ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಇದೋ ಬಂದಿತು ದೀಪೋತ್ಸವ, ಈ ಬಾರಿಯ ಮಹಾದೀಪೋತ್ಸವ!
೨೦೨೫ರ ಅಯೋಧ್ಯಾದೀಪೋತ್ಸವವು (ಅಕ್ಟೋಬರ್ ೧೯) ಗಿನ್ನಿಸ್ ದಾಖಲೆಗಳಲ್ಲಿ ಸೇರಲಿರುವುದು. ಏಕೆ?
ನಿಮಗೆ ಹದಿನಾಲ್ಕರ ಮಗ್ಗಿ ಬರುತ್ತದೆಯೇ? ಇದೋ ನೋಡಿ. ರಾವಣ ಸಂಹಾರದೊಂದಿಗೆ ಹದಿನಾಲ್ಕು ವರ್ಷ ವನವಾಸ ಮುಗಿಸಿ ಬಂದರಲ್ಲವೇ ರಾಮ-ಸೀತೆ-ಲಕ್ಷ್ಮಣರು ಅಯೋಧ್ಯೆಗೆ? ಹಿಂದಿರುಗಿ ಬಂದಂದು ಅದೆಷ್ಟು ಸಂಭ್ರಮವಿದ್ದಿತೋ!
ಈ ಬಾರಿ ೨೮ ಲಕ್ಷ ದೀಪಗಳು; ಸರಯೂನದೀತೀರದ ೫೬ ಘಟ್ಟಗಳಲ್ಲಿ (೧೪*೨, ೧೪*೪)! ಈ ಪ್ರಮಾಣದ ಜಗಮಗಾಯಿಸುವ ದೀಪಗಳ ಹಬ್ಬವು ವಿಶ್ವದ ಇತಿಹಾಸದಲ್ಲೇ ಇದ್ದಿರಲಾರದು. ರಾಷ್ಟ್ರವೇ ಸಂಭ್ರಮಿಸುವ ಹಬ್ಬವಿದು. ಅಂದಲ್ಲಿಯ ದೀಪಮಾಲೆಗಳೇನು, ನದಿಯಲ್ಲಿ ಅವುಗಳ ಪ್ರತಿಫಲನವೇನು, ಮಂತ್ರ-ಸ್ತೋತ್ರ-ಘೋಷಗಳೇನು - ಎಲ್ಲವೂ ಕಣ್ಣು-ಕಿವಿಗಳಿಗೆ ಹಬ್ಬವೇ!
ಇಲ್ಲಿರಲಿ, ಅಮೆರಿಕದ ನ್ಯೂಯಾರ್ಕ್-ನ್ಯೂಜರ್ಸಿ-ಪೆನ್ಸಿಲ್ವೇನಿಯಾಗಳಲ್ಲೂ ಇದರಾಚರಣೆಗಾಗಿ ರಜೆಯುಂಟು. ನಮ್ಮ ಸಂಸ್ಕೃತಿಯೊಳಗೇ ಜನಿಸಿದ ಬೌದ್ಧ-ಜೈನ-ಸಿಕ್ಖಮತಗಳಲ್ಲೂ ಇದರ ಆಚರಣೆಯುಂಟು.
ಏನು ದೀಪಾವಲಿಯೆಂದರೆ? ಆವಲಿಯೆಂದರೆ ಸಾಲು. ದೀಪಗಳ ಸಾಲೇ ದೀಪಾವಲಿ. ಕಾರ್ತಿಕಮಾಸವೇ ದೀಪಗಳನ್ನು ಬೆಳಗಿಸುವ ಮಾಸ. ಮಾಸದ ಕೊನೆಯಲ್ಲಿ ಶಿವದೀಪೋತ್ಸವ/ವಿಷ್ಣುದೀಪೋತ್ಸವಗಳು. ದೀಪಾವಲಿಯು ನಾಲ್ಕೈದು ದಿನಗಳ ಹಬ್ಬ. ವಿಷ್ಣು-ಲಕ್ಷ್ಮೀ-ಶಿವ-ಯಮ-ಕುಬೇರ ಮುಂತಾದವರಿಗಿಲ್ಲಿ ಬೆಳಕಿನಾರತಿಯುಂಟು. ಮದ್ದಿನ ಪಟಾಕಿಗಳ ಬಾಣ-ಬಿರುಸುಗಳ ಬೆಳಕು-ಸದ್ದುಗಳ ಸಡಗರವೆಲ್ಲೆಡೆಯುಂಟು.
ತ್ರಯೋದಶಿಯಂದು ಯಮಪ್ರೀತಿಗಾಗಿ ಮನೆಯಾಚೆ ಹಚ್ಚುವ ದೀಪಗಳು ಅಪಮೃತ್ಯುನಿವಾರಕ. ಚತುರ್ದಶಿ-ಅಮಾವಾಸ್ಯೆಗಳ ರಾತ್ರಿ ಉರಿಯುವ ದೀಪಿಕೆ(ಕೊಳ್ಳಿ)ಗಳ ಉಜ್ಜ್ವಲಜ್ಯೋತಿಸ್ಸಿನಿಂದ ಪಿತೃಗಳಿಗೆ ಸದ್ಗತಿಪ್ರಾಪ್ತಿ .ಅಮಾವಾಸ್ಯೆಯಂದಂತೂ ಮನೆತುಂಬ ದೀಪಗಳು. ಪಾಡ್ಯಮಿಯಂದು ಬಲೀಂದ್ರಪೂಜೆಯಲ್ಲಿ ಧೂಪ-ದೀಪ-ನೈವೇದ್ಯಗಳು. ಅಮಾವಾಸ್ಯೆಯ ಕಗ್ಗತ್ತಲ ರಾತ್ರಿಯಲ್ಲಿ ಬೆಳಗುವ ಬೆಳಕುಗಳ ಸಾಲು ನಯನೋತ್ಸವವೇ ಸರಿ.
ನಿತ್ಯಗಟ್ಟಲೆಯಲ್ಲೂ ಭಾರತೀಯರಲ್ಲಿ ದೀಪ ಹಚ್ಚದ ಮನೆಯುಂಟೇ? ಪೀಡಾಪರಿಹಾರಕ್ಕಾಗಿ ಎಳ್ಳೆಣ್ಣೆಯ ದೀಪ; ಅಭ್ಯುದಯ-ನಿಃಶ್ರೇಯಸಗಳಿಗಾಗಿ ತುಪ್ಪದ ದೀಪ.
ದೀಪವು ಜ್ಞಾನದ ಪ್ರತೀಕ. ಇದರ ವಿರುದ್ಧವಾದ ತಮಸ್ಸೆಂದರೆ ಕತ್ತಲೆಯೂ ಅಜ್ಞಾನವೂ ಆಗುವುದು. ತಮಸ್ಸಿನಿಂದ ಜ್ಯೋತಿಸ್ಸಿನತ್ತ ಒಯ್ಯೆಂಬುದೇ ಭಾರತೀಯರೆಲ್ಲರ ನಿತ್ಯಪ್ರಾರ್ಥನೆ. ತಮಸ್ಸನ್ನೇ ಪ್ರೀತಿಸುವವರೆಂದರೆ ಭೂತ-ಪ್ರೇತಗಳು, ಗೂಬೆ-ಜಿರಲೆಗಳು, ಕಳ್ಳ-ಕಾಕರುಗಳು. ಹಚ್ಚಿದ ದೀಪವನ್ನು ಆರಿಸುವುದಂತೂ ಅತ್ಯಂತ ಅಸಂಸ್ಕೃತರ ಲಕ್ಷಣವೇ ಸರಿ.
ಭಗವಂತನೇ ಮೊಟ್ಟಮೊದಲ ದೀಪ. ಜ್ಯೋತಿಸ್ಸುಗಳಿಗೂ ಆತನು ಜ್ಯೋತಿಸ್ಸು – ಎನ್ನುತ್ತದೆ ಗೀತೆ. ಭಗವಂತನಿಗೆ ಬೆಳಗುವ ದೀಪವು ಅಂಗುಷ್ಠ-ಪರ್ವದಷ್ಟಿರಬೇಕು, ಮಲ್ಲಿಗೆಯ ಮೊಗ್ಗಿನಂತಿರಬೇಕು – ಎಂದು ಶ್ರೀರಂಗಮಹಾಗುರುಗಳು ತಿಳಿಸಿರುವರು.
ಈಚೆಗೆ ದೇವಸ್ಥಾನಗಳಲ್ಲಿ ಹಾಗೂ ಮನೆಗಳಲ್ಲೂ ಪುಳಕ್-ಪುಳಕ್ ಎಂದು ಹತ್ತಿ-ಆರಿ-ಹತ್ತಿ-ಆರುವ ವಿದ್ಯುದ್ದೀಪಗಳನ್ನು ಹಚ್ಚುವುದುಂಟು. ಅದಾಗಲಿ, ಕಣ್ಣುಕೋರೈಸುವ ದೀಪವಾಗಲಿ, ಪ್ರಶಸ್ತವಲ್ಲ; ಮೊದಲನೆಯದು ಚಾಂಚಲ್ಯವರ್ಧಕ; ಎರಡನೆಯದು ನೇತ್ರ-ಚಿತ್ತಗಳಿಗೆ ಶಮವನ್ನು ತರುವುದಲ್ಲ - ಎಂಬ ಮರ್ಮಗಳನ್ನೂ ಅವರು ತಿಳಿಸಿದ್ದರು.
ದೇವದೇವನಾದ ಜಗತ್ಪತಿಯೊಬ್ಬನೇ ಜ್ಯೋತಿರ್ಮಯನೆಂದಲ್ಲ. ಎಲ್ಲ ದೇವತೆಗಳೂ ಬೆಳಗುವವರೇ. ದೇವ ಎಂಬ ಪದದ ಮೂಲ ಸಂಸ್ಕೃತದ ದಿವ್-ಧಾತು. ಬೆಳಗುವುದು ಎಂದದರರ್ಥ. ದೇವರೆನ್ನಲು ಗ್ರೀಕ್-ಲ್ಯಾಟಿನ್-ಗಳಲ್ಲಿರುವ ಥಿಯೋಸ್(theos) ಹಾಗೂ ಡೇಯುಸ್ (deus) ಎಂಬ ಪದಗಳು ಸಹ ಸಂಸ್ಕೃತಜನ್ಯಗಳೇ!
ಬೈಬಲ್ಲಿನಲ್ಲೂ ದೇವರನ್ನು ಬೆಳಕೆಂದು ಕರೆದಿದೆ, ಸರಿಯೇ. ಮ್ಯಾಕ್ಡೋನೆಲ್ ಎಂಬ ಸಂಸ್ಕೃತ-ವಿದ್ವಾಂಸನು ಹೇಳಿರುವಂತೆ, ಭಗವಂತನನ್ನು ಬೆಳಕೆಂದು ಜಗತ್ತಿನ ಇತಿಹಾಸದಲ್ಲೇ ಮೊಟ್ಟಮೊದಲು ಸಾರಿರುವುದು ಹಿಂದೂಗಳ ವೇದಗಳೇ.
ನರಕಚತುರ್ದಶಿಯಂದು ಆಚರಿಸುವ ಹಬ್ಬವೂ ಅಂತರ್ಜ್ಯೋತಿಯನ್ನು ಆರಾಧಿಸುವ ಹಬ್ಬವೇ. ನರಕಾಸುರನ ನಗರವು ಪ್ರಾಗ್-ಜ್ಯೋತಿಷ. ಪ್ರಾಗ್ಜ್ಯೋತಿಷವೆಂದರೆ ಹೊರಬೆಳಕು, ಅರ್ಥಾತ್ ಇಂದ್ರಿಯಗಳ ಬೆಳಕು; ಶ್ರೀಕೃಷ್ಣನು ಪ್ರತ್ಯಗ್-ಜ್ಯೋತಿಸ್ಸು - ಎಂದರೆ ಒಳಬೆಳಕು. ಇಂದ್ರಿಯಗಳ ಬೆಳಕಿನಲ್ಲಿ/ಇಂದ್ರಿಯ-ಸುಖಗಳಲ್ಲಿ ಮಾತ್ರವೇ ರಮಿಸುವವರು ತುಚ್ಛರು; ಕುತ್ಸಿತ ನರನನ್ನೇ "ನರಕ"ನೆನ್ನುವುದು; ಮಾನವನ ಮಾನವತ್ವವಿರುವುದಾದರೂ, ಮನುಷ್ಯಜನ್ಮಕ್ಕೇ ಮೀಸಲಾಗಿರುವ ಅಂತರ್ಜ್ಯೋತಿಯ ದರ್ಶನದ ಪರಮಸುಖವನ್ನು ಅನುಭವಿಸುವುದರಲ್ಲೇ - ಎಂಬಿವೆಲ್ಲವನ್ನೂ ಶ್ರೀರಂಗಮಹಾಗುರುಗಳು ವಿವರಿಸಿರುವರು.
ದೀಪವನ್ನು ಹಚ್ಚುವುದು ದೇವರಿಗೇನೋ ಉಪಕಾರವಾಗಲೆಂದಲ್ಲ. ಭಗವಂತನೇ ದೀಪ-ಸ್ವರೂಪನೆಂಬ ತತ್ತ್ವವನ್ನು ನಾವು ಜ್ಞಾಪಿಸಿಕೊಳ್ಳುವಂತೆ ನಮ್ಮ ಮೂಲದ ಸ್ಮರಣೆಯುಂಟುಮಾಡಿಸುವ ಅಭಿಜ್ಞಾನವದು. ಬೆಳಗುವ ಅಗ್ನಿಯಿಂದ ಬೆಳಕಿನ ಕಿಡಿಗಳು ಹೊಮ್ಮುವಂತೆ, ಭಗವಂತನಿಂದಲೇ ಹೊಮ್ಮಿದ ಜೀವಗಳು ನಾವು. ಹೀಗೆ ನಾವು ನಮ್ಮ ಮೂಲದತ್ತ ಸಾಗುವಂತಾಗಿಸುವ ದೀಪಗಳು ಹೀಗೆ ಜ್ಞಾಪಕಗಳೂ ಕಾರಕಗಳೂ ಹೌದು.
ಭಗವಂತನಿಗಾಗಿ ಹಚ್ಚಿದ ಆ ಒಂದು ಮೂಲದೀಪದಿಂದಲೇ ಉಳಿದೆಲ್ಲ ದೀಪಗಳನ್ನೂ ಹಚ್ಚಿಕೊಳ್ಳುವುದು: ಇದನ್ನೇ ದೀಪಾದ್ ದೀಪಾಂತರಂ ಯಥಾ - ಎನ್ನುವುದು. ಎಲ್ಲರ ಮನೆಗಳೂ ಮನಗಳೂ ಹೊರಗೆ ಹರ್ಷೋಲ್ಲಾಸಗಳಿಂದಲೂ, ಮತ್ತೂ ಮಿಗಿಲಾಗಿ ಒಳಗೆ ಆತ್ಮಜ್ಯೋತಿಯ ಪ್ರಕಾಶದಿಂದಲೂ, ಬೆಳಗಲೆಂದು ಪ್ರಾರ್ಥಿಸೋಣವೇ?
ಸೂಚನೆ: 18/10//2025 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.