Showing posts with label youtube_link_https://youtu.be/_ZyLHkzuTsQ. Show all posts
Showing posts with label youtube_link_https://youtu.be/_ZyLHkzuTsQ. Show all posts

Sunday, June 14, 2020

ಆಹಾರ ಸಂಪಾದನೆ - ಆಹಾರ ಶುದ್ಧಿ (Ahara Sampadane - Ahara Suddhi)

ಲೇಖಕಿ ; ಶ್ರೀಮತಿ ರತ್ನಾವತಿ ಸುರೇಶ್
(ಪ್ರತಿಕ್ರಿಯಿಸಿರಿ lekhana@ayvm.in)

  

ಮಹಾತ್ಮರೊಬ್ಬರು ಧರ್ಮಪ್ರಚಾರ ಮಾಡುತ್ತ ಊರಿಂದೂರಿಗೆ ಸಂಚರಿಸುತ್ತಿದ್ದರು. ಅಲ್ಲಿರುವ ಕೆಲವು ಶ್ರೀಮಂತರು ಭೋಜನ ಕೂಟವನ್ನೇರ್ಪಡಿಸಿ ಅವರನ್ನು ಸತ್ಕರಿಸಿ ಆಶೀರ್ವಾದ ಪಡೆಯುತ್ತಿದ್ದರು. ಸಂತರ್ಪಣೆಯಲ್ಲಿ ಭಾಗವಹಿಸಿದ್ದ ಬಡವನಾದ ಗೃಹಸ್ಥನೊಬ್ಬನಿಗೂ, ಆ ಮಹಾತ್ಮರನ್ನು ಕರೆದು ಅನ್ನಸಂತರ್ಪಣೆ ಮಾಡಿ ಆಶೀರ್ವಾದ ಪಡೆಯಬೇಕೆಂಬ ಆಸೆಯಾಯಿತು. ಮಹಾತ್ಮರನ್ನು ಆಹ್ವಾನಿಸಿ ವೈಭೋಪೇತವಾದ ಅನ್ನಸಂತರ್ಪಣೆ ಏರ್ಪಡಿಸಿದನು. ಆ ಮಹಾತ್ಮರು ರಾತ್ರಿ ಅಲ್ಲಿಯೇ ವಿಶ್ರಾಂತಿ ಪಡೆದರು. ಗೃಹಸ್ಥ ಬೆಳಗ್ಗೆ ಎದ್ದು ನೋಡಿದರೆ ಮಹಾತ್ಮರ ಪತ್ತೆಯೇ ಇರಲಿಲ್ಲ. ಆತಂಕಗೊಂಡು ಮಹಾತ್ಮರನ್ನು ಹುಡುಕುತ್ತಾ ಹೊರಟ.

ಅನತಿ ದೂರದಲ್ಲಿ ಮಹಾತ್ಮರು ಹಸುಕರುವಿನೊಂದಿಗೆ ಶೀಘ್ರವಾಗಿ ಇವನ ಮನೆಕಡೆ ಬರುತ್ತಿದ್ದರು, ಅವರು ಗೃಹಸ್ಥನ ಬಳಿ "ಅಯ್ಯಾ ಈ ಹಸುಕರುಗಳು ನಿನ್ನವು, ನಿನ್ನೆ ರಾತ್ರಿ ನಾನು ಇವುಗಳನ್ನೇ ಕದ್ದೊಯ್ದಿದ್ದೆ " ಎನ್ನುತ್ತಾ ಅವುಗಳನ್ನು ಹಿಂದಿರುಗಿಸಿ ನನ್ನ ಅಪರಾಧವನ್ನು ಮನ್ನಿಸು ಎಂದು ಪ್ರಾರ್ಥಿಸಿದರು. ಅದಕ್ಕೆ ಗೃಹಸ್ಥ- ಮಹಾತ್ಮರೇ ನೀವು ಕೇಳಿದ್ದರೆ ನಾನೇ ನಿಮಗೆ ತಲುಪಿಸುತ್ತಿದ್ದೆ, ಎಂದ. ಅದಕ್ಕೆ ಮಹಾತ್ಮರು-ನನ್ನಲ್ಲಿ ಯಾವತ್ತೂ ಕಳ್ಳತನಮಾಡುವ ದುರ್ಬುದ್ಧಿಯು ಉಂಟಾಗಿರಲಿಲ್ಲ. ಈಗ ಏಕೆ ಉಂಟಾಯಿತೋ ತಿಳಿಯುತ್ತಿಲ್ಲ. ಏನೋ ಜನ್ಮಾಂತರದ ಕರ್ಮವಿರಬಹುದು, ಆದರೂ ನಿನ್ನನ್ನೊಂದು ಪ್ರಶ್ನೆ ಕೇಳುತ್ತೇನೆ ತಪ್ಪು ತಿಳಿದುಕೊಳ್ಳಬೇಡ. ನನಗೆ ನಿನ್ನೆ ಬಡಿಸಿದ ಆಹಾರ ಪದಾರ್ಥಗಳನ್ನು ಹೇಗೆ ಸಂಗ್ರಹಿಸಿದೆ ? ನಿಜ ಹೇಳೆಂದರು. ಅದಕ್ಕೆ ಗೃಹಸ್ಥ ನನ್ನ ಬಳಿ ಏನೂ ಇರಲಿಲ್ಲ, ಶ್ರೀಮಂತರೊಬ್ಬರ ಮನೆಯಲ್ಲಿ ಕದ್ದು ತಂದಿದ್ದು ಎಂದನು. ಮಹಾತ್ಮರಿಗೆ ತಾನೇಕೆ ಕದ್ದೆ ಎಂಬ ಅರಿವಾಯಿತು. ಕಳ್ಳತನದ ಸಂಸ್ಕಾರ ತಿಂದ ಆಹಾರದಲ್ಲಿ ಸಂಕ್ರಮಿತವಾಗಿತ್ತು. ಆದರೆ ಅದು ಜೀರ್ಣವಾದ ನಂತರ ಮಹಾತ್ಮರ ಮೂಲ ಸಂಸ್ಕಾರ ಜಾಗೃತವಾಗಿ  ಹಸುಕರುವನ್ನು  ಹಿಂದಿರುಗಿಸಲು ಬಂದಿದ್ದರು. ಗೃಹಸ್ಥನಿಗೆ ತನ್ನ ತಪ್ಪಿನರಿವಾಗಿ ಮಹಾತ್ಮರಲ್ಲಿ ಕ್ಷಮೆಯಾಚಿಸಿದನು.

ಜೀವಹೋಗುವ ಸಂದರ್ಭವೊಂದನ್ನು ಬಿಟ್ಟು ಉಳಿದಂತೆ ಕಳ್ಳತನದಿಂದ ಸಂಪಾದಿಸಿದ ಅನ್ನವನ್ನು ತಿನ್ನಬಾರದು. ದ್ರವ್ಯಶುದ್ಧಿ, ಅರ್ಥಶುದ್ಧಿ ಇದ್ದರೆ ಮಾತ್ರವೇ ಆಹಾರ ಶುದ್ಧಿ. ಶುದ್ಧವಾದ ಆಹಾರ ಸೇವನೆಯು ಸನ್ನಡತೆ ಮತ್ತು ಭಗವತ್ಪ್ರಾಪ್ತಿಗೆ ಪೋಷಕವಾಗುತ್ತದೆ ಎಂಬ ಶ್ರೀರಂಗ ಮಹಾಗುರುಗಳ ಮಾತು ಸ್ಮರಣೀಯವಾಗಿದೆ.  

ಸೂಚನೆ: 27/05/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.