Monday, March 10, 2025

ವ್ಯಾಸ ವೀಕ್ಷಿತ 127 ಕೃಷ್ಣನ ಚಕ್ರಾಯುಧ-ಪ್ರಯೋಗ (Vyaasa Vikshita 127)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಮಾಧವನಿಂದಲೂ ಅರ್ಜುನನಿಂದಲೂ ದೇವತೆಗಳು ಓಡಿಸಲ್ಪಟ್ಟದ್ದನ್ನು ಕಂಡರು, ಆಕಾಶದಲ್ಲಿ ನೆರೆದಿದ್ದ ದೇವತೆಗಳು; ಕಂಡು ಆಶ್ಚರ್ಯಪಟ್ಟರು ಸಹ.

ರಣದಲ್ಲಿ ಮತ್ತೆ ಮತ್ತೆ ಅವರಿಬ್ಬರ ಪರಾಕ್ರಮವನ್ನು ಮನಗಂಡ ಇಂದ್ರನು ಪರಮ-ಸಂತೋಷವನ್ನೇ ಪಟ್ಟನು; ಹಾಗೂ ಮತ್ತೆಯೂ ಅವರೊಂದಿಗೆ ಹೋರಿದನು. ಆಮೇಲೆ ಇಂದ್ರನು ದೊಡ್ಡದಾದ ಅಶ್ಮ-ವರ್ಷವನ್ನು, ಎಂದರೆ ಕಲ್ಲುಗಳ ಮಳೆಯನ್ನು, ಕರೆದನು. ಏಕೆಂದರೆ ಆತನಿಗೆ ಕುತೂಹಲ: ಸವ್ಯಸಾಚಿಯ, ಎಂದರೆ ಅರ್ಜುನನ, ಪರಾಕ್ರಮವೆಂತಹುದು? - ಎಂಬುದನ್ನು ಅರಿಯಬೇಕೆಂದು. ಇತ್ತ ಅತ್ಯಂತ ಅಮರ್ಷಗೊಂಡ ಅರ್ಜುನನೂ ಸಹ ಅದಕ್ಕೆ ಪ್ರತಿಯಾಗಿ ಬಾಣಗಳ ಮಳೆಯನ್ನೇ ಕರೆದನು.

ಮಂದರ-ಪರ್ವತದಿಂದ ಒಂದು ದೊಡ್ಡ ಶಿಖರವನ್ನೇ ತನ್ನೆರಡೂ ಕೈಗಳಿಂದ ಇಂದ್ರನು ಕಿತ್ತುಕೊಂಡನು. ಮರಗಳೊಂದಿಗೇ ಅದನ್ನು ಅರ್ಜುನನತ್ತ ಬೀಸಿದನು - ಅರ್ಜುನನನ್ನು ಕೊಂದುಬಿಡಲೆಂದು! ಅದಕ್ಕೆ ಪ್ರತಿಯಾಗಿ ಅರ್ಜುನನೂ, ತುದಿಯಲ್ಲಿ ಜ್ವಲಿಸುವಂತಹವೂ ನೇರವಾಗಿ ಹೋಗತಕ್ಕವೂ ವೇಗಸಂಪನ್ನವೂ ಆಗಿರುವ ತನ್ನ ಬಾಣಗಳಿಂದ ಆ ಗಿರಿಯ ಶೃಂಗವನ್ನು ಸಾವಿರ ಹೋಳಾಗಿ ವಿಧ್ವಂಸನ ಮಾಡಿದನು. ಛಿನ್ನಭಿನ್ನವಾಗುತ್ತಿದ್ದ ಆ ಗಿರಿಯು ಆಗ ಹೇಗೆ ತೋರಿತು? ಆಕಾಶದಿಂದ ಬಿದ್ದುಹೋಗುತ್ತಿರುವ ಸೂರ್ಯ-ಚಂದ್ರ-ಗ್ರಹಗಳ ಹಾಗದು ತೋರಿತು! ಹಾಗೆ ಆ ಮಹಾಶೈಲವು ಬೀಳುತ್ತಿರಲು, ಅದರ ಶಿಖರವು ಹೊಡೆದ ಪರಿಣಾಮವಾಗಿ, ಖಾಂಡವವನದಲ್ಲಿ ಮನೆಮಾಡಿದ್ದ ಹಲವಾರು ಪ್ರಾಣಿಗಳು ಮರಣಹೊಂದಿದವು.

ಬೆಟ್ಟವು ಬಿದ್ದಿತಾಗಿ, ಆಗ ಭಯಗೊಂಡದ್ದು ಬರೀ ಪ್ರಾಣಿಗಳಲ್ಲ. ದಾನವರು, ಯಕ್ಷರು, ನಾಗರುಗಳಲ್ಲದೆ, ತರಕ್ಷುಗಳು ಎಂದರೆ ಚಿರತೆಗಳು, ಕರಡಿಗಳು - ಈ ಎಲ್ಲಾ ವನ್ಯಜೀವಿಗಳೂ ಸೇರಿದ್ದವು. ಅಲ್ಲದೆ ಮದಜಲ ಸುರಿಸುವ ಆನೆಗಳು, ಶಾರ್ದೂಲಗಳು, ಕೇಸರಗಳಿಂದ ತುಂಬಿದ ಸಿಂಹಗಳು, ಮೃಗಗಳು, ಮಹಿಷಗಳು ಹಾಗೂ ನೂರಾರು ಪಕ್ಷಿಗಳು, ಹಾಗೂ ಇನ್ನೂ ನಾನಾ ಪ್ರಾಣಿಸಮೂಹಗಳು ತೀವ್ರವಾಗಿ ಉದ್ವೇಗಗೊಂಡವುಗಳಾಗಿ ಅತ್ತಿತ್ತ ಹರಿದಾಡಿದುವು.

ಜ್ವಲಿಸುತ್ತಿದ್ದ ಆ ಕಾಡನ್ನೂ ಹಾಗೂ ಆಯುಧಗಳನ್ನು ಮೇಲೆತ್ತಿ ಹಿಡಿದಿದ್ದ ಕೃಷ್ಣಾರ್ಜುನರನ್ನೂ ಕಂಡವು. ಉತ್ಪಾತಶಬ್ದ ಹಾಗೂ ಆರ್ತನಾದದ ಶಬ್ದಗಳಿಂದ ಬೆಚ್ಚಿ ಬೆದರಿರುವಂತೆ ನಿಂತಿದ್ದವು. ಅನೇಕ ಪ್ರಕಾರಗಳಲ್ಲಿ ಸುಟ್ಟುಹೋಗುತ್ತಿದ್ದ ಆ ಕಾಡನ್ನು ಕಂಡು, ಹಾಗೂ ಅಸ್ತ್ರಗಳನ್ನು ಅಭ್ಯುದ್ಯತ ಮಾಡಿದ್ದ, ಎಂದರೆ ಮೇಲೆತ್ತಿ ಹಿಡಿದಿದ್ದ, ಕೃಷ್ಣನನ್ನು ಕಂಡು ಉಲ್ಬಣವಾದ ಆರ್ತಧ್ವನಿಯನ್ನು ಅವು ಮಾಡಿದವು. ಆ ರೌದ್ರವಾದ ನಾದದಿಂದಲೂ, ಅಗ್ನಿಯ ಆ ಧ್ವನಿಯಿಂದಲೂ ಕೂಡಿ, ಉತ್ಪಾತಸಮಯದ ಮೋಡಗಳಿಂದಾಗುವ ಧ್ವನಿಯಿಂದ ಆಕಾಶವು ಕೂಡಿದಂತಿತ್ತು.

ಆಗ ಅವುಗಳ ನಾಶಕ್ಕಾಗಿ, ಮಹಾಬಾಹುವಾದ ಶ್ರೀಕೃಷ್ಣನು ಸ್ವತೇಜಸ್ಸಿನಿಂದಲೇ ಹೊಳೆಹೊಳೆಯುತ್ತಿದ್ದ ಅತ್ಯುಗ್ರವಾದ ಚಕ್ರಾಯುಧವನ್ನು ಪ್ರಯೋಗಿಸಿದನು. ಆತನ ಚಕ್ರಪ್ರಯೋಗದಿಂದ ನೂರಾರು ತುಂಡುಗಳಾಗಿ ಕತ್ತರಿಸಲ್ಪಟ್ಟ ದಾನವಾದಿಗಳು ಒಂದೇ ಕ್ಷಣದಲ್ಲಿಯೇ ಬೆಂಕಿಯೊಳಗುರುಳಿದರು. ಶ್ರೀಕೃಷ್ಣನ ಚಕ್ರಾಯುಧದಿಂದ ಸೀಳಲ್ಪಟ್ಟ ಆ ದೈತ್ಯರು, ಮೇದಸ್ಸು-ರಕ್ತಗಳಿಂದ ತೊಯ್ದವರಾಗಿ, ಸಂಧ್ಯಾಕಾಲದ ಮೋಡಗಳಂತೆ ಕಂಡರು.

ಪಿಶಾಚರನ್ನೂ ಪಕ್ಷಿಗಳನ್ನೂ ನಾಗರನ್ನೂ ಪಶುಗಳನ್ನೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕೊಲ್ಲುತ್ತಾ ನಡೆಯುತ್ತಿದ್ದ ಅರ್ಜುನನು ಕಾಲಪುರುಷನಂತೆ ಅಲ್ಲಿ ತೋರುತ್ತಿದ್ದನು. ಶತ್ರು-ನಾಶಕನಾದ ಕೃಷ್ಣನು ಒಂದು ಕಡೆ ಮತ್ತೆ ಮತ್ತೆ ಚಕ್ರಾಯುಧವನ್ನು ಎಸೆಯುತ್ತಿದ್ದುದೂ, ಆ ಚಕ್ರಾಯುಧವಾದರೂ ಅನೇಕಾನೇಕ ಪ್ರಾಣಿಗಳನ್ನು ಸಂಹಾರ ಮಾಡಿ ಹಿಂದಿರುಗುತ್ತಾ ಆತನ ಕೈಯನ್ನೇ ಮತ್ತೆ ಮತ್ತೆ ಬಂದು ಸೇರುತ್ತಿದ್ದುದೂ ಕಾಣಬರುತ್ತಿತ್ತು. 

ಸೂಚನೆ : 9/3/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಪ್ರಶ್ನೋತ್ತರ ರತ್ನಮಾಲಿಕೆ 6

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೫ - ಮಾನವನು ಅತಿಮುಖ್ಯವಾಗಿ ಮಾಡಬೇಕಾದ ಕಾರ್ಯ ಯಾವುದು ?

ಉತ್ತರ -  ತನಗೂ ಮತ್ತು ಪರರಿಗೂ ಹಿತವಾಗುವ ಕಾರ್ಯ. 


ಈ ಸೃಷ್ಟಿಯಲ್ಲಿ ಇರುವ ಎಂಭತ್ತ ನಾಲ್ಕು ಲಕ್ಷ ಜೀವ ಜಾತಿಗಳ ಪೈಕಿ ಮಾನವಜನ್ಮಕ್ಕೆ ಅತಿವಿಶೇಷವಾದ ಸ್ಥಾನ ಉಂಟು. ಹಾಗಾಗಿ ಮಾನವನಾಗಿ ಹುಟ್ಟನ್ನು ಪಡೆದ ಬಳಿಕ ಅತ್ಯಂತ ಮುಖ್ಯವಾಗಿ ಮಾಡಬೇಕಾದ ಕೆಲಸ ಯಾವುದು? ಎಂಬುದು ಇಲ್ಲಿನ ಪ್ರಶ್ನೆಯಾಗಿದೆ. ಅಂದರೆ ಅವನು ಎಂತಹ ಜೀವನವನ್ನು ಸಾಗಿಸಬೇಕಾಗಿದೆ? ಎಂಬುದು ಈ ಪ್ರಶ್ನೆಯ ಅರ್ಥವಾಗಿದೆ. ಅದಕ್ಕೆ ಉತ್ತರ ಹೇಗಿದೆ- ಯಾರು ತನಗೂ ಮತ್ತು ಪರರಿಗೂ ಹಿತವಾಗುವ ರೀತಿಯಲ್ಲಿ ಕೆಲಸ ಮಾಡ್ತಾನೋ, ಅವನೇ ನಿಜವಾಗಿಯೂ ಮಾನವನಾಗಬಲ್ಲ; ಅಂದರೆ ಅವನು ಮಾಡುವ ಕಾರ್ಯವು ತನಗೂ ಮತ್ತು ಪರರಿಗೂ ಅನುಕೂಲವಾಗುವ ರೀತಿಯಲ್ಲಿ ಇರಬೇಕು ಎಂಬುದಾಗಿ. ಒಂದು ಸುಭಾಷಿತ ಹೀಗೆ ಇದೆ "ಪರೇಷಾಮ್  ಉಪಕಾರಾರ್ಥಂ ಯೋ ಜೀವತಿ ಸ ಜೀವತಿ" ಎಂಬುದಾಗಿ ಅಂದರೆ ಯಾವನ ಜೀವನವು ಪರೋಪಕಾರಕ್ಕಾಗಿ ಇರುತ್ತದೆಯೋ ಅವನು ನಿಜವಾಗಿ ಜೀವನ ಮಾಡುತ್ತಿದ್ದಾನೆ ಎಂದರ್ಥ. ಮನುಜನ ಜೀವನಕ್ಕೂ ಮತ್ತು ಉಳಿದ ಜೀವಿಗಳ ಜೀವನಕ್ಕೂ ಇಷ್ಟು ವ್ಯತ್ಯಾಸವನ್ನು ಕಾಣಬಹುದು, .


ಏನೆಂದರೆ ಉಳಿದ ಜೀವಿಗಳ ಬದುಕು ಸಹಜವಾಗಿಯೇ ಸೃಷ್ಟಿಯ ಸಮತೋಲನವನ್ನು ಕಾದುಕೊಳ್ಳುವ ರೀತಿಯಲ್ಲಿ ಇರುತ್ತದೆ. ಅದು ಅಪ್ರಯತ್ನ ಪೂರ್ವಕವಾಗಿ ಇರುತ್ತದೆ. ಅವುಗಳಿಗೆ ಈ ಪ್ರಪಂಚದ ಆಗುಹೋಗುಗಳನ್ನು ನಿಯಂತ್ರಿಸಬಲ್ಲ ಸಾಮರ್ಥ್ಯವಿರುವುದಿಲ. ಆದರೆ ಮನುಷ್ಯನ ಜೀವನ ಹಾಗಲ್ಲ; ಅವನು ಈ ಸೃಷ್ಟಿಯ ಮೇಲೆ ತನ್ನ ಕೈಯನ್ನು ಆಡಿಸಬಲ್ಲ. ತನ್ನ ಬುದ್ಧಿಯ ಬಲದಿಂದ ಅವನು ಈ ಪ್ರಕೃತಿಗೆ ಹೇಗೆ ಹಿತವಾಗುವ ಕಾರ್ಯವನ್ನು ಮಾಡಬಹುದೋ ಅಂತೆಯೇ ಅಹಿತವಾಗುವ ಕಾರ್ಯವನ್ನೂ ಮಾಡಬಹುದಾಗಿದೆ. ಅಂತಹ ವಿವೇಕ ಮತ್ತು ಅವಿವೇಕವು ಎರಡೂ ಮನುಷ್ಯನಿಗೆ ಬಿಟ್ಟು ಬೇರೆ ಯಾವ ಜೀವಿಗಳಿಗೂ ಇರುವುದಿಲ್ಲ. ಆತ ತನ್ನ ಸಾಮರ್ಥ್ಯದಿಂದ ಪ್ರಪಂಚದ ಮೇಲೆ ಹಿಡಿತ ಸಾಧಿಸಬಲ್ಲ. ಆದ್ದರಿಂದಲೇ ಈ ಪ್ರಶ್ನೆಯಲ್ಲಿ ಎಚ್ಚರಿಕೆಯನ್ನು ಕೊಟ್ಟಂತೆ ಕಾಣುತ್ತದೆ. 


ಮಾನವ ಕೇವಲ ಸ್ವಾರ್ಥಕ್ಕಾಗಿ ಮಾತ್ರ ಜೀವಿಸಿದರೆ ಪ್ರಪಂಚಕ್ಕೆ ಸಾಲದು; ಆತ ಪ್ರಪಂಚದ ಪ್ರತಿಯೊಂದು ಜೀವವೂ ಸ್ವತಂತ್ರವಾಗಿ, ನಿರ್ಭೀತವಾಗಿ ಜೀವನ ಮಾಡುವಂತಾಗಬೇಕು. ಆ ರೀತಿಯಲ್ಲಿ ಮಾನವನ ಜೀವಿತ ಇರುವಂತೆ ನೋಡಿಕೊಳ್ಳಬೇಕಾದುದು ಮಾನವನದ್ದೇ ಹೊಣೆಗಾರಿಕೆಯೂ ಹೌದು. ಮಾನವನ ಜೀವನ ಕೇವಲ ತನ್ನ ಉದ್ಧಾರಕ್ಕಾಗಿ ಮಾತ್ರ ಅಲ್ಲ, ತಾನು ಉದ್ಧಾರವಾಗುವುದರ ಜೊತೆಯಲ್ಲಿ ಎಲ್ಲ ಜೀವಜಾತಿಗಳನ್ನು ಒಗ್ಗೂಡಿಸಿಕೊಂಡು ಅವುಗಳಿಗೆ ಅನುಕೂಲವಾಗುವ ರೀತಿಯಲ್ಲಿ ಅವನ ಜೀವನ ಸಾಗಬೇಕಾದದ್ದು ಎಂಬುದು ಇದರ ಅರ್ಥ. ಹಾಗಾಗಿ ಯಾವ ಮನುಷ್ಯನು ಈ ರೀತಿಯಾಗಿ ಬದುಕುತ್ತಾನೋ ಅವನು ನಿಜವಾದ ಮನುಷ್ಯ ಎಂಬುದಾಗಿ ಕರೆಸಿಕೊಳ್ಳಬಲ್ಲ. ಇದಕ್ಕೆ ವಿರುದ್ಧವಾಗಿ ನಡೆದುಕೊಂಡಲ್ಲಿ ಅವನು ರಾಕ್ಷಸನಾಗುತ್ತಾನೆ ಉಳಿದ ಪ್ರಾಣಿಗಳಲ್ಲಿ ಸೌಮ್ಯಪ್ರಾಣಿಗಳು, ಕ್ರೂರಪ್ರಾಣಿಗಳು ಎಂಬುದಾಗಿ ಸೃಷ್ಟಿಸಹಜವಾಗಿ ಆ ಸ್ವಭಾವಕ್ಕೆ ಅನುಗುಣವಾಗಿ ವಿಭಾಗವನ್ನು ಕಾಣಬಹುದು. ಅವು ಬದುಕಿನುದ್ದಕ್ಕೂ ಅದೇ ಸ್ವಭಾವದ್ದಾಗಿರುತ್ತವೆ. ಸ್ವಭಾವಪರಿವರ್ತನೆ ಅಲ್ಲಿ ಅಸಾಧ್ಯ. ಆದರೆ ಮನುಷ್ಯನು ತನ್ನ ಸಜ್ಜನಿಕೆಯಿಂದ ಈ ಪ್ರಪಂಚದಲ್ಲಿ ಸಮತೋಲನವನ್ನು ಉಂಟುಮಾಡುವಂತೆ ಜೀವಿಸಲು ಸಾಧ್ಯ. ದುಷ್ಟನಾಗಿ ಅದನ್ನು ಕೆಡಿಸಲೂ ಸಾಧ್ಯ. ಹಾಗಾಗಿ ಮನುಷ್ಯನ ಸಮತೋಲನವಾದ ಬದುಕು ಹೇಗಿರಬೇಕೆಂದನ್ನು ಪ್ರಶ್ನೋತ್ತರ ಸಾರುತ್ತದೆ.



Saturday, March 8, 2025

ಕೃಷ್ಣಕರ್ಣಾಮೃತ 54 ಮರಣಕ್ಕೆ ಮುನ್ನವೇ ಮನದಟ್ಟಾಗಿರಬೇಕಾದದ್ದು (Krishakarnamrta 54)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ(lekhana@ayvm.in)

ಯಾವನ್ನ ಮೇ

ಸಾವು ಯಾರಿಗೆ ಭಯ ತರದು? ಸಾವು ಬಂದರೆ ನಾವು ಇಲ್ಲವಾಗುವೆವಲ್ಲವೆ? ತಾನಿರಬಾರದೆಂಬ ತವಕ ಯಾರಿಗೆ ಬಂದೀತು? ಕಣ್ಮರೆಯಾಗುವೆನೆಂಬ ಕಲ್ಪನೆಯೂ ಕ್ಲೇಶಕಾರಿಯೇ, ಅಸಹನೀಯವೇ ಆಗುವುದೇ.

ಮೇಲೆ ಹೇಳಿದುದೆಲ್ಲ ಸಾಧಾರಣರ ಸಾವಿನ ಬಗೆಗೆ. ಮಹಾತ್ಮರಿಗೂ ಭಯವಾಗಬಹುದು. ಆದರೆ ಕಾರಣ ಬೇರೆ. ಲೀಲಾಶುಕನಿಗೂ ಆತಂಕವೇ:  ಸಾವಿನತ್ತ ಸಾಗುವುದಕ್ಕೂ ಮೊದಲೇ ಒಂದು ಮುಖ್ಯವಾದ ಕೆಲಸವಾಗಬೇಕಾಗಿದೆ.

ಏಕೆ? ಸಾವಿನ ಸಮಯದಲ್ಲಿ ಸ್ಮರಣೆಯಾದರೇ ಸಾಕಲ್ಲವೆ? ಅಂತಕಾಲದ ಸ್ಮರಣೆಯ ಬಗ್ಗೆ ಭಗವದ್ಗೀತೆಯಲ್ಲಿಯೇ ಹೇಳಿಲ್ಲವೇ? – ಎಂದು ಕೇಳಬಹುದು. ಹೀಗೆಂಬುದಾಗಿ ಕೇಳುವುದು ಸುಲಭ. ಸಾವಿನ ಕ್ಷಣ ಹೇಗಿರುವುದೋ ಬಲ್ಲವರಾರು?

ಹಾಗೆನ್ನಬೇಕಿಲ್ಲ. ಕೊನೆಗಾಲದ ಕೆಲ ಲಕ್ಷಣಗಳನ್ನಂತೂ ಹೇಳಬಹುದು. ಏನವು? ಆಗಾಗುವ ತಾಪ ಹೀಗೆಂದು ವರ್ಣಿಸಲಾಗದಂತಹುದು. ಎಂದೇ ಅದನ್ನು "ಕೋಽಪಿ ತಾಪಃ" ಎನ್ನುತ್ತಾನೆ, ಕವಿ. ಆಗಿನ ನೋವು ಹೇಗಿರಬಹುದೆಂದು ಕಿಂಚಿತ್ತಾಗಿ ಸೂಚಿಸಬಹುದು. ಹೇಗೆ? ಎಲ್ಲ ಮರ್ಮ-ಸ್ಥಾನಗಳಿಗೂ ಘಾತವು ಆಗಾಗುವುದು. ಅದೂ ಸಾಧಾರಣವಾದ ಹೊಡೆತವಲ್ಲ. ದೃಢವಾದ ಅಭಿಘಾತವದು. ಯಾವುದೇ ಮರ್ಮಸ್ಥಾನಕ್ಕೆ ಏಟುಬಿದ್ದವ ತತ್ತರಿಸಿಹೋಗುತ್ತಾನೆ. ಹೊರಗಿನಿಂದ ಬೀಳುವ ಏಟಿಗೇ ಬೊಬ್ಬೆಯಿಡುವಂತಾಗುತ್ತದೆ. ಒಳಗಿನಿಂದಲೇ ಆಗುವ ಈ ಅತಿಶಯವಾದ ಅಭಿಘಾತದಿಂದ ಆಗುವ ಪರಿಣಾಮವಂತೂ ಅವಾಚ್ಯವೇ ಸರಿ. ಏಕೆ? ಆಗಾಗುವ ತಬ್ಬಿಬ್ಬು ಎಂತಹುದೆಂದರೆ ಏನಾಯಿತೆಂದೇ ಗೋಚರವಾಗುವುದಿಲ್ಲ. ಏನಾಗುತ್ತಿದೆಯೆಂಬುದನ್ನು ಪರಿಕಿಸಲಂತೂ ಆಗುವುದೇ ಇಲ್ಲ.

ಅಷ್ಟೇ ಅಲ್ಲ. ನಮ್ಮ ನಾನಾಂಗಗಳ ನಡುವೆ ಸಂಧಿಗಳುಂಟಲ್ಲವೇ? ಸಂಧಿಗಳೆಲ್ಲ ಪಟುವಾಗಿದ್ದಾಗ ಶರೀರವೇ ಒಂದು ಸಂಘವಾಗಿ ಕೆಲಸಮಾಡುತ್ತದೆ. ಆದರೆ ಮರಣವಪ್ಪಳಿಸುತ್ತಲೇ ಸಂಧಿ-ಬಂಧನಗಳೇ ಕಿತ್ತುಕೊಂಡುಬಿಟ್ಟಿರುತ್ತವೆ. ಹೀಗೆ ಆಂತರಿಕವಾಗಿಯೇ ಇದಾಗಿಹೋದಾಗಲಂತೂ ಕೈಕಾಲುಗಳನ್ನು ಆಡಿಸಲೂ ಆಗುವುದಿಲ್ಲ. ಆಗಾಗುವ ಸಂಧಿ-ಬಂಧದ ಶಿಥಿಲತೆಯನ್ನು ಹೇಳಿಕೊಳ್ಳಲೂ ಆಗುವುದಿಲ್ಲ, ಸರಿಪಡಿಸಲೂ ಆಗುವುದಿಲ್ಲ. ಅದು ಅನೂಹ್ಯ, ಅವಾಚ್ಯ.

ಸಕಲವಿಧ-ವಿವಶತೆಯೂ ಅತಿಶಯಿತ-ವೇದನೆಯೂ ಒಟ್ಟಿಗೇ ಅನಿರೀಕ್ಷ್ಯವಾಗಿ ಹಾಗೂ ಅಪ್ರತೀಕಾರ್ಯವಾಗಿ ಉಂಟಾಗುತ್ತಿರುವಾಗ ಏನು ಮಾಡಬೇಕೆಂಬುದಕ್ಕೆ ದಿಕ್ಕೇ ತೋಚದಂತೆ ಆಗಿಬಿಡುತ್ತಿರಲು,  ಇನ್ನು ಭಗವಂತನ ಸ್ಮರಣೆಯೆಂಬುದು ಅದೆಲ್ಲಿಂದ ಬಂದೀತು?

ಎಂದೇ ಲೀಲಾಶುಕನು ಕೇಳಿಕೊಳ್ಳುವುದಾದರೂ, ಶ್ರೀಕೃಷ್ಣನ ಸುಂದರ-ವದನದ ದರ್ಶನವು ಮೊದಲೇ ಆಗಿಬಿಡಲೆಂದು. ಅದನ್ನು ಆತನು ಕೇಳಿಕೊಳ್ಳುವ ಬಗೆಯೂ ವಿಶಿಷ್ಟವೇ.

ಪ್ರಭುವೇ, ಅವಸಾನ-ಕಾಲವು ಆಗಮಿಸುವುದರೊಳಗೆ ನಿನ್ನ ಮುಖ-ಚಂದ್ರನ ದರ್ಶನವಾಗಬೇಕು. ಅ ಚಂದ್ರಾತಪದ ಪ್ರಭಾವದಿಂದಾಗಿ ನನ್ನ ಚಿತ್ತಧಾರೆಯು ದ್ವಿಗುಣಿತವಾಗಬೇಕು - ಎನ್ನುತ್ತಾನೆ.

ಏನು ಹಾಗೆಂದರೆ? ಚಂದ್ರಾತಪ ಅಥವಾ ಚಂದ್ರಿಕೆಯೆಂದರೆ ಬೆಳದಿಂಗಳು. ಚಂದ್ರನಿದ್ದ ಮೇಲೆ, ಅರ್ಥಾತ್ ಪೂರ್ಣ-ಚಂದ್ರನಿದ್ದ ಮೇಲೆ, ಚಂದ್ರಿಕೆಯಿರದೇ? ಅದಿದ್ದರೆ ಅದರ ಪ್ರಭಾವವಿರದೇ? "ಚಿತ್ತಧಾರೆ"ಯೆನ್ನುವುದರಲ್ಲೇ "ಚಿತ್ತವೊಂದು ಸಮುದ್ರ"ವೆಂಬುದರ ಧ್ವನಿಯಿರುವುದು. ಪೂರ್ಣಚಂದ್ರನು ಬಂದಾಗ (ಗುರುತ್ವಾಕರ್ಷಣದಿಂದಾಗಿ) ಸಮುದ್ರವು ಚಂದ್ರನತ್ತ ಉಕ್ಕುವುದಷ್ಟೆ. ಹಾಗೆ ನಿನ್ನ ಮುಖ-ಚಂದ್ರನು ಕಣ್ಣ ಮುಂದೆ ಕಾಣುತ್ತಲೇ ನನ್ನ ಚಿತ್ತವು ನಿನ್ನತ್ತ ಉಕ್ಕಲಿ. ದ್ವಿಗುಣಿತವಾಗಿ, ಎಂದರೆ ಎರಡರಷ್ಟಾಗಿ, ಉಕ್ಕಲಿ – ಎಂದು ಕವಿ ಕೋರಿದ್ದಾನೆ.

ವಿಭೋ! - ಎಂದು ಸಂಬೋಧಿಸಿರುವುದೇ ಅದಕ್ಕಾಗಿ. ಸರ್ವ-ಸಾಮರ್ಥ್ಯವುಳ್ಳವನು ವಿಭು. ಕದ್ದು ಬರುವುದು, ಕೊನೆಗಾಲ. ಅದು ಬಳಿ ಸಾರುವ ಮೊದಲೇ ನಿನ್ನ ಮುಖಚಂದ್ರನ ದರ್ಶನವನ್ನು ದಯಪಾಲಿಸಿಟ್ಟುಬಿಡು - ಎಂಬ ಅರಿಕೆ ಆತನದು.

ಶ್ಲೋಕ ಹೀಗಿದೆ:

ಯಾವನ್ನ ಮೇ ನಿಖಿಲ-ಮರ್ಮ-ದೃಢಾಭಿಘಾತಂ

ನಿಃಸಂಧಿ-ಬಂಧನಂ ಉಪೈತಿ ನ ಕೋಽಪಿ ತಾಪಃ |

ತಾವದ್ ವಿಭೋ ಭವತು ತಾವಕ-ವಕ್ತ್ರ-ಚಂದ್ರ-

-ಚಂದ್ರಾತಪ-ದ್ವಿಗುಣಿತಾ ಮಮ ಚಿತ್ತ-ಧಾರಾ ||

ಯಾವತ್-ತಾವತ್ ಎಂಬ ಪದಗಳಿಂದ ಪ್ರಥಮಪಾದ-ತೃತೀಯಪಾದಗಳು ಆರಂಭಗೊಂಡಿವೆ. ಎಷ್ಟರಲ್ಲಿ-ಅಷ್ಟರಲ್ಲಿ - ಎಂಬುದು ಅವುಗಳ ಅರ್ಥ.

ಇದರ ಮುಂದಿನ ಶ್ಲೋಕದಲ್ಲಿ ಸಹ ಇದೇ ಸಂನಿವೇಶವನ್ನು ಲೀಲಾಶುಕನು ಪರಿಭಾವಿಸುತ್ತಾನೆ. ಈ ಶ್ಲೋಕ ಹೀಗಿದೆ:

ಯಾವನ್ನ ಮೇ ನರ-ದಶಾ ದಶಮೀ ದೃಶೋಽಪಿ

ರಂಧ್ರಾದ್ ಉಪೈತಿ ತಿಮಿರೀಕೃತ-ಸರ್ವ-ಭಾವಾ |

ಲಾವಣ್ಯ-ಕೇಲಿ-ಸದನಂ ತವ ತಾವದ್ ಏವ

ಲಕ್ಷ್ಯಾಸಂ ಉತ್-ಕ್ವಣಿತ-ವೇಣು ಮುಖೇಂದು-ಬಿಂಬಂ ||

'ದಶಮೀ ದಶಾ' ಎಂದರೆ ಹತ್ತನೆಯ ಅವಸ್ಥೆ. ಹಾಗೆಂದರೆ ಸಾವೆಂದೇ ಅರ್ಥ. ಏಕೆ? ತೀವ್ರಕಾಮವು ಬಾಧಿಸುವಾಗ ಹತ್ತು ಅವಸ್ಥೆಗಳು ಸಾಧ್ಯವಂತೆ: ಮೊದಲನೆಯದು ಅಭಿಲಾಷೆ, ಬಯಕೆ. ಅದು ಹೆಚ್ಚಾದಂತೆ ಎರಡನೆಯದು, ಪ್ರಿಯನನ್ನೇ ಕುರಿತಾದ ಚಿಂತನ. ಮೂರನೆಯದು,  ಕಾಡುವ ಸ್ಮೃತಿ, ನೆನಪು. ನಾಲ್ಕನೆಯದು, ಆತನಲ್ಲಿರುವ ಗುಣಗಳ ಕೊಂಡಾಟ. ಐದನೆಯದು, ಉದ್ವೇಗ. ಆರನೆಯದು, ಪ್ರಲಾಪ. ಏಳನೆಯದು, ಉನ್ಮಾದ. ಎಂಟನೆಯದು, ಕಾಮ-ವ್ಯಾಧಿ. ಒಂಭತ್ತನೆಯದು, ಜಡತೆ. ಹತ್ತನೆಯದೇ, ಮರಣ. ಉತ್ಕಟವಾದ ಪ್ರೀತಿಯು ಪೂರೈಸದೆ ಸಾವಿಗೆ ತುತ್ತಾದವರುಂಟಲ್ಲವೇ? ಎಂದೇ ಅದೇ ಕೊನೆಯದಾದ ದಶಮೀ ನರ-ದಶೆ.

ಹೀಗೆ "ಹತ್ತನೆಯ ಸ್ಥಿತಿ"ಯೆಂದೇ ಕರೆಸಿಕೊಳ್ಳಲಾಗುವ ಮರಣವು ಯಾರಿಗೆ ತಪ್ಪಿದ್ದು? ಆದರೂ ಅದು ಬಂದಾಗ ನಾವು ವಿಹ್ವಲರಾಗುತ್ತೇವೆ. ಕಣ್ಣಿಗೆ ಕತ್ತಲು ಕವಿಯುತ್ತದೆ. ಬಾಹ್ಯಾಂಧಕಾರವಲ್ಲ, ಕಣ್ಣೊಳಗಿನ ಕತ್ತಲದು. ಈ ಅಂತಸ್ತಿಮಿರವು ಆವರಿಸಿದಾಗ ಸಮಸ್ತ-ವಸ್ತುಗಳೂ ವಿಲೀನವಾಗುತ್ತವೆ. ಎಂದರೆ ಬರೀ ರೂಪವು ಮಾತ್ರವಲ್ಲ, ಶಬ್ದ-ಸ್ಪರ್ಶ-ರಸ-ಗಂಧಗಳೂ ಅಗ್ರಾಹ್ಯವಾಗಿಬಿಡುತ್ತವೆ. ಅರ್ಥಾತ್, ಯಾವ ಇಂದ್ರಿಯವೂ ಕೆಲಸಮಾಡದು, ಆಗ.

ಎಂದೇ ಅಂತಹ ಸ್ಥಿತಿಯು ಬಂದು ಗ್ರಸಿಸುವ ಮೊದಲೇ, ಎಂದರೆ ನುಂಗಿಹಾಕುವ ಮೊದಲೇ, ನಾನು ನೋಡಿಬಿಡಬೇಕು ದೇವಾ, ಎನ್ನುತ್ತಾನೆ ಲೀಲಾಶುಕ. ಏನನ್ನು ಕಾಣಬೇಕು? ನಿನ್ನ ಮುಖಚಂದ್ರ-ಬಿಂಬವನ್ನು.

ಆ ಮುಖಚಂದ್ರ-ಬಿಂಬದ ವಿಶೇಷವೇನು? - ಎಂಬುದನ್ನು ಎರಡು ವಿಶೇಷಣಗಳಿಂದ ಸೂಚಿಸುತ್ತಾನೆ. ಮೊದಲನೆಯದಾಗಿ ಅದು ಲಾವಣ್ಯ-ಕೇಲಿ-ಸದನ. ಮಾಧುರ್ಯ-ಪರಂಪರೆಯೇ ಲಾವಣ್ಯ. ಕೇಲಿ ಎಂದರೆ ಆಟ. ಲಾವಣ್ಯದ ಆಟಕ್ಕೆ ಅದು ಸದನ - ಎಂದರೆ ನೆಲೆಮನೆ. ಎಷ್ಟಾದರೂ ಕೃಷ್ಣನ ಲಾವಣ್ಯವೇ ಲಾವಣ್ಯ. ಅದರ ಮುಂದೆ ಮತ್ತಾವ ಲಾವಣ್ಯ? ಆತನ ಆಟವೇ ಆಟ. ಆತನ ಆಟಗಳೆದುರು ಮತ್ತಾವುದು ನಿಲ್ಲುವುದು? ಹೀಗೆ ಕೃಷ್ಣನ ಬಗೆಬಗೆಯ ಲಾವಣ್ಯಗಳಿಗೂ ಬಗೆಬಗೆಯ ಕ್ರೀಡೆಗಳಿಗೂ ಆಸ್ಪದವಾದುದು ಆತನ ಸೊಗಸಿನ ಮೊಗ.

ಎರಡನೆಯ ವಿಶೇಷಣವೆಂದರೆ ಅದು ವೇಣುವನ್ನು ಪಿಡಿದಿರುವುದು. ಎಂತಹ ವೇಣುವದು? ಉತ್-ಕ್ವಣಿತವಾದ ವೇಣು. ಎಂದರೆ ಎತ್ತರದ ಧ್ವನಿಯುಳ್ಳದ್ದು, ಅರ್ಥಾತ್ ತಾರದ ದನಿ ಅದರದು: ತಾರಕವಾದ ನಾದ. ಯೋಗಿಗಳಿಗೆ ಒಳಗಿವಿಯೊಳಗೆ ಕೇಳಿಬರುವ ಅಂತರ್ನಾದಕ್ಕೆ ಸರಿಸಮವಾದುದು.

ಹೀಗೆ ಅಲ್ಲಿ ಕಣ್ಣುಗಳಿಗೆ ಸವಿಯುಣಿಸುವ ರೂಪ-ಮಾಧುರ್ಯವಿದೆ; ಕಿವಿಗಳಿಗೆ ತಂಪೆರೆಯುವ ನಾದ-ಮಾಧುರ್ಯವಿದೆ. ಮಧುರಾಕೃತಿಯ ದರ್ಶನ, ಹಾಗೂ ಯೋಗದ ಉನ್ನತಾನುಭವ – ಇವುಗಳು ಕೂಡಿರುವೆಡೆಯಿದು. ಮರಣವಪ್ಪಳಿಸುವ ಮೊದಲೇ, ಸಾವನ್ನಪ್ಪುವ ಮುನ್ನವೇ, ನನ್ನ ಕಣ್ಗಳಿಗೂ ಕಿವಿಗಳಿಗೂ ಹಬ್ಬವೆನಿಸುವ ತಾರಕಯೋಗವನ್ನು ಅನುಗ್ರಹಿಸುವ ಭಾಗ್ಯವನ್ನು ಬೇಡುತ್ತಿದ್ದಾನೆ, ಭಕ್ತಕವಿ ಲೀಲಾಶುಕ.

ಸತ್ತಮೇಲಲ್ಲ, ಆಧ್ಯಾತ್ಮಿಕದ ಸವಿ: ಸಾಯುವ ಮುನ್ನವೇ.

ಸೂಚನೆ : 8/03/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, March 2, 2025

ಪ್ರಶ್ನೋತ್ತರ ರತ್ನಮಾಲಿಕೆ 5 (Prasnottara Ratnamalike 5)


ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)




ಪ್ರಶ್ನೆ ೫ - ಅತಿಶಯವಾದ ಪಥ್ಯ ಯಾವುದು ?

ಉತ್ತರ -  ಧರ್ಮ 


ಈ ಮುಂದಿನ ಪ್ರಶ್ನೆ 'ಅತಿಶಯವಾದ ಪಥ್ಯ ಯಾವುದು?' ಎಂಬುದಾಗಿ. ಅದಕ್ಕೆ ಉತ್ತರ 'ಧರ್ಮ'. ಈ ಪ್ರಶ್ನೋತ್ತರದಲ್ಲಿ ನಾವು ಚಿಂತಿಸಬೇಕಾದ ವಿಷಯ ಇಷ್ಟು, ಪಥ್ಯ ಎಂದರೇನು? ಅದು ಧರ್ಮ ಹೇಗೆ? ಎಂಬುದು. ಸಾಮಾನ್ಯವಾಗಿ ನಾವು ಪಥ್ಯ ಎಂದರೆ ಅಜೀರ್ಣವಾದಾಗ ಯಾವುದೇ ಆಹಾರವನ್ನು ತೆಗೆದುಕೊಳ್ಳದೆ ಇರುವಂತಹದ್ದು ಎಂಬುದಾಗಿ ಸಾಮಾನ್ಯವಾದ ವಿವರಣೆಯನ್ನು ಕೇಳಿರುತ್ತೇವೆ. ಆದರೆ ಇಲ್ಲಿನ ವಿವರಣೆ ಸ್ವಲ್ಪ ಭಿನ್ನವಾದದು. ಪಥ್ಯ ಎಂದರೆ ಪಥಿ - ಮಾರ್ಗ, ಅದಕ್ಕೆ ಯೋಗ್ಯವಾದದ್ದು ಯಾವುದುಂಟೋ ಅದಕ್ಕೆ 'ಪಥ್ಯ' ಎಂದು ಕರೆಯುತ್ತಾರೆ. ನಮ್ಮ ದಾರಿಯ ಯಾವುದು? ನಮ್ಮ ಗುರಿ ಏನು? ನಮ್ಮ ಗುರಿಗೆ ಅತ್ಯಂತ ಅವಶ್ಯಕವಾದದ್ದು ಯಾವುದು? ಹೀಗೆ ಇದೆಲ್ಲವನ್ನು ಒಟ್ಟಾರೆ ತಿಳಿದಾಗ ಧರ್ಮ ಎಂಬುದು ಪಥ್ಯವಾಗುತ್ತದೆ. ಅಂದರೆ ನಮ್ಮ ದಾರಿ ಯಾವುದು? ಗಮ್ಯ ಸ್ಥಾನ ಯಾವುದು? ಆ ಧರ್ಮವು ಗಮ್ಯವನ್ನು ತಲುಪಲು ಹೇಗೆ ಸಹಕಾರಿಯಾಗುತ್ತದೆ? ಎಂಬುದು ಇಲ್ಲಿ ಚಿಂತಿಸಬೇಕಾದ ವಿಷಯವಾಗಿದೆ.


ಪ್ರತಿಯೊಬ್ಬ ಮಾನವನು ಜನ್ಮ ಪಡೆದ ಮೇಲೆ ಸಾಧಿಸಬೇಕಾದದ್ದು ಅದುವೇ ಮೋಕ್ಷ. ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು - "ಮಾನವ ಜನ್ಮ ಪಡೆದ ಆ ಕ್ಷಣದಿಂದ ಅವನ ಹಕ್ಕಾಗಿರುವಂತದ್ದು ಮೋಕ್ಷಪ್ಪ, ಹೇಗೆ ಭಾರತೀಯ ಪ್ರಜೆಗೆ ಹದಿನೆಂಟು ವರ್ಷವಾದರೆ ಮತ ಚಲಾಯಿಸುವ ಹಕ್ಕು ತಾನಾಗಿಯೇ ಬರುತ್ತದೆಯೋ, ಹಾಗೆ ಮನುಷ್ಯ ಜನ್ಮ ಪಡೆದಾಗಲೇ ಅವನಿಗೆ ಮೋಕ್ಷ ಪಡೆಯುವುದು ಕೂಡ ಹಕ್ಕಾಗಿ ಬರುತ್ತದೆ" ಎಂಬುದಾಗಿ. ಅಂದರೆ ನಾವು ಪಡೆಯಲೇ ಬೇಕಾದುದು. ಅಲ್ಲ ಸಿಗಬೇಕದುದು ಮುಕ್ತಿ. ಆದ್ದರಿಂದಲೇ ಅದಕ್ಕೆ ಅಪವರ್ಗ ಎಂದೂ ಹೇಳುತ್ತಾರೆ. ಧರ್ಮ, ಅರ್ಥ ಮತ್ತು ಕಾಮ ಎಂಬ ಮೂರು ಪುರುಷಾರ್ಥಗಳನ್ನು ಪಡೆದು ಅವು ಮೂರನ್ನು ಬಿಟ್ಟಾಗ ಸಿಗುವಂತಹದ್ದು ಯಾವುದಿದೆಯೋ ಅದಕ್ಕೆ ಮೋಕ್ಷ ಎಂಬುದಾಗಿ ಕರೆಯುತ್ತಾರೆ. ಹಾಗಾಗಿ ಇದು ಅಪವರ್ಗ. ಧರ್ಮವು ಅತ್ಯಂತ ಅವಶ್ಯಕವಾಗಿ ಬೇಕಾಗಿದದ್ದು.


ಹಾಗಾದರೆ ಧರ್ಮ ಎಂದರೇನು? ಈ ಮೋಕ್ಷವನ್ನು ಪಡೆಯಲು ಧರ್ಮ ಹೇಗೆ ಸಹಕಾರಿ? ಅಂದರೆ ನಾವು ಕೇಳುವಂತಹ 'ಧರ್ಮ' ಎಂಬ ಶಬ್ದವು ಸಾಮಾನ್ಯವಾಗಿ ಬೇರೆ ಬೇರೆ ಅರ್ಥದಲ್ಲಿ ಇದೆ. ಆದರೆ ಆ ಎಲ್ಲಾ ಅರ್ಥವನ್ನು ವಿವರಿಸುವ ಸಂದರ್ಭ ಇದಲ್ಲ ಎಂಬುದಾಗಿ ಭಾವಿಸಿ, ಧರ್ಮ ಎಂಬ ಶಬ್ದಕ್ಕೆ ಒಂದು ಬಗೆಯ ಕಂಡೀಶನ್ ಅಥವಾ ಒಂದು ಸ್ಥಿತಿ ಎಂಬುದಾಗಿ ಶ್ರೀರಂಗಮಹಾಗುರುಗಳು ನೀಡಿದ ವಿವರಣೆಯನ್ನು ಮುಂದಿಟ್ಟುಕೊಂಡು ಧರ್ಮವಿಷಯವನ್ನು ಅರ್ಥಮಾಡಿಕೊಳ್ಳಬೇಕು. ಅದನ್ನು ನಾವಿಲ್ಲಿ ತೆಗೆದುಕೊಂಡು ಧರ್ಮ ಎಂದರೆ ಮೋಕ್ಷವನ್ನು ಪಡೆಯಲು ಆಗುವ ಸ್ಥಿತಿ. ಮತ್ತು ಅದನ್ನು ಪಡೆಯುವ ಸಾಧನ. ಒಂದು ಉದಾಹರಣೆಯನ್ನು ಗಮನಿಸುವುದಾದರೆ, ನಾವು ನಿದ್ದೆಯನ್ನು ಮಾಡುತ್ತೇವೆ. ವಸ್ತುತಃ ನಿದ್ದೆ ಮಾಡುವಂತದ್ದಲ್ಲ; ಅದು ಬರುವಂತದ್ದು. ನಿದ್ದೆಗೆ ಪ್ರತಿಬಂಧಕವಾದ ವಿಷಯಗಳನ್ನೆಲ್ಲಾ ದೂರ ಮಾಡಿದಾಗ ನಿದ್ದೆಗೆ ಬೇಕಾದ ಸಂದರ್ಭ ತಾನಾಗಿಯೇ ಬರುತ್ತದೆ; ನಿದ್ದೆ ತಾನಾಗಿಯೇ ಹತ್ತುತ್ತದೆ. ಹಾಗೆಯೇ ಮುಕ್ತಿಗೆ ಪ್ರತಿಬಂಧಕವಾದದ್ದನ್ನು ತೆಗೆದಾಗ, ದೂರ ಮಾಡಿಕೊಂಡಾಗ ಆ ಮುಕ್ತಿಯು ಅಥವಾ ಮೋಕ್ಷವು ಸಹಜವಾಗಿ ಸಿದ್ಧವಾಗುವುದು ಎಂಬುದು ಇದರ ತಾತ್ಪರ್ಯ. ಹಾಗಾಗಿ ಮೋಕ್ಷ ಎಂಬ ಗಮ್ಯಸ್ಥಾನಕ್ಕೆ ಧರ್ಮ ಎಂಬುದು ಪಥ್ಯ, ಆ ಮಾರ್ಗಕ್ಕೆ ಅತ್ಯಂತ ಉಚಿತವಾದದು ಎಂಬುದು ಈ ಪ್ರಶ್ನೋತ್ತರ ಸಾರವಾಗಿದೆ

ಸೂಚನೆ : 2/3/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ವ್ಯಾಸ ವೀಕ್ಷಿತ 126 ಕೃಷ್ಣಾರ್ಜುನರನ್ನು ಹತ್ತಿಕ್ಕಲು ಹೊರಟ ದೇವತೆಗಳ ದಂಡು (Vyaasa Vikshita 126)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ಜೋರಾಗಿ ಧ್ವನಿಗೈಯುತ್ತಾ ಬಾಣಗಳ ಮಳೆಯನ್ನೇ ಸುರಿಸುತ್ತಿದ್ದರು, ಯಕ್ಷ-ರಾಕ್ಷಸಾದಿಗಳು. ಅವರ ಶಿರಸ್ಸುಗಳನ್ನು ತನ್ನ ಚೂಪಾದ ಬಾಣಗಳಿಂದ ಅರ್ಜುನನು ತುಂಡರಿಸಿದನು. ಮಹಾತೇಜಸ್ವಿಯಾದ ಕೃಷ್ಣನೂ ಸಹ ಚಕ್ರಾಯುಧದಿಂದ ಶತ್ರುಗಳನ್ನು ಸಂಹರಿಸುತ್ತಿದ್ದನು; ದೈತ್ಯ-ದಾನವರ ಸಂಘಗಳೊಂದಿಗೆ ಮಹತ್ತಾದ ಕದನವನ್ನೇ ನಡೆಸಿದನು. ಆತನ ಬಾಣಗಳಿಂದ ಘಾಸಿಗೊಂಡರು, ಆ ದೈತ್ಯ-ದಾನವರು. ಚಕ್ರಾಯುಧದ ವೇಗದಿಂದ ಅವರು ತತ್ತರಿಸಿಹೋದರು. ಅಮಿತವಾದ ಓಜಸ್ಸಿನಿಂದ ಕೂಡಿದ್ದವರಾಗಿದ್ದರೂ ಸಹ ಅವರು ಸೀಮೆಯೊಂದನ್ನು ದಾಟಿಬರಲಾರದಾದರು. ಇದು ಹೇಗೆಂದರೆ  ಸಮುದ್ರದ ಅಲೆಗಳು ದಡವನ್ನು ದಾಟಿಬರಲೇ ಆರವು, ಅಲ್ಲವೇ? ಹಾಗೆ. 

 

ದೇವತೆಗಳಿಗೆ ಒಡೆಯನಾದ ಇಂದ್ರನು ಆಗ ಅತ್ಯಂತ-ಸಂಕ್ರುದ್ಧನಾದನು, ಎಂದರೆ ಅತಿಕ್ರೋಧಗೊಂಡನು. ತನ್ನ ಶ್ವೇತ-ಗಜವನ್ನು, ಅರ್ಥಾತ್ ಐರಾವತವನ್ನು, ಹತ್ತಿಬಂದನು. ಹಾಗೂ ಅವರಿಬ್ಬರ ಮೇಲೂ ದಾಳಿಮಾಡಿದನು. ಸಿಡಿಲಿನಂತಿರುವ ತನ್ನ ವಜ್ರಾಯುಧವನ್ನೂ ಅಸ್ತ್ರವನ್ನೂ ಅವರ ಮೇಲೆ ಪ್ರಯೋಗಿಸುತ್ತಾ, "ಇವರಿಬ್ಬರೂ ಹತರಾದರು" ಎಂಬುದಾಗಿ ಸುರರಿಗೆ ಧೈರ್ಯತುಂಬುವಂತೆ ಉದ್ಗರಿಸಿದನು. 

ದೇವರಾಜನಾದ ಇಂದ್ರನು ತನ್ನ ಮಹಾವಜ್ರವನ್ನೇ ಕೈಗೆತ್ತಿಕೊಂಡದ್ದೇ ತಡ: ಮಿಕ್ಕ ಸುರರೂ ತಮ್ಮ ತಮ್ಮ ಶಸ್ತ್ರಗಳನ್ನು  ಕೈಗೆತ್ತಿಕೊಂಡರು. ಯಾರು ಯಾರು ಏನೇನನ್ನು ಎತ್ತಿಕೊಂಡರು?: ಜವರಾಯನು, ಎಂದರೆ ಯಮನು, ತನ್ನ ಕಾಲದಂಡವನ್ನು ಕೈಗೆ ತೆಗೆದುಕೊಂಡನು. ಕುಬೇರನು ತನ್ನ ಗದೆಯನ್ನು ಹಿಡಿದನು. ವರುಣನು ಪಾಶಗಳನ್ನೂ ಹಾಗೂ ತನ್ನ ವಿಚಿತ್ರವಾದ ವಜ್ರವನ್ನೂ ತೆಗೆದುಕೊಂಡನು. ಸ್ಕಂದನು, ಎಂದರೆ ಸುಬ್ರಹ್ಮಣ್ಯನು, ಶಕ್ತ್ಯಾಯುಧವನ್ನು ಎತ್ತಿಕೊಂಡನು, ಹಾಗೂ ಮೇರು ಪರ್ವತವು ಹೇಗೋ ಹಾಗೆ ನಿಶ್ಚಲನಾಗಿ ನಿಂತನು. ಅಂತೆಯೇ ಬೆಳಗುವ ಓಷಧಗಳನ್ನೇ ಅಶ್ವಿನೀ-ದೇವತೆಗಳಿಬ್ಬರೂ ಹಿಡಿದುನಿಂತರು. ಧಾತೃವು ಧನುಸ್ಸನ್ನು ಹಿಡಿದನು. ಜಯನು ಮುಸಲವನ್ನೆತ್ತಿಕೊಂಡನು. ಕ್ರೋಧಗೊಂಡ ಮಹಾಬಲಶಾಲಿಯಾದ ತ್ವಷ್ಟೃದೇವನು ಪರ್ವತವನ್ನೇ ಕೈಗೆತ್ತಿಕೊಂಡನು. ಅಂಶನು ಶಕ್ತ್ಯಾಯುಧವನ್ನು ಹಿಡಿದನು. ಮೃತ್ಯುದೇವತೆಯು ಪರಶುವನ್ನು ಹಿಡಿದನು. ಮತ್ತು ಅರ್ಯಮನೆಂಬ ದೇವತೆಯು ಘೋರವಾದ ಪರಿಘವನ್ನು ಹಿಡಿದು ನಡೆದಾಡಿದನು. ಮಿತ್ರದೇವನು ಚೂಪಾದ ಪರಿಧಿಯುಳ್ಳ ಚಕ್ರಾಯುಧವನ್ನು ಹಿಡಿದು ನಿಂತನು. ಇನ್ನು ಪೂಷಾ ಎಂಬ ದೇವನು, ಭಗ ಹಾಗೂ ಸವಿತಾಎಂಬಿವರುಗಳುಇವರೆಲ್ಲರೂ ಕತ್ತಿ-ಬಿಲ್ಲುಗಳನ್ನು ಕೈಗೆತ್ತಿಕೊಂಡು ಕೃಷ್ಣ-ಪಾರ್ಥರ ಮೇಲೆರಗಿದರು. ರುದ್ರರು, ವಸುಗಳು, ಮಹಾಬಲಶಾಲಿಗಳಾದ ಮರುತ್ತುಗಳು, ವಿಶ್ವೇದೇವರುಗಳು, ಹಾಗೂ ಸ್ವತೇಜಸ್ಸಿನಿಂದ ಬೆಳಗುತ್ತಿದ್ದಂತಹ ಸಾಧ್ಯರು  - ಇವರೂ, ಹಾಗೂ ಇನ್ನೂ ಬೇರೆ ಬಹುವಾದ ದೇವತೆಗಳೂ, ಪುರುಷೋತ್ತಮರಾದ ಕೃಷ್ಣಾರ್ಜುನರನ್ನು ಕೊಲ್ಲಲೆಳಸಿ, ನಾನಾಯುಧವಂತರಾಗಿ ಅವರತ್ತ ನುಗ್ಗಿಬಂದರು. 

 

ಮಹಾಯುದ್ಧದಲ್ಲಿ ಅದ್ಭುತವಾದ ನಿಮಿತ್ತಗಳು, ಎಂದರೆ ಶಕುನಗಳು, ತೋರಿಬಂದವು. ಯುಗವು ಕೊನೆಗೊಳ್ಳುವ ಕಾಲದಲ್ಲಿ ತೋರತಕ್ಕಂತಹವು, ಅವು. ಪ್ರಾಣಿಗಳನ್ನು ಅವು ಸಂಮೋಹನಗೊಳಿಸತಕ್ಕಂತಹವು. 

 

ಬಗೆಯಲ್ಲಿ ದೇವತೆಗಳೊಂದಿಗೆ ಸಂನದ್ಧನಾಗಿದ್ದ ಇಂದ್ರನನ್ನು ಕಂಡರು, ಕೃಷ್ಣ-ಪಾರ್ಥರು. ಎಂತಹವರು ಅವರಿಬ್ಬರು? ಎಂದೂ ಚ್ಯುತಿಗಾಣದವರು. ಘಾತಕ್ಕೆ ಸಿಕ್ಕಿಕೊಳ್ಳದವರು. ಎಂದೇ, ಎದೆಗುಂದದೆ ಧನುಸ್ಸನ್ನು ಸಜ್ಜುಗೊಳಿಸಿಕೊಂಡು ಸೆಟೆದು ನಿಂತರು. ಯುದ್ಧವಿಶಾರದರಾದ ಅವರಿಬ್ಬರೂ ತಮ್ಮ ವಜ್ರ-ಸದೃಶವಾದ ಬಾಣಗಳ ಪ್ರಯೋಗದಿಂದ ಬಡಿದುಹಾಕಿದರು, ತಮ್ಮ ಮೇಲೆ ಬಿದ್ದ ದೇವತೆಗಳನ್ನು. ಮತ್ತೆ ಮತ್ತೆ ಯತ್ನಿಸಿಯೂದೇವತೆಗಳು ವಿಫಲರಾದರು; ಹೆದರಿಹೋದ ಅವರು, ರಣವನ್ನು ತೊರೆದರು: ಇಂದ್ರನನ್ನೇ ಶರಣುಹೊಂದಿದರು. 

 

ಸೂಚನೆ : 23/2/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.