Sunday, June 7, 2026

ಅಷ್ಟಾಕ್ಷರೀ 106 ಸುವರ್ಣಂ ಅಜರಾಮರಂ (Astakshara 106)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png


ಈಚೆಗಂತೂ ಚಿನ್ನ ಸುದ್ದಿಯಲ್ಲಿದೆ.

ಈ ಒಂದು ವರ್ಷ ಚಿನ್ನಕ್ಕೆ ಹಣ ಸುರಿಯಬೇಡಿರೆಂದು ದೇಶದ ಪ್ರಧಾನಿಗಳು ಜನತೆಗೆ ಕರೆ ಕೊಟ್ಟಿರುವರಷ್ಟೆ. ಯುದ್ಧ-ಸನ್ನಿವೇಶದಲ್ಲಿ ದೇಶದ ಆರ್ಥಿಕ-ಕ್ಷೇಮಕ್ಕಾಗಿ ಈ ಹಿತೋಕ್ತಿ. ಎಲ್ಲ ದೇವಾಲಯಗಳ ಚಿನ್ನವನ್ನೂ ಸರ್ಕಾರವು ವಶಪಡಿಸಿಕೊಳ್ಳಲಿದೆಯೆಂಬ ಸುಳ್ಳು ವದಂತಿಯನ್ನೂ ಈಚೆಗೆ ಹಬ್ಬಿಸಲಾಯಿತಷ್ಟೆ.

ಚಿನ್ನಕ್ಕೇಕೆ ಇಷ್ಟು ಪ್ರಾಮುಖ್ಯ? ಅದೆಷ್ಟು ಬೆಲೆ ಬಾಳುವಂತಹುದು! ಒಂದು ಗ್ರಾಂಗೆ ಹದಿನಾರು ಸಾವಿರ ರೂಪಾಯಿಯ ಹತ್ತಿರದ ಬೆಲೆ, ಇಂದು - ಶೇ ೯೯ರಷ್ಟು ಶುದ್ಧವಾದ ಚಿನ್ನಕ್ಕೆ (೨೪ ಕ್ಯಾರಟ್)!  ಶೇ. ೯೨ರಷ್ಟರದ್ದಕ್ಕೆ (೨೨ ಕ್ಯಾರಟ್) ಇನ್ನೊಂದು ಸಾವಿರ ಕಡಿಮೆಯೆಂದುಕೊಳ್ಳಿ. ಚಿನ್ನದ ಒಂದು ಕಿರು-ಸರವೆಂದರೆ ಇಪ್ಪತ್ತುಸಾವಿರದಿಂದ ಆರಂಭಿಸಿ ಐದು ಲಕ್ಷದವರೆವಿಗೂ ಆದೀತು!

ಚಿನ್ನವು ಅತ್ಯಂತ ನಮ್ಯವಾದ ಪದಾರ್ಥ. ಒಂದು ಔನ್ಸ್ (೩೦ ಗ್ರಾಂಗಳಿಗಿಂತ ಕೊಂಚ ಕಡಿಮೆ) ಚಿನ್ನವನ್ನು ತೆಳು-ತಂತಿಯನ್ನಾಗಿಸಿ ೫೦ ಮೈಲುಗಳಷ್ಟುದ್ದ ಎಳೆಯಬಹುದೆನ್ನುತ್ತಾರೆ! ಅಥವಾ ಅದನ್ನೇ ತೆಳು ಚಪ್ಪಟೆಯಾಗಿಸಿ ೯ ಮೀಟರುಗಳ ಚದರವಾಗಿಸಬಹುದೆನ್ನುತ್ತಾರೆ!

ಚಿನ್ನವು ಕರಗುವುದು ೧೦೦೦ ಡಿಗ್ರಿಗೆ; ಕುದಿಯುವುದು ೨೮೦೦ ಡಿಗ್ರಿಗೆ. ಮನುಷ್ಯದೇಹದ ತಾಪಮಾನವಾದ ೩೭ ಡಿಗ್ರಿಗೆ ಚಿನ್ನವು ಬೇಗನೇ ಹೊಂದಿಕೊಳ್ಳುವುದೆಂದೇ ಆಭರಣಗಳನ್ನು ಚಿನ್ನದಿಂದ ಮಾಡಿಸುವುದು ಪ್ರಚುರ. ಜಗತ್ತಿನಲ್ಲಿ ಲಭ್ಯವಾಗಿರುವ ಚಿನ್ನದ ಅರ್ಧಭಾಗದಷ್ಟು ಆಭರಣಕ್ಕೇ ಬಳಕೆಯಾಗಿದೆಯೆನ್ನುತ್ತಾರೆ.

ಕಳ್ಳರಿಗೆ ಅತ್ಯಂತ-ಪ್ರಿಯವಾದ ವಸ್ತುವೆಂದರೆ ಇದೇ. ಏಕೆ? ಲಕ್ಷಾಂತರರೂಪಾಯಿಯ ವಸ್ತುವನ್ನು ಕಿರುಕಿಸೆಯಲ್ಲಿ ತುರುಕಿಕೊಂಡು ಓಡಬಹುದು!

ಚಿನ್ನದ ಪ್ರಕಾಶವೆಂತಹುದು! ಬಂಗಾರದ ಬಣ್ಣವೆಂದರೆ ಹಳದಿಯ ಹೊಳಪು! ಅದಕ್ಕೇ ಅಲ್ಲವೇ, ಅದು ಸು-ವರ್ಣ, “ಒಳ್ಳೆಯ ಬಣ್ಣವುಳ್ಳದ್ದು”! ಸ್ವರ್ಣವೆಂದರೂ ಅದೇ.  ಸ್ವರ್ಣದಿಂದಲೇ ಪೊನ್ನು-ಹೊನ್ನುಗಳು ಬಂದಿರುವುವೆನ್ನುವರು. ಸಂಸ್ಕೃತದ ಭೃಂಗಾರವೇ ಬಂಗಾರವಾಗಿದೆ. ಕಾಂಚನ-ರುಕ್ಮಗಳೆಂದರೂ ಹೊಳೆಯುವುದೇ. ಮೈಬಣ್ಣ ಯಾವುದೇ ಇರಲಿ ಎಲ್ಲರಿಗೂ ಮೆರಗು ತರುವುದೇ ಸುವರ್ಣ.

ಚಿನ್ನಕ್ಕೂ ಭಾರತಕ್ಕೂ ಅನಾದಿಕಾಲದ ಸಂಬಂಧ. ಭಾರತದಲ್ಲಿ ಭಾರೀಪ್ರಮಾಣದಲ್ಲಿ ಬಂಗಾರವಿದ್ದುದನ್ನು ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ ಭಾರತಕ್ಕೆ ಆಗಮಿಸಿದ್ದ ಮೆಗಾಸ್ತನೀಸ್ ಹೇಳಿದ್ದಾನೆ.

ಇನ್ನೂ ಹಿಂದಕ್ಕೆ ವೈದಿಕ-ಸಾಹಿತ್ಯಕ್ಕೆ ಹೋದರೆ, ಲಕ್ಷ್ಮೀದೇವಿಯನ್ನು ಹಿರಣ್ಯ-ವರ್ಣಾ ಎಂದಿರುವುದಿದೆ. ಚಿನ್ನವು ಹಿರಣ್ಯ; ಚಿನ್ನದಿಂದಾದುದು ಹಿರಣ್ಮಯ. ವೇದಗಳಲ್ಲಿ ರಥದ ಮುಂಭಾಗಕ್ಕೆ ಚಿನ್ನವನ್ನು ಬಳಸುತ್ತಿದ್ದುದನ್ನು ಹೇಳಿದೆ. ಇನ್ನು ಸೂರ್ಯನ ರಥವೇ ಹಿರಣ್ಮಯ! ಮೇರು/ಸುಮೇರು/ ಮಹಾಮೇರುವೆಂದರೆ ಹೇಮಾದ್ರಿ: ಅರ್ಥಾತ್, ಚಿನ್ನದ ಪರ್ವತ!

ಕಾಲುಗುರಿನಿಂದ ಹಿಡಿದು ತಲೆಗೂದಲಿನವರೆಗೂ ಹಿರಣ್ಮಯನಾದ ಪುರುಷನನ್ನು ಛಾಂದೋಗ್ಯೋಪನಿಷತ್ತು ಚಿತ್ರಿಸುತ್ತದೆ. ಸತ್ಯ-ಮುಖವನ್ನು ಹಿರಣ್ಮಯ-ಪಾತ್ರವು ಮುಚ್ಚಿರುವುದನ್ನು ಈಶೋಪನಿಷತ್ತು ಹೇಳಿದೆ.

ಸೃಷ್ಟಿಯ ಆರಂಭವೇ ಹಿರಣ್ಯಗರ್ಭನಿಂದ. ಅಸುರರಲ್ಲಿ ಪ್ರಸಿದ್ಧರಾದ ಹಿರಣ್ಯಾಕ್ಷ-ಹಿರಣ್ಯಕಶಿಪುಗಳ ಹೆಸರಲ್ಲೂ ಹಿರಣ್ಯವಿದೆ. ಲಂಕೆಯನ್ನು ಸ್ವರ್ಣಮಯೀ ಎಂದಿದೆ. ಸೀತೆಯ ಆಕೃಷ್ಟಳಾದದ್ದು ಹೇಮ-ಮೃಗಕ್ಕೆ. ಅಶ್ವಮೇಧ-ಸಂದರ್ಭದಲ್ಲಿ ಸೀತೆಯ ಸ್ವರ್ಣ-ಪ್ರತಿಮೆಯನ್ನೇ ರಾಮನಿಟ್ಟುಕೊಂಡಿದ್ದುದು. ಕೃಷ್ಣ-ಕಥೆಯಲ್ಲಿಯ ರುಕ್ಮಿ-ರುಕ್ಮಿಣಿಗಳಿಬ್ಬರ ಹೆಸರೂ ರುಕ್ಮದಿಂದಾದುದು. 

ಚಿನ್ನಕ್ಕೆ ಪರ್ಯಾಯಗಳು ಅಮರಕೋಶದಲ್ಲಿ ೨೫. ಉಳಿದವನ್ನೂ ಸೇರಿಸಿಕೊಂಡರೆ ೫೮. ಹೀಗೆ ಭಾರತದಲ್ಲಿಯ ಸ್ವರ್ಣ-ರಾಶಿಯೂ ವಿಪುಲ, ಅದಕ್ಕಿರುವ ಶಬ್ದರಾಶಿಯೂ ವಿಪುಲ!

ಹಿಂದೆ ನಮ್ಮಲ್ಲಿ ಚಿನ್ನದ ನಾಣ್ಯಗಳು ಬಳಕೆಯಲ್ಲಿದ್ದವು: "ಹತ್ತು ಚಿನ್ನಗಳನ್ನು ಕೊಡು" ಎಂಬ ಮೃಚ್ಛಕಟಿಕದಲ್ಲಿಯ ಮಾತಿಗೆ, “ಹತ್ತು ಸುವರ್ಣ-ನಾಣ್ಯಗಳನ್ನು ಕೊಡು” ಎಂದರ್ಥ.

ಚಿನ್ನವು ಆಯುಸ್, ಪ್ರಜ್ಞೆ, ವೀರ್ಯ, ಬಲ, ಸ್ಮೃತಿಗಳನ್ನುಂಟುಮಾಡುತ್ತದೆ – ಎನ್ನುತ್ತದೆ, ಆಯುರ್ವೇದ. ಅಲ್ಲದೆ ವಾಗ್-ವಿಶುದ್ಧಿ, ಕಾಂತಿಗಳಲ್ಲದೆ, ಪಾಪ-ಕ್ಷಯವನ್ನೂ ಸಹ ಮಾಡುವುದೆಂದಿದೆ.

ವಿವಾಹ-ಸಂದರ್ಭದಲ್ಲಿ ಕನ್ಯೆಯನ್ನು ಕನಕ-ಸಂಪನ್ನೆಯಾಗಿಯೇ ಧಾರೆಯೆರೆದುಕೊಡುವುದು: ಕನ್ಯೆ-ಕನಕಗಳೆರಡಕ್ಕೂ ಹೊಳೆಯುವುದೆಂದೇ ಅರ್ಥ. ಎಂಭತ್ತೊಂದು ದಾಟಿದವರಿಗೆ ನಡೆಸುವ ಸಹಸ್ರಚಂದ್ರ-ದರ್ಶನದ ಆಚರಣೆಯಲ್ಲಿ ಸುವರ್ಣಾಭಿಷೇಕವುಂಟು. 

ಹಿತವೂ ರಮಣೀಯವೂ ಆಗಿರುವುದರಿಂದಲೇ ಚಿನ್ನವನ್ನು ಹಿರಣ್ಯವೆನ್ನುವುದು. ಎಂದೇ, ಪಂಚ-ಮಹಾಪಾತಕಗಳಲ್ಲಿ ಹಿರಣ್ಯ-ಸ್ತೇಯ ಅಥವಾ ಚಿನ್ನವನ್ನು ಕದಿಯುವುದನ್ನೇ ಮೊಟ್ಟಮೊದಲನೆಯದನ್ನಾಗಿ ಛಾಂದೋಗ್ಯೋಪನಿಷತ್ತು ಪರಿಗಣಿಸಿದೆ.

ಇವೆಲ್ಲಕ್ಕೂ ಮಿಗಿಲಾಗಿ, ಚಿನ್ನವೆಂಬುದು ಏಕೆ ಅಷ್ಟು ವಿಶಿಷ್ಟ/ಪವಿತ್ರವೆಂಬುದನ್ನು ಶ್ರೀರಂಗಮಹಾಗುರುಗಳು ವಿವರಿಸಿರುವ ನುಡಿಯನ್ನು ಗಮನಿಸಬೇಕು: “ಸಮಾಧಿಸ್ಥಿತಿಗೆ ಏರುವಾಗ ಯೋಗಿಯಲ್ಲಿ ಯಾವ ನಾಡೀ-ಗತಿಯು ಆರಂಭವಾಗುತ್ತದೋ ಅಂತಹ ನಾಡೀ-ಗತಿಯನ್ನು ಸ್ವರ್ಣ-ಧಾರಣವು ಉಂಟುಮಾಡುತ್ತದೆ.” ಸ್ವತಃ ಯೋಗಿಗಳೂ ನಾಡೀವಿಜ್ಞಾನ-ಕುಶಲರೂ ಆದ ಅವರು ಪ್ರಯೋಗ-ಪೂರ್ವಕವಾಗಿ ತಿಳಿಸಿಕೊಟ್ಟಿದ್ದ ವಿಷಯವಿದು.

ಲಕ್ಷವರ್ಷಗಳಾದರೂ ಯಾವುದೇ ಬದಲಾವಣೆಯಿಲ್ಲದೆ ಉಳಿದುಕೊಳ್ಳುವ ಚಿನ್ನವನ್ನು “ಸುವರ್ಣಂ ಅಜರಾಮರಂ” - ಮುಪ್ಪುಸಾವುಗಳಿಲ್ಲದ್ದು ಚಿನ್ನ! - ಎಂದು ನಮ್ಮ ಪೂರ್ವಿಕರು ಕೊಂಡಾಡಿದ್ದರೆ ಆಶ್ಚರ್ಯವೇನು?

ಸೂಚನೆ: 21/5//2026 ರಂದು ಈ ಲೇಖನ ವಿಜಯವಾಣಿ ಸುದಿನ ದಲ್ಲಿ ಪ್ರಕಟವಾಗಿದೆ.