Sunday, May 3, 2026

ಪ್ರಶ್ನೋತ್ತರ ರತ್ನಮಾಲಿಕೆ 64 (Prasnottara Ratnamalike 64)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

image.png


ಪ್ರಶ್ನೆ - ೬೪. ವಿದ್ವಾಂಸರನ್ನು ಆಕರ್ಷಿಸುವುದು ಯಾವುದು?

ಒಳ್ಳೆಯ ಕವಿತೆ ಮತ್ತು ವಿದ್ಯೆಯೆಂಬ ಸ್ತ್ರೀ.


ಈ ಪ್ರಶ್ನೋತ್ತರದಲ್ಲಿ ನಾವು ಚಿಂತಿಸಬೇಕಾದ ವಿಷಯ ಇಷ್ಟು - ವಿದ್ವಾಂಸ ಎಂದರೆ ಯಾರು? ಒಳ್ಳೆಯ ಕವಿತೆ. ವಿದ್ಯೆ ಎಂದರೇನು? ಎಂದು. ವಿದ್ವಾಂಸ ಎಂದರೆ ತಿಳಿದವನು, ಓದಿದವನು, ಪದವಿಯನ್ನು ಗಳಿಸಿದವನು ಇತ್ಯಾದಿಯಾಗಿ ಹೇಳುವುದುಂಟು. ಆದರೆ ಯಾವನು ವಿದ್ಯೆಯನ್ನು ಉಳ್ಳವನೋ ಅವನು ‘ವಿದ್ವಾನ್’ ಎಂಬುದಾಗಿ ಕರೆಯುತ್ತಾರೆ. ವಿದ್ಯೆ ಎಂದರೆ ಯಾವುದು? ಇಂದು ನಾವು ಯಾವ ಶಿಕ್ಷಣ ಅಥವಾ ಎಜುಕೇಶನ್ ಎಂಬುದಾಗಿ ಹೇಳುತ್ತೇವೋ ಅದನ್ನು ವಿದ್ಯೆ ಎಂಬುದಾಗಿ ಕರೆದು, ಅದನ್ನು ಉಳ್ಳವನು ವಿದ್ವಾನ್ ಎಂದು ಕರೆಯುವ ಅಭ್ಯಾಸ ಬಂದಿದೆ. ಆದರೆ ಯಾವುದು ಮುಕ್ತಿಗೆ ಸಾಧನವೋ ಅದನ್ನೇ ವಿದ್ಯೆ ಎಂಬುದಾಗಿ ಕರೆಯಬೇಕು. “ಸಾ ವಿದ್ಯಾ ಯಾ ವಿಮುಕ್ತಯೇ” ಎಂಬುದಾಗಿ ಉಪನಿಷತ್ತು ವಿದ್ಯೆಯ ವಿವರಣೆಯನ್ನು ಹೀಗೆ ಕೊಡುತ್ತದೆ. ಅಂದರೆ ವೇದಾದಿ ವಿದ್ಯೆಗಳನ್ನು ವಿದ್ಯೆ ಎಂದು ಕರೆದು, ಇವುಗಳನ್ನು ಮುಕ್ತಿಗೆ ಸಾಧನ ಎಂದು ಕರೆಯಲಾಗುತ್ತದೆ. 

ಹಾಗಾಗಿ ಇಂತಹ ವಿದ್ಯೆ ಉಳ್ಳವನನ್ನು ವಿದ್ವಾನ್ ಎಂದು ಕರೆಯುವುದು ಸಾಧು. ಇಂತಹ ವಿದ್ವಾಂಸನಿಗೆ ಅತ್ಯಂತ ಪ್ರೀತಿಕರವಾದದ್ದು, ಆಕರ್ಷಕವಾಗಿದ್ದು ಯಾವುದು? ಎಂಬುದಕ್ಕೆ ಉತ್ತರವಾಗಿ, ಒಳ್ಳೆಯ ಕವಿತೆ ಅಥವಾ ವಿದ್ಯೆ ಎಂಬ ಸ್ತ್ರೀ ಎಂಬುದಾಗಿ ನೀಡಲಾಗಿದೆ. ವಿದ್ವಾಂಸನೇ ವಿದ್ಯೆಯ ಕಾರಣದಿಂದ ಆದವನು. ಆದ್ದರಿಂದ ಅವನು ವಿದ್ಯೆಯನ್ನು ತಾನೇ ಪ್ರೀತಿಸುತ್ತಾನೆ! ಅವನಿಗೆ ವಿದ್ಯೆ ತಾನೇ ಅತ್ಯಂತ ಆಕರ್ಷಕ ವಾಗುತ್ತದೆ! ಒಳ್ಳೆಯ ಕವಿತೆ ಅವನಿಗೆ ಹೇಗೆ ಆಕರ್ಷಿತವಾಗುವುದು ಎಂಬುದನ್ನು ತಿಳಿಯಬೇಕಾಗಿದೆ. ಒಳ್ಳೆಯ ಕವಿತೆ ಎಂದರೆ ತೋಚಿದ್ದನ್ನು, ಗೀಚಿದ್ದನ್ನು ಕವಿತೆ ಎಂದು ಕರೆಯಬಹುದೇ? ಶ್ರೀರಂಗ ಮಹಾಗುರುಗಳು ಹೇಳಿದಂತೆ “ಮಹಾಕವಿ ಎಂದರೆ ಮಹತ್ತಿನಿಂದ ಆರಂಭಿಸಿ ಮಹತ್ತತ್ತ್ವವನ್ನು ದಾಟಿದ ಪರಮಾತ್ಮನಲ್ಲಿ ತೆಗೆದುಕೊಂಡು ಹೋಗಿ ಯಾವನು ನಿಲ್ಲಿಸಿಸುವನೋ ಅವನು” ಎಂದು. ‘ನಾನೃಷಿಃ ಕುರುತೇ ಕಾವ್ಯಂ’  ಜ್ಞಾನಿಯಲ್ಲದವನು ಕಾವ್ಯವನ್ನು ಬರೆಯಲು ಸಾಧ್ಯವಿಲ್ಲ. ಅಂದರೆ ಮಹಾಕವಿಯಾದವನು ಮಾತ್ರ ಒಳ್ಳೆಯ ಕಾವ್ಯವನ್ನು ಬರೆಯಬಲ್ಲ. ಅಂತಹ ಕಾವ್ಯ ವಿದ್ವಾಂಸನಿಗಲ್ಲದೆ ಇನ್ನಾರಿಗೆ ಇಷ್ಟವಾದೀತು?! 

ಹಾಗಾಗಿ ಅಂತಹ ಕಾವ್ಯವನ್ನು ತಿಳಿಯಲು ವಿದ್ವಾಂಸನು ಮಾತ್ರ ಇಷ್ಟಪಡುತ್ತಾನೆ. ಆದರೆ ಕವಿಯಿಂದ ಬರೆಯಲ್ಪಟ್ಟಿದ್ದಲ್ಲವೂ ಕಾವ್ಯವೇ. ಅಂದರೆ ಶ್ರೀರಂಗ ಮಹಾಗುರುಗಳು ಹೇಳಿದಂತೆ “ಮಹಾಕವಿ ಎಂದರೆ ಮಹತ್ತಿನಿಂದ ಆರಂಭಿಸಿ ಮಹತ್ತತ್ತ್ವವನ್ನು ದಾಟಿದ ಪರಮಾತ್ಮನಲ್ಲಿ ತೆಗೆದುಕೊಂಡು ಹೋಗಿ ಯಾವನು ನಿಲ್ಲಿಸಿಸುವನೋ ಅವನು” ಎಂದು. ಯಾರು ಮಹಾಕವಿಯಾಗಿ, ಆತ್ಮಜ್ಞಾನಿಯಾಗಿ ಈ ಸೃಷ್ಟಿಯ ಮರ್ಮವನ್ನು ಅರಿತು, ಅದನ್ನು ತನ್ನ ತಪೋಬಲದಿಂದ, ಜ್ಞಾನಬಲದಿಂದ, ಮೇಧಾಬಲದಿಂದ, ಶಬ್ದರೂಪವಾಗಿ ಹಾಗೆ ಹೊರತಂದರೆ ಅದನ್ನೇ ಕಾವ್ಯ ಎಂಬುದಾಗಿ ಕರೆಯಬೇಕು. .

ಆ ಕಾವ್ಯವು ಈ ಸೃಷ್ಟಿಯ ಮರ್ಮದ ಪುಸ್ತಕವಾಗಿರುತ್ತದೆ. ಅಂತಹ ಕಾವ್ಯವು ವಿದ್ವಾಂಸನಿಗಲ್ಲದೆ ಎಲ್ಲರೂ ಇಷ್ಟಪಡುವ ಸಾಹಿತ್ಯವಾಗುವುದು. ಕವಿಗಳು ಯಾರು? ಎಂದು ಕವಿಗಳನ್ನು ಎಣಿಸುವಾಗ ವಾಲ್ಮೀಕಿ, ವ್ಯಾಸ, ಕಾಳಿದಾಸ ಇಂತಹ ಮೂರು ನಾಲ್ಕು ಕವಿಗಳನ್ನು ಮಾತ್ರ ಈ ಗುಂಪಿನಲ್ಲಿ ಹೆಸರಿಸಬಹುದು ಎಂದು ಒಬ್ಬ ಪ್ರಸಿದ್ಧಕವಿಯ ಮಾತು. ಅವರು ಬರೆದ ರಾಮಾಯಣ ಮಹಾಭಾರತ ಇತ್ಯಾದಿ ಸಾಹಿತ್ಯಗಳು ಕಾವ್ಯ ಎಂಬುದಾಗಿ ಕರೆಯಲ್ಪಡುತ್ತವೆ. ಆದ್ದರಿಂದ ಇಂತಹ ಕಾವ್ಯಗಳು ಎಂದೆಂದೂ ಎಲ್ಲಾ ವಿದ್ವಾಂಸನಿಗೂ ಅತ್ಯಂತ ಆಕರ್ಷಕ. ಇಂತಹ ಕವಿತೆಯನ್ನು ವಿದ್ವಾಂಸನು ಇಷ್ಟಪಡುತ್ತಾನೆ ಎಂಬುದು ಈ ಪ್ರಶ್ನೋತ್ತರದ ತಾತ್ಪರ್ಯವಾಗಿದೆ.

ಸೂಚನೆ : 3/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ