Sunday, June 1, 2025

ವ್ಯಾಸ ವೀಕ್ಷಿತ 139 ಮಯನ ಭವ್ಯಸಭಾ-ನಿರ್ಮಾಣ-ಸಂಕಲ್ಪ(Vyaasa Vikshita 139)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ತನ್ನ ಪ್ರಾಣವುಳಿಸಿದವರಿಗೆ ತಾನೇನಾದರೂ ಸೇವೆಮಾಡಬೇಕೆಂಬುದು ಮಯನ ಕಳಕಳಿ. ಎಂದೇ ಮಯನ ಬಿನ್ನಹಕ್ಕೆ ಬೆಲೆಯೇ ಇಲ್ಲವೆಂಬಂತೆ ಆಗಬಾರದೆಂದೆಣಿಸಿ, ಅರ್ಜುನನು ಹೀಗೂ ಹೇಳಿದನು:


"ನಿನ್ನ ಸಂಕಲ್ಪವು ವ್ಯರ್ಥವಾಗುವುದನ್ನೂ ನಾನು ಇಷ್ಟಪಡೆ. ಆದ್ದರಿಂದ ನೀನು ಕೃಷ್ಣನಿಗಾಗಿ ಏನನ್ನಾದರೂ ಮಾಡಿಕೊಡು. ಅಲ್ಲಿಗೆ ನೀನು ನನಗೇ ಪ್ರತ್ಯುಪಕಾರ ಮಾಡಿರುವೆಯೆಂದು ನಾ ಭಾವಿಸುವೆ" - ಎಂದನು.


ಮಯನಿಂದ ಪ್ರೇರಿತನಾದ ಕೃಷ್ಣನು, "ಈತನಿಂದ ಯಾವ ಕೆಲಸವನ್ನು ಮಾಡಿಸಬಹುದು?" ಎಂಬುದಾಗಿ ಕ್ಷಣಕಾಲ ಯೋಚನೆ ಮಾಡಿದನು. ಜನನಾಥನೂ ಲೋಕನಾಥನೂ ಆದ ಆತನು ಮಯನಿಗೆ ಹೀಗೆಂದನು: "ಸಭೆಯೊಂದನ್ನು ನಿರ್ಮಿಸು, ಶಿಲ್ಪಜ್ಞರಲ್ಲಿ ಶ್ರೇಷ್ಠನಾದ ಮಯನೇ. ಎಂತಹ ಸಭೆಯು ಧರ್ಮರಾಜನಿಗೆ ಯುಕ್ತವೆನಿಸುವುದೋ ಅಂತಹುದೊಂದನ್ನು ಮಾಡಿಕೊಡು. ಎಂತಹ ಸಭೆಯನ್ನು ಮಾಡಿದರೆ ಅದನ್ನು ಕಂಡು ಮಾನವರೆಲ್ಲರೂ ವಿಸ್ಮಿತರಾಗುವರೋ, ಆದರೆ ಇಡೀ ಮನುಷ್ಯಲೋಕದಲ್ಲಿ ಅದನ್ನು ಅನುಕರಿಸಲು ಯಾರೂ ಸಮರ್ಥರಾಗರೋ, ಅಂತಹೊಂದು ಸಭೆಯನ್ನು ನಿರ್ಮಿಸು. ದಿವ್ಯವೂ ಆಸುರವೂ ಮಾನುಷವೂ ಆದ ಭಾವಗಳನ್ನು ಬಿಂಬಿಸುವಂತೆ ನೀನು ನಿರ್ಮಿಸಿರುವುದನ್ನು ನಾವು ಎಲ್ಲಿ ಕಾಣಬಹುದೋ ಅಂತಹ ಸಭೆಯೊಂದನ್ನು ಮಾಡು, ಮಯನೇ" - ಎಂಬುದಾಗಿ.


ಆತನ ಆ ವಾಕ್ಯವನ್ನು ಕೇಳಿ ಮಯನು ಬಹಳವೇ ಸಂತೋಷಗೊಂಡನು. ವಿಮಾನದ ಹಾಗಿರುವ ಶುಭವಾದ ಸಭೆಯೊಂದನ್ನು ಯುಧಿಷ್ಠಿರನಿಗಾಗಿ ಸಂಕಲ್ಪಿಸಿದನು. ಆಮೇಲೆ ಕೃಷ್ಣನೂ ಅರ್ಜುನನೂ ಯುಧಿಷ್ಠಿರನಿಗೆ ಎಲ್ಲವನ್ನೂ ತಿಳಿಸಿ ಮಯನನ್ನು ಆತನೊಂದಿಗೆ ಭೇಟಿ ಮಾಡಿಸಿದರು. ಯುಧಿಷ್ಠಿರನು ಆತನಿಗೆ ಯಥಾರ್ಹವಾದ ಸತ್ಕಾರವನ್ನು ಮಾಡಿದನು. ಆ ಸತ್ಕಾರವನ್ನು ಮಯನೂ ಆದರದಿಂದ ಸ್ವೀಕರಿಸಿದನು. ಆ ಸಂದರ್ಭದಲ್ಲಿ "ದೈತ್ಯರ ಅದ್ಭುತವಾದ ಚರಿತಗಳೇನೇನು?" ಎಂಬುದನ್ನು ಪಾಂಡವರೆಲ್ಲರಿಗೂ ಮಯನು ವಿವರಿಸಿದನು.


ಕೆಲಕಾಲ ವಿಶ್ರಾಂತಿ ಪಡೆದು, ಚೆನ್ನಾಗಿ ಆಲೋಚನೆ ಮಾಡಿ, ಪಾಂಡವರಿಗಾಗಿ ಸಭೆಯೊಂದನ್ನು ನಿರ್ಮಿಸಲು ಸಿದ್ಧತೆಗಳನ್ನು ಮಯನು ಮಾಡಿಕೊಂಡನು. ಪಾಂಡವರ ಅಭಿಪ್ರಾಯ, ಮಹಾತ್ಮನಾದ ಕೃಷ್ಣನ ಅಭಿಪ್ರಾಯ - ಇವೆರಡನ್ನೂ ಗ್ರಹಿಸಿ, ಮಹಾತೇಜಸ್ವಿಯಾದ ಮಯನು ಪುಣ್ಯದಿನವೊಂದರಲ್ಲಿ ಕೌತುಕಮಂಗಳವನ್ನು ನೆರವೇರಿಸಿದನು: ದ್ವಿಜಶ್ರೇಷ್ಠರಿಗೆ ಪಾಯಸವರ್ಪಿಸಿ ಸಂತೋಷವುಂಟುಮಾಡಿದನು; ಅವರಿಗೆ ಬಹುವಿಧವಾದ ಧನವಿತ್ತನು.


ಬಳಿಕ, ಹತ್ತು ಸಹಸ್ರ ಕಿಷ್ಕುಗಳಷ್ಟು ಉದ್ದವೂ (ಕಿಷ್ಕುವೆಂದರೆ ಮೊಳ), ಅಷ್ಟೇ ಅಗಲವೂ, ಆದ ಭೂಮಿಯನ್ನು ಅಳತೆಮಾಡಿಸಿದನು. ಆ ಭೂಮಿಯಾದರೂ, ದಿವ್ಯರೂಪವುಳ್ಳದ್ದೂ ಮನೋಹರವಾದುದೂ ಸರ್ವಋತುಗಳ ಗುಣಗಳಿಂದಲೂ ಕೂಡಿರುವುದೂ ಆಗಿತ್ತು.


ಖಾಂಡವಪ್ರಸ್ಥದಲ್ಲಿ ಶ್ರೀಕೃಷ್ಣನು ಸುಖವಾಗಿ ವಾಸಿಸಿದನು. ಪ್ರೀತಿಯುಕ್ತರಾದ ಪಾಂಡವರಿಂದ ಪೂಜ್ಯನಾದ ಕೃಷ್ಣನಿಗೆ ಅಲ್ಲಿ ಸತ್ಕಾರವು ನಡೆಯುತ್ತಿತ್ತು.


ಕೆಲಕಾಲಾನಂತರ, ಕೃಷ್ಣನಿಗೆ ತನ್ನ ತಂದೆಯನ್ನು ನೋಡುವ ಮನಸ್ಸಾಗಿ, ಖಾಂಡವದಿಂದ ಹೊರಟುಬರಬೇಕೆಂಬ ಆಲೋಚನೆಯನ್ನು ಮಾಡಿದನು. ಯುಧಿಷ್ಠಿರ ಹಾಗೂ ಕುಂತಿ - ಇವರುಗಳ ಅನುಮತಿಯನ್ನು ಪಡೆದು ಹೊರಡಲನುವಾದನು. ಜಗದ್ವಂದ್ಯನಾದ ಕೃಷ್ಣನು ತನ್ನ ಸೋದರತ್ತೆಯಾದ ಕುಂತಿಯ ಚರಣಗಳಿಗೆ ಶಿರಸಾ ನಮಸ್ಕರಿಸಿದನು. ಆಕೆಯೂ ಆತನ ಶಿರಸ್ಸನ್ನು ಆಘ್ರಾಣಿಸಿ ಆತನನ್ನು ಆಲಿಂಗಿಸಿಕೊಂಡಳು.


ಆ ಬಳಿಕ ಕೃಷ್ಣನು ತನ್ನ ಸೋದರಿಯಾದ ಸುಭದ್ರೆಯನ್ನು ಹೋಗಿ ಕಂಡನು. ಪ್ರೀತಿಯ ಕಣ್ಣೀರಿನಿಂದ ಕೂಡಿದವನಾಗಿ ಅವಳೊಂದಿಗೆ ಒಂದೆರಡು ಮಾತುಗಳನ್ನಾಡಿದನು.

ತಥ್ಯವೂ ಹಿತವೂ ಲಘುವೂ ಯುಕ್ತಿಯುಕ್ತವೂ ಆದ ಮಾತು ಕೃಷ್ಣನದು.


ಸೂಚನೆ : 1
/6/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ

ಪ್ರಶ್ನೋತ್ತರ ರತ್ನಮಾಲಿಕೆ 18 (Prasnottara Ratnamalike 18)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೧೮. ಗುರುತ್ವದ ಮೂಲ ಯಾವುದು?

ಉತ್ತರ - ಏನನ್ನೂ ಯಾಚಿಸದಿರುವುದು.

ಈ ಪ್ರಶ್ನೆಯು ಸ್ವಲ್ಪ ವಿಚಾರಣೀಯವಾಗಿದೆ. ಏಕೆಂದರೆ ಗುರುತ್ವಕ್ಕೂ ಬೇಡುವುದಕ್ಕೂ ಏನು ಸಂಬಂಧ? ಎಂಬುದು ಈ ಪ್ರಶ್ನೋತ್ತರದಲ್ಲಿ ಇರುವ ವಿಷಯವಾಗಿದೆ. ಹಾಗಾಗಿ ಯಾಚಿಸದೆ ಇರುವಂತದ್ದು ಗುರುತ್ವ ಮತ್ತು ಅದರ ಮೂಲ ಹೇಗೆ ಆಗುತ್ತದೆ! ಎಂಬುದನ್ನು ನಾವಿಲ್ಲಿ ವಿವೇಚಿಸಬೇಕಾಗಿದೆ. ಗುರುತ್ವ ಎಂದರೆ ಗೌರವ - ಗುರುಭಾವ. ಅಂದರೆ ವ್ಯಕ್ತಿತ್ವದ ಉತ್ಕೃಷ್ಟತೆ ಅಥವಾ ಒಂದು ಪರಿಪೂರ್ಣತೆ. ಗುರು ಎಂದರೆ ಅದಕ್ಕೆ ತುಂಬಾ ವಿಶಾಲವಾದ ಅರ್ಥವಿದೆ. ಯಾವಾಗ ಒಬ್ಬ ಗುರು ಎನಿಸಿಕೊಳ್ಳುತ್ತಾನೆ ಮತ್ತು ಅವನಿಗೆ ಗೌರವ ಎನ್ನುವುದು ಯಾವಾಗ ಸಂದಾಯವಾಗುತ್ತದೆ? ಎಂಬುದು ಇಲ್ಲಿನ ವಿಷಯ. ಇಲ್ಲಿ ಗುರು ಎಂಬ ಶಬ್ದದ ಪ್ರಸಿದ್ಧವಾದ ಅರ್ಥವು ವಿವಕ್ಷಿತವಲ್ಲ. ಸಿರಿತನದ ಅರ್ಥ ಈ ಗೌರವ ಎಂಬ ಶಬ್ದಕ್ಕೆ ಇದೆ ಎಂಬುದಾಗಿ ಭಾವಿಸಬೇಕು. ಅಂದರೆ ಈ ಹಿರಿತನವನ್ನು ನಾವು ಹಾಗೆಯೇ ಇಟ್ಟುಕೊಳ್ಳಬೇಕು ಅಂತಾದರೆ ನಾವು ಯಾರಲ್ಲೂ, ಏನನ್ನೂ ಯಾಚಿಸದೆ ಇರುವಂತಹ ಸ್ಥಿತಿಯನ್ನು ಪಡೆಯಬೇಕು. ಅದಕ್ಕೆ ಪ್ರತಿದಿನ ನಾವು ಪೂಜೆಯನ್ನು ಮಾಡುವಾಗ ಕೊನೆಯಲ್ಲಿ ಪ್ರಾರ್ಥನಾರೂಪವಾಗಿ ಈ ವಾಕ್ಯವನ್ನು ಹೇಳುತ್ತೇವೆ. 'ವಿನಾ ದೈನ್ಯೇನ ಜೀವನಂ ದೇಹಿ ಮೇ ಶಂಭೋ' ಎಂದು. ಬೇಡುವುದನ್ನು ದೈನ್ಯ ಎಂಬುದಾಗಿ ಹೇಳಿದ್ದಾರೆ. ಅಂದರೆ 'ದೈನ್ಯವಿಲ್ಲದ ಜೀವನವನ್ನು ನನಗೆ ಕಟ್ಟಿಕೊಡು!. ಯಾವುದೇ ವಿಷಯದಲ್ಲೂ ಪರಾಧೀನತೆ ಬೇಡ; ತನ್ನ ಕಾಲು ಮೇಲೆ ತಾನು ಸ್ವತಃ ನಿಂತುಕೊಳ್ಳುವ ಸ್ಥಿತಿಯನ್ನು ಕೊಡು ಎಂದು ನಾವು ಪ್ರಾರ್ಥಿಸಿಕೊಳ್ಳುತ್ತೇವೆ. ಹಾಗಾದರೆ ಯಾವಾಗ ಈ ದೈನ್ಯವೆಂಬುದು ಬರುತ್ತದೆ? ಎಂದರೆ ತನಗೆ ಸಾಮರ್ಥ್ಯವಿದೆ, ಅವಕಾಶವಿದೆ, ಪ್ರಕೃತಿಯೂ ಕೂಡ ಅದನ್ನು ಒಪ್ಪಿದೆ. ಆದರೆ ಅದನ್ನು ಬಳಸಿಕೊಳ್ಳದೆ ಬೇರೊಬ್ಬರಲ್ಲಿ ಅವಕಾಶವನ್ನು ಪಡೆಯುವಂತಹದ್ದು ಏನಿದೆಯೋ ಅದುವೇ ದೈನ್ಯ. ಇದೇ ಗೌರವವನ್ನು ಕಳೆಯುವ ಯಾಚನೆ ಎಂಬುದಾಗಿ ಇಲ್ಲಿ ಹೇಳಬಹುದು. ಆದರೆ ಬ್ರಹ್ಮಚಾರಿಯಾದವನು ಅಥವಾ ಸನ್ಯಾಸಿಯಾದವನು ಯಾಚಿಸಬೇಕು; ಅದು ಅವನ ಧರ್ಮ; ಅದರಿಂದಲೇ ಅವನ ಜೀವನಪಥ ಸಾಗಬೇಕಾಗಿದೆ. ಆದ್ದರಿಂದ ಅಲ್ಲಿನ ಯಾಚನೆಯು ಭಿಕ್ಷಾ ಎಂದು ಕರೆಸಿಕೊಳ್ಳುತ್ತದೆ. ಅದು ಅಲ್ಲಿ ದೈನ್ಯಜೀವನವಾಗುವುದಿಲ್ಲ. ಗೌರವಕ್ಕೆ ಯಾವುದೇ ಚ್ಯುತಿಯೂ ಇರುವುದಿಲ್ಲ.


ಆದರೆ ಗೃಹಸ್ಥನಾದವನು ಯಾಚಿಸುವುದು ಸರಿಯಲ್ಲ. ಸ್ವತಃ ತಾನೇ ತನಗೆ ಮತ್ತು ತನ್ನ ಪರಿವಾರವರ್ಗಕ್ಕೆ ಮತ್ತು ಯಾರು ಯಾರು ಅಪೇಕ್ಷಿತರಾಗಿ ಬರುತ್ತಾರೋ ಅವರೆಲ್ಲರನ್ನು ಕೊಟ್ಟು ಸಂತೃಪ್ತಿಪಡಿಸಬೇಕಾದದ್ದು ಅವನ ಕರ್ತವ್ಯವಾಗಿರುತ್ತದೆ. ಆ ಮಟ್ಟದಲ್ಲಿ ಆತ ತನ್ನ ಸಾಮರ್ಥ್ಯವನ್ನು ಪಡೆದು ಹಿಗ್ಗಿಸಿಕೊಳ್ಳಬೇಕಾಗುತ್ತದೆ. ಅದಕ್ಕೆ ಬೇಕಾದ ವಿದ್ಯೆಯನ್ನೂ ಸಂಪಾದಿಸಿ, ಅದರ ಬಲದ ಮೇಲೆ ಇಂತಹ ಧರ್ಮಕಾರ್ಯವನ್ನು ಮಾಡಬೇಕಾಗುತ್ತದೆ. ಹಾಗಲ್ಲದೇ ಸಕಾಲದಲ್ಲಿ ಸರಿಯಾಗಿ ವಿದ್ಯಾರ್ಜನೆಯನ್ನು ಮಾಡದೆ, ಸಕಾಲದಲ್ಲಿ ಧನಸಂಪಾದನೆಯನ್ನೂ ಮಾಡದಿದ್ದರೆ ಆತ ಮುಂದೆ ತನ್ನ ಮತ್ತು ತನ್ನ ಪರಿವರವನ್ನು ರಕ್ಷಿಸಿಕೊಳ್ಳಲು ಬೇಡುವುದು ಅನಿವಾರ್ಯವಾಗುತ್ತದೆ. ಆಗ ಆತ ತನ್ನ ದೀನತೆಯನ್ನು ತೋರಿಕೊಳ್ಳಬೇಕು, ತೋಡಿಕೊಳ್ಳವೇಕು. ಇರುವ ಮಾನವನ್ನೂ ಬದಿಗಿರಿಸಿಕೊಳ್ಳಬೇಕಾಗುತ್ತದೆ. ಇದು ತಾನೆ ಗೌರವವನ್ನು ಕೆಡಿಸಿಕೊಳ್ಳುವ ಸಂದರ್ಭ. 


ಸೂಚನೆ : 1/6/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ 65 ಅನ್ಯದೇವತೆಗಳಲ್ಲೆಲ್ಲಿ ಲಭ್ಯವೀ ಲಾಲಿತ್ಯ? (Krishakarnamrta 65)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಕೈಶೋರವೆಂದರೆ ಕಿಶೋರಭಾವ, ಬಾಲಾವಸ್ಥೆ. ಕೃಷ್ಣನ ಕೈಶೋರವಾಗಲಿ, ಆ ಸಮಯದಲ್ಲಿ ಆತನಲ್ಲಿ ಹೊಮ್ಮಿದ ಬೆಡಗಾಗಲಿ, ಮಿಕ್ಕಾವ ದೇವತೆಗಳಲ್ಲೂ ಇಲ್ಲವೆನ್ನುತ್ತಾನೆ, ಲೀಲಾಶುಕ.

ಕಿಶೋರಾವಸ್ಥೆಯೆಂಬುದೇ ಚಿತ್ತಾಕರ್ಷಕ. ಎಂದೇ "ಆ ಕೈಶೋರ" ಎನ್ನುತ್ತಾನೆ, ಲೀಲಾಶುಕ. "ಆ" ಎನ್ನುವುದು ಪ್ರಸಿದ್ಧಿಯನ್ನು ಹೇಳುತ್ತದೆ. ಕೃಷ್ಣನ ಕಿಶೋರತೆಯು ವಿಶಿಷ್ಟವಾದದ್ದಲ್ಲವೇ?

ಎರಡನೆಯದಾಗಿ, ಆ ಅವಸ್ಥೆಯಲ್ಲಿ ಕಾಣುವ ಮುಖಕಮಲವೂ ಸೊಗಸೇ. ಏಕೆ? ಆಗ ಕಣ್ಣು-ತುಟಿ-ಕೆನ್ನೆ-ಹುಬ್ಬು - ಇವುಗಳಲ್ಲೆಲ್ಲಾ ಅದೇನೋ ಮಧುರತೆಯು ಕಂಡುಬರುತ್ತದೆ.

ಮೂರನೆಯದಾಗಿ ಆತನ ಕಾರುಣ್ಯವೂ ವಿಲಕ್ಷಣವಾದುದೇ. ನಾಲ್ಕನೆಯದಾಗಿ ಆತನ ಲೀಲಾ-ಕಟಾಕ್ಷಗಳೂ ವಿಶಿಷ್ಟವೇ. ಆಟವಾಗಿಯೋ ಕಪಟವಾಗಿಯೋ ಹುಬ್ಬುಗಂಟಿಕ್ಕುವುದೇನು ಓರೆಗಣ್ಣೋಟವೇನು - ಎಲ್ಲವೂ ಲೀಲಾಮಯವೇ.

ಐದನೆಯದಾಗಿ ಆತನ ಸೌಂದರ್ಯ: ಬಾಲಕೃಷ್ಣನ ಸೌಂದರ್ಯ ಮತ್ತಾರಲ್ಲುಂಟು? ಆರನೆಯದಾಗಿ ಆತನ ಮೊಗದಲ್ಲಿ ತೋರುವ ಮಂದಸ್ಮಿತದ ಕಾಂತಿ. ಶ್ರೀಯೆಂದರೆ ಕಾಂತಿ, ಶೋಭೆ.

ಇವಿಷ್ಟೂ ಯಾವ ದೇವತೆಗಳಲ್ಲೂ ಇಲ್ಲ ಎನ್ನುತ್ತಾನೆ, ಕವಿ. ದೇವ ಎಂದರೂ ದೇವತಾ ಎಂದರೂ ಒಂದೇ. ದೇವತೆಗಳ ಸಮೂಹವನ್ನೇ ದೈವತವೆನ್ನುವುದು. ದೇವತಾಸ್ತೋಮದಲ್ಲಿಯೇ ಮೇಲೆ ಹೇಳಿದ ಆರು ಅಂಶಗಳು ಸ್ಫುರಿಸವು. ಬ್ರಹ್ಮ-ರುದ್ರ-ಸುಬ್ರಹ್ಮಣ್ಯ- ಮುಂತಾದ ದೇವತೆಗಳಿಲ್ಲವೇ? - ಎನ್ನಬಹುದು. ಬ್ರಹ್ಮನಿಗೆ ನಾಲ್ಕು ಮುಖಗಳು, ರುದ್ರನಂತೂ ಹಣೆಗಣ್ಣ, ಷಣ್ಮುಗನಿಗೆ ಆರು ಮುಖಗಳು - ಹೀಗೆಲ್ಲಾ ಇರುವುದರಿಂದ ಕೃಷ್ಣನಲ್ಲಿರುವ ವಿಶೇಷಗುಣಗಳು ಮತ್ತಾರಲ್ಲೂ ಇಲ್ಲವೆನ್ನಬಹುದು.

ಈ ಆರು ಅಂಶಗಳನ್ನು ಮತ್ತಾವ ದೇವತಾಮೂರ್ತಿಯಲ್ಲೂ ಕಾಣಲಾಗದೆಂಬುದನ್ನೇ ಪ್ರತಿಜ್ಞೆ ಮಾಡಿ ಹೇಳುತ್ತಾನೆ: ಸತ್ಯಂ ಸತ್ಯಂ ದುರ್ಲಭಂ ದೈವತೇಷು ಎಂದು. ಯಾವುದನ್ನಾದರೂ ಖಚಿತವಾಗಿ ಹೇಳಬೇಕೆಂದರೆ, "ಇದು ಸತ್ಯ" ಎಂದು ಎರಡು ಬಾರಿ, ಹೇಳುವುದುಂಟು. ಇಲ್ಲಿ "ಸತ್ಯಂ ಸತ್ಯಂ" ಎಂದು ಎರಡು ಬಾರಿ ಘೋಷಿಸಲಾಗಿದೆ. ದ್ವಿರುಕ್ತಿಯು ಶಪಥ-ಸೂಚಕ.

ಮೊದಲು ಮೂರು ಪಾದಗಳಲ್ಲಿ ಆರಂಭದಲ್ಲಿಯ ಕೈಶೋರ-ಕಾರುಣ್ಯ-ಸೌಂದರ್ಯಗಳು ಭಾವ-ವಾಚಿ-ಪದಗಳು. ಅವುಗಳ ಪಕ್ಕದಲ್ಲೇ ಹೇಳಲಾಗಿರುವ ಮುಖ-ಕಟಾಕ್ಷ-ಸ್ಮಿತಗಳು ನಯನ-ಗೋಚರವಾದಂತಹವು.


ತತ್ ಕೈಶೋರಂ ತಚ್ಚ ವಕ್ತ್ರಾರವಿಂದಂ/

ತತ್ ಕಾರುಣ್ಯಂ ತೇ ಚ ಲೀಲಾಕಟಾಕ್ಷಾಃ |

ತತ್ ಸೌಂದರ್ಯಂ ಸಾ ಚ ಮಂದಸ್ಮಿತ-ಶ್ರೀಃ/

ಸತ್ಯಂ ಸತ್ಯಂ ದುರ್ಲಭಂ ದೈವತೇಷು ||

****


ಮತ್ತೊಂದು ಶ್ಲೋಕ.

ಕೃಷ್ಣನನ್ನು ಪರಮಕಾರುಣಿಕ ಎಂದು ನಂಬಿದವರುಂಟು.  ಆ ನೆಚ್ಚಿಕೆಯಿಂದಾಗಿ ಅವರ ಚೇತಸ್ಸು ಸ್ತಬಕಿತವಾಗಿದೆ, ಎಂದರೆ ಅರಳಿದಂತಾಗಿದೆ. ಆ ವಿಶ್ವಾಸವುಳ್ಳವರಿಗೂ ಜೀವನದಲ್ಲಿ ಯಾವ ಯಾವಾಗಲೋ ಏನೇನೋ ಉಪಪ್ಲವಗಳು ಬರಬಹುದು. ಉಪಪ್ಲವಗಳೆಂದರೆ ಉಪದ್ರವಗಳು, ಕ್ಲೇಶಗಳು.

ಅವೆಲ್ಲವೂ ಶಮನವಾಗಬೇಕು - ಎಂಬ ಬಯಕೆ ಕೃಷ್ಣನಿಗಿರುತ್ತದಲ್ಲವೇ? ಹಾಗಾಗಬೇಕೆಂಬುದು ಆತನ ಪಾಲಿಗೆ ಬರೀ ಬಯಕೆಯಲ್ಲ. ಆ ಬಗ್ಗೆ ಆತ ಬದ್ಧದೀಕ್ಷ - ಎಂದರೆ ದೃಢವಾದ ಸಂಕಲ್ಪವುಳ್ಳವನು.

ವಾಸ್ತವವಾಗಿ ಅದೊಂದರಲ್ಲೇ ಅವನು ಬದ್ಧದೀಕ್ಷ. ಅರ್ಥಾತ್ ಅದೇ ಆತನ ಏಕದೀಕ್ಷೆ, ಏಕಮಾತ್ರದೀಕ್ಷೆ. ತನ್ನಲ್ಲಿ ನಿಷ್ಠೆಯುಳ್ಳವರ ಸಮಸ್ತ ಉಪಪ್ಲವಗಳೂ ಶಮನವಾಗಬೇಕು - ಎಂಬುದೇ ಆತನ ಸಂಕಲ್ಪ.

ಈ ಶ್ಲೋಕದ ಪ್ರಥಮ-ಪದ 'ವಿಶ್ವ.' ಈ ನಾಮಪದಕ್ಕೆ ಪ್ರಪಂಚ ಎಂಬ ಅರ್ಥವು ಸುಪ್ರಸಿದ್ಧ. ವಿಶ್ವವೆಂಬುದು ಸಂಸ್ಕೃತದಲ್ಲಿ ಸರ್ವನಾಮವೂ ಆಗಬಹುದು; ಆಗ ಅದಕ್ಕೆ 'ಸರ್ವ' ಎಂಬ ಅರ್ಥವೂ ಪ್ರಚುರವೇ. ಎಂದೇ ವಿಶ್ವೋಪಪ್ಲವವೆಂದರೆ ಸರ್ವೋಪದ್ರವಗಳೆಂದೇ ಅರ್ಥ.

ಅಂತಹ ಮುರಾರಿಯ ಶೈಶವವನ್ನು ನಾವು ದಾರಿದಾರಿಯಲ್ಲೂ ಕಾಣುತ್ತೇವೆ - ಎನ್ನುತ್ತಾನೆ ಲೀಲಾಶುಕ. ಕಾಣುವುದೆಂದರೆ ಅನುಭವಿಸುವುದು, ಮನಸಾ ಭಾವಿಸುವುದು.

ಹೇಗಿದೆ ಆತನ ಶೈಶವ? ಪ್ರಶ್ಯಾಮವೂ ಪ್ರತಿನವವೂ ಆದ ಕಾಂತಿಯಿಂದ ಕೂಡಿರುವುದು ಅದು. ಏನು ಹಾಗೆಂದರೆ? ಪ್ರಶ್ಯಾಮವೆಂದರೆ ಪ್ರಕೃಷ್ಟವಾಗಿ ಶ್ಯಾಮವಾಗಿರುವುದು. ಎಂದರೆ ತೀರಾ ಶ್ಯಾಮವರ್ಣದ್ದು. ಪ್ರತಿನವವೆಂದರೆ ಪ್ರತಿಕ್ಷಣವೂ ಹೊಸತಾಗಿರುವುದು.

ಅಂತಹ ಕಾಂತಿಯ ಕಂದಲದಿಂದ ಆರ್ದ್ರವಾಗಿದೆ ಆತನ ಶೈಶವ. ಅರ್ಥಾತ್ ಕಾಂತಿಯು "ಚಿಗುರೊಡೆದಿದ್ದು" ಸರಸವಾಗಿದೆ, ಆತನ ಎಳಸು. ಶಿಶು-ಶರೀರದ ಬಣ್ಣ-ಹೊಳಪುಗಳನ್ನು ಇಲ್ಲಿ ಹೇಳಿದೆ.

ಒಟ್ಟಿನಲ್ಲಿ, ನೆರೆನಂಬಿದವರ ಸರ್ವಕಷ್ಟಪರಿಹಾರಿ, ಹೊಳಪಿನ ಮೈಬಣ್ಣವುಳ್ಳವನು, ನಮ್ಮ ಬಾಲಕೃಷ್ಣ.


ವಿಶ್ವೋಪಪ್ಲವ-ಶಮನೈಕ-ಬದ್ಧದೀಕ್ಷಂ

ವಿಶ್ವಾಸ-ಸ್ತಬಕಿತ-ಚೇತಸಾಂ ಜನಾನಾಂ |

ಪ್ರಶ್ಯಾಮ-ಪ್ರತಿನವ-ಕಾಂತಿ-ಕಂದಲಾರ್ದ್ರಂ

ಪಶ್ಯಾಮಃ ಪಥಿ ಪಥಿ ಶೈಶವಂ ಮುರಾರೇಃ ||

***


ಎಂದು ಕಾಣುವೆ ಇಂತಹ ಕೃಷ್ಣನನ್ನು? - ಎಂಬುದಾದ ಗೋಪಿಯೊಬ್ಬಳ ಹಂಬಲಿಕೆಯನ್ನು ಪದ್ಯವೊಂದರಲ್ಲಿ ಕವಿಯೊಕ್ಕಣಿಸಿದ್ದಾನೆ.

ಕೃಷ್ಣನ ಬಹುಲವಾದ ಚಿಕುರವನ್ನು ನಾನು ಕಣ್ತುಂಬ ಕಾಣಬೇಕು. ಬಹುಲವೆಂದರೆ ಹೆಚ್ಚಾಗಿರುವುದು, ಒತ್ತೊತ್ತಾಗಿರುವುದು. ಯಾವುದದು? ಚಿಕುರವೆಂದರೆ ಕೇಶರಾಶಿ. ದಟ್ಟವಾಗಿ  ಬೆಳೆದಿರುವ ಕೂದಲುಗಳನ್ನುಳ್ಳ ಆ ಕೃಷ್ಣನನ್ನೆಂದು ಕಾಣುವೆ? - ಎಂಬ ಭಾವ ಅವಳದು.

ಕೂದಲುಗಳು - ಎಂಬ ಬಹುವಚನವೇ ತಾತ್ಪರ್ಯವಾದರೂ, ಏಕವಚನವನ್ನೇ ಬಳಸಿ ಹೇಳುವುದುಂಟು. ಇದನ್ನು ಜಾತ್ಯೇಕವಚನವೆನ್ನುವರು. ಅವಳ "ಕೂದಲು" ಚೆನ್ನಾಗಿದೆಯೆಂದರೆ "ಕೂದಲುಗಳು" ಚೆನ್ನಾಗಿವೆಯೆಂದೇ ಅರ್ಥ. ಏಕವಚನವು ಸ್ತೋಮವಾಚಿ. ದಟ್ಟವಾದ ಕೂದಲು ಪುಟ್ಟ ಮಕ್ಕಳಿಗೂ ಶೋಭಾವಹವೇ.

ಮುಖದ ಮೇಲೂ ಒಂದಿಷ್ಟು ಬರುವಂತೆ ಬೆಳೆದುಕೊಳ್ಳುವ ಗುಂಗುರುಕೂದಲೂ ಮುಖಕ್ಕೆ ಶೋಭೆಯೇ. ಹಾಗೆ ಬೆಳೆಯುವ ಕೂದಲಿಗೆ ಭ್ರಮರವೆನ್ನುತ್ತಾರೆ. ಭ್ರಮರವೆಂದರೆ ದುಂಬಿಯೆಂಬ ಅರ್ಥವೇನೋ ಪ್ರಸಿದ್ಧವೇ. ಮುಂಗುರುಳುಗಳ ಮೇಲೆ ಗಾಳಿಯಾಡಿದಾಗ ಆ ಮುಂಗುರುಳುಗಳೂ ಆಡುತ್ತವಲ್ಲವೇ? ಭ್ರಮಿಸುವುದೆಂದರೆ ಭ್ರಮಣಮಾಡುವುದು, ಅತ್ತಿತ್ತ ಹಿಂದುಮುಂದೆ ಹೋಗಿಬರುವುದು. ಮುಂಗುರುಳುಗಳೂ ಹಾಗಾಡುವುದರಿಂದಲೇ ಅವಕ್ಕೂ ಭ್ರಮರ ಎನ್ನುವುದು. ಅಂತಹ ಭ್ರಮರಗಳು ಮುಖವನ್ನೆಲ್ಲಾ ಮುಚ್ಚಿಬಿಡುವುದಿಲ್ಲ. ಹಾಗಿದ್ದರೆ ನೋಡಲೂ ಚೆನ್ನಲ್ಲ. ಅವು ವಿರಳವಾಗಿದ್ದರೆ ಅದೇ ಒಂದು ಶೋಭೆ. ಅಂತಹ ವಿರಳ-ಭ್ರಮರಗಳನ್ನುಳ್ಳವ ಕೃಷ್ಣ.

ಇನ್ನು ಆತನ ಅಧರವೋ ಅತ್ಯಂತ ಮಧುರವಾದದ್ದು! ಧನ್ಯರಾದ ಗೋಪಿಯರು ಅದನ್ನು ಆಸ್ವಾದಿಸಿ ಬಲ್ಲವರು. ಒಮ್ಮೆ ಸವಿಗಂಡದ್ದನ್ನು ಎಂದಾದರೂ ಮರೆಯುವುದುಂಟೆ?

ಅಂತೆಯೇ ಆತನ ವದನವೂ ಲಲಿತವಾದದ್ದು. ಎಂದರೆ ಸೌಂದರ್ಯಭರಿತವಾದದ್ದು. ಅದನ್ನೂ ಕಾಣಬೇಕೆಂಬಾಸೆಯೇ. ಕಾಣುತ್ತಲೇ ಇರಬೇಕೆಂಬ ಆಸೆಯೇ.

ಹಾಗೆಯೇ ಆತನ ನಡೆಯಲ್ಲೂ, ಎಂದರೆ ಚರಿತದಲ್ಲೂ, ಒಂದು ಚಪಲತೆಯಿದೆ. ಗೋಪಿಕೆಯರೊಂದಿಗಿನ ಸರಸತೆಯಲ್ಲಿ, ಒಮ್ಮೊಮ್ಮೆ ಒಬ್ಬೊಬ್ಬರನ್ನು ಆತನು ಸಂತೋಷಪಡಿಸುವಂತಾಗುತ್ತದೆ. ಒಂದು ಜೀವಿಗೆ ಸಿಕ್ಕ ಸಂಗಸುಖ ಮಗದೊಂದು ಜೀವಿಗೆ ದೊರಕಬಾರದೇ?

ಇದೆಲ್ಲವನ್ನೂ ನಾನದೆಂದು ಅನುಭವಿಸುವೆ? - ಎಂದು ಕೇಳುತ್ತಿದ್ದಾಳೆ, ಗೋಪಿಕೆಯೊಬ್ಬಳು. ಅವಳ ಚಡಪಡಿಕೆಯನ್ನು ಗುರುತಿಸಿದ್ದಾನೆ, ಲೀಲಾಶುಕ.

ಈ ತಾಳಬದ್ಧ-ಶ್ಲೋಕವು ತೋಟಕವೃತ್ತದಲ್ಲಿದೆ. ಲಘು-ಲಘು-ಗುರುಗಳ ಮೂರು ಮೂರಕ್ಷರಗಳಿಗೆ ಯತಿಯು ಬರುತ್ತದೆ. ರೇಫ-ಲಕಾರಗಳ ವಿಲಾಸವನ್ನೂ ಕಾಣಬಹುದು. ಅಂತಿಮ-ಪಾದದ ಚಕಾರತ್ರಯವೂ ಆಸ್ವಾದ್ಯವೇ.

ಶ್ಲೋಕ ಹೀಗಿದೆ:

ಚಿಕುರಂ ಬಹುಲಂ, ವಿರಲಂ ಭ್ರಮರಂ,/

ಮೃದುಲಂ ವಚನಂ, ವಿಪುಲಂ ನಯನಮ್, |

ಅಧರಂ ಮಧುರಂ, ಲಲಿತಂ ವದನಂ,/

ಚಪಲಂ ಚರಿತಂ ಚ ಕದಾನುಭವೇ? ||

ಸೂಚನೆ : 31/05/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.