಹರಿಸುವುದು ಪ್ರಧಾನವಾಗಿ ನಮ್ಮ ಮಾತುಗಳ ಮೂಲಕವೇ. ಇದನ್ನೇ ವಾಕ್ಕೆನ್ನುವುದು. ವಾಕ್ಕೆಲ್ಲವೂ ವಾಕ್ಯಗಳಿಂದಲ್ಲವೇ ತುಂಬಿರುವುದು? ವಾಕ್ಯಗಳು ಪದಗಳಿಂದ ಕೂಡಿರುವುವು. ಪದಗಳು ವರ್ಣಗಳಿಂದಾಗುವುವು. ವರ್ಣಕ್ಕೆ ಆಧಾರಭೂತವಾದದ್ದೇ ನಾದ. ಹೀಗಾಗಿ ಜಗತ್ತಿನ ವ್ಯವಹಾರವೆಲ್ಲವೂ ನಾದಾಧೀನವೆನ್ನಬಹುದಲ್ಲವೇ? ಶಾಸ್ತ್ರಕಾರರ ಮಾತನ್ನೇ ಇಲ್ಲಿ ಹೇಳಿರುವುದು.

ಸಂಗೀತಕ್ಕೆ ಆಧಾರವೇ ನಾದ - ಎಂಬುದನ್ನು ಕಂಡುಕೊಂಡದ್ದಾಯಿತು. ಸಂಗೀತಪ್ರಿಯರಾದ ನಮ್ಮ ದೇವತೆಗಳನ್ನು ಯೋಗಜ್ಞರಾದ ನಮ್ಮ ವಾಗ್ಗೇಯಕಾರರು ಹೇಗೆ ಚಿತ್ರಿಸಿರುವರೆಂಬುದನ್ನು ಒಂದೆರಡು ಉದಾಹರಣೆಗಳಿಂದ ನೋಡಬಹುದು. ದೇವಿಯನ್ನು ಸಂಗೀತ-ರಸಿಕೆಯೆಂದು ಕಾಳಿದಾಸನು ಕರೆದಿರುವನು. ಹೆಸರಿಗೆ ತಕ್ಕಂತೆ ಚಿತ್ತರಂಜಕವಾದ ಚಿತ್ತರಂಜನೀ ರಾಗದಲ್ಲಿಯ ತಮ್ಮ ಕೃತಿಯಲ್ಲಿ ತ್ಯಾಗರಾಜರು "ನಾದತನುಂ ಅನಿಶಂ" - ಎಂಬುದಾಗಿ ಶಂಕರನನ್ನು ಸ್ತುತಿಸಿದ್ದಾರೆ.

ಇನ್ನು ಕೃಷ್ಣನ ವೇಣುಗಾನವನ್ನು ಹೃದ್ಯವಾಗಿ ಚಿತ್ರಿಸಿರುವ ಲೀಲಾಶುಕನು ವೃಕ್ಷಗಳ ಮೇಲೂ ಮೃಗಗಳ ಮೇಲೂ ಗೋಪಾಲಕರ ಮೇಲೂ ಅದರಿಂದಾದ ಪರಿಣಾಮವನ್ನು ಹೇಳುತ್ತಾನೆ. ಅಷ್ಟೇ ಅಲ್ಲ. ಮುನಿಗಳನ್ನೂ ಅದು ಅಂತರ್ಮುಖ ಮಾಡುವುದೆಂದೂ, ವಸ್ತುತಃ ವೇದಗಳನ್ನೇ ಅದು ಪ್ರತಿಧ್ವನಿಸುತ್ತದೆಂದೂ ನಿರೂಪಿಸುತ್ತಾನೆ. ಅದು ಓಂಕಾರಾರ್ಥವನ್ನೇ ಹೊಮ್ಮಿಸುತ್ತದೆಂದೂ ಚಿತ್ರಿಸಿದ್ದಾನೆ. ಲೋಕವನ್ನೇ ಅದು ಉನ್ಮತ್ತಗೊಳಿಸುವುದೆಂದರೆ ಯೋಗಶಾಸ್ತ್ರಗಳು ಹೇಳುವ ಉನ್ಮನೀ ಎಂಬ ಅವಸ್ಥೆಯನ್ನುಂಟುಮಾಡುವದು - ಎಂದು ಯೋಗಿವರೇಣ್ಯರೂ ಗಾನಪ್ರವೀಣರೂ ಆದ ಶ್ರೀರಂಗಮಹಾಗುರುಗಳು ವಿವರಿಸಿದ್ದಾರೆ.

ಇಲ್ಲಿ ಮುನಿಗಳು ಅಂತರ್ಮುಖರಾಗುವುದೂ ಪ್ರಣವಾರ್ಥವು ವೇಣುಗಾನದಿಂದ ಬರುವುದೂ ಯೋಗಶಾಸ್ತ್ರದ ವಿಷಯಗಳೇ. ವಾಸ್ತವವಾಗಿ ಇವೆಲ್ಲಕ್ಕೂ ಮೂಲವಾದ ನಾದವೆಂಬುದೇ ಯೋಗಶಾಸ್ತ್ರದ ವಿಷಯ.

ನಕಾರವೆಂಬುದು ಪ್ರಾಣ, ದಕಾರವು ಅಗ್ನಿ. ಪ್ರಾಣ ಹಾಗೂ ಅಗ್ನಿ (ಅರ್ಥಾತ್ ಪ್ರಾಣ ಮತ್ತು ಅಪಾನ) - ಇವುಗಳ ಸೇರುವೆಯಿಂದಲೇ ಪ್ರಣವನಾದವೂ ಸಪ್ತಸ್ವರಗಳೂ ಜನಿಸುವುದೆಂಬುದನ್ನು ತ್ಯಾಗರಾಜರು "ಮೋಕ್ಷಮು ಗಲದಾ" ಎಂಬ ಸಾರಮತಿ-ರಾಗದ ತಮ್ಮ ಕೃತಿಯಲ್ಲಿ ಹಾಡಿದ್ದಾರೆ.

ನಾದಬ್ರಹ್ಮವು ಅದ್ವಿತೀಯವಾದ ಆನಂದವೇ ಆಗಿರುವ (ನಾದಬ್ರಹ್ಮ ತದಾನಂದಂ) ಸರ್ವಭೂತ-ಚೈತನ್ಯ - ಎನ್ನುವುದು ಶಾರ್ಙ್ಗದೇವನ ಸಾರೋಕ್ತಿ.

ನಾದವೆಂಬುದು ಮೂಲಾಧಾರಚಕ್ರದಲ್ಲಿ ಜನಿಸುವುದೆಂಬುದನ್ನು ಯೋಗಿವರ್ಯರಾದ ತ್ಯಾಗರಾಜರು ತಮ್ಮ ಸ್ವರರಾಗಸುಧಾರಸ  (ಶಂಕರಾಭರಣ-ರಾಗ) - ಎಂಬ ಕೃತಿಯಲ್ಲಿ ಹೇಳಿ, ಅದರ ಪರಮಾನಂದತತ್ತ್ವವನ್ನು ಹೇಳಿದ್ದಾರೆ.

ಸಾಧಕರ ಜೀವನದಲ್ಲಿ ಯೋಗಸಾಧನೆಯು ಎಷ್ಟು ಮುಖ್ಯವೆಂಬುದನ್ನು ಪುರಂದರದಾಸರು ತಮ್ಮ ಊರದೇವರ ಮಾಡಬೇಕಣ್ಣಾ - ಎಂಬ (ನಾದನಾಮಕ್ರಿಯಾ-ರಾಗ) ಕೃತಿಯಲ್ಲಿ "ದ್ವಾರಗಳೊಂಭತ್ತು ಮುಚ್ಚಿ, ನಿಲ್ಲಿಸಿ ಭ್ರೂಮಧ್ಯದಲ್ಲಿ" - ಎಂಬುದಾಗಿ ಚಿತ್ರಿಸಿದ್ದಾರೆ. ಆಜ್ಞಾಚಕ್ರದವರೆವಿಗೂ ಮನಸ್ಸನ್ನೊಯ್ಯುವ ಯೋಗಪ್ರಕ್ರಿಯೆಯನ್ನು ಇದು ಹೇಳುತ್ತದೆ. ವೀಣಾವಾದನ-ತತ್ತ್ವಜ್ಞನು ಮೋಕ್ಷಮಾರ್ಗವನ್ನು ಹೊಂದುವನೆಂದು ಯಾಜ್ಞವಲ್ಕ್ಯಸ್ಮೃತಿಯು ತಿಳಿಸುತ್ತದೆ.

"ನಾದದಿಂದಲೇ ಮಂತ್ರಶಾಸ್ತ್ರ, ಯೋಗಶಾಸ್ತ್ರ, ವ್ಯಾಕರಣಶಾಸ್ತ್ರ, ಸಂಗೀತಶಾಸ್ತ್ರ - ಇವುಗಳೆಲ್ಲವೂ ಹೊರಡುತ್ತವೆ" ಎಂಬ ಶ್ರೀರಂಗಮಹಾಗುರುಗಳ ಮಾತು ಈ ಎಲ್ಲ ವಿದ್ಯೆಗಳ ಸಾರಕ್ಕೆ ಕನ್ನಡಿ ಹಿಡಿಯುತ್ತದೆ.

 ಯೋಗಶಾಸ್ತ್ರದಿಂದಲೇ ಹೊಮ್ಮಿದ ಸಂಗೀತವಿದ್ಯೆಯನ್ನು ವಿಶ್ವಯೋಗದಿನದಂದು ಸ್ಮರಿಸಿಕೊಳ್ಳುವುದು ಉಚಿತವೇ ಆಗಿದೆಯಲ್ಲವೇ?

ಸೂಚನೆ: 21/6//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

Monday, June 16, 2025

ಪ್ರಶ್ನೋತ್ತರ ರತ್ನಮಾಲಿಕೆ 20 (Prasnottara Ratnamalike 20)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)





ಪ್ರಶ್ನೆ ೨೦. ಲಾಘವ ಯಾವುದು?

ಉತ್ತರ - ನೀಚರಲ್ಲಿ ಬೇಡುವುದು.

ಈ ಮುಂದಿನ ಪ್ರಶ್ನೆ 'ಲಾಘವ ಯಾವುದು?' ಎಂಬುದು. ಉತ್ತರ 'ನೀಚರಲ್ಲಿ ಬೇಡುವುದು'. ಉತ್ತರ ಬಹಳ ಹಗುರವಾಗಿದೆ; ತಿಳಿದುಕೊಳ್ಳಲು ಸುಲಭವಾಗಿದೆ ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಆದರೆ ನಮಗೆ ಇಲ್ಲಿ ಬರುವ ಸವಾಲು ಎಂದರೆ ಯಾರು ನೀಚರು? ಎಂಬುದನ್ನು ತಿಳಿದುಕೊಳ್ಳುವುದರಲ್ಲಿ. ಇದು ಬಹಳ ಕಠಿಣವಾದದ್ದು. ಏಕೆಂದರೆ ಹೇಗೆ ನೀಚರನ್ನು ಗುರುತಿಸುವುದು? ಮಾನದಂಡ ಉಂಟೆ? ಅಥವಾ ನೀಚರಿಗೆ ಏನಾದರೂ ಸರಿಯಾದ ಲಕ್ಷಣವುಂಟೇ? ಹೀಗೆಲ್ಲ ನಮಗೆ ಪ್ರಶ್ನೆ ಬರುತ್ತದೆ. ಹಾಗಾಗಿ ನೀಚರು ಯಾರು? ಎಂದು ತಿಳಿದರೆ ಅವರಲ್ಲಿ ಬೇಡುವುದು ಸರಿಯಲ್ಲ ಎಂಬ ವಿಷಯವನ್ನು ತಿಳಿದಂತೆ ಆಗುತ್ತದೆ. ಇದಕ್ಕೂ ಮೊದಲು ಕಾಳಿದಾಸನು ಋತು ಸಂಹಾರ ಎಂಬ ಕಾವ್ಯದಲ್ಲಿ ಒಂದು ಮಾತನ್ನು ಹೇಳುತ್ತಾನೆ "ಯಾಚ್ನಾ ಮೋಘಾ ವರಮಧಿಗುಣೇ ನಾಧಮೇ ಲಬ್ಧಕಾಮಾ - ಒಳ್ಳೆಯವರಲ್ಲಿ ಬೇಡಿದ್ದು ಸಿಗದಿರುವುದು, ಅಧಮರಲ್ಲಿ ಬೇಡಿ ಸಿಗುವುದಕ್ಕಿಂತ ಉತ್ತಮ" ಎಂಬುದಾಗಿ. ಬೇಡುವುದು ಹೇಗೆ ತಪ್ಪು? ಎಂಬುದನ್ನು ಈ ಹಿಂದಿನ ಲೇಖನದಲ್ಲಿ ಚಿಂತಿಸಲಾಗಿದೆ. ಅದರಲ್ಲೂ ನೀಚರಲ್ಲಿ ಬೇಡುವುದೆಂದರೆ ಅದು ತಪ್ಪೇ ತಪ್ಪು. ಆದ್ದರಿಂದರೆ ನೀಚರು ಯಾರು? ಎಂಬುದನ್ನು ಈ ಪ್ರಶ್ನೋತ್ತರದಲ್ಲಿ ಗಮನಿಸುವುದು ಉಚಿತ ಎಂಬುದು ಭಾವನೆಯಾಗಿದೆ.


ಇಲ್ಲೊಂದು ಸುಭಾಷಿತವು ಇದರ ಬಗ್ಗೆ ಹೀಗೆ ವಿವರಣೆಯನ್ನು ನೀಡುತ್ತಿದೆ - "ಕರ್ಮಣ್ಯೇಕಂ ವಚಸ್ಯೇಕಂ ಮನಸ್ಯೇಕಂ ಮಹಾತ್ಮನಾಮ್। ಕರ್ಮಣ್ಯತ್ ವಚಸ್ಯನ್ಯತ್ ಮನಸ್ಯತ್ ದುರಾತ್ಮನಾಮ್ ಎಂಬುದಾಗಿ. ಅಂದರೆ ಯಾರ ಮಾಡುವ ಕರ್ಮ, ಆಡುವ ಮಾತು ಮತ್ತು ಯೋಚಿವ ಮನಸ್ಸು ಒಂದೇ ಆಗಿರುತ್ತದೆಯೋ ಅವರು ಮಹಾತ್ಮ ಅಥವಾ ಉತ್ತಮ ಎನಿಸಿಕೊಳ್ಳುತ್ತಾನೆ. ಇದಕ್ಕೆ ವಿರುದ್ಧ ಸ್ವಭಾವುಳ್ಳವನು ದುರಾತ್ಮ ಅಥವಾ ನೀಚನೆನಿಸಿಕೊಳ್ಳುತ್ತಾನೆ. ಅಂದರೆ ಮಾಡುವುದಕ್ಕೂ ಹೇಳುವುದಕ್ಕೂ ಯೋಚಿಸುವುದಕ್ಕೂ ಒಂದಕ್ಕೊಂದು ಸಂಬಂಧವೇ ಇರುವುದಿಲ್ಲ ಎಂದರ್ಥ. ಮನನಸ್ಸು, ಮಾತು ಮತ್ತು ಕೆಲಸ ಈ ಮೂರು ಒಂದೇ ಸರಳರೇಖೆಯಲ್ಲಿ ಬರುವಂತಿರಬೇಕು. ಇವೆಲ್ಲವೂ ರುಜುರೇಖೆಯಲ್ಲಿ ಬರುವಂತೆ ಇದ್ದರೆ ವ್ಯವಸ್ಥೆ ಸರಿಯಾಗಿರುತ್ತದೆ. ಇವು ಮೂರು ಜೀವಾತ್ಮನ ಆಣಂತಿಯಂತೆ ನಡೆಯುವಂತಿರಬೇಕು ಎಂದರ್ಥ. 'ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳಿಯಿತು' ಎಂಬ ಗಾದೆಮಾತಿನಂತೆ ಆಗಬಾರದು. ಒಬ್ಬನು ತನ್ನ ಚಕ್ಕಡಿಗಾಡಿಗೆ ಒಂದುಕಡೆ ಕೋಣವನ್ನು, ಇನ್ನೊಂದುಕಡೆ ಎತ್ತನ್ನು ಕಟ್ಟಿದರೆ ಆ ಗಾಡಿಯು ಚಾಲಕನ ನಿಯಂತ್ರಣದಲ್ಲಿ ಇರದು. ಏಕೆಂದರೆ ನೀರು ಕಂಡೀತೆಂದರೆ ಕೋಣಕ್ಕೆ ನೀರಿನ ಕಡೆ ಹೋಗಿ ಅಲ್ಲಿ ಆಡುವ ಆಸೆ. ಆದರೆ ಎತ್ತಿಗೆ ನೀರಾಗದು. ಅದು ನೀರಿನ ಕಡೆ ಹೋಗದು. ಹೀಗೆ ಅಲ್ಲೇ ಎಳೆದಾಟ ಆಗಿ ಗಾಡಿ ಎಲ್ಲಿಗೂ ಹೋಗದು. ಅಂತೆಯೇ ನೀಚರು ತಮ್ಮ ಶರೀರ ಮಾತು ಮನಸ್ಸುಗಳನ್ನು ಜೀವದ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದಿಲ್ಲ. ಪರಿಣಾಮವಾಗಿ ಅವರು ಮಾಡಬಾರದ್ದನ್ನೇ ಮಾಡುತ್ತಾರೆ. ಆಡಬಾರದ್ದನ್ನೇ ಆಡುತ್ತಾರೆ. ಅಂತವರ ಬಳಿ ಕೇಳುವುದು ಅಥವಾ ಬೇಡುವುದು ಕಠಿಣವೇ ಸರಿ. ಅವರು ಒಮ್ಮೆ ಕೊಡುತ್ತೇನೆಂದರೆ, ಕೆಲವೇ ಕ್ಷಣದಲ್ಲಿ ಕೋಡುವುದಿಲ್ಲ ಎಂದೂ ಹೇಳಬಹುದು. 'ಕ್ಷಣಚಿತ್ತ ಕ್ಷಣಪಿತ್ತ' ಎಂಬಂತೆ ಅವರು ಒಂದೇ ರೀತಿ ಇರುತ್ತಾರೆ ಎಂದು ಎಣಿಸುವುದು ಕಷ್ಟವೇ ಸರಿ. ಹಾಗಾಗಿ ಇಂತವರ ಬಳಿ ಬೇಡಿದರೆ ಕೇಳಿದ ವ್ಯಕ್ತಿಯೇ ಲಘುವಾಗುತ್ತಾನೆ. ಅಂದರೆ ಅವನ ವ್ಯಕ್ತಿತ್ವಕ್ಕೇ ಅದು ಕುಂದು ತಂದೀತು!


ಸೂಚನೆ : 15/6/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 141 ಕೃಷ್ಣನ ಸ್ವಗೃಹಗಮನ (Vyaasa Vikshita 141)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಅರ್ಧಯೋಜನದಷ್ಟು ದೂರ ಹೋದ ಬಳಿಕ ಶತ್ರುಜಯನಾದ ಕೃಷ್ಣನು ಯುಧಿಷ್ಠಿರನ ಅನುಮತಿಯನ್ನು ಪಡೆದುಕೊಂಡು ಆತನನ್ನು ಬೀಳ್ಕೊಟ್ಟನು. ಇನ್ನು ಹಿಂದಿರುಗೆಂದು ಆತನಿಗೆ ಹೇಳಿದನು. ತನ್ನನ್ನು ಕಳುಹಿಸಿಕೊಡಲು ಅಷ್ಟು ದೂರ ಸಾಗಿಬಂದ ಉಳಿದವರನ್ನೂ ಹಾಗೆಯೇ ಬೀಳ್ಕೊಟ್ಟನು. ಧರ್ಮಜ್ಞನಾದ ಕೃಷ್ಣನು ಆ ಬಳಿಕ ಅಭಿವಾದನ ಮಾಡಿ ಯುಧಿಷ್ಠಿರನ ಪಾದಗಳನ್ನು ಹಿಡಿದನು. ಧರ್ಮರಾಜನಾದ ಯುಧಿಷ್ಠಿರನು ಕೇಶವನನ್ನು ಎಬ್ಬಿಸಿದನು, ಆತನ ಶಿರಸ್ಸನ್ನು ಆಘ್ರಾಣಿಸಿದನು. ಯಾದವಶ್ರೇಷ್ಠನೂ ಹಾಗೂ ಕಮಲನೇತ್ರನೂ ಆದ ಕೃಷ್ಣನನ್ನು ಯುಧಿಷ್ಠಿರನು "ಹೋಗಿ ಬಾ" ಎಂದು ಹರಸಿದನು.  ಆಮೇಲೆ ಆತನಿಗೆ ಮತ್ತೆ ಹಿಂದಿರುಗಿ ಬರುವುದಾಗಿ ಮಾತಿತ್ತು, ಕೃಷ್ಣನು ತನ್ನನ್ನನುಸರಿಸುತ್ತಿದ್ದ ಪಾಂಡವರನ್ನು ಹಿಂದಕ್ಕೆ ಕಳುಹಿಸಿದನು. ಬಳಿಕ ಸಂತೋಷಗೊಂಡವನಾಗಿ, ಸ್ವಪುರಿಯತ್ತ ಪ್ರಯಾಣ ಬೆಳೆಸಿದನು. ಇಂದ್ರನು ಅಮರಾವತಿಯನ್ನು ಸೇರಿಕೊಳ್ಳುವಂತೆ ಅದಿತ್ತು. ಮತ್ತು ಆ ಪಾಂಡವರಾದರೂ, ಎಷ್ಟು ದೂರ ತಮ್ಮ ದೃಷ್ಟಿಗೆ ಕಾಣುತ್ತಾನೋ ಅಷ್ಟು ದೂರವೂ ಕೃಷ್ಣನನ್ನು ತಮ್ಮ ಕಣ್ಣುಗಳಿಂದ ಅನುಸರಿಸಿದರು. ಕೃಷ್ಣನ ಮೇಲೆ ಅತಿಶಯವಾದ ಪ್ರೀತಿಯ ಕಾರಣದಿಂದ ಮನಸ್ಸಿನಿಂದಲೂ ಆತನನ್ನು ಹಿಂಬಾಲಿಸಿದರು.


ತನ್ನನ್ನು ಎಷ್ಟು ನೋಡಿದರೂ ತೃಪ್ತಿಯಾಗದ ಮನಸ್ಸುಳ್ಳ ಅವರ ದೃಷ್ಟಿಯಿಂದ ಬೇಗನೆ ಮರೆಯಾದನು, ನೇತ್ರಗಳಿಗೆ ಅಭಿರಾಮನೆನಿಸುವ ಶ್ರೀಕೃಷ್ಣನು. ಪಾಂಡವರೆಲ್ಲರ ಮನಸ್ಸೂ ಗೋವಿಂದನಲ್ಲಿಯೇ ನೆಲೆಗೊಂಡಿತ್ತು. ಕೃಷ್ಣನನ್ನು ಬೀಳ್ಕೊಟ್ಟಾದ ಬಳಿಕ ಹಿಂದಿರುಗಿ ತಮ್ಮ ಪುರವನ್ನು ಪಾಂಡವರು ಬೇಗನೇ ಸೇರಿಕೊಂಡರು. ಇತ್ತ ಕೃಷ್ಣನೂ ರಥದಲ್ಲಿ ಸಾಗಿ ತ್ವರಿತವಾಗಿಯೇ ದ್ವಾರಕೆಯನ್ನು ಸೇರಿಕೊಂಡನು. ಸಾತ್ತ್ವತವಂಶದ ವೀರನಾದ ಸಾತ್ಯಕಿಯು ಕೃಷ್ಣನ ಹಿಂದೆ ಕುಳಿತು ಪ್ರಯಾಣಿಸುತ್ತಿದ್ದನು. ಸಾರಥಿಯಾದ ದಾರುಕನು ಮುಂದೆ ಕುಳಿತಿದ್ದನು. ಅವರಿಬ್ಬರೊಂದಿಗೆ, ವೇಗಸಂಪನ್ನನಾಗಿ ಗರುಡನು ಹೇಗೋ ಹಾಗೆ ದ್ವಾರಕೆಯನ್ನು ಕೃಷ್ಣನು ಸೇರಿಕೊಂಡನು.


ಇತ್ತ, ಸೋದರರೊಡಗೂಡಿದ ಧರ್ಮರಾಜನು ಸ್ನೇಹಿತರಿಂದ ಸುತ್ತುವರೆಯಲ್ಪಟ್ಟವನಾಗಿ ತನ್ನ ಶ್ರೇಷ್ಠಪುರವನ್ನು ಹೋಗಿ ಸೇರಿದನು. ಮಿತ್ರರು, ಎಲ್ಲ ಭ್ರಾತೃಗಳು ಹಾಗೂ ಪುತ್ರರು - ಇವರೆಲ್ಲರನ್ನೂ ಕಳುಹಿಸಿಕೊಟ್ಟು, ಆ ಪುರುಷವ್ಯಾಘ್ರನಾದ ಯುಧಿಷ್ಠಿರನು ದ್ರೌಪದಿಯೊಂದಿಗೆ ಸಂತೋಷವಾಗಿದ್ದನು. ಇತ್ತ ಕೇಶವನೂ ಸಂತೋಷದಿಂದ ತನ್ನ ಶ್ರೇಷ್ಠನಗರಿಯನ್ನು ಸೇರಿಕೊಂಡನು. ಉಗ್ರಸೇನ ಮೊದಲಾದ ಯದುವೀರರು ಆತನನ್ನು ಸಂಮಾನಿಸಿದರು. ಉಗ್ರಸೇನ, ವೃದ್ಧನಾದ ತಂದೆ ವಸುದೇವ, ಯಶಸ್ವಿನಿಯಾದ ತಾಯಿ ದೇವಕಿ ಹಾಗೂ ಅಣ್ಣ ಬಲರಾಮ - ಇವರುಗಳಿಗೆಲ್ಲ ಶ್ರೀಕೃಷ್ಣನು ನಮಸ್ಕಾರಗಳನ್ನು ಸಲ್ಲಿಸಿದನು. ಬಳಿಕ ಪ್ರದ್ಯುಮ್ನ, ಸಾಂಬ ಮುಂತಾದವರನ್ನು ಕೃಷ್ಣನು ಆಲಿಂಗಿಸಿಕೊಂಡನು. ಹಿರಿಯರ ಅನುಮತಿ ಪಡೆದು ರುಕ್ಮಿಣಿಯ ಭವನಕ್ಕೆ ಹೋದನು.


ಅಷ್ಟರಲ್ಲಿ ಇತ್ತ ಮಯನೂ ಸರ್ವರತ್ನಗಳಿಂದಲೂ ಕಂಗೊಳಿಸುವ ಸಭೆಯೊಂದನ್ನು ಧರ್ಮರಾಜನಿಗೆ ಕಟ್ಟಿಕೊಡುವ ಸಂಕಲ್ಪಮಾಡಿದನು. ಜಯಶಾಲಿಗಳಾದವರಲ್ಲಿ ಶ್ರೇಷ್ಠನೆನಿಸುವ ಅರ್ಜುನನನ್ನು ಕುರಿತು ಮಯನು ಹೇಳಿದನು, "ಹೊರಡಲು ಅನುಮತಿ ಕೊಡಿ, ನಾ ಮತ್ತೆ ಬರುವೆ. ಕೈಲಾಸಕ್ಕೆ ಉತ್ತರದಲ್ಲಿರುವ ಮೈನಾಕಪರ್ವತದ ಮೇಲೆ ದಾನವರು ಒಂದು ಯಜ್ಞವನ್ನು ಮಾಡುವವರಾಗಿದ್ದರು.  ಆಗ ಮಣಿಮಯಭಾಂಡವೊಂದನ್ನು ನಾನು ನಿರ್ಮಿಸಿದೆ. ಬಿಂದುಸರದ ಸಮೀಪದಲ್ಲಿಯ ರಾಜ ವೃಷಪರ್ವನ ಸಭೆಯಲ್ಲಿ ಅದನ್ನಿಡಲಾಯಿತು. ಆ ರಾಜನು ಸತ್ಯಸಂಧ - ಎಂದರೆ ಸತ್ಯವಾದ ಪ್ರತಿಜ್ಞೆಯುಳ್ಳವನು. ಅದಿನ್ನೂ ಹಾಗೆಯೇ ಉಳಿದಿರುವುದಾದರೆ ಅದನ್ನು ಇಲ್ಲಿಗೆ ತೆಗೆದುಕೊಂಡುಬರುವೆ. ಆ ಬಳಿಕವೇ ಪಾಂಡವರಿಗೆ ಕೀರ್ತಿಯನ್ನು ತರುವ ಸಭೆಯೊಂದನ್ನು ನಿರ್ಮಿಸುವೆ" - ಎಂದು.


ಸೂಚನೆ : 15/6/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.


ಕೃಷ್ಣಕರ್ಣಾಮೃತ 68 ಬಾಲಕೃಷ್ಣನ ಬಾಯೊಳಗೆ ಒಟ್ಟಿಗೇ ಹಾಲು-ಬೆಣ್ಣೆ-ಮಣ್ಣುಗಳೇ? (Krishakarnamrta 67)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಇಲ್ಲಿ ಚಿತ್ರಿಸಲಾಗಿರುವ ಶ್ರೀಕೃಷ್ಣನು ವಿಲಾಸಗಳಿಗೆ ನಿಧಿಯಾದ ಬಾಲಕ. ವಿಲಾಸಗಳ ಸಮುದ್ರವೇ ಆತನೆಂದರೂ ನಡೆಯುತ್ತದೆ. ಆತನನ್ನು ನಾನು ಕಾಣುವುದು ಎಂದು? - ಎಂದು ಶ್ಲೋಕಾಂತದಲ್ಲಿ ಕೇಳಿದೆ.

ಯಾವ ತೆರನವು ಆತನ ವಿಲಾಸಗಳು? ಎರಡೆಡೆಗಳಲ್ಲಿ ವೈಪುಲ್ಯ, ಎರಡೆಡೆಗಳಲ್ಲಿ ಮಾರ್ದವ, ಎರಡೆಡೆಗಳಲ್ಲಿ ಮಾಧುರ್ಯ - ಇವುಗಳೇ ಆತನ ವಿಲಾಸಮಯತೆಗೆ ವ್ಯಂಜಕ.

ಆತನ ವಕ್ಷಸ್ಸು ವಿಶಾಲವಾದದ್ದು. ಅಲ್ಲದೆ, ಆತನ ಕಣ್ಣುಗಳೂ ಅಷ್ಟೆ, ಆಯತವಾದವು. ಉತ್ಪಲವನ್ನು, ಎಂದರೆ ಕಮಲವನ್ನು, ಹೋಲುವಂತಹವು ಅವು. ವಿಶಾಲವಾದ ವಕ್ಷಸ್ಸು ಪುರುಷನ ಪುರುಷತ್ವಕ್ಕೆ ಕನ್ನಡಿ. ಅಗಲವಾದ ಅಕ್ಷಿಗಳು ಅಂದ-ಸೌಂದರ್ಯಗಳ ಆಗರಗಳು.

ಆತನ ಮುಖವನ್ನು ಮಂದಸ್ಮಿತವು ಮಂಡಿಸಿದೆ. ಅದರಲ್ಲೇ ಆತನ ಮನಸ್ಸದೆಷ್ಟು ಮೃದುವೆಂಬುದು ಮನದಟ್ಟಾಗುತ್ತದೆ. ಮೃದು-ಮನಸ್ಕರ ಮುಖದಲ್ಲಿ ಮುಗ್ಧ-ಹಸಿತವು ರಾಜಿಸುತ್ತದೆ. ಉದ್ಧತರು ನಕ್ಕರೆಂದರೆ  ಅಟ್ಟಹಾಸವಷ್ಟೆ ಹೊಮ್ಮೀತು.

ಇದಲ್ಲದೆ ಆತನ ಮದ-ಜಲ್ಪಿತವೂ ಮೃದುಲವೇ. ಮದಿಸಿದವರ ಮಾತಲ್ಲಿ ನಯವೆಲ್ಲಿ? - ಎನಿಸಬಹುದು. ಜಲ್ಪಿತವೆಂದರಂತೂ ತೋಚಿದಂತೆ ಮಾತನಾಡುವುದು. ಆದರೆ ಕೃಷ್ಣನ ಮದವು ಬೇರೆಯವರ ಮದದಂತಲ್ಲವಲ್ಲ? ಒಳಗಿನ ಹರ್ಷಾವಸ್ಥೆಯು ಮದಾವಸ್ಥೆಯಂತೆ ತೋರೀತಷ್ಟೆ. ವಿಹಾರ-ಬುದ್ಧಿಯಿಂದ ವಿಲಾಸಕ್ಕಾಡುವ ಮಾತಾದರೂ, ಕೃಷ್ಣನಂತಹ ವಿವೇಕಿಗಳ ಮಾತು ಧರ್ಮದ ಜಾಡಿನಿಂದಂತೂ ಜಾರದು. 

ಎಂದೇ ಒರಟಾದ ಮಾತೇ ಅಂತಹವರ ಬಾಯಿಂದ ಹೊರಡದು. ಮಾತು ಒರಟಾದರೆ ಕೇಳುವವರಿಗೇನು ಹಿತವೇ? ಕೃಷ್ಣನ ಸ್ಮಿತವೂ ಮೃದುಲ, ಭಾಷಿತವೂ ಮೃದುಲ.

ಇನ್ನು ಆತನ ತುಟಿಯಂತೂ ತೊಂಡೇ ಹಣ್ಣಿನಂತೆಯೇ ಇರುವುದು. ಬಿಂಬಫಲ ಅಥವಾ ತೊಂಡೆಯ ಒಳಭಾಗವು ಕಡುಗೆಂಪಾಗಿರುವುದು. ಹಾಗೆ ಸಹಜವಾಗಿ ಕೆಂಪಾಗಿರುವ ತುಟಿಗಳು ರಕ್ತಪುಷ್ಟಿಯನ್ನು ಸೂಚಿಸುವುವು; ಅದಂತೂ ಆರೋಗ್ಯದ ಸುಲಕ್ಷಣವೇ ಸರಿ. ಹೀಗಾಗಿ ಕೃಷ್ಣನ ಬಿಂಬಾಧರವು ಮಾಧುರ್ಯವನ್ನು ಬಿಂಬಿಸುತ್ತದೆ. ಅದು ಮಾತ್ರವಲ್ಲ; ಆತನ ತುಟಿಗೆ ತಗಲುವ ಕೊಳಲೂ ಅಷ್ಟೇ. ಕಿವಿಗಿಂಪಾದ ದನಿಯೇ ಅದರಿಂದ ಚಿಮ್ಮುವುದು. ಹೀಗೆ ಶ್ರವಣಗಳಿಗೆ ರಮಣೀಯವೆನಿಸಿವುದು, ಕೃಷ್ಣನ ಮುರಳೀ-ರವ. ರವವೆಂದರೆ ಧ್ವನಿ.

ಈ ಶ್ಲೋಕವು ಕೃಷ್ಣನಲ್ಲಿ ತೋರುವ ವೈಪುಲ್ಯ-ಮಾರ್ದವ-ಮಾಧುರ್ಯಗಳನ್ನು ತಿಳಿಸುತ್ತದೆ. ಈ ಮೂರನ್ನೇ ಮೊದಲ ಮೂರು ಪಾದಗಳಲ್ಲಿ ತಿಳಿಸಿರುವುದು. ಅವುಗಳಲ್ಲಿಯ ಪದಗಳಲ್ಲಿ ೪+೧+೩+೫+೧ ಎಂಬ ಪರಿಯ ಅಕ್ಷರಗಳ ವಿನ್ಯಾಸವಿದೆ. ಈ ಶ್ಲೋಕದ ರಚನೆಯಲ್ಲೇ ಹೀಗೊಂದು ವಿಶೇಷವಿದೆ.

ಅಲ್ಲದೆ, ಲ-ಲ, ಮ-ಮ, ರ-ರ, ಎಂಬೀ ಅಕ್ಷರಗಳ ಪುನರಾವೃತ್ತಿಯಿಂದಾದ ಅನುಪ್ರಾಸವೂ ಕಿವಿಗೆ ಸವಿಯೇ. ಚ-ಚಗಳು ನಿಯತವಾದ ಸ್ಥಾನಗಳಲ್ಲೇ ಬರುತ್ತಿರುವುದೂ ಒಂದು ಚಮತ್ಕೃತಿಯೇ.

ಶ್ಲೋಕ ಹೀಗಿದೆ:
ವಕ್ಷಃಸ್ಥಲೇ ಚ ವಿಪುಲಂ ನಯನೋತ್ಪಲೇ ಚ
ಮಂದಸ್ಮಿತೇ ಚ ಮೃದುಲಂ ಮದಜಲ್ಪಿತೇ ಚ |
ಬಿಂಬಾಧರೇ ಚ ಮಧುರಂ ಮುರಲೀ-ರವೇ ಚ
ಬಾಲಂ ವಿಲಾಸನಿಧಿಮಾಕಲಯೇ ಕದಾ ನು? ||

ಮತ್ತೊಂದು ಶ್ಲೋಕ:

ಕೃಷ್ಣನು ನಮ್ಮನ್ನು ಕಾಪಾಡಲಿ - ಎಂಬ ಕೇಳ್ಕೆಯೊಂದಿಗೆ ಈ ಶ್ಲೋಕವು ಮುಕ್ತಾಯಗೊಳ್ಳುತ್ತದೆ. ಅದರ ಹಿಂದಿನ ನುಡಿಗಳು ಕೃಷ್ಣಜೀವಿತದ ಒಂದು ಪ್ರಸಂಗವನ್ನು ಹೇಳುತ್ತವೆ. ತಾಯಿ ಯಶೋದೆಗೆ ಮಹಾಗಾಬರಿಯನ್ನೇ ಉಂಟುಮಾಡಿದ ಪ್ರಸಂಗವದು.

ತಾಯಿಯಾದವಳಿಗೆ ತನ್ನ ಶಿಶುವಿನ ಆರೋಗ್ಯದ ಬಗ್ಗೆ ಸದಾ ಕಳಕಳಿಯಿರುವುದಷ್ಟೆ? ಹೆತ್ತ ತಾಯಿಗಿಂತಲೂ ಹೆಚ್ಚು ಕಾಳಜಿಯನ್ನು ಸಾಕುತಾಯಿಯು ತೋರಿಸುವಳು. ಏಕೆ? ಶಿಶುರಕ್ಷಣೆಯು ತನ್ನ ಜವಾಬ್ದಾರಿಯಲ್ಲವೇ? ತಾನು ಸಾಕಷ್ಟು ಜಾಗರೂಕಳಾಗಿರಲಿಲ್ಲವೆಂದು ಯಾರಾದರೂ ಭಾವಿಸುವಂತಾಗಿಬಿಟ್ಟರೆ ಏನು ಗತಿ? - ಎಂಬ ಚಿಂತೆ ಸಹಜವಾದದ್ದೇ.

ಕೃಷ್ಣನ ಬಾಲಲೀಲೆಗಳು ಒಂದೇ ಎರಡೇ? ಒಳ್ಳೆಯ ಮಗುವಾದರೂ ತಾಯಿಗೆ ವ್ಯಾಕುಲತೆಯಿದ್ದೇ ಇರುವುದೇ. ಆದರೆ ತುಂಟಾಟ ಮಾಡುವ ಮಕ್ಕಳು, ಚೇಷ್ಟೆಯ ಮಕ್ಕಳಾದರಂತೂ ಸದಾ ಮಗುವಿನ ಮೇಲೊಂದು ಕಣ್ಣಿಟ್ಟಿರುವುದೇ ತಾಯಿಯ ಕೆಲಸವಾಗಿಬಿಡುತ್ತದೆ. ಅನ್ಯ-ಕರ್ತವ್ಯಗಳು ಗೌಣವೇ ಆದಾವು!

ಮಕ್ಕಳು ಗುಟ್ಟಲ್ಲಿ ಮಣ್ಣುಮುಕ್ಕಿಬಿಡುವುದುಂಟು. ಏನನ್ನು ದೊಡ್ಡವರು ಬೇಡವೆನ್ನುತ್ತಾರೋ ಅದನ್ನು ಗುಟ್ಟಾಗಿ ಮಾಡು - ಇದುವೇ ಮಕ್ಕಳ ವಿಲಾಸ-ವೈಭವ-ವ್ರತ! ಇದು ಸಾಲದೆಂಬಂತೆ ಕೃಷ್ಣನಂತೂ ಅವರಿವರ ಮನೆಗಳಲ್ಲೆಲ್ಲಾ ಬೆಣ್ಣೆ ಕದ್ದು ತಿನ್ನುವುದೂ ಗೊತ್ತಿರುವುದೇ. ಹಾಲು ಕುಡಿಯುವ ಚಪಲವೂ ಕೃಷ್ಣನಿಗಿದ್ದದ್ದೇ. ಅವೇಳೆಯಲ್ಲಿಯೋ ಅತಿಯಾಗಿಯೋ ಹಾಲು ಕುಡಿದರೆ ಅದೂ ಅನಾರೋಗ್ಯಕರವೇ ತಾನೇ?

ಆದರೆ ಒಮ್ಮೆ ಯಶೋದೆಗೆ ಗಾಬರಿಯೇ ಆಗುವಂತಾಗಿದೆ, ಕೃಷ್ಣನ ಬಾಯೊಳಗೆ ಇದ್ದುದನ್ನು ಕಂಡು. ಅಲ್ಲಿ ಒಂದಿಷ್ಟು ಬೆಣ್ಣೆಯಿದೆ. ಜೊತೆಗೇ ಒಂದಿಷ್ಟು ಮಣ್ಣಿನ ಹೆಂಟೆಯೂ ಇದೆ,ಅ ಲ್ಲದೆ, ಒಂದಿಷ್ಟು ಹಾಲೂ ಕೂಡ ಇದೆ! ಅದೆಲ್ಲವೂ ಒಟ್ಟಿಗೆ ಬಾಯಲ್ಲಿ ಇರಲು ಸಾಧ್ಯವೇ? ಹಿಂದೆಂದೂ ಹೀಗಾಗಿಲ್ಲದ ಈ ಸಂನಿವೇಶವನ್ನು ಕಂಡು ಅವಳಿಗೆ ಗಾಬರಿ, ಭಯ, ಆತಂಕ, ಆಶ್ಚರ್ಯಗಳೆಲ್ಲಾ ಒಟ್ಟಿಗೇ ಆಗಿವೆ.

ವಾಸ್ತವವಾಗಿ ಆಗಿರುವುದೇನು? ಕೃಷ್ಣನು ಬಾಯಿಬಿಟ್ಟಾಗ ಜಗವೆಲ್ಲ ಆತನ ಬಾಯಲ್ಲಿ ಕಂಡಿದೆ. ಬೆಣ್ಣೆಯಾಗಿ ತೋರಿದ್ದು ವಾಸ್ತವವಾಗಿ ಕೈಲಾಸಪರ್ವತವೇ! ಪ್ರಾಗ್ಜಗ್ಧವೆಂದರೆ ಮೊದಲು ಜಗಿದದ್ದು. ಅಂತಹ ಮಣ್ಣುಹೆಂಟೆಯಂತೆ ಕಂಡದ್ದು ಭೂಮಿಯೇ! ಇನ್ನು ಕುಡಿದ ಹಾಲಿನಂತೆ ತೋರಿದ್ದು ಕ್ಷೀರಸಮುದ್ರವೇ!

ಹೀಗಾಗಿ ಮುದ್ದುಕೃಷ್ಣನ ಪುಟ್ಟಮುಖದಲ್ಲಿ ಕೈಲಾಸವೇ ನವನೀತವಾಗಿಹೋಯಿತು! ಭೂಮಿಯೇ ಮಣ್ಣಿನ ಮುದ್ದೆಯಾಗಿಹೋಯಿತು! ಕ್ಷೀರಸಾಗರವು ಹಾಲಾಗಿಹೋಯಿತು! ಬಾಲಕನ ಬಾಯೊಳಗೇ ಕೈಲಾಸ- ಭೂಖಂಡ-ಕ್ಷೀರಸಮುದ್ರಗಳನ್ನೆಲ್ಲಾ ಕಂಡಳಾಕೆ!

ಮುಗುಳ್ನಗೆಯಿಂದ ಅರಳಿದ ಮುಖದಲ್ಲಿ, ಬಾಯೊಳಗೆ ಏನೇನೋ ಕಂಡ ತಾಯಿಗೆ ತೋರಿದ್ದೇನು? ತೋರುವುದೇನು, ಏನೋ ಅಜೀರ್ಣವಾಗಿದೆಯೆಂದೇ!

ಸುಮ್ಮಸುಮ್ಮನೆ ಹಾಗೆಲ್ಲಾ ಅಜೀರ್ಣವೂ ಆಗುವುದಿಲ್ಲ, ಆಗಲೂಬಾರದು. ಹಾಗಿದ್ದರೆ ಯಾರದ್ದೋ ದೃಷ್ಟಿಯಾಗಿರಬೇಕು. ಯಾರದ್ದೋ ಎಂದರೆ ಇನ್ನೇನು, ಯಾವಳೋ ಹೆಂಗಸಿನದೇ ದೃಷ್ಟಿ ತಾಗಿರಬೇಕು. ಬರೀ ಅಜೀರ್ಣಕ್ಕೆ ವೈದ್ಯ ಮಾಡಬಹುದೇನೋ? ಆದರೆ ದೃಷ್ಟಿ ಪರಿಹಾರವೆಂಬುದೇನು ಸುಲಭವೇ? ಕೆಟ್ಟೆ ಕೆಟ್ಟೆ! – ಎಂದುಕೊಂಡಳು.

ಎಂದೇ ಆಕೆಯ ಗಾಬರಿಯ ಉದ್ಗಾರ: "ಧೂ ಧೂ!" ಎಂದು; ಜೊತೆಗೆ, "ಮಗುವೇ, ಬಾಳು! ನೂರ್ಕಾಲ ಬಾಳು! ಚಿರಕಾಲ ಬಾಳು!" – ಎಂದು.

ಬಾಯಲ್ಲೇ ವಿಶ್ವರೂಪವನ್ನು ತೋರಿದ ತನ್ನ ಮಹಿಮೆಯನ್ನರಿಯದ ತಾಯಿಯ ಬಾಯಿಂದ ಇಂತಹ ಉದ್ಗಾರ ತರಿಸಿದ ಹರಿಯು ನಮ್ಮನ್ನು ಕಾಪಾಡಲಿ - ಎನ್ನುತ್ತದೆ ಶ್ಲೋಕ.

ನವನೀತದಂತೆ ತೋರು - ಎಂಬುದಕ್ಕೆ ನವನೀತತಿ ಎಂದಷ್ಟೇ ಹೇಳಿದರೂ ಆಯಿತು, ಸಂಸ್ಕೃತದಲ್ಲಿ. ನಾಮಪದಗಳನ್ನೇ ಹೀಗೆ ಧಾತುಗಳನ್ನಾಗಿಸುವ ಬಗೆ ವಿಶಿಷ್ಟವಾದುದು. ಮೂರು ಬಾರಿ ಈ ತೆರನ ನಾಮಧಾತು-ಪ್ರಯೋಗವೆಂಬುದು ಪ್ರಕೃತಶ್ಲೋಕಕ್ಕೊಂದು ಮೆರುಗುಕೊಟ್ಟಿದೆ.

ಶ್ಲೋಕವಿಂತಿದೆ:
ಕೈಲಾಸೇ ನವನೀತತಿ, ಕ್ಷಿತಿತಲೇ ಪ್ರಾಗ್-ಜಗ್ಧ-ಮೃಲ್ಲೋಷ್ಟತಿ, /
ಕ್ಷೀರೋದೇಽಪಿ ನಿಪೀತ-ದುಗ್ಧತಿ ಲಸತ್-ಸ್ಮೇರ-ಪ್ರಫುಲ್ಲೇ ಮುಖೇ, |
ಮಾತ್ರಾಽಜೀರ್ಣ-ಧಿಯಾ ದೃಢಂ ಚಕಿತಯಾ ನಷ್ಟಾಽಸ್ಮಿ! ದೃಷ್ಟಃ ಕಯಾ ?/
ಧೂ ಧೂ ವತ್ಸಕ! ಜೀವ ಜೀವ ಚಿರಮಿತ್ಯುಕ್ತೋಽವತಾದ್ ವೋ ಹರಿಃ ||

ಸೂಚನೆ : 14/06/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, June 8, 2025

ಪ್ರಶ್ನೋತ್ತರ ರತ್ನಮಾಲಿಕೆ 19 (Prasnottara Ratnamalike 19)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ ೧೯. ದುಃಖ ಯಾವುದು?

ಉತ್ತರ - ಅಸಂತೋಷ


ಅಸಂತೋಷವೇ ದುಃಖ ಎಂಬುದಾಗಿ ಇಲ್ಲಿನ ಉತ್ತರವಾಗಿದೆ. ಸಂತೋಷವಿಲ್ಲದಿರುವಿಕೆ ದುಃಖಕ್ಕೆ ಮೂಲ ಎಂಬುದು ತಾತ್ಪರ್ಯ. ಸಂತೋಷ ಎಂದರೇನು? ಅದು ಹೇಗೆ ಸುಖಕ್ಕೆ ಸಾಧನ? ಮತ್ತು ಸಂತೋಷವಿಲ್ಲದಿರುವುದು ಹೇಗೆ ದುಃಖಕ್ಕೆ ಸಾಧನ? ಎಂಬ ವಿಷಯವನ್ನು ಇಲ್ಲಿ ಚಿಂತಿಸಬೇಕಾಗಿದೆ. ಸುಖ ಮತ್ತು ದುಃಖ ಇವೆರಡು ವಿರುದ್ಧ ಪದಗಳು. ಪ್ರತಿಯೊಂದು ಜೀವವು ಬಯಸುವಂಥದ್ದು ಸುಖ ಬೇಕು, ದುಃಖ ಬೇಡ ಎಂಬುದಾಗಿ. ಸುಖ ಎಂಬುದು ಹಾಗೂ ಹೀಗೂ ಸಿಗುವಂತದ್ದಲ್ಲ ಅಥವಾ ದುಃಖವೂ ಕೂಡ. ಅದಕ್ಕೆ ಒಂದು ಸಾಧನ ಬೇಕು. 

ನಾವು ಪ್ರತಿನಿತ್ಯ ಅನೇಕ ಪದಾರ್ಥಗಳನ್ನು ಬಳಸುತ್ತೇವೆ. ಆ ಪದಾರ್ಥಗಳು ಸುಖಕ್ಕೂ ಕಾರಣವಾಗಬಹುದು, ದುಃಖಕ್ಕೂ ಕಾರಣವಾಗಬಹುದು ಎಂಬುದು ಇದರ ತಾತ್ಪರ್ಯವಾಗಿದೆ. ಪದಾರ್ಥಗಳಿಂದ ಸುಖ ಅಥವಾ ದುಃಖ ಬರುತ್ತದೆ ಎಂದರೆ ಅದು ಹೇಗೆ? ಹಾಗಾದರೆ ಸುಖದುಃಖಗಳು ಪದಾರ್ಥದಲ್ಲಿ ಇವೆಯೋ ಎಂಬುದನ್ನು ನಾವು ವಿವೇಚಿಸಬೇಕಾಗಿದೆ. ಸುಖ ಎನ್ನುವುದು ಒಂದು ಅನುಭವ. ಇದಕ್ಕೆ ವಿರುದ್ಧವಾದ ಅನುಭವ ದುಃಖ. ಹಾಗಾದರೆ ಈ ವೇದನೆಯು ಹೇಗೆ ಬರುತ್ತದೆ? ಒಂದು ಉದಾಹರಣೆ ಮೂಲಕ ಚಿಂತಿಸುವುದಾದರೆ ನಿದ್ದೆಯು ಒಂದು ಬಗೆಯ ಸುಖ. ಇದಕ್ಕೆ ಸಾಧನ ಯಾವುದು? ಎಂದರೆ ವಸ್ತುತಃ ಯಾವುದೂ ಅಲ್ಲ. ನಿದ್ದೆಗೆ ಪೂರಕವಾದ ವಿಷಯಗಳನ್ನು ನಿದ್ದೆ ಬರುವವರೆಗೆ ಇಟ್ಟುಕೊಂಡು, ಆಮೇಲೆ ತ್ಯಾಗ ಮಾಡಬೇಕು. ಆ ತ್ಯಾಗವೇ ಸುಖಕ್ಕೆ ಅಥವಾ ಸುಖವಾದ ನಿದ್ದೆಗೆ ಸಾಧನವಾಗಬಹುದು. ಸಾಮಾನ್ಯವಾದ ಜೀವನದಲ್ಲಿ ಸುಖದ ಅನಂತರ ದುಃಖವು ಬರುತ್ತದೆ. ನಿಜವಾಗಿ ದುಃಖದ ಸ್ಪರ್ಶವಿಲ್ಲದ ಸುಖವನ್ನು ಮಾನವನು ಬಯಸುವಂತಹದ್ದು. ಇದುವೇ ಆತ್ಯಂತಿಕಸುಖ. ಇದಕ್ಕೆ ಹೊರತಾದವುಗಳೆಲ್ಲವೂ ಕೂಡ ಸುಖದುಃಖಗಳೂ ದುಃಖಕ್ಕೆ ಕಾರಣವಾದವುಗಳೇ ಆಗುತ್ತವೆ. ಅಂದರೆ ತೃಪ್ತಜೀವನ ಸುಖಕ್ಕೆ ಕಾರಣ; ಅತೃಪ್ತಜೀವನ ದುಃಖಕ್ಕೆ ಕಾರಣ ಎಂಬ ಅರ್ಥ ಇಲ್ಲಿ ಗರ್ಭಿತವಾಗಿದೆ. 


ಸುಖ ದುಃಖಗಳು ವಸ್ತುವಿನಲ್ಲಿಲ್ಲ; ವಸ್ತುವನ್ನು ಬಳಸಿಕೊಳ್ಳುವುದರಲ್ಲಿ. ಅಥವಾ ಅದನ್ನು ನಾವು ಅರ್ಥ ಮಾಡಿಕೊಳ್ಳುವುದರಲ್ಲಿ ಇದೆಯೇ ಹೊರತು ಅದೇ ಸುಖಕ್ಕೆ ಸಾಧನವಲ್ಲ; ದುಃಖಕ್ಕೂ ಸಾಧನವಲ್ಲ. ಹೇಗೆಂದರೆ ಅತ್ಯಂತ ಪ್ರಿಯವಾದ ವಸ್ತುವೂ ನಿದ್ದೆಯಲ್ಲಿ ಬೇಡವಾಗುತ್ತದೆ. ವಸ್ತು ಪ್ರಿಯವೆಂದು ಅದನ್ನೇ ಗಟ್ಟಿಯಾಗಿ ಬಿಡದೆ ಹಿಡಿದುಕೊಂಡರೆ ಅದನ್ನು ಬಿಡುವವರೆಗೂ ನಿದ್ದೆ ಬರುವುದೇ ಇಲ್ಲ. ಅತ್ಯಂತ ಪ್ರೀತಿ ಪಾತ್ರವಾದ ಮಗುವೇ ಆಗಿರಬಹುದು; ಹೆಂಡತಿಯೇ ಆಗಿರಬಹುದು, ಹೀಗೆ ಯಾರೇ ಆದರೂ ನಿದ್ದೆಯಲ್ಲಿ ನಾವು ಅದನ್ನು ಬಿಡಲೇಬೇಕು. ಹಾಗಾಗಿ ತ್ಯಾಗಮಯ ಜೀವನವೇ ಸುಖಕ್ಕೆ ಕಾರಣ. ಭೋಗಮಯ ಜೀವನವೇ ಅಥವಾ ತ್ಯಾಗಕ್ಕೆ ವಿರುದ್ಧವಾದ ಭೋಗಮಯ ಜೀವನವೇ ದುಃಖಕ್ಕೆ ಕಾರಣ. ಆದ್ದರಿಂದ ತ್ಯಾಗದಲ್ಲಿ ಸುಖವಿದೆ. ಬೇಕುಗಳಲ್ಲಿ ದುಃಖವಿದೆ. ಬೇಕುಗಳನ್ನು ನಾವು ತೃಪ್ತಿಪಡಿಸುವುದು ಅತ್ಯಂತ ಕಠಿಣ. ಇದನ್ನೇ ಅಸಂತೋಷ ಎಂಬುದಾಗಿ ಇಲ್ಲಿ ಕರೆಯಲಾಗಿದೆ. "ಯಲ್ಲಭಸೇ ನಿಜಕರ್ಮೋಪಾತ್ತಂ ವಿತ್ತಂ, ತೇನ ವಿನೋದಯ ಚಿತ್ತಂ" ಎಂಬ ಶಂಕರಭಗವತ್ಪಾದರ ಮಾತನ್ನು ಶ್ರೀರಂಗಮಹಾಗುರುಗಳು ಪುನಃಪುನಃ ಹೇಳುತ್ತಿದ್ದರು. ಅಂದರೆ ಸತ್ಯನಿಷ್ಠವಾದ ಅಥವಾ ಪ್ರಾಮಾಣಿಕವಾದ ಕರ್ಮದಿಂದ ಸಂಗ್ರಹಿಸಿರುವ ಅರ್ಥ ಅಥವಾ ಪದಾರ್ಥಗಳಿಂದ ಮಾತ್ರವೇ ವಿನೋದವನ್ನು ಪಡಬೇಕು. ಅದು ಸಂತೋಷಕ್ಕೂ ತೃಪ್ತಜೀವನಕ್ಕೂ ಕಾರಣವಾಗುತ್ತದೆ ಎಂದು. 


ಸೂಚನೆ : 08
/6/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 140 ಕೃಷ್ಣನನ್ನು ಬೀಳ್ಕೊಟ್ಟರು, ಪಾಂಡವರು (Vyaasa Vikshita 140)


ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಕೃಷ್ಣನನ್ನು ಬೀಳ್ಕೊಟ್ಟರು, ಪಾಂಡವರು

ಖಾಂಡವಪ್ರಸ್ಥದಲ್ಲಿ ಸಾಕಷ್ಟು ಕಾಲ ಕಳೆದಿದ್ದ ಕೃಷ್ಣನಿಗೆ ತನ್ನ ತಂದೆಯನ್ನೊಮ್ಮೆ ಹೋಗಿ ನೋಡಬೇಕೆನಿಸಿತು.

ಹೊರಡುವ ಮುನ್ನ ಕುಂತಿಯನ್ನು ಮೊದಲು ಕಂಡು, ಬಳಿಕ ಭಗಿನಿಯಾದ ಸುಭದ್ರೆಯನ್ನು ಕಂಡನು. ಸುಭದ್ರೆಯೊಂದಿಗೆ ಅವನಾಡಿದ ಮಾತು ಮಿತವಾಗಿತ್ತಾದರೂ ಅದು ತಥ್ಯವೂ ಹಿತವೂ ಆಗಿತ್ತು, ಯುಕ್ತಿ-ಯುಕ್ತವೂ ಆಗಿತ್ತು.

ಸುಭದ್ರೆಯೂ ಭದ್ರವಾದ ಮಾತುಗಳನ್ನಾಡುವವಳೇ. ಭದ್ರವೆಂದರೆ ಮಂಗಳಕರವಾದದ್ದು. ತವರಿನಲ್ಲಿ ತನ್ನವರಿಗೆ ಯಾರು ಯಾರಿಗೆ ಯಾವ ಯಾವ ಮಾತುಗಳನ್ನು ತಿಳಿಸಬೇಕೋ ಅದೆಲ್ಲವನ್ನೂ ತಿಳಿಸಿದಳು. ಅವಳು ಅವನಿಗೆ ಮತ್ತೆ ಮತ್ತೆ ವಂದಿಸಿದಳು. ಶಿರಸಾ ಪ್ರಣಾಮವನ್ನು ಮಾಡಿದಳು.

ಅವಳನ್ನು ಸಂತೋಷಪಡಿಸಿ ಅವಳ ಅನುಮತಿಯನ್ನು ಪಡೆದು ಹೊರಟ ಕೃಷ್ಣನು ಧೌಮ್ಯ-ಋಷಿಯನ್ನು ಹೋಗಿ ಕಂಡನು. ಅವರಿಗೆ ಯಥೋಚಿತವಾಗಿ ವಂದಿಸಿದನು.

ಆಮೇಲೆ ದ್ರೌಪದಿಯಲ್ಲಿಗೆ ಹೋಗಿ, ಅವಳಿಗೆ ಸಾಂತ್ವನದ ಮಾತುಗಳನ್ನು ಹೇಳಿದನು. ಹೊರಡಲು ಅನುಮತಿಯನ್ನು ಅವಳಿಂದ ಪಡೆದುಕೊಂಡನು. ಅರ್ಜುನನನ್ನು ಜೊತೆಮಾಡಿಕೊಂಡು, ಆತನ ಸಹೋದರರನ್ನು ಹೋಗಿ ಕಂಡನು. ಈ ಐದು ಜನ ಸಹೋದರರಿಂದ ಪರಿವೃತನಾದ ಕೃಷ್ಣನು ದೇವತೆಗಳಿಂದ ಸುತ್ತುವರಿಯಲ್ಪಟ್ಟ ಇಂದ್ರನಂತೆ ಕಂಡನು.

ಯಾತ್ರಾಕಾಲಕ್ಕೆ ಯೋಗ್ಯವಾದ ಕೆಲಕರ್ಮಗಳುಂಟು; ಅವನ್ನು ಮಾಡಲೆಂದು ಕೃಷ್ಣನು ಸ್ನಾನಮಾಡಿದನು. ವಸ್ತ್ರ ಹಾಗೂ ಅಲಂಕಾರಗಳನ್ನು ಧರಿಸಿದನು. ಪುಷ್ಪಮಾಲೆ, ಜಪ, ನಮಸ್ಕಾರ, ಚಂದನ ಮುಂತಾದ ಬಗೆಬಗೆಯ ಸಾಧನಗಳಿಂದ ದೇವತೆಗಳನ್ನು ಅರ್ಚಿಸಿದನು.

ಪ್ರತಿಷ್ಠಿತವ್ಯಕ್ತಿಗಳಲ್ಲಿ ಶ್ರೇಷ್ಠನೆನಿಸಿದ ಕೃಷ್ಣನು ಹೀಗೆ ತನ್ನ ಕೆಲಸಗಳನ್ನೆಲ್ಲವನ್ನೂ ಮುಗಿಸಿಕೊಂಡು, ಗೃಹದ ಬಾಹ್ಯಕಕ್ಷೆಯಿಂದ ಹೊರಕ್ಕೆ ಹೊರಟನು. ವಿಪ್ರರು ಆತನಿಗೆ ಆಗ ಸ್ವಸ್ತಿವಾಚನವನ್ನು ಮಾಡಿದರು. ಮೊಸರು ತುಂಬಿದ ಪಾತ್ರೆ, ಫಲಗಳು, ಅಕ್ಷತಗಳು - ಇವುಗಳನ್ನೂ ಧನವನ್ನೂ ಆ ವಿಪ್ರರಿಗಿತ್ತು ಅವರಿಗೆ ಕೃಷ್ಣನು ಪ್ರದಕ್ಷಿಣವನ್ನು ಮಾಡಿದನು.

ಆಮೇಲೆ ತನ್ನ ಚಿನ್ನದ ರಥವನ್ನು ಹತ್ತಿದನು. ಅದರ ಧ್ವಜದಲ್ಲಿ ಗರುಡನಿರುವನು. ಗದೆ, ಚಕ್ರ, ಖಡ್ಗ, ಶಾರ್ಙ್ಗವೆಂಬ ಧನುಸ್ಸು - ಮುಂತಾದ ಆಯುಧಗಳಿಂದ ಆವೃತವಾದ ರಥವದು. ಶೈಬ್ಯ, ಸುಗ್ರೀವ ಮುಂತಾದ ಕುದುರೆಗಳಿಂದ ಕೂಡಿದುದು. ಶುಭತಿಥಿ, ಶುಭನಕ್ಷತ್ರ, ಶುಭಮುಹೂರ್ತಗಳೆಂಬ ಗುಣಗಳಿಂದ ಕೂಡಿದ ಸಮಯದಲ್ಲಿ ಕೃಷ್ಣನು ಆ ರಥವನ್ನು ಹತ್ತಿ ಹೊರಟನು.

ಸಾರಥಿಗಳಲ್ಲಿ ಶ್ರೇಷ್ಠನಾದವನು ದಾರುಕ. ಅತನನ್ನು ಕಳುಹಿಸಿ, ರಾಜಾ ಯುಧಿಷ್ಠಿರನು ಪ್ರೇಮದಿಂದ ತಾನೂ ಕೃಷ್ಣನ ರಥವನ್ನು ಆ ಬಳಿಕ ಹತ್ತಿದನು. ತಾನೇ ಕುದುರೆಗಳ ಲಗಾಮನ್ನು ಹಿಡಿದನು. ಬಳಿಕ ಅರ್ಜುನನೂ ರಥವನ್ನು ಹತ್ತಿದನು. ಚಿನ್ನದಿಂದಾದ ದಂಡವುಳ್ಳ ಶ್ವೇತಚಾಮರ, ವ್ಯಜನ (ಬೀಸಣಿಗೆ) - ಇವುಗಳನ್ನು ಕೈಯಲ್ಲಿ ಹಿಡಿದನು. ಮತ್ತವನ್ನಾದರೂ ಪ್ರದಕ್ಷಿಣವಾಗಿ ಬೀಸಿದನು.

ಮಹಾಪರಾಕ್ರಮಿಯಾದ ಕೃಷ್ಣನು ಈ ಸಹೋದರರೆಲ್ಲರಿಂದಲೂ ಅನುಸರಿಸಲ್ಪಟ್ಟವನಾಗಿ, ಪ್ರಿಯಶಿಷ್ಯರಿಂದ ಗುರುವೊಬ್ಬನು ಅನುಸರಿಸಲ್ಪಟ್ಟಾಗ ಹೇಗೆ ತೋರುವನೋ ಹಾಗೆ ತೋರುತ್ತಿದ್ದನು.

ಬಹಳವಾಗಿಯೇ ಖಿನ್ನನಾಗಿದ್ದ ಅರ್ಜುನನನ್ನು ಕೃಷ್ಣನು ಆಲಿಂಗಿಸಿಕೊಂಡನು.  ಯುಧಿಷ್ಠಿರನನ್ನೂ ಭೀಮನನ್ನೂ ಹಾಗೂ ಯಮಳರನ್ನೂ - ಎಂದರೆ ನಕುಲಸಹದೇವರನ್ನೂ - ಆದರಿಸಿದನು. ಅವರುಗಳೂ ಕೃಷ್ಣನನ್ನು ಗಾಢವಾಗಿ ಆಲಿಂಗಿಸಿಕೊಂಡರು. ಯಮಳರು ಅವನಿಗೆ ಅಭಿವಾದನವನ್ನು ಮಾಡಿದರು.

ಸೂಚನೆ : 08/6/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.  

ಅಷ್ಟಾಕ್ಷರೀ 82 ದಿವ್ಯಂ ದದಾಮಿ ತೇ ಚಕ್ಷುಃ (Ashtakshari 82)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ದಿವ್ಯನೇತ್ರದಿಂದಲೇ ಗೋಚರಿಸಬಲ್ಲ ದೇವದೇವನ ಯೋಗೈಶ್ವರ್ಯ


ಕಾಲು ಸರಿಯಿಲ್ಲದೆ ನಡೆಯಲು ಪಾಡುಪಡುವವನನ್ನು ಕುಂಟ ಎನ್ನುತ್ತೇವೆ. ಕೈಸರಿಯಿಲ್ಲದವ ಕುಣಿ. ಕಣ್ಣು-ಕಿವಿಗಳು ಸರಿಯಿಲ್ಲದವರು ಕುರುಡ-ಕಿವುಡರು. ಹೀಗೆ ಯಾವೊಂದು ಅಂಗದಲ್ಲಿ ಊನತೆಯಿದ್ದರೂ ಅಂತಹ ವಿಕಲಾಂಗರು ಶೋಚನೀಯರೇ. ಆದರೆ ಇವರಲ್ಲೆಲ್ಲಾ ಅತ್ಯಂತ-ಶೋಚ್ಯರೆಂದರೆ ಕುರುಡರೇ. ಏಕೆ? ಅವರೇ ಅತ್ಯಂತ-ಪರಾಧೀನರಾಗತಕ್ಕವರು.


ಕಣ್ಣಿನ ಪ್ರಾಧಾನ್ಯವನ್ನು ಹೇಳುವ ನುಡಿಗಟ್ಟುಗಳೂ ಪ್ರಚುರವೇ: ಹೆಣ್ಣು ಕುಟುಂಬದ ಕಣ್ಣು; ರಾಜ್ಯಕ್ಕೆ ರಾಜನೇ ಕಣ್ಣು. ಮಹಾಭಾರತದ ಧೃತರಾಷ್ಟ್ರನು ಹುಟ್ಟುಕುರುಡ. ಅದನ್ನು ಸಾಂಕೇತಿಕವಾಗಿಯೂ ನೋಡುವುದುಂಟಷ್ಟೆ. ವಿವೇಕವೇ ಒಂದು ಕಣ್ಣು- ಎಂದರಿವಾದಾಗ, ಅದನ್ನು ಕಳೆದುಕೊಂಡವನನ್ನು ಕಾಮಾಂಧನೆಂದೋ ಕ್ರೋಧಾಂಧನೆಂದೋ ಮದಾಂಧನೆಂದೋ ಚಿತ್ರಿಸುವುದುಂಟಲ್ಲವೇ?


ವಾಸ್ತವವಾಗಿ ಕಣ್ಣು ಗ್ರಹಿಸುವುದೇನನ್ನು? ಕೇವಲ ಬೆಳಕಿನ ಹೆಚ್ಚು-ಕಡಿಮೆಗಳನ್ನು. ಅದರ ವ್ಯಾಪ್ತಿಯೇನು?  ಎರಡು ಕಣ್ಣುಗಳಿರುವುದರಿಂದ, ಅಡ್ಡಡ್ಡಲಾಗಿ ನೂರೆಂಭತ್ತು ಡಿಗ್ರಿಗಳಿಗಿಂತ ಸ್ವಲ್ಪ ಜಾಸ್ತಿ; ಉದ್ದುದ್ದವಾಗಿ ನೂರೆಂಭತ್ತು ಡಿಗ್ರಿಗಳಿಗಿಂತ ಸಾಕಷ್ಟು ಕಮ್ಮಿ. ಅದು ಪಡೆಯುವುದೇನನ್ನು? ಒಂದು ವಸ್ತುವಿನ ತಲೆಕೆಳಕಾದ ಚಿತ್ರವನ್ನು! ಅದೂ ಆಯಾಮ-ದ್ವಯದ ಪಟದ ಮೇಲೆ (two-dimensional screen)!


ಇದಿಷ್ಟೂ ಭೌತಿಕವಾದ ಕೆಲಸ. ಆಮೇಲೆ ಇದೆಲ್ಲವೂ ವೈದ್ಯುತ ಹಾಗೂ ರಾಸಾಯನಿಕ (electro-chemical) ಕ್ರಿಯೆಗಳಾಗಿ ಶಿರಸ್ಸಿಗೆ ತಲುಪುತ್ತವೆ. ಅಲ್ಲಿ ಅವನ್ನು ಅರ್ಥೈಸುವ ಕೆಲಸವು ನಡೆಯುತ್ತದೆ.


ಮತ್ತಾವುದೇ ಇಂದ್ರಿಯಕ್ಕಿಂತಲೂ ಹೆಚ್ಚಾಗಿ ಕಣ್ಣಿಗೆ ಸಂಬಂಧಿಸಿದ ನರಗಳೇ ಅತಿಹೆಚ್ಚಿನ ಸಂಖ್ಯೆಯಲ್ಲಿರುವುವೆಂಬುದೂ ಗಮನಾರ್ಹ: ಹಲವು ಲಕ್ಷ. (ಕಿವಿಗೆ ಸಂಬಂಧಿಸಿದವು ಕೆಲವು ಸಹಸ್ರ ಮಾತ್ರ). ಒಟ್ಟಿನಲ್ಲಿ ಜಗತ್ತನ್ನು ನಾವು ಅರಿತುಕೊಳ್ಳುವಲ್ಲಿ ಕಣ್ಣಿನಷ್ಟು ಪ್ರಭೂತವಾಗಿ ಮತ್ತು ಮೌಲಿಕವಾಗಿ ಕೆಲಸಮಾಡುವ ಇಂದ್ರಿಯವು ಮತ್ತೊಂದಿಲ್ಲ.


ಇಷ್ಟಾಗಿಯೂ ಕಣ್ಣು ಗುರುತಿಸುವುದು ಹೊರಮೈಯ್ಯನ್ನಷ್ಟೆ. ಶ್ರೀರಂಗಮಹಾಗುರುಗಳು ಕೊಡುವ ನಿದರ್ಶನವು "ಕಣ್ಣುತೆರೆಸು"ವಂತಹುದು: "ಬರೀ ಮೇಲ್ನೋಟದಿಂದ ಹೇಳಿದರೆ ಮೈಯಲ್ಲಿ ಮೂಳೆಯಿಲ್ಲವೆಂದು ಹೇಳಬಹುದು. ಆದರೆ ಎಕ್ಸ್-ರೇ ಮೂಲಕ ನೋಡಿದಾಗಿ ಮೈಯ ಒಳಪದರಗಳನ್ನು ನೋಡಬಹುದು."


ಹಾಗೆ ನೋಡಿದರೆ ಮೂಳೆಯೆಂಬುದು ಗಟ್ಟಿಯಾದ ವಸ್ತು, ಬೆಳ್ಳಗಿರುವಂತಹುದು. ಹೀಗಾಗಿ ಇದೊಂದು ಸ್ಥೂಲ-ಪದಾರ್ಥವೇ. ಆದರೆ ಈ ಶರೀರಾಂತರ್ಗತನಾದ ಜೀವನು ಸೂಕ್ಷ್ಮ-ಪದಾರ್ಥ. ಈ ಕಣ್ಣು ಅದನ್ನೆಂತು ಕಾಣುವುದು? ಹೀಗಿರಲು, ಜೀವಾತ್ಮನಿಗೂ ಅಂತರ್ಯಾಮಿಯಾಗಿರುವ ಪರಮಾತ್ಮನನ್ನು ಕಾಣುವುದೆಂತು? ಪರಮಾತ್ಮನು ಸೂಕ್ಷ್ಮತಮ-ಪದಾರ್ಥ: "ಪರ"-ವಸ್ತು. ಹೀಗಾಗಿ ಕಣ್ಣು ಕಾಣುವುದು ಸ್ಥೂಲವನ್ನು; ಸೂಕ್ಷ್ಮವನ್ನಲ್ಲ; ಪರವನ್ನಂತೂ ಅಲ್ಲವೇ ಅಲ್ಲ.


ಪರಮಾತ್ಮನನ್ನು ಕಾಣಲು ಜ್ಞಾನ-ಚಕ್ಷುಸ್, ತಪಶ್ಚಕ್ಷುಸ್ಸುಗಳು ಬೇಕೆಂದು ಆಯುರ್ವೇದ-ಗ್ರಂಥಗಳು ಸಹ ಹೇಳುವುವು - ಎಂಬುದನ್ನು ಶ್ರೀರಂಗಮಹಾಗುರುಗಳು ಜ್ಞಾಪಿಸುತ್ತಿದ್ದರು. ಚಕ್ಷುಸ್ ಎಂದರೆ ಕಣ್ಣು.


ಭಗವದ್ಗೀತೆಯ ಸಂನಿವೇಶವನ್ನು ನೋಡೋಣ. ಕೃಷ್ಣನ ಮಾತುಗಳಿಂದಾಗಿ ತನ್ನ ಮೋಹವು ಕಳೆಯಿತೆಂದು ಅರ್ಜುನನೇನೋ ಹೇಳುತ್ತಾನೆ. ಕೃಷ್ಣನನ್ನು ಪರಮೇಶ್ವರನೆಂದು ಸಂಬೋಧಿಸಿದ ಅರ್ಜುನನು, ಆತನ ಐಶ್ವರ-ರೂಪವನ್ನು ಕಾಣಬಯಸುತ್ತಾನೆ. (ಐಶ್ವರ್ಯವೆಂಬುದು ಬೇರೆ: ಒಡೆತನ, ಸಿರಿ). 


"ಅದನ್ನು ಕಾಣುವುದು ನನಗೆ ಶಕ್ಯವೆಂದು ನೀ ಭಾವಿಸುವೆಯಾದರೆ, ಓ ಯೋಗೇಶ್ವರಾ, ಅದನ್ನು ತೋರಿಸು" - ಎನ್ನುತ್ತಾನೆ. ಅದಕ್ಕೆ ಆ ಮಹಾಯೋಗೇಶ್ವರನು, "ಯಾರೂ ಕಾಣದ ಆಶ್ಚರ್ಯಮಯವಾದ ರೂಪವನ್ನು ನನ್ನೀ ದೇಹದಲ್ಲಿಲ್ಲಿಯೇ ನೋಡು. ನಿನ್ನ ಸ್ವ-ಚಕ್ಷುವಿನಿಂದ ಇದನ್ನು ನೀ ನೋಡಲಾರೆಯಾಗಿ, ದಿವ್ಯಚಕ್ಷುಸ್ಸನ್ನಿದೋ ನಿನಗೆ ಕೊಡುತ್ತೇನೆ (ದಿವ್ಯಂ ದದಾಮಿ ತೇ ಚಕ್ಷುಃ)" - ಎನ್ನುತ್ತಾನೆ.


ದುರ್ಯೋಧನನ ಸಭೆಯಲ್ಲಿಯೂ ತನ್ನ ದಿವ್ಯರೂಪವನ್ನು ತೋರಿಸಿದಾಗ ದಿವ್ಯದೃಷ್ಟಿಯಿರದವರಾರೂ ಅದನ್ನು ನೋಡಲಾಗದೆ ಕಣ್ಮುಚ್ಚಿಕೊಂಡರು; ಭೀಷ್ಮ-ದ್ರೋಣ-ವಿದುರರು ಹಾಗೂ ಧೃತರಾಷ್ಟ್ರ - ಇವರಿಗೆ ಮಾತ್ರ ಕೃಷ್ಣದಯೆಯಿಂದ ನೋಡಲಾಯಿತು - ಎಂಬುದು ಮಹಾಭಾರತದಲ್ಲಿ ನಿರೂಪಿತವಾಗಿದೆ.


ಇಲ್ಲಿ ದಿವ್ಯಚಕ್ಷುಸ್ಸೆಂದರೆ ಅದೇನೋ ಒಂದು ಕನ್ನಡಕದಂತಿರುವ ಭೌತಿಕವಸ್ತುವೆಂದುಕೊಳ್ಳುವುದಲ್ಲ! ಅದು ಅ-ಪ್ರಾಕೃತವಾದದ್ದು.


ಗೀತೆಯ ಈ ಅಧ್ಯಾಯದ ಹೆಸರೇ ವಿಶ್ವರೂಪದರ್ಶನ-ಯೋಗ - ಎಂಬುದಾಗಿ.

ಕಣ್ಣು ತಾನಾಗಿ ನೋಡಬಲ್ಲ ವಸ್ತುಗಳು ಸ್ಥೂಲ, ಸೀಮಿತ. ಎಂದೇ ಈ ನೇತ್ರವನ್ನು ಕೇವಲ ಚರ್ಮ-ಚಕ್ಷುಸ್, ಮಾಂಸ-ಚಕ್ಷುಸ್ - ಎನ್ನುತ್ತಾರೆ. ಭಗವಂತನ ವಿಶ್ವರೂಪ-ಯೋಗೈಶ್ವರ್ಯವನ್ನು ಕಾಣಲು ಬೇಕಾದುದು ದಿವ್ಯ-ಚಕ್ಷುಸ್, ಅರ್ಥಾತ್ ಜ್ಞಾನ-ನೇತ್ರ.


ಭಗವಂತನ ರೂಪ-ಸ್ವರೂಪಗಳನ್ನು ಊಹಿಸಲೂ ನಮಗಾಗದು.  ದೇವತೆಗಳಿಗೂ ಎಟುಕಿಸಿಕೊಳ್ಳಲಾಗದದು! ಶ್ರೀರಂಗಸದ್ಗುರುಗಳು ಹೇಳುವಂತೆ, "ನರರಥದಲ್ಲೇ ಕುಳಿತಿರುವ ನಾರಾಯಣನು ಆ ಮತ್ತೊಂದು ದೃಷ್ಟಿಯನ್ನು ಕರುಣಿಸಬೇಕು." ಅರ್ಥಾತ್, ಆತನೆಲ್ಲೋ ದೂರದಲ್ಲಿರುವವನೆಂದೇನಲ್ಲ. ನಮ್ಮಲ್ಲೇ ಇರುವ ಆತನಲ್ಲಿಯ ಅನನ್ಯ-ಭಕ್ತಿಯಿಂದಲೇ ಶಕ್ಯವದು.


 ದೇವದೇವನೂ ಯೋಗೇಶ್ವರನೂ ಆದ ಹೃದಿಸ್ಥನ ಯೋಗೈಶ್ವರ್ಯವನ್ನು ಕಂಡು ಆನಂದಿಸಲು ದಿವ್ಯಚಕ್ಷುಸ್ಸಿನ ಯೋಗಕ್ಕಾಗಿ ನಾವು ಹಂಬಲಿಸಬೇಕಲ್ಲವೇ?


ಸೂಚನೆ: 7/6//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ 67 ಬಾಲಕೃಷ್ಣನ ಬಾಯೊಳಗೆ ಒಟ್ಟಿಗೇ ಹಾಲು-ಬೆಣ್ಣೆ-ಮಣ್ಣುಗಳೇ?(Krishakarnamrta 67)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)

 


ಇಲ್ಲಿ ಚಿತ್ರಿಸಲಾಗಿರುವ ಶ್ರೀಕೃಷ್ಣನು ವಿಲಾಸಗಳಿಗೆ ನಿಧಿಯಾದ ಬಾಲಕ. ವಿಲಾಸಗಳ ಸಮುದ್ರವೇ ಆತನೆಂದರೂ ನಡೆಯುತ್ತದೆ. ಆತನನ್ನು ನಾನು ಕಾಣುವುದು ಎಂದು? - ಎಂದು ಶ್ಲೋಕಾಂತದಲ್ಲಿ ಕೇಳಿದೆ.

ಯಾವ ತೆರನವು ಆತನ ವಿಲಾಸಗಳು? ಎರಡೆಡೆಗಳಲ್ಲಿ ವೈಪುಲ್ಯ, ಎರಡೆಡೆಗಳಲ್ಲಿ ಮಾರ್ದವ, ಎರಡೆಡೆಗಳಲ್ಲಿ ಮಾಧುರ್ಯ - ಇವುಗಳೇ ಆತನ ವಿಲಾಸಮಯತೆಗೆ ವ್ಯಂಜಕ.

ಆತನ ವಕ್ಷಸ್ಸು ವಿಶಾಲವಾದದ್ದು. ಅಲ್ಲದೆ, ಆತನ ಕಣ್ಣುಗಳೂ ಅಷ್ಟೆ, ಆಯತವಾದವು. ಉತ್ಪಲವನ್ನು, ಎಂದರೆ ಕಮಲವನ್ನು, ಹೋಲುವಂತಹವು ಅವು. ವಿಶಾಲವಾದ ವಕ್ಷಸ್ಸು ಪುರುಷನ ಪುರುಷತ್ವಕ್ಕೆ ಕನ್ನಡಿ. ಅಗಲವಾದ ಅಕ್ಷಿಗಳು ಅಂದ-ಸೌಂದರ್ಯಗಳ ಆಗರಗಳು.

ಆತನ ಮುಖವನ್ನು ಮಂದಸ್ಮಿತವು ಮಂಡಿಸಿದೆ. ಅದರಲ್ಲೇ ಆತನ ಮನಸ್ಸದೆಷ್ಟು ಮೃದುವೆಂಬುದು ಮನದಟ್ಟಾಗುತ್ತದೆ. ಮೃದು-ಮನಸ್ಕರ ಮುಖದಲ್ಲಿ ಮುಗ್ಧ-ಹಸಿತವು ರಾಜಿಸುತ್ತದೆ. ಉದ್ಧತರು ನಕ್ಕರೆಂದರೆ  ಅಟ್ಟಹಾಸವಷ್ಟೆ ಹೊಮ್ಮೀತು.

ಇದಲ್ಲದೆ ಆತನ ಮದ-ಜಲ್ಪಿತವೂ ಮೃದುಲವೇ. ಮದಿಸಿದವರ ಮಾತಲ್ಲಿ ನಯವೆಲ್ಲಿ? - ಎನಿಸಬಹುದು. ಜಲ್ಪಿತವೆಂದರಂತೂ ತೋಚಿದಂತೆ ಮಾತನಾಡುವುದು. ಆದರೆ ಕೃಷ್ಣನ ಮದವು ಬೇರೆಯವರ ಮದದಂತಲ್ಲವಲ್ಲ? ಒಳಗಿನ ಹರ್ಷಾವಸ್ಥೆಯು ಮದಾವಸ್ಥೆಯಂತೆ ತೋರೀತಷ್ಟೆ. ವಿಹಾರ-ಬುದ್ಧಿಯಿಂದ ವಿಲಾಸಕ್ಕಾಡುವ ಮಾತಾದರೂ, ಕೃಷ್ಣನಂತಹ ವಿವೇಕಿಗಳ ಮಾತು ಧರ್ಮದ ಜಾಡಿನಿಂದಂತೂ ಜಾರದು. 

ಎಂದೇ ಒರಟಾದ ಮಾತೇ ಅಂತಹವರ ಬಾಯಿಂದ ಹೊರಡದು. ಮಾತು ಒರಟಾದರೆ ಕೇಳುವವರಿಗೇನು ಹಿತವೇ? ಕೃಷ್ಣನ ಸ್ಮಿತವೂ ಮೃದುಲ, ಭಾಷಿತವೂ ಮೃದುಲ.

ಇನ್ನು ಆತನ ತುಟಿಯಂತೂ ತೊಂಡೇ ಹಣ್ಣಿನಂತೆಯೇ ಇರುವುದು. ಬಿಂಬಫಲ ಅಥವಾ ತೊಂಡೆಯ ಒಳಭಾಗವು ಕಡುಗೆಂಪಾಗಿರುವುದು. ಹಾಗೆ ಸಹಜವಾಗಿ ಕೆಂಪಾಗಿರುವ ತುಟಿಗಳು ರಕ್ತಪುಷ್ಟಿಯನ್ನು ಸೂಚಿಸುವುವು; ಅದಂತೂ ಆರೋಗ್ಯದ ಸುಲಕ್ಷಣವೇ ಸರಿ. ಹೀಗಾಗಿ ಕೃಷ್ಣನ ಬಿಂಬಾಧರವು ಮಾಧುರ್ಯವನ್ನು ಬಿಂಬಿಸುತ್ತದೆ. ಅದು ಮಾತ್ರವಲ್ಲ; ಆತನ ತುಟಿಗೆ ತಗಲುವ ಕೊಳಲೂ ಅಷ್ಟೇ. ಕಿವಿಗಿಂಪಾದ ದನಿಯೇ ಅದರಿಂದ ಚಿಮ್ಮುವುದು. ಹೀಗೆ ಶ್ರವಣಗಳಿಗೆ ರಮಣೀಯವೆನಿಸಿವುದು, ಕೃಷ್ಣನ ಮುರಳೀ-ರವ. ರವವೆಂದರೆ ಧ್ವನಿ.

ಈ ಶ್ಲೋಕವು ಕೃಷ್ಣನಲ್ಲಿ ತೋರುವ ವೈಪುಲ್ಯ-ಮಾರ್ದವ-ಮಾಧುರ್ಯಗಳನ್ನು ತಿಳಿಸುತ್ತದೆ. ಈ ಮೂರನ್ನೇ ಮೊದಲ ಮೂರು ಪಾದಗಳಲ್ಲಿ ತಿಳಿಸಿರುವುದು. ಅವುಗಳಲ್ಲಿಯ ಪದಗಳಲ್ಲಿ ೪+೧+೩+೫+೧ ಎಂಬ ಪರಿಯ ಅಕ್ಷರಗಳ ವಿನ್ಯಾಸವಿದೆ. ಈ ಶ್ಲೋಕದ ರಚನೆಯಲ್ಲೇ ಹೀಗೊಂದು ವಿಶೇಷವಿದೆ.

ಅಲ್ಲದೆ, ಲ-ಲ, ಮ-ಮ, ರ-ರ, ಎಂಬೀ ಅಕ್ಷರಗಳ ಪುನರಾವೃತ್ತಿಯಿಂದಾದ ಅನುಪ್ರಾಸವೂ ಕಿವಿಗೆ ಸವಿಯೇ. ಚ-ಚಗಳು ನಿಯತವಾದ ಸ್ಥಾನಗಳಲ್ಲೇ ಬರುತ್ತಿರುವುದೂ ಒಂದು ಚಮತ್ಕೃತಿಯೇ.

ಶ್ಲೋಕ ಹೀಗಿದೆ:
ವಕ್ಷಃಸ್ಥಲೇ ಚ ವಿಪುಲಂ ನಯನೋತ್ಪಲೇ ಚ
ಮಂದಸ್ಮಿತೇ ಚ ಮೃದುಲಂ ಮದಜಲ್ಪಿತೇ ಚ |
ಬಿಂಬಾಧರೇ ಚ ಮಧುರಂ ಮುರಲೀ-ರವೇ ಚ
ಬಾಲಂ ವಿಲಾಸನಿಧಿಮಾಕಲಯೇ ಕದಾ ನು? ||

ಮತ್ತೊಂದು ಶ್ಲೋಕ:

ಕೃಷ್ಣನು ನಮ್ಮನ್ನು ಕಾಪಾಡಲಿ - ಎಂಬ ಕೇಳ್ಕೆಯೊಂದಿಗೆ ಈ ಶ್ಲೋಕವು ಮುಕ್ತಾಯಗೊಳ್ಳುತ್ತದೆ. ಅದರ ಹಿಂದಿನ ನುಡಿಗಳು ಕೃಷ್ಣಜೀವಿತದ ಒಂದು ಪ್ರಸಂಗವನ್ನು ಹೇಳುತ್ತವೆ. ತಾಯಿ ಯಶೋದೆಗೆ ಮಹಾಗಾಬರಿಯನ್ನೇ ಉಂಟುಮಾಡಿದ ಪ್ರಸಂಗವದು.

ತಾಯಿಯಾದವಳಿಗೆ ತನ್ನ ಶಿಶುವಿನ ಆರೋಗ್ಯದ ಬಗ್ಗೆ ಸದಾ ಕಳಕಳಿಯಿರುವುದಷ್ಟೆ? ಹೆತ್ತ ತಾಯಿಗಿಂತಲೂ ಹೆಚ್ಚು ಕಾಳಜಿಯನ್ನು ಸಾಕುತಾಯಿಯು ತೋರಿಸುವಳು. ಏಕೆ? ಶಿಶುರಕ್ಷಣೆಯು ತನ್ನ ಜವಾಬ್ದಾರಿಯಲ್ಲವೇ? ತಾನು ಸಾಕಷ್ಟು ಜಾಗರೂಕಳಾಗಿರಲಿಲ್ಲವೆಂದು ಯಾರಾದರೂ ಭಾವಿಸುವಂತಾಗಿಬಿಟ್ಟರೆ ಏನು ಗತಿ? - ಎಂಬ ಚಿಂತೆ ಸಹಜವಾದದ್ದೇ.

ಕೃಷ್ಣನ ಬಾಲಲೀಲೆಗಳು ಒಂದೇ ಎರಡೇ? ಒಳ್ಳೆಯ ಮಗುವಾದರೂ ತಾಯಿಗೆ ವ್ಯಾಕುಲತೆಯಿದ್ದೇ ಇರುವುದೇ. ಆದರೆ ತುಂಟಾಟ ಮಾಡುವ ಮಕ್ಕಳು, ಚೇಷ್ಟೆಯ ಮಕ್ಕಳಾದರಂತೂ ಸದಾ ಮಗುವಿನ ಮೇಲೊಂದು ಕಣ್ಣಿಟ್ಟಿರುವುದೇ ತಾಯಿಯ ಕೆಲಸವಾಗಿಬಿಡುತ್ತದೆ. ಅನ್ಯ-ಕರ್ತವ್ಯಗಳು ಗೌಣವೇ ಆದಾವು!

ಮಕ್ಕಳು ಗುಟ್ಟಲ್ಲಿ ಮಣ್ಣುಮುಕ್ಕಿಬಿಡುವುದುಂಟು. ಏನನ್ನು ದೊಡ್ಡವರು ಬೇಡವೆನ್ನುತ್ತಾರೋ ಅದನ್ನು ಗುಟ್ಟಾಗಿ ಮಾಡು - ಇದುವೇ ಮಕ್ಕಳ ವಿಲಾಸ-ವೈಭವ-ವ್ರತ! ಇದು ಸಾಲದೆಂಬಂತೆ ಕೃಷ್ಣನಂತೂ ಅವರಿವರ ಮನೆಗಳಲ್ಲೆಲ್ಲಾ ಬೆಣ್ಣೆ ಕದ್ದು ತಿನ್ನುವುದೂ ಗೊತ್ತಿರುವುದೇ. ಹಾಲು ಕುಡಿಯುವ ಚಪಲವೂ ಕೃಷ್ಣನಿಗಿದ್ದದ್ದೇ. ಅವೇಳೆಯಲ್ಲಿಯೋ ಅತಿಯಾಗಿಯೋ ಹಾಲು ಕುಡಿದರೆ ಅದೂ ಅನಾರೋಗ್ಯಕರವೇ ತಾನೇ?

ಆದರೆ ಒಮ್ಮೆ ಯಶೋದೆಗೆ ಗಾಬರಿಯೇ ಆಗುವಂತಾಗಿದೆ, ಕೃಷ್ಣನ ಬಾಯೊಳಗೆ ಇದ್ದುದನ್ನು ಕಂಡು. ಅಲ್ಲಿ ಒಂದಿಷ್ಟು ಬೆಣ್ಣೆಯಿದೆ. ಜೊತೆಗೇ ಒಂದಿಷ್ಟು ಮಣ್ಣಿನ ಹೆಂಟೆಯೂ ಇದೆ,ಅ ಲ್ಲದೆ, ಒಂದಿಷ್ಟು ಹಾಲೂ ಕೂಡ ಇದೆ! ಅದೆಲ್ಲವೂ ಒಟ್ಟಿಗೆ ಬಾಯಲ್ಲಿ ಇರಲು ಸಾಧ್ಯವೇ? ಹಿಂದೆಂದೂ ಹೀಗಾಗಿಲ್ಲದ ಈ ಸಂನಿವೇಶವನ್ನು ಕಂಡು ಅವಳಿಗೆ ಗಾಬರಿ, ಭಯ, ಆತಂಕ, ಆಶ್ಚರ್ಯಗಳೆಲ್ಲಾ ಒಟ್ಟಿಗೇ ಆಗಿವೆ.

ವಾಸ್ತವವಾಗಿ ಆಗಿರುವುದೇನು? ಕೃಷ್ಣನು ಬಾಯಿಬಿಟ್ಟಾಗ ಜಗವೆಲ್ಲ ಆತನ ಬಾಯಲ್ಲಿ ಕಂಡಿದೆ. ಬೆಣ್ಣೆಯಾಗಿ ತೋರಿದ್ದು ವಾಸ್ತವವಾಗಿ ಕೈಲಾಸಪರ್ವತವೇ! ಪ್ರಾಗ್ಜಗ್ಧವೆಂದರೆ ಮೊದಲು ಜಗಿದದ್ದು. ಅಂತಹ ಮಣ್ಣುಹೆಂಟೆಯಂತೆ ಕಂಡದ್ದು ಭೂಮಿಯೇ! ಇನ್ನು ಕುಡಿದ ಹಾಲಿನಂತೆ ತೋರಿದ್ದು ಕ್ಷೀರಸಮುದ್ರವೇ!

ಹೀಗಾಗಿ ಮುದ್ದುಕೃಷ್ಣನ ಪುಟ್ಟಮುಖದಲ್ಲಿ ಕೈಲಾಸವೇ ನವನೀತವಾಗಿಹೋಯಿತು! ಭೂಮಿಯೇ ಮಣ್ಣಿನ ಮುದ್ದೆಯಾಗಿಹೋಯಿತು! ಕ್ಷೀರಸಾಗರವು ಹಾಲಾಗಿಹೋಯಿತು! ಬಾಲಕನ ಬಾಯೊಳಗೇ ಕೈಲಾಸ- ಭೂಖಂಡ-ಕ್ಷೀರಸಮುದ್ರಗಳನ್ನೆಲ್ಲಾ ಕಂಡಳಾಕೆ!

ಮುಗುಳ್ನಗೆಯಿಂದ ಅರಳಿದ ಮುಖದಲ್ಲಿ, ಬಾಯೊಳಗೆ ಏನೇನೋ ಕಂಡ ತಾಯಿಗೆ ತೋರಿದ್ದೇನು? ತೋರುವುದೇನು, ಏನೋ ಅಜೀರ್ಣವಾಗಿದೆಯೆಂದೇ!

ಸುಮ್ಮಸುಮ್ಮನೆ ಹಾಗೆಲ್ಲಾ ಅಜೀರ್ಣವೂ ಆಗುವುದಿಲ್ಲ, ಆಗಲೂಬಾರದು. ಹಾಗಿದ್ದರೆ ಯಾರದ್ದೋ ದೃಷ್ಟಿಯಾಗಿರಬೇಕು. ಯಾರದ್ದೋ ಎಂದರೆ ಇನ್ನೇನು, ಯಾವಳೋ ಹೆಂಗಸಿನದೇ ದೃಷ್ಟಿ ತಾಗಿರಬೇಕು. ಬರೀ ಅಜೀರ್ಣಕ್ಕೆ ವೈದ್ಯ ಮಾಡಬಹುದೇನೋ? ಆದರೆ ದೃಷ್ಟಿ ಪರಿಹಾರವೆಂಬುದೇನು ಸುಲಭವೇ? ಕೆಟ್ಟೆ ಕೆಟ್ಟೆ! – ಎಂದುಕೊಂಡಳು.

ಎಂದೇ ಆಕೆಯ ಗಾಬರಿಯ ಉದ್ಗಾರ: "ಧೂ ಧೂ!" ಎಂದು; ಜೊತೆಗೆ, "ಮಗುವೇ, ಬಾಳು! ನೂರ್ಕಾಲ ಬಾಳು! ಚಿರಕಾಲ ಬಾಳು!" – ಎಂದು.

ಬಾಯಲ್ಲೇ ವಿಶ್ವರೂಪವನ್ನು ತೋರಿದ ತನ್ನ ಮಹಿಮೆಯನ್ನರಿಯದ ತಾಯಿಯ ಬಾಯಿಂದ ಇಂತಹ ಉದ್ಗಾರ ತರಿಸಿದ ಹರಿಯು ನಮ್ಮನ್ನು ಕಾಪಾಡಲಿ - ಎನ್ನುತ್ತದೆ ಶ್ಲೋಕ.

ನವನೀತದಂತೆ ತೋರು - ಎಂಬುದಕ್ಕೆ ನವನೀತತಿ ಎಂದಷ್ಟೇ ಹೇಳಿದರೂ ಆಯಿತು, ಸಂಸ್ಕೃತದಲ್ಲಿ. ನಾಮಪದಗಳನ್ನೇ ಹೀಗೆ ಧಾತುಗಳನ್ನಾಗಿಸುವ ಬಗೆ ವಿಶಿಷ್ಟವಾದುದು. ಮೂರು ಬಾರಿ ಈ ತೆರನ ನಾಮಧಾತು-ಪ್ರಯೋಗವೆಂಬುದು ಪ್ರಕೃತಶ್ಲೋಕಕ್ಕೊಂದು ಮೆರುಗುಕೊಟ್ಟಿದೆ.

ಶ್ಲೋಕವಿಂತಿದೆ:
ಕೈಲಾಸೇ ನವನೀತತಿ, ಕ್ಷಿತಿತಲೇ ಪ್ರಾಗ್-ಜಗ್ಧ-ಮೃಲ್ಲೋಷ್ಟತಿ, /
ಕ್ಷೀರೋದೇಽಪಿ ನಿಪೀತ-ದುಗ್ಧತಿ ಲಸತ್-ಸ್ಮೇರ-ಪ್ರಫುಲ್ಲೇ ಮುಖೇ, |
ಮಾತ್ರಾಽಜೀರ್ಣ-ಧಿಯಾ ದೃಢಂ ಚಕಿತಯಾ ನಷ್ಟಾಽಸ್ಮಿ! ದೃಷ್ಟಃ ಕಯಾ ?/
ಧೂ ಧೂ ವತ್ಸಕ! ಜೀವ ಜೀವ ಚಿರಮಿತ್ಯುಕ್ತೋಽವತಾದ್ ವೋ ಹರಿಃ ||

ಸೂಚನೆ : 07/06/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, June 1, 2025

ವ್ಯಾಸ ವೀಕ್ಷಿತ 139 ಮಯನ ಭವ್ಯಸಭಾ-ನಿರ್ಮಾಣ-ಸಂಕಲ್ಪ(Vyaasa Vikshita 139)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ತನ್ನ ಪ್ರಾಣವುಳಿಸಿದವರಿಗೆ ತಾನೇನಾದರೂ ಸೇವೆಮಾಡಬೇಕೆಂಬುದು ಮಯನ ಕಳಕಳಿ. ಎಂದೇ ಮಯನ ಬಿನ್ನಹಕ್ಕೆ ಬೆಲೆಯೇ ಇಲ್ಲವೆಂಬಂತೆ ಆಗಬಾರದೆಂದೆಣಿಸಿ, ಅರ್ಜುನನು ಹೀಗೂ ಹೇಳಿದನು:


"ನಿನ್ನ ಸಂಕಲ್ಪವು ವ್ಯರ್ಥವಾಗುವುದನ್ನೂ ನಾನು ಇಷ್ಟಪಡೆ. ಆದ್ದರಿಂದ ನೀನು ಕೃಷ್ಣನಿಗಾಗಿ ಏನನ್ನಾದರೂ ಮಾಡಿಕೊಡು. ಅಲ್ಲಿಗೆ ನೀನು ನನಗೇ ಪ್ರತ್ಯುಪಕಾರ ಮಾಡಿರುವೆಯೆಂದು ನಾ ಭಾವಿಸುವೆ" - ಎಂದನು.


ಮಯನಿಂದ ಪ್ರೇರಿತನಾದ ಕೃಷ್ಣನು, "ಈತನಿಂದ ಯಾವ ಕೆಲಸವನ್ನು ಮಾಡಿಸಬಹುದು?" ಎಂಬುದಾಗಿ ಕ್ಷಣಕಾಲ ಯೋಚನೆ ಮಾಡಿದನು. ಜನನಾಥನೂ ಲೋಕನಾಥನೂ ಆದ ಆತನು ಮಯನಿಗೆ ಹೀಗೆಂದನು: "ಸಭೆಯೊಂದನ್ನು ನಿರ್ಮಿಸು, ಶಿಲ್ಪಜ್ಞರಲ್ಲಿ ಶ್ರೇಷ್ಠನಾದ ಮಯನೇ. ಎಂತಹ ಸಭೆಯು ಧರ್ಮರಾಜನಿಗೆ ಯುಕ್ತವೆನಿಸುವುದೋ ಅಂತಹುದೊಂದನ್ನು ಮಾಡಿಕೊಡು. ಎಂತಹ ಸಭೆಯನ್ನು ಮಾಡಿದರೆ ಅದನ್ನು ಕಂಡು ಮಾನವರೆಲ್ಲರೂ ವಿಸ್ಮಿತರಾಗುವರೋ, ಆದರೆ ಇಡೀ ಮನುಷ್ಯಲೋಕದಲ್ಲಿ ಅದನ್ನು ಅನುಕರಿಸಲು ಯಾರೂ ಸಮರ್ಥರಾಗರೋ, ಅಂತಹೊಂದು ಸಭೆಯನ್ನು ನಿರ್ಮಿಸು. ದಿವ್ಯವೂ ಆಸುರವೂ ಮಾನುಷವೂ ಆದ ಭಾವಗಳನ್ನು ಬಿಂಬಿಸುವಂತೆ ನೀನು ನಿರ್ಮಿಸಿರುವುದನ್ನು ನಾವು ಎಲ್ಲಿ ಕಾಣಬಹುದೋ ಅಂತಹ ಸಭೆಯೊಂದನ್ನು ಮಾಡು, ಮಯನೇ" - ಎಂಬುದಾಗಿ.


ಆತನ ಆ ವಾಕ್ಯವನ್ನು ಕೇಳಿ ಮಯನು ಬಹಳವೇ ಸಂತೋಷಗೊಂಡನು. ವಿಮಾನದ ಹಾಗಿರುವ ಶುಭವಾದ ಸಭೆಯೊಂದನ್ನು ಯುಧಿಷ್ಠಿರನಿಗಾಗಿ ಸಂಕಲ್ಪಿಸಿದನು. ಆಮೇಲೆ ಕೃಷ್ಣನೂ ಅರ್ಜುನನೂ ಯುಧಿಷ್ಠಿರನಿಗೆ ಎಲ್ಲವನ್ನೂ ತಿಳಿಸಿ ಮಯನನ್ನು ಆತನೊಂದಿಗೆ ಭೇಟಿ ಮಾಡಿಸಿದರು. ಯುಧಿಷ್ಠಿರನು ಆತನಿಗೆ ಯಥಾರ್ಹವಾದ ಸತ್ಕಾರವನ್ನು ಮಾಡಿದನು. ಆ ಸತ್ಕಾರವನ್ನು ಮಯನೂ ಆದರದಿಂದ ಸ್ವೀಕರಿಸಿದನು. ಆ ಸಂದರ್ಭದಲ್ಲಿ "ದೈತ್ಯರ ಅದ್ಭುತವಾದ ಚರಿತಗಳೇನೇನು?" ಎಂಬುದನ್ನು ಪಾಂಡವರೆಲ್ಲರಿಗೂ ಮಯನು ವಿವರಿಸಿದನು.


ಕೆಲಕಾಲ ವಿಶ್ರಾಂತಿ ಪಡೆದು, ಚೆನ್ನಾಗಿ ಆಲೋಚನೆ ಮಾಡಿ, ಪಾಂಡವರಿಗಾಗಿ ಸಭೆಯೊಂದನ್ನು ನಿರ್ಮಿಸಲು ಸಿದ್ಧತೆಗಳನ್ನು ಮಯನು ಮಾಡಿಕೊಂಡನು. ಪಾಂಡವರ ಅಭಿಪ್ರಾಯ, ಮಹಾತ್ಮನಾದ ಕೃಷ್ಣನ ಅಭಿಪ್ರಾಯ - ಇವೆರಡನ್ನೂ ಗ್ರಹಿಸಿ, ಮಹಾತೇಜಸ್ವಿಯಾದ ಮಯನು ಪುಣ್ಯದಿನವೊಂದರಲ್ಲಿ ಕೌತುಕಮಂಗಳವನ್ನು ನೆರವೇರಿಸಿದನು: ದ್ವಿಜಶ್ರೇಷ್ಠರಿಗೆ ಪಾಯಸವರ್ಪಿಸಿ ಸಂತೋಷವುಂಟುಮಾಡಿದನು; ಅವರಿಗೆ ಬಹುವಿಧವಾದ ಧನವಿತ್ತನು.


ಬಳಿಕ, ಹತ್ತು ಸಹಸ್ರ ಕಿಷ್ಕುಗಳಷ್ಟು ಉದ್ದವೂ (ಕಿಷ್ಕುವೆಂದರೆ ಮೊಳ), ಅಷ್ಟೇ ಅಗಲವೂ, ಆದ ಭೂಮಿಯನ್ನು ಅಳತೆಮಾಡಿಸಿದನು. ಆ ಭೂಮಿಯಾದರೂ, ದಿವ್ಯರೂಪವುಳ್ಳದ್ದೂ ಮನೋಹರವಾದುದೂ ಸರ್ವಋತುಗಳ ಗುಣಗಳಿಂದಲೂ ಕೂಡಿರುವುದೂ ಆಗಿತ್ತು.


ಖಾಂಡವಪ್ರಸ್ಥದಲ್ಲಿ ಶ್ರೀಕೃಷ್ಣನು ಸುಖವಾಗಿ ವಾಸಿಸಿದನು. ಪ್ರೀತಿಯುಕ್ತರಾದ ಪಾಂಡವರಿಂದ ಪೂಜ್ಯನಾದ ಕೃಷ್ಣನಿಗೆ ಅಲ್ಲಿ ಸತ್ಕಾರವು ನಡೆಯುತ್ತಿತ್ತು.


ಕೆಲಕಾಲಾನಂತರ, ಕೃಷ್ಣನಿಗೆ ತನ್ನ ತಂದೆಯನ್ನು ನೋಡುವ ಮನಸ್ಸಾಗಿ, ಖಾಂಡವದಿಂದ ಹೊರಟುಬರಬೇಕೆಂಬ ಆಲೋಚನೆಯನ್ನು ಮಾಡಿದನು. ಯುಧಿಷ್ಠಿರ ಹಾಗೂ ಕುಂತಿ - ಇವರುಗಳ ಅನುಮತಿಯನ್ನು ಪಡೆದು ಹೊರಡಲನುವಾದನು. ಜಗದ್ವಂದ್ಯನಾದ ಕೃಷ್ಣನು ತನ್ನ ಸೋದರತ್ತೆಯಾದ ಕುಂತಿಯ ಚರಣಗಳಿಗೆ ಶಿರಸಾ ನಮಸ್ಕರಿಸಿದನು. ಆಕೆಯೂ ಆತನ ಶಿರಸ್ಸನ್ನು ಆಘ್ರಾಣಿಸಿ ಆತನನ್ನು ಆಲಿಂಗಿಸಿಕೊಂಡಳು.


ಆ ಬಳಿಕ ಕೃಷ್ಣನು ತನ್ನ ಸೋದರಿಯಾದ ಸುಭದ್ರೆಯನ್ನು ಹೋಗಿ ಕಂಡನು. ಪ್ರೀತಿಯ ಕಣ್ಣೀರಿನಿಂದ ಕೂಡಿದವನಾಗಿ ಅವಳೊಂದಿಗೆ ಒಂದೆರಡು ಮಾತುಗಳನ್ನಾಡಿದನು.

ತಥ್ಯವೂ ಹಿತವೂ ಲಘುವೂ ಯುಕ್ತಿಯುಕ್ತವೂ ಆದ ಮಾತು ಕೃಷ್ಣನದು.


ಸೂಚನೆ : 1
/6/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ