Monday, October 7, 2024

ಯಕ್ಷ ಪ್ರಶ್ನೆ 108 (Yaksha prashne 108)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ –  108 ಶಾಶ್ವತವಾದ ನರಕವು ಯಾವುದರಿಂದ ದೊರಕುವುದು ?

ಉತ್ತರ - ದಾನ ಕೊಡುತ್ತೇನೆಂದು ಬ್ರಾಹ್ಮಣನನ್ನು ಕರೆಸಿ ಕೊಡದೆ ಇರುವುದರಿಂದ,

ಯಕ್ಷನು ಈ ಪ್ರಶ್ನೆಯಲ್ಲಿ ಶಾಶ್ವತವಾದ ಅಂದರೆ ಎಂದೂ ಕೂಡ ಕಳೆಯಲಾಗದ ಪಾಪಕರ್ಮವನ್ನು ಯಾವ ರೀತಿಯಾಗಿ ಮಾಡಬಹುದು ಮತ್ತು ಅದರಿಂದ ಯಾವ ರೀತಿ ಪಾಪಫಲವನ್ನು ಸಂಪಾದಿಸಬಹುದು ಎಂಬುದನ್ನು ಹೇಳುತ್ತಿದ್ದಾನೆ. ಪಾಪಕರ್ಮವು ನರಕವನ್ನು, ಪುಣ್ಯಕರ್ಮವು ಸ್ವರ್ಗವನ್ನು ಕೊಡುತ್ತದೆ ಎಂಬುದು ಭಾರತೀಯರ ನಂಬಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಳಿರುವ ಪ್ರಶ್ನೆ ಇದಾಗಿದೆ. ಅತ್ಯಂತ ಶ್ರೇಷ್ಠವಾದ ಕರ್ಮ ಯಾವುದು? ಮತ್ತು ಅದನ್ನು 'ಮಾಡುತ್ತೇನೆ' ಎಂದು ಸಂಕಲ್ಪಿಸಿ ಮಾಡದಿದ್ದರೆ ಯಾವ ರೀತಿಯಾಗಿ ಪಾಪದ ಫಲ ಲಭಿಸುತ್ತದೆ? ಎಂಬ ವಿಷಯ ಈ ಪ್ರಶ್ನೋತ್ತರದಲ್ಲಿ ಅಡಕವಾಗಿದೆ ಮತ್ತು ಈ ಪ್ರಶ್ನೆಯಿಂದ ದಾನದ ಮಹತ್ವವನ್ನು ಕೂಡ ತಿಳಿಯಬಹುದಾಗಿದೆ. ದಾನವು ಎಷ್ಟು ಶ್ರೇಷ್ಠವಾದ ಕರ್ಮ? ಅದರಿಂದ ಯಾವ ರೀತಿಯಾದ ಪುಣ್ಯಸಂಪಾದನೆ ಆಗುತ್ತದೆ? ಅದರ ಫಲವಾದದ್ದು ಸ್ವರ್ಗ ಮತ್ತು ದಾನವನ್ನು ಮಾಡದಿದ್ದರೆ ಅಥವಾ 'ದಾನ ಮಾಡುತ್ತೇನೆ' ಎಂದು ಮಾಡದಿದ್ದರೆ ಅದರಿಂದ ಯಾವ ರೀತಿಯಾಗಿ ಪಾಪಕರ್ಮವಾಗುತ್ತದೆ ಮತ್ತು ಅದರ ಫಲ ಶಾಶ್ವತವಾದ ನರಕ ಹೇಗೆ? ಎಂಬುದನ್ನು ಇಲ್ಲಿ ಹೇಳಿರುವುದರಿಂದ ದಾನದ ಮಹತ್ವವು ಇನ್ನಷ್ಟು ಸ್ಪಷ್ಟವಾಗಿ ತಿಳಿಯುತ್ತದೆ. ಮತ್ತು ದಾನವನ್ನು ಸ್ವೀಕರಿಸಲು ಬ್ರಾಹ್ಮಣನು ಯಾವ ರೀತಿಯಾಗಿ ಅರ್ಹನಾಗಿರುತ್ತಾನೆ? ಎಂಬುದನ್ನು ಈ ಪ್ರಶ್ನೆಯಲ್ಲಿ ನಾವು ಕಾಣಬಹುದಾಗಿದೆ. ಈ ಹಿಂದಿನ ಪ್ರಶ್ನೆಯಲ್ಲಿ ಬ್ರಾಹ್ಮಣನಿಗೆ ಏಕೆ ದಾನ ಮಾಡಬೇಕು? ಎಂಬುದನ್ನು ನಾವು ತಿಳಿದಿದ್ದೆವು. ಅದನ್ನು ಒಮ್ಮೆ ಇಲ್ಲಿ ಮನನ ಮಾಡಿಕೊಂಡು ಈ ಉತ್ತರವನ್ನು ಸ್ಪರ್ಶಿಸೋಣ.

'ದಾನವನ್ನು ಕೊಡುತ್ತೇನೆ' ಎಂದು ಹೇಳಿ ಮನೆಗೆ ಕರೆಸಿಕೊಂಡು ಅದನ್ನು ಕೊಡದೆ ಇರುವುದು ಒಂದು ಮೋಸದ ವ್ಯಾಪಾರ; ಇದೊಂದು ವಂಚನೆಯಾಗಿದೆ. ಮಾತಿಗೆ ತಪ್ಪುವ ವ್ಯವಹಾರ, ಕೊಟ್ಟ ಮಾತನ್ನು ಉಳಿಸಿಕೊಳ್ಳದಿರುವ ರೀತಿ. ತನಗೆ ತಾನೇ ಮಾಡಿಕೊಳ್ಳುವ ಅಪರಾಧ. ಇದು ಕೇವಲ ಬ್ರಾಹ್ಮಣನಿಗೆ ಮಾತ್ರ ಮಾಡುವ ಮೋಸವಲ್ಲ. ಯಾವುದೇ ವ್ಯಕ್ತಿಗೂ ಈ ರೀತಿಯಾಗಿ ಮಾಡಬಾರದು. ಯಾರಿಗೆ ಮಾಡಲಾಗಿದೆ? ಎನ್ನುವುದರ ಆಧಾರದ ಮೇಲೆ ಪಾಪದ ಪರಿಣಾಮದಲ್ಲಿ ವ್ಯತ್ಯಾಸವಾಗುವುದು ಅಷ್ಟೆ. ಬೇರೆ ವ್ಯಕ್ತಿಗಳಿಗೆ ಮಾಡುವುದಕ್ಕಿಂತ ಬ್ರಾಹ್ಮಣನಿಗೆ ಮಾಡುವ ಪಾಪವು ಅಧಿಕವಾಗಿ ಬರುತ್ತದೆ ಎಂಬುದು ಇದರ ಅರ್ಥವಾಗಿದೆ. ದಾನ ಮತ್ತು ಬ್ರಾಹ್ಮಣ ಮಧ್ಯದಲ್ಲಿ ಆಗುವ ಈ ವ್ಯವಹಾರವು ಅತ್ಯಂತ ಶ್ರೇಷ್ಠವಾದ್ದರಿಂದ ಅದನ್ನು ತಪ್ಪಾಗಿ ಮಾಡಿದಾಗ ಅದರಿಂದ ಬರುವ ಫಲವೂ ಅಷ್ಟೇ ಉಗ್ರವಾಗಿಯೇ ಬರುತ್ತದೆ. ಹಾಗಾದರೆ ಬ್ರಾಹ್ಮಣನಿಗೆ ಇಷ್ಟು ಮಹತ್ವ ಏಕೆ? 

ಈ ಸೃಷ್ಟಿಯು ಸತ್ತ್ವ ರಜಸ್ಸು ಮತ್ತು ತಮಸ್ಸು ಎಂಬ ತ್ರಿಗುಣಗಳ ವ್ಯಾಪಾರದಿಂದ ಆಗಿದೆ. ಈ ಗುಣಗಳಲ್ಲಿ ಯಾವ ಗುಣಕ್ಕೆ ಪ್ರಾಧಾನ್ಯವಿದೆಯೋ ಅದಕ್ಕೆ ಅನುಗುಣವಾಗಿ ಸಾತ್ತ್ವಿಕ, ರಾಜಸಿಕ ಮತ್ತು ತಾಮಸಿಕ ಸೃಷ್ಟಿ ಆಗಿದೆ. ಇವುಗಳಲ್ಲಿ ಬ್ರಾಹ್ಮಣ ಸೃಷ್ಟಿಯು ಸತ್ತ್ವ ಗುಣದ ಪ್ರಾಬಲ್ಯದಿಂದ ಆಗಿದೆ ಎಂದು ಶಾಸ್ತ್ರಗಳು ಸಾರುತ್ತವೆ.  ಉತ್ಕೃಷ್ಟವಾದ ವಿಷಯಕ್ಕೆ ಕೊಡುವ ಗೌರವವು ಪುಣ್ಯಕರ್ಮವಾದರೆ, ಅದೇ ವಿಷಯಕ್ಕೆ ಮಾಡುವ ಅಪಮಾನವು ಪಾಪಸಂಚಯಕ್ಕೆ ಕಾರಣವಾಗುತ್ತದೆ ಎಂಬುದನ್ನೂ ಅದೇ ಶಾಸ್ತ್ರವು ಸಾರುತ್ತದೆ. ಪ್ರಶ್ನೋತ್ತರದ ಸಾರವೂ ಇದೇ ಆಗಿದೆ.

ಸೂಚನೆ : 6/10/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 106 ಪ್ರಭಾಸ-ಕ್ಷೇತ್ರದಲ್ಲಿ ಅರ್ಜುನ – ರೈವತಕೋತ್ಸವಾರಂಭ (Vyaasa Vikshita 106 Prabhasa-kshetradalli Arjuna – Raivatakotsavarambha)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಶ್ರೀಕೃಷ್ಣ ಹಾಗೂ ಅರ್ಜುನರ  ಪುನರ್ಮಿಲನವಾಯಿತಷ್ಟೆ.

ಶುಭವಾದ ಶಯನದಲ್ಲಿ ಮಲಗಿದ್ದ, ಆ ಮಹಾಬಾಹುವಾದ ಅರ್ಜುನ. ತಾನು ಕಂಡ ತೀರ್ಥಗಳು, ಕುಂಡಗಳು, ಪರ್ವತಗಳು, ನದಿಗಳು ಹಾಗೂ ವನಗಳು - ಇವುಗಳ ಬಗ್ಗೆ ಆತನು ಶ್ರೀಕೃಷ್ಣನಿಗೆ ಹೇಳಿದನು. ಹೀಗೆ ದೀರ್ಘವಾಗಿ ಮಾತನ್ನಾಡುತ್ತಲಿರುವಾಗಲೇ ಸ್ವರ್ಗ-ಸದೃಶವಾದ ಆ ಶಯ್ಯೆಯ ಮೇಲೆ ಅರ್ಜುನನಿಗೆ ನಿದ್ರೆ ಹತ್ತಿತು.

ಬೆಳಗ್ಗೆಯ ಹೊತ್ತಿಗೆ ಮಧುರ-ಗೀತ, ವೀಣಾ-ಶಬ್ದಗಳು ಹಾಗೂ ಮಂಗಳ-ಸ್ತುತಿಗಳು - ಇವುಗಳ ಧ್ವನಿಯನ್ನು ಕೇಳುತ್ತಲೇ ಆತನು ಎಚ್ಚರಗೊಂಡದ್ದು. ಶಯ್ಯೆಯಿಂದೆದ್ದು, ಆವಶ್ಯಕವಾದ ಕಾರ್ಯಗಳನ್ನು ಪೂರೈಸಿ, ಶ್ರೀಕೃಷ್ಣನಿಂದ ಅಭಿನಂದಿಸಲ್ಪಟ್ಟು, ಕಾಂಚನ-ರಥವನ್ನೇರಿ, ದ್ವಾರಕೆಯತ್ತ ಸಾಗಿದನು.

ಈ ಕುಂತೀ-ಪುತ್ರನಿಗೆ ಸ್ವಾಗತವನ್ನು ಹೇಳಲೆಂದು ಇಡೀ ದ್ವಾರಕೆಯೇ ಅಲಂಕೃತವಾಗಿತ್ತು - ಮನೆಮನೆಯ ತೋಟಗಳ ಪರ್ಯಂತವೂ ಅಲಂಕೃತವಾಗಿತ್ತು. ಕೌಂತೇಯನನ್ನು ಕಾಣಬೇಕೆಂಬ ಹಂಬಲಿಕೆಯಿಂದ ನೂರಾರು ಸಾವಿರಾರು ಸಂಖ್ಯೆಯಲ್ಲಿ ರಾಜ-ಮಾರ್ಗಕ್ಕೆ ಆಗಮಿಸಿದರು, ದ್ವಾರಕಾ-ವಾಸಿಗಳಾದ ಜನರು. ಎಲ್ಲೆಲ್ಲಿ ನಿಂತು ಅರ್ಜುನನನ್ನು ಚೆನ್ನಾಗಿ ನೋಡಲು ಸಾಧ್ಯವಾಗುತ್ತದೋ ಅಲ್ಲೆಲ್ಲಾ ಸಾವಿರಾರು ನೂರಾರು ಸಂಖ್ಯೆಗಳಲ್ಲಿ ನಾರಿಯರು ಮಾತ್ರವಲ್ಲದೆ ಭೋಜ-ವೃಷ್ಣಿ-ಅಂಧಕವಂಶಗಳ ಪುರುಷರೂ ನೆರೆದಿದ್ದರು. ಭೋಜ-ವೃಷ್ಣಿ-ಅಂಧಕ-ವಂಶಗಳ ರಾಜಕುಮಾರರೆಲ್ಲರಿಂದಲೂ ಅರ್ಜುನನಿಗೆ ಸತ್ಕಾರವಾಯಿತು. ಸತ್ಕಾರಹೊಂದಿದ ಅರ್ಜುನನು, ಅವರಲ್ಲಿ ಅಭಿವಾದ್ಯರಾದ ಹಿರಿಯರಿಗೆ, ಎಂದರೆ ಅಭಿವಾದನಕ್ಕೆ ಯೋಗ್ಯರಾದವರಿಗೆ, ಅಭಿವಾದನವನ್ನು ಮಾಡಿದನು. ಹಾಗೂ ಎಲ್ಲರ ಸ್ವಾಗತಕ್ಕೆ ಪಾತ್ರನಾದನು.

ಯದು-ವಂಶದ ರಾಜಕುಮಾರರೆಲ್ಲರೂ ಎಲ್ಲೆಡೆಯಿಂದ ಆತನನ್ನು ಸತ್ಕರಿಸಿದರು. ಅವಕ್ಕೆ ಪ್ರತಿಸ್ಪಂದಿಸುತ್ತಾ ಸಮಾನ-ವಯಸ್ಕರಾದವರೆಲ್ಲರನ್ನೂ ಮತ್ತೆ ಮತ್ತೆ ಆಲಿಂಗಿಸಿಕೊಂಡನು, ಅರ್ಜುನ. ಬಗೆಬಗೆಯ ರತ್ನಗಳಿಂದಲೂ, ಭೋಜ್ಯಗಳಿಂದಲೂ ತುಂಬಿದ್ದ ಶ್ರೀಕೃಷ್ಣನ ಭವ್ಯ-ಭವನದಲ್ಲಿ ಆತನೊಂದಿಗೆ ಹಲವು ರಾತ್ರಿಗಳ ಕಾಲ ವಾಸ ಮಾಡಿದನು.

ಕೆಲದಿನಗಳು ಕಳೆದವು. ಆ ರೈವತಕ-ಪರ್ವತದಲ್ಲಿ ವೃಷ್ಣಿ-ವಂಶ ಹಾಗೂ ಅಂಧಕ-ವಂಶಗಳ ಮಂದಿಯ ಉತ್ಸವವೊಂದು ಜರುಗಿತು. ಆ ಎಡೆಯಲ್ಲಿ ಭೋಜ-ವೃಷ್ಣಿ-ಅಂಧಕ-ವಂಶಗಳ ವೀರರು ಆ ಉತ್ಸವ-ಸಂದರ್ಭದಲ್ಲಿ ಸಹಸ್ರಾರು ಮಂದಿ ಬ್ರಾಹ್ಮಣರಿಗೆ ನಾನಾ-ದಾನಗಳನ್ನು ಕೊಟ್ಟರು. ಆ ಪರ್ವತದ ಸುತ್ತಲೂ ಪ್ರಾಸಾದಗಳಿಂದಲೂ, ಎಂದರೆ ರತ್ನ-ಖಚಿತವಾದ ಭವ್ಯವಾದ ಬಂಗಲೆಗಳಿಂದಲೂ, ಕಲ್ಪ-ವೃಕ್ಷಗಳಿಂದಲೂ ಆ ಪ್ರದೇಶವು ಶೋಭೆಗೊಂಡಿತ್ತು.

ವಾದ್ಯಗಳಲ್ಲಿ ನಿಪುಣರಾದವರು ಅಲ್ಲಿ ನಾನಾ ವಾದ್ಯಗಳನ್ನು ನುಡಿಸಿದರು. ಹಾಗೂ ಗಾಯನರು, ಎಂದರೆ ಹಾಡುವವರು, ಹಾಡುಗಳನ್ನು ಹಾಡಿದರು, ಹಾಗೂ ನರ್ತಕರು ನರ್ತನಗಳನ್ನು ಮಾಡಿದರು. ವೃಷ್ಣಿ-ವಂಶದ ಮಹಾ-ಬಲಶಾಲಿಗಳಾದ ರಾಜಕುಮಾರರೂ ಸಹ, ಸ್ವರ್ಣಾಲಂಕಾರಗಳಿಂದ ಶೋಭಿತವಾದ ವಾಹನಗಳಲ್ಲಿ ಕುಳಿತವರಾಗಿ ಎಲ್ಲೆಡೆ ಸಂಚರಿಸುತ್ತಿದ್ದರು. ತಮ್ಮ ನಾರಿಯರು ಹಾಗೂ ಸೇವಕರುಗಳೊಂದಿಗೆ ನೂರಾರು ಸಾವಿರಾರು ಸಂಖ್ಯೆಯಲ್ಲಿ ಕಾಲ್ನಡಿಗೆಯಲ್ಲಿ ಸಹ ಜನತೆಯು ಬಂದಿತು.

ಆಮೇಲೆ ರೇವತೀಸಹಿತನಾಗಿ ಹರ್ಷೋನ್ಮತ್ತನಾದ ಬಲರಾಮನು ಅಲ್ಲಿಗೆ ಬಂದನು. ಗಂಧರ್ವರು (ಎಂದರೆ ಗಾಯಕರು) ಆತನನ್ನು ಅನುಸರಿಸಿ ಬಂದಿದ್ದರು. ಅಷ್ಟರಲ್ಲೇ ವೃಷ್ಣಿಗಳ ಅರಸೂ ಪ್ರತಾಪ-ಶಾಲಿಯೂ ಆದ ಉಗ್ರಸೇನನೂ, ಗಂಧರ್ವರೊಂದಿಗೂ ಸ್ತ್ರೀ-ಸಹಸ್ರದೊಂದಿಗೂ ಅಲ್ಲಿಗೆ ಆಗಮಿಸಿದನು. ರೌಕ್ಮಿಣೇಯ - ಎಂದರೆ ಪ್ರದ್ಯುಮ್ನ, ಹಾಗೂ ಸಾಂಬ - ಇವರಿಬ್ಬರೂ ದಿವ್ಯವಾದ ಮಾಲೆಗಳನ್ನೂ ದಿವ್ಯವಾದ ವಸ್ತ್ರಗಳನ್ನೂ ಧರಿಸಿದವರಾಗಿ ಹರ್ಷೋದ್ರೇಕದಿಂದ ಅಲ್ಲಿ ದೇವತೆಗಳ ಹಾಗೆ ವಿಹರಿಸಿದರು.

ಅಕ್ರೂರ, ಸಾರಣ, ಗದ, ಮುಂತಾದ ಹಲವು ಅರಸರು ಸ್ತ್ರೀಯರಿಂದಲೂ ಗಾಯಕರಿಂದಲೂ ಸುತ್ತುವರೆಯಲ್ಪಟ್ಟಿದ್ದರು. ರೈವತಕ ಪರ್ವತದ ಉತ್ಸವಕ್ಕೆ ಒಳ್ಳೆಯ ಶೋಭೆಯನ್ನು ತಂದರು.

ಸೂಚನೆ : 6/10/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ 33 ಅಂಗನಾಲಿಂಗಿತ ಮೋಹಕ ಮಹಸ್ಸು Anganalingita Mohaka Mahassu

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಅಸ್ತೋಕ-ಸ್ಮಿತ-ಭರಮ್ ಆಯತಾಯತಾಕ್ಷಂ

ನಿನ್ನ ತೇಜಃಸ್ವರೂಪವನ್ನು ಅದೆಂದು ಕಂಡಿಯೇನೋ? - ಎಂದು ಹಂಬಲಿಸುತ್ತಾನೆ, ಲೀಲಾಶುಕ. ಭಗವಂತನು ಎರಡು ಬಗೆಯಾಗಿ ತೋರುವುದುಂಟು. ಒಂದು, ಕೇವಲ ತೇಜೋರಾಶಿಯಾಗಿ; ಎರಡು, ತೇಜಃಸಂಪನ್ನವಾದ ಶರೀರವನ್ನು ತಾಳಿದವನಾಗಿ.

ಲೋಕದಲ್ಲಿ ಒಂದೇ ವಿಷಯವನ್ನೇ ಹೇಳಲು ಬಳಸುವ ಭಾಷೆ ಬಗೆಬಗೆಯಾಗಿರಬಹುದು. ಸುಂದರಿಯಾದ ತರುಣಿಯಿರುತ್ತಾಳೆ; ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆನಿಸುವ ಸೌಂದರ್ಯ. ನ್ಯಾಯವಾಗಿ, ಅವಳ ಬಗ್ಗೆ ಹೇಳಬೇಕಾದರೆ, "ಅವಳು ಸುಂದರಿ" ಎಂದೋ, "ಅವಳಲ್ಲಿ ಸೌಂದರ್ಯವಿದೆ" ಎಂದೋ ಹೇಳಬೇಕು. ಇವೆರಡೂ ಪ್ರಕಾರಗಳನ್ನೂ ಬಿಟ್ಟು, "ಓ, ಸೌಂದರ್ಯವೆಂದರೇ ಅವಳೇ!" ಎಂದೋ "ಅವಳೇ ಸೌಂದರ್ಯವೆಂದರೆ" ಎಂದೋ ಹೇಳಿಬಿಡುವುದೂ ಉಂಟು. ಹೀಗೆ ನಾಲ್ಕು ಬಗೆಗಳಲ್ಲಿ ಒಂದೇ ವಿಷಯವನ್ನು ಹೇಳುವ ಪರಿಯುಂಟು. ಇದು ಕೇವಲ ಕಾವ್ಯಗಳಲ್ಲಲ್ಲದೆ, ಜನಗಳಾಡುವ ಭಾಷೆಯಲ್ಲಿಯೇ ಸಂದರ್ಭಾನುಸಾರ ಬರುವುದುಂಟು. ಅವುಗಳಲ್ಲಿ ಪರಸ್ಪರ ಸೂಕ್ಷ್ಮ-ಭೇದಗಳು ಒಂದಿಷ್ಟುಂಟೆಂಬುದೂ ನಿಜವೇ. ಸಂಸ್ಕೃತದಲ್ಲಿ ಸಾಹಿತ್ಯ-ಶಾಸ್ತ್ರವೆಂಬುದೊಂದಿದೆ. ಅದಕ್ಕೇ ಅಲಂಕಾರ-ಶಾಸ್ತ್ರವೆಂಬ ಹೆಸರೂ ಇದೆ. ಆ ಶಾಸ್ತ್ರದಲ್ಲಿ ಹೀಗೆ ಒಂದೇ ತಾತ್ಪರ್ಯದ ನಾಲ್ಕಾರು ಬಗೆಯ ನಿರೂಪಣೆಗಳಲ್ಲಿನ ಪರಸ್ಪರ-ಭೇದಗಳನ್ನು ವಿಸ್ತಾರವಾಗಿ ವಿವೇಚಿಸಲಾಗಿದೆ.

ಪ್ರಕೃತ-ಶ್ಲೋಕದಲ್ಲಿ ಶ್ರೀಕೃಷ್ಣನನ್ನು 'ಮಹಃ' ಎಂದು ಕರೆದಿದೆ. ಆ ಪದಕ್ಕೆ ತೇಜಸ್ಸು ಎಂಬ ಅರ್ಥವು ಪ್ರಸಿದ್ಧವಷ್ಟೆ. ಕೃಷ್ಣನನ್ನು ತೇಜಸ್ಸೆಂದರೂ, "ಆತನು ತೇಜೋಮಯವಾದ ಶರೀರವುಳ್ಳವನು" ಎಂದೇ ಅರ್ಥ. ಅರ್ಥಾತ್, "ಅವನು ಮಹಾ-ತೇಜಸ್ವಿ" ಎಂಬುದು ತಾತ್ಪರ್ಯವಾದರೂ, "ಅವನೇ ತೇಜಸ್ಸು" ಎಂದುಬಿಡುವುದುಂಟು. ಅರ್ಥಾತ್ ಶ್ರೀಕೃಷ್ಣನ ಶರೀರವು ತೇಜಸ್ಸಂಪನ್ನವಾಗಿದೆಯೆಂಬುದೇ ಇಲ್ಲಿಯ ತಾತ್ಪರ್ಯ.

"ಕೃಷ್ಣನು ತೇಜೋರಾಶಿ" ಎಂಬರ್ಥದಲ್ಲೇ ಹೇಳಿಲ್ಲವೆಂಬುದು ಹೇಗೆ ನಿಶ್ಚಯವಾಗುತ್ತದೆ? ಶ್ಲೋಕದ ಇತರ ಪದಗಳನ್ನು ನೋಡಿದರೆ ತಿಳಿದುಬರುತ್ತದೆ. ಶ್ಲೋಕದಲ್ಲಿ ಈ ವಿಶೇಷ್ಯಕ್ಕೆ ಐದು ವಿಶೇಷಣಗಳಿವೆ. 'ಮಹಃ' ಎಂಬುದಕ್ಕಿರುವ ಈ ಎಲ್ಲ ವಿಶೇಷಣಗಳೂ ಶ್ರೀಕೃಷ್ಣನ ಶರೀರಕ್ಕೇ ಅನ್ವಯಿಸತಕ್ಕವು.

ಯಾವ ವಿಶೇಷಣಗಳು? ಅವು ಯಾವ ವಿಶೇಷಗಳನ್ನು ಹೇಳುತ್ತವೆ? - ಎಂದು ಕೇಳಬೇಕಲ್ಲವೆ? ಅವುಗಳನ್ನು ಒಂದೊಂದಾಗಿ ಈಗ ನೋಡೋಣ.

ಸಾರಾಂಶವಾದದ್ದು "ತ್ರಿಭುವನ-ಸುಂದರಂ" ಎಂಬುದು. ಭುವನವೆಂದರೆ ಲೋಕ. ತ್ರಿ-ಲೋಕಗಳಲ್ಲೂ ಸುಂದರವಾದದ್ದೆಂದರೆ ಇದೇ. ಅರ್ಥಾತ್, ಮೂರು ಲೋಕಗಳನ್ನು ಹುಡುಕಿದರೂ, ಶ್ರೀಕೃಷ್ಣನಿಗೆ ಸಾಟಿಯೆನಿಸುವ ಸೌಂದರ್ಯ ಕಾಣಸಿಗದು.

ಸುಂದರವಾದ ವಸ್ತುವನ್ನು ಕಾಣಲು ಕಣ್ಣು ಹಂಬಲಿಸುತ್ತದೆ. ಭುವನ-ಸುಂದರವಾದದ್ದೆಂದರೆ ಕೇಳಬೇಕೇ? ಇನ್ನು ತ್ರಿಭುವನ-ಸುಂದರವೆಂದರಂತೂ ಹೇಳಲೇಬೇಕಿಲ್ಲ; ಕಣ್ಣು ಕಾತರವಾಗಿರುತ್ತದೆ. (ಬಹಳ ಮಂದಿ ಕಾತುರ – ಎಂಬ ಪದವನ್ನು ಬಳಕೆ ಮಾಡುತ್ತಾರೆ. ಹಾಗೊಂದು ಪದವೇ ಇಲ್ಲ, ಕನ್ನಡದಲ್ಲಿ! ಸಂಸ್ಕೃತದ ಕಾತರ ಮತ್ತು ಆತುರ – ಎಂಬ ಎರಡು ಪದಗಳನ್ನು ಮನಸ್ಸಿನಲ್ಲಿ ಬೆರೆಸಿಕೊಂಡ ಭ್ರಾಂತರು ಬಳಸುವ ಪದವಿದು).

ತೇಜಸ್ಸೆಂದರೇ ಕಣ್ಣನ್ನು ಸೆಳೆಯುವ ವಸ್ತು. ಅದರೊಂದಿಗೆ ಕಮನೀಯತೆಯೂ ಸೇರಿತೆಂದರೆ ಅದುವೇ "ತ್ರಿಭುವನ-ಸುಂದರಂ ಮಹಃ" ಎಂಬುದು; ಅಂತಹುದು ಕಣ್ಗಳನ್ನು ಕಾಡುವಂತಹುದೇ ಸರಿ. ಅಂತಹ ನಿನ್ನ ರೂಪವನ್ನು ನಾನು ಕಾಣುವಂತಾಗಲಿ - ಎಂಬುದೇ ಕವಿಯ ಕೋರಿಕೆ.

ಇಲ್ಲಿ ಚಿತ್ರಿತವಾಗಿರುವುದು ರಾಸ-ಕ್ರೀಡೆಯಲ್ಲಿ ತೊಡಗಿರುವ ಕೃಷ್ಣ. ಅಲ್ಲಿ ಪಾಲ್ಗೊಂಡ ಎಲ್ಲರಿಗೂ ಸಂತೋಷ-ಪ್ರದವಾದ ಈ ಸಂನಿವೇಶದಲ್ಲಿ ಯಾರ ವದನದಲ್ಲೂ ಸ್ತೋಕ-ಸ್ಮಿತವಿಲ್ಲ, ಎಂದರೆ ಮುಗುಳ್ನಗೆಯಿಲ್ಲ. ಮತ್ತೇನು? ಸ್ತೋಕವಲ್ಲದ ಎಂದರೆ ತುಂಬಿಬಂದ ಸ್ಮಿತ ಅಥವಾ ನಗೆ! ಸ್ತೋಕವೆಂದರೆ ಕಡಿಮೆ. ಅ-ಸ್ತೋಕವೆಂದರೆ ಅನಲ್ಪ. ಉಕ್ಕುತ್ತಿರುವ ಆನಂದವಿದ್ದಲ್ಲಿ ಬರೀ ಮುಗುಳ್ನಗೆಯೇ? ಭರ ಎಂದರೆ ಅತಿಶಯ. ಸ್ಮಿತ-ಭರವೆಂದರೆ ಹಸಿತದ ಉಲ್ಲಾಸ; ಅದುವೇ ಚಿಮ್ಮಿದೆ ಮುಖದಲ್ಲಿ.

ಇನ್ನಾತನ ಕಣ್ಣುಗಳೋ: ಅವಂತೂ ಆಯತಾಯತವಾಗಿವೆ, ಎಂದರೆ ಅಗಲಗಲವಾಗಿವೆ. ಕಣ್ಣು ದೊಡ್ಡದಾಗಿದ್ದರಲ್ಲವೇ ಸುಂದರವೆನಿಸುವುದು? ಜೊತೆಗೆ ನಯನಾನಂದಕಾರಿ-ವಸ್ತುವಿದ್ದಲ್ಲಿ ಅದನ್ನು ಕಾಣಲು ಕಣ್ಣು ಅಗಲಿಸದೆ ಮತ್ತೇನು? ಸುತ್ತಲೂ ಸುಂದರ-ವಸ್ತುಗಳಿದ್ದರಂತೂ ಇನ್ನೂ ಸರಿಯೇ.

ಆತನ ಸುತ್ತಲೂ ಇರುವ ಗೋಪಿಕೆಯರು ಸುಂದರಿಯರೆಂಬುದಷ್ಟೇ ಅಲ್ಲ. ಅವರೆಲ್ಲರೂ ಕೃಷ್ಣನನ್ನು ಪ್ರೀತಿಯಿಂದ ಕಾಣತಕ್ಕವರು. ಚಿಮ್ಮುವ ಸೌಂದರ್ಯದಿಂದ ಕೂಡಿದ, ಹಾಗೂ ಅದಕ್ಕಿಂತ ಮುಖ್ಯವಾಗಿ ಉಕ್ಕುವ ಪ್ರೀತಿಯುಳ್ಳ, ಆ ಗೋಪಿಕೆಯರ ಮಧ್ಯದಲ್ಲಿರುವ ಕೃಷ್ಣನ ಕಣ್ಣಿಗೇಕೆ ಸಂಕೋಚ? ಹೀಗಾಗಿ ಅದು ಆಯತಾಯತವೇ ಸರಿ.

ಕೃಷ್ಣನು ಸ್ವತಃ ಸುಂದರನೂ ಹೌದು, ಸುತ್ತಲಿನ ಸೌಂದರ್ಯವನ್ನು ಕಣ್ತುಂಬ ಕಂಡು ಆಸ್ವಾದಿಸುವವನೂ ಹೌದು. ಶಿವನು ಯೋಗಿ-ರಾಜನಾದರೆ ಕೃಷ್ಣನು ಭೋಗಿ-ರಾಜ: ವಾಸ್ತವವಾಗಿ ಇಬ್ಬರೂ ಎರಡೂ ಹೌದು.

ಹೀಗೆ, ಕೃಷ್ಣನ ಆಸ್ಯದಲ್ಲಿ ನಗುವಿನ ಲಾಸ್ಯ; ಹಾಗೂ ಸ್ವತಃ ಅಗಲವೂ, ಈಗ ಮತ್ತೂ ಅಗಲಿಸಿರುವುವೂ, ಆದ ಅಕ್ಷಿಗಳು - ಇಂತಹ ಆನನವುಳ್ಳ ಕೃಷ್ಣನ ರೂಪು ಯಾರ ಕಣ್ಣುಗಳನ್ನಾದರೂ ಸೆಳೆಯುವುದೇ.

ರಾಸ-ಕ್ರೀಡೆಯಲ್ಲಿ ಕೃಷ್ಣನ ಪಕ್ಕದಲ್ಲಿ ಗೋಪಿಕೆಯೊಬ್ಬಳು; ಹಲವು ಗೋಪಿಕೆಯರಿರುವರಲ್ಲವೇ? ಪ್ರತಿಯೊಬ್ಬ ಗೋಪಿಕೆಯ ಪಕ್ಕದಲ್ಲೂ ಕೃಷ್ಣನೊಬ್ಬನಿರುವನು! ಪಕ್ಕದಲ್ಲೇನು, ಆತನನ್ನು ಅಪ್ಪಿರುವವರೇ ಅವರು.

ವ್ರಜದ ಆ ನಾರಿಯರು ಬರೀ ಸ್ತ್ರೀಯರಲ್ಲ, ಅವರು ಅಂಗನೆಯರು. ಏನು ಹಾಗೆಂದರೆ? "ಯಾವಳ ಅಂಗಗಳು ಪ್ರಶಸ್ತವೋ ಅವಳೇ ಅಂಗನೆ" – ಎಂಬುದು ಆ ಪದದ ವ್ಯುತ್ಪತ್ತಿ. ದಾಸರೂ ಕೇಳಲಿಲ್ಲವೇ – "ಸುಂದರಾಂಗದ ಸುಂದರೀಯರ ಹಿಂದೆ-ಮುಂದೆಯಲ್ಲಿ" ಇರುವ ನಮ್ಮ ಕೃಷ್ಣನನ್ನು ಎಲ್ಲಿ ನೋಡಿದಿರಿ? - ಎಂದು?

ಇನ್ನು ಈ ವ್ರಜಾಂಗನೆಯರ ಅಪ್ಪುಗೆಯಾದರೂ ಎಂತಹುದು? ತಮ್ಮ ಸ್ತನಗಳಿಂದ ಆತನನ್ನು ನಿಃಶೇಷವಾಗಿ, ಎಂದರೆ ಸಂಪೂರ್ಣವಾಗಿ, ಅವರು ಮರ್ದಿಸಿರುವರು. ಪ್ರೀತಿ ಸುರಿಯುವ ಸುಂದರಾಂಗಿಯ ಗಾಢಾಲಿಂಗನವೆಂದರೆ ಅಂತರಂಗದಲ್ಲಿ ಆನಂದವಿರದೇ? ಆ ಹರ್ಷವಾದರೂ ಮೊಗದಲ್ಲಿ ತೋರಿಕೊಳ್ಳದೇ? ರಮಣೀಯತೆಯ ರಾಶಿಯೆಂಬುದು ನೇತ್ರಗಳಿಗೆ ಪಾತ್ರವಾದಾಗ ಆ ಸೊಬಗನ್ನು ಸೂರೆಗೊಳ್ಳಲು ಅಕ್ಷಿಗಳು ಅಗಲವಾಗಿಕೊಳ್ಳವೇ? ಹೀಗೆ ಮನಸ್ಸಿನ ಉಲ್ಲಾಸವು ಮುಖದಲ್ಲೂ, ಮುಖದ ವಿಕಾಸವು ನಯನಗಳಲ್ಲೂ ತೋರದಿರುವುವೇ?

ಕರಿಯನಾದರೂ ಕಾಂತಿಶಾಲಿಯೇ ನಮ್ಮ ಕೃಷ್ಣ. ಎಂತಹ ಕಪ್ಪು ಆತನದು? ಅದು ನೀಲ-ಮಣಿಯ ಕಪ್ಪು. ಮತ್ತು ಆ ಕಪ್ಪಾದ ಕಾಂತಿಯಾದರೂ ಶರೀರವನ್ನೆಲ್ಲ ವ್ಯಾಪಿಸಿರುವಂತಹುದೇ. ಬೆಳ್ಳಗಿರುವವರೇ ಬೆಡಗಿನವರೆಂದು ಭ್ರಮಿಸುವುದಲ್ಲ. ಕಪ್ಪಾದರೂ ಕಮನೀಯನಾಗಿ ಕಳೆಕಟ್ಟಿಲ್ಲವೇ ಗೊಲ್ಲರಲ್ಲೊಬ್ಬನಾದ ನಮ್ಮೀ ಕೃಷ್ಣ?

ಅಂತೂ ಈತನೂ ಸುಂದರ, ಸುತ್ತಲಿನ ಗೋಪಿಕೆಯರೂ ಸುಂದರಿಯರು. ಅವನಿಗೆ ಅವರಲ್ಲೂ, ಅವರಿಗೆ ಅವನಲ್ಲೂ ಪ್ರೀತಿಯುಕ್ಕಿದೆ. ಪ್ರೇಮ-ಭರಿತರ ವದನ ಆನಂದದ ಸದನ! ಸಮನಿಲ್ಲದ ಈ ಸುಂದರ-ಮೂರ್ತಿಯನ್ನು ಕಾಣಲು ಹಪಹಪಿಸುತ್ತಿವೆ, ಲೀಲಾಶುಕನ ಚೇತಸ್ಸೂ ಚಕ್ಷುಸ್ಸೂ.

ಅಸ್ತೋಕ-ಸ್ಮಿತ-ಭರಮ್ ಆಯತಾಯತಾಕ್ಷಂ /

ನಿಃಶೇಷ-ಸ್ತನ-ಮೃದಿತಂ ವ್ರಜಾಂಗನಾಭಿಃ |

ನಿಃಸೀಮ-ಸ್ತಬಕಿತ-ನೀಲ-ಕಾಂತಿ-ಧಾರಂ /

ದೃಶ್ಯಾಸಂ ತ್ರಿಭುವನ-ಸುಂದರಂ ಮಹಸ್ತೇ ||

ಸೂಚನೆ : 5/10/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.


ಅಷ್ಟಾಕ್ಷರೀ 67 ಅಶ್ವಾನಾಂ ಖಾದನೇನಾರ್ಥೀ (Astaksari 67 Ashvanam Khadanenarthi)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ವಾಲ್ಮೀಕಿರಾಮಾಯಣದ ಒಂದು ಕಿರಿದಾದ ಪ್ರಸಂಗದಲ್ಲೂ ಹಿರಿದಾದ ಪಾಠವೊಂದನ್ನು ನಾವು ಕಲಿಯಬಹುದು.

ಶ್ರೀರಾಮಚಂದ್ರನು ವನವಾಸಕ್ಕೆ ತೆರಳುವಾಗ ದುಃಖಿತ-ಜನತೆಯೂ ಆತನನ್ನು ಹಿಂಬಾಲಿಸಿತಷ್ಟೆ. ಚಿರಕಾಲ ದುಃಖಿಸುವುದು ತರವಲ್ಲವೆಂಬ ತಿಳಿವಳಿಕೆಯಿತ್ತು ಪ್ರಜೆಗಳನ್ನು ಬೀಳ್ಕೊಟ್ಟ  ರಾಮನು, ಶೃಂಗಬೇರಪುರದ ಕಡೆಗೆ ಸಾಗುತ್ತಾ ಗಂಗಾ-ಸೌಂದರ್ಯ-ವೈಭವಗಳನ್ನೂ ಆಸ್ವಾದಿಸಿದನು. ಹೊತ್ತಾಗುತ್ತಾ ಬಂದಿತ್ತಾಗಿ, ಬೃಹತ್ತಾದ ಇಂಗುದೀ-ವೃಕ್ಷವೊಂದನ್ನು ಕಂಡು, "ಇಂದಿಲ್ಲಿಯೇ ತಂಗೋಣ"ವೆಂದು ಸುಮಂತ್ರನಿಗೆ ಸೂಚಿಸಿದನು.

ಶೃಂಗಬೇರಪುರಕ್ಕೆ ಒಡೆಯನೆಂದರೆ ನಿಷಾದ-ರಾಜನಾದ ಗುಹ. ತನ್ನ ರಾಜ್ಯಕ್ಕೆ ಪುರುಷ-ಶ್ರೇಷ್ಠನಾದ ರಾಮನು ಬಂದಿರುವನೆಂಬುದು ಆತನಿಗೆ ತಿಳಿದುಬಂದಿತು.

ಶ್ರೇಷ್ಠರಾದವರು ಬಂದಾಗ ಅವರಿಗೆ ಶ್ರೇಷ್ಠವಾದ ಆದರಾತಿಥ್ಯಗಳೇ ಯುಕ್ತವಷ್ಟೆ. ಎಂದೇ ರಾಜ್ಯದ ವೃದ್ಧರು, ಅಮಾತ್ಯರು ಮುಂತಾದ ಹಿರಿಯರೊಂದಿಗೆ ರಾಮನತ್ತ ನಡೆದ, ಗುಹ. ರಾಮನಿಗವನು ಪ್ರಾಣಸಮ. ಪ್ರಿಯಮಿತ್ರನು ಆಗಮಿಸಿದನೆಂದರೆ ನಾವೂ ಮುಂದೆ ಹೋಗಿ ಆತನನ್ನು ಸ್ವಾಗತಿಸುತ್ತೇವಲ್ಲವೇ? ಎಂದೇ ರಾಮನೂ ತಾನೂ ಮುಂದೆ ಹೋಗಿ ಆತನನ್ನಾದರಿಸಿದನು.

ರಾಮನನ್ನು ಕಂಡ ಗುಹನಿಗೆ ಒಂದಿಷ್ಟು ದುಃಖವೂ ಆಯಿತು. ಏಕೆ? ರಾಮನು ವನವಾಸಿ-ತಪಸ್ವಿಗಳಿಗೆ ಸಲ್ಲತಕ್ಕ ವಲ್ಕಲವನ್ನುಟ್ಟಿದ್ದಾನೆ! ರಾಜಕುಮಾರನೆಂದರೆ ವೇಷ-ಪೋಷಾಕುಗಳು ಹೇಗಿರುತ್ತವೆ! ಏನೋ ಘಟಿಸಿರಬೇಕು - ಎಂಬ ಚಿಂತನವು ಗುಹನ ಮನಸ್ಸಿನಲ್ಲಿ ಕ್ಷಣಕಾಲ ಹಾದುಹೋಗಿರಬಹುದು; ಸೂಕ್ಷ್ಮವಾದ ವಿಷಯವಿದೆಂದುಕೊಂಡು, ಗುಹನು ಆ ಬಗ್ಗೆ ಮಾತನಾಡಹೋಗುವುದಿಲ್ಲ. ಹಾಗಾದರೆ ಏನೆಂದನು? ಏನು ಮಾಡಿದನು? - ಎಂಬುದೇ ಇಲ್ಲಿ ಗಮನಿಸಿಕೊಳ್ಳಬೇಕಾದ ವಿಷಯ.

"ನನ್ನೀ ರಾಜ್ಯವು ನಿನಗೆ ಅಯೋಧ್ಯೆಯಂತೆಯೇ. ನಿನಗಾವ ಸೇವೆಯನ್ನು ಮಾಡಲಿ?" ಎಂದು ತನ್ನ ಭಾಗ್ಯವನ್ನು ಚಿತ್ರಿಸುತ್ತಾ, ಪ್ರಶಸ್ತವಾದ ಭಕ್ಷ್ಯ-ಭೋಜ್ಯ-ಪೇಯ-ಲೇಹ್ಯಗಳುಳ್ಳ ಭೋಜನಕ್ಕೆ ವ್ಯವಸ್ಥೆ, ಶಯನ-ವ್ಯವಸ್ಥೆಗಳನ್ನು ಮಾಡಿದನು. ಇವೆಲ್ಲದರ ಜೊತೆಗೆ, ರಾಮನ ವಾಜಿಗಳಿಗೂ, ಎಂದರೆ ಕುದುರೆಗಳಿಗೂ, ಖಾದ್ಯವು ಸಿದ್ಧವಾಗಿರುವುದನ್ನು ಸೂಚಿಸಿದನು.

ತಾನು ವಲ್ಕಲವನ್ನು ಧರಿಸಿರುವುದೂ ಫಲಮೂಲಗಳನ್ನು ಮಾತ್ರ ಸ್ವೀಕರಿಸುವುದೂ ತಾನು ವ್ರತಸ್ಥನಾದ್ದರಿಂದಲೇ - ಎಂದು ಹೇಳಿ, ತನ್ನ ಅಶ್ವಗಳಿಗೆ ಆಹಾರವನ್ನು ಕೊಡೆನ್ನುತ್ತಾನೆ, ರಾಮ (ಅಶ್ವಾನಾಂ ಖಾದನೇನಾರ್ಥೀ). ತನ್ನ ತಂದೆಗೆ ಪ್ರಿಯವಾಗಿದ್ದ ಕುದುರೆಗಳಿವು - ಎಂದು ಹೇಳಿ, ಇವಕ್ಕೆ ತೃಪ್ತಿಯಾದರೆ ತನಗೂ ತೃಪ್ತಿಯೆನ್ನುತ್ತಾನೆ. ಗುಹನೂ ಅಂತೆಯೇ ಮಾಡುತ್ತಾನೆ.

ಇಲ್ಲಿಯ ಈ ಕಿರುಪ್ರಸಂಗವು ಇಡೀ ರಾಮಾಯಣದ ತಂತ್ರಕ್ಕೇ ಕನ್ನಡಿಹಿಡಿಯುತ್ತದೆಯೆನ್ನಬಹುದು. ಕುದುರೆಗೆ ಆಹಾರವೀಯುವುದು ರಾಮಾಯಣದ ರಚನಿಕೆಯನ್ನು ಹೇಗೆ ತೋರಿಸೀತು?

ಶ್ರೀರಂಗಮಹಾಗುರುಗಳಿತ್ತಿರುವ ಸೂತ್ರವೊಂದು ಇಲ್ಲಿ ದಿಗ್ದರ್ಶಕವಾಗಿದೆ: "ಬಂದ ಅತಿಥಿಗೆ ಆಹಾರ, ಆತನ ಕುದುರೆಗಳಿಗೂ ಆಹಾರ - ಎನ್ನುವಂತೆ, ಜೀವಿಗೂ ಆತನ ಇಂದ್ರಿಯಗಳಿಗೂ ಸಲ್ಲುವ ಆಹಾರವನ್ನಿತ್ತಿದ್ದಾರೆ, ವಾಲ್ಮೀಕಿಗಳು." ಏನು ಹಾಗೆಂದರೆ? ಇಲ್ಲಡಗಿರುವ ರೂಪಕವನ್ನು ಗ್ರಹಿಸಿದವರಿಗೆ ತತ್ತ್ವವು ಗೋಚರವಾಗುತ್ತದೆ. ಕಠೋಪನಿಷತ್ತು ತೋರಿಸುವ ರಥ-ರೂಪಕದಂತೆ, ಶರೀರ-ಇಂದ್ರಿಯಗಳೇ ರಥ-ಕುದುರೆಗಳು; ಮನೋ-ಬುದ್ಧಿಗಳು ಲಗಾಮು-ಸಾರಥಿಗಳು; ಆತ್ಮನೇ ರಥಿ.
ಕುದುರೆಗಳು ಸುಮ್ಮನೆ ಕೂರವು. ಅವುಗಳಿಗೆ ಸಂಚಾರ ಬೇಕೇ ಬೇಕು. ಇಲ್ಲದಿದ್ದಲ್ಲಿ ಅವಕ್ಕೆ ಬೇಗನೇ ಮುಪ್ಪು ಆವರಿಸಿಬಿಡುವುದು. ಇಂದ್ರಿಯಗಳೂ ಹಾಗೆಯೇ. ಇಂದ್ರಿಯಗಳನ್ನು ಸುಮ್ಮನೆ ಕುಳಿತುಕೊಳ್ಳಿ - ಎನ್ನಲಾಗುವುದೇ? ನಿದ್ರಾವಸ್ಥೆಯೊಂದನ್ನು ಬಿಟ್ಟರೆ ಸದಾ ಕಾರ್ಯ-ರಾಶಿಯಲ್ಲಿ ಮುಳುಗಿರತಕ್ಕವು, ಅವು. ಅದು ಅವುಗಳ ಸಹಜ-ಪ್ರವೃತ್ತಿ. ಹೋಗಬಾರದೆಡೆಗೆ ಅವುಗಳು ಹೋಗದಿರಲು ಲಗಾಮು ಬೇಕು, ಸರಿಯೇ; ಆದರೆ ಅವನ್ನು ಉಪವಾಸ ಕೆಡವುವಂತಿಲ್ಲ. ಹೊಟ್ಟೆಗೆ ಹಾಕದಿದ್ದರೆ ಹೇಗೆ ನಾವು ವಿಲವಿಲ ಒದ್ದಾಡುವಂತಾಗುತ್ತದೋ ಹಾಗೆಯೇ ಇಲ್ಲೂ. ಚಟುವಟಿಕೆಯಿಂದಿರಲೇ ಸದಾ ಇಷ್ಟಪಡುವಂತಹವರಿಗೆ ಕಷ್ಟದ ಅನಶನವನ್ನು ಹೇರಿ ಚಡಪಡಿಕೆ-ಸಿಡಿಮಿಡಿಗಳಾಗುವಂತೆ ಮಾಡುವಂತಿಲ್ಲ.

ದೇಹ-ಇಂದ್ರಿಯ-ಮನಸ್ಸು-ಬುದ್ಧಿ - ಇವುಗಳಿಗೆ ಆಹಾರ ಕೊಡುವುದು ಸರಿಯೇ; ಹಾಗೆಯೇ ಜೀವಿಗೂ ಆಹಾರವು ಬೇಕು; ಆತ್ಮನಿಗೆ ಸಲ್ಲುವ ಆಹಾರವೇ ಅಧ್ಯಾತ್ಮ. ವಾಲ್ಮೀಕಿ-ರಾಮಾಯಣದಲ್ಲಿ ಇಂದ್ರಿಯ-ತೃಪ್ತಿಯನ್ನುಂಟುಮಾಡುವ ಅಂಶಗಳೂ ಇವೆ. ಕೃತಿಯ ಪಾಠ್ಯ-ಗೇಯಗಳಲ್ಲಿಯ ಮಧುರತೆಯೆಂಬುದು ನಾಲಿಗೆ-ಕಿವಿಗಳಿಗೊದಗುವ ಸಂತೋಷವನ್ನು ಹೇಳುತ್ತದೆ. ಮನೋ-ಹೃದಯಗಳಿಗೆ ಹ್ಲಾದವನ್ನುಂಟುಮಾಡುವ ಪರಿಯಲ್ಲೂ ಕಾವ್ಯ-ರಚನೆಯಾಗಿದೆ. ಶಬ್ದಾಲಂಕಾರ-ಅರ್ಥಾಲಂಕಾರಮಯವಾದ ಭಾಷೆಯೇ ರಂಜಕವಾಗಿದೆ. ಭಾವ-ರಸಗಳ ವಿಲಾಸವಿದೆ. ತತ್ತ್ವಮಯವಾದ ಕಥೆಯು ಮನೋಬುದ್ಧಿಗಳಿಗೆ ಆಳವಾದ ಸ್ತರದಲ್ಲಿ ರೋಚಕವಾಗಿದ್ದು ತುಷ್ಟಿಪ್ರದವಾಗಿದೆ. ಇದಲ್ಲದೆ, ಶಾಂತರಸಕ್ಕೆ ಪೋಷಕವಾದ ಸಂನಿವೇಶ-ವಿಶೇಷಗಳಿಂದ ಆತ್ಮ-ಸಂತೋಷವೂ ಲಭ್ಯವಾಗಿದೆ.

ಹೀಗೆ ರಾಮನಿಗಷ್ಟೇ ಆಹಾರ, ಕುದುರೆಗಳಿಗಿಲ್ಲ - ಎಂದು ಮಾಡದೆ, ಕುದುರೆಗಳಿಗೂ ಆಹಾರ, ಅವುಗಳ ಮೇಲೆ ಬಂದವರಿಗೂ ಆಹಾರ - ಎನ್ನುವಂತೆ, ಇಂದ್ರಿಯ-ಇಂದ್ರಿಯಾತೀತಗಳೆರಡರ ಸಮಾರಾಧನೆಯನ್ನೂ ಮಾಡಿಕೊಡುವ ಕಾವ್ಯವಾಗಿ ಗೋಚರವಾಗುತ್ತದೆ, ರಾಮಾಯಣ.

ಸೂಚನೆ: 31/08/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.