Tuesday, December 24, 2019

ಪಾಕ ಕಲೆಯ ನೆಲೆ (Paaka kaleya nele)

ಲೇಖಕರು:  ತಾರೋಡಿ ಸುರೇಶ
(ಪ್ರತಿಕ್ರಿಯಿಸಿರಿ lekhana@ayvm.in)


ಹಿಂದಿನ ಲೇಖನದಲ್ಲಿ ಇಂದಿನವರ ಯೋಚನೆ-ಯೋಜನೆಗಳ ಸಂಕ್ಷಿಪ್ತ ಸ್ಮರಣೆಯನ್ನು ಮಾಡಿಕೊಂಡಿದ್ದೆವು. ಅವುಗಳ ಸಮಾಧಾನಕ್ಕೆ ಬೇಕಾದ ಪೀಠಿಕೆಯನ್ನು ಕೊಡುವುದು ಈ ಪುಟ್ಟ ಲೇಖನದ ಉದ್ದೇಶವಾಗಿದೆ.

ಪಾಕ ಎಂದರೆ ಹದಗೊಳಿಸುವಿಕೆ. ಪ್ರಕೃತಿಯಲ್ಲಿ ವೈಷಮ್ಯವನ್ನು ಉದ್ರೇಕಿಸದೆ ಸಮಸ್ಥಿತಿಯಲ್ಲಿಡುವಿಕೆ. “ನಿರ್ದೋಷಮ್ ಹಿ ಸಮಂ ಬ್ರಹ್ಮ” ಎಂಬುದಾಗಿ ಪರಮಾತ್ಮನೇ ಸಮನಾದ ವಸ್ತು. “ಕೇವಲ ಉದರತೃಪ್ತಿ ಮಾತ್ರವಲ್ಲದೆ ದಾಮೋದರನಿಗೂ ತೃಪ್ತಿಯಾಗುವಂತಿರಬೇಕು” ಎಂದು ಶ್ರೀರಂಗಮಹಾಗುರುಗಳು ಜ್ಞಾಪಿಸುತ್ತಿದ್ದರು. ಅವನನ್ನು ಅನುಭವಿಸಲು ಅಡ್ಡಿ ತಾರದಂತೆ ಇದ್ದರೆ ಪಾಕವು ಒಂದು ಕಲೆಯೆನ್ನಿಸಿಕೊಳ್ಳುವುದು.

ಪಾಕವು ಕೇವಲ ಕಲೆಯಲ್ಲ. ಇದು ಕಲೆಗಳ ತಾಯಿ. ಸಮಸ್ತ ಸೃಷ್ಟಿಯ ಜೀವಿಗಳನ್ನು ಬೆಳೆಸುವ ಮತ್ತು ಸಂತೃಪ್ತಿಗೊಳಿಸುವ ಕಲೆ. ದೇವಾಧಿದೇವತೆಗಳನ್ನೂ, ಗಾಯಕ, ನಟ, ಚಿತ್ರಕಾರ, ಕವಿ, ಲೇಖಕ, ಕೃಷಿಕ, ಸೈನಿಕ ಹೀಗೆ ಸಮಸ್ತರಿಗೂ ಪುಷ್ಟಿ ನೀಡುವ ಕಲೆ. ಆದರೆ ಆಯಾ ಕಲೆಗಳಿಗೆ ಹೊಂದುವಂತೆ ರಸ ಸಂಯೋಜನೆ ಬೇಕು. ಆಯಾ ಪ್ರವೃತ್ತಿಗೆ ಪೂರಕವಾಗುವಂತೆ ಕೊಡಬೇಕಾದ ಹದವು ವಿಭಿನ್ನವಾಗಿರುತ್ತದೆ. ಹದವರಿತು ತಯಾರಿಸಬಲ್ಲ ಮರ್ಮವು ಇದರಲ್ಲಿರುವುದರಿಂದ ಇದು ಕಲೆ ಮಾತ್ರವಲ್ಲದೆ ಸರ್ವಕಲೆಗಳ ತಾಯಿಯಾಗಿದೆ.

ಸೃಷ್ಟಿಯ ಮುಂದುವರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕಲೆಯಾಗಿ, ಮಾನವನಿಗೆ ಬೇಕಾಗುವ ದೇಹಪುಷ್ಟಿ, ಮನಸ್ತುಷ್ಟಿ ಮತ್ತು ಆತ್ಮದೃಷ್ಟಿಯನ್ನು ಪಾಕಕಲೆಯು ನೀಡುತ್ತದೆ. ಇಲ್ಲಿ ಭೋಗದೃಷ್ಟಿಯಲ್ಲದೆ ಯೋಗದೃಷ್ಟಿಯೂ ಉಂಟು. ಹುಳಿ-ಉಪ್ಪು-ಕಾರ ಮೊದಲಾದ ರಸಗಳೆಲ್ಲವೂ ಹದವಾಗಿ ಸಮರಸವಾದಾಗಲೇ ಅಡುಗೆಯು ಉತ್ತಮವಾಗುವುದು. ಸಮರಸತೆಯೇ ಪಾಕದ ತಿರುಳು. ರಸಸ್ವರೂಪಿಯಾದ ಪರಮಾತ್ಮನನ್ನು ಮರೆಯಾಗಿಸದ ರಸ. ಜೊತೆಗೆ ಇಂದ್ರಿಯಕ್ಷೇತ್ರದಲ್ಲಿಯೂ ಮೂಲರಸದ ಆಂಶಿಕವಾದ ಆಸ್ವಾದನೆಯಿದೆ.

ಇನ್ನೊಂದು ಅಂಶವನ್ನೂ ಗಮನಿಸಬೇಕು. ”ಭುಂಜತೇ ತೇ ತ್ವಘಂ ಪಾಪಾಃ ಯೇ ಪಚಂತ್ಯಾತ್ಮಕಾರಣಾತ್” ಎಂದು ಶ್ರೀಕೃಷ್ಣನು ಎಚ್ಚರಿಸುತ್ತಾನೆ. ಯಾರು ತನಗೊಸ್ಕರ ಅಡುಗೆ ಮಾಡುತ್ತಾರೆಯೋ ಅವರು ಪಾಪವನ್ನೇ ಊಟ ಮಾಡುತ್ತಾರೆ. ಆಹಾರಪದಾರ್ಥಗಳೂ ಭಗವಂತನಿಂದಲೇ ಬಂದಂತಹವು. ನಾವೂ ಅವನ ಸೃಷ್ಟಿಗೊಳಪಟ್ಟವರೇ. ಇಬ್ಬರಿಗೂ ಸ್ವಾಮಿಯು ಅವನೇ. ಆದ್ದರಿಂದ ಅವನ ಪದಾರ್ಥವನ್ನು ಬಳಸುವಾಗ ಇದು ಅವನದು ಎಂಬ ಅರಿವಿರಬೇಕು. ಆಗ ನಾವು ಕಳ್ಳರಾಗುವುದಿಲ್ಲ. ಅದು ಅವನ ಸ್ಮರಣೆಯಿಂದಾಗಿ, ಅವನ ನಿವೇದನೆಗೊಳಪಟ್ಟು ಪ್ರಸಾದವಾಗಿ ಪರಿವರ್ತಿತವಾಗುವುದು. ಆದ್ದರಿಂದ ಇದು ಯಜ್ಞರೂಪವಾದ ಕ್ರಿಯೆ.
“ಅಡಿಗಡಿಗೆ ಭಗವತ್ಸ್ಮರಣೆಯನ್ನು ತಂದುಕೊಡುವ ಅಡುಗೆಯೇ ಅಡುಗೆ.”ಎಂಬ ಶ್ರೀರಂಗಮಹಾಗುರುವಿನ ಮಾತು ಇಲ್ಲಿ ಉಲ್ಲೇಖಾರ್ಹವಾಗಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ಅಡುಗೆಮನೆ, ಪಾಕಕರ್ತರು, ಒಲೆ, ಪಾತ್ರೆಗಳು, ಮನೋಧರ್ಮ,  ಇವುಗಳ ವಿನ್ಯಾಸಗಳನ್ನು ಮುಂದೆ ಗಮನಿಸೋಣ.  

ಸೂಚನೆ: 24/12/2019 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.