Sunday, March 1, 2026

ವ್ಯಾಸ ವೀಕ್ಷಿತ 177 ಕೃಷ್ಣಾರ್ಜುನ-ಭೀಮರು ಮಾಗಧಕ್ಕೆ ಪ್ರಯಾಣಿಸಿದುದು ( Vyaasa Vikshita 177)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)





ಜರಾಸಂಧ-ವಧೆಯನ್ನು ಮಾಡುವಲ್ಲಿ ಕೃಷ್ಣನಿತ್ತ ಸಲಹೆ ಅಮೂಲ್ಯವಾದುದೆಂದೂ, ನೀತಿ-ಬಲ-ಕ್ರಿಯೆಗಳ ಸಂಗಮವೇ ಕಾರ್ಯ-ಸಾಧಕವೆಂದೂ ಯುಧಿಷ್ಠಿರನು ಮನಗಂಡನು. ಅರ್ಜುನನ ದಶ-ನಾಮಗಳಲ್ಲಿ ಕೃಷ್ಣನೆಂಬುದೂ ಒಂದಾದ್ದರಿಂದ, ಯುಧಿಷ್ಠಿರನ ಮಾತು ಹೀಗೆ ಸಾಗಿತು:

"ಈ ಇಬ್ಬರು ಕೃಷ್ಣರಿಗೆ, ಎಂದರೆ ಕೃಷ್ಣಾರ್ಜುನರಿಗೆ, ಅಜೇಯನಾದವನೇ ಇಲ್ಲ – ಅರ್ಥಾತ್, ಇವರಿಬ್ಬರಿಗೆ ಸೋಲಿಸಲಾಗದವನೇ ಇಲ್ಲ - ಎಂದೇ ನಾನು ಭಾವಿಸುತ್ತೇನೆ.

ಮತ್ತು ಈ ವೃಕೋದರ-ಭೀಮನಾದರೂ ಬಲಶಾಲಿಗಳಲ್ಲೇ ಶ್ರೇಷ್ಠನಾದವನು. ನಿಮ್ಮಿಬ್ಬರೊಂದಿಗೆ ಸೇರಿದ ಈ ಮಹಾಕೀರ್ತಿ-ಸಂಪನ್ನನಾದ ವೀರನು ಏನನ್ನು ತಾನೆ ಸಾಧಿಸಲಾರ?

ಸೈನ್ಯ-ಸ್ತೋಮವು ಉತ್ತಮ-ಕಾರ್ಯವನ್ನು ಸಾಧಿಸುವುದು ಯಾವಾಗ? ನೇತಾರನಿಂದ  ಸರಿಯಾಗಿ ಸಂಚಾಲಿತವಾದಾಗ. ಬಲವೆಂಬುದು ತನ್ನಷ್ಟಕ್ಕೆ ಕುರುಡೆಂದೂ, ಜಡವೆಂದೂ ಹೇಳುವರು; ಎಂದೇ, ವಿಚಕ್ಷಣರೇ ಅದನ್ನು ಮುನ್ನಡೆಸಬೇಕು.

ಹೀಗೆ, ಕಾರ್ಯವು ಸಿದ್ಧಿಸಬೇಕೆಂದರೆ, ಪ್ರಜ್ಞೆ-ರಾಜ-ನೀತಿಗಳೆಂಬ ಬಲಗಳಿಂದ ಕೂಡಿರುವವನೂ, ಕ್ರಿಯೆಯ ಉಪಾಯವನ್ನು ಹೊಂದಿರುವವನೂ ಆದ ಶ್ರೀಕೃಷ್ಣನನ್ನೇ ಮುಂದಿಟ್ಟುಕೊಂಡು ಹೊರಡಬೇಕು.

ಯದುಶ್ರೇಷ್ಠನಾದ ಕೃಷ್ಣನೇ, ಕಾರ್ಯಸಿದ್ಧಿ-ಪರ್ಯಂತವೂ ಅರ್ಜುನನು ಕೃಷ್ಣನನ್ನು ಅನುಸರಿಸಲಿ, ಹಾಗೂ ಭೀಮನು ಅರ್ಜುನನನ್ನು ಅನುಸರಿಸಲಿ. ನಯ-ಜಯ-ಬಲ - ಇವುಗಳು ಸೇರಿ, ವಿಕ್ರಮದಲ್ಲಿ ತಮ್ಮ ಸಿದ್ಧಿಯನ್ನು ಹೊಂದುವುವು" ಎಂದು ಆತನು ತನ್ನ ಮಾತನ್ನು ಮುಗಿಸಿದನು.

ಯುಧಿಷ್ಠಿರನು ಹೀಗೆಂದು ಹೇಳಲಾಗಿ, ಮಹಾ-ತೇಜಸ್ವಿಗಳೆನಿಸಿದ ಕೃಷ್ಣ-ಅರ್ಜುನ-ಭೀಮಸೇನರು ಜರಾಸಂಧನ ರಾಜಧಾನಿಯತ್ತ ಸಾಗಿದರು. ವರ್ಚಸ್ವಿಗಳಾದ, ಎಂದರೆ ತೇಜಸ್ಸಂಪನ್ನರಾದ, ಸ್ನಾತಕ-ಬ್ರಾಹ್ಮಣರ ಪರಿಚ್ಛದವನ್ನು ,ಎಂದರೆ ವೇಷ-ಭೂಷಣಗಳನ್ನು, ಅವರು ಧರಿಸಿಕೊಂಡರು: ಈ ಮೂಲಕ ತಮ್ಮನ್ನೇ ಮರೆಮಾಚಿಕೊಂಡರು. ಆ ಸಂದರ್ಭದಲ್ಲಿ ಅವರ ಸ್ನೇಹಿತರು ತಮ್ಮ ಮನೋಹರವಾದ ಮಾತುಗಳಿಂದ  ಅವರನ್ನು ಅಭಿನಂದಿಸಿದರು.

ಈ ಮೂವರೂ ಜರಾಸಂಧನ ವಿಷಯಕ್ಕೆ ರೋಷದಿಂದ ಕುದಿಯುತ್ತಿದ್ದರು. ಎಂದೇ ಸೂರ್ಯ-ಚಂದ್ರ-ಅಗ್ನಿಗಳಂತೆ ಅವರ ಶರೀರವು ಜ್ವಲಿಸುತ್ತಿತ್ತು. ಯುದ್ಧದಲ್ಲಿ ಎಂದೂ ಸೋಲನ್ನೇ ಕಂಡಿರದ, ಹಾಗೂ ಒಂದೇ ಕಾರ್ಯಕ್ಕಾಗಿಯೇ ಸಮುದ್ಯತರಾಗಿದ್ದ, ಹಾಗೂ ಭೀಮನನ್ನು ಮುಂದಿಟ್ಟುಕೊಂಡು ಹೊರಟಿದ್ದ, ಆ ಕೃಷ್ಣರಿಬ್ಬರನ್ನು ಹಾಗೆ ಕಂಡ ಯುಧಿಷ್ಠಿರನು, ಜರಾಸಂಧನು ಹತನಾದನೆಂದೇ ಭಾವಿಸಿದನು.

ಎಷ್ಟಾದರೂ ಅವರಿಬ್ಬರೂ ಎಂತಹವರು! ಧರ್ಮ-ಕಾಮ-ಅರ್ಥ ಇವುಗಳನ್ನು ಸಾಧಿಸುವ ಲೋಗರನ್ನು ತೊಡಗಿಸುವವರು! ಅವರು ನರ-ನಾರಾಯಣರೇ ಸರಿ!

ಕುರು ಪ್ರದೇಶದಿಂದ ಹೊರಟ ಅವರು, ದಾರಿಯಲ್ಲಿ ನಾನಾ-ಪ್ರದೇಶಗಳನ್ನು ಕಂಡರು. ಕುರು-ಜಾಂಗಲ ಪ್ರದೇಶ, ಅಲ್ಲಿ ರಮಣೀಯವಾದ ಪದ್ಮ-ಸರಸ್ಸು, ಮುಂದಕ್ಕೆ ಕಾಲಕೂಟ-ಪರ್ವತ, ಅದನ್ನೂ ದಾಟಿದ ಮೇಲೆ ಗಂಡಕಿ, ಮಹಾ-ಶೋಣ, ಸದಾ-ನೀರಾ ನದಿಗಳು, ಬಳಿಕ ಏಕಪರ್ವತಕ-ಪ್ರದೇಶದ ನದಿಗಳು - ಇವೆಲ್ಲವನ್ನೂ ಮೀರಿ ನಡೆದರು.

ಆಮೇಲೆ ರಮ್ಯವಾದ ಸರಯೂ-ನದಿ, ಪೂರ್ವಕೋಸಲ-ದೇಶ, ಬಳಿಕ ಮಿಥಿಲೆ. ಅಲ್ಲಿ ವಿಪುಲವಾದ ನದಿಗಳನ್ನು ಕಾಣುತ್ತಾ ಗಂಗೆ-ಶೋಣಭದ್ರಾ-ನದಿಗಳನ್ನು ದಾಟಿದರು. ಮುಂದಕ್ಕೆ ಪೂರ್ವಾಭಿಮುಖವಾಗಿ ಹೊರಟರು. ಕುಶ-ಚೀರವಸ್ತ್ರಗಳನ್ನು ಧರಿಸಿದ್ದ ಅವರು, ಮುಂದೆ ಮಾಗಧ-ಸೀಮೆಯನ್ನು ಸೇರಿದರು. ಅಲ್ಲಿ ಗೋ-ಧನದಿಂದ ತುಂಬಿತುಳುಕಿದ್ದುದೂ, ಜಲಸಮೃದ್ಧಿ-ಸಸ್ಯಸಮೃದ್ಧಿಗಳನ್ನುಳ್ಳದ್ದೂ ಆದ ಗೋರಥ-ಗಿರಿಯನ್ನು ತಲುಪಿ, ಅಲ್ಲಿ ಮಾಗಧ-ಪುರವನ್ನು ಕಂಡರು.

ಆಗ ವಾಸುದೇವನೇ ಮಾಗಧ-ದೇಶವನ್ನು ಪ್ರಶಂಸಿಸಿದನು: ಗೋಸಂಪತ್ತು, ನಿತ್ಯ-ಜಲಸಮೃದ್ಧಿಗಳನ್ನುಳ್ಳ ದೇಶವಿದಲ್ಲವೇ! ಈ ಶುಭ-ಮಾಗಧ-ನಿವೇಶಗಳು ಸೊಗಸಾದವು. ಇಲ್ಲಿನ ಜನಗಳಾದರೂ ವ್ಯಾಧಿಗಳಿಲ್ಲದಿರುವರು. ಮನೆಗಳು ಸೊಗಸಾಗಿವೆ. ಹೀಗಾಗಿ, ಈ ಮಾಗಧ-ದೇಶವೇ ಮನೋಹರವಾಗಿದೆ.

ವಿಪುಲ, ವರಾಹ, ವೃಷಭ, ಋಷಿಗಿರಿ ಹಾಗೂ ಚೈತ್ಯಕ – ಎಂಬ ಹೆಸರಿನ ಐದು ವಿಹಾರ-ಯೋಗ್ಯವಾದ ಪರ್ವತಗಳಿಲ್ಲಿವೆ.

ಸೂಚನೆ : 1/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 55 (Prasnottara Ratnamalike 55)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ - ೫೫ - ಮಿಂಚಿನಂತೆ ಚಪಲವಾದುದು ಯಾವುದು? 

ಉ. ದುರ್ಜನಸಂಗ ಮತ್ತು ಯುವತಿ.


ಪ್ರಕೃತ ಉತ್ತರದಲ್ಲಿ ಎರಡು ಸಂಗತಿಗಳನ್ನು ಅತ್ಯಂತ ಚಪಲವಾದವುಗಳು ಎಂಬುದಾಗಿ ಗಣಿಸಲಾಗಿದೆ. ಅದಕ್ಕೆ ಒಂದು ಉದಾಹರಣೆಯನ್ನೂ ಇಲ್ಲಿ ಕೊಡಲಾಗಿದೆ. ಉದಾಹರಣೆಯು ಆ ಚಪಲತೆ ಅಥವಾ ಚಂಚಲತೆಗೆ ತುಂಬಾ ಲಗತ್ತಾಗಿ ಹೊಂದಿಕೊಳ್ಳುವ ವಿಷಯವಾಗಿದೆ. ಇದರಿಂದ ಈ ಉತ್ತರದಲ್ಲಿ ಹೇಳಿರುವ ದುರ್ಜನಸಂಗ ಮತ್ತು ಯುವತಿ ಎರಡು ವಿಷಯಗಳು ಎಷ್ಟು ಚಪಲ? ಎಂಬುದನ್ನು ತಿಳಿಯಬಹುದಾಗಿದೆ. ಮಿಂಚು ಎಲ್ಲರಿಗೂ ತಿಳಿದಂತೆ ಒಂದು ಕ್ಷಣ ಆಕಾಶದಲ್ಲಿ ನಮ್ಮ ಕಣ್ಣಿಗೆ ಗೋಚರಿಸಿ ಮರೆಯಾಗುವ ವಿಷಯವಾಗಿದೆ. ಅಂತೆಯೇ ಈ ದುರ್ಜನಸಂಗ ಮತ್ತು ಯುವತಿಯ ಸಂಗವು ಕೂಡ ನಮ್ಮ ಜೀವನದಲ್ಲಿ ಅಷ್ಟು ಕ್ಷಣಿಕವಾದವುಗಳು. ಮಿಂಚು ಹೇಗೆ ಕಣ್ಣಿಗೆ ಕ್ಷಣಿಕ ಆನಂದವನ್ನು ಕೊಟ್ಟು ಮರೆಯಾಗುತ್ತದೆಯೋ ಅಂತೆಯೇ ಈ ಎರಡು ಸಂಗತಿಗಳೂ ಕೂಡ ಎಂಬ ಮಾರ್ಮಿಕ ವಿಷಯವನ್ನು ಈ ಪ್ರಶ್ನೋತ್ತರ ಸಾರುತ್ತದೆ. ಹಾಗಾದರೆ ಇವೆರಡು ಏಕೆ ಅಷ್ಟು ಚಂಚಲ? ಎಂಬುದನ್ನು ನಾವು ವಿಚಾರಿಸಬೇಕಾಗಿದೆ. ದುರ್ಜನರ ಸಂಗ ಮತ್ತು ಯುವತಿಯರ ಸಂಗ ಇವೆರಡೂ ನಮ್ಮನ್ನು ಸನ್ಮಾರ್ಗದಿಂದ ಚ್ಯುತಿಗೊಳಿಸುವ ವಿಧಾನವಾಗಿವೆ. ಹಾಗಾಗಿ ಇವೆರಡೂ ದೂರವಿಡಲು ಯೊಗ್ಯವಾದ ವಿಷಯಗಳು ಎಂಬುದನ್ನು ಅರಿಯಬೇಕಾಗಿದೆ.

ನಮ್ಮ ಜೀವನವು ಹೇಗೆ ಸಾಗಬೇಕಾಗಿದೆ? ಎಂಬುದನ್ನು ತಿಳಿದಾಗ, ಆ ಜೀವನಕ್ಕೆ ಎರಡು ಸಂಗತಿಗಳು ಎಷ್ಟು ವಿರೋಧವಾದವುಗಳು ಎಂಬುದನ್ನು ತಿಳಿಯಬಹುದು. ಅಂದರೆ ದುರ್ಜನರ ಸಂಪರ್ಕ ಮತ್ತು ಯುವತಿಯ ಸಾಂಗತ್ಯವು ಅತ್ಯಂತ ಚಂಚಲವಾಗಿದ್ದು, ಅವು ನಮ್ಮ ಜೀವನದಲ್ಲಿ ಮಿಂಚಿನಂತೆ ಬಂದುಹೋಗುತ್ತವೆ. ಶಾಶ್ವತವಾದವುಗಳಲ್ಲ. ಅವುಗಳನ್ನೇ ನೆಚ್ಚಿ ಕೂತರೆ ಬದುಕು ಅಸಾಧ್ಯ. ಹಾಗಾಗಿ ಇವೆರಡು ಕೂಡ ತ್ಯಾಜ್ಯ ಎಂಬುದು ಇದರ ಅರ್ಥ.

ವಯಸ್ಸಿಗೆ ಬಂದ ಯುವಕನಿಗೆ ಯುವತಿಯ ಸೆಳೆತ, ಹಾಗೆ ಯುವತಿಗೆ ಯುವಕನ ಸೆಳೆತ. ಈ ಎರಡು ಸೆಳೆತಗಳು ಆ ವಯಸ್ಸಿನಲ್ಲಿ ಅತ್ಯಂತ ಸಹಜವಾದವುಗಳು. ಅಕಾಲದಲ್ಲಿ ಬರುವ ಈ ಯುವಕ ಯುವತಿಯರ ಸೆಳೆತವು ಜೀವನದ ಉದ್ದೇಶವನ್ನು ಮರೆಸಬಹುದು. ಮತ್ತು ಯಾವಾಗ? ಯಾವುದು? ಹೇಗೆ? ಇತ್ಯಾದಿ  ವಿವೇಕಪ್ರಜ್ಞೆಯನ್ನೂ ಸಹ ನಷ್ಟವಾಗಿಸಬಹುದು. ಇದನ್ನೇ ಸಾಮಾನ್ಯವಾಗಿ 'ರತಿ, ಪ್ರೀತಿ, ಕಾಮ' ಇತ್ಯಾದಿಯಾಗಿ ಹೇಳುವುದಂಟು. ರತಿ ಅಥವಾ ಪ್ರೀತಿಯಲ್ಲಿ ಮುಳುಗಿದ ವ್ಯಕ್ತಿಗೆ ಯಾವ ಪ್ರಪಂಚವು ಕೂಡ ಕಾಣಿಸದು. ಈ ಕಾರಣವಾಗಿ ತನ್ನ ಜೀವಿತದ ಉತ್ಕೃಷ್ಟ ಉದ್ದಿಶ್ಯವನ್ನು ಅವನು ಮರೆಯುವ ಸಂದರ್ಭ ಬರುತ್ತದೆ. ಹಾಗಾಗಿ ಯುವಕ ಯುವತಿಯರ ಆಕರ್ಷಣೆ ಎಂಬುದು ಮಿತಿಯಲ್ಲಿ ಇರಬೇಕು. ಅಂದರೆ ಯಾವ ಕಾಲದಲ್ಲಿ ಬರಬೇಕು? ಎಂಬುದಕ್ಕೆ ಒಂದು ನಿಯಮ ಇದೆ. ಅವರ ಪರಸ್ಪರ ಆಕರ್ಷಣೆಯು ಕೇವಲ ಸಂತಾನೋತ್ಪತ್ತಿಗೆ ಮಾತ್ರ ಸೀಮಿತವಾಗಿರಬೇಕು. ಹಾಗಿಲ್ಲದ ಆಕರ್ಷಣೆಯು ಅವರ ಮನಸ್ಸಿನ ಏಕಾಗ್ರತೆಯನ್ನು ಭಂಗಗೊಳಿಸಬಹುದು. ಆದ್ದರಿಂದ ಅಕಾಲದ ಆಕರ್ಷಣೆಯು ಅತ್ಯಂತ ಅಪಾಯವಾದುದು. ಅದರಂತೆಯೇ ದುರ್ಜನರ ಸಂಗವೂ ಕೂಡ ಅತ್ಯಂತ ಅಪಾಯಕಾರಿ. ದುರ್ಜನರು ಎಂದರೆ ಧರ್ಮಪ್ರೀತಿ ಇಲ್ಲದ, ಧರ್ಮಕ್ಕೆ ವಿರೋಧವಾದ ನಡೆಯನ್ನು ಉಳ್ಳವರು. ಅವರ ಸಂಗವು ನಮ್ಮನ್ನು ಧರ್ಮದಿಂದ ಚ್ಯುತವಾಗಿಸುತ್ತದೆ. ಮತ್ತು ತತ್ಕಾಲದಲ್ಲಿ ಅದು ಬಹಳ ಅಪ್ಯಾಯಮಾನವಾಗಿ ಕಂಡುಬರುತ್ತದೆ. ಈ ಎರಡು ಸಂಗತಿಗಳು ಕೂಡ ತತ್ಕಾಲದಲ್ಲಿ ಆಕರ್ಷಕವಾಗಿಯೇ ಕಂಡು ಬರುತ್ತವೆ. ಆದರೆ ಪರಿಣಾಮದಲ್ಲಿ ಅವು ವಿಷಮತೆಯನ್ನು ಉಂಟುಮಾಡುತ್ತವೆ. ಆದ್ದರಿಂದ ಇವೆರಡನ್ನು 'ಮಿಂಚಿನಂತೆ ಅತ್ಯಂತ ಚಂಚಲವಾದವುಗಳು' ಎಂಬುದಾಗಿ ಈ ಪ್ರಶ್ನೋತ್ತರ ಸಾರುತ್ತದೆ.

ಸೂಚನೆ : 1/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಕೃಷ್ಣಕರ್ಣಾಮೃತ 95 ಗೋಕುಲಾಲಂಕಾರನಾದ ಯೋಗಿಧ್ಯೇಯ-ತೇಜೋಮೂರ್ತಿಗೆ ನಮಃ (Krishakarnamrta 95)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ರಾಜಯೋಗದಿಂದ ಭಗವಂತನನ್ನು ಹೊಂದಬಹುದು – ಎಂಬುದು ಪ್ರಸಿದ್ಧವಷ್ಟೆ. ಆದರೆ ಭಕ್ತಿಯೋಗಕ್ಕೆ ಆ ತೆರನಾದ ಸಾಮರ್ಥ್ಯವುಂಟೇ? – ಎಂದು ಶಂಕಿಸುವವರಿಗೆ ಇಲ್ಲಿ, ಲೀಲಾಶುಕನ ಈ ಶ್ಲೋಕದಲ್ಲಿ, ಉತ್ತರವಿದೆ.

ಗೋಪಾಲ-ಭೂಪಾಲನೆಂದರೆ ಗೋಪಾಲಕರ ರಾಜನಾದ ನಂದ-ಭೂಪ. ಅತನ ಕುಮಾರನೆಂದರೆ  ಇನ್ನಾರು, ಶ್ರೀಕೃಷ್ಣನೇ. ಆತನ ಮೂರ್ತಿಯೆಂದರೆ ಕೃಷ್ಣನ ಶರೀರವೇ. ಮೈಯನ್ನು ಮೂರ್ತಿಯೆನ್ನುವುದೂ ಉಂಟು.

ಧ್ಯಾನವೆಂದರೇನು? ಭಗವನ್ಮೂರ್ತಿಯನ್ನು ಆ-ಪಾದ-ಮಸ್ತಕ ಧ್ಯಾನಿಸುವುದೇ. ಆ-ಪಾದಂ ಎಂದರೆ "ಚರಣದಿಂದ ಆರಂಭಿಸಿ". ಆ-ಚೂಡಂ ಎಂದರೆ "ಶೀರ್ಷ-ಪರ್ಯಂತ", "ತಲೆಯವರೆಗೆ".

ಹೀಗೆ, "ಆ" ಎನ್ನುವುದಕ್ಕೆ "-ಇಲ್ಲಿಂದ" ಎಂಬ ಅರ್ಥವೂ ಇದೆ; ಹಾಗೆಯೇ, "-ಇಲ್ಲಿಯವರೆಗೆ" ಎಂಬ ಅರ್ಥವೂ ಇದೆ. ಧ್ಯಾನಿಸುವುದೆಂದರೆ ಧ್ಯೇಯ-ವಸ್ತುವನ್ನು ಚಿತ್ತದಲ್ಲಿ ತುಂಬಿಕೊಂಡಿರುವುದೇ.

ಅತಿಪ್ರಸಕ್ತವೆಂದರೆ ಆದರ-ಭರಿತವಾದದ್ದು. ಅತಿಪ್ರಸಕ್ತವಾದ ಮನಸ್ಸಿನಿಂದ ಯಮಿಗಳು, ಎಂದರೆ ಮುನಿಗಳು, "ಕುಡಿದೇಬಿಡು"ತ್ತಾರಂತೆ, ಶ್ರೀಕೃಷ್ಣನ ಮೂರ್ತಿಯನ್ನು! ಎವೆಯಿಕ್ಕದೆ ನೋಡುವುದನ್ನೇ "ಕಣ್ಣಿನಿಂದ ಕುಡಿಯುವುದು" - ಎಂಬುದಾಗಿ ವರ್ಣಿಸುತ್ತಾರೆ. ಹಾಗೆಯೇ, ಎಡೆಬಿಡದೆ ಧ್ಯಾನಿಸುವುದನ್ನು "ಮನಸ್ಸಿನಿಂದ ಕುಡಿಯುವುದು" - ಎನ್ನುತ್ತಾರೆ. ಧ್ಯಾನಕಾರ್ಯವೆಂಬುದು ಯೋಗಿಗಳಿಗೂ ಪರಮ-ಸುಲಭವೆಂದೇನಲ್ಲ. ಅದೂ ಶ್ರಮ-ಸಾಧ್ಯವೇ. ಮನಸ್ಸನ್ನು ಹಿಡಿದಿಡುವುದನ್ನು ಸುಲಭವೆಂದು ಯಾರು ಹೇಳಿಯಾರು?

ಯೋಗಿಗಳು ಅಷ್ಟು ಕಷ್ಟಪಟ್ಟು ಯಾವುದನ್ನು ಸಾಧಿಸುವರೋ ಅದನ್ನು ಗೋಪಿಯರು ಬಹು-ಸುಲಭವಾಗಿಯೇ ಸಾಧಿಸಿಬಿಡುತ್ತಾರೆ! – ಎನ್ನುವಂತಾಗಿದೆ. ಯೋಗಿಗಳು ಶ್ರೀಕೃಷ್ಣಮೂರ್ತಿಯನ್ನು ಹಾಗೆ "ಕುಡಿದರೂ", ನಿಜವಾಗಿ ರಸಾಸ್ವಾದವನ್ನು ಮಾಡಿದವರೆಂದರೆ ಗೋಪಿಯರೇ – ಎನ್ನುತ್ತಾನೆ, ಕವಿ. ಕೃಷ್ಣನ ಮೂರ್ತಿಯ ರಸವನ್ನು ಬಲ್ಲವರು ಭಕ್ತಿ ಉಕ್ಕಿರುವ ಚಿತ್ತದ ಗೋಪಿಕೆಯರೇ ಸರಿ.

ಯೋಗದ ಉನ್ನತಾವಸ್ಥೆಯಲ್ಲಿ ಏನು ಲಭ್ಯವಾಗುವುದೋ ಅದನ್ನೇ ಉತ್ಕಟವಾದ ಭಕ್ತಿಯೂ ದೊರಕಿಸಿಕೊಡುವುದು - ಎಂಬುದಾಗಿ ಶ್ರೀರಂಗಮಹಾಗುರುಗಳು ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.

ಅಂತಹ ನಂದ-ಪುತ್ರನ ಮೂರ್ತಿಯು ನಿಮ್ಮನ್ನು ಪೊರೆಯಲಿ – ಎನ್ನುತ್ತಾನೆ, ಲೀಲಾಶುಕ.

ಆಪಾದಂ ಆಚೂಡಂ ಅತಿಪ್ರಸಕ್ತೈಃ /
ಆಪೀಯಮಾನಾ ಯಮಿನಾಂ ಮನೋಭಿಃ |
ಗೋಪೀಜನ-ಜ್ಞಾತ-ರಸೋವತಾದ್ ವೋ /
ಗೋಪಾಲ-ಭೂಪಾಲ-ಕುಮಾರ-ಮೂರ್ತಿಃ ||


ಮತ್ತೊಂದು ಶ್ಲೋಕ:

ಕೃಷ್ಣನಿಗೆ ನಮಸ್ಕಾರ ಹೇಳುತ್ತಿದ್ದಾನೆ, ಲೀಲಾಶುಕ - ತುಭ್ಯಂ ನಮಃ, ಎಂದು; ಆದರೆ ಕೃಷ್ಣನ ಹೆಸರನ್ನೇ ಹೇಳಹೋಗಿಲ್ಲ! ಏಕೆ? ಕೃಷ್ಣನೊಂದು ಮಹಸ್ಸು. ಮಹಸ್ಸೆಂದರೆ ತೇಜಸ್ಸಲ್ಲವೇ?  ಮಹಸ್ಸಿಗೆ ನಮಸ್ಸನ್ನು ಹೇಳಿದೆ. ಎಂತಹ ಮಹಸ್ಸು ಅದು? ಹೀಗೆಂದು ಹೇಳಲಾಗದುದು! ಎದುರಿಗೆ ತೋರಿದರೂ ವರ್ಣಿಸಲಾಗದುದು.

"ಈ" ತೇಜಸ್ಸಿಗೆ ನಮಃ - ಎಂದರೆ ಎದುರು ತೋರುತ್ತಿರುವ ತೇಜಸ್ಸಿಗೆ ನಮಸ್ಕಾರವೆಂದೇ. "ಅದು"/"ಆ" – ಎಂದರೆ ದೂರದಲ್ಲಿರುವುದು; "ಇದು"/"ಈ" – ಎಂದರೆ ಹತ್ತಿರದಲ್ಲೇ/ಎದುರಿಗೇ ಇರುವುದು.

ನಾಲ್ಕು ವಿಶೇಷಣಗಳು ಆ ತೇಜಸ್ಸಿಗೆ. ಶ್ಲೋಕದ ಇಡೀ ಪೂರ್ವಾರ್ಧವೇ ಒಂದು ವಿಶೇಷಣ. ಮಿಕ್ಕ ಮೂರು ಉತ್ತರಾರ್ಧದಲ್ಲಿ. ಅವಲ್ಲಿ ಒಂದನ್ನು ಹೇಳಿಯಾಯಿತು. ಇನ್ನು ಮೂರಿವೆ.

ಶ್ರೀಕೃಷ್ಣನು ಗೋಕುಲಕ್ಕೇ ಮಂಡನ – ಎಂಬುದು ಎರಡನೆಯದು. ಮಂಡನವೆಂದರೆ ಅಲಂಕಾರ. ಕೃಷ್ಣನು ಗೋಕುಲಾಲಂಕಾರ. ಎಂತಹ ಗೋಕುಲವದು? ಶ್ರೀ-ಮತ್ ಆದ ಗೋಕುಲವದು. ಹಾಗೆಂದರೆ ಸಿರಿ-ಸಂಪತ್ತುಗಳಿಂದ ಕೂಡಿದುದು – ಎಂದರ್ಥ: ಎಷ್ಟಾದರೂ ಗೋ-ಸಮೃದ್ಧಿ, ಗವ್ಯ-ಸಮೃದ್ಧಿಗಳಿಂದ ಕೂಡಿದ ಎಡೆ ತಾನೆ? ಆದ್ದರಿಂದ ಶ್ರೀ-ಮತ್. ಅಲ್ಲದೆ, ಗೋವುಗಳಿರುವೆಡೆಯಲ್ಲಿ ಲಕ್ಷ್ಮಿಯೂ ಇರುವಳು - ಎನ್ನುವರಲ್ಲವೆ? ಹಾಗೂ ಶ್ರೀ-ಮತ್. ಎಂದೇ ಅದು ಬಡಗೋಕುಲವೇನಲ್ಲ.

ಅಂತಹ ಶ್ರೀಮದ್ಗೋಕುಲಕ್ಕೆ ಭೂಷಣ, ನಮ್ಮ ಕೃಷ್ಣ, ಬಡವರ ನಡುವೆ ಬೆಳೆದವನೇನಲ್ಲ. ಅಲ್ಲದೆ, ಮುದ್ದಿನಲ್ಲೂ ಚೂಟಿತನದಲ್ಲೂ ಅತಿಶಯವೆಂದರೆ, ಮನೆಗೇನು, ಕೇರಿಗೇನು, ಇಡೀ ಊರಿಗೇ ಭೂಷಣ, ಕುಲಕ್ಕೇ ಮಂಡನ ವಾಗುವುದೇ.

ಮೂರನೆಯದಾಗಿ, ಆತನು ಮಾಧುರ್ಯವೊಂದೇ ತುಂಬಿರುವ ಅರ್ಣವ. ಅರ್ಣವವೆಂದರೆ ಸಾಗರ. ನಾವು ನೋಡಿರುವ ಸಮುದ್ರವೆಲ್ಲಾ ಬರೀ ಉಪ್ಪುನೀರಿನದು. ಆದರಿವನು ಮಾಧುರ್ಯದ ವಾರಿಧಿ. ಮಗು ಕಡುಮುದ್ದಾಗಿದ್ದರೆ ಅದುವೇ ಮಾಧುರ್ಯ. ಮಾಧುರ್ಯವೊಂದೇ ಇರುವ ದೊಡ್ಡಸಮುದ್ರವೇ ಆದರೆ ಮಾಧುರ್ಯೈಕ-ಮಹಾರ್ಣವ – ಎಂದು ತಾನೆ ಹೇಳಬೇಕು?

ಎಂತಹ ಮಾಧುರ್ಯವದು? - ಎಂದು ಸ್ವಲ್ಪ ಹೇಳುವಿರಾ? – ಎಂದರೆ, ಹೇಳಲಾಗದು. ಏಕೆ? ಆ ಮಾಧುರ್ಯವು ಮಾತಿಗೆಟುಕದು. ಸಕ್ಕರೆಯನ್ನು ಸವಿದಿಲ್ಲದವನಿಗೆ, ಏನೆಂದು ಹೇಳಿ ಅದರ ಸವಿಯನ್ನು ಅರ್ಥಮಾಡಿಸಬಹುದು? ನಾಲಿಗೆಯೇ, ಸಕ್ಕರೆಯನ್ನು ಸವಿದಿರುವೆಯೆಲ್ಲಾ, ಅದರ ರುಚಿಯನ್ನೊಮ್ಮೆ ಬಣ್ಣಿಸು – ಎಂದರೆ ಏನು ಹೇಳೀತು? ಎಷ್ಟು ಹೇಳಿದರೆ ಅರ್ಥಮಾಡಿಸಲಾದೀತು? ಮಾತಿನಿಂದ ಪ್ರಯೋಜನವಿಲ್ಲ; ಸುಮ್ಮನೆ ಒಮ್ಮೆ ಸವಿಯಬೇಕು, ಅಷ್ಟೆ. ಅರಿಯುವ ವಿಷಯವದು, ಅರುಹುವ ವಿಷಯವಲ್ಲ. ಹೀಗೆ ಲೌಕಿಕವಾದ ಮಾಧುರ್ಯವನ್ನೇ ವಿವರಿಸಿ ತಿಳಿಸಲಾಗದೆನ್ನುವಾಗ, ಇನ್ನು ಕೃಷ್ಣ-ಮಾಧುರ್ಯವನ್ನು ವಾಕ್ಕಿನ ದ್ವಾರಾ ವಿಶದಪಡಿಸಲಾದೀತೇ?

ಹೋಗಲಿ, ಮನಸ್ಸಿಗಾದರೂ ಗೋಚರವಾಗುವುದೇ ಅದು? - ಎಂದರೆ ಮನಸ್ಸಿಗೂ ನಿಲುಕದು, ಅದು! ಮನಸ್ಸಿಗೂ ವಾಕ್ಕಿಗೂ ದೂರದಲ್ಲೇ ಸ್ಫುರಿಸುವ ವಿಶಿಷ್ಟವಾದ ಮಾಧುರ್ಯವದು! ಸರ್ವ-ವಿಲಕ್ಷಣವಾದದ್ದರಿಂದಲೇ, ಎಂದರೆ ಮಿಕ್ಕೆಲ್ಲಕ್ಕಿಂತಲೂ ವಿಭಿನ್ನವಾಗಿರುವುದರಿಂದಲೇ, ಅದನ್ನು "ಇದರಂತೆ/ಅದರಂತೆ" ಎಂದೇನನ್ನೂ ಹೇಳಲಾಗದುದು. ಅನುಭವೈಕಗೋಚರವದು! ಪರಬ್ರಹ್ಮವು ವಚೋದೂರ-ಮನೋದೂರವೆಂದು, ವಸ್ತುತಃ ವಾಗತೀತ-ಮನೋತೀತವೆಂದೇ, ಉಪನಿಷತ್ತೇ ಉದ್ಗರಿಸುವುದಲ್ಲವೇ?

ಕೊನೆಯದಾಗಿ, ಅದು ಸುಕೃತಿಗಳ ಭಾವಗಳಲ್ಲಿ ಚೆನ್ನಾಗಿ ಬೆಳಗುವುದು. ಪ್ರಕಾಶಮಾನವಾಗಿ ಹೊಳೆಯುವುದನ್ನೇ ಇಲ್ಲಿ ನಿರ್ಭಾಸಿಯೆಂದಿರುವುದು. ನಿರಂತರವಾಗಿ ಯಾವುದು ಭಾಸಿಸುವುದೋ, ಎಂದರೆ ಪ್ರಕಾಶಿಸುವುದೋ, ಅಂತಹುದೇ ನಿರ್ಭಾಸಿ.

ಸುಕೃತಿಗಳ ಭಾವಗಳೆಂದರೆ ಎಂತಹ ಭಾವಗಳು ಅವು? ಅವು ಚಾಪಲ-ಭೂಷಿತವೆನಿಸತಕ್ಕವು. ಕೃಷ್ಣನನ್ನು ನೋಡಬೇಕೆಂಬ ಆಸೆಯೇನುಂಟೋ, ಆ ಆಸೆಯೇ ಚಾಪಲ. ಅವರ ಭಾವಗಳಿಗೆ ಈ ಚಾಪಲವೇ ಭೂಷಿತ. ಭೂಷಣ ಅಥವಾ ಭೂಷಿತವೆಂದರೆ ಅಲಂಕಾರ.

ಇನ್ನು ಅವರ ಚಾಪಲವಾದರೂ ಅಲ್ಪವಾದುದಲ್ಲ, ಭೂಯಸ್ಸಾದುದು. ಎಂದರೆ ಅತ್ಯಧಿಕವಾದುದು.

ಚಾಪಲವು ಉಂಟಾದರೂ ಎಷ್ಟೋ ವೇಳೆ ಅದನ್ನು ಮುಚ್ಚಿಟ್ಟುಕೊಳ್ಳುವುದಾಗುತ್ತದೆ. ಆದರೆ ಅದು ಉಕ್ಕಿ ಬರುವ ವೇಳೆ ಸ್ಫುಟವಾಗಿ ಆವಿರ್ಭಾವಗೊಂಡುಬಿಡುತ್ತದೆ.

ಕೃಷ್ಣನನ್ನು ಕಂಡರೆ ಆಗುವುದು ಹರ್ಷ-ವರ್ಷವೇ. ವರ್ಷವೆಂದರೆ ಮಳೆ, ಅಥವಾ ಮಳೆಸುರಿಯುವಂತೆ ಸುರಿಯುವುದು. ಕೃಷ್ಣನನ್ನು ಕಂಡವರಲ್ಲಿ ಸಂತೋಷದ ಧಾರೆಯೇ ಸುರಿಯುವುದಷ್ಟೆ? ಆ ಅತಿಶಯವನ್ನೇ ನಿರ್ಭರವೆಂದಿರುವುದು. ಅವರ ಮನಸ್ಸು ಅದಕ್ಕೆ ಸೋತಿದೆ. ಆ ವಿವಶತೆಯ ಓಘವೆಂತಹುದು! ವಿವಶಾವೇಶವೆಂದರೆ ಅದೇ. ಆ ಕಾರಣಕ್ಕೇ ಅದು ಸ್ಫುಟವಾಗಿ ಪ್ರಕಟಗೊಂಡಿರುವುದು ಕೂಡ.

ಒಟ್ಟಿನಲ್ಲಿ ಹೇಳುವುದಾದರೆ, ಹರ್ಷಾತಿರೇಕದಿಂದ ಕೂಡಿರುವ ಸಜ್ಜನರು ಶ್ರೀಕೃಷ್ಣನ ವಿಷಯದಲ್ಲಿ ಭಾವ-ಭರಿತರಾಗಿದ್ದಾರೆ. ಕೃಷ್ಣನನ್ನು ವಿಶೇಷವಾಗಿ ನೋಡಬೇಕೆಂಬ ಅವರ ಚಾಪಲವು ಎದ್ದು ಕಾಣುತ್ತಿದೆ. ಕೃಷ್ಣನಾದರೂ ಶ್ರೀಗೋಕುಲಕ್ಕೆ ಭೂಷಣನಾಗಿದ್ದಾನೆ. ಮನೋವಾಗತೀತನಾಗಿದ್ದಾನೆ, ಕೃಷ್ಣ. ಮಧುರತೆಯದೇ ಮಹಾಸಾಗರ ಅವನು.

ಹೀಗೆಲ್ಲ ಇರುವ ಅವರ್ಣನೀಯ-ತೇಜಸ್ಸಾದ ಕೃಷ್ಣನೇ, ನಿನಗೆ ನಮಸ್ಕಾರ - ಎನ್ನುತ್ತಾನೆ, ಲೀಲಾಶುಕ.

ತುಭ್ಯಂ ನಿರ್ಭರ-ಹರ್ಷ-ವರ್ಷ-ವಿವಶಾವೇಶ-ಸ್ಫುಟಾವಿರ್ಭವದ್-/

ಭೂಯಶ್ಚಾಪಲ-ಭೂಷಿತೇಷು ಸುಕೃತಾಂ ಭಾವೇಷು ನಿರ್ಭಾಸಿನೇ |

ಶ್ರೀಮದ್-ಗೋಕುಲ-ಮಂಡನಾಯ ಮನಸಾಂ ವಾಚಾಂ ಚ ದೂರ-ಸ್ಫುರನ್-/

ಮಾಧುರ್ಯೈಕ-ಮಹಾರ್ಣವಾಯ ಮಹಸೇ ಕಸ್ಮೈಚಿದಸ್ಮೈ ನಮಃ ||

ಶ್ಲೋಕದಲ್ಲಿ ಅನುಪ್ರಾಸಾಲಂಕಾರವಿದೆ – ವಿಶೇಷವಾಗಿ ಕೊನೆಯ ಪಾದದಲ್ಲಿ.

ಸೂಚನೆ : 14/2/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, February 22, 2026

ಪ್ರಶ್ನೋತ್ತರ ರತ್ನಮಾಲಿಕೆ 54 (Prasnottara Ratnamalike 54)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ - ೫೪ - ಮಾತಿಗೆ ಭೂಷಣ ಯಾವುದು ?

ಉ. ಸತ್ಯ.

ಮಾತಿಗೆ ಭೂಷಣವಾದುದು ಯಾವುದು? ಎಂಬುದು ಪ್ರಶ್ನೆ. ಅದಕ್ಕೆ ಉತ್ತರ 'ಸತ್ಯ' ಎಂಬುದು. ಅಂದರೆ ಮಾತು ಮತ್ತು ಸತ್ಯ ಇವೆರಡೂ ಪರಸ್ಪರ ಅನ್ಯೋನ್ಯವಾದವುಗಳು ಎಂಬುದು ಇದರ ತಾತ್ಪರ್ಯವಷ್ಟೇ. ಮಾತು ಯಾವಾಗ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬಲ್ಲದು? ಅಥವಾ ಮಾತು ಯಾವಾಗ ಪರಿಪೂರ್ಣವಾಗಬಲ್ಲದು? ಎಂದರೆ ಆ ಮಾತಿನಲ್ಲಿ ಸತ್ಯ ಹುದುಗಿದಾಗ, ಎಂಬುದು ಇದರ ಹಿಂದಿರುವ ಆಶಯವಷ್ಟೇ. ಮಾತಿನಲ್ಲಿ ಸತ್ಯವಿಲ್ಲದಿದ್ದರೆ ಅದು ಪೂರ್ಣವಾಗಲಾರದು. ಅದಕ್ಕಾಗಿ ಸತ್ಯವನ್ನು ಮಾತಿಗೆ ಭೂಷಣ ಎಂಬುದಾಗಿ ಹೇಳಲಾಗಿದೆ. 'ಭೂಷಣ' ಎಂದರೆ ಅಲಂಕಾರ ಎಂದರ್ಥ. ಅಂದರೆ ಸತ್ಯದಿಂದ ಮಾತ್ರವೇ ಮಾತು ಅಲಂಕೃತವಾಗುತ್ತದೆ. ಮಾತು ಆಡಿದವರನ್ನು ಅಲಂಕರಿಸುತ್ತದೆ. ಅವರನ್ನು ಮಾನ್ಯರನ್ನಾಗಿ ಮಾಡುತ್ತದೆ ಎಂಬುದಷ್ಟೇ ಇಲ್ಲಿನ ವಿಷಯ.

ಮಾತು ಹೇಗಿರಬೇಕು? ಮಾತಿನ ಮೌಲ್ಯವೇನು? ಇತ್ಯಾದಿ ವಿಷಯದ ಬಗ್ಗೆ ವೇದದಿಂದ ಹಿಡಿದು ಎಲ್ಲ ಸಾಹಿತ್ಯಗಳಲ್ಲೂ ವಿಪುಲವಾಗಿ ಹೇಳಿದ್ದನ್ನು ನಾವು ಕಾಣಬಹುದು. ಅಂತೆಯೇ ಮಾತಿಗೂ ಮಿಗಿಲಾಗಿ ಸತ್ಯವನ್ನು ಇನ್ನಷ್ಟು ವಿವರವಾಗಿ ಹೇಳಿದ್ದನ್ನು ಕಾಣಬಹುದು. ಹಾಗಾಗಿ ಮಾತು ಮತ್ತು ಸತ್ಯ ಎರಡು ಒಂದಕ್ಕೊಂದು ಎಡಬಿಡದೆ ಸೇರಿರುವ ಎರಡು ಸಂಗತಿಗಳು ಎಂಬುದನ್ನು ಹೇಳಬಹುದು. ಮಾತಿನಲ್ಲಿ ಸತ್ಯ ಎಂಬುದು ಅತ್ಯಂತ ಅನಿವಾರ್ಯ. ಉಪನಿಷತ್ತು ಈ ಮಾತನ್ನು ಸಾರುತ್ತದೆ - "ಸತ್ಯಂ ವದ" ಎಂಬುದಾಗಿ. ಸತ್ಯವನ್ನು ಮಾತನಾಡಬೇಕು. ಸತ್ಯವನ್ನೇ ಮಾತನಾಡಬೇಕು. ಸತ್ಯವನ್ನು ಬಿಟ್ಟು ಬೇರೆ ಯಾವುದೂ ಕೂಡ ಮಾತಿನಲ್ಲಿ ಇರಬಾರದು. ಅಷ್ಟರಮಟ್ಟಿಗೆ ಮಾತು ಸತ್ಯವನ್ನು ಆವರಿಸಿಕೊಂಡು ಇರಬೇಕು. ಮಾತಾಡಿದರೆ ಅದು ಸತ್ಯವೇ ಆಗಿರಬೇಕು. ಸತ್ಯವಲ್ಲದ ಮಾತನ್ನು ಆಡಬಾರದು ಎಂಬುದು ಇದರ ಅರ್ಥ. ರಘುವಂಶದ ರಾಜರು ಸತ್ಯವನ್ನು ಯಾವ ರೀತಿಯಾಗಿ ಆಚರಿಸುತ್ತಿದ್ದರು? ಎಂಬುದನ್ನು ಕಾಳಿದಾಸ ಹೀಗೆ ಹೇಳುತ್ತಾನೆ - "ಸತ್ಯಾಯ ಮಿತಭಾಷಿಣಾಮ್" ಎಂಬುದಾಗಿ. ಅಂದರೆ ಅವರ ಮಾತುಗಳಲ್ಲಿ ಮಿತಿ ಇರುತ್ತಿತ್ತು. ಅದಕ್ಕೆ ಕಾರಣ ಆ ಮಾತು ಸತ್ಯದಿಂದ ಕೂಡಿತ್ತು. ಯಾವ ಮಾತು ಸತ್ಯದಿಂದ ಕೂಡಿರುತ್ತದೆಯೋ, ಆ ಮಾತು ಹಿತವು ಮಿತವು ಆಗಿಯೇ ಇರಬೇಕು. ಅಂತಹ ಸತ್ಯದ ನಡೆಯನ್ನು ಆ ರಾಜರ ನಡೆಯಲ್ಲಿ ಕಾಣಬಹುದಾಗಿತ್ತು. 

ಸತ್ಯ ಎಂದರೆ ಇದ್ದದ್ದನ್ನು ಇದ್ದಂತೆಯೇ ಹೇಳುವುದು, 'ಯಥಾರ್ಥವಚನಂ' ಎಂಬುದಾಗಿ. ಸತ್ಯವನ್ನು ಹೇಳುವುದರಿಂದ ಯಾವೆಲ್ಲ ಲಾಭಗಳು ಆಗುತ್ತವೆ ಎಂಬುದನ್ನು ವೇದ, ಪುರಾಣ, ಇತಿಹಾಸ ಮೊದಲಾದ ಎಲ್ಲಾ ಗ್ರಂಥಗಳೂ ಸಾರುತ್ತವೆ. ಯೋಗಶಾಸ್ತ್ರವು ಹೀಗೆ ಹೇಳುತ್ತದೆ 'ಯಾರು ಸತ್ಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುತ್ತಾರೋ, ಅವರು ಹಾಡಿದ ಮಾತುಗಳು ಯಥಾರ್ಥವಾಗುತ್ತವೆ ಎಂಬುದಾಗಿ. "ಸತ್ಯಪ್ರತಿಷ್ಠಾಯಾಂ ಕ್ರಿಯಾಫಲಾಶ್ರಯತ್ವಮ್" ಅಂದರೆ ಮಾಡದ ಕ್ರಿಯೆಗೆ ಫಲ ದೊರಕಿಸುವ ಸಾಮರ್ಥ್ಯ ಸತ್ಯವಚನಕ್ಕೆ ಇದೆ ಎಂಬಷ್ಟರ ಮಟ್ಟಿಗೆ ಸತ್ಯದ ಸಾಮರ್ಥ್ಯವನ್ನು ಇಲ್ಲಿ ಕೊಂಡಾಡಲಾಗಿದೆ. ಹಾಗಾಗಿ ಸತ್ಯವಿದ್ದರೆ ಮಾತ್ರ ಅದು ಮಾತಾಗುತ್ತದೆ. ಸತ್ಯವಿಲ್ಲದಿದ್ದರೆ ಅದು ಕೇವಲ ಶಬ್ದಾಡಂಬರವಾಗುತ್ತದೆ. ಸತ್ಯವೆಂದರೆ ಭಗವಂತ. ಅವನನ್ನು ಹೊತ್ತ ಮಾತು ಸತ್ಯವೇ ಆಗಿರುತ್ತದೆ. ಯಾವುದೇ ಮಾತನ್ನು ಆಡಬೇಕಾದರೂ ಆ ಮಾತು ಭಗವಂತನ ಅಥವಾ ಅವನ ಸೃಷ್ಟಿಯ ನಡೆಗೆ ವಿರೋಧವಾಗುವಂತೆ ಇರಬಾರದು. ಅಂತಹ ಸತ್ಯ ಮಾತಿಗೆ ಭೂಷಣ ಎಂಬುದು ಈ ಪ್ರಶ್ನೋತ್ತರದ ಆಶಯವಾಗಿದೆ.

ಸೂಚನೆ : 22/2/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ವ್ಯಾಸ ವೀಕ್ಷಿತ 176 ಜರಾಸಂಧನನ್ನು ವಧಿಸಲು ಏಕಾಂತವೇ ಯುಕ್ತ ( Vyaasa Vikshita 176)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀಕೃಷ್ಣನು ಜರಾಸಂಧನನ್ನು ವಧಿಸಲು ಬೇಕಾದ ಹಿನ್ನೆಲೆಯನ್ನು ಯುಧಿಷ್ಠಿರನಿಗೆ ತಿಳಿಸಿಕೊಡುತ್ತಿದ್ದಾನೆ. ಜರಾಸಂಧನು ತನ್ನ ಮಹಾಗದೆಯನ್ನು ಮಥುರೆಯತ್ತ ಪ್ರಬಲವಾಗಿ ಬೀಸಿದ ಬಳಿಕ ಆದುದನ್ನು ತಿಳಿಸುತ್ತಾನೆ.

ಆಗ ಬಲಶಾಲಿಗಳಾದ ಕುಕ್ಕುರ-ಅಂಧಕ-ವೃಷ್ಣಿ – ಈ ವಂಶಗಳ ವೀರರೂ ಇದ್ದರು. ಆದರೂ ರಾಜನೀತಿಯ ಲೆಕ್ಕದ ಮೇರೆಗೆ ಅವರು ಜರಾಸಂಧನನ್ನು ಉಪೇಕ್ಷಿಸಿದರು. ಹಾಗೆಂದರೆ, ಆ ಕಾರಣಕ್ಕಾಗಿ, ಆತನ ಮೇಲೆ ಸಮರ ಮಾಡಲು ಹೋಗಲಿಲ್ಲ ಎಂದರ್ಥ.

ಒಟ್ಟಾರೆ ಹೇಳುವುದಾದರೆ, ಹಂಸ-ಡಿಂಭಕರು ಮುಳುಗಿ ಸತ್ತರು. ಕಂಸನೂ ಪರಿವಾರ-ಸಮೇತನಾಗಿ ಹತನಾದನು. ಇನ್ನೀಗ ಜರಾಸಂಧನ ಸಾವಿನ ಸಮಯವೊದಗಿದೆ.

ಸುರರಾಗಲಿ ಅಸುರರಾಗಲಿ, ಈ ಜರಾಸಂಧನನ್ನು ಯುದ್ಧದಲ್ಲಿ ಜಯಿಸಲಾರರು. ಈತನನ್ನು ಬಾಹು-ಯುದ್ಧದಿಂದಲೇ ಸೋಲಿಸಬೇಕೆಂಬುದೇ ತೋರುವುದು.

ಯುಧಿಷ್ಠಿರಾ, ನನ್ನಲ್ಲಿ ರಾಜನೀತಿಯ ಜ್ಞಾನವು ಚೆನ್ನಾಗಿದೆ; ಭೀಮನಲ್ಲಿ ಬಲವಿದೆ; ನಮ್ಮಿಬ್ಬರನ್ನೂ ಜಯನು, ಎಂದರೆ ಅರ್ಜುನನು, ರಕ್ಷಿಸುವವನಾಗಿದ್ದಾನೆ. ನಾವು ಮೂವರು ಹೇಗೆಂದರೆ, ಯಜ್ಞ-ಸಾಧನೆಯಲ್ಲಿ ಮೂರು ಅಗ್ನಿಗಳು - ಎಂದರೆ ದಾಕ್ಷಿಣಾತ್ಯ-ಗಾರ್ಹಪತ್ಯ-ಆಹವನೀಯಗಳೆಂಬ ಹೆಸರಿನವು - ಹೇಗೆ ಭಾಗಿಗಳೋ ಹಾಗೆಯೇ. ನಾವು ಮೂವರೂ ಸೇರಿ ಈ ಮಾಗಧನನ್ನು, ಎಂದರೆ ಜರಾಸಂಧನನ್ನು, ಸಾಧಿಸುವುದಾಗಬೇಕಾಗಿದೆ, ಎಂದರೆ ವಧಿಸಬೇಕಾಗಿದೆ.

ನಾವು ಮೂವರು ಆತನನ್ನು ನಿರ್ಜನಪ್ರದೇಶದಲ್ಲಿ, ಎಂದರೆ ರಹಸ್ಯವಾಗಿ, ಎದುರಿಸುವುದೇ ಯುಕ್ತ. ಏಕೆ ಗೊತ್ತೇ? ಹಾಗೆ ಮಾಡಿದಲ್ಲಿ, ಆತನು ಒಬ್ಬರೊಂದಿಗಾದರೂ ಯುದ್ಧಕ್ಕೆ ಬಂದೇ ಬರುವನು; ಇದರಲ್ಲಿ ಸಂಶಯವಿಲ್ಲ.

ಅಷ್ಟೇ ಅಲ್ಲ. ಅವಮಾನವೆನ್ನುವ ಕಾರಣದಿಂದಲೂ, ಲೋಭ-ನಿಮಿತ್ತವಾಗಿಯೂ, ಸ್ವಬಾಹು-ವೀರ್ಯ-ದರ್ಪದಿಂದಲೂ, ಆತನು ಭೀಮಸೇನನೊಂದಿಗೇ ಯುದ್ಧಕ್ಕೆ ಬರುವನು. ಭೀಮಸೇನನು ಮಹಾಬಾಹು ಹಾಗೂ ಮಹಾಬಲ. ಹಾಗಿರುವುದರಿಂದಲೇ, ಸೊಕ್ಕಿದ ಲೋಕದ ವಿನಾಶಕ್ಕೆ ಹೇಗೆ ಯಮರಾಜನೇ ತಕ್ಕವನೋ, ಹಾಗೆಯೇ ಭೀಮಸೇನನೇ ಇಲ್ಲಿ ತಕ್ಕವನು.

ನನ್ನ ಹೃದಯವನ್ನು ನೀನು ಅರಿಯುವೆಯಾದರೆ, ಹಾಗೂ ನನ್ನ ಮೇಲೆ ನಂಬಿಕೆಯಿರುವುದಾದರೆ, ಯುಧಿಷ್ಠಿರಾ, ನೀನು ಒಡನೆಯೇ ಭೀಮಸೇನ-ಅರ್ಜುನರನ್ನು ನನಗೆ ನ್ಯಾಸ-ರೂಪವಾಗಿ ಕೊಡು. (ನ್ಯಾಸವಾಗಿ ಕೊಡುವುದೆಂದರೆ, ಕೊಟ್ಟಿದ್ದನ್ನು ಆಮೇಲೆ ಯಥಾವತ್ತಾಗಿ ಹಿಂದಿರುಗಿಸುವುದು ಇದ್ದೇ ಇದೆ – ಎಂಬ ಭಾವ)."

ಹೀಗೆಂಬುದಾಗಿ ಕೃಷ್ಣನು ಹೇಳಲಾಗಿ, ಯುಧಿಷ್ಠಿರನು ಭೀಮ-ಅರ್ಜುನರತ್ತ ತನ್ನ ದೃಷ್ಟಿಯನ್ನು ಹಾಯಿಸಿದನು. ಅವರಂತೂ ಸಂಪ್ರಹೃಷ್ಟರಾಗಿದ್ದರು - ಎಂದರೆ ಬಹು-ಹರ್ಷದಿಂದ ಅರಳಿದ ಮುಖವುಳ್ಳವರಾಗಿದ್ದರು.

ಆಗ ಯುಧಿಷ್ಠಿರನು ಹೇಳಿದನು:

"ಅಚ್ಯುತ, ಅಚ್ಯುತ, ಬೇಡ, ಹೀಗೆ ಹೇಳಬೇಡ! ಶತ್ರು-ಸಂಹಾರಕನಾದವನು ನೀನು. ಪಾಂಡವರಿಗೆ ನೀನೇ ಒಡೆಯ! ನಿನ್ನನ್ನು ಆಶ್ರಯಿಸಿರತಕ್ಕವರು, ನಾವು.

ಗೋವಿಂದ, ನೀನೇನನ್ನು ಹೇಳುವೆಯೋ ಅದೆಲ್ಲವೂ ಯುಕ್ತಿ-ಯುಕ್ತವೇ ಆಗಿದೆ. ಯಾರಿಗೆ ಲಕ್ಷ್ಮಿಯು ವಿಮುಖಳಾಗಿರುವಳೋ ಅವರಿಗೆ ನೀನು ಸುಮುಖನಾಗುವವನೇನಲ್ಲ.

ಇತ್ತ ನಿನ್ನ ಆಜ್ಞೆಗೆ ಅನುಸಾರವಾಗಿ ಇವರು ನಿಲ್ಲುತ್ತಿರುವಂತೆಯೇ ಅತ್ತ ಜರಾಸಂಧನು ಹತನಾದಂತೆಯೇ ಸರಿ; ರಾಜರು ಬಿಡುಗಡೆ ಹೊಂದಿದಂತೆಯೇ ಸರಿ; ನನಗೆ ರಾಜಸೂಯವು ಪ್ರಾಪ್ತಿಯಾದಂತೆಯೇ ಸರಿ!

ನರೋತ್ತಮ, ಈ ಕಾರ್ಯವು ಬೇಗನೆ ನೆರವೇರುವ ಹಾಗೆ ಎಚ್ಚರಿಕೆಯಿಂದ ನೀ ಮಾಡಿಬಿಡು, ಜಗನ್ನಾಥ! ಧರ್ಮ-ಅರ್ಥ-ಕಾಮಗಳೆಂಬ ಮೂರೂ ಇಲ್ಲದವನೂ ಜೊತೆಗೆ ರೋಗಾರ್ತನೂ ಆದವನು ಹೇಗೆ ದುಃಖಿತನಾಗಿರುವನೋ, ಹಾಗೆ ನೀವು ಮೂವರಿಲ್ಲದೆ ನಾನು ಜೀವಿಸಲೇ ಇಷ್ಟಪಡಲಾರೆ.

ಶೌರಿಯಿಲ್ಲದೆ, ಎಂದರೆ ಕೃಷ್ಣನಿಲ್ಲದೆ, ಪಾರ್ಥನಿಲ್ಲ; ಪಾಂಡವನಿಲ್ಲದೆ ಶೌರಿಯೂ ಇರುವುದಿಲ್ಲ." – ಎಂದನು, ಯುಧಿಷ್ಠಿರ.

ಸೂಚನೆ : 22/2/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಕೃಷ್ಣಕರ್ಣಾಮೃತ 96 ವಿಬುಧ-ವಂದ್ಯ-ವೃಂದಾವನ-ವಿಹಾರಿಗೂ ವಂದನೆಗಳು! (Krishakarnamrta 96)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ನಾನು ಕೃಷ್ಣನನ್ನು ಭಜಿಸುತ್ತೇನೆ - ಎನ್ನುವುದು ಕೃಷ್ಣಕರ್ಣಾಮೃತದ ಹಲವು ಶ್ಲೋಕಗಳಲ್ಲಿ ಬಂದಿದೆಯಷ್ಟೆ. ಆದರೆ ಈ ಶ್ಲೋಕದಲ್ಲಿ, ವೃಂ(ಬೃಂ)ದಾವನದ ಬಗ್ಗೆಯೂ ಲೀಲಾಶುಕನು ಹೇಳುತ್ತಾನೆ.

ಬೃಂದಾವನ ಎನ್ನುವುದಕ್ಕಿಂತ ಅಲ್ಲಿಯ ಕಾಡನ್ನು ಕುರಿತೇ ಹೇಳುತ್ತಿದ್ದಾನೆ - ಎನ್ನುವುದೇ ಸರಿಯಾದದ್ದು. ಅದೇನು ಬರೀ ಕಾಡೇ? ಅದು ಕಲ್ಪಕ-ದ್ರುಮ-ವನ.

ಕಲ್ಪಕವೆಂದರೂ ಕಲ್ಪವೆಂದರೂ ಒಂದೇ. ಏಕೆ? ಯಾವುದೇ ಪದಕ್ಕೂ "ಸ್ವಾರ್ಥ"ದಲ್ಲಿ 'ಕ' ಎಂಬ ಪ್ರತ್ಯಯವನ್ನು ಸೇರಿಸಬಹುದು – ಎಂಬೊಂದು ನಿಯಮ ಸಂಸ್ಕೃತದಲ್ಲಿದೆ. ಇಲ್ಲಿ ಸ್ವಾರ್ಥ ಎಂದರೆ "ತನ್ನದೇ ಅರ್ಥ" ಎಂದರ್ಥ. ಉದಾಹರಣೆಗೆ, 'ಬಾಲ' ಎಂಬ ಪದಕ್ಕೆ ಏನರ್ಥವೋ, 'ಬಾಲಕ' ಎನ್ನುವುದಕ್ಕೂ ಅದೇ ಅರ್ಥ: ಬಾಲಕ ಎಂಬಲ್ಲಿಯ 'ಕ'ವು ಸ್ವಾರ್ಥಕವಾದುದು. ಆದ್ದರಿಂದ ಕಲ್ಪ ಎಂದರೂ ಕಲ್ಪಕ ಎಂದರೂ ಒಂದೇ.

ದ್ರುಮವೆಂದರೆ ಮರ; ಕಲ್ಪಕ-ದ್ರುಮವೆಂದರೆ ಕಲ್ಪವೃಕ್ಷ ಎಂಬರ್ಥ. ಒಂದು ಕಲ್ಪವೃಕ್ಷವಿದ್ದರೇ ಅದಕ್ಕೆ ಬಹಳವಾದ ಬೆಲೆಯುಂಟು: ಕೇಳಿದ್ದನ್ನೆಲ್ಲಾ ಕೊಡುವುದೇ ಕಲ್ಪವೃಕ್ಷ. ಇದಂತೂ ಕಲ್ಪತರುಗಳ ವನವೇ ಆಗಿದೆಯೆಂದರೆ ಅದರ ಹಿರಿಮೆ ಎಷ್ಟೆಂದು ಬೇರೆ ಹೇಳಬೇಕಿಲ್ಲವಷ್ಟೆ?

ಎಂದೇ ಆ ವನವನ್ನೇ, ಜೊತೆಗೆ ಅಲ್ಲಿಯ ಕಿಶೋರ(ಕೃಷ್ಣ)ನನ್ನೇ, ನಾನು ಭಜಿಸುವುದು – ಎಂಬುದಾಗಿ, ಎರಡೂ ಸಮವೋ ಎಂಬಂತೆ, ಹೇಳುತ್ತಿದ್ದಾನೆ, ಲೀಲಾಶುಕ. ವನವನ್ನೂ ಭಜಿಸುವುದೇ? - ಎಂಬ ಪ್ರಶ್ನೆಯೇ? ಅದಕ್ಕೆ ಮೂರು ಕಾರಣಗಳನ್ನು ಕೊಡುತ್ತಾನೆ.

ಆ ವೃಂದಾವನದ ವನದಲ್ಲಿ ಕೃಷ್ಣನಿಗೆ ಸಂಬಂಧಿಸಿದ ಮೂರು ಚಟುವಟಿಕೆಗಳುಂಟು; ಮೂರೂ ಮಹಾಪ್ರಭಾವವುಳ್ಳವುಗಳು; ಎಂದೇ ವಂದನೆ, ಎರಡಕ್ಕೂ - ಒಟ್ಟಿಗೆಯೇ.

ಕೃಷ್ಣನ ವೇಣು-ನಾದವು ಗೋವೃಂದಕ್ಕೆ ಆನಂದವನ್ನು ತಂದಿತೆಂದೂ ಮೃಗಗಳಿಗೆ ವಿವಶತೆಯನ್ನು ಉಂಟುಮಾಡಿತೆಂದೂ ಕೇಳುವೆವಲ್ಲವೇ? ಆದರೆ ಇಲ್ಲಿ ಕೊಳಲಿನ ಬಗ್ಗೆ ಮಾತನಾಡಿಲ್ಲ.

 ನವಿಲು-ಗೂಳಿ-ಆನೆಗಳ ಮೇಲೆ ಬೇರೆ ಬೇರೆ ಕಾರಣಗಳಿಂದಾಗಿ ಆದ ಪರಿಣಾಮವನ್ನು ಹೇಳಿದೆ. ಅವಾದರೂ ಸಾಧಾರಣವಾದ ಮಯೂರ-ವೃಷಭ-ವಾರಣಗಳಲ್ಲ. ಅವು ದೈವಿಕವಾದವು! ಷಣ್ಮುಖನ ನವಿಲು, ಶಿವನ ನಂದಿ, ಇಂದ್ರನ ವಾರಣಗಳು! ಆ ನವಿಲು ಕುಣಿಯುತ್ತದೆ,  ವೃಷಭವು ಮದಿಸುತ್ತದೆ, ಆನೆಯು ಆಸೆಪಡುತ್ತದೆ - ಎಂಬಿವೇ ಆ ಪರಿಣಾಮಗಳು.

ಇವೆಲ್ಲಾ ಆಗುತ್ತಿರುವುದು ಏತಕ್ಕಾಗಿ ಅಥವಾ ಯಾವುದರಿಂದಾಗಿ? ಒಂದೊಂದಾಗಿ ನೋಡೋಣ.

ಕೃಷ್ಣನು ತನ್ನ ಶೇಖರದಲ್ಲಿ, ಎಂದರೆ ತಲೆಯ ಜುಟ್ಟಿನ ಮೇಲೆ, ನವಿಲುಗರಿಯನ್ನು ಧರಿಸಿದ್ದಾನಲ್ಲವೇ? ಗರಿಯೆಂದರೆ ಒಂದೇ ಗರಿಯೆಂದುಕೊಳ್ಳಬೇಕಿಲ್ಲ. ಎಂದೇ ಕವಿಯು ಶೇಖರ-ಭರೈಃ - ಎಂದು ಬಹುವಚನವನ್ನೇ ಬಳಸಿದ್ದಾನೆ.

ಹೀಗೆ ಅನೇಕ ಮಯೂರ-ಪಿಂಛಗಳನ್ನು ಧರಿಸಿರುವ ಕೃಷ್ಣನನ್ನು ಬೃಂದಾವನದಲ್ಲಿ ಕಂಡೊಡನೆಯೇ, ಸುಬ್ರಹ್ಮಣ್ಯ-ಸ್ವಾಮಿಯ ವಾಹನವಾದ ನವಿಲಿಗೆ ಸಂತೋಷವೋ ಸಂತೋಷ. ಒಂದು ನವಿಲಿಗೆ ಮತ್ತೊಂದು ನವಿಲನ್ನು ಕಂಡರೆ ತೋಷವೇ. ಗರಿಯನ್ನು ಕಂಡೊಡನೆ, "ಇದೋ ಮತ್ತೊಂದು ನವಿಲು!" - ಎಂಬ ಭಾವನೆ ಬಂದಿದೆ, ಅದಕ್ಕೆ. ಅಷ್ಟಕ್ಕೇ ಹರ್ಷ. ಆ ಆನಂದದಿಂದಲೇ ಕುಣಿತ.

ಇಲ್ಲಿ ಸುಬ್ರಹ್ಮಣ್ಯನನ್ನು ಕ್ರೌಂಚ-ದ್ವೇಷಿಯೆಂದಿದೆ. ಕ್ರೌಂಚ-ಪರ್ವತವನ್ನು ತನ್ನ ಶಕ್ತ್ಯಾಯುಧದಿಂದ ಆತನು ಭೇದಿಸಿದನಷ್ಟೆ? "ಕುಮಾರಃ ಕ್ರೌಂಚ-ದಾರಣಃ" ಅಲ್ಲವೇ? ಹಾಗೆಯೇ, ನವಿಲನ್ನು ಚಂದ್ರಕಿಯೆಂದಿದೆ. ಚಂದ್ರಕವನ್ನುಳ್ಳದ್ದು ಚಂದ್ರಕಿ. ಚಂದ್ರಕವೆಂದರೆ ನವಿಲುಗರಿ.

ಎರಡನೆಯದು, ಧೂರ್ಜಟಿಯ ವೃಷಭ, ಎಂದರೆ ಶಿವನ ವಾಹನವಾದ ಭಾರಿ ಎತ್ತು. ಬೃಂದಾವನದಲ್ಲಿಯ ಗೋಸಮೃದ್ಧಿಯನ್ನು ಕೇಳಬೇಕೆ? ಘೋಷ-ಸುರಭಿಗಳು ಅಲ್ಲಿ ಬಹಳವೇ ಉಂಟು. ಗೋಪಾಲಕರ ಹಳ್ಳಿಗೆ ಘೋಷವೆಂದು ಹೆಸರು. ಸುರಭಿಯೆಂದರೆ ದೇವಲೋಕದ ಧೇನು ಎಂದರ್ಥ; ವಸಿಷ್ಠರ ಹೋಮಧೇನುವಾದ ನಂದಿನಿಯ ತಾಯಿಯೆಂದರ್ಥ. ಇವು ಪ್ರಸಿದ್ಧಾರ್ಥಗಳು. ಇವಲ್ಲದೆ,'ಗೋವು' ಎಂಬ ಸಾಮಾನ್ಯಾರ್ಥವೂ ಒಂದುಂಟು. ಅದನ್ನಿಲ್ಲಿ ಬಳಸಿದೆ.

ಸುರಭಿಯೆಂಬ ಪದಕ್ಕೇ "ಒಳ್ಳೇ ಗಂಧವುಳ್ಳದ್ದು" - ಎಂಬ ಅರ್ಥವೂ ಇದೆಯಷ್ಟೆ? ಗೋಸಂಪತ್ತಿಗೆ ಹೆಸರಾದ ವೃಂದಾವನದಲ್ಲಿ ಗೋವುಗಳಿಗೆ ಪುಷ್ಟಿ-ತುಷ್ಟಿಪ್ರದವಾದ ಆಹಾರವೂ ಪ್ರೀತಿಯೂ ಹೇರಳವಾಗಿ ದೊರೆಯುತ್ತಿದ್ದುದರಿಂದಾಗಿ ಬಹಳ ಆರೋಗ್ಯವಾಗಿರುವ ಅವುಗಳನ್ನು ಸಮೀಪಿಸಿದರೇ ಸಾಕು; ಅವುಗಳ ಮೈಯ ಸುಗಂಧವು ಮೂಗಿಗೆ ಮುಟ್ಟುವುದು! 

ಮನುಷ್ಯರಿಗೇ ಗೋಗಂಧವು ಮೆಚ್ಚುಗೆ ತರುವಂತಿರಲು, ಈ ಸುರಭಿ-ಗಂಧವು ಆ ವೃಷಭಕ್ಕೆ ಮುದ ತರುವಲ್ಲಿ ಆಶ್ಚರ್ಯವಿಲ್ಲ. ಮುದವಿದ್ದೆಡೆ ಮದವುಕ್ಕುವುದು. ಇಲ್ಲಿಯ ಉತ್ತಮಜಾತಿಯ ಸುರಭಿಗಳ ಸುಗಂಧವನ್ನು ಆಘ್ರಾಣಿಸಿ, ಎಂದರೆ ಮೂಸಿನೋಡಿ, ಶಿವನ ಎತ್ತಿಗೇ ಮತ್ತು ಹತ್ತುತ್ತಿತ್ತಂತೆ!

ಶಿವನನ್ನು ಇಲ್ಲಿ ಧೂರ್ಜಟಿಯೆಂದಿದೆ. ಏಕೆ ಆ ಹೆಸರು? ಆತನ ಭಾರವಾದ ಜಟೆಯಿಂದಾಗಿ. ಹೀಗೆ ವೃಂದಾವನದಲ್ಲಿರುವ ಕೃಷ್ಣನ ಸುರಭಿಯು ಶಿವವೃಷಭಕ್ಕೇ ಮತ್ತೇರಿಸುವಂತಿದೆ.

ಮತ್ತು ಮೂರನೆಯದು, ಮತ್ತೂ ವಿಶಿಷ್ಟವಾಗಿದೆ. ಕೃಷ್ಣನು ಸಾಕಿದ ಗೋವಿನ ವಿಶೇಷವನ್ನು ಹೇಳಿದ್ದಾಯಿತು, ಕೃಷ್ಣನು ತನ್ನ ಶಿರಸ್ಸಿನಲ್ಲಿ ಧರಿಸಿರುವ ಗರಿಯ ವಿಶೇಷವನ್ನು ಹೇಳಿದ್ದಾಯಿತು. ಈಗ ಮೂರನೆಯದಾಗಿ, ಮತ್ತು ಕೊನೆಯದಾಗಿ, ಶ್ರೀಕೃಷ್ಣನ ಭವ್ಯತೆಯನ್ನೇ ಹೇಳುತ್ತಿದ್ದಾನೆ.

ಶ್ರೀಕೃಷ್ಣನ ನಡೆಯೇ ಅದ್ಭುತವಾದುದು. ಆತನ ನಡೆಯಲ್ಲೇ ಒಂದು ಗಾಂಭೀರ್ಯವಿರುವುದು. ಗಜ-ಗತಿಯೆಂಬುದು ಪುರುಷ-ಶ್ರೇಷ್ಠರ, ರಾಜ-ಶ್ರೇಷ್ಠರ ನಡೆಯೆನ್ನುವರು. ಮಹಾರಾಜನ ನಡೆಯೆಂದರೆ ಮತ್ತ-ಮಾತಂಗಲೀಲೆ - ಎನ್ನುವರು. ಹಾಗಿತ್ತು ಕೃಷ್ಣನ ನಡೆಯೂ. ಅದರಲ್ಲಿ ಗಾಂಭೀರ್ಯ-ಸೌಂದರ್ಯಗಳಿದ್ದುವು. ಆ ವಿಭ್ರಮ-ಗತಿಯು, ಎಂದರೆ ವಿಲಾಸ-ಪೂರ್ಣವಾದ ನಡೆಯು, ಯಾರಾದರೂ ಆಸೆಪಡುವಂತಹುದೇ ಆಗಿತ್ತು. ಅವರಿವರಿರಲಿ, ಯಾವುದನ್ನು ಆದರ್ಶವೆಂದುಕೊಳ್ಳುತ್ತೇವೋ ಅಂತಹ ಇಂದ್ರ-ಗಜಕ್ಕೇ ತನ್ನ ನಡೆಯೂ ಹಾಗಿರಬೇಕೆಂದು ಆಸೆಪಡುವಂತಿತ್ತು! ಎಂದೇ ಇಂದ್ರನ ಆನೆಯೇ ಅದರಲ್ಲಿ ಅಸಕ್ತಿ ತೋರಿಸಿತು! - ಎನ್ನುತ್ತಾನೆ ಲೀಲಾಶುಕ.

ಹರಿಯ ಸಿಂಧುರವೆಂದರೆ ಇಂದ್ರನ ಗಜ. ಹರಿಯೆಂಬುದಕ್ಕೆ ಹಲವಾರು ಅರ್ಥಗಳಿವೆ ಇಂದ್ರನೆಂಬ ಅರ್ಥ, ಇಲ್ಲಿ. ಗಜಾನನನನ್ನು ಸಿಂಧುರಾನನವೆನ್ನಲು ಕಾರಣ, ಸಿಂಧುರವೆಂದರೆ ಗಜ. ಹೀಗೆ, ಇಂದ್ರವಾಹನವಾದ ಐರಾವತಕ್ಕೇ ಇಷ್ಟವಾಗುವ ಸಂನಿವೇಶ ಅಲ್ಲಿದೆಯೆಂದಾಯಿತು.

ತಾತ್ಪರ್ಯವೇನೆಂದರೆ, ಶ್ರೀಕೃಷ್ಣನು ವೃಂದಾವನದಲ್ಲಿ ಗೋ-ಪಾಲನವನ್ನು ಮಾಡುತ್ತಿರುವಾಗ, ದೇವತೆಗಳೆಲ್ಲ ಬಂದು ಅವನ ದರ್ಶನವನ್ನು ಮಾಡಿ, ತಮ್ಮ ಕಣ್ಣುಗಳನ್ನು ತುಂಬಿಕೊಳ್ಳುತ್ತಿದ್ದರು.

ಅಲ್ಲದೆ, ಅವರು ಬರುವಾಗ ಸಹಜವಾಗಿಯೇ ತಮ್ಮ ವಾಹನಗಳೊಂದಿಗೇ ಬರುತ್ತಿದ್ದುದು. ಹೀಗಾಗಿ ಶಿವ-ಸ್ಕಂದ-ಇಂದ್ರರು ಅಲ್ಲಿಗೆ, ಎಂದರೆ, ಕೃಷ್ಣನು ಪಶುಪಾಲನ ಮಾಡುವ ಎಡೆಯಾದ ವೃಂದಾವನಕ್ಕೆ, ಸವಾಹನರಾಗಿಯೇ ಬರುತ್ತಿದ್ದರು. ಅವರೆಲ್ಲ ಬರುತ್ತಿದ್ದುದು ಕೃಷ್ಣ-ದರ್ಶನಾರ್ಥಿಗಳಾಗಿಯೇ – ಎಂಬುದು ತಾತ್ಪರ್ಯ. ದೇವತಾ-ವಾಹನಗಳಿಗೂ ಮೋದ; ದೇವತೆಗಳಿಗೂ ಮಹಾಮೋದವೇ.

ಎಂದೇ, ತನ್ನ ನಮಸ್ಕಾರವೆಂಬುದು ಆ ಬೃಂದಾವನಕ್ಕೂ ಸಲ್ಲುವುದು; ಅಲ್ಲಿಯ ಗೋಸಂಪತ್ತಿನ ಪ್ರಭುವಾದ ಶ್ರೀಕೃಷ್ಣನಿಗೂ ಸಲ್ಲುವುದು - ಎನ್ನುತ್ತಾನೆ, ಲೀಲಾಶುಕ.

ಶ್ಲೋಕ ಹೀಗಿದೆ:

ಯಸ್ಮಿನ್ ನೃತ್ಯತಿ ಯಸ್ಯ ಶೇಖರ-ಭರೈಃ ಕ್ರೌಂಚ-ದ್ವಿಷಃ ಚಂದ್ರಕೀ /

ಯಸ್ಮಿನ್ ದೃಪ್ಯತಿ ಯಸ್ಯ ಘೋಷ-ಸುರಭಿಂ ಜಿಘ್ರನ್ ವೃಷೋ ಧೂರ್ಜಟೇಃ |

ಯಸ್ಮಿನ್ ಸಜ್ಜತಿ ಯಸ್ಯ ವಿಭ್ರಮ-ಗತಿಂ ವಾಂಛನ್ ಹರೇಃ ಸಿಂಧುರಃ /

ತದ್ ವೃಂದಾವನ-ಕಲ್ಪಕ-ದ್ರುಮ-ವನಂ, ತಂ ವಾ ಕಿಶೋರಂ, ಭಜೇ ||

ಸೂಚನೆ : 21/2/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ100 ಜಿಜೀವಿಷೇಚ್ಛತಂ ಸಮಾಃ (Astakshara 100)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 

(ಪ್ರತಿಕ್ರಿಯಿಸಿರಿ lekhana@ayvm.in)




ಅಷ್ಟಾಕ್ಷರದರ್ಶನದ ನೂರನೆಯ ಕಂತು ಇದು! ಎಂದೇ, ನೂರಾಯುಸ್ಸಿನ ಆಸೆಯನ್ನು ಕುರಿತೊಂದು ಜಿಜ್ಞಾಸೆ.

ನೀವೇನನ್ನು ಬಯಸುತ್ತೀರಿ? ಎಲ್ಲಕ್ಕಿಂತಲೂ ಮುಖ್ಯವಾದ ತಮ್ಮ ಆಸೆ ಯಾವುದು? - ಎಂದು ಹತ್ತು ಮಂದಿಯನ್ನು ಕೇಳಿದರೆ ಏನೇನು ಉತ್ತರಗಳು ಬರಬಹುದು? ಅದಿರಲಿ; ಎಲ್ಲರ ಪರವಾಗಿ ಎಲ್ಲರ ಉತ್ತರಗಳಿಗಿಂತ ಮುಖ್ಯವಾದ ಉತ್ತರಗಳನ್ನು ದಾಸರೇ ಕೊಟ್ಟುಬಿಟ್ಟಿದ್ದಾರೆನ್ನಬಹುದು.

ಬಹುಮಂದಿಗೆ ತೋರುವ ಉತ್ತರಗಳೇನು? ತುಂಬಾ ಸಂಪತ್ತಿರಬೇಕು, ವೈಭವದ ಜೀವನವಿರಬೇಕು, ಸುಖ-ಭೋಗಗಳ ಸೊಗಸಿರಬೇಕು, ಇತ್ಯಾದಿ. ಆದರೆ ಇನ್ನೂ ಮುಖ್ಯವಾದುದನ್ನೂ, ಯಾರೂ ಕಡೆಗಾಣಿಸಲಾಗದುದನ್ನೂ, ತಾಳಬದ್ಧವಾಗಿಯೂ ಪ್ರಾಸಬದ್ಧವಾಗಿಯೂ ಚಿಕ್ಕದಾಗಿಯೂ ಚೊಕ್ಕವಾಗಿಯೂ ಹೇಳಿದ್ದಾರೆ, ಕನಕದಾಸರು : "ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ!"

ಅದಕ್ಕೆ ಪ್ರತಿಯಾಗಿ ನಾವು, "ಏನು, ಹೊಟ್ಟೆ-ಬಟ್ಟೆಗಳಿಗಾಗಿಬಿಟ್ಟರಷ್ಟೆ ಸಾಕೆ?" ಎನ್ನಬಹುದು, ಸರಿಯೇ. ಆದರೆ ಅವರ ಮಾತನ್ನು ಕೇವಲ ವಾಚ್ಯಾರ್ಥದಲ್ಲಿ ತಿಳಿದುಕೊಳ್ಳುವುದಲ್ಲ; ಅದರ ತಾತ್ಪರ್ಯವನ್ನು ಹಿಡಿಯಬೇಕು. ಹೊಟ್ಟೆಯೆಂದರೆ ಹೊಟ್ಟೆ ಮಾತ್ರವಲ್ಲ; ಬಟ್ಟೆಯೆಂದರೆ ಬಟ್ಟೆ ಮಾತ್ರವಲ್ಲ. ಹೊಟ್ಟೆಯೆಂಬುದು ಬದುಕುಳಿದಿರುವುದನ್ನು ಸೂಚಿಸುತ್ತದೆ; ಬಟ್ಟೆಯೆಂಬುದು ಮಾನವನ್ನು ಸೂಚಿಸುತ್ತದೆ.

ಬದುಕಿರಬೇಕು, ಸರಿಯೇ. ಎಷ್ಟು ದಿನ ಬದುಕಿರಬೇಕು? ಮಾನವ ಜೀವಮಾನದಲ್ಲಿ ಸಾಧಿಸಬೇಕಾದ ಆ ಮಾನವಾವುದು? ಯಾರದ್ದಾದರೂ ಜೀವಮಾನವು ಚೆನ್ನಾಗಿ ಕಳೆಯಿತು - ಎಂದು ಹೇಳಲು ಮಾನದಂಡವಾವುದು? ಎಲ್ಲವೂ ಯುಕ್ತಪ್ರಶ್ನೆಗಳೇ ಅಲ್ಲವೇ?  

ಎಷ್ಟೋ ಜನಕ್ಕೆ ಜೀವನವೇ 'ಬೋರ್' ಆಗುವುದಲ್ಲವೇ?: ಎಂದರೆ ನೀರಸ-ನಿರರ್ಥಕವಾಗಿ ತೋರಿ ಬೇಸರವನ್ನೇ ತರಿಸೀತಲ್ಲವೆ? ಯಾಕಾಗಿ ಬದುಕಿರಬೇಕೋ? - ಎನಿಸುವ ಪ್ರಸಂಗಗಳು ಯಾರ ಜೀವನದಲ್ಲಾದರೂ ಬಂದಾವೇ.

ಇದಲ್ಲದೆ, ನಮ್ಮ ದೇಶಕ್ಕೇ ವಿಶಿಷ್ಟವಾದ ಸಂಪ್ರದಾಯಗಳು ಕೆಲವಿವೆ. ಯಾರೇ ನಮಸ್ಕರಿಸಿದರೂ, ಹಿರಿಯರು ಮಾಡುವ/ತ್ತಿದ್ದ ಆಶೀರ್ವಾದವೇನು? ಆರೇ ಅಕ್ಷರಗಳ ನುಡಿ - ದೀರ್ಘಾಯುಷ್ಮಾನ್ ಭವ : "ಚಿರಕಾಲ ಬಾಳು!" ಹೆಂಗಸರಿಗೆ ಸಲ್ಲುವ ಆಶೀರ್ವಾದದಲ್ಲೂ ಈ ದೀರ್ಘಾಂಶವಿಲ್ಲದಿಲ್ಲ.

ಹಾಗಾದರೆ ಬಹುವರ್ಷ ಬದುಕಿರುವುದೇ ಹಿರಿದಾದುದೆಂದೇ? ಚಿರಕಾಲ ಬದುಕಿರುವವರೆಲ್ಲ ಮಹತ್ತಾದ ಸಾಧನೆಯನ್ನೇ ಮಾಡಿಬಿಡು/ಟ್ಟಿರುವರೇ? "ಹುಟ್ಟಿದ ಮೇಲೆ ಸಾಯೋ ತನಕ ಗಂಡಾಗುಂಡಿ" - ಎಂದಷ್ಟೇ ಜೀವನವಾದರೆ ಏನು ಬಂದಂತಾಯಿತು?

ಈ ಪ್ರಶ್ನೆಗಳಿಗೆ ನಮ್ಮ ಆರ್ಷ-ಪರಂಪರೆಯಲ್ಲಿ ಏನಾದರೂ ಉತ್ತರ ಸಿಗಬೇಕಲ್ಲವೇ? ಏಕೀ ಪ್ರಶ್ನೆ? ಜಗತ್ತಿನ ಎಷ್ಟೋ ನಾಗರಿಕತೆಗಳು ಅಲ್ಪಾಯುಗಳಾಗಿ ಹೇಳಹೆಸರಿಲ್ಲದಂತೆ ಹಳಸಿ ಅಳಿದುಹೋದವು.  ಋಷಿನಿರ್ಮಿತ-ನಾಗರಿಕತೆಯೊಂದೇ ಸುದೀರ್ಘಕಾಲ ಸುಚೈತನ್ಯದಿಂದ ಸೊಗಯಿಸಿರುವುದು! ಚಿರ-ಸ್ಥಾಯಿಯಾದ ಈ ಸಂಸ್ಕೃತಿಯೇ ಚಿರ-ಜೀವಿತದ ಮರ್ಮವನ್ನೂ ಅರುಹುವುದು.

ಏತಕ್ಕಾಗಿ ಬಾಳಿದರೆ ಜೀವನವು ಸಾರ್ಥಕವಾದೀತು? ಹಾಗೂ ಅದಕ್ಕಾಗಿ ಅದೆಷ್ಟು ಕಾಲ ಬಾಳಬಯಸಬೇಕು – ಎಂಬೆರಡು ಪ್ರಶ್ನೆಗಳಿಗೂ ಒಂದೇ ಮಂತ್ರದಲ್ಲಿ ಉತ್ತರವನ್ನು ಕೊಟ್ಟಿದೆ, ಉಪನಿಷತ್ತುಗಳಲ್ಲಿ ಮೊದಲನೆಯದೂ ಚಿಕ್ಕದೂ ಆದ ಈಶಾವಾಸ್ಯೋಪನಿಷತ್ತು. ಅದರ ಎರಡನೆಯ ಮಂತ್ರದ ಎರಡನೆಯ ಪಾದವೇ "ಜಿಜೀವಿಷೇತ್ ಶತಂ ಸಮಾಃ"! "ನೂರು ವರ್ಷ ಬದುಕಬಯಸಬೇಕು" – ಎಂದು.

ಎಂದೇ, ಯಾವುದೇ ಕಾರಣಕ್ಕೂ ಜೀವನವನ್ನು ಮೊಟಕುಗೊಳಿಸಲು ಪ್ರಯತ್ನಿಸುವುದಿರಲಿ, ಬಯಸಲೂಬಾರದು - ಎಂಬ ಸಂದೇಶವಿಲ್ಲಿದೆ! ಅರ್ಥಾತ್, ಆತ್ಮಹತ್ಯೆಗೆ ಶಾಸ್ತ್ರಗಳಲ್ಲಿ ಅನುಮತಿಯಿಲ್ಲವೇ ಇಲ್ಲ. ಆತ್ಮಹತ್ಯೆ ಮಾಡಿಕೊಂಡವರು ಅಂಧಂತಮಸ್ಸಿನಲ್ಲಿ ನರಳುವರು – ಎಂದೂ ಎಚ್ಚರಿಸಿದೆ, ಅಲ್ಲೇ!

"ಶತಾಯುರ್ವೈ ಪುರುಷಃ" ಎನ್ನುವರಲ್ಲವೇ? ಪೂರ್ಣಾಯುಸ್ಸೆಂದರೆ ಅದೇ: ಪೂರ್ತಿ ನೂರು ವರ್ಷಗಳು ಬಾಳುವುದೇ ಆದರ್ಶ, ಅಪೇಕ್ಷ್ಯ. ಕರ್ಮಗಳನ್ನು ಮಾಡುತ್ತಲೇ ಶತಾಯುಷಿಗಳಾಗಿ ಬಾಳಬೇಕೆಂಬುದನ್ನೂ ಇದೇ ಮಂತ್ರದಲ್ಲೇ ಹೇಳಿದೆ.  

ಇದರಲ್ಲೇನಿದೆ ವಿಶೇಷ? ಏನೂ ಮಾಡದೆ ಸುಮ್ಮನಿದ್ದುಬಿಡಲು ಯಾರಿಂದಲಾದರೂ ಸಾಧ್ಯವೇ? - ಒಂದು ಕ್ಷಣವಾದರೂ? - ಎಂದು ಗೀತೆಯೇ ಕೇಳುವುದಲ್ಲವೇ? ಹಾಗಿರುವಾಗ, "ಕರ್ಮಗಳನ್ನು ಮಾಡುತ್ತಲೇ" - ಎಂದು ಹೇಳುವುದರಲ್ಲಿ ವಿಶೇಷವೇನಿದೆ?

ಇದೆ. "ಯೋಗೀ ಭವ" ಎಂಬುದೇ ಅರ್ಜುನನಿಗೆ ಕೃಷ್ಣನು ಹೇಳಿದ ಮಾತು: ಯೋಗಿಗಳೇ ಆದರ್ಶ-ಪುರುಷರು. ಯೋಗಿಯಾದರೇನು ಕರ್ಮವು ಬೇಡವೆಂದೇ? "ಯೋಗಿಗಳೂ ಕರ್ಮ ಮಾಡತಕ್ಕವರೇ" ಎನ್ನುತ್ತಾನೆ, ಕೃಷ್ಣ. ಹೇಗೆ? ಅಂಟಿಸಿಕೊಳ್ಳದೆ ಆತ್ಮಶುದ್ಧಿಗಾಗಿ ಅದನ್ನು ಮಾಡುತ್ತಾರೆ, ಅವರು. ಕರ್ಮಫಲಕ್ಕಂಟಿಕೊಳ್ಳದೆ, ಮನೋಬುದ್ಧಿಗಳನ್ನು ಭಗವಂತನಿಗರ್ಪಿಸಿ, ವಿಹಿತಕರ್ಮಗಳನ್ನಾಚರಿಸುತ್ತಾರೆ.

ಹಾಗೆ ಮಾಡಿದರೇ ಜೀವನವು ಸಾರ್ಥಕವೆನಿಸುವುದು. ಶ್ರೀರಂಗಮಹಾಗುರುಗಳು ಎಚ್ಚರಿಸುವಂತೆ, "ಸತ್ತು ಹೋಗುವುದಕ್ಕಿಂತ ಮುಂಚೆಯೇ, ಇಲ್ಲಿಯೇ, ಜೀವಂತವಾಗಿ ಮುಕ್ತರಾಗಬೇಕು!" ಗೀತೆಯೂ "ಇಹೈವ", "ಇಲ್ಲಿಯೇ" – ಎನ್ನುತ್ತದಲ್ಲವೇ? ಸತ್ಕರ್ಮದಿಂದಲೇ ಸಂಸಿದ್ಧಿಯನ್ನು ಸಂಪಾದಿಸಿದ ಜನಕ-ಮಹರ್ಷಿಯ ಆದರ್ಶವನ್ನು ಗೀತೋಪನಿಷತ್ತುಗಳು ಎತ್ತಿಹಿಡಿದಿರುವುವಲ್ಲವೇ?

ಜೀವನವನ್ನು ಸಂಪನ್ನಗೊಳಿಸಿಕೊಳ್ಳಲು ಸನ್ಮಾರ್ಗ-ದರ್ಶನ ಹಾಗೂ ತದನುಸಾರವಾದ ಸುದೀರ್ಘ-ಸಾಧನೆಗಳು ಸರ್ವಥಾ ಸಂಪಾದ್ಯವಲ್ಲವೇ? ಅವೆಲ್ಲಕ್ಕಾಗಿಯೇ - ಜೀವಿತದ ಸಫಲತೆ-ಸುಫಲತೆಗಳಿಗೋಸ್ಕರವಾಗಿಯೇ - ಶತಾಯುಸ್ಸಿಗಾಗಿ ಹಂಬಲಿಸ(ಲೇ)ಬೇಕಲ್ಲವೇ? ನೂರ್ಕಾಲ ಬಾಳೋಣ!

ಸೂಚನೆ: 21/2//2026 ರಂದು ಈ ಲೇಖನ ವಿಜಯವಾಣಿ ಸುದಿನ ದಲ್ಲಿ ಪ್ರಕಟವಾಗಿದೆ. 

Monday, February 16, 2026

ವ್ಯಾಸ ವೀಕ್ಷಿತ 175 ಜರಾಸಂಧನ ಭವಿಷ್ಯವನ್ನು ಕುರಿತು ಕೌಶಿಕನ ನುಡಿ ( Vyaasa Vikshita 175)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ಚಂಡಕೌಶಿಕಮುನಿಯು ಮುಂದೆ ಜರಾಸಂಧನ ಭವಿಷ್ಯವು ಹೇಗಿರುವುದೆಂಬುದನ್ನು ಅವನ ತಂದೆ ಬೃಹದ್ರಥನಿಗೆ ತಿಳಿಸುತ್ತಾ ಹೀಗೆ ಮಾತನ್ನು ಮುಂದುವರೆಸುತ್ತಾನೆ:

"ದೇವತೆಗಳೇ ಪ್ರಯೋಗಿಸಿದ ಶಸ್ತ್ರಗಳೂ ಸಹ ಈ ಜರಾಸಂಧನನನ್ನು ಪೀಡಿಸವು - ನದಿಗಳ ವೇಗಗಳು ಪರ್ವತವನ್ನು ಹೇಗೆ ಪೀಡಿಸಲಾರವೋ ಹಾಗೆ. ಮೂರ್ಧಾಭಿಷಿಕ್ತ ರಾಜರು ಹಲವರಿರಬಹುದು. ಆದರೆ ಅವರೆಲ್ಲರ ತಲೆಯ ಮೇಲೆ ಈತನು ಜ್ವಲಿಸುವನು (ಎಂದರೆ ಉಜ್ಜ್ವಲನಾಗಿ ಬೆಳಗುವನು). ಆಕಾಶದಲ್ಲಿ ಜ್ಯೋತಿಸ್ಸುಗಳುಂಟು. ಆದರೆ ಸೂರ್ಯನು ಅವೆಲ್ಲವನ್ನೂ ಮೀರಿಸುವನು, ಅಲ್ಲವೇ? ಹಾಗೆಯೇ ಈತನೂ ಎದುರಾಳಿಗಳನ್ನು ಮಂಕುಮಾಡುವವನೇ.

ಸುಸಂಪನ್ನವಾದ ಸೈನ್ಯ-ವಾಹನಗಳನ್ನುಳ್ಳ ರಾಜರುಗಳೂ ಈತನತ್ತ ಏನಾದರೂ ಸೆಣಸಲು ಸಮೀಸಿದರೆ, ಮಿಡತೆಗಳು ಬೆಂಕಿಯೊಳಗೆ ನುಗ್ಗಿ ಸಾಯುವ ಹಾಗೆ ಸಾಯುವವರೇ. ರಾಜರೆಲ್ಲರ ಒಟ್ಟಾರೆ ಸಂಪತ್ತನ್ನೂ ಈತನು ಅಪಹರಿಸಿಬಿಡುವನು. ಮಳೆಗಾಲದಲ್ಲಿ ನದಗಳು ಹಾಗೂ ನದಿಗಳು ಉಕ್ಕುವ ನೀರುಳ್ಳವಾಗಿರುತ್ತವೆಯಷ್ಟೆ. ಆದರೆ ಸಮುದ್ರರಾಜನು ಅವೆಲ್ಲವನ್ನೂ ಹೇಗೆ ನುಂಗಿಬಿಡುವನೋ, ಹಾಗೆ.

ನಾಲ್ಕೂ ವರ್ಣಗಳಿಗೂ ಈತನು ಆಸರೆ ಕೊಡುವನು - ಹೇಗೆ ಭೂಮಿಯು ಸರ್ವ-ಸಸ್ಯಗಳನ್ನೂ ಧರಿಸುತ್ತಾ ಶುಭಾಶುಭ-ವಸ್ತುಗಳಿಗೆಲ್ಲಾ ಆಶ್ರಯವೀಯುವುದೋ ಹಾಗೆ. ಈತನ ಆಜ್ಞೆಗೆ ಎಲ್ಲ ರಾಜರೂ ಅಧೀನರಾಗಿರುವರು - ಸಮಸ್ತ್ರಭೂತಗಳಿಗೂ ಆತ್ಮಭೂತನಾದ ವಾಯುವಿಗೆ ಹೇಗೆ ಸರ್ವಪ್ರಾಣಿಗಳೂ ಅಧೀನರಾಗಿರುವರೋ ಹಾಗೆ.

ಅಲ್ಲದೆ, ಎಲ್ಲ ಲೋಕಗಳಲ್ಲೂ ಬಲಶಾಲಿಯಾದ ಈತನು, ತ್ರಿಪುರಸಂಹಾರವನ್ನು ಮಾಡಿದ ರುದ್ರಮಹಾದೇವನನ್ನು ಸಾಕ್ಷಾತ್ಕರಿಸಿಕೊಳ್ಳುವನು."

ಹೀಗೆ ಹೇಳುತ್ತಲೇ ಆ ಮುನಿಯು ತನ್ನ ಸ್ವಕಾರ್ಯ-ಚಿಂತನ-ಮಗ್ನನಾಗಿ ಬೃಹದ್ರಥರಾಜನನ್ನು ಕಳುಹಿಸಿಕೊಟ್ಟನು.

ಆಮೇಲೆ ಮಗಧಾಧಿಪತಿಯಾದ ರಾಜಾ ಬೃಹದ್ರಥನು ತನ್ನ ನಗರಕ್ಕೆ ಹಿಂದಿರುಗಿ, ಜ್ಞಾತಿಗಳಿಂದಲೂ ಸಂಬಂಧಿಗಳಿಂದಲೂ ಸುತ್ತುವರೆಯಲ್ಪಟ್ಟವನಾಗಿ, ಜರಾಸಂಧನಿಗೆ ಪಟ್ಟಾಭಿಷೇಕವನ್ನು ನೆರವೇರಿಸಿ, ಪರಮಸಂತೋಷವನ್ನು ಹೊಂದಿದನು. ಜರಾಸಂಧನಿಗೆ ಅಭಿಷೇಕವನ್ನು ಮಾಡಿದ ಬಳಿಕ ರಾಜಾ ಬೃಹದ್ರಥನು ತನ್ನಿಬ್ಬರೂ ಪತ್ನಿಯರೊಂದಿಗೆ ವಾನಪ್ರಸ್ಥನಾದನು.

ತನ್ನಿಬ್ಬರು ತಾಯಂದಿರೂ ತಂದೆಯೂ ವನಕ್ಕೆ ತೆರಳಿರಲು, ಜರಾಸಂಧನ ರಾಜ್ಯನಿರ್ವಹಣೆಯು ಆರಂಭವಾಯಿತು. ಸ್ವಪರಾಕ್ರಮದಿಂದ ರಾಜರನ್ನು ತನ್ನ ವಶದಲ್ಲಿಟ್ಟುಕೊಂಡನು.

ದೀರ್ಘಕಾಲವು ಹೀಗೇ ಕಳೆಯಿತು. ತಪೋವನದಲ್ಲಿ ತಪಸ್ಸು ಮಾಡಿ ರಾಜಾ ಬೃಹದ್ರಥನು ಪತ್ನೀ-ಸಮೇತನಾಗಿ ಸ್ವರ್ಗಸೇರಿದನು. ಮತ್ತು ಜರಾಸಂಧನಾದರೂ, ಕೌಶಿಕನು ಹೇಳಿದಂತೆಯೇ ಎಲ್ಲ ವರಗಳನ್ನೂ ಪಡೆದವನಾಗಿ ರಾಜ್ಯಪಾಲನೆ ಮಾಡಿದನು.

ಇಷ್ಟರಲ್ಲಿ ವಾಸುದೇವನು ಕಂಸಮಹಾರಾಜನನ್ನು ಸಂಹರಿಸಿದನಷ್ಟೆ. ಇದರಿಂದಾಗಿ ಕೃಷ್ಣನೊಂದಿಗೆ ಆತನ ವೈರವೂ ಉಂಟಾಯಿತು. ಒಂದು ಕಡಿಮೆ ನೂರು ಬಾರಿ - ಎಂದರೆ ತೊಂಭತ್ತೊಂಭತ್ತು ಬಾರಿ - ಗದೆಯನ್ನು ತಿರುಗಿಸಿದವನೇ, ತನ್ನ ಗಿರಿವ್ರಜಸ್ಥಾನದಿಂದ ಮಥುರೆಯಲ್ಲಿ ಅದ್ಭುತಕರ್ಮನಾದ ಕೃಷ್ಣನತ್ತ ಅದನ್ನು ಬೀಸಿ ಎಸೆದನು. ಮತ್ತು ಆ ಉತ್ತಮವಾದ ಗದೆಯೂ ತೊಂಭತ್ತೊಂಭತ್ತು ಯೋಜನಗಳ ದೂರದಲ್ಲಿದ್ದ ಮಥುರೆಯಲ್ಲಿಗೆ ಬಂದು ಬಿದ್ದಿತು.

ಗದೆಯು ಬಂದು ಬಿದ್ದಿರುವುದನ್ನು ಪುರಜನರು ಕೃಷ್ಣನಿಗೆ ತಿಳಿಸಿದರು. ಗದೆ ಬಿದ್ದೆಡೆಗೆ ಒಂದು ಹೆಸರೂ ಬಂದಿತು, ಅಂದಿನಿಂದ - ಗದಾವಸಾನ - ಎಂದು. ಎಂದರೆ ಗದೆಯು ಕೊನೆಗೊಂಡ ಜಾಗ.

ನಾನು ಹಿಂದೆಯೇ ಹೇಳಿದಂತೆ ಜರಾಸಂಧನಿಗೆ ಹಂಸ-ಡಿಂಭಕ ಎಂಬ ಇಬ್ಬರ ಸಹಾಯವಿದ್ದಿತು. ಅವರಿಬ್ಬರೂ ಶಸ್ತ್ರಗಳಿಂದ ಸಾಯಿಸಲಾಗದಂಥವರು. ಧೀಮಂತರು, ನೀತಿಶಾಸ್ತ್ರದಲ್ಲಿ ವಿಶಾರದರಾದವರು. ಅವರು ಮೂವರು ಸೇರಿದರೆ, ಮೂರು ಲೋಕಗಳಲ್ಲೂ ಜಯಿಸಲಾಗದಂತಹವರೇ ಸರಿ.

ಸೂಚನೆ : 15/2/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಪ್ರಶ್ನೋತ್ತರ ರತ್ನಮಾಲಿಕೆ 53 (Prasnottara Ratnamalike 53)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ - ೫೩ - ಅಲಂಕಾರ ಯಾವುದು ?

ಉ. ಶೀಲ

ಪ್ರಕೃತಪ್ರಶ್ನೋತ್ತರದಲ್ಲಿ ಎರಡು ವಿಷಯದ ಬಗ್ಗೆ ಚಿಂತಿಸಬೇಕಾಗಿದೆ. ಅಲಂಕಾರ ಎಂದರೇನು? ಮತ್ತು ಶೀಲವು ಹೇಗೆ ಅಲಂಕಾರವಾಗುತ್ತದೆ? ಎಂಬುದಾಗಿ. ದೇವರನ್ನು ಅಲಂಕರಿಸುತ್ತೇವೆ, ನಾವು ಅಲಂಕಾರ ಮಾಡಿಕೊಳ್ಳುತ್ತೇವೆ, ಕಾವ್ಯದಲ್ಲಿ ಉಪಮಾಲಂಕಾರ ಎಂದು ಕೇಳುತ್ತೇವೆ. ಈ ಅಲಂಕಾರದ ಅರ್ಥವೇನು? ದೇವರೆಂದರೆ ಮೊದಲೇ ಕಾಂತಿಯಿಂದ ಕೂಡಿದವನು. ಅಲಂಕಾರದಿಂದ ದೇವರು ಇನ್ನಷ್ಟು ನೋಡಲು ಆಕರ್ಷಕನಾಗಿ ಕಾಣುತ್ತಾನೆ. ನಾವು ಚೆನ್ನಾಗಿ ಕಾಣಬೇಕೆಂದು ಅಲಂಕರಿಸಿಕೊಳ್ಳುತ್ತೇವೆ. ಅಂತೆಯೇ ಕಾವ್ಯದಲ್ಲಿ ಬರುವ ಶಬ್ದಾಲಂಕಾರವೋ ಅಥವಾ ಅರ್ಥಾಲಂಕಾರವೋ ಕಾವ್ಯವನ್ನು ಇನ್ನಷ್ಟು ಸೊಬಗಾಗಿ ಮಾಡುತ್ತದೆ, ಶೋಭಿಸುವಂತೆ ಮಾಡುತ್ತದೆ. 'ಕಾವ್ಯಶೋಭಾಕರಾನ್ ಧರ್ಮಾನ್ ಅಲಂಕಾರಾನ್ ಪ್ರಚಕ್ಷತೇ' ಎಂಬುದಾಗಿ ಹೇಳಲಾಗಿದೆ. ಅಲಂಕಾರ- ಅಲಂ- ಸಾಕು, ಪರ್ಯಾಪ್ತಿ ಎಂಬ ಅರ್ಥ. ಯಾವುದನ್ನು ಮಾಡಿದರೆ 'ಇನ್ನೂ ಮಾಡಬೇಕು' ಎಂಬುದಾಗಿ ಇಲ್ಲವೋ, ಮಾಡಬೇಕಾದ ಕಾರ್ಯವು ಯಾವಾಗ ಪರಿಸಮಾಪ್ತಿಯನ್ನು ಪಡೆಯುತ್ತದೆಯೋ, ಅಥವಾ ಮೂಲ ಉದ್ದೇಶವನ್ನು ಈಡೇರಿಸುವಂತೆ ಇರುತ್ತದೆಯೋ, ಆ ವಸ್ತುವಿನ ಸಹಜವಾದ ಸ್ವಭಾವವು ಇನ್ನಷ್ಟು ಶೋಭಿಸುವಂತೆ ಇರುತ್ತದೆಯೋ ಅಂತಹ ಕಾರ್ಯವನ್ನು 'ಅಲಂಕಾರ' ಎಂಬುದಾಗಿ ಕರೆಯಲಾಗುತ್ತದೆ.

ಪ್ರಸ್ತುತ 'ಶೀಲ' ಎಂಬುದನ್ನು ಅಲಂಕಾರ ಎಂಬುದಾಗಿ ಉತ್ತರಿಸಲಾಗಿದೆ. ಅಂದರೆ ಶೀಲವು ಹೇಗೆ ಅಲಂಕಾರವಾಗುತ್ತದ? ಹಾಗಾದರೆ ಇದೊಂದು ಅಲಂಕಾರಕ್ಕೆ ಬೇಕಾದ ಆಭರಣವೋ? ಒಂದು ಹಾರವನ್ನೋ, ನೂಪುರವನ್ನೋ ಧರಿಸಿದರೆ ಹೇಗೆ ವ್ಯಕ್ತಿ ಸುಂದರವಾಗಿ ಕಾಣುತ್ತಾನೋ, ಅಂತೆಯೇ ಈ ಶೀಲವೆಂಬುದು ಒಂದು ಆಭರಣವೇ? ಅದೊಂದು ಪದಾರ್ಥವೇ? ಹೌದು. ಅದೊಂದು ವ್ಯಕ್ತಿಯ ಅಂತಃಕರಣದ ಆಭರಣ. ಈ ಆಭರಣವು ಅವನನ್ನು ಶೋಭಿಸುವಂತೆ ಮಾಡುತ್ತದೆ. ಅವನು ಮಾನ್ಯನಾಗುತ್ತಾನೆ. ಎಲ್ಲರಿಂದ ಆಕರ್ಷಿತನಾಗುತ್ತಾನೆ. ಹಾಗಾಗಿ 'ಶೀಲಂ ಸರ್ವಸ್ಯ ಭೂಷಣಂ' ಎಂಬುದಾಗಿ ಒಂದು ಸುಭಾಷಿತ ಶೀಲದ ಮಹತ್ವವನ್ನು ಸಾರುತ್ತದೆ; ಎಲ್ಲಕ್ಕಿಂತಲೂ ಶೀಲವೇ ಉತ್ತಮವಾದ ಆಭರಣ ಎಂಬುದಾಗಿ. ಹಾಗಾದರೆ ಶೀಲ ಎಂದರೇನು? ವ್ಯಕ್ತಿಯಲ್ಲಿ ಸ್ವಭಾವ ಮತ್ತು ಶೀಲಾ ಎಂಬುದಾಗಿ ಎರಡು ರೀತಿಯ ಲಕ್ಷಣವನ್ನು ಕಾಣಬಹುದು. ಯಾವುದು ಜನ್ಮತಃ ಬಂದಿರುತ್ತದೆಯೋ, ಸ್ವ -ಆತ್ಮ, ತನ್ನ ಜೊತೆಯಲ್ಲಿ ಯಾವುದು, ಭಾವ -ಇರುವುದು, ಅದು ಸ್ವಭಾವವಾಗುತ್ತದೆ. ಶೀಲಾ ಎಂಬುದು ಅವನ ಹುಟ್ಟಿನ ಅನಂತರದಲ್ಲಿ ಬದಲಿಸಬಹುದಾದ ಒಂದು ವಿಶೇಷ ಗುಣ. ಅದನ್ನು 'ಶೀಲ' ಎಂಬುದಾಗಿ ಕರೆದಿದ್ದಾರೆ. ಶೀಲವು ಹದಿಮೂರು ಬಗೆ ಎಂಬುದನ್ನು ಹಾರಿತ ಸ್ಮೃತಿಯು ಹೇಳುತ್ತದೆ. ೧.ಬ್ರಹ್ಮಣ್ಯತಾ- ಎಲ್ಲೆಡೆ ಬ್ರಹ್ಮಭಾವವನ್ನು ಕಾಣುವುದು. ೨.ದೇವಪಿತೃ ಭಕ್ತಿತಾ, ೩,ಸೌಮ್ಯತಾ -ಸೌಮ್ಯವಾದ ನಡೆ, ೪.ಅಪರೋಪತಾಪಿತಾ - ಬೇರೆಯವರಿಗೆ ತೊಂದರೆ ಕೊಡದಿರುವುದು, ೫.ಅನಸೂಯತಾ - ಹೊಟ್ಟೆಕಿಚ್ಚು ಇಲ್ಲದಿರುವುದು, ೬.ಮೃದುತಾ - ಮೃದುಸ್ವಭಾವ, ೭.ಅಪಾರುಷ್ಯ - ಕಠಿಣಹೃದಯಿಯಾಗದಿರುವುದು, ೮.ಮೈತ್ರತಾ -ಎಲ್ಲರಲ್ಲೂ ಮಿತ್ರಭಾವದಿಂದ ಇರುವುದು, ೯.ಪ್ರಿಯವಾದಿತ್ವ - ಪ್ರಿಯವೂ ಹಿತವಾಗುವಂತೆ ಮಾತನಾಡುವುದು ೧೦.ಕೃತಜ್ಞತಾ - ಮಾಡಿದ ಉಪಕಾರದ ಸ್ಮರಣೆ, ೧೧.ಶರಣ್ಯತಾ - ನಮಗಿಂತಲೂ ದೊಡ್ಡ ವಿಷಯಕ್ಕೆ ಮಣಿಯುವುದು, ೧೨.ಕಾರುಣ್ಯ - ದಯೆ, ೧೩.ಪ್ರಶಾಂತಿ - ನೆಮ್ಮದಿ ಎಂಬುದಾಗಿ. ಇಂತಹ ಶೀಲವೆಂಬ ವಿಶಿಷ್ಟವಾದ ಗುಣಗಳಿಂದ ಕೂಡಿದ ವ್ಯಕ್ತಿಯು ಎಲ್ಲೆಡೆ ಆಕರ್ಷಿತನಾಗುತ್ತಾನೆ, ಕಾರಣ ಶೋಭಿಸುತ್ತಾನೆ. ಅವನನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ. ಆದ್ದರಿಂದ ಅವನು ಜಗನ್ಮಾನ್ಯನಾಗುತ್ತಾನೆ. ಹಾಗಾಗಿ 'ಶೀಲ'ವನ್ನು 'ಅಲಂಕಾರ' ಎಂಬುದಾಗಿ ವಿವರಿಸಲಾಗಿದೆ.

ಸೂಚನೆ : 15/2/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Sunday, February 15, 2026

ಕೃಷ್ಣಕರ್ಣಾಮೃತ 94 ಉದಯಸಮಯದಲಿ ನೆನೆಯುವುದು ಸರಸಿಜವದನನನು (Krishakarnamrta 94)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)





ಬೆಳಗಾಗೆದ್ದು ನಾವು ಮೊದಲು ಮಾಡುವುದೇ ಭಗವಂತನ ಸ್ಮರಣೆ, ಭಗವನ್ಮೂರ್ತಿಯ ದರ್ಶನ. ಮತ್ತಾರನ್ನೋ ಸ್ಮರಿಸುವುದೂ ಅಲ್ಲ, ದರ್ಶಿಸುವುದೂ ಅಲ್ಲ. ಮಿಕ್ಕವರಲ್ಲಿ ಗುಣ-ದೋಷಗಳ ಮಿಶ್ರಣವಿರುತ್ತದೆ. ಪುಣ್ಯಪಾಪಾತೀತನೂ, ಶುದ್ಧನೂ, ಮಂಗಲಮಯನೂ ಆದ ಭಗವಂತನನ್ನೇ, ಆತನ ಚಿತ್ರವನ್ನೇ, ನಮ್ಮ ಚಿತ್ತದಲ್ಲಿ ಮೊಟ್ಟ ಮೊದಲು ಮುದ್ರಿಸಿಕೊಳ್ಳಬೇಕಾದದ್ದು.

ಇದನ್ನೇ ಲೀಲಾಶುಕನನ್ನು ಕೇಳಿದರೆ, ಅವನು ಕೊಡುವ ಉತ್ತರದಲ್ಲಿ ಏನೋ ವಿಶೇಷವಿರುತ್ತದೆ. ತಾನು ನೆನೆಯುವುದು ಕೃಷ್ಣನನ್ನೇ, ಬಾಲಕೃಷ್ಣನನ್ನೇ - ಎನ್ನುತ್ತಾನೆ, ಅವನು.

ಏಕೆ? ಎಂತಹ ಕೃಷ್ಣನನ್ನು ಸ್ಮರಿಸುತ್ತಾನೆ, ಲೀಲಾಶುಕ? ನಿದ್ರೆಯನ್ನು ಆಗಷ್ಟೆ ಮುಗಿಸಿರುವ ಕೃಷ್ಣನನ್ನೇ. ನಿದ್ದೆಯ ಅವಸಾನವಾದಾಗ ಹೇಗಿರುತ್ತದೆ ಆತನ ಮುಖ? ಅವಸಾನವೆಂದರೆ ಕೊನೆ, ಮುಗಿಯುವುದು. ನಿದ್ದೆ ಮುಗಿಸಿ ಎದ್ದ ಮುದ್ದು ಮಗುವಿನ ಮೊಗವು ರಮಣೀಯವಾಗಿಯೇ ಇರುತ್ತದೆ. ಕಮಲದಂತಿರುತ್ತದೆ. ನಮ್ಮ ಕಣ್ಣುಗಳಿಗೆ ಅಭಿರಾಮವಾಗಿರುತ್ತದೆ, ಎಂದರೆ ಸುಂದರವಾಗಿರುತ್ತದೆ. ಬಾಲಕೃಷ್ಣನ ಮೈ ಹೇಗಿರುತ್ತದೆ? ಹೃದ್ಯವೂ ಅನವದ್ಯವೂ ಆಗಿರುತ್ತದೆ. ಹೃದ್ಯವೆಂದರೆ ಮನೋಹರ. ಅನವದ್ಯವೆಂದರೆ ದೋಷ-ರಹಿತ.

ಕೃಷ್ಣನು ಏಳುವುದೂ ಪ್ರಾತಃಕಾಲದಲ್ಲೇ. ಆತನನ್ನು ಯಾರಾದರೂ ಎಬ್ಬಿಸಿದರೇ? ಇಲ್ಲ. ಆದರೆ ಬೆಳಗಾಗೆದ್ದು ಗೋಪಿಯರು ಮೊಸರು ಕಡೆಯುವರಲ್ಲವೇ? ಆ ದಧಿ-ಘೋಷದಿಂದಲೇ, ಎಂದರೆ ಮೊಸರಿನ ಸದ್ದಿನಿಂದಲೇ, ಆತನಿಗೆ ಎಚ್ಚರವಾಗಿರುವುದು. ಎಂದೇ ಆತನ ಕಣ್ಣುಗಳು ಆಗಷ್ಟೆ ಅರಳಿದ ತಾವರೆಗಳಂತೆ ಇರುವುವು. ಅಂತಹ ಕಮಲಗಳನ್ನು ಉನ್ನಿದ್ರ-ಪದ್ಮವೆನ್ನುತ್ತಾರೆ. "ನಿದ್ರೆ ಮುಗಿಸಿದ ಜಲಜಗಳು" - ಎಂದರ್ಥ, ಅದಕ್ಕೆ.

ಮತ್ತು ಆತನು ಮಾಡುವ ಮೊದಲ ಕೆಲಸವೇ ಬೆಣ್ಣೆಯನ್ನು ಕದಿಯುವುದು! ಅಂತಹ ನವನೀತ-ಚೋರನನ್ನು ಸ್ಮರಿಸುವೆ - ಎನ್ನುತ್ತಾನೆ, ಕವಿ.

ಶ್ಲೋಕವಿದು.

ಪ್ರಾತಃ ಸ್ಮರಾಮಿ ದಧಿ-ಘೋಷ-ವಿಧೂತ-ನಿದ್ರಂ /
ನಿದ್ರಾವಸಾನ-ರಮಣೀಯ-ಮುಖಾರವಿಂದಂ |
ಹೃದ್ಯಾನವದ್ಯ-ವಪುಷಂ ನಯನಾಭಿರಾಮಂ /
ಉನ್ನಿದ್ರ-ಪದ್ಮ-ನಯನಂ ನವನೀತ-ಚೋರಂ ||

ಬೆಳಗ್ಗೆ ಆಗತಾನೆ ಎದ್ದ ನಯನ-ರಮಣೀಯನಾದ ಬಾಲನನ್ನೇ ನಾವು ಬೆಳಗಾಗೆದ್ದು ಸ್ಮರಿಸಿಕೊಳ್ಳುವುದು.

***

ಮತ್ತೊಂದು ಪದ್ಯ:

ತನ್ನ ಕೊಳಲಿನ ನಾದವನ್ನೇ ಆಸ್ವಾದಿಸುತ್ತಿರುವ ಕೃಷ್ಣನನ್ನು ಭಜಿಸುತ್ತೇವೆ - ಎನ್ನುತ್ತಾನೆ, ಲೀಲಾಶುಕ.

ವೇಣುಗಾನ-ವೇಣುನಾದ - ಇವೆರಡರಲ್ಲೂ ಕಿಂಚಿದ್-ಭೇದವಿದೆಯೆಂಬುದನ್ನು ಗಮನಿಸಬಹುದು. ಗಾನವೆಂದರೆ ಹಾಡು. ಹಾಡೆಂದರೆ ಯಾವುದೋ ಭಾವವನ್ನು ಅಭಿವ್ಯಕ್ತಿಗೊಳಿಸುವುದು. ನಾದದಿಂದಲೇ ಗಾನವೆಂಬುದೂ ಯುಕ್ತವಾದದ್ದೇ. ಆದರೆ ಕೆಲವು ವಿಶಿಷ್ಟನಾದಗಳುಂಟು. ಅವುಗಳನ್ನು ಆಲಿಸುವುದರಿಂದ ಆಗುವ ಪರಿಣಾಮವೇ ಬೇರೆ. ಘಂಟಾನಾದ-ವೀಣಾನಾದ-ಮೃದಂಗನಾದ ಮುಂತಾದ ನಾದಗಳು ವಿಶಿಷ್ಟ-ಪರಿಣಾಮಗಳನ್ನು ಉಂಟುಮಾಡಿಸತಕ್ಕವು. ವೀಣಾ-ವೇಣುಗಳು ಒಂದು ಗೀತವನ್ನೇ ಹೊರತರಬಲ್ಲವು. ಭೇರೀನಾದ-ಮೃದಂಗನಾದಗಳು ತಾಲ-ಲಯಗಳ ನಡೆಗಳನ್ನು ಗಾನಗಳೊಂದಿಗೆ ಮೇಳೈಸಿಕೊಡಬಲ್ಲವು. ಹಾಡಿನ ನಡುವೆಯೋ ಸ್ವತಂತ್ರವಾಗಿಯೋ ಕೆಲವು ವೇಣು-ನಾದಗಳು ಉತ್ಕೃಷ್ಟ-ಪ್ರಭಾವವನ್ನು ಬೀರಬಲ್ಲವು. ಲೀಲಾಶುಕನೇ ಮತ್ತೊಂದೆಡೆ ಓಂಕಾರ-ಧ್ವನಿಯನ್ನೇ ಹೊಮ್ಮಿಸುತ್ತಿರುವ ಕೃಷ್ಣನ ಕೊಳಲಿನ ಬಗ್ಗೆ ಹೇಳಿದ್ದಾನೆ. ಆ ವಂಶೀ-ನಿನಾದದ ದಶ-ಪರಿಣಾಮಗಳನ್ನು ಹೇಳಿದ್ದಾನೆ.

ಅಂತೂ ವೇಣು-ನಾದವೆಂಬುದು ಇತ್ತ ಕಿವಿಗೆ ಇಂಪೂ, ಅತ್ತ ಆಧ್ಯಾತ್ಮಿಕವಾಗಿ ತಂಪೂ, ಆದ ಧ್ವನಿ.

ಅದನ್ನೇ ಆಸ್ವಾದಿಸುತ್ತಿದ್ದಾನೆ, ಕೃಷ್ಣ. ಯಾವುದನ್ನು ಸಹೃದಯರಾಗಿ ಆಸ್ವಾದಿಸುವೆವೋ ಅದೇ ರಸ. ರಸವನ್ನು ಆಸ್ವಾದನೆ ಮಾಡುವವನೇ ರಸಿಕ. ತಾನೇ ನುಡಿಸುತ್ತಿರುವ ವೇಣುವಿನ ನಾದಕ್ಕೆ ಕೃಷ್ಣನು ತಾನೇ ರಸಿಕನೂ ಆಗಿದ್ದಾನೆ. ತನ್ನ ವೇಣು-ನಾದವನ್ನು ಆಲಿಸುವ ಭಾಗ್ಯವು ಯಾವ ಯಾವ ಜೀವಿಗಳಿಗುಂಟೋ ಅವುಗಳಿಗೆಲ್ಲ ಒಂದು ಆಧ್ಯಾತ್ಮಿಕೋತ್ಕರ್ಷವೆಂಬುದು ಸಿದ್ಧವೇ ಆಗಿರುವುದು. ಜೀವೋದ್ಧಾರವೆಂಬುದೇ ಭಗವಂತನಿಗೆ ಪ್ರಿಯವಾದ ಕೃತ್ಯ. ಅದು ಕೆಲವು ಸೂಕ್ಷ್ಮ-ನಾದಗಳಿಂದಲೇ ಕೆಲವೊಮ್ಮೆ ಸಿದ್ಧಿಸಿಬಿಡುವಂತಹುದು. ಅಂತಹ ನಾದವು ಕಿವಿಗೆ ಬಿದ್ದಾಗ ಜೀವಿಗಳು ನಲಿಯುವುವು. ಮನುಷ್ಯರು ಮಾತ್ರವಲ್ಲದೆ ಪಶು-ಪ್ರಾಣಿಗಳಿಗೂ ತಣಿಪನ್ನುಣಿಸುವ ನಾದವದು. ಎಂದೇ ಅಂತಹ ನಾದವು ತನ್ನ ವೇಣುವಿನಿಂದ ಹೊಮ್ಮಿದಾಗ, ಕೃಷ್ಣನಿಗೂ ಒಂದು ಕ್ಷಣ ಅದರಲ್ಲೇ ರಮಿಸುವಂತಾಗುತ್ತದೆ. ಹೀಗಾಗಿ ಶ್ರೀಕೃಷ್ಣನು ತಾನೇ ವೇಣುನಾದ-ರಸಿಕನಾಗಿದ್ದಾನೆ.

ಯಾರಾದರೂ ನಾದದಲ್ಲಿ ತನ್ಮಯತೆಯನ್ನು ಹೊಂದಿದರೆ ಹೇಗೆ ತೋರುತ್ತಾರೆ? ಎಂಬುದನ್ನು ಗಮನಿಸಿ ನೋಡಬೇಕಾದುದೇ. ವೇಣುನಾದವನ್ನು ರಸಿಸುತ್ತಿರುವ ಕೃಷ್ಣನು ಹೇಗೆ ತೋರುವನು? - ಎಂಬುದನ್ನು ಲೀಲಾಶುಕನು ಈ ಶ್ಲೋಕದಲ್ಲಿ ಚಿತ್ರಿಸಿದ್ದಾನೆ. ಆಗ ಕೃಷ್ಣನ ಕಣ್ಣುಗಳೆಂತಿರುವುವು, ತುಟಿಯೆಂತಿರುವುದು, ಕೈ ಬೆರಳುಗಳು ಹೇಗಿರುವುವು - ಎಂಬುದನ್ನೆಲ್ಲಾ ಇಲ್ಲಿ ಚಿತ್ರಿಸಿದ್ದಾನೆ.

ಉತ್ಪಲದಂತಿವೆ ಕೃಷ್ಣನ ಕಣ್ಣುಗಳು. ಉತ್ಪಲವೆಂದರೆ ಕನ್ನೈದಿಲೆ. ಲೋಚನೋತ್ಪಲವೆಂದರೆ ಉತ್ಪಲದ ಹಾಗಿರುವ ನಯನ. ಅದು ಸಾಚಿ-ಸಂಚಲಿತವಾಗಿದೆ. ಸಾಚಿಯೆಂದರೆ ಅಡ್ಡಡ್ಡಲಾಗಿ. ಹಾಗೆ ಕೃಷ್ಣನು ತನ್ನ ಬಳಿ ಸಾರಿರುವ, ಸುತ್ತಲೂ ನೆರೆದಿರುವ ಜೀವಿಗಳತ್ತ ಆಗಾಗ್ಗೆ ತನ್ನ ಕರುಣಾಮಯವಾದ ನೋಟವನ್ನು ಬೀರುತ್ತಿದ್ದಾನೆ.

ಎರಡನೆಯದು ಆತನ ತುಟಿ. ಅದೋ ಅತ್ಯಂತ ಕೋಮಲವಾದುದು. ಮತ್ತು ಕೊಳಲನ್ನು ನುಡಿಸುವಾಗ ಬೇರೆ ಬೇರೆ ಸ್ವರಗಳು ಬರಲೆಂದೋ, ಗಮಕಗಳು ಬರಲೆಂದೋ ಇನ್ನೂ ಬೇರೆ ಬೇರೆ ಪರಿಣಾಮಗಳಿಗೂ ತುಟಿಯ ಆಕಾರವನ್ನು ಬದಲಿಸುತ್ತಿರುವುದುಂಟು.

ಯಾವುದೋ ಒಂದು ವಿಶಿಷ್ಟವಾದ ನಾದವು ಬರುವ ಅದನ್ನು ಸಾಮಿ-ಕುಟ್ಮಲಿತವನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ. ಏನು ಹಾಗೆಂದರೆ? ಕುಟ್ಮಲ ಅಥವಾ ಕುಡ್ಮಲಕ್ಕೆ ಮೊಗ್ಗು ಎಂದರ್ಥ. ಮೊಗ್ಗಿನಾಕಾರವಾಗಿ ಮಾಡಿಕೊಂಡಿರುವುದು ಕುಟ್ಮಲಿತ. ಮೊಗ್ಗೆಂದರೆ ಪೂರ್ತಿ ಅರಳಿಲ್ಲದಿರುವುದು, ಪೂರ್ಣ-ವಿಕಾಸವನ್ನು ಹೊಂದಿಲ್ಲದಿರುವುದು. ಹಾಗೆಂದು ಸಂಪೂರ್ಣವಾಗಿ ಸಂಕೋಚಮಾಡಿಕೊಂಡಂತೆಯೂ ಇಲ್ಲ, ಕೃಷ್ಣನ ತುಟಿ. ಅದು ಸಾಮಿ ಮಾತ್ರ. ಸಾಮಿಯೆಂದರೆ ಅರ್ಧ. ಅಲ್ಲಿಗೆ ಪೂರ್ತಿ ಮೊಗ್ಗೂ ಅಲ್ಲದ ಪೂರ್ಣವಿಕಸಿತವೂ ಅಲ್ಲದ ಬಗೆಯಲ್ಲಿ, ತುಟಿಯನ್ನು ಎಂದರೆ ಮುಖ್ಯವಾಗಿ ಕೆಳದುಟಿಯನ್ನು, ಸ್ವಲ್ಪ ಕಿರಿದಾಗಿಸಿ ನುಡಿಸುತ್ತಿರುವಂತಹ ಸ್ಥಿತಿಯದು.

ಕೃಷ್ಣನ ತುಟಿಯಲ್ಲಿಯ ಕೋಮಲತೆಯೊಂದಿಗೆ ಅಧರ-ಮಣಿಯೆಂದು ಕವಿಯು ಆಗಾಗ್ಗೆ ಹೇಳುವಂತೆ ಕೆಂಪುಬಣ್ಣವೂ ಸೇರಿ, ತುಟಿಯ ವಿಶಿಷ್ಟ-ಸ್ಥಿತಿಯೂ ಗಮನಸೆಳೆಯುವಂತಹುದೇ ಶ್ರೀಕೃಷ್ಣನ ವೇಣುನಾದಾಸ್ವಾದನದ ಸಮಯದ ವದನ.

ವೇಣು-ವಾದನವನ್ನು ಮಾಡುವಾಗ ಕಂಡೇ ಕಾಣುವುದು ಮತ್ತೊಂದು: ಆತನ ಕೈಬೆರಳುಗಳ ಚಲನಗಳು. ಬೆರಳುಗಳನ್ನು ಮೇಲೆತ್ತುವುದು ಕೆಳಗಿಳಿಸುವುದು - ಇವನ್ನು ಮಾಡುತ್ತಲೇ ಇರುವುದಾಗುತ್ತದೆ. ಜೊತೆಗೆ ಅಲ್ಲೂ, ವೇಣುವಿನ ರಂಧ್ರವೊಂದನ್ನು ಪೂರ್ತಿ ಮುಚ್ಚುವುದು, ಸ್ವಲ್ಪ ತೆಗೆಯುವುದು - ಮುಂತಾದುವೂ ಅವಶ್ಯವಾಗುತ್ತಲೇ ಇರುತ್ತವೆ. ಕೆಲವೊಮ್ಮೆ ಅದನ್ನು ಬೇಗೆಬೇಗನೆ ಮಾಡುವ ಸನ್ನಿವೇಶವೂ ಇರುವುದುಂಟು. ವೇಗ-ವಲ್ಗಿತವೆಂದರೆ ಬೇಗಬೇಗನೆ ಮೇಲೆದ್ದು ಕೆಳಗಿಳಿಯುವುದು; ಬೆರಳುಗಳನ್ನು ವೇಗದಿಂದ ರಂಧ್ರಗಳ ಮೇಲೆ ಮೇಲೂ ಕೆಳಗೂ ಆಡಿಸುವುದು. ವಾಸ್ತವವಾಗಿ ಅಲ್ಲಿ ಹಾಗೆ ಓಡಾಡಿಸಬೇಕಾದುದು ಇಡೀ ಬೆರಳನ್ನೂ ಅಲ್ಲ. ಅಂಗುಲಿಗಳ ಮುಖವನ್ನು, ಎಂದರೆ ಬೆರಳುಗಳ ತುದಿಯನ್ನು. ಅವನ್ನು ಕೃಷ್ಣನು ಹಾಗೆಯೇ ಆಡಿಸುತ್ತಿದ್ದಾನೆ.

ಅಂತೂ ಕವಿಯು ತಾನು ಸಾಕ್ಷಾತ್ತಾಗಿ ಕಂಡಂತೆ ವರ್ಣಿಸಿದ್ದಾನೆ. ಕಣ್ಣು-ತುಟಿ-ಬೆರಳತುದಿ - ಇವುಗಳಲ್ಲಿಯ ಭಂಗೀ-ವಿಶೇಷಗಳು ಯಾವುದೇ ವೇಣುನಾದ-ರಸಿಕನಲ್ಲಿ ಗಮನಿಸಬೇಕಾದ ಅಂಶಗಳು.

ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವ ಭಕ್ತ-ಕವಿಯೇ ಲೀಲಾಶುಕ.

ಶ್ಲೋಕ ಹೀಗಿದೆ:

ಸಾಚಿ-ಸಂಚಲಿತ-ಲೋಚನೋತ್ಪಲಂ /
ಸಾಮಿ-ಕುಟ್ಮಲಿತ-ಕೋಮಲಾಧರಂ |
ವೇಗ-ವಲ್ಗಿತ-ಕರಾಂಗುಲೀ-ಮುಖಂ /
ವೇಣು-ನಾದ-ರಸಿಕಂ ಭಜಾಮಹೇ ||

ಸೂಚನೆ : 14/2/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.