Saturday, February 14, 2026

ಮಹಾ ನಟೇಶನಿಗೆ ನಮೋನಮಃ

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)





ಶಿವ-ನಟರಾಜ
ಶಿವನಿಗೂ ನಾಟ್ಯಕ್ಕೂ ಅವಿನಾಭಾವ ಸಂಬಂಧವಿದೆ. ಶಿವ ಸಹಸ್ರನಾಮದಲ್ಲಿ ಅವನನ್ನು ನಾಟ್ಯಪ್ರಿಯ,ನಿತ್ಯನರ್ತಕ, ನರ್ತಕ, ಮಹಾನಟನಮೂರ್ತಿಎಂದೆಲ್ಲಾ ಸ್ತುತಿಸಲಾಗಿದೆ. ಹಾಗೆಯೇ ನಾಟ್ಯದ ಭಾಗವೇ ಆದ ಸಂಗೀತದ ಸಂಬಂಧವೂ ಶಿವನಿಗೆ ಹೇಳಿದೆ. ಅವನನ್ನು ಮಹಾಗೀತ,ವೇಣವೀ, ತುಂಬವೀಣಾವಾದನ ತತ್ತ್ವಜ್ಞನೆಂದೂ ವರ್ಣಿಸಿದ್ದಾರೆ. ನಮ್ಮ ಸಂಸ್ಕೃತಿಯಲ್ಲಿ ಶಿಲ್ಪಗಳಲ್ಲಿ, ಚಿತ್ರಗಳಲ್ಲಿ, ನಾಟ್ಯಶಾಲೆಗಳಲ್ಲಿ, ದೇವಾಲಯಗಳಲ್ಲಿ ನಟರಾಜನ ನಾಟ್ಯಭಂಗಿಯನ್ನು ಕಾಣಬಹುದಾಗಿದೆ. ಶ್ರೀರಂಗ ಮಹಾಗುರುಗಳನ್ನೊಮ್ಮೆ ಯಾರೋ ಪ್ರಶ್ನಿಸಿದರಂತೆ- ನಟರಾಜನ ನಾಟ್ಯ , ನಾಟ್ಯ ರಸಿಕರಿಗೆ ಮನೋರಂಜಕವಾಗಬಹುದು ಸಾಮಾನ್ಯರಿಗೆ ಅದು ಹೇಗೆ ಸಂಬಂಧಿಸಿದೆ? ಎಂಬುದಾಗಿ. ಶ್ರೀರಂಗ ಮಹಾಗುರುಗಳು ಅವರ ಹೃದಯಭಾಗವನ್ನೊಮ್ಮೆ ಮುಟ್ಟಿಕೊಳ್ಳಲು ಹೇಳಿ, ಅಲ್ಲೇನು ಅನುಭವವಾಗುತ್ತಿದೆ ಎಂದು ಕೇಳಿದರಂತೆ. ಲಬ್-ಡಬ್ ಎಂಬ ಹೃದಯಬಡಿತದ ಶಬ್ದ ಅನುಭವಕ್ಕೆ ಬರುತ್ತಿದೆ ಎಂದು ಅವರು ಹೇಳಿದರು. ಆಗ ಮಹಾಗುರುಗಳು ಹೇಳಿದ ಮಾತು ಅವಿಸ್ಮರಣೀಯ- ಹಾಗೆ ಶಿವ-ಶಿವೆಯರು ನಿಮ್ಮ ಹೃದಯದಲ್ಲಿ ನರ್ತನ ಮಾಡುತ್ತಿರುವುದರಿಂದಲೇ ನಿಮ್ಮ ಅಸ್ತಿತ್ವ ಇರುವುದಪ್ಪಾ, ಅವರು ನಿಮ್ಮ ಹೃದಯದಲ್ಲಿ ತಮ್ಮ ನರ್ತನವನ್ನು ನಿಲ್ಲಿಸಿದರೆ ನಿಮ್ಮ ಬದುಕೂ ನಿಲ್ಲುತ್ತದೆ. ಅದೇ ಸಂಬಂಧ ನಟರಾಜನ ನೃತ್ಯಕ್ಕೂ, ನಿಮಗೂ,ಸಮಸ್ತ ಜೀವಲೋಕಕ್ಕೂ ಇರುವುದು. ಈ ಮಾತಿನಿಂದ ನಾವೆಲ್ಲರೂ ಬದುಕಿರುವುದು ಅವನ ಭಿಕ್ಷೆಯಿಂದಲೇ ಎಂಬುದು ಸ್ಪಷ್ಟವಾಗುತ್ತದೆ.

ಜೀವಲೋಕವೆಲ್ಲವೂ ನಾಟ್ಯಮಯ
ಒಂದು ದೃಷ್ಟಿಯಿಂದ ನೋಡಿದರೆ ಲೋಕದ ಎಲ್ಲ ನಡೆಯೂ, ಭಾವವೂ ನಾಟ್ಯದ ಭಾವಗಳೇ. ನಮಗೆ ಸಂತೋಷವಾದಾಗ ಅದು ಮುಖ ಮೈಗಳಲ್ಲಿ ಪ್ರಕಟವಾಗುತ್ತದೆ, ಹೀಗೆಯೇ ದುಃಖ, ದೈನ್ಯ, ಕಾರುಣ್ಯ, ಹಾಸ್ಯ, ಭಯ ಇತ್ಯಾದಿ ಎಲ್ಲಾ ಭಾವಗಳೂ ನಮ್ಮ ಮೇಲೆ ತಮ್ಮ ಅಚ್ಚೊತ್ತುತ್ತದೆ. ಇವೆಲ್ಲವುಗಳನ್ನೂ, ಇವಕ್ಕೆ ಮೀರಿದ ಅಲೌಕಿಕ ಅನುಭವಗಳನ್ನೂ ಸಕ್ರಮವಾಗಿ ಹೆಣೆದು ಪ್ರದರ್ಶಿಸಿದರೆ ಅದೊಂದು ಕಲೆಯಾಗುತ್ತದೆ. ಸೃಷ್ಟಿಯ ಈ ಎಲ್ಲಾ ಭಾವ ವೈವಿದ್ಯದ ಹಿಂದೆ ಕಲಾನಾಥನಾದ, ಸೃಷ್ಟೀಶನಾದ ಪರಮೇಶ್ವರನ ಆಶಯವಿದೆ. ಅವನ ಚೈತನ್ಯ ಕೆಲಸ ಮಾಡದಿದ್ದರೆ ಎಲ್ಲವೂ ಜಡ. ನಾವು, ನಮ್ಮನ್ನು ಹೊತ್ತ ಈ ಸೃಷ್ಟಿಯೆಲ್ಲವೂ ಜೀವಂತವಾಗಿ ಮೆರೆಯಬೇಕಾದರೆ ಅದರ ಹಿಂದೆ ಆ ನಟೇಶನ ನಿತ್ಯನರ್ತನವಿದೆ ಎಂಬುದು ಈ ದೇಶದ ಮಹರ್ಷಿಗಳ ದರ್ಶನ.
.
ಮಹಾದೇವನ ವಿಶ್ವನಾಟ್ಯ
ನಂದಿಕೇಶ್ವರ ವಿರಚಿತ ಅಭಿನಯ ದರ್ಪಣ ಎಂಬ ಗ್ರಂಥವು ಪರಶಿವನ ನಾಟ್ಯದ ವ್ಯಾಪ್ತಿಯನ್ನು ಹೀಗೆ ಚಿತ್ರಿಸುತ್ತದೆ-
ಆಂಗಿಕಂ ಭುವನಂ ಯಸ್ಯ ವಾಚಿಕಂ ಸರ್ವ ವಾಙ್ಮಯಮ್
ಆಹಾರ್ಯಂ ಚಂದ್ರತಾರಾದಿ ತಂ ನುಮಃ ಸಾತ್ವಿಕಂ ಶಿವಮ್||
ಒಂದು ನಾಟ್ಯದಲ್ಲಿ ನಾಲ್ಕು ಬಗೆಯ ಅಭಿನಯವಿರುತ್ತದೆ- ಆಂಗಿಕ-ಎಂದರೆ ದೇಹದ ಅಂಗಾಂಗಗಳ ಹಾವ, ಚಲನೆ. ವಾಚಿಕ- ಮಾತು, ಸಂಗೀತ ಇತ್ಯಾದಿ ಅಭಿನಯ, ಆಹಾರ್ಯ-ನಟನು ತೊಡುವ ವೇಷಭೂಷಗಳೇ ಮೊದಲಾದ ಅಲಂಕಾರಗಳು. ಸಾತ್ವಿಕ- ಯಾವ ರಸವನ್ನು ಅಭಿವ್ಯಕ್ತಗೊಳಿಸಲು ಈ ಎಲ್ಲಾ ಅಭಿನಯಗಳು ಹೊರಟಿವೆಯೋ ಆ ಪ್ರಧಾನವಾದ ರಸಭಾಗವೇ ಸಾತ್ವಿಕ ಎಂದಿರುವುದು. ಮೇಲಿನ ಶ್ಲೋಕದ ಅಭಿಪ್ರಾಯದಂತೆ- ಇಡೀ ಬ್ರಹ್ಮಾಂಡವೇ ಶಿವನ ಆಂಗಿಕ ಅಭಿನಯವಂತೆ. ಇಡೀ ವಿಶ್ವದ ಎಲ್ಲಾ ಕ್ರಿಯಾಕಲಾಪಗಳೂ ಅವನ ಆಂಗಿಕ ಅಭಿನಯದ ವ್ಯಾಪ್ತಿ. ಶಬ್ದಪ್ರಪಂಚವೆಲ್ಲವೂ ಅವನ ವಾಚಿಕ ಅಭಿನಯವಂತೆ. ಚಂದ್ರ- ನಕ್ಷತ್ರಗಳೆಲ್ಲವೂ ಅವನ ವಿಶ್ವನಾಟ್ಯದ ಅಲಂಕಾರವಂತೆ. ಅಂತಹ ರಸಸ್ವರೂಪಿಯಾದ ಪರಶಿವನಿಗೆ ನಮಸ್ಕಾರ ಎಂದಿದ್ದಾರೆ. ಅಂದರೆ ಅವನ ಆಶಯವೇ ಹೊರಪಡಬೇಕಾದ ಪ್ರಧಾನ ರಸ.

ಪಂಚಭೂತ ಪ್ರಭವೇ ನಮಃ
ಪಂಚಭೂತಗಳಿಂದ ಈ ಸೃಷ್ಟಿಯಾದುದು ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಷಯ. ಇದು ಮೇಲ್ನೋಟದ ವಿಷಯ.ಈ ಪಂಚಭೂತ ತತ್ತ್ವಗಳು ವಾಸ್ತವವಾಗಿ ಜಡವೇ. ಜೀವನದ ಮೂಲದಲ್ಲಿ ಬೆಳಗುತ್ತಿರುವ ದೇವ ದೇವನಿಂದಲೇ ಇವು ಚೈತನ್ಯವನ್ನು ಪಡೆದು ಕ್ರಿಯಾಶೀಲಗೊಳ್ಳುತ್ತವೆ. ಆ ಪಂಚ ಭೂತಗಳ ಹಿಂಬದಿಯ ಚೈತನ್ಯವೇ ನಟರಾಜ. ಅವನು ಪಂಚಭೂತಗಳ ಪ್ರಭುವಾಗಿ ಅವುಗಳಲ್ಲಿ ಅನುಪ್ರವೇಶ ಮಾಡಿದಾಗಲೇ ವಿಶ್ವವೆಲ್ಲವೂ ಚೈತನ್ಯಮಯ. ಅವನು ಅರ್ಧನಾರೀಶ್ವರನಾಗಿ ತನ್ನ ದೇಹದ ಎಡಪಾರ್ಶ್ವದಲ್ಲಿ ಪಾರ್ವತಿಯನ್ನು ಧರಿಸಿ ಅವಳಲ್ಲಿ ಒಂದಾಗಿ ಜಗತ್ತಿನ ಸೃಷ್ಟಿಯನ್ನೂ, ತನ್ನಲ್ಲಿ ಅವಳನ್ನೂ ಒಂದಾಗಿಸಿ ಜಗತ್ತಿನ ಲಯವನ್ನೂ ಮಾಡುತ್ತಿರುವ ದೇವನಾಗಿ ನಮ್ಮೆಲ್ಲರಲ್ಲೂ ಬೆಳಗುತ್ತಿರುವ ನಿತ್ಯಶಾಶ್ವತನಾದ ಪರಮಾತ್ಮಜ್ಯೋತಿಯೇ ಪರಮಶಿವ ನಟರಾಜಸ್ವಾಮಿ.

ಚಿದಂಬರ ನಟರಾಜ
ನಮ್ಮ ಶರೀರದಲ್ಲಿ ಹೃದಯಮಧ್ಯ ಸ್ಥಾನವನ್ನು ಚಿದಂಬರ ಎಂದು ಜ್ಞಾನಿಗಳು ಗುರುತಿಸಿದ್ದಾರೆ- ಚಿದಂಬರಂತು ಹೃನ್ಮಧ್ಯಂ ಎಂಬುದಾಗಿ. ಆ ಪ್ರದೇಶದಲ್ಲಿ ಪರಶಿವನು ನಟರಾಜನಾಗಿ ಶುದ್ಧಜ್ಞಾನಮಯವಾದ ಬೆಳಕಿನ ರೂಪವನ್ನು ತಳೆದು ನವ ವಿಧವಾದ ತಾಂಡವ ನೃತ್ಯವನ್ನು ಮಾಡುತ್ತಾ ಮಧ್ಯನಾಡಿಯಲ್ಲಿ ಪ್ರಕಾಶಮಯನಾಗಿ ಬೆಳಗುತ್ತಾನೆ ಎಂದು ಅವನನ್ನು ನಿತ್ಯದಲ್ಲೂ ದರ್ಶನ ಮಾಡುತ್ತಿರುವ ಯೋಗಿಗಳು ಸಾರುತ್ತಾರೆ. ಅಲ್ಲಿ ಪಂಚ ಸಭೆಯಲ್ಲಿ ಅವನ ನರ್ತನವು ನಡೆಯುತ್ತದೆ ಎಂದೂ ಆ ಪಂಚ ಸಭೆಯನ್ನು- ಚಿತ್ಸಭಾ, ದೇವಸಭಾ,ನಾಟ್ಯಸಭಾ, ಕನಕ ಸಭಾ ಮತ್ತು ರಾಜಸಭಾ ಎಂದು ಗುರುತಿಸಿದ್ದಾರೆ. ಅವನ ನವ ತಾಂಡವಗಳು ಕ್ರಮವಾಗಿ ಹೀಗಿವೆಯಂತೆ- ಆನಂದ ತಾಂಡವ, ಕಾಲೀ ನೃತ್ತ, ಗೌರೀ ತಾಂಡವ, ಮುನಿ ನೃತ್ತ, ಸಂಧ್ಯಾತಾಂಡವ, ಸಂಹಾರತಾಂಡವ,ತ್ರಿಪುರ ತಾಂಡವ, ಭುಜಂಗಲಲಿತ ತಾಂಡವ, ಭಿಕ್ಷಾಟನ ತಾಂಡವ. ಈ ಎಲ್ಲಾ ತಾಂಡವಗಳೂ ಭಕ್ತ ಜೀವಿಗಳ ಅನುಗ್ರಹಕ್ಕಾಗಿಯೇ ಸ್ವಾಮಿಯು ನಿತ್ಯನಿರಂತರವಾಗಿ ಮಾಡುತ್ತಿರುವನು. ಜೈಮಿನಿಯೇ ಮುಂತಾದ ಮಹರ್ಷಿಗಳು ತಮ್ಮ ಅಂತರಂಗದಲ್ಲಿ ಶಂಭುವಿನ ಆ ನವ ತಾಂಡವಗಳನ್ನೂ ನೋಡುತ್ತಾ ತಮ್ಮ ಅಸ್ತಿತ್ವವನ್ನೇ ಮರೆತು ಕೇವಲ ಆನಂದರಸದಲ್ಲಿ ತನ್ಮಯರಾದರು ಎಂದು ಜ್ಞಾನಿಗಳು ಆ ತಾಂಡವಗಳನ್ನು ಕೊಂಡಾಡುತ್ತಾರೆ.

ಸ್ವರೂಪಜ್ಞಾನ ಮೂಡಿಸುವ ಮೂರ್ತಿ
ಪ್ರಸಿದ್ಧವಾದ ನಟರಾಜ ಮೂರ್ತಿಯಲ್ಲಿ ನಾವು ಕಾಣುವ ಚಿತ್ರ ಹೀಗಿದೆ- ತನ್ನ ಸ್ವ ಸ್ವರೂಪವನ್ನು ಮರೆತು ಅಸುರನಾಗಿರುವ ಆಪಸ್ಮಾರನನ್ನು ತನ್ನ ಬಲಪಾದದಿಂದ ಮೆಟ್ಟಿದ್ದಾನೆ. ಮೆಟ್ಟಿರುವುದು ಮೂಲಾಧಾರ ಚಕ್ರದಿಂದ ಕಂಠಪರ್ಯಂತವಾದ ಪ್ರಕೃತಿಯ ಸ್ಥಾನವನ್ನು. ಮರೆವಿನ ಜಾಗವನ್ನು. ಆ ಜಾಗವನ್ನು ಮೆಟ್ಟಿದಾಗ ಆ ಅಸುರನಿಗೆ ತನ್ನ ಸ್ವರೂಪದ ಸ್ಮರಣೆ ಉಂಟಾಗಿ ಸಂತೋಷದಿಂದ ನಟರಾಜನನ್ನೇ ನೋಡುತ್ತಿದ್ದಾನೆ. ಈ ಚಿತ್ರವನ್ನು ನಟರಾಜಸ್ವಾಮಿಯ ಆನಂದ ತಾಂಡವದ ಚಿತ್ರಗಳಲ್ಲಿ ನಾವು ನೋಡಿ ಆನಂದಿಸಬಹುದು. ಒಂದು ದೃಷ್ಟಿಯಿಂದ ನಾವೆಲ್ಲರೂ ಅವನನ್ನು ಮರೆತ ಆಪಸ್ಮಾರರೇ. ಅವನ ಪಾವನಪಾದವು ನಮ್ಮಮೇಲೂ ಸೊಂಕಲಿ, ನಮ್ಮ ವಿಸ್ಮರಣೆಯೂ ನೀಗಿ ನಮ್ಮೆಲ್ಲರಲ್ಲೂ ಬೆಳಗುತ್ತಿರುವ ಆ ಸ್ವಾಮಿಯ ಸ್ಮರಣೆ ಉಂಟಾಗುವಂತೆ ಆಗಲಿ ಎಂದು ಈ ಮಹಾಶಿವರಾತ್ರಿಯ ಮಂಗಳ ಪರ್ವದಂದು ಅವನನ್ನು ಪ್ರಾರ್ಥಿಸೋಣ.

ಸೂಚನೆ : 14/2/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಶಿವರಾತ್ರಿಯಂದು ಜಾಗರಣೆಯೇಕೆ?

ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)



ಒಂದೇ ಪರತತ್ತ್ವವು ಮೂರಾಗಿ ತನ್ನನ್ನು ವಿಭಜಿಸಿಕೊಂಡು ಬ್ರಹ್ಮ-ವಿಷ್ಣು-ಮಹೇಶ್ವರರಾಯಿತು. ಈ ತ್ರಿಮೂರ್ತಿಗಳಲ್ಲಿ ಒಂದೊಂದು ಸಂದರ್ಭದಲ್ಲಿ ಒಬ್ಬೊಬ್ಬರಿಗೆ ಪ್ರಾಧಾನ್ಯ ಬರುವ ವಿಷಯವನ್ನು ಕಾಳಿದಾಸನು ತನ್ನ "ಕುಮಾರಸಂಭವ" ಮಹಾಕಾವ್ಯದಲ್ಲಿ ಹೇಳಿರುವನು. ಬ್ರಹ್ಮ-ವಿಷ್ಣುಗಳು ಶಿವನನ್ನು ಅರುಣಾಚಲದಲ್ಲಿ ಪೂಜಿಸಿದ ದಿನವೇ ಈ ಮಹಾಶಿವರಾತ್ರಿ. ಇಂದಿನ ರಾತ್ರಿ ಜಾಗರಣೆ ಮಾಡಿ ಶಿವನನ್ನು ಹೃತ್ಪೂರ್ವಕವಾಗಿ ಪೂಜಿಸುವವರಿಗೆ ಇಡೀ ವರ್ಷ ಶಿವಪೂಜೆ ಮಾಡಿದ ಫಲವು ದೊರೆಯುವುದೆಂದು ಮಹಾಶಿವನೇ ವರ ಕೊಟ್ಟಿದ್ದಾನೆಂದಿದೆ.

ಭಾರತೀಯರ ಮಹಾಪರ್ವಗಳಲ್ಲಿ ಒಂದಾದ ಮಹಾಶಿವರಾತ್ರಿಯನ್ನು ಮಾಘ ಕೃಷ್ಣಚತುರ್ದಶಿಯಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ, ದೇವತಾಸಂಬಂಧಿಯಾದ ಪೂಜಾದಿಗಳು ರಾತ್ರಿಯ ಹೊತ್ತು ನಿಷಿದ್ಧವಾಗಿದ್ದರೂ, ಶಿವರಾತ್ರಿ ಮಾತ್ರ ರಾತ್ರಿಯೇ ಆಚರಿಸಲ್ಪಡುವಂತಹುದು - ಎಂಬುದು ವಿಶೇಷ.

ಬೇರೆ ಬೇರೆ ವಿಶೇಷ ಹಬ್ಬಗಳಲ್ಲಿ ಆಯಾ ದೇವತೆಗಳಿಗೆ ಪ್ರಿಯವಾದ ತಿಂಡಿ ತಿನಿಸುಗಳನ್ನು ನೈವೇದ್ಯ ಮಾಡಿ ನಾವುಗಳು ಅವನ್ನು ಸ್ವೀಕರಿಸುವುದಾಗುತ್ತದೆ. ಆದರೆ ಶಿವರಾತ್ರಿಯಾದರೋ - ಏಕಾದಶಿಯಂತೆ - ಉಪವಾಸದ ಹಬ್ಬ. ಉಪವಾಸ-ಜಾಗರಣೆ – ಈ ಎರಡು ಶಿವರಾತ್ರಿಯನ್ನು ಶಿವಮಯವಾಗಿಸುವ ಸಾಧನಗಳು.

ಹಬ್ಬವೋ ವ್ರತವೋ? 

"ಶಾಸ್ತ್ರೋದಿತೋ ಹಿ ನಿಯಮೋ ವ್ರತಂ ತಚ್ಚ ತಪೋ ಮತಮ್" – ಎಂಬುದು ವ್ರತದ ಶಾಸ್ತ್ರೀಯವಾದ ಲಕ್ಷಣ. ವ್ರತವೆಂಬುದು ನಿಯಮಬದ್ಧವಾಗಿಯೂ ತಪೋರೂಪವಾಗಿಯೂ ಆಗಿದ್ದು, ನಮ್ಮನ್ನು ಪಾವನಗೊಳಿಸುತ್ತವೆ. ಹಬ್ಬಗಳಿಗೂ ನಿಯಮಗಳು ಅನ್ವಯವಾಗುತ್ತವಾದರೂ, ವ್ರತದಲ್ಲಿ ಉಪವಾಸ, ಕ್ರಿಯಾಕಲಾಪಗಳು, ನಿಯಮಗಳು ಹೆಚ್ಚಾಗಿರುತ್ತವೆ. ಶಿವರಾತ್ರಿಯಲ್ಲಿ ಉಪವಾಸ-ಜಾಗರಣೆ-ಪೂಜಾಧ್ಯಾನಾದಿಗಳು ಬಹು ಮುಖ್ಯವಾದ್ದರಿಂದ, ಇದೊಂದು ವ್ರತವೇ ಸರಿ. "ವ್ರತರಾಜ" ಎಂದೂ ಇದಕ್ಕೆ ಹೆಸರು.

ಶಿವರಾತ್ರಿಯ ಮಾಹಾತ್ಮ್ಯವನ್ನು ಹೇಳುವ ಪ್ರಸಿದ್ಧಕಥೆಯೆಂದರೆ ಬೇಡರ ಕಣ್ಣಪ್ಪನದು. ಶಿವರಾತ್ರಿಯಂದು ತಿಳಿದೋ ತಿಳಿಯದೆಯೋ ಶಿವನಿಗೆ ಬಿಲ್ವಪತ್ರವನ್ನರ್ಪಿಸುವುದು, ಜಲಾಭಿಷೇಕ ಮಾಡುವುದು, ಜಾಗರಣೆ ಮಾಡುವುದು – ಇವೆಲ್ಲ ಆದಲ್ಲಿ ಅದಕ್ಕೆ ಮಹಾಫಲವುಂಟು, ಎಂದು ಈ ಸನ್ನಿವೇಶದಲ್ಲಿ ವರ್ಣಿಸಿದೆ. ಶಂಕರಭಗವತ್ಪಾದರ ಶಿವಾನಂದಲಹರಿಯಲ್ಲಿರುವ "ಮಾರ್ಗಾವರ್ತಿತ-ಪಾದುಕಾ" ಎಂಬ ಶ್ಲೋಕವು ಇದನ್ನು ಬಣ್ಣಿಸುತ್ತದೆ: ಹಾದಿಯಲ್ಲಿ ನಡೆದು ನಡೆದು ಸವೆದ ಪಾದುಕೆಯೇ ಶಿವನ ದೇಹದ ಕೂರ್ಚ(ಎಂದರೆ ಒರೆಸಲು ಬಳಸುವ ಒಂದು ಸಾಧನ)ವಾಯಿತು! ಬಾಯಿಮುಕ್ಕಳಿಸಿದ ನೀರು ಪಶುಪತಿಯ ಅಭಿಷೇಕಜಲವಾಯಿತು! ಕೊಂಚ ಜಗಿದ ಮಾಂಸದ ತುತ್ತೇ ನಿವೇದನವಾಗಿಹೋಯಿತು! ಭಕ್ತಿಯೆಂಬುದು ಬಲವಾಗಿದ್ದರೆ, ವನಚರನೂ ಭಕ್ತೋತ್ತಮನಾಗಿಬಿಡುವನು! – ಎಂಬುದು ಈ ಶ್ಲೋಕದ ತಾತ್ಪರ್ಯ.

ಇಂತಹ ಪರಮಭಾಗವತರ ಕಥೆಯನ್ನು ಕೇಳಿಕೊಂಡು, "ಶಾಸ್ತ್ರವಿಹಿತವಾದ ಆಚರಣೆಗಳನ್ನು ಮಾಡದಿದ್ದರೂ ಆಯಿತು" - ಎಂದು ನಾವು ಎಣಿಸಬಾರದು! ಭಕ್ತೋತ್ತಮರಲ್ಲಿ ಗೂಢವಾಗಿ ಕೂಡಿಟ್ಟಿರುವ ಗಾಢವಾದ ತಪೋಧನಕ್ಕೆ ಒಂದು ಸಣ್ಣ ಪ್ರೇರಣೆ ಸಾಕು, ಅವರನ್ನು ಆಧ್ಯಾತ್ಮಿಕ ಔನ್ನತ್ಯಕ್ಕೆ ಕರೆದೊಯ್ಯಲು! ಆದರೆ ನಮ್ಮಂತಹ ಸಾಧಾರಣರಿಗೆ ಕಟ್ಟುಕಟ್ಟಳೆಗಳೂ ಸಾಧನೆಯೂ ಅವಶ್ಯ.  


ಶಿವರಾತ್ರಿಯಂದು ನಾವು ಏನೇನು ಮಾಡಬೇಕು? 

ಎಷ್ಟೇ ಆಗಲಿ, ಶಿವನು ಯೋಗಿರಾಜ, ಧ್ಯಾನಪ್ರಿಯ. ಆದುದರಿಂದಲೇ ಅವನನ್ನು ಕುರಿತು ಧ್ಯಾನ ಮಾಡುವುದು ಪ್ರಶಸ್ತ. ಆತ್ಮಗುಣಗಳೊಂದಿಗೆ, ಎಲ್ಲ ವ್ರತಗಳಿಗೆ ಸಲ್ಲುವ ನಿಯಮಗಳನ್ನು ಪಾಲಿಸುತ್ತಾ ಮಾನಸಪೂಜೆಯನ್ನು ಮಾಡುವಂಥದ್ದು ಉತ್ತಮ. ಆ ಅಂತರಂಗಪೂಜೆಯ ಅಭಿವ್ಯಕ್ತಿಯೇ ಬಾಹ್ಯಪೂಜೆ. ಅದನ್ನು ಸಾಂಗವಾಗಿ ಮಾಡುವ ಪೂಜಾಕಲ್ಪದಲ್ಲಿ ಗೋಶೃಂಗದಿಂದ ಅಭಿಷೇಕಪ್ರಿಯನಾದ ಶಿವನಿಗೆ ಅಭಿಷೇಕಮಾಡಿ, ಬಿಲ್ವಪತ್ರೆ, ತುಂಬೇಹೂಗಳಿಂದ ಪೂಜಿಸುವುದರಿಂದ ಅವನನ್ನು ವಿಶೇಷವಾಗಿ ಸಂಪ್ರೀತಿಗೊಳಿಸಬಹುದು. "ಜಪಾಕುಸುಮ, ಎಂದರೆ ಕೆಂಪುದಾಸವಾಳ, ಕೂಡ ಅವನಿಗೆ ಅತ್ಯಂತ ಪ್ರಿಯವಾದದ್ದು" - ಎಂದು ಶ್ರೀರಂಗಮಹಾಗುರುಗಳು ಹೇಳಿದ್ದರು.

ಇನ್ನು ಇದನ್ನಾಚರಿಸಲು, ದೇಹ-ಮನಸ್ಸುಗಳು ಹೇಗಿರಬೇಕು? ಚೆನ್ನಾಗಿ ತಿಂದು, ಹೊಟ್ಟೆಭಾರವಾದರೆ ಧ್ಯಾನ-ಪೂಜೆಗಳು ಸಾಧ್ಯವಾಗುವುವಲ್ಲ. ಆ ಕಾರಣಕ್ಕೇ ಉಪವಾಸವನ್ನು ಉತ್ತಮಕಲ್ಪವಾಗಿ ವಿಧಿಸಿರುವುದು. ಪೂರ್ಣ ಉಪವಾಸ ಸಾಧ್ಯವಿಲ್ಲದಿದ್ದರೆ, ಒಪ್ಪೊತ್ತಾದರೂ ಉಪವಾಸ ಮಾಡುವುದು, ಅದೂ ಸಾಧ್ಯವಿಲ್ಲದಿದ್ದರೆ ಗುರುವಾದ, ಎಂದರೆ ಭಾರವೆನಿಸುವ, ಆಹಾರವನ್ನು (ಎಂದರೆ ಕರಿದ ಪದಾರ್ಥಗಳು ಇತ್ಯಾದಿ) ವರ್ಜ್ಯಮಾಡಿ, ಲಘುವಾದ ಆಹಾರವನ್ನು ಸೇವಿಸುವುದು ವಿಹಿತವಾಗಿದೆ.

ಇನ್ನು ಜಾಗರಣೆಯ ವಿಷಯ. "ಶಿವದರುಶನ ನಮಗಾಯಿತು, ಕೇಳೇ, ಶಿವರಾತ್ರಿಯ ಜಾಗರಣೆ" – ಎಂದು ದಾಸಶ್ರೇಷ್ಠರೂ ಭಾಗವತೋತ್ತಮರೂ ಆದ ಪುರಂದರದಾಸರು ಕೊಂಡಾಡಿದ್ದಾರೆ. ಈ ಪರ್ವದಲ್ಲಿ ಧ್ಯಾನಾದಿಗಳಿಗೆ ಅತ್ಯಂತ ಪ್ರಶಸ್ತವಾದ ಕಾಲವೆಂದರೆ ರಾತ್ರಿಯೇ. ಅಮೂಲ್ಯವಾದ ಈ ಕಾಲವು ನಿದ್ರೆಯಿಂದಾಗಿ ಪೋಲಾಗದಿರಲೆಂದೇ ಜಾಗರಣೆಯ ಸಾಧನವನ್ನು ವಿಧಿಸಿರುವುದು. ಭಗವಂತನ ಧ್ಯಾನ-ಆರಾಧನೆ-ಸ್ಮರಣೆ ಮಾಡಿಕೊಳ್ಳುವುದನ್ನೇ ಜಾಗರಣೆ ಎನ್ನುವುದು.

ದೈವಭಕ್ತಿಯನ್ನು ಈಗ ಕಂಡುಕೊಳ್ಳುತ್ತಿರುವ ಕೆಲವರು, "ಜಾಗರಣೆ ಮಾಡಿದರೆ ಪುಣ್ಯ" ಎನ್ನುವುದನ್ನು "ರಾತ್ರಿಯಿಡೀ ಎಚ್ಚರವಾಗಿದ್ದರೆ ಪುಣ್ಯ" ಎಂದು ತಿಳಿಯುವ ತಪ್ಪು ಮಾಡುವುದುಂಟು. ಕೋಸಂಬರಿ-ಪಾನಕ ಇತ್ಯಾದಿಗಳನ್ನೇ ಹೊಟ್ಟೆ ತುಂಬ ತಿಂದು, ಸಂಗೀತವನ್ನು ಜೋರಾಗಿ ಹಾಕಿಕೊಂಡಿದ್ದು, ಇಸ್ಪೀಟು, ಇತ್ಯಾದಿಗಳನ್ನು ಆಡುತ್ತಾ ರಾತ್ರಿಯಿಡೀ ಎದ್ದಿರುವರು: ಇದನ್ನು ಜಾಗರಣೆಯೆನ್ನಲಾಗದು. ರಾತ್ರಿಯಿಡೀ ಎದ್ದಿರಲು ಸಾಧ್ಯವಾಗದಿದ್ದರೂ, ರಾತ್ರಿಯ ಒಂದೆರಡು ಯಾಮಗಳಾದರೂ ಭಗವಂತನನ್ನು ಕೇಂದ್ರದಲ್ಲಿಟ್ಟು, ಪೂಜೆ-ಧ್ಯಾನಗಳನ್ನು ಮಾಡುವುದು, ಸ್ತ್ರೋತ್ರಗಳನ್ನು ಹೇಳಿಕೊಳ್ಳುವುದು – ಇಂಥದ್ದನ್ನು ಮಾಡುವುದು ಉತ್ತಮ.

"ಗಾಳಿ ಬಂದಾಗ ತೂರಿಕೋ" ಎಂಬ ಗಾದೆಯನ್ನು ನೀವು ಕೇಳಿರಬಹುದು. ಏನು ಹಾಗೆಂದರೆ? ಧಾನ್ಯಗಳನ್ನು ಕಟಾವು ಮಾಡಿ ಶುದ್ಧೀಕರಣ ಮಾಡುತ್ತಾರಷ್ಟೆ? ಹೊಟ್ಟು, ಕಸ-ಕಡ್ಡಿಗಳನ್ನು ಧಾನ್ಯದಿಂದ ಬೇರ್ಪಡಿಸಲು ಮೇಲಿನಿಂದ ಮೊರದಲ್ಲಿ ಅವನ್ನು ನಿಧಾನವಾಗಿ ಕೆಳಗೆ ತೂರುತ್ತಾರೆ. ಆಗ ಗಾಳಿಯೂ ಬೀಸಿದರೆ ಕಸ-ಕಡ್ಡಿ ಸುಲಭವಾಗಿ ಬೇರ್ಪಡುತ್ತದೆ. ಗಾಳಿ ಬೀಸುತ್ತಿದ್ದಾಗ ತೂರಿಕೊಂಡರೆ, ಕಡಿಮೆ ಪ್ರಯತ್ನದಿಂದಲೇ ಹೆಚ್ಚು ಫಲ ದೊರೆಯುತ್ತದೆ. ಇದೇ ರೀತಿ "ಧ್ಯಾನಕ್ಕೆ ಪೋಷಕವಾದ ಇಂತಹ ಸಂಧಿಕಾಲಗಳನ್ನು ಸರಿಯಾಗಿ ಬಳಸಿಕೊಂಡಲ್ಲಿ ನಮ್ಮ ಆಧ್ಯಾತ್ಮಿಕ ಪ್ರಗತಿಯು ಸುಲಭವಾಗಿಯೂ ಹೆಚ್ಚಾಗಿಯೂ ಆಗುತ್ತದೆ", ಎಂಬುದನ್ನು ಶ್ರೀರಂಗಮಹಾಗುರುಗಳು ಒತ್ತಿ ಹೇಳಿದ್ದರು.  

ಸಂಭ್ರಮದ ಉತ್ಸವ ಎನ್ನುವುದಕ್ಕಿಂತಲೂ, ಈ ಪರ್ವ ಆಂತರಂಗಿಕವಾದ ಉತ್-ಸವ ("ಮೇಲ್ಮುಖವಾದ ಯಜ್ಞ"): ಒಳಗೆ ಉನ್ನತವಾದ ಸ್ಥಿತಿಗೆ ಏರಿಸುವಂಥದ್ದು. ಇದನ್ನು ತಿಳಿದು ಆಚರಿಸಿದಾಗ, ಅಮೂಲ್ಯವಾದ ಈ ಕಾಲ ಅಮೋಘವಾಗುತ್ತದಲ್ಲವೇ?

ಸೂಚನೆ : 14/2/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Tuesday, February 10, 2026

ಪ್ರಶ್ನೋತ್ತರ ರತ್ನಮಾಲಿಕೆ 52 (Prasnottara Ratnamalike 52)


ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ - ೫೨ - ಮಿತ್ರನಾರು ?

ಉ. ಪಾಪವನ್ನು ನಿವಾರಿಸುವವ

ಈ ಪ್ರಶ್ನೋತ್ತರದಲ್ಲಿ 'ಪಾಪ ಎಂದರೇನು?' ಎಂಬ ವಿಷಯವನ್ನು ವಿಶೇಷವಾಗಿ ಚಿಂತಿಸಬೇಕಾದ ಅಗತ್ಯ ಇದೆ. ಆಗ ಅಂತಹ ಪಾಪವನ್ನು ನಿವಾರಿಸುವವನು ಹೇಗೆ ಮಿತ್ರನಾಗುತ್ತಾನೆ? ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ಆ ಚಿಂತನೆಗೆ ಈ ಉತ್ತರ ಮೀಸಲಾಗಿದೆ.

ಪಾಪ- ಪುಣ್ಯ, ಸತ್ಯ- ಅಸತ್ಯ, ಋತ-ಅನೃತ ಹೀಗೆ ನಾವು ಈ ವಿರುದ್ಧ ಪದಗಳನ್ನು ಗಮನಿಸಿದ್ದೇವೆ. ಇಲ್ಲಿ ಒಂದು ಅನುಕೂಲಕರವಾದ ಸಂಗತಿಯನ್ನು ಹೇಳುವ ಪದವಾದರೆ, ಇನ್ನೊಂದು ಅದಕ್ಕೆ ವಿರೋಧವಾದ ಸಂಗತಿಯನ್ನು ಹೇಳುವ ಪದವಾಗಿದೆ. ಪುಣ್ಯ ಎಂದರೆ ಅನುಕೂಲಕರವಾದರೆ ಪಾಪ ಎಂಬುದು ಪ್ರತಿಕೂಲಸಂಗತಿ ಎಂದರ್ಥ. ನಾವಿಲ್ಲಿ ವಿಚಾರಿಸಬೇಕಾಗಿದ್ದು ಯಾವುದು ನಿಜವಾಗಿಯೂ ಪುಣ್ಯ? ಯಾವುದು ನಿಜವಾಗಿಯೂ ಪಾಪ? ಎಂದು. ಅದಕ್ಕೆ ಮೊದಲು, ಅದು ಹೇಗೆ ಪುಣ್ಯ? ಹೇಗೆ ಪಾಪ? ಎಂಬುದನ್ನೂ ತಿಳಿಯಬೇಕು. ಉದಾಹರಣೆಗೆ 'ಪುಣ್ಯ-ಅಪುಣ್ಯ-ವಿವರ್ಜಿತ-ಪಂಥಃ' ಎಂಬುದಾಗಿ ಶ್ರೀಶಂಕರ ಭಗವತ್ಪಾದರು ತಮ್ಮ ಮೋಹಮುದ್ಗರ ಸ್ತೋತ್ರದಲ್ಲಿ ಹೀಗೆ ಹೇಳುತ್ತಾರೆ. ಅಂದರೆ ನಮ್ಮ ನಡೆ ಪುಣ್ಯವಾಗಿಯೂ ಅಪುಣ್ಯವಾಗಿಯೂ ಇರಬಾರದು. ಸಾಮಾನ್ಯವಾಗಿ ಲೋಕದಲ್ಲಿ ಪುಣ್ಯಕ್ಕಾಗಿಯೇ ಎಲ್ಲಾ ಕಾರ್ಯವನ್ನು ಮಾಡುವುದನ್ನು ಕಾಣುತ್ತೇವೆ.  ಪುಣ್ಯ ಬೇಡವೇ? ಪಾಪು ಬೇಡ ಎಂಬ ಸಂಗತಿ ನಿಜ. ಆದರೆ ಪುಣ್ಯವೂ ಬೇಡ ಎಂಬ ಸಂಗತಿ ಅತ್ಯಂತ ವಿಸ್ಮಯ ಎಂಬುದಾಗಿ ತಿಳಿಯಬೇಕಾಗುತ್ತದೆ. ಯಾವುದಕ್ಕೂ ಅಂಟಿಕೊಳ್ಳದ ಜೀವನ ನಮ್ಮದಾಗಬೇಕು ಎಂಬುದನ್ನು ನಾವು ತಿಳಿಯಬೇಕಾಗಿದೆ. ಅಂದರೆ ನಮ್ಮ ಜೀವನದ ಉದ್ದೇಶ ಹೇಗಿದ್ದಾಗ? ಇವು ಹೇಯವಾಗುತ್ತವೆ ಎಂಬುದು.

'ಪಾತಿ ರಕ್ಷತಿ ಅಸ್ಮಾತ್ ಆತ್ಮಾನಮ್ ಇತಿ' ಆತ್ಮನನ್ನು ಯಾವುದರಿಂದ ರಕ್ಷಿಸಿಕೊಳ್ಳಬೇಕಾಗುತ್ತದೆಯೋ ಅದನ್ನು 'ಪಾಪ' ಎಂದು ಕರೆಯುತ್ತಾರೆ. ಅಂದರೆ ನಿಷಿದ್ಧವಾದುದನ್ನು ಮಾಡುವುದರಿಂದ, ವಿಹಿತವಾದುದನ್ನು ಬಿಡುವುದರಿಂದ ಮನುಷ್ಯನು ಯಾವುದರಿಂದ ಕ್ಲೇಶವನ್ನು ಅನುಭವಿಸುತ್ತಾನೋ ಅದನ್ನು ಪಾಪ ಎನ್ನುತ್ತಾರೆ. ಯಾವುದರಿಂದ ನರಕವು ನಿಶ್ಚಿತವೋ ಅದೇ ಪಾಪ ಎನ್ನಬಹುದು. ಮಾನವನ ಜೀವನವು ಮೋಕ್ಷಕ್ಕೆ ಇರುವಂತಹದ್ದು ಎಂಬುದು ಎಲ್ಲರಿಗೂ ತಿಳಿದ ವಿಷಯ. ಅದಕ್ಕೆ ಆತ್ಮೋನ್ನತಿ ಎಂದೂ ಕರೆಯುತ್ತಾರೆ. ಇಂತಹ ಆತ್ಮೋನ್ನತಿಯನ್ನು ಹಾಳುಗೆಡಹುವುದೇ ಪಾಪ. ಈ ಪಾಪದ ಬಗೆಗೆ ಶ್ರೀರಂಗ ಮಹಾಗುರುಗಳು ಹೇಳಿದ ಮಾತು ಹೀಗಿದೆ - "ಪ್ರತಿಯೊಂದು ಪದವೂ ಹುಟ್ಟುವಾಗ ಅರ್ಥದೊಡನೆ ಕೂಡಿತ್ತು. ಆದರೆ ಕೈದಾಟಿ ಬಂದಾಗ ಅದರ ಅರ್ಥ ಮರೆಯಾಯಿತು. ಅದರ ಮೂಲದೊಡನೆ ಉಳಿಯಲಿಲ್ಲ. ಸನ್ಮಾರ್ಗದಿಂದ ಜಾರಿತು. ಮಹರ್ಷಿಗಳು ಅಂತರಂಗದ ಮನೋಭೂಮಿಕೆಯಲ್ಲಿ ಕಂಡ ಋತ-ಸತ್ಯಕ್ಕೆ ಅವಿರೋಧವಾಗಿ ನಡೆಯುವ ಮಾರ್ಗವೇ ಸನ್ಮಾರ್ಗ. ಇದಕ್ಕೆ ಹೊಂದುವ ರೀತಿಯಲ್ಲಿ ನಡೆದರೆ ಅದೇ ಸತ್ಕೃತ. ಇದಕ್ಕೆ ವಿರೋಧವಾಗಿದ್ದರೆ ದುಷ್ಕೃತ. ಪಾಪಕ್ಕೆ ಪರ್ಯಾಯಪದಗಳೇ ಇವುಗಳು 'ಅಂಹೋ-ದುರಿತ-ದುಷ್ಕೃತಂ' ದುಷ್ಕೃತ ಎಂದರೆ ಮಾಡಬಾರದ್ದು, ಹೇಳಬಾರದ್ದು. ಹೇಳಬೇಕಾದ್ದನ್ನೇ ಹೇಳಲು ಹೊರಟು ಹೇಳಬೇಕಾದದ್ದು ಹಿಂದೆ ಉಳಿಯಿತು. ಹೇಳಬಾರದ್ದು ಹೊರಗೆ ಬಂದಿತು. ಒಳಗಿರುವ ರಾಗ ಬೇರೆ. ಹೊರಗೆ ಬರುವಾಗ ವಿರಾಗವಾಯಿತು. ಆತ್ಮದಲ್ಲಿದ್ದಂತೆ ವ್ಯವಹರಿಸಬೇಕು" ಎಂದು. ಇಂತಹ ಪಾಪವನ್ನು ಮಾಡದಂತೆ ಎಚ್ಚರಿಸುವವನೇ 'ಮಿತ್ರ' ಎಂದು ಕರೆಯಬೇಕು ಎಂಬುದು ಈ ಉತ್ತರದಲ್ಲಿದೆ.

ಸೂಚನೆ : 8/2/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ವ್ಯಾಸ ವೀಕ್ಷಿತ 174 ಶಿಶುವಿಗೆ ಜರಾಸಂಧನೆಂಬ ನಾಮಕರಣ ( Vyaasa Vikshita 174)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


"ಅರ್ಚಿಸುವವರಿಗೆ ಒಳ್ಳೆಯದನ್ನೇ ಮಾಡುವ ಗೃಹದೇವಿಯಾಗಿಯೇ ಸೃಷ್ಟಿಸಲ್ಪಟ್ಟ ಜರಾ ಎಂಬ ಹೆಸರಿನ ರಾಕ್ಷಸಿ, ನಾನು" – ಎಂದು ತನ್ನ ಪರಿಚಯವನ್ನು ಹೇಳಿಕೊಂಡ ಆ ರಾಕ್ಷಸಿಯು, ತನ್ನ ಮಾತನ್ನು ಮುಂದುವರಿಸಿ ರಾಜನಿಗೆ ಹೀಗೆ ಹೇಳಿದಳು:

"ಧಾರ್ಮಿಕನೇ, ನಿನ್ನ ಪುತ್ರನ ಎರಡು ಶಕಲಗಳನ್ನು, ಎಂದರೆ ಎರಡು ತುಂಡುಗಳನ್ನು, ನಾನು ಕಂಡೆನಯ್ಯಾ! ಅವೆರಡನ್ನೂ ಸೇರಿಸಿಬಿಟ್ಟೆ! ಅದೃಷ್ಟವಶಾತ್ ಅದೊಂದು ಕುಮಾರನಾಯಿತು! ಅದೆಲ್ಲಾ ನಿನ್ನ ಭಾಗ್ಯದಿಂದಲೇ ಆದುದು, ಮಹಾರಾಜ. ನಾನು ಕೇವಲ ನಿಮಿತ್ತ-ಮಾತ್ರವಷ್ಟೆ.

ನೋಡು, ಮೇರು-ಪರ್ವತವನ್ನೇ ತಿಂದುಬಿಡಲು ಸಾಮರ್ಥ್ಯವುಳ್ಳವಳು, ನಾನು! ಹಾಗಿರಲು, ನಿನ್ನ ಮಗುವನ್ನು ತಿಂದುಬಿಡಲಾರೆನೇ? ನೀ ಮಾಡುತ್ತಿರುವ ಗೃಹ-ಸಂಪೂಜನದಿಂದ ಆದ ತುಷ್ಟಿಯಿಂದಲೇ, ಎಂದರೆ ಸಂತೋಷದಿಂದಲೇ, ನಿನಗೇ ಒಪ್ಪಿಸಿಹೋಗುತ್ತಿದ್ದೇನೆ, ಈ ಶಿಶುವನ್ನು. ತೆಗೆದುಕೋ, ಸಾಕಿಕೋ" – ಎಂದಳು.

ಇದನ್ನೆಲ್ಲಾ ಹೇಳುತ್ತಾ ಕೃಷ್ಣನು ತನ್ನ ಮಾತನ್ನು ಮುಂದುವರೆಸಿದನು. "ಯುಧಿಷ್ಠಿರಾ, ಮುಂದೇನಾಯಿತು ಗೊತ್ತೇ? ಹೀಗೆ ಹೇಳಿದವಳೇ, ಅವಳು ಅಲ್ಲಿಯೇ ಅಂತರ್ಧಾನ ಹೊಂದಿದಳು! ಮತ್ತು ಆ ರಾಜನೂ ಆ ಶಿಶುವನ್ನು ತೆಗೆದುಕೊಂಡು ತನ್ನ ಅರಮನೆಯನ್ನು ಹೊಕ್ಕನು.

ಬಳಿಕ, ಆ ಬಾಲಕನಿಗೆ ಯಾವ ಕರ್ಮಗಳನ್ನು ನೆರವೇರಿಸಬೇಕೋ ಅವೆಲ್ಲವನ್ನೂ ಆಚರಿಸಿದನು. ಅಷ್ಟೇ ಅಲ್ಲದೆ, ಮಗಧ-ರಾಜ್ಯದಲ್ಲಿ ಆ ರಾಕ್ಷಸಿಯ ಮಹೋತ್ಸವವನ್ನು ಆಚರಿಸಬೇಕೆಂಬ ಆಜ್ಞೆಯನ್ನೂ ಸಹ ಮಾಡಿದನು.

ಪಿತಾಮಹನಿಗೆ ಸಮನಾದ, ಎಂದರೆ ಬ್ರಹ್ಮನಿಗೆ ಸಮನಾದ, ಈ ತಂದೆಯೂ, ಅರ್ಥಾತ್ ಬೃಹದ್ರಥನೂ, ನಾಮಕರಣವನ್ನು ನೆರವೇರಿಸಿದನು: "ಜರೆಯೆಂಬ ಹೆಸರಿನವಳಿಂದ ಈ ಶಿಶುವು ಸಂಧಿಸಲ್ಪಟ್ಟದ್ದಾದ್ದರಿಂದ, ಎಂದರೆ ಜೋಡಿಸಲ್ಪಟ್ಟವನಾದ್ದರಿಂದ, ಈತನ ಹೆಸರು ಜರಾಸಂಧನೆಂದಾಗುತ್ತದೆ" - ಎಂದನು.

ಬಳಿಕ ಮಗಧ-ರಾಜನ ಆ ಪುತ್ರನು ಮಹಾ-ತೇಜಸ್ವಿಯಾಗಿ ಬೆಳೆಯಹತ್ತಿದನು. ಅವನ ಆ ಆಕಾರವೇನು, ಆ ಬಲವೇನು! ಆಹುತಿಯನ್ನು ಸಮರ್ಪಿಸಿದ ಅಗ್ನಿಯು ಹೇಗೆ ಹೆಚ್ಚು ಹೆಚ್ಚಾಗಿ ಜ್ವಲಿಸುವುದೋ ಹಾಗೆ ಬೆಳೆದನು, ಅವನು. ತಂದೆ-ತಾಯಿಗಳಿಗೆ ಅಧಿಕ-ಸಂತೋಷವನ್ನುಂಟುಮಾಡುತ್ತಾ, ಶುಕ್ಲ-ಪಕ್ಷದಲ್ಲಿ ಚಂದ್ರನು ಹೇಗೆ ಬೆಳೆಯುವನೋ ಹಾಗೆ ಬೆಳೆದನು.

ಕೆಲ ಕಾಲ ಕಳೆಯಿತು. ಮಹಾ-ತಪಸ್ವಿಯೂ ಪೂಜ್ಯನೂ ಆದ ಚಂಡಕೌಶಿಕ-ಮುನಿಯು ಮತ್ತೆ ಮಗಧ-ದೇಶದಲ್ಲಿ ಸಂಚರಿಸುತ್ತಾ ಬಂದನು. ಆತನ ಆಗಮನದಿಂದ ಬೃಹದ್ರಥನು ಸಂತೋಷಗೊಂಡನು. ಅಮಾತ್ಯ-ಪುರೋಹಿತರೊಂದಿಗೂ ಪತ್ನೀ-ಪುತ್ರರೊಂದಿಗೂ ಆ ಮುನಿಯನ್ನು ಕಾಣಲು ಬಂದನು. ಪಾದ್ಯ-ಅರ್ಘ್ಯ-ಆಚಮನೀಯಗಳನ್ನಿತ್ತು ಆದರಿಸಿದನು. ತನ್ನ ರಾಜ್ಯವನ್ನು ಆ ಮುನಿಗೆ ಸಮರ್ಪಣೆ ಮಾಡಿದನು. ರಾಜ್ಯದೊಂದಿಗೆ ತನ್ನ ಪುತ್ರನನ್ನೂ ಸಮರ್ಪಿಸಿದನು.

ಪೂಜ್ಯನಾದ ಆ ಋಷಿಯೂ ರಾಜನು ಮಾಡಿದ ಆ ಪೂಜೆಯನ್ನು ಸ್ವೀಕರಿಸಿದನು. ಹಾಗೂ ಬಹಳ ಸಂತೋಷಗೊಂಡ ಅಂತಃಕರಣವುಳ್ಳವನಾಗಿ, ಆ ಮಾಗಧರಾಜನಿಗೆ ಹೀಗೆ ಹೇಳಿದನು:

"ರಾಜನೇ, ನನ್ನ ದಿವ್ಯ-ಚಕ್ಷುಸ್ಸಿಗೆ, ಎಂದರೆ ಜ್ಞಾನ-ನೇತ್ರಕ್ಕೆ, ಇದೆಲ್ಲವೂ ಗೋಚರವಾಗಿಯೇ ಇದೆ! ನಿನ್ನ ಪುತ್ರನು ಎಂತಹವನಾಗುವನು? – ಎಂಬುದನ್ನು ಕೇಳು, ರಾಜನೇ. ಈತನ ರೂಪವೆಂತಹುದು, ಸತ್ತ್ವವೆಂತಹುದು, ಬಲವೆಂತಹುದು, ಊರ್ಜೆಯೆಂತಹುದು – ಎಲ್ಲವನ್ನೂ ನಾ ಬಲ್ಲೆ. ಈ ನಿನ್ನ ಮಗನು ಸಂಪತ್ತಿನೊಂದಿಗೇ ಜನಿಸಿರುವನು. ಇದರಲ್ಲಿ ಸಂಶಯವಿಲ್ಲ. ತನ್ನ ಪರಾಕ್ರಮದಿಂದ ಎಲ್ಲವನ್ನೂ ಸಾಧಿಸುವನು. ವೀರ್ಯಶಾಲಿಯಾದ ಈತನಿಗೆ ಮತ್ತಾವ ರಾಜರೂ ಸಾಟಿಯಾಗರು! ಹಾರುತ್ತಿರುವ ಗರುಡನಿಗೆ ಮತ್ತಾವ ಪಕ್ಷಿಗಳೂ ಸರಿಸಮವಾಗವು, ಅಲ್ಲವೇ? ಇವನ ಶತ್ರುಗಳು ವಿನಾಶವನ್ನೇ ಹೊಂದುವರು! – ಎಂದನು.

ಸೂಚನೆ : 8/2/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Saturday, February 7, 2026

ಅಷ್ಟಾಕ್ಷರೀ 99 ಪರಾಂಚಿ ಖಾನಿ ವ್ಯತೃಣತ್ (Astakshara 99)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


 ನಮ್ಮಇಂದ್ರಿಯಗಳು ಬಹಿರ್ಮುಖವಾಗಿರುವುದೇಕೆ?

ಜೀವನದಲ್ಲಿ ತಪ್ಪು ಮಾಡದವರಾರು?

ಹಾಗೆಂದು ಹೇಳುವುದು ನಮ್ಮ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳಲು ಬಳಸುವ ಅಸ್ತ್ರವಾಗಬಾರದಲ್ಲವೇ? ಮುಂದೆ ಮಾಡುವ ತಪ್ಪುಗಳಿಗೂ ಮೊದಲೇ ಮಾಡಿಟ್ಟುಕೊಳ್ಳುವ "ಶ್ರೀರಕ್ಷೆ"ಯೂ ಆಗಿಬಿಡಬಾರದಷ್ಟೆ? ಸ್ವ-ರಕ್ಷಣೆಯೋ ಸ್ವಕೀಯ-ರಕ್ಷಣೆಯೋ - ಎಲ್ಲಾ ಒಂದೇ!

ಇದಿರಲಿ, ಎಷ್ಟೋ ವೇಳೆ ನಮ್ಮಿಂದಾದ ತಪ್ಪಿಗೆ ನಾವು ಬೇರೆಯವರನ್ನು ಹೊಣೆಮಾಡುವ ತವಕವೂ ಒಂದಿಷ್ಟು ಹುಟ್ಟುಕೊಳ್ಳುವುದುಂಟು. "ನಾನೇನು ಮಾಡಲಿ, ಅವರೆಲ್ಲಾ ಹಾಗೆ ಮಾಡಿಬಿಟ್ಟಿದ್ದರೆಂದೇ ನಾನು ಹೀಗೆ ಮಾಡಬೇಕಾಯಿತು!" ಎಂದು ಬೇರೆಯವರೆದುರಿಗೆ ಹೇಳುವುದೋ, ನಮ್ಮ ಮನಸ್ಸಿನೊಳಗೇ ಸಮರ್ಥಿಸಿಕೊಳ್ಳುವುದೋ, ನಡೆದಿರುತ್ತದೆ. ಅಲ್ಲೊಮ್ಮೆ ಇಲ್ಲೊಮ್ಮೆ ಇದು ವಾಸ್ತವವಾಗಿರುವುದೂ ಶಕ್ಯವಿದೆಯೆನ್ನಿ.

ಹಾಗೆಯೇ ನಮಗೆ ಭಗವತ್ಸಾಕ್ಷಾತ್ಕಾರವು ಇನ್ನೂ ಆಗಿಲ್ಲದಿರುವುದಕ್ಕೂ ಮತ್ತಾರನ್ನಾದರೂ ಹೊಣೆ ಮಾಡಲಾಗುವುದಾದರೆ ಅದೆಷ್ಟು "ಅನುಕೂಲ"ವಲ್ಲವೇ? "ಮಾಡಲಾಗುವುದಾದರೆ" ಎನ್ನುವುದೇನು? ಮಾಡಿಯೇ ಆಗಿದೆ! ಆತ್ಮಸಾಕ್ಷಾತ್ಕಾರವಾಗದಿರಲು ಯಾರು ಕಾರಣವಂತೆ, ಹಾಗಾದರೆ? ಯಾರಿಗೂ ಸಾಕ್ಷಾತ್ಕಾರವಾಗದಂತಾಗಲು ಕಾರಣ-ಭೂತನಾದವನು ಒಬ್ಬನಿದ್ದಾನೆ. ಆ ಏಕೈಕ-ಪುರುಷನೇ ಕಾರಣ.

ಯಾರವನು? ಸಾಕ್ಷಾದ್ ಬ್ರಹ್ಮನೇ! ತಾನೇ ತಾನಾಗಿ ಹುಟ್ಟಿಕೊಂಡ ಸ್ವಯಂಭುವೇ!  ಹಾಗೆಂದು ಹೇಳಿರುವುದು ಯಾರು? ಯಾರೋ ಅವರಿವರಲ್ಲ. ಅದನ್ನು ಹೇಳಿರುವುದು ಸಾಕ್ಷಾದ್ ಉಪನಿಷತ್ತೇ! ಉಪನಿಷತ್ತಿನ ಮಾತನ್ನು ಎತ್ತಿಹಾಕುವುದುಂಟೇ?

ಯಾವ ಉಪನಿಷತ್ತು? ಎಲ್ಲಿ ಹೇಳಿದೆ? ಇದು ಕಠೋಪನಿಷತ್ತಿನಲ್ಲಿದೆ. ಅಲ್ಲಿಯ ನಾಲ್ಕನೆಯ ವಲ್ಲಿಯ ಮೊದಲ ಮಂತ್ರವೇ ಅದು. ಸ್ವಯಂಭುವೆನಿಸುವ ಬ್ರಹ್ಮನು ಏನು ಮಾಡಿದ? ಚುಚ್ಚಿದ, ಅಥವಾ ಕೊರೆದನೆಂದರೂ ಆಯಿತು. ಏನನ್ನು? ನಮ್ಮ ಇಂದ್ರಿಯಗಳನ್ನು.

ನಾವು "ತಲೆಬುರುಡೆ" ಎಂಬ ಪದವನ್ನು ಬಳಸುತ್ತೇವಲ್ಲವೇ? ಆ ದುಂಡನೆಯ ಆಕಾರದ ಬುರುಡೆಯನ್ನೇ ಒಂದು ಮಡಕೆಯೆಂದುಕೊಳ್ಳಿ. ತಲೆಕೆಳಕಾದ ಮಡಕೆಯ ಹಾಗಿರುವುದಲ್ಲವೇ ಅದು? ಈ ಮಡಕೆಯಲ್ಲೊಂದು ವಿಶೇಷವಿದೆ. ಅದರಲ್ಲಿ ೭ ರಂಧ್ರಗಳಿವೆ. ಕಣ್ಣುಗಳೆಂಬ ಎರಡು ರಂಧ್ರಗಳು, ಕಿವಿಗಳೆಂಬ ಎರಡು ರಂಧ್ರಗಳು, ಮೂಗಿನ ಹೊಳ್ಳೆಗಳೆರಡು, ಹಾಗೂ ಬಾಯಿಯೊಂದು. ಇವಿಷ್ಟೂ ಇಂದ್ರಿಯಗಳೇ. ಹೀಗಾಗಿ ಇಂದ್ರಿಯಗಳೆಂಬ ರಂಧ್ರಗಳಿವು.

ಇವೆಲ್ಲವೂ ಹೇಗೆ ಕಾಣುತ್ತವೆ? ಯಾರೋ ಒಳಗಿನಿಂದ ಹೊರಮುಖವಾಗಿ ಚುಚ್ಚಿ ರಂಧ್ರಮಾಡಿರುವಂತಿವೆ ಅಲ್ಲವೇ? ಏಕೆ? ಕಣ್ಣು ತನ್ನಾಚೆಯಿರುವುದನ್ನು, ಹೊರಜಗತ್ತನ್ನು, ಎಲ್ಲವನ್ನೂ ಕಾಣುತ್ತದೆ. ಆದರಿದೋ, ತನ್ನನ್ನೇ ತಾನು ನೋಡಿಕೊಳ್ಳಲಾರದು; ತನ್ನ ಹಿಂದಿರುವುದನ್ನಂತೂ ನೋಡಿಕೊಳ್ಳಲೇ ಆರದು! ಹೊರಗೆ ಅತಿದೂರದಲ್ಲಿರುವ ವಸ್ತುವನ್ನಾದರೂ ಕಂಡೀತು, ತನ್ನೊಳಗೇ ಇರುವ ಸಣ್ಣವಸ್ತುವನ್ನೋ ಅತಿಸಣ್ಣವಲ್ಲದ್ದನ್ನೋ ಕೂಡ ಅದು ಕಾಣಲಾರದು!

ಕಣ್ಣಿಗೆ ಹೇಳಿದುದೇ ಕಿವಿಗೂ ಅನ್ವಯಿಸುತ್ತದೆ. ಕಿವಿಯು ಬಾಹ್ಯ-ಶಬ್ದಗಳನ್ನು ಗ್ರಹಿಸುವುದೇ ವಿನಾ ಹೃದಯದ ಬಡಿತವೇ ಮುಂತಾದ ಅಂತಶ್ಶಬ್ದಗಳನ್ನಲ್ಲ. ಮೂಗು-ಬಾಯಿಗಳ ಕಥೆಯೂ ಅಷ್ಟೇ. ಇವೆಲ್ಲವೂ ಬಾಹ್ಯ-ಸ್ಪರ್ಶಗಳಿಗೆ ಪ್ರತಿಕ್ರಿಯಿಸುವಂತಹವು. ಕಣ್ಣು-ಕಿವಿಗಳು ದೂರಗ್ರಾಹಿಗಳೂ ಆಗಬಲ್ಲವು. ಮೂಗು ಕಿಂಚಿದ್ದೂರದ ಗಂಧವನ್ನು ಗ್ರಹಿಸೀತು. ಬಹುತೇಕ, ಗಂಧವು ದೂರದ್ದಾದರೂ ಮೂಗಿಗೆ ತಿಳಿದುಬರುವ ಕಾರಣವೇನೆಂದರೆ, ವಾಸನೆಯುಳ್ಳ ಅಲ್ಲಿಯ ಪದಾರ್ಥಕ್ಕೆ ಸೋಂಕಿಬರುವ ಗಾಳಿಯು ಆ ಗಂಧವನ್ನು ಮೂಗಿನವರೆಗೂ ತಂದಿರುವುದು. ನಾಲಿಗೆಗೆ ರಸವು ಗೋಚರಿಸಲಂತೂ ಸಾಕ್ಷಾತ್-ಸ್ಪರ್ಶವೇ ಬೇಕಾಗುವುದು.

ಅಲ್ಲದೇ ಇಂದ್ರಿಯಗಳಲ್ಲೆಲ್ಲ ಪರಸ್ಪರ-ಸಹಕಾರವುಂಟೆಂಬ ಅಂಶವೂ ಗಮನಿಸಬೇಕಾದದ್ದೇ. ಉದಾಹರಣೆಗೆ ಸ್ವಾದುವಾದ ಭಕ್ಷ್ಯದ ದರ್ಶನವು ದೂರದಿಂದಾದರೂ, ನಾಲಿಗೆಯಲ್ಲಿ ನೀರೊಡೆದೀತು. ಜೊತೆಗೆ, ಅದರೊಂದಿಗೆ ಸುಗಂಧವೂ ಸೇರಿದರಂತೂ ನಾಲಿಗೆಯಲ್ಲಿ ರಸವೊಸರುವುದು ಮತ್ತೂ ಸುಲಭವೇ.

ಹೀಗಾಗಿ ಇಂದ್ರಿಯಗಳು "ಹೊರಹೋಗಿ"ಯೇ ವಸ್ತುಗಳನ್ನು ಗ್ರಹಿಸುವುದು. ಬ್ರಹ್ಮನು ಸೃಷ್ಟಿ ಮಾಡಿದ್ದೇ ಹೀಗೆ – ಎನ್ನುವುದನ್ನೇ, ಬ್ರಹ್ಮನು "ಇಂದ್ರಿಯಗಳನ್ನು ಹೊರಮುಖವಾಗಿ[ಯೇ] ಕೊರೆದನು" - "ಪರಾಂಚಿ ಖಾನಿ ವ್ಯತೃಣತ್" - ಎನ್ನುವ ಉಪನಿಷದುಕ್ತಿಯು ಹೇಳುತ್ತದೆ. ಮತ್ತು ಆ ಕಾರಣದಿಂದಾಗಿಯೇ ಅಂತರಾತ್ಮನನ್ನು ಜೀವನು ನೋಡಲಾರನೆಂದೂ ಅಲ್ಲಿಯೇ ಹೇಳಿದೆ.

ಹಾಗಾದರೆ ಒಳಮುಖವಾಗಿ ಸಾಗಲು ಸಾಧ್ಯವೇ ಇಲ್ಲವೆಂದೇ? ಇಲ್ಲವೆಂದೇನಲ್ಲ. ಅದಕ್ಕೊಂದು "ಧೈರ್ಯ"ವು ಬೇಕಾಗುತ್ತದೆ. "ಆವೃತ್ತ-ಚಕ್ಷು"ವಾದವನು ಮಾತ್ರವೇ ಪ್ರತ್ಯಗಾತ್ಮನನ್ನು ಕಾಣಬಲ್ಲನು - ಎಂದೂ ಹೇಳುತ್ತದೆ, ಅದೇ ಉಪನಿಷತ್ತು.

ಏನು ಹಾಗೆಂದರೆ? ಧ್ಯಾನವನ್ನು ಮಾಡುವವರ ಇಂದ್ರಿಯಗಳು ಒಳಮುಖವಾಗುತ್ತವೆ. ಹಾಗಾದಾಗ ಒಳತತ್ತ್ವವು ಗೋಚರವಾಗುತ್ತದೆ. ಮಾನವಶರೀರದಲ್ಲಿ ವಾಸ್ತವವಾಗಿ ಅದಕ್ಕೂ ಆಸ್ಪದವಿದೆ – ಅದು ಸುಲಭವಲ್ಲವಾದರೂ.

ಹೀಗಾಗಿಯೇ ಆತ್ಮ-ದರ್ಶನ ಅಥವಾ ಪರಮಾತ್ಮ-ಸಾಕ್ಷಾತ್ಕಾರವೆಂಬುದು ಇಂದ್ರಿಯಗಳು ಬಹಿರ್ಮುಖವಾಗಿರುವಾಗ ಸಾಧ್ಯವಾಗಲಾರದು. ಒಳಮುಖವಾದ ಯೋಗ-ಸಾಧನೆಯಿಂದ ಸಾಧ್ಯವಾಗಬಲ್ಲುದು.

"ಆತ್ಮತತ್ತ್ವವನ್ನು ಅನ್ವೇಷಿಸಿ ಅರಿತುಕೊಂಡು ಅದನ್ನೆಲ್ಲರೂ ಸಾಧಿಸಬೇಕೆಂಬ ದಿವ್ಯ-ಸಂದೇಶವನ್ನಿತ್ತ ಧೀರರ ನಾಡಾಗಿದೆ, ಈ ಭರತಭೂಮಿ!" – ಎಂಬ ಶ್ರೀರಂಗಮಹಾಗುರುಗಳ ಸ್ಫೂರ್ತಿ-ಎಚ್ಚರಗಳ ವಾಣಿಯನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಸೂಚನೆ: 7/2//2026 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.


ಕೃಷ್ಣಕರ್ಣಾಮೃತ 93 ಅಟವಿಯೊಳಗೇಕೆ ಅಲೆತ? ಒರಳಿನ ಬಳಿ ಕಾಣಿರಿ ಪರತತ್ತ್ವವ (Krishakarnamrta 93)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ದೇವರನ್ನು ಕಾಣಬೇಕೆಂದು ಅದೆಷ್ಟು ಮಂದಿ ಹುಡುಕಾಟವನ್ನು ಮಾಡುತ್ತಾರೆ! ಆದರೆ ಅದೇನು ಸುಲಭವೇ? ಅತ್ಯಂತ-ಕಷ್ಟವಾದದ್ದೆಂದರೆ ಅದೇ! ಆದರೆ ಅದಕ್ಕೊಂದು ಸುಲಭೋಪಾಯವೂ ಇದೆ. ನಾ ಹೇಳುತ್ತೇನೆ, ಅದನ್ನನುಸರಿಸಿ! - ಎನ್ನುತ್ತಿದ್ದಾನೆ, ಲೀಲಾಶುಕ.

ಯಾವುದು ಕಷ್ಟದ ದಾರಿ, ಶ್ರಮವಿಲ್ಲದ ಮಾರ್ಗವು ಯಾವುದು? - ಎಂಬೆರಡನ್ನೂ ಬಿಡಿಸಿಹೇಳುತ್ತಾನೆ.

ಯಾವುದಾದರೂ ವಸ್ತುವನ್ನು ಅದು ಕಾಡಿನಲ್ಲಿದೆ, ಹುಡುಕಿ ತಾ - ಎಂದರೆ ಅದೇನು ಸುಶಕವೇ? – ಎಂದರೆ ಅತಿಸುಲಭವೆನಿಸುವುದೇ? ಭಗವಂತನನ್ನು ಅರಸುತ್ತಾ ತಪಸ್ವಿಗಳು ಅಟವಿಗೆ ಹೋಗುವುದುಂಟಲ್ಲವೇ? ಇಲ್ಲವೆ, ವೇದಗಳೊಳಗೆ ಮುಳುಗಿ ಹುಡುಕುವುದೂ ಉಂಟಲ್ಲವೆ? ಇಲ್ಲಿ ಕವಿಯು ಇವೆರಡು ಭಾವಗಳನ್ನೂ ಹೆಣೆದು ಒಂದು ರೂಪಕವನ್ನು ಮಾಡಿದ್ದಾನೆ. ನಿಗಮಗಳೇ, ಎಂದರೆ ವೇದಗಳೇ, ಅರಣ್ಯಗಳು. ನಿಗಮ-ವನಗಳಲ್ಲಿ ಭಗವಂತನನ್ನು ಹುಡುಕುವವರನ್ನು, ತಪಸ್ಸು ಮಾಡಿ ಕ್ಲೇಶಪಡುವವರನ್ನು, ಕುರಿತ ಮಾತಿದು.

ಉಪನಿಷತ್ತೆಂದರೆ ವೇದಾಂತವೇ. ಏಕೆ? ವೇದದ ಅಂತವೇ, ಎಂದರೆ ಕೊನೆಯ ಭಾಗವೇ, ವೇದಾಂತ. ಮತ್ತೊಂದು ದೃಷ್ಟಿಯಿಂದ, ವೇದದ ಸಾರವೇ ವೇದಾಂತ - ಎಂಬುದೂ ನಿಜವೇ. ಕೆಲವೊಮ್ಮೆ ಉಪನಿಷತ್ತುಗಳನ್ನು ವೇದ-ಶಿರಸ್ ಎಂದು ಹೇಳುವುದೂ ಉಂಟು. ನಮ್ಮ ಶರೀರದಲ್ಲಾದರೂ ಶಿರಸ್ಸೇ ಮುಖ್ಯತಮವಾದ ಭಾಗವಲ್ಲವೇ?

ಸಂಹಿತೆ, ಬ್ರಾಹ್ಮಣ, ಆರಣ್ಯಕ, ಉಪನಿಷತ್ತು  - ಇವೆಲ್ಲಾ ವೇದದ ಭಾಗಗಳು. ಇವಲ್ಲಿ ಮೊದಲ ಮೂರರಲ್ಲಿ ಭಗವಂತನನ್ನು ಕಿಂಚಿತ್-ಪರೋಕ್ಷವಾಗಿ ತೋರಿಸಿದೆ. ಆದರೆ  ಉಪನಿಷತ್ತುಗಳಲ್ಲಿ ಪ್ರತ್ಯಕ್ಷವಾಗಿಯೇ, ವಾಸ್ತವವಾಗಿ ತಾತ್ತ್ವಿಕವಾಗಿಯೇ, ನಿರೂಪಿಸಿದೆ. ಎಂದೇ ಉಪನಿಷದರ್ಥವೆಂದರೆ ಸಾಕ್ಷಾತ್ ಪರಮಾತ್ಮನೇ ಸರಿ.

ಕಾಡಿನಲ್ಲಿ ಅಲೆದಲೆದು ಕಡುಖೇದಪಡುವವರ ಕಂಡು ಕರುಣೆ ಬರುತ್ತದೆಯಲ್ಲವೇ? ಆ ಕರುಣೆಯಿಂದಲೇ ಲೀಲಾಶುಕನು ಈ ಮಾತನ್ನು ಹೇಳುತ್ತಿದ್ದಾನೆ. ಏಕೆ? ಇಲ್ಲಿ ಹೇಳುತ್ತಿರುವ ವಿಪಿನವೆಂದರೆ ವೇದಾಧ್ಯಯನವೇ. ಏಕೆ?

ವೇದಗಳನ್ನು ಅಭ್ಯಸಿಸುವುದೆಂದರೆ ಅದೇನು ಸುಲಭವೇ? ವೈದಿಕ ಶಬ್ದ-ರಾಶಿಯನ್ನು ಮೊದಲು ಕ್ರಮ-ಬದ್ಧವಾಗಿ, ಎಂದರೆ ಸ್ವರ-ಸಹಿತವಾಗಿಯೂ, ಕಂಠಸ್ಥವನ್ನಾಗಿಸಿಕೊಳ್ಳಬೇಕು; ಆಮೇಲೆ ಅದರ ಅರ್ಥದತ್ತ ಗಮನ ಹರಿಸಬೇಕು; ಹೀಗೆ ಶ್ರವಣ-ಮನನ-ನಿದಿಧ್ಯಾಸನಗಳಲ್ಲಿ ಮುಳುಗಬೇಕು.

ಅಲ್ಲದೆ, ವೇದಗಳನ್ನು ಸಾಂಗೋಪಾಂಗವಾಗಿ ಅಭ್ಯಸಿಸಬೇಕು. ವೇದಗಳಿಗೆ ಅಂಗಗಳು ಆರು, ಉಪಾಂಗಗಳು ನಾಲ್ಕು. ಅಂಗ ಮತ್ತು ಉಪಾಂಗಗಳೊಂದಿಗೆ ಕೂಡಿರುವುದೇ ಸಾಂಗೋಪಾಂಗ ಎನಿಸುವುದು. ಶಿಕ್ಷಾ-ವ್ಯಾಕರಣ-ಛಂದಸ್-ನಿರುಕ್ತ-ಜ್ಯೋತಿಷ-ಕಲ್ಪ - ಇವೇ ಆ ಆರು ಅಂಗಗಳು. ಪುರಾಣ-ನ್ಯಾಯ-ಮೀಮಾಂಸಾ--ಧರ್ಮಶಾಸ್ತ್ರ - ಇವೇ ನಾಲ್ಕು ಉಪಾಂಗಗಳು. ಇವುಗಳೆಲ್ಲವನ್ನೂ ಸರಹಸ್ಯವಾಗಿಯೇ ಅಭ್ಯಸಿಸಬೇಕು.

ಪಂಚತಂತ್ರವು ಹೇಳುವಂತೆ ವ್ಯಾಕರಣವೊಂದಕ್ಕೇ ಹನ್ನೆರಡು ವರ್ಷಗಳ ಅಧ್ಯಯನವು ಬೇಕಾಗಬಹುದು! ಇನ್ನು ಉಳಿದ ಶಾಸ್ತ್ರಗಳ ಅಧ್ಯಯನವೂ ನಡೆಯಬೇಕು! ಹೀಗಾಗಿ, ವರ್ಷಗಟ್ಟಲೆ ಸಾಧಿಸಬೇಕಾದ ಇವೆಲ್ಲಾ ಒಂದು ದೊಡ್ಡ ಕಾಡೇ, ಅವುಗಳ ಒಳ ಹೊಕ್ಕರೆ ದೊಡ್ಡ ಕಾಡನ್ನು ಹೊಕ್ಕಂತೆಯೇ ಸರಿ!

ಬೆಂಗಾಡಿನಲ್ಲಿ ಅಷ್ಟೊಂದು ಅಂಡಲೆದು ಬೆಂಡಾಗಿರತಕ್ಕವರೇ! – ಎಂಬುದಾಗಿ ಆ ಮಾರ್ಗವನ್ನು ಅನುಸರಿಸುವವರನ್ನು ಸಂಬೋಧಿಸುತ್ತಿದ್ದಾನೆ, ಕವಿ.  ಹಾಗೆ ಬಳಲುವುದರ ಬದಲು, ಸಾರಭೂತವಾದ ಉಪನಿಷದರ್ಥವನ್ನೇ ಸುಲಭವಾಗಿ ಕಂಡುಕೊಳ್ಳುವ ಹೊಸ ಉಪಾಯವಿದೆಯೆನ್ನುತ್ತಿದ್ದಾನೆ, ಲೀಲಾಶುಕ.

ಏನದು ಉಪಾಯ? ಗೋಕುಲದ ನಾರಿಯರಿರುವರಲ್ಲವೇ? ಆ ವಲ್ಲವಿಯರ ಮನೆಗಳಿಗೆ ಹೋಗಿರಿ; ಒಳಹೊಕ್ಕು ಅವರ ಮನೆಯಲ್ಲಿಯ ಒರಳನ್ನು ಹೋಗಿ ಕಾಣಿರಿ; ಅದಕ್ಕೆ ಕಟ್ಟಿಹಾಕಿದೆ, ಉಪನಿಷದರ್ಥವನ್ನು- ಎನ್ನುತ್ತಾನೆ, ಲೀಲಾಶುಕ!

ಏನು ಹಾಗೆಂದರೆ? ಬಾಲಕೃಷ್ಣನು ಬೆಣ್ಣೆ ಕದಿಯುತ್ತಾ ತುಂಬ ಗಲಾಟೆ ಮಾಡಿದನೆಂದೂ, ಅದಕ್ಕೇ ಆತನನ್ನು ಒರಳುಕಲ್ಲಿಗೆ ಕಟ್ಟಿಹಾಕಿದಳು ಯಶೋದೆ – ಎಂದೂ ಪ್ರಸಿದ್ಧವಲ್ಲವೇ ಕಥೆ? ಮುಂದೆ ಆ ಒರಳು ಕಲ್ಲುಗಳನ್ನೇ ಎಳೆದುಕೊಂಡು ಹೋಗಿ ಕೃಷ್ಣನು ಮಾಡಿದ್ದೇನು?: ಅಲ್ಲಿದ್ದ ಎರಡು ಅರ್ಜುನ-ವೃಕ್ಷಗಳನ್ನು ಬೀಳಿಸಿದುದು. ಆ ಮರಗಳೇನು? ಶಾಪ-ಗ್ರಸ್ತರಾಗಿ ಆ ವೃಕ್ಷಗಳಾಗಿದ್ದವರು ಕುಬೇರನ ಪುತ್ರರು. ಒಬ್ಬನ ಹೆಸರು ಮಣಿಗ್ರೀವ. ಮತ್ತೊಬ್ಬನ ಹೆಸರು ನಳಕೂಬರ. ಇಬ್ಬರೂ ಯಕ್ಷರೇ. ವೃಕ್ಷಜನ್ಮದಿಂದ ಈಗ ಇಬ್ಬರೂ ವಿಮೋಚನೆಯನ್ನು ಪಡೆದರು - ಎಂಬೀ ಕಥೆಗಳು ಶ್ರೀಮದ್ಭಾಗವತದಲ್ಲಿ ನಿರೂಪಿತವಾಗಿವೆ.

ಹೀಗಾಗಿ, "ಒರಳಿಗೆ ಕಟ್ಟಿಹಾಕಿರುವ ಉಪನಿಷದರ್ಥ" – ಎಂದು ಹೇಳಿದರೆ ಸಾಕ್ಷಾದ್ ಬಾಲಕೃಷ್ಣನೇ. ಆತನನ್ನು ಕಂಡರಾಯಿತು! – ಎನ್ನುತ್ತಿದ್ದಾನೆ, ಕವಿ.  ಅಲ್ಲಿಗೆ, ದೊರೆಯಬೇಕಾದದ್ದು ದೊರೆತಂತೆಯೇ.

ಎಂದೇ ನನ್ನೀ ಉತ್ಕೃಷ್ಟವಾದ ಉಪದೇಶವನ್ನು ಆಲಿಸಿ, ಆದರಿಸಿ - ಎಂಬುದಾಗಿ ಕವಿಲೀಲಾಶುಕನ ಉದ್ಗಾರ. ಅಲ್ಲಿಗೆ, ಶ್ರೀಕೃಷ್ಣನ ದಿವ್ಯಲೀಲೆಗಳ ಅನುಸಂಧಾನದಿಂದಲೂ ಸಹ, ವೇದ-ವೇದಾಂತ-ಪ್ರತಿಪಾದಿತವದ ಪರತತ್ತ್ವವನ್ನೇ ಪಡೆಯಬಹುದು - ಎಂಬುದೇ ಈ ಶ್ಲೋಕದ ತಾತ್ಪರ್ಯವಾಗಿದೆ.

ಕಡುಕಷ್ಟಪಟ್ಟು ಒಂದು ಫಲವನ್ನು ಪಡೆಯುವುದೇನು? ಅದೇ ಫಲವನ್ನೇ ಶ್ರಮವಿಲ್ಲದೆ ಪಡೆಯುವುದೇನು?

ಶ್ರೀಮದ್ಭಾಗವತವನ್ನು ನಿಗಮ-ಕಲ್ಪತರುವಿನ ಕಳಿದ ಹಣ್ಣೆಂದು ಹೇಳುವುದುಂಟಲ್ಲವೇ? ವೇದಗಳೇ ಕಲ್ಪ-ವೃಕ್ಷಗಳು. ಮತ್ತು ಫಲವೆಂದರೆ ವೃಕ್ಷ-ಸಾರವೇ ಸರಿ. ಅದೂ ಕಳಿತದ್ದೇ ಆದರೆ ತಿನ್ನಲೂ ಶ್ರಮಿಸಬೇಕಿಲ್ಲ!

ಹೀಗಾಗಿ, ವೇದ-ಸಾರಭೂತವಾದುದು ಈ ಭಾಗವತ - ಎಂಬ ತತ್ತ್ವವನ್ನು ಈ ಶ್ಲೋಕವು ಹೃದಯಂಗಮವಾಗಿ ಮನದಟ್ಟು ಮಾಡಿಕೊಡುತ್ತದೆ.

ಶ್ಲೋಕ ಹೀಗಿದೆ:
ಪರಂ ಇಮಂ ಉಪದೇಶಂ ಆದ್ರಿಯಧ್ವಂ /
ನಿಗಮ-ವನೇಷು ನಿತಾಂತ-ಚಾರ-ಖಿನ್ನಾಃ |
ವಿಚಿನುತ ಭವನೇಷು ವಲ್ಲವೀನಾಂ /
ಉಪನಿಷದರ್ಥಂ ಉಲೂಖಲೇ ನಿಬದ್ಧಂ ||

ಮತ್ತೊಂದು ಪದ್ಯ

ನಂದನ ತನಯನೆಂದರೆ ನಂದ-ಪುತ್ರನಾದ ಶ್ರೀಕೃಷ್ಣ. ಆತನು ನನ್ನ ಹೃದಯಕ್ಕೆ ಮುದವೀಯುತ್ತಿದ್ದಾನೆ, ಎನ್ನುತ್ತಾನೆ ಲೀಲಾಶುಕ.

ಯಾವುದರಿಂದಾಗಿ ಮೋದವಾಗುತ್ತಿದೆ? ಎಂದರೆ ಮೂರು ಅಂಶಗಳಿಂದ - ಅರ್ಥಾತ್ ಕೃಷ್ಣನ ಮೂರು ಕ್ರಿಯೆಗಳಿಂದ. ಮೊದಲನೆಯದು ಕಣ್ಣಂಚಿನ ವಿಲಾಸ. ಅದನ್ನು ನಯನಾಂತ-ವಿಜೃಂಭಿತವೆಂದಿದೆ. ಅದರ ಸೊಬಗನ್ನು ಹೆಚ್ಚಿಸಿರುವುದು ಅದರ ಪರ್ಯಾಕುಲತೆ ಅಥವಾ ಚಂಚಲತೆ.

ಎರಡನೆಯದು ಆತನ ಬಾಯಿ. ಅದರಲ್ಲಿ ದರ-ಸ್ಮಿತ ಅಥವಾ ಅರೆ-ನಗೆಯ ವಿಲಾಸವಿದೆ. ಸಂಸ್ಕೃತದಲ್ಲಿ ದರ ಎಂಬ ವಿಶೇಷಣಕ್ಕೆ ಸ್ವಲ್ಪ ಎಂಬರ್ಥ. ಮತ್ತು ಸ್ಮಿತದಲ್ಲಿ ಕೋಮಲತೆಯೂ ಇದೆ. ಮಾರ್ದವದ ಮೆರುಗು ಮುಖವನ್ನು ಮೋಹಕವಾಗಿಸಿದೆ.

ಮೂರನೆಯದು ಆತನ ಜಲ್ಪಿತಗಳು, ಎಂದರೆ ಸಹಜವಾಗಿ ಹೊಮ್ಮುವ ಸವಿನುಡಿಗಳು. ಅವು ಮಂದ್ರವೂ ಮಂಜುಲತರವೂ ಆಗಿವೆ. ಮಂದ್ರವೆಂದರೆ ಗಂಭೀರ, ಆಳ. ಮಂಜುಲವೆಂದರೆ ಮನೋಜ್ಞ. ಮಂಜುಲತರವೆಂದರೆ ಮತ್ತೂ ಮಂಜುಲ, ಅರ್ಥಾತ್ ಅತ್ಯಂತ-ಹೃದ್ಯ.

"ಹಂತ!" ಎಂದರೆ "ಆಹಾ!" ಎಂಬರ್ಥದ ಹರ್ಷದ ಉದ್ಗಾರ. ಲೀಲಾಶುಕನ ಹಾರ್ದವಾದ ಆಶಂಸನವಿದು. ಅಂತೂ ಕೃಷ್ಣನ ಯಾವ ಅಂಶ ಅಥವಾ ಕ್ರಿಯೆ ತಾನೆ ಸೊಗಯಿಸದು? ಆತನ ಅರೆನೋಟ, ಅರೆನಗೆ, ಇನಿನುಡಿ - ಒಂದೊಂದೂ ಮಾನಸವನ್ನು ತಣಿಸುವಂತಹುದೇ!

ಪರ್ಯಾಕುಲೇನ ನಯನಾಂತ-ವಿಜೃಂಭಿತೇನ /
ವಕ್ರೇಣ ಕೋಮಲ-ದರಸ್ಮಿತ-ವಿಭ್ರಮೇಣ |
ಮಂದ್ರೇಣ ಮಂಜುಲತರೇಣ ಚ ಜಲ್ಪಿತೇನ /
ನಂದಸ್ಯ ಹಂತ ತನಯೋ ಹೃದಯಂ ಧಿನೋತಿ ||

ಸೂಚನೆ : 7/2/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Tuesday, February 3, 2026

ವ್ಯಾಸ ವೀಕ್ಷಿತ 173 ಗೃಹದೇವಿಯೇ ಆದ ಜರಾ ಎಂಬ ರಾಕ್ಷಸಿ! ( Vyaasa Vikshita 173)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಜರಾ ಎಂಬ ರಾಕ್ಷಸಿಯು ಅರ್ಧರ್ಧವಾಗಿ ಜನಿಸಿದ ಆ ಶಿಶುಗಳೆರಡರ ಮೈಗಳನ್ನು ಜೋಡಿಸಿದಳಷ್ಟೆ? ಆ ಮಗುವು ಹೇಗಿತ್ತು?

ಅದರ ಅಂಗೈ ತಾಮ್ರವರ್ಣವುಳ್ಳದ್ದಾಗಿತ್ತು. ಅದನ್ನು ಮುಷ್ಟಿ ಮಾಡಿಕೊಂಡು ಬಾಯಲ್ಲಿಟ್ಟುಕೊಂಡಿತು, ಅದು. ಅತಿರೋಷದಿಂದ ಗೋಳಾಡಿತು! ನೀರುಂಡ ಮೋಡದ ಗರ್ಜಿತದಂತಿತ್ತು ಅದರ ಧ್ವನಿ!

ಅದರ ಆ ಶಬ್ದಕ್ಕೆ ಗಾಬರಿಗೊಂಡರು, ಅಂತಃಪುರದ ಮಂದಿಯೆಲ್ಲಾ! ಹಾಗೂ ರಾಜನೊಂದಿಗೇ ಹೊರಬಂದರು. ಇನ್ನು ಆ ಇಬ್ಬರು ರಾಜಪತ್ನಿಯರೋ, ಬಾಡಿದ ಮುಖವುಳ್ಳವರಾಗಿದ್ದರು. ಆದರೂ ಅವರ ಮೊಲೆಗಳಲ್ಲಿ ಹಾಲು ತುಂಬಿಕೊಂಡಿತ್ತು. ಪುತ್ರಲಾಭವು ತಮಗಾಗದೆಂದು ಕಂಗೆಟ್ಟಿದ್ದ ಅವರು, ಈಗ ಥಟ್ಟನೆ ಹೊರಬಂದು ಆ ಶಿಶುವನ್ನು ಸಮೀಪಿಸಿದರು.

ಇನ್ನು ಆ ರಾಕ್ಷಸಿಯಂತೂ ಆ ರಾಣಿಯರಿಬ್ಬರೂ ಬಂದುದನ್ನು ಕಂಡಳು. ತನ್ನ ಸಂತಾನವನ್ನು ಅಷ್ಟೊಂದು ಇಷ್ಟಪಟ್ಟಿದ್ದ ರಾಜನನ್ನೂ ಕಂಡಳು. ಆ ಬಾಲನಂತೂ ಆಗ ಮಹಾಬಲಶಾಲಿಯಂತೆ ಕಂಡನು.

ಇಷ್ಟನ್ನೂ ಗಮನಿಸಿಕೊಂಡ ಆ ರಾಕ್ಷಸಿಯು ಮನಸ್ಸಿನಲ್ಲಿ ಹೀಗೆಂದು ಹೇಳಿಕೊಂಡಳು: ಧಾರ್ಮಿಕನೂ ಮಹಾತ್ಮನೂ ಆಗಿರುವ ರಾಜನಿವನು. ಈತನ ರಾಜ್ಯದಲ್ಲೇ ವಾಸವಿದ್ದುಕೊಂಡಿರುವ ನಾನು, ಈ ಮಗುವನ್ನು ಕೊಲ್ಲುವುದು ಸರಿಯಲ್ಲ.

ಹೀಗೆಂದುಕೊಂಡವಳೇ, ಆ ಬಾಲಕನನ್ನು ಎತ್ತಿಕೊಂಡಳು. ಮೇಘ-ಲೇಖೆಯು, ಎಂದರೆ ಮೋಡಗಳ ಸಾಲು, ಸೂರ್ಯನನ್ನು ಎತ್ತಿಕೊಳ್ಳುವ ಹಾಗಿತ್ತು, ಅದು. ಅವಳೂ ಮಾನುಷರೂಪವನ್ನು ಆಗ ತಳೆದಳು. ಮತ್ತು ರಾಜನಿಗಿಂತು ನುಡಿದಳು.

"ಬೃಹದ್ರಥನೇ, ನಿನಗೆ ನಾನಿತ್ತ ಮಗನಿವನು. ಇವನನ್ನು ಸ್ವೀಕರಿಸು. ನಿನ್ನ ಇಬ್ಬರು ಪತ್ನಿಯರಿಗೆ ಹುಟ್ಟಿದ ಮಗುವಿದು – ಆ ಬ್ರಾಹ್ಮಣನ ವರದ ಮೇರೆಗೆ. ಆದರೆ ದಾದಿಯಿಂದ ಪರಿತ್ಯಕ್ತವಾದದ್ದು. ನಾನು ರಕ್ಷಿಸಿರುವ ಮಗುವಿದೆಂದು ತಿಳಿ."

ಹೀಗಾದಮೇಲೆ ಆ ರಾಣಿಯರಿಬ್ಬರೂ ಒಡನೆಯೇ ಆ ಮಗುವನ್ನು ಎತ್ತಿಕೊಂಡು ಹಾಲುಣಿಸಿದರು. ಅದೆಲ್ಲವನ್ನೂ ಅರಿತು ರಾಜನಿಗೆ ಆಗ ಬಹಳ ಸಂತೋಷವೇ ಆಯಿತು.

ಸ್ವರ್ಣದ ಕಾಂತಿಯನ್ನು ಹೊಂದಿದ್ದ ಆ ರಾಕ್ಷಸಿಯನ್ನು ರಾಜನು ಕೇಳಿದನು: "ಕಮಲದೊಳಗಣ ಕಾಂತಿಯನ್ನು ಹೊಂದಿರುವವಳೇ! ನನಗೆ ಮಗನನ್ನಿತ್ತವಳೇ! ಯಾರು ನೀನು? ನೀನು ಕಾಮ-ಚಾರಿಣಿಯಾದ, ಎಂದರೆ ಬಯಸಿದಂತೆ ಸಂಚರಿಸುವ, ದೇವತೆಯೇ ಇರಬೇಕೆಂದು ನನಗೆ ತೋರುತ್ತದೆ!" – ಎಂದು.

ಆಗ ಆ ರಾಕ್ಷಸಿಯು ಹೇಳಿದಳು:

"ನಾನು ಜರಾ ಎಂಬ ಹೆಸರಿನ ರಾಕ್ಷಸಿ. ಕಾಮ-ರೂಪಿಣಿಯಾದವಳು, ಎಂದರೆ ಇಚ್ಛೆ ಬಂದಂತೆ ರೂಪವನ್ನು ಧರಿಸಿಕೊಳ್ಳಬಲ್ಲವಳು. ರಾಜನೇ, ನಿನ್ನ ಮನೆಯಲ್ಲಿಯೇ ಪೂಜಿತಳಾಗಿ ಸುಖದಿಂದ ವಾಸಮಾಡುತ್ತಿರುವೆ, ನಾನು. ಮನುಷ್ಯರ ಮನೆಮನೆಗಳಲ್ಲೂ ಸದಾ ವಾಸಿಸುತ್ತಿರುವೆ. ಹಿಂದೆ ಬ್ರಹ್ಮನು ಗೃಹದೇವೀ ಎಂಬ ಹೆಸರಿನಿಂದಲೇ ನನ್ನನ್ನು ಸೃಷ್ಟಿಸಿರುವನು. ದಾನವರ ವಿನಾಶಕ್ಕೆಂದೇ ಸ್ಥಾಪಿಸಲ್ಪಟ್ಟವಳು, ನಾನು. ದಿವ್ಯರೂಪವನ್ನು ಧರಿಸತಕ್ಕವಳು.

ಯಾರು ಭಕ್ತಿ-ಪೂರ್ವಕವಾಗಿ ನನ್ನ ಚಿತ್ರವನ್ನು - ನಾನು ಯೌವನದಲ್ಲಿರುವಂತೆಯೂ ಪುತ್ರಸಹಿತಳಾದಂತೆಯೂ – ತಮ್ಮ ಮನೆಯ ಗೋಡೆಯ ಮೇಲೆ ಬರೆಯುವರೋ, ಅವರ ಮನೆಯಲ್ಲಿ ವೃದ್ಧಿ(ಏಳ್ಗೆ)ಯುಂಟಾಗುವುದು. ಇಲ್ಲವಾದಲ್ಲಿ ವಿನಾಶವೇ ಉಂಟಾಗುವುದು.

ನಿನ್ನ ಗೃಹದಲ್ಲಿಯೂ, ಎಂದರೆ ಅರಮನೆಯಲ್ಲಿಯೂ, ನಾನು ವಾಸವಾಗಿದ್ದು ಸದಾ ಪೂಜೆ ಕೈಗೊಳ್ಳುತ್ತಿದ್ದೇನೆ! ನಿನ್ನ ಮನೆಯ ಗೋಡೆಗಳ ಮೇಲೆ ನಾನು ಬಹುಪುತ್ರರಿಂದ ಸುತ್ತುವರಿಯಲ್ಪಟ್ಟವಳಾಗಿ ಚಿತ್ರಿಸಲ್ಪಟ್ಟಿದ್ದೇನೆ. ಹಾಗೆಯೇ ಗಂಧ-ಪುಷ್ಪ-ಧೂಪಗಳಿಂದಲೂ ಭಕ್ಷ್ಯ-ಭೋಜ್ಯಗಳಿಂದಲೂ ನಾನು ಅರ್ಚಿಸಲ್ಪಟ್ಟಿದ್ದೇನೆ. ಎಂದೇ ನಿನಗೆ ಪ್ರತ್ಯುಪಕಾರಕ್ಕೋಸ್ಕರವಾಗಿ ನಾನು ಸದಾ ಚಿಂತಿಸುತ್ತಿರುತ್ತೇನೆ."

ಸೂಚನೆ : 1/2/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.  

ಪ್ರಶ್ನೋತ್ತರ ರತ್ನಮಾಲಿಕೆ 51 (Prasnottara Ratnamalike 51)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ - ೫೧ - ಯಾವುದು ದಾನ ?

ಉ. ಯಾವುದರಿಂದ ಪ್ರತ್ಯುಪಕಾರವನ್ನು ಅಪೇಕ್ಷೆಪಡದಿರುವುದು.

ಪ್ರಕೃತ ಈ ಉತ್ತರದಲ್ಲಿ, 'ಯಾವ ದಾನವು ಅತ್ಯಂತ ಶ್ರೇಷ್ಠವಾಗುತ್ತದೆ' ಎಂಬ ವಿವರಣೆ ಇಲ್ಲಿದೆ. ಅಂದರೆ ದಾನವನ್ನು ಮಾಡಬೇಕು; ಆದರೆ ನಾವು ಯಾರಿಗೆ ದಾನವನ್ನು ಮಾಡುತ್ತೇವೆಯೋ, ಅವರಿಂದ ಯಾವುದೇ ಬಗೆಯ ಪ್ರತ್ಯುಪಕಾರವನ್ನು ಬಯಸಬಾರದು. ಬಯಸಿದರೆ ಅದು ದಾನವಾಗುವುದಿಲ್ಲ ಎಂಬ ಅರ್ಥ ಇಲ್ಲಿದೆ. ದಾನ ಮಾಡುವಾಗ ಯಾವ ಭಾವದಿಂದ ದಾನ ಮಾಡಬೇಕು ಎಂಬ ವಿಷಯ ಇಲ್ಲಿದೆ.

ವಸ್ತುತಃ ದಾನವನ್ನು 'ನ ಮಮ' ಎಂಬ ಬುದ್ಧಿಯಿಂದ ಮಾಡಬೇಕಾಗುತ್ತದೆ. ದಾನ ಮಾಡುವ ವಸ್ತುವು ದಾನ ಮಾಡುವ ಪೂರ್ವದಲ್ಲಿ ನಮ್ಮ ಸ್ವಾಮಿತ್ವವನ್ನು ಪಡೆದಿರುತ್ತದೆ. ಆ ವಸ್ತುವು ನಮ್ಮ ಪ್ರಾಮಾಣಿಕವಾದ ಧನಾರ್ಜನೆಯಿಂದ ಪಡೆದಿದ್ದಾಗಿರಬೇಕು. ಆಗ ಆ ಸ್ವತ್ತಿಗೆ ಅಥವಾ ಆ ಪದಾರ್ಥಕ್ಕೆ ನಾವು ಸ್ವಾಮಿಯಾಗುತ್ತೇವೆ. ಆಗ ಅದು ನಮ್ಮ ಪ್ರಯೋಜನಕ್ಕೆ ಬಳಸಲು ಅನುಕೂಲವಾಗುತ್ತದೆ. ಅದರ ಬಳಕೆಯಿಂದ ಶರೀರದ ಧಾತುಸಾಮ್ಯವನ್ನು ಉಂಟುಮಾಡುತ್ತದೆ. ಆ ಪದಾರ್ಥವನ್ನು ಮತ್ತೊಬ್ಬರಿಗೆ ದಾಟಿಸುವಾಗ ಅದರಲ್ಲಿರುವ ನಮ್ಮತನವನ್ನು ಪರಿಪೂರ್ಣವಾಗಿ ಕಳೆದುಕೊಳ್ಳಬೇಕು. ಆ ಪದಾರ್ಥದಿಂದ ಯಾವುದೇ ಬಗೆಯ ಪ್ರಯೋಜನವನ್ನು ಬಯಸಿರಬಾರದು. ಹಾಗೆ 'ಇದು ನನ್ನದಲ್ಲ' ಎಂಬ ಭಾವನೆಯಿಂದ ಮತ್ತೊಬ್ಬರಿಗೆ ದಾನವಾಗಿ ಕೊಡಬೇಕು. ಇದು 'ಅತ್ಯಂತ ಶ್ರೇಷ್ಠವಾದ ದಾನ' ಎಂಬುದಾಗಿ ಪರಿಗಣಿಸಲ್ಪಡುತ್ತದೆ. ಇದನ್ನೇ ಭಗವದ್ಗೀತೆಯಲ್ಲಿ ಹೀಗೆ ಹೇಳಲಾಗಿದೆ  "ದಾತವ್ಯಮ್ ಇತಿ ಯದ್ದಾನಂ ದೀಯತೇ ಅನುಪಕಾರಣೇ। ದೇಶೇ ಕಾಲೇ ಚ ಪಾತ್ರೇ ಚ ತದ್ದಾನಂ ಸಾತ್ತ್ವಿಕಂ ಸ್ಮೃತಮ್" ಎಂಬುದಾಗಿ. ಅಂದರೆ 'ಕೊಡಬೇಕು' ಎಂಬ ಮನಸ್ಸನ್ನು ಮಾಡಿ, ಯಾರು ತಾನು ಮಾಡಿರುವ ದಾನಕ್ಕೆ ಪ್ರತ್ಯುಪಕಾರವನ್ನು ಮಾಡಲು ಸಾಧ್ಯವೇ ಇಲ್ಲ ಎಂಬುದನ್ನು ನಿಶ್ಚಯಿಸಿ, ಅಂತಹ ವ್ಯಕ್ತಿಯನ್ನು ಗುರುತಿಸಿ ದಾನವನ್ನು ಮಾಡಬೇಕು ಎಂಬುದಾಗಿ ಶ್ರೀಶಂಕರಭಗವತ್ಪಾದರು ಅವರ ಗೀತಾಭಾಷ್ಯದಲ್ಲಿ 'ಅನುಪಕಾರಿಣೇ' ಎಂಬ ಪದಕ್ಕೆ 'ಪ್ರತ್ಯುಪಕಾರ - ಅಸಮರ್ಥಾಯ, ಸಮರ್ಥಾಯ ಅಪಿ ನಿರಪೇಕ್ಷಿತಾಯ' ಎಂಬುದಾಗಿ ಅರ್ಥಮಾಡಿದ್ದಾರೆ. ಅಂದರೆ ಪ್ರತ್ಯುಪಕಾರಕ್ಕೆ ಸಮರ್ಥನಾಗಿದ್ದರು ಅಂತಹವನಲ್ಲೂ ನಿರಪೇಕ್ಷಿತನಾಗಿ ದಾನವನ್ನು ಮಾಡಬೇಕು. ಹಾಗೆ ಮಾಡಿದ ದಾನವು ಸಾತ್ತ್ವಿಕ ದಾನವಾಗುತ್ತದೆ ಎಂಬುದಾಗಿ ಹೇಳಲಾಗಿದೆ. ಈ ಬಗೆಯ ದಾನಕ್ಕೆ ಅತ್ಯಂತ ಮಹತ್ವವನ್ನು ನೀಡಲಾಗಿದೆ. ಏಕೆಂದರೆ ಪ್ರತ್ಯುಪಕಾರವನ್ನು ಬಯಸಿ ಅಥವಾ ಫಲವನ್ನು ಬಯಸಿ ಮಾಡುವ ದಾನವು 'ರಾಜಸದಾನ' ಎಂಬುದಾಗಿ ಹೇಳಲಾಗಿದೆ. ಸಾತ್ತ್ವಿಕ, ರಾಜಸಿಕ ಮತ್ತು ತಾಮಸಿಕ ಎಂಬ ಮೂರು ಬಗೆಯ ದಾನದಲ್ಲಿ ಸಾತ್ತ್ವಿಕದಾನವು ಶ್ರೇಷ್ಠವಾದದ್ದು ತಾನೆ! ಈ ಸಾತ್ತ್ವಿಕ ದಾನದಲ್ಲಿ ಅಪೇಕ್ಷೆ ಇಲ್ಲವಾಗಿದೆ. ಕೇವಲ ದಾನವನ್ನು ಮಾತ್ರ ಮಾಡುವ 'ಕರ್ಮ'ವಿದಾಗಿದೆ. ಆದ್ದರಿಂದ ಇದೊಂದು 'ನಿಷ್ಕಾಮಕರ್ಮ' ಎಂಬುದಾಗಿ ಹೇಳಬಹುದಾಗಿದೆ. ಇಂತಹ ದಾನವು ಪ್ರಶಂಸಿಸಲ್ಪಟ್ಟಿದೆ. ದಾನ ಎಂಬ ಶಬ್ದಕ್ಕೆ 'ಯಥಾಶಕ್ತಿ - ಸಂವಿಭಾಗಃ - ಸಾಧ್ಯವಾದಷ್ಟು ಪದಾರ್ಥಗಳ ಸಂಬಂಧವನ್ನು ಕಡಿದುಕೊಳ್ಳುವಿಕೆ ಎಂಬ ಅರ್ಥವನ್ನು ಗೀತಾಭಾಷ್ಯದಲ್ಲಿ ಶ್ರೀಶಂಕರ ಭಗವತ್ಪಾದರು ತಿಳಿಸಿದ್ದಾರೆ. ದ್ರವ್ಯತ್ಯಾಗವನ್ನು ಮಾಡಿದಷ್ಟು ನಾವು ಈ ಸಂಸಾರವೆಂಬ ಬಂಧನದಿಂದ ಬಿಡುಗಡೆ ಹೊಂದಲು ಸಾಧ್ಯವಲ್ಲವೇ! ಹೀಗಿದ್ದರೆ ಮಾತ್ರ ಅದು ಪರಿಪೂರ್ಣ ದಾನದ ಫಲವನ್ನು ಪಡೆಯುತ್ತದೆ ಎಂಬುದಾಗಿ ಈ ಉತ್ತರದ ಅರ್ಥವಾಗಿದೆ.

ಸೂಚನೆ : 1/2/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.   

Saturday, January 31, 2026

ಕೃಷ್ಣಕರ್ಣಾಮೃತ 92 ಗೋಪಿಯರ ಕಣ್ಣಂಚಿನಿಂದ ವಂಚಿತನಾದವನೇ ನನ್ನ ಕಾವ್ಯದ ಪ್ರಾಣ! (Krishakarnamrta 92)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in


 



ಕೃಷ್ಣನನ್ನು ಮೊದಲ ಬಾರಿಗೆ ಕಂಡ ಯುವತಿಯೊಬ್ಬಳು ತನ್ನ ಸಖಿಯನ್ನು ಮಾತಾಡಿಸುತ್ತ ಕೇಳುತ್ತಿದ್ದಾಳೆ - ಯಾರೇ ಇವನು? ಎಂಬುದಾಗಿ. ಸೊಬಗಿನ ಸುಪುರುಷನನ್ನು ಕಂಡರೆ ಯುವತಿಯರಿಗೆ ಕುತುಕವು ಉದಯಿಸದಿರುವುದೇ? ಸ್ವಲ್ಪದೂರದಲ್ಲಿ ಸಾಗುತ್ತಿರುವ ಕೃಷ್ಣನನ್ನು ಕುರಿತಾಗಿ ಇವಳ ಪ್ರಶ್ನೆ: "ಯಾರೇ ಇವನು? ಮಥುರೆಯ ವೀಥಿಯಲ್ಲಿ ಮೆಲ್ಲಮೆಲ್ಲನೆ ಸಾಗುತ್ತಿರುವವನು?"

ಲತಾಕುಂಜದೆಡೆಗೆ ಕೃಷ್ಣನು ಸಾಗುತ್ತಿದ್ದನೆಂದು ಕಾಣುತ್ತದೆ. ಲತಾಕುಂಜದ ಏಕಾಂತದಲ್ಲಿ ಇಂತಹ ಸುಂದರಾಂಗನ ಸನಿಹ ದೊರೆತರೆ ಅದಕ್ಕಿಂತಲೂ ಧನ್ಯತೆಯುಂಟೆ? ಅತನನ್ನೊಮ್ಮೆ ಕಂಡರೂ ಸಾಕು, ಎರಡು ಮಾತನಾಡಿದರೂ ಸಾಕು - ಎನ್ನುವ ಭಾವನೆ ಅವಳಿಗೆ.

ಮೊದಲಿಗೆ ತೋರಿದುದು ಆತನ ಶಿರೋಭೂಷಣ, ಆಮೇಲೆ ಮೈಸೊಬಗು, ಆಮೇಲೆ ಮೊಗ, ಆಮೇಲೆ ಕಣ್ಣು, ಆಮೇಲೆ ಮಾತು, ಹಾಗೂ ಅವನ ವಿಲಾಸಗತಿ - ಇವಿಷ್ಟೂ ಅಂಶಗಳಲ್ಲಿ ಕಂಡ ಸೊಬಗು ಅವಳಲ್ಲಿ ಕಾತರತೆಯನ್ನುಂಟುಮಾಡಿದೆ.

ದೂರದಲ್ಲಿ ಮೊದಲು ಕಂಡುದು ಆತನ ಶಿರಸ್ಸು, ಶಿರಸ್ಸಿನ ಮೇಲಿನ ಮಂಡನ. ಚಂದ್ರಕವೆಂದರೆ ನವಿಲುಗರಿಯ ಮೇಲೆ ಕಾಣುವ ಚಂದ್ರಾಕಾರವಾಗಿ ಪ್ರಕಾಶಿಸುವ ಭಾಗ, ಮಯೂರ-ಪಿಂಛದ "ಕಣ್ಣು". ಮೌಲಿಯೆಂದರೆ ತಲೆಯೂ ಆಗಬಹುದು, ತಲೆಯ ಮೇಲಿನ ಕಿರೀಟವೂ ಆಗಬಹುದು. ಎರಡು ಬಗೆಯಲ್ಲಿಯೂ ಕೃಷ್ಣನಿಗೆ ಅದು ಅಲಂಕಾರವೇ. ಹಲವು ವರ್ಣಗಳು ನವಿಲುಗರಿಯಲ್ಲಿರುವುವಲ್ಲವೇ? ನೀರಿನಲ್ಲಿ ತೈಲಬಿಂದುವೊಂದು ಬಿದ್ದರೂ ನಾನಾವರ್ಣಗಳು ಕಾಣುವುವಲ್ಲವೇ? ಎಂದೇ ಅದಕ್ಕೂ ಚಂದ್ರಕವೆಂಬ ಪದವೇ, ಸಂಸ್ಕೃತದಲ್ಲಿ. ಅಂತೂ ಹೀಗೆ ವರ್ಣರಂಜಿತವಾಗಿದ್ದು ಮನೋರಂಜಕವಾಗಿರುವ ಗರಿಯೇ ಶಿರೋಭೂಷಣವಾಗಿರುವುದು, ಕೃಷ್ಣನಿಗೆ.

ಇನ್ನು ಆತನ ಶರೀರವೋ, ಅಭಿರಾಮವಾದುದು, ಎಂದರೆ ಸುಂದರವಾದುದು. ಎಷ್ಟು ಸುಂದರ? ಅದಕ್ಕೊಂದು ಉಪಮೆ ಕೊಡಬಹುದೇ? ಆಗಬಹುದು. ಅದು ಮರಕತ-ಸ್ತಂಭದಂತೆ ಅಭಿರಾಮ. ಮರಕತವೆಂದರೆ ಪಚ್ಚೆಮಣಿ. ಪಚ್ಚೆಮಣಿಯಿಂದಾದ ಕಂಭವೊಂದು ಹೇಗಿರಬಹುದೋ ಹಾಗಿದೆ, ಕೃಷ್ಣನ ಮೈಕಟ್ಟು. ಮರಕತ-ಸ್ತಂಭದಂತೆ ಎಂದೇನು, ಮರಕತ-ಸ್ತಂಭಕ್ಕಿಂತಲೂ ಅಭಿರಾಮ ಎಂದೂ ಸಮಾಸವನ್ನು ಬಿಡಿಸಬಹುದು!

ಮೂರನೆಯದಾಗಿ, ಕೃಷ್ಣನ ವಕ್ತ್ರವು, ಎಂದರೆ ಮುಖವು, ಮಧುರವಾಗಿದೆ. ಏಕೆ? ಹುಬ್ಬುಗಂಟಿಕ್ಕಿರುವ ಮುಖವು ಮಧುರವಾಗಿರುತ್ತದೆಯೇ? ಮುಗುಳ್ನಗೆಯುಳ್ಳ ಮುಖವೇ ಮಧುರವೆನಿಸುವುದು. ಮುಖದ ಮೇಲೆ ಮಿಂಚಿದ ಮಂದಹಾಸವು ಅದೇನೋ ವಿಶಿಷ್ಟವಾಗಿದೆ. ಏನದರ ವೈಶಿಷ್ಟ್ಯವೆಂದು ಹೇಳಬರುವಂತಿಲ್ಲ. ಎಂದೇ ಅದನ್ನು "ಚಿತ್ರ" ಎಂದಿರುವುದು.

ಸಂಸ್ಕೃತದಲ್ಲಿ ಚಿತ್ರ ಎಂಬ ಪದವನ್ನು ವಿಶೇಷಣವಾಗಿ ಬಳಸುವುದುಂಟು. ಅದಕ್ಕೆ ಆಶ್ಚರ್ಯಕರವಾದ ಎಂಬ ಅರ್ಥ. ಯಾವುದು ವಿಶೇಷವಾಗಿ ಮುಗ್ಧವೋ, ಎಂದರೆ ಮುದ್ದೋ, ಅದುವೇ ವಿಮುಗ್ಧ. ಹಾಗೆ ಶ್ರೀಕೃಷ್ಣನ ಸುಮುಖದಲ್ಲಿ ಮಧುರತೆಯನ್ನು ಮೂಡಿಸಿರುವುದು ಆತನ ಚಿತ್ರವೂ ವಿಮುಗ್ಧವೂ ಆದ ಹಾಸ.

ನಾಲ್ಕನೆಯದು ಇನ್ನೂ ಹತ್ತಿರದ ನೋಟ. ಆತನ ಕಣ್ಣುಗಳಲ್ಲಿ ಎರಡು ಸೊಗಸುಗಳು: ಎಳಸು, ಚಂಚಲತೆ. ವಯಸ್ಸಾದವರ ಕಣ್ಣ ಸುತ್ತ ಸುಕ್ಕೋ ಕಪ್ಪೋ ತೋರುವುದು. ಆಗಷ್ಟೆ ಯೌವನೋದಯವಾಗಿರುವವರ ಕಣ್ಣುಗಳಲ್ಲಿ ಹೊಳಪು ತುಂಬಿರುವುದು. ಜಿಂಕೆಯ ಕಣ್ಣು ಸೊಗಸಾಗಿ ಕಾಣುವುದೇ ಅದರ (ಗುಡ್ಡೆಯ) ಚಂಚಲತೆಯಿಂದಲ್ಲವೇ? ಹೀಗೆ ಬಾಲವೂ ಲೋಲವೂ ಆಗಿವೆ ಕೃಷ್ಣನ ನೋಟಗಳು. ವಿಶೇಷವಾಗಿ ಲೋಲವಾಗಿದ್ದರೆ ವಿಲೋಲವೆನ್ನುವುದು.

ಐದನೆಯದು ಆತನ ಮಾತುಗಳು. ಆತನಿನ್ನೂ ದೊಡ್ಡವನಾಗಿಲ್ಲ. ಆತನಲ್ಲಿ ಇನ್ನೂ ಉಳಿದಿರುವ ಆ "ಶೈಶವ"ದಿಂದಾಗಿಯೇ ಆತನ ಮಾತುಗಳು ಕೇಳಲೇ ತಂಪು. ಹೀಗೆ ಶೈಶವದಿಂದಾಗಿ ಶೀತಲವಾಗಿಯೇ ಉಳಿದಿವೆ ಅವು.

ಇನ್ನು ಕೊನೆಯದಾಗಿ, ಎಂದರೆ ಆರನೆಯದಾಗಿ, ಅವನ ನಡೆಯೇ ನೋಡಲು ಚೆನ್ನ. ಅವನು ಹೆಜ್ಜೆಯಿಡುವುದೇನು, ಕೈಚಲನ ಮಾಡುವುದೇನು,  ಎಲ್ಲವೂ ವಿಲಾಸಭರಿತವಾದವೇ. ಎಂತಹ ವಿಲಾಸವದು? ಮದಗಜಕ್ಕಿಂತಲೂ ಶ್ಲಾಘ್ಯವಾದುದು!

"ಮೆಲ್ಲಮೆಲ್ಲನೆ ಬಂದನೇ, ಗೋಪಮ್ಮ ಕೇಳೇ" ಎಂಬ ದಾಸರ ಪದವು ಈ ಪದ್ಯವನ್ನೋದಿದವರಿಗೆ ಸ್ಮರಣೆಗೆ ಬರುತ್ತದೆ.

ಮಂದ-ಗಮನದೊಂದಿಗೆ ಮಧುರವಾದ ಮಥುರೆಯ ಮಾರ್ಗದಲ್ಲಿ ಮುಂದುವರೆಯುತ್ತಿದ್ದಾನೆ, ಮುಗ್ಧ-ಮಧುಸೂದನ! ಯಾವುದು ಮನಸ್ಸನ್ನು ಮುದಗೊಳಿಸುವುದೋ, ಮಥಿಸುವುದೋ ಅದುವೇ ಮಥುರೆ - ಎಂದು ಈ ಪದಕ್ಕೆ ವಿವರಣೆಯನ್ನು ಕೊಡುವುದುಂಟು!

ಹೀಗೆ ಕೃಷ್ಣನಲ್ಲಿಯ ಆರು ಅಂಶಗಳನ್ನು ಗಮನಿಸಿ ಮಾರುಹೋಗಿದ್ದಾಳೆ, ಈ ಮುಗ್ಧ-ಗೋಪಿಕೆ, ಈ ಮಧುರ-ಮಾಧವನಿಗೆ.

ಶ್ಲೋಕವಿದು:

ಮೌಲಿಃ ಚಂದ್ರಕ-ಭೂಷಣೋ, ಮರಕತ-ಸ್ತಂಭಾಭಿರಾಮಂ ವಪುಃ,/

ವಸ್ತ್ರಂ ಚಿತ್ರ-ವಿಮುಗ್ಧ-ಹಾಸ-ಮಧುರಂ, ಬಾಲೇ ವಿಲೋಲೇ ದೃಶೌ,|

ವಾಚಃ ಶೈಶವ-ಶೀತಲಾಃ, ಮದ-ಗಜ-ಶ್ಲಾಘ್ಯಾ ವಿಲಾಸ-ಸ್ಥಿತಿಃ,/

ಮಂದಂ ಮಂದಂ ಅಯೇ ಕ ಏಷ ಮಥುರಾ-ವೀಥೀಂ ಇತೋ ಗಾಹತೇ?||

ಮತ್ತೊಂದು ಪದ್ಯ:

ನನ್ನ ವಾಙ್ಮಯಕ್ಕೆ ಜೀವಿತವಾದವನು ಶ್ರೀಕೃಷ್ಣ. ಆತನು ವಿಜಯಿಸಲಿ ಎನ್ನುತ್ತದೆ, ಈ ಶ್ಲೋಕ.

ನನ್ನ ವಾಙ್ಮಯವೆಂದರೆ ಪ್ರಕೃತ, ಶ್ರೀಕೃಷ್ಣಕರ್ಣಾಮೃತ. ತನ್ನ ಈ ಕಾವ್ಯದ ವಸ್ತುವಾದ ಕೃಷ್ಣನಿಗೆ ಜಯಕಾರವನ್ನು ಹೇಳುತ್ತಿದ್ದಾನೆ, ಕವಿ.

ದೇವರಿಗೆ ನಾವೇನು ಜಯವನ್ನು ಹೇಳುವುದು? ನಾವು ಹೇಳದಿದ್ದರೆ ಅವನು ಸೋತುಬಿಡುವನೆಂದೇ? ಹಾಗಲ್ಲ. ಜಯವೆಂದರೆ ಸರ್ವೋತ್ಕರ್ಷ. ಹಾಗೆಂದರೆ ಎಲ್ಲವನ್ನೂ ಮೀರಿಸಿರುವಿಕೆ. ತನ್ನೆಲ್ಲ ವೈಭವವನ್ನೂ ತುಂಬಿಕೊಂಡು ನನ್ನನ್ನು ಅನುಗ್ರಹಿಸಲಿ - ಎಂಬ ಭಾವವಿಲ್ಲಿದೆ.

ಶ್ಲೋಕದಲ್ಲೆಲ್ಲೂಕೃಷ್ಣನ ಹೆಸರನ್ನೇ ಬಳಸದೆ,  ಶ್ರೀಕೃಷ್ಣನಿಗೇ ವಿಶಿಷ್ಟವಾಗಿರುವ ಅಂಶಗಳನ್ನು ಹೇಳತಕ್ಕ ನಾಲ್ಕು ವಿಶೇಷಣಗಳಿಂದ ಕೃಷ್ಣನನ್ನು ಜಾಣ್ಮೆಯಿಂದ ಸೂಚಿಸಿದ್ದಾನೆ, ಕವಿ. ತನ್ನ ವಾಙ್ಮಯಕ್ಕೇ ಪ್ರಾಣಭೂತನಾದವನು ಶ್ರೀಕೃಷ್ಣ. ಹಾಗೆಂದರೆ, ಶ್ರೀಕೃಷ್ಣನ ಸುತ್ತಲೇ ಹೆಣೆದಿರುವ ಕೃತಿಯಿದು ಎಂದರ್ಥ. ಕೃಷ್ಣಹೀಗಿರುವನೆಂಬುದೇ ಒಂದು ವಿಶೇಷಣ, ಆತನಿಗೆ.

ಇನ್ನುಳಿದ ಮೂರು ವಿಶೇಷಣಗಳನ್ನು ಗಮನಿಸಬಹುದು. ಕೃಷ್ಣನನ್ನು ಶಿಖಂಡ-ವಿಭೂಷಣನೆಂದು ವಿಶೇಷಿಸದೆ. ಶಿಖಂಡವೆಂದರೆ ನವಿಲಿನ ಗರಿ;  ಶಿಖಂಡಿಯೆಂದರೆ ನವಿಲು. ಮದಶಿಖಂಡಿಯೆಂದರೆ ಮದಿಸಿದ ನವಿಲು. ಮತ್ತ-ಮಯೂರವು ನರ್ತನಮಾಡುವಾಗ ಅದರ ಗರಿಗಳುದುರುತ್ತವೆ. ಕೃಷ್ಣನ ವರ್ಣವೂ ಮೇಘಗಳ ವರ್ಣವೂ ಒಂದೇ ಆದ್ದರಿಂದ ಆತನು ಕಾಣುತ್ತಲೇ ಮದಿಸಿದ ಮಯೂರಗಳು ನರ್ತಿಸಲಾರಂಭಿಸುತ್ತವೆ. ಹಾಗೆ ಬಿದ್ದ ಗರಿಯೊಂದನ್ನು ಭೂಷಣವನ್ನಾಗಿಸಿಕೊಂಡಿದ್ದಾನೆ, ಕೃಷ್ಣ.

ಮೂರನೆಯದಾಗಿ, ಶ್ರೀಕೃಷ್ಣ-ವದನಾರವಿಂದವು ಅತಿಮುದ್ದು. ಎಷ್ಟೆಂದರೆ, ಮದನನನ್ನೇ ಮಂಥರನನ್ನಾಗಿಸುವುದು ಅದು! ಏನು ಹಾಗೆಂದರೆ? ತಾನೇ ತ್ರಿಲೋಕ-ಸುಂದರನೆಂಬ ಭಾವನೆಯಲ್ಲವೇ  ಮದನನಿಗೆ? ಆದರೆ ಶ್ರೀಕೃಷ್ಣನ ಮುಖವನ್ನೊಮ್ಮೆ ಕಂಡುಬಿಟ್ಟರೆ, ಮದನನೇ ಸ್ತಂಭೀಭೂತನಾಗಿಬಿಡುವನು! ಯಾರು ಹಾಗೆ ಮನಸಾರೆ ಮೆಚ್ಚಿ ಸ್ತಬ್ಧರಾಗಿಬಿಡುವರೋ, ಅಂತಹವರು ಸರಸರನೆ ನಡೆಯಲಾರರು. ಎಂದೇ ಮಂಥರನಾಗಿದ್ದಾನೆ, ಮದನ. ಮಂಥರನೆಂದರೆ ಮೆಲ್ಲನೆಯ ನಡೆಯವನು.

ಕೊನೆಯದಾಗಿ, ಗೋಪಿಯರ ಕಟಾಕ್ಷಕ್ಕೆ ಮೋಸಹೋದವನು, ಕೃಷ್ಣ! ವ್ರಜ-ವಧುಗಳೆಂದರೆ ಗೋಪಸ್ತ್ರೀಯರು. ಅವರ ಕಣ್ಣಂಚೇ ನಯನಾಂಚಲ, ಕಟಾಕ್ಷ. ಅದಕ್ಕೆ ಮನಸೋತ ಪ್ರಭುವಿವನು! ತನ್ನೀ ಮಾನುಷಾವತಾರದಲ್ಲಿ ಪರಮ-ಸೌಲಭ್ಯವನ್ನು ತೋರಿಸಿಕೊಂಡಿರತಕ್ಕವನು. ಎಂದೇ ಗೋಪಿಕೆಯರ ಸಲಿಗೆಗಳಿಗೆ ಕಡಿವಾಣಹಾಕದವನು. ಗೋಪ-ಬಾಲೆಯರ ಮುಗ್ಧ-ಪ್ರೇಮಕ್ಕೆ ತನ್ನನ್ನೇ ಒಪ್ಪಿಸಿಕೊಂಡವನು.

ಅಂತಹ ನನ್ನ ಕೃಷ್ಣನು ಜಯಿಸಲಿ! – ಎಂದಿದ್ದಾನೆ, ಲೀಲಾಶುಕ:

ಮದ-ಶಿಖಂಡಿ-ಶಿಖಂಡ-ವಿಭೂಷಣಂ /
ಮದನ-ಮಂಥರ-ಮುಗ್ಧ-ಮುಖಾಂಬುಜಂ |
ವ್ರಜ-ವಧೂ-ನಯನಾಂಚಲ-ವಂಚಿತಂ /
ವಿಜಯತಾಂ ಮಮ ವಾಙ್ಮಯ-ಜೀವಿತಂ ||

ಮಕಾರ ಮೊದಲಾದುವುಗಳ ಅನುಪ್ರಾಸ ಶ್ಲೋಕಸೌಂದರ್ಯವನ್ನು ವರ್ಧಿಸಿದೆ.

ಸೂಚನೆ : 31/1/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Monday, January 26, 2026

ಪ್ರಶ್ನೋತ್ತರ ರತ್ನಮಾಲಿಕೆ 50 (Prasnottara Ratnamalike 50)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ - ೫೦ - ಮೂಕನು ಯಾರು ?

ಉ. ಸರಿಯಾದ ಸಮಯದಲ್ಲಿ ಒಳ್ಳೆಯಮಾತನ್ನು ಆಡದವ.

ಈ ಹಿಂದಿನ ಎರಡು ಪ್ರಶ್ನೋತ್ತರಗಳಿಗೆ ಹತ್ತಿರವಾದ ಪ್ರಶ್ನೋತ್ತರ ಇದಾಗಿದೆ. ಕುರುಡ, ಕಿವುಡ ಮತ್ತು ಮೂಕ ಈ ಮೂರು ದೋಷಗಳು, ಈ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ಇರುವ ಪ್ರಧಾನವಾದ ಮೂರು ಇಂದ್ರಿಯಗಳಿಗೆ ಬರುವ ದೋಷಗಳು. ಇವು ಮೂರು ಇದ್ದರೆ ಅಥವಾ ಇವುಗಳಲ್ಲಿ ಒಂದು ಅಥವಾ ಎರಡು ಇದ್ದರೂ ಆ ವ್ಯಕ್ತಿಯು ತನ್ನ ಜೀವನದಲ್ಲಿ ಯಾವುದೋ ಬಗೆಯ ಖೇದವನ್ನು ಅನುಭವಿಸುತ್ತಾನೆ, ಅಥವಾ ಈ ಅನುಭವಕ್ಕೆ ಹಿಂದಿನ ಯಾವುದೋ ಖೇದ ಕಾರಣ ಎಂಬ ಕರ್ಮಸಿದ್ದಾಂತ ಇದರ ಹಿಂದೆ ಅಡಗಿದೆ. ಆಯುರ್ವೇದದಲ್ಲಿ ಹೇಳುವಾಗ - ಗರ್ಭೋತ್ಪತ್ತಿಯ ಸಂದರ್ಭದಲ್ಲಿ ವಾತದ ಉದ್ರೇಕದಿಂದಾಗಿ ಗರ್ಭಸ್ಥ ಶಿಶುವಿನ ಈ ಇಂದ್ರಿಯಗಳಿಗೆ ಸಂಬಂಧಪಟ್ಟ ನಾಡಿಗಳು ಅಥವಾ ಧಮನಿಗಳು ತಡೆಯಲ್ಪಡುತ್ತವೆ. ಇದರಿಂದ ಈ ದೋಷಗಳು ಉಂಟಾಗುತ್ತವೆ ಎಂಬುದಾಗಿ. ಇಂದ್ರಿಯದ ಹೊರಕವಚ ಎಷ್ಟೇ ಚೆನ್ನಾಗಿ ಇದ್ದರೂ, ಉಳಿದ ಎಲ್ಲಾ ಭಾಗಗಳು ಇದ್ದರೂ, ಇಂದ್ರಿಯದ ಪ್ರಧಾನವಾದ ಭಾಗ ಮಾತ್ರ ಅಲ್ಲಿ ನಷ್ಟವಾಗಿರುತ್ತದೆ. ಅಂತಯೇ ಇಲ್ಲೂ ಸಹ ಬಾಯಿ ಇದೆ, ಆದರೂ ಮಾತನಾಡದಿರುವ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಅವನನ್ನು 'ಮೂಕ' ಎನ್ನಲಾಗುತ್ತದೆ. 

ಪ್ರಕೃತ ಪ್ರಶ್ನೆಯ ಆಶಯ ಅದಲ್ಲ. ಒಬ್ಬ ಮಾತನ್ನು ಆಡುವ ವ್ಯಕ್ತಿ ಯಾವ ಸಂದರ್ಭದಲ್ಲಿ ಮಾತನ್ನು ಆಡಬೇಕು; ಯಾವ ಸಂದರ್ಭದಲ್ಲಿ ಮಾತನ್ನು ಆಡಬಾರದು; ಎಷ್ಟು ಮಾತನ್ನು ಆಡಬೇಕು; ಹೇಗೆ ಮಾತನ್ನು ಆಡಬೇಕು? ಎಂಬ ವಿವೇಕವನ್ನು - ಅರಿವನ್ನು ಕಳೆದುಕೊಂಡಾಗ ಬಾಯಿ ಇದ್ದರೂ ಅವನು ಮೂಕನಾಗುತ್ತಾನೆ ಎಂಬುದು ಇಲ್ಲಿನ ತಾತ್ಪರ್ಯ. 

ಮಾತನಾಡಲು ಇರುವ ಇಂದ್ರಿಯ ಬಾಯಿ. ಇದನ್ನು 'ಕರ್ಮೇಂದ್ರಿಯ' ಎಂಬುದಾಗಿ ಕರೆಯಲಾಗುತ್ತಾರೆ. ಮಾತು ಅತ್ಯಂತ ಪ್ರಧಾನವಾದ ಸಾಧನ. ಇದರಿಂದ ನಮ್ಮ ಮುಂದಿರುವ ವ್ಯಕ್ತಿಯನ್ನು ಪ್ರಭಾವಿಸಬಹುದು. ವ್ಯಕ್ತಿಯಲ್ಲಿ ಅನೇಕ ಪರಿವರ್ತನೆಗಳನ್ನು ಮಾಡಬಹುದು. ಕೇವಲ ಮಾತನಾಡುವುದರಿಂದಲೇ ಆ ಸಂದರ್ಭದಲ್ಲಿ ಇಲ್ಲದ ಒಲ್ಲದ ಸಂದರ್ಭವನ್ನೂ ಸೃಷ್ಟಿಸಬಹುದು ಎಂದು ಶ್ರೀರಂಗ ಮಹಾಗುರು ಮಾತಿಗಿರುವ ಶಕ್ತಿಯನ್ನು ಹೀಗೆ ಹೇಳುತ್ತಿದ್ದರು ಎಂಬುದಾಗಿ ಅವರ ಶಿಷ್ಯರಿಂದ ಕೇಳಿದ್ದೇವೆ. "ಅತ್ಯಂತ ಬಿರು ಬೇಸಿಗೆಯಲ್ಲೂ ಮಾತಿನಿಂದ ಶೈತ್ಯವಾಗುವಂತೆ ಮಾಡಬಹುದಪ್ಪಾ, ಅಥವಾ ಶೀತಕಾಲದಲ್ಲೂ ಬೆವರು ಬರಿಸಬಹುದಪ್ಪ" ಎಂಬುದಾಗಿ. ಇದು ಮಾತಿಗಿರುವ ಶಕ್ತಿ ಎಷ್ಟು ಎಂಬುದನ್ನು ತಿಳಿಸುತ್ತದೆ. ಅಂದರೆ ಒಬ್ಬ ವ್ಯಕ್ತಿಯನ್ನು ಸರಿಯಾದ ಮಾತುಗಳಿಂದ ಒಪ್ಪಿಸುವ ಕಾಲವಿರುತ್ತದೆ. ಆಗ ಹೇಳಬೇಕಾದದ್ದನ್ನು ಹೇಳಬೇಕಾಗುತ್ತದೆ. ಅದಕ್ಕೆ ಅದು ಸಕಾಲವಾಗಿರುತ್ತದೆ. ಹೇಳಬಾರದದ್ದನ್ನು ಹೇಳಬಾರದು. ಅಥವಾ ಎಷ್ಟು ಹೇಳಬೇಕು ಎಂಬ ಒಂದು ಮಿತಿ ಇರಬೇಕಾಗುತ್ತದೆ. ಹಾಗಾಗಿ ಮಿತವಾದ ಮಾತು ಇರಬೇಕಾಗುತ್ತದೆ. ಮಾತಿನಲ್ಲಿ ಮಿತಿ ತಪ್ಪಿದರೆ ಮೃತ್ಯುವಿಗೂ ಆಹ್ವಾನವಿತ್ತಂತೆ ಎಂಬುದಾಗಿ ಸುಭಾಷಿತವು ಸಾರುತ್ತದೆ. ಅಂದರೆ ಮಿತವರಿತು ಮಾತನಾಡಬೇಕು ಎಂಬುದೂ ಇದರ ತಾತ್ಪರ್ಯ. ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪಹರಣದ ಸಂದರ್ಭದಲ್ಲಿ ಒಳ್ಳೆಯ ಮಾತನ್ನು ಹೇಳಬೇಕಾದ, ಹೇಳಲೇಬೇಕಾದ, ಉತ್ತಮಸ್ಥಾನ ಮತ್ತು ಅಧಿಕಾರಸಂಪತ್ತಿನಿಂದ ಕೂಡಿದ ಕುರುಕುಲಪಿತಾಮಹರಾದ ಭೀಷ್ಮಾಚಾರ್ಯರು ದುರ್ಯೋಧನನ ಪಾಳಯಕ್ಕೆ ಸರಿಯಾಗಿ ಬುದ್ಧಿವಾದವನ್ನು ಹೇಳಲಿಲ್ಲ. ಇಂತಹ ವಿಭಿನ್ನ ಸಂದರ್ಭಗಳಲ್ಲಿ ಮಾತನಾಡುವ ಸಂದರ್ಭದಲ್ಲಿ ಆಡದಿದ್ದರೆ ಅಥವಾ ಮಾತನಾಡದ ಸಂದರ್ಭದಲ್ಲಿ ಮಾತನಾಡಿದರೆ ಆಗ ಅವನು ಬಾಯಿದ್ದೂ ಮೂಕನಂತೆ ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.

ಸೂಚನೆ : 24/1/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.