Sunday, October 27, 2019

ಆಹಾರ-ಭಾರತೀಯ ನೋಟ (Aahaara-Bharatheeya nota)

ಲೇಖಕರು: ತಾರೋಡಿ ಸುರೇಶ


ಅನ್ನ,ವಸ್ತ್ರ, ವಸತಿ ಇತ್ಯಾದಿ ಮಾನವನ ಮೂಲಭೂತ ಅಗತ್ಯಗಳಲ್ಲಿ ಆಹಾರ ಮೊದಲ ಸ್ಥಾನ ಪಡೆದಿದೆ. “ಹೊಟ್ಟೆಗಾಗಿ, ಗೇಣುಬಟ್ಟೆಗಾಗಿ ಪಹಲೇ ಪೇಟೂಬಾ ಫಿರ್ ವಿಠೋಬಾ” ಹೀಗೆ ಆಹಾರಕ್ಕೇ ಮೊದಲ ಮಾನ್ಯತೆ. ಇದು ಮಾನವನಿಗೆ ಮಾತ್ರವಲ್ಲ. ಎಲ್ಲ ಜೀವಿಗಳಿಗೂ ಆಹಾರ ಅನಿವಾರ್ಯ.

ಆದರೆ ಮಾನವನಿಗೆ ಆಹಾರವನ್ನು ಕುರಿತು ನಾನಾ ವಿಧಿ-ನಿಷೇಧಗಳನ್ನು ಆರೋಗ್ಯಶಾಸ್ತ್ರಗಳೂ ಹಾಗೆಯೇ ಧರ್ಮಶಾಸ್ತ್ರಗಳೂ ವಿಧಿಸುತ್ತವೆ. ಆಧುನಿಕ ನೋಟವೂ ತನ್ನದೇ ಆದ ದೃಷ್ಟಿಯನ್ನು ಪ್ರತಿಪಾದಿಸುತ್ತದೆ. ಅನೇಕ ಭಾರಿ ಆಧುನಿಕ ನೋಟ ಹಾಗೂ ಪರಂಪರಾಗತ ನೋಟಗಳು ಪರಸ್ಪರ ವಿರೋಧವಾಗಿರುವುದೂ ಕಂಡುಬರುತ್ತದೆ. ಉದಾಹರಣೆಗೆ ಆಹಾರಸೇವನೆಯ ಉದ್ದೇಶವನ್ನೇ ಗಮನಿಸಬಹುದು. ಆಧುನಿಕ ಚಿಂತಕರು ಹಸಿವಿನ ನಿವಾರಣೆ, ಆರೋಗ್ಯ ರಕ್ಷಣೆಯನ್ನು ಪ್ರಧಾನವಾಗಿ ಹೇಳುತ್ತಾರೆ. ಅದೇ ಭಾರತೀಯ ಪರಂಪರೆಯಲ್ಲಿ ಹಸಿವಡಗಿಸುವಿಕೆ, ಅರೋಗದೃಢಕಾಯತೆಯ ಜೊತೆಯಲ್ಲಿ ಪರಮಾತ್ಮ ಸಾಕ್ಷಾತ್ಕಾರ, ದೇವತಾಪ್ರಸನ್ನತೆಯವರೆಗೂ  ಅದರ ವ್ಯಾಪ್ತಿಯಿರುವುದನ್ನು ಅನ್ವೇಷಿಸಿ ಘೋಷಿಸಿದ್ದಾರೆ.

ಮಾನವದೇಹವು ಪರಮಶ್ರೇಷ್ಠವಾದ ಯಂತ್ರವೆಂದು ಜೀವಿಗಳಲ್ಲಿ ಮುಕುಟಪ್ರಾಯವಾದುದು ಎಂದು ಎಲ್ಲರೂ ಒಪ್ಪುತ್ತಾರೆ. ಅಂತಹ ದೇಹವನ್ನು ಬಳಸುವಾಗ ಅದರ ಪೂರ್ಣವಾದ ಪರಿಚಯ ಬೇಕು. ಅದರ ಸಮಗ್ರ ಪರಿಚಯವನ್ನು ಪಡೆದು ನಂತರ ಒಂದು ಕಾಯಕಲ್ಪ ನಡೆದರೆ ಆಗ ತಾನೇ ನಿರ್ದಿಷ್ಟವಾದ ಫಲವನ್ನು ನಿರೀಕ್ಷಿಸಬಹುದು. ಆಧುನಿಕ ವಿಜ್ಞಾನವು ಮಾನವದೇಹದ ಪರಿಚಯವನ್ನು ತನ್ನದೇ ಆದ ಕ್ರಮದಲ್ಲಿ ಅನ್ವೇಷಣೆ ನಡೆಸಿ ವಿವರಿಸಿದೆ. 

ಹಾಗೆಯೇ ಭಾರತದ ಋಷಿಮುನಿಗಳೂ ಕೂಡ ದೇಹದ ಸ್ವರೂಪ, ಅದರಲ್ಲಿರುವ ವಿವಿಧ ತತ್ವಗಳು, ಶಕ್ತಿಗಳು ಮತ್ತು ಅದರ ನಿಸರ್ಗಸಹಜವಾದ ಉದ್ದೇಶ ಇವುಗಳ ಪರಿಚಯವನ್ನು ನೀಡಿದ್ದಾರೆ. ಒಂದು ಪ್ರಮುಖ ವ್ಯತ್ಯಾಸವೆಂದರೆ ಆಧುನಿಕ ವಿಜ್ಞಾನದ್ದು ಕೇವಲ ಇಂದ್ರಿಯಗೋಚರ  ಅಂದರೆ ಸ್ಥೂಲದೃಷ್ಟಿಗೆ  ದೊರೆತ ಪರಿಚಯವಾದರೆ, ಋಷಿಗಳು ಸ್ಥೂಲದ ಜೊತೆಯಲ್ಲಿ ಸೂಕ್ಷ್ಮವಾದ ಯೋಗದೃಷ್ಟಿಯಿಂದ ಪಡೆದ ವಿವರಗಳನ್ನೂ ಮತ್ತು ದೇಹವನ್ನು ಸಾರ್ಥಕಗೊಳಿಸಿಕೊಳ್ಳಲು ಬೇಕಾದ ಮಾರ್ಗಗಳನ್ನೂ ತಿಳಿಸಿಕೊಟ್ಟಿರುವುದುಂಟು. ಇಂತಹ ಯೋಗದೃಷ್ಟಿಯು ಅವರ ಕಠೋರವಾದ ತಪಸ್ಸಿನಿಂದ ಲಭ್ಯವಾಯಿತು ಎಂದು ಭಾರತೀಯ ಸಾಹಿತ್ಯಗಳು ಸಾರುತ್ತವೆ. ಈ ಹಿನ್ನೆಲೆಯಲ್ಲಿ ಆಹಾರವನ್ನು ಕುರಿತು ಅವರ ನೋಟವನ್ನು ಸಂಕ್ಷಿಪ್ತವಾಗಿ ವಿವರಿಸಲು ಇಲ್ಲಿ ಯತ್ನಿಸಿದೆ.

“ಆಹ್ರಿಯತೇ ಇತಿ ಆಹಾರಃ” ಎಂದರೆ ಚೆನ್ನಾಗಿ, ಆತ್ಮನವರೆಗೂ ತೆಗೆದುಕೊಳ್ಳಲ್ಪಡುವುದೇ ಆಹಾರ. ಕೇವಲ ಬಾಯಿಯ ಮೂಲಕ ಮಾತ್ರವಲ್ಲದೆ ಎಲ್ಲಾ ಇಂದ್ರಿಯಗಳಿಂದಲೂ ಒಳಗೆ ಸ್ವೀಕರಿಸಲ್ಪಡುವುದೆಲ್ಲವೂ ಆಹಾರವೇ. ಕಣ್ಣಿಗೆ ದೃಶ್ಯವಾದರೆ, ಕಿವಿಗೆ ಮಾತು, ಮನಸ್ಸಿಗೆ ಸಂಸ್ಕಾರಗಳು ಹೀಗೆ ಎಲ್ಲ ಇಂದ್ರಿಯಗಳೂ ಒಂದೊಂದು ಆಹಾರವನ್ನು ಸೇವಿಸುತ್ತಲೇ ಇರುತ್ತವೆ. ಇದು ರೂಢಿಯ ಅರ್ಥಕ್ಕಿಂತಲೂ ವ್ಯಾಪಕವಾದ ಅರ್ಥದಿಂದ ಕೂಡಿದೆ.  


ಸೂಚನೆ: 26/10/2019 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.