Sunday, April 5, 2026

ಪ್ರಶ್ನೋತ್ತರ ರತ್ನಮಾಲಿಕೆ 60 (Prasnottara Ratnamalike 60)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ - ೬೦ - ಪ್ರಶಂಸೆ ಮಾಡಲು ಯೋಗ್ಯವಾದುದು ಯಾವುದು ?

ಉ. ಉದಾರತಾ.

ಔದಾರ್ಯ ಅಥವಾ ಉದಾರತಾ ಎಂಬ ಗುಣವು ಅತ್ಯಂತ ಶ್ರೇಷ್ಠವಾದದ್ದು. ಇದು ಯಾರಲ್ಲಿ ಇರುತ್ತದೆಯೋ ಆ ವ್ಯಕ್ತಿಯನ್ನು ಪ್ರಶಂಸೆ ಮಾಡುವುದರಲ್ಲಿ ಯಾವುದೇ ಅಂಜಿಕೆ ಇರಬಾರದು. ಏಕೆಂದರೆ ಆ ವ್ಯಕ್ತಿ ಈ ಗುಣದಿಂದ ಪ್ರಶಂಸೆಗೆ ಅರ್ಹನಾಗುತ್ತಾನೆ. ಹಾಗಾದರೆ ಈ 'ಉದಾರತಾ' ಎಂಬ ಗುಣವು ಏಕೆ ಅಷ್ಟು ಶ್ರೇಷ್ಠವಾಗಿದೆ? ಎಂಬುದನ್ನು ತಿಳಿಯಬೇಕಾಗಿದೆ. 

'ಔದಾರ್ಯ' ಎಂಬುದು ಒಂದು ಕೊಡುವ ಮನೋಧರ್ಮ. ಈ ಹಿಂದಿನ ಪ್ರಶ್ನೋತ್ತದಲ್ಲಿ ಒಂದು ವಿಷಯವನ್ನು ಗಮನಿಸಿದ್ದೆವು. ಆ ವಿಷಯವನ್ನು ಇಲ್ಲಿ ನೆನಪಿಸಿಕೊಂಡು ಈ ಉತ್ತರವನ್ನು ಅರ್ಥ ಮಾಡಿಕೊಳ್ಳಬೇಕು. ಈ ಹಿಂದಿನ ಪ್ರಶ್ನೆಯಲ್ಲಿ ವೈಭವಿದ್ದರೂ ಮತ್ತೊಬ್ಬರಿಗೆ ಕೊಡದಿರುವ ಅತಿಹೇಯವಾದ ಕೃಪಣತಾ ಎಂಬ ದೋಷವನ್ನು ವಿವರಿಸಿದ್ದಾಗಿತ್ತು. ಇದಕ್ಕೆ ವಿರುದ್ಧವಾದ ಗುಣವೇ ಉದಾರತಾ ಎಂಬುದು. ಅಂದರೆ ತನ್ನಲ್ಲಿ ಏನಿದೆಯೋ ಅದರಲ್ಲಿ ಕೊಟ್ಟು ಸಂತೋಷಪಡುವ, ತೃಪ್ತಿಪಡುವ ಮನಸ್ಸು. ಈ ಔದಾರ್ಯವೆಂಬ ಗುಣವಿಲ್ಲದಿದ್ದರೆ ದಾನ ಮಾಡುವ ಸ್ವಾಭಾವ ಹೇಗೆ ಬರಲು ಸಾಧ್ಯ. ಇದ್ದು ಕೊಟ್ಟರೆ ಅದು ಔದಾರ್ಯವೆನಿಸತದು. ತನ್ನಲ್ಲಿ ಇರುವಷ್ಟನ್ನು ದೀನದರಿದ್ರರಿಗೆ ಅವರ ಅವಶ್ಯಕತೆಗೆ ಅನುಗುಣವಾಗಿ ಸ್ಪಂದಿಸುವ ವಿಶೇಷ ಗುಣವೇ ಉದಾ

ತಾ. ಹಾಗಾಗಿ ಇಂತಹ ವಿಶೇಷ ಗುಣವನ್ನು ಪ್ರಶಂಸಿಸಬೇಕಾದುದು ಅತ್ಯಂತ ಅವಶ್ಯಕ. ಈ ಗುಣವು ಬರಲು ಹೇಗ ಸಾಧ್ಯ? ಎಂಬುದಕ್ಕೆ ಭಗವದ್ಗೀತೆಯಲ್ಲಿ ಯಾರು ಉದಾರರು ಎಂಬುದನ್ನು ಹೀಗೆ ಹೇಳಲಾಗಿದೆ. ಆರ್ತ, ಜಿಜ್ಞಾಸು ಅರ್ಥಾರ್ಥೀ ಮತ್ತು ಜ್ಞಾನಿ ಈ ನಾಲ್ವರನ್ನು ಉದಾರರು ಎಂಬುದಾಗಿ ಕರೆಯಬೇಕು. ಈ ನಾಲ್ವರಲ್ಲಿ ಜ್ಞಾನಿಯಾದವನು ಅತ್ಯಂತ ಶ್ರೇಷ್ಠ ಉದಾರಿ ಎಂಬುದಾಗಿ ತಿಳಿಯಬೇಕು. ಅಂದರೆ ಅಂತಹ ಜ್ಞಾನಿಗೆ ಮಾತ್ರ ಈ ವಿಶೇಷಗುಣ ಬರಲು ಸಾಧ್ಯ ಎಂಬುದು ಇದರ ತಾತ್ಪರ್ಯ. ಸಾಮಾನ್ಯ ಮಾನವನಿಗೆ ಅಲ್ಪಸಲ್ಪ ಔದಾರ್ಯದ ಗುಣ ಬರಬಹುದು. ಆದರೆ ಜ್ಞಾನಿಗೆ ಪರಿಪೂರ್ಣ ಔದಾರ್ಯ ಗುಣವು ಬರುತ್ತದೆ. ಏಕೆಂದರೆ ಜ್ಞಾನಿಯಾದವನಿಗೆ ತ್ಯಾಗ ಎಂಬ ಗುಣವುವಿಶೇಷವಾಗಿರುತ್ತದೆ.

ತ್ಯಾಗದಿಂದಲೇ ಅವನು ಅಮೃತತ್ವವನ್ನು ಪಡೆಯಬಹುದು ಎಂಬುದನ್ನು ಬಲವಾಗಿ ನಂಬಿದವನಾಗಿರುತ್ತಾನೆ. ಕೇವಲ ಸಂಪತ್ತನ್ನು ಮಾತ್ರವಲ್ಲದೆ ಈ ಜನ್ಮಕ್ಕೆ ಕಾರಣವಾದ ಶರೀರವು ಕೂಡ ತ್ಯಾಜ್ಯವಾದದ್ದು ಎಂಬ ಎಂಬ ತ್ಯಾಗ ಮನೋಧರ್ಮ ಅವನಿಗೆ ಇರುತ್ತದೆ. ಔದಾರ್ಯ ಇರುವವನು ಎಲ್ಲಾ ಕಾಲದಲ್ಲೂ ಶುದ್ಧನಾಗಿ ಇರುತ್ತಾನೆ. ಕಾರಣ ಇಷ್ಟೇ - ಔದಾರ್ಯ ಎಂಬ ಗುಣ ಇರುವುದರಿಂದಲೇ ಅವನು ಜ್ಞಾನಿಯಾದ, ಯೋಗಿಯಾದ, ಶೋಭಾ ವಿಲಾಸೋ ಮಾಧುರ್ಯಂ ಗಾಂಭೀರ್ಯಂ ಧೈರ್ಯತೇಜಸೀ। ಲಲಿತಾ ಔದಾರ್ಯಂ ಇತಿ ಅಷ್ಟ ಸತ್ತ್ವಜಾಃ ಪುರುಷಾಃ ಗುಣಾಃ॥ " ಎಂದು ಸಾಹಿತ್ಯದರ್ಪಣ ಎಂಬ ಗ್ರಂಥದಲ್ಲಿ ಸಜ್ಜನಪುರುಷರ ಎಂಟು ಲಕ್ಷಣಗಳನ್ನು ಹೇಳಲಾಗಿದೆ. ಅದರಲ್ಲಿ ಔದಾರ್ಯ ಎಂಬ ಗುಣವನ್ನು ಎತ್ತಿ ಹೇಳಲಾಗಿದೆ. ಅಂದರೆ ಈ ಗುಣವು ಸತ್ತ್ವಗುಣದ ಪ್ರತೀಕವಾದದ್ದು. ಯಾರಲ್ಲಿ ಸತ್ತ್ವಗಣ ಇರುತ್ತದೆಯೋ, ಅವರಲ್ಲಿ ಉದಾರತೆ ಇರುತ್ತದೆ. ಅಥವಾ ಉದಾರತೆ ಎಂಬುದು ಸತ್ತ್ವಗುಣದಿಂದಲೇ ಜಾಗೃತವಾಗುತ್ತದೆ ಎಂಬ ಅರ್ಥವೂ ಸತ್ಯವಾದದ್ದು. ಒಟ್ಟರೆ ಇಂತಹ ಸತ್ಪುರುಷನು ಉದಾರತಾ ಎಂಬ ಗುಣದಿಂದ ಪ್ರಶಂಸೆಗೆ ಅರ್ಹನಾಗುತ್ತಾನೆ.

ಸೂಚನೆ : 29/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.