Monday, September 1, 2025

ಪ್ರಶ್ನೋತ್ತರ ರತ್ನಮಾಲಿಕೆ 30 (Prasnottara Ratnamalike 30)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೩೦. ಪ್ರಿಯ ಯಾವುದು?

ಉತ್ತರ - ಪ್ರಾಣಿಗಳಿಗೆ ಕಲ್ಯಾಣ.


ಈ ಮುಂದಿನ ಪ್ರಶ್ನೆ ಹೀಗಿದೆ - 'ಪ್ರಿಯ ಯಾವುದು?' ಎಂಬುದಾಗಿ. ಅದಕ್ಕೆ ಉತ್ತರ - 'ಪ್ರಾಣಿಗಳಿಗೆ ಕಲ್ಯಾಣವಾದದ್ದು' ಯಾವುದೋ ಅದನ್ನು ಪ್ರಿಯ ಎಂಬುದಾಗಿ ಕರೆಯಲಾಗುತ್ತದೆ. ಅಂದರೆ ಪ್ರಾಣಿಗಳಿಗೆ, ಅಥವಾ ಸೃಷ್ಟಿಯಲ್ಲಿ ಇರುವ ಪ್ರತಿಯೊಂದು ಜೀವಿಗೆ ಪ್ರಿಯವಾಗುವಂತೆ ಇರುವುದು; ಅವುಗಳಿಗೆ ಒಳ್ಳೆಯದಾಗುವಂತೆ ಅಥವಾ ಕಲ್ಯಾಣವಾಗುವಂತೆ ನಡೆದುಕೊಳ್ಳುವಿಕೆಯನ್ನೇ 'ಪ್ರಿಯ' ಎಂಬುದಾಗಿ ಇಲ್ಲಿ ಹೇಳಲಾಗಿದೆ. ಹೀಗೊಂದು ಮಾತಿದೆ - "ನ ಹಿ ಕಸ್ಯ ಪ್ರಿಯಃ ಕೋ ವಾ ವಿಪ್ರಿಯಃ ವಾ ಜಗತ್ತ್ರಯೇ । ಕಾಲೇ ಕಾರ್ಯವಶಾತ್ ಸರ್ವೇ ಭವಂತ್ಯೇವ ಅಪ್ರಿಯಾಃ ಪ್ರಿಯಾಃ ॥" ಯಾರಿಗೆ ಯಾರೂ ಪ್ರಿಯನು ಅಲ್ಲ ಅಪ್ರಿಯನೂ ಅಲ್ಲ. ಯಾವುದೋ ಕಾಲದಲ್ಲಿ, ಯಾವುದೋ ಕಾರ್ಯಕ್ಕೆ ಅನುಗುಣವಾಗಿ ಅವನು ಪ್ರಿಯ ಅಥವಾ ಅಪ್ರಿಯ ಎಂಬುದಾಗಿ ಪರಿಗಣಿತವಾಗುತ್ತಾನೆ ಎಂಬುದಾಗಿ. ಅಂದರೆ ವಸ್ತುವು ಅಥವಾ ಪ್ರಾಣಿಯು ನಮಗೆ ಪ್ರಿಯವಾಗಬೇಕಾದರೆ ಅದೊಂದು ಕಾಲದ ಸನ್ನಿವೇಶದಲ್ಲಿ ನಮಗೆ ಸಂಬಂಧಿಸಿದ್ದಾದಾಗ ಮಾತ್ರ ಆಗುತ್ತದೆ. ಹಾಗಾಗಿ ಆ ಸಂದರ್ಭದಲ್ಲಿ ಆ ಪ್ರಾಣಿಗೆ ನಾವು ಒಳ್ಳೆಯದನ್ನು ಉಂಟುಮಾಡಿದರೆ ಅದನ್ನು 'ಪ್ರಿಯ' ಎಂಬುದಾಗಿ ಕರೆಯಬೇಕು. ಮಾನವನಾದ ನಾವುಗಳು ಅತ್ಯಂತ ವಿವೇಕಿಯಾಗಿ ಎಲ್ಲ ಪ್ರಾಣಿಗಳಿಗೆ ಕಲ್ಯಾಣವಾಗಬೇಕು ಎಂಬುದನ್ನು ಬಯಸಬೇಕು. ಅಂದರೆ ಎಲ್ಲ ಪ್ರಾಣಿಗಳು ಈ ಪ್ರಪಂಚದಲ್ಲಿ ಬದುಕಬೇಕು; ಆ ಬದುಕು ಅವುಗಳಿಗೆ ಸಾರ್ಥಕತೆಯನ್ನು ಕೊಡುವಂತಿರಬೇಕು; ಕೇವಲ ಆಹಾರ ನಿದ್ರಾ ಭಯಗಳಿಂದ ಕೂಡಿದ ಜೀವಿಕೆ ಅವುಗಳದ್ದು. ಆದರೂ ಕೂಡ ಅವುಗಳು ಇವೆಲ್ಲವನ್ನೂ ದಾಟಿ ಮುಂದೆ ಆ ಜೀವವು ಸನ್ಮಾರ್ಗದತ್ತ ನಡೆಯುವಂತಾಗಬೇಕು. ಕರ್ಮಸಿದ್ಧಂತದ ಅನುಗುಣವಾಗಿ ಪ್ರತಿಯೊಂದು ಜೀವವೂ ಅದರ ಕರ್ಮಕ್ಕೆ ಅನುಗುಣವಾಗಿ ಆ ಕರ್ಮಫಲವನ್ನು ಸವೆಸಲು ಆ ಜನ್ಮವನ್ನು ಪಡೆದಿರುತ್ತದೆ. ಅದಕ್ಕೆ ಪ್ರತಿಯೊಬ್ಬರೂ ಕೂಡ ಸಹಕರಿಸಬೇಕಾಗುತ್ತದೆ. ಹಾಗಾಗಿ ಇಂತಹ ಕಲ್ಯಾಣದ ಮನೋಭಾವನೆ ಇರುವಂತಹದ್ದನ್ನು 'ಪ್ರಿಯ' ಎಂಬುದಾಗಿ ಕರೆಯಲಾಗಿದೆ. ಜೀವಕಲ್ಯಾಣವುಂಟಾಗುವಂತೆ ಬದುಕನ್ನು ಸಾಗಿಸಲು ಜ್ಞಾನವನ್ನು ಸಂಪಾದಿಸಬೇಕು. ಅದರ ಹಿನ್ನೆಲೆಯಲ್ಲಿ ಮುಂದಿನ ಹೆಜ್ಜೆಗಳಾದ ಇಚ್ಛೆ ಮತ್ತು ಕ್ರಿಯೆಗಳು ನಡೆಯುವಂತಾಗಬೇಕು. 


ಈ ಹಿಂದಿನ ಲೇಖನದಲ್ಲಿ ಜ್ಞಾಪಿಸಿಕೊಂಡಂತೆ ಹೇಗೆ ಸತ್ಯವು ಕಾಯಿಕ, ವಾಚಿಕ ಮತ್ತು ಮಾನಸಿಕ ಎಂಬುದಾಗಿ ಮೂರು ವಿಧವಿದೆಯೋ, ಅಂತಯೇ ಈ ಪ್ರಿಯವೂ ಕೂಡ ಮೂರು ವಿಧವಾಗಿದೆ. ಜೀವಕ್ಕೆ ಕಲ್ಯಾಣವನ್ನು ಈ ಮೂರು ಬಗೆಯಲ್ಲೂ ಕೂಡ ಮಾಡಲು ಸಾಧ್ಯ. ಸಾಮಾನ್ಯವಾಗಿ ಮನಸ್ಸಿಗೆ ಯಾವುದು ಮುದವನ್ನು ಕೊಡುತ್ತದೆಯೋ ಅದು ಪ್ರಿಯ ಎಂಬುದಾಗಿ ಹೇಳಲಾಗುತ್ತದೆ. ಪ್ರಿಯವಾದದ್ದೆಲ್ಲವೂ ಹಿತವಾಗುವುದಿಲ್ಲ. ಹಿತವಾದದ್ದೆಲ್ಲವೂ ಪ್ರಿಯವಾಗಬೇಕೆಂದು ಇಲ್ಲ ಆದರೆ ಯಾವುದು ಹಿತವೂ ಮತ್ತು ಪ್ರಿಯವೂ ಆಗಿರುತ್ತದೆಯೋ, ಅದುವೇ ಜೀವಕ್ಕೂ ಹಿತ ಮತ್ತು ಪ್ರಿಯ ಎಂಬ ಮಾತನ್ನು ಶ್ರೀರಂಗ ಮಹಾಗುರುಗಳು ಹೇಳಿದ್ದನ್ನು ಜ್ಞಾಪಿಸಿಕೊಳ್ಳಬಹುದು. ಹಾಗಾಗಿ ಪ್ರತಿಯೊಂದು ಜೀವವೂ ಅದರ ಸಹಜತೆಯಲ್ಲಿ ಬದುಕಿದರೆ ಮಾತ್ರ ಆಗ ಎಲ್ಲ ಜೀವಿಗಳಿಗೆ ಶುಭ ಅಥವಾ ಕಲ್ಯಾಣ ಉಂಟಾಗುತ್ತದೆ. ಅದುವೇ ಪ್ರಿಯವಾದ ಬದುಕು. ಹಾಗೆ ಬದುಕ ಸಾಗಿಸಬೇಕು ಎಂಬ ಉಪದೇಶ ಈ ಪ್ರಶ್ನೋತ್ತರದಲ್ಲಿ ಕಾಣುತ್ತದೆ.


ಸೂಚನೆ : 31/8/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 152 ಯುದ್ಧಕ್ಕೆ ಮೊದಲಿರಬೇಕಾದ ಸಿದ್ಧತೆಗಳೇನು? (Vyaasa Vikshita 152)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಯುದ್ಧಕ್ಕೆ ಮುನ್ನಾ ಸಿದ್ಧತೆಗಳೇನು?


ರಾಜನು ತನ್ನ ದೇಶವನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬುದನ್ನು ನಾರದರು ಯುಧಿಷ್ಠಿರನಿಗೆ ವಿವರಿಸಿ ಹೇಳುತ್ತಿದ್ದಾರೆ.

ಶತ್ರುರಾಷ್ಟ್ರದ ಸೇನಾಮುಖ್ಯಾಧಿಕಾರಿಗಳಿಗೆ ಗುಟ್ಟಾಗಿ ಯೋಗ್ಯತಾನುಸಾರಿಯಾಗಿ ರತ್ನಗಳನ್ನು ಕೊಟ್ಟು ವಶದಲ್ಲಿಟ್ಟುಕೊಂಡಿರಬೇಕು. ಹಾಗೆ ಮಾಡುತ್ತಿದ್ದೇಯೆ ತಾನೆ?

ರಾಜನು ಮೊಟ್ಟಮೊದಲು ತನ್ನನ್ನು ತಾನೇ ಜಯಿಸಿಕೊಂಡಿರಬೇಕು. ಅದನ್ನು ಸಾಧಿಸಿ ಜಿತೇಂದ್ರಿಯನಾಗಿರಬೇಕು. ಪ್ರಮತ್ತರಾಗಿರುವ ಹಾಗೂ ಗರ್ವಭರಿತರಾದ ಶತ್ರುಗಳನ್ನು ಜಯಿಸಲು ಆಗಲೇ ಸಾಧ್ಯವಾಗುವುದು. ನೀನು ಹಾಗೆ ಮಾಡುತ್ತಿರುವೆ ತಾನೆ?

ಶತ್ರುವಿನ ಮೇಲೆ ದಂಡೆತ್ತಿಹೋಗುವುದೆಂದರೆ ಮೊಟ್ಟಮೊದಲು ಸಾಮ-ದಾನ-ಭೇದಗಳನ್ನು ಪ್ರಯೋಗಿಸಿ ನೋಡಿಯಾಗಿರಬೇಕು. ಹಾಗೆ ಅವನ್ನು ಪ್ರಯೋಗಿಸಿದ ಬಳಿಕವೇ ಯುದ್ದಮಾಡಬಹುದು, ಮುಂಚೆ ಅಲ್ಲ.

ಶತ್ರುಗಳ ಮೇಲೆ ದಂಡೆತ್ತಿ ಹೋಗುವ ಮೊದಲು ಮಾಡಬೇಕಾದ ಕೆಲಸವೊಂದಿದೆ. ಅದೆಂದರೆ ಮೂಲವನ್ನು ದೃಢಪಡಿಸಿಕೊಳ್ಳುವುದು - ಅರ್ಥಾತ್ ನಿನ್ನ ರಾಜ್ಯವೇ ಗಟ್ಟಿಯಾಗಿ ಉಳಿದಿದೆಯೇ? - ಎಂದು ಪರೀಕ್ಷಿಸಿಕೊಳ್ಳುವುದು; ಆನಂತರವೇ ಶತ್ರುಗಳ ಮೇಲೇರಿಹೋಗತಕ್ಕದ್ದು; ಹಾಗೂ ಗೆದ್ದದ್ದನ್ನು ರಕ್ಷಿಸಿಕೊಳ್ಳಲಾಗುವುದು. ರಾಜನೇ, ನೀನು ಹಾಗೆ ಮಾಡುತ್ತಿರುವೆ ತಾನೆ?

ಸೈನ್ಯಕ್ಕೆ ಎಂಟು ಅಂಗಗಳಿರುವುವು: ಧನ-ರಕ್ಷಕ, ದ್ರವ್ಯ-ಸಂಗ್ರಾಹಕ, ಚಿಕಿತ್ಸಕ, ಗುಪ್ತಚರ, ಪಾಚಕ, ಸೇವಕ, ಲೇಖಕ ಹಾಗೂ ಪ್ರಹರೀ - ಎಂಬುದಾಗಿ. ಹಾಗೆಯೇ ಅದಕ್ಕೆ ನಾಲ್ಕು ಬಲಗಳುಂಟು - ಹಸ್ತಿ(ಗಜ), ಅಶ್ವ, ರಥ, ಪದಾತಿ - ಎಂಬುದಾಗಿ. ಹೀಗೆ ಅಷ್ಟಾಂಗಗಳಿಂದಲೂ ಚತುರ್ಬಲಗಳಿಂದಲೂ ಕೂಡಿರುವ ಸೈನ್ಯಕ್ಕಿರುವ ಅಧಿಪತಿಗಳು ಸೈನ್ಯವನ್ನು ಚೆನ್ನಾಗಿ ಮುನ್ನಡೆಸಬಲ್ಲವರಾಗಿರಬೇಕು, ಹಾಗೂ ಶತ್ರುಗಳನ್ನು ಕೆಡವಲು ಸಮರ್ಥರಾಗಿರಬೇಕು. ನಿನ್ನ ಸೈನ್ಯ-ಸೇನಾಧಿಪತಿಗಳು ಹೀಗೇ ಇರುವುದಲ್ಲವೆ?

ಶತ್ರುರಾಜ್ಯದಲ್ಲಿ ಕ್ಷಾಮ ಬಂದಿರುವ ಸಮಯ, ಪೈರುಗಳ ಕೊಯಿಲಿನ ಕಾಲ - ಇವುಗಳನ್ನು ಗಣಿಸದೇ ಶತ್ರುಗಳನ್ನು ಸಂಹರಿಸತಕ್ಕದ್ದು. ನೀನು ಹಾಗೆ ಮಾಡುತ್ತಿರುವೆಯಷ್ಟೆ?

ಅನ್ಯರಾಷ್ಟ್ರಗಳನ್ನು ಗೆದ್ದಾಗ ಅಲ್ಲಿ ತನ್ನ ಅಧಿಕಾರಿಗಳನ್ನು ರಾಜನು ನೇಮಿಸುವವಷ್ಟೆ? ಅವರೂ, ಸ್ವರಾಷ್ಟ್ರದಲ್ಲಿಯೇ ನೇಮಕಗೊಂಡ ಅಧಿಕಾರಿಗಳೂ, ರಾಜಾದಾಯವನ್ನು ಸಂಗ್ರಹಿಸುತ್ತಾ ಇದ್ದು, ಪರಸ್ಪರ ಹೊಂದಿಕೊಂಡಿದ್ದು ರಾಜ್ಯರಕ್ಷಣೆಯನ್ನು ಮಾಡುತ್ತಿರಬೇಕು. ನಿನ್ನ ಅಧಿಕಾರಿವರ್ಗದವರೆಲ್ಲ ಹಾಗಿರುವರು ತಾನೆ?

ರಾಜನು ಸೇವಿಸುವ ಆಹಾರ-ಪದಾರ್ಥ, ಧರಿಸುವ ವಸ್ತ್ರಗಳು, ಸುಗಂಧ-ದ್ರವ್ಯಗಳು - ಇವನ್ನು ರಾಜನು ನೆಚ್ಚುವ ಅಧಿಕಾರಿಗಳೇ ರಕ್ಷಿಸತಕ್ಕದ್ದು. ನಿನ್ನ ರಾಜ್ಯದಲ್ಲಿ ಈ ಪ್ರಕಾರವಾಗಿಯೇ ನಡೆಯುತ್ತಿದೆಯಷ್ಟೆ? (ಭಾರತದ ಹಿಂದಿನ ಪ್ರಧಾನಿಯೊಬ್ಬರು ವಿದೇಶದಲ್ಲಿ ಮರಣಹೊಂದಿದಾಗ ಅವರ ಆಹಾರದಲ್ಲೇ ವಿಷ-ಮಿಶ್ರಣವಾಗಿದ್ದರೂ, ಅವರ ಆಹಾರ-ಪರಿಚಾರಕನ ಮೇಲೆಯೇ ಸಂಶಯವು ಪ್ರಬಲವಾಗಿದ್ದರೂ, ಅದನ್ನೆಲ್ಲ ಮುಚ್ಚಿಹಾಕಲಾಯಿತಷ್ಟೆ?).

ರಾಜನ ಬೊಕ್ಕಸ, ವಾಸ-ಸ್ಥಳ, ವಾಹನ (ಗಜಶಾಲೆ-ಅಶ್ವಶಾಲೆಗಳು), ದ್ವಾರಗಳು, ಆಯುಧಾಗಾರ - ಇವೆಲ್ಲೆಡೆ ನಿನ್ನ ಕ್ಷೇಮವನ್ನೇ ಸಾಧಿಸತಕ್ಕವರೂ ನಿನ್ನಲ್ಲಿಯೇ ಭಕ್ತಿಯುಳ್ಳವರೂ ಆದವರೇ ಮೇಲ್ವಿಚಾರಕರಾಗಿರುವರಷ್ಟೆ?

ಅರಮನೆಯ ಒಳನೆಲೆಗಳಲ್ಲಿ ಕೆಲಸಮಾಡುವ ಪಾಚಕರೇ ಮೊದಲಾದವರೂ, ಹತ್ತಿರದ ನೆಲೆಗಳಲ್ಲಿರುವ ಮಂತ್ರಿ-ಸೇನಾಪತಿ-ರಾಜಪುತ್ರ ಮೊದಲಾದವರೂ ಸುರಕ್ಷಿತರಾಗಿರತಕ್ಕದ್ದು. ಇವರುಗಳಿಂದ ತನ್ನ ರಕ್ಷಣೆಯನ್ನು ಸಾಧಿಸುವುದು, ಹಾಗೂ ಇವರುಗಳಿಗೆ ತಾನು ರಕ್ಷಣೆಯನ್ನು ಸಾಧಿಸುವುದು - ಹೀಗೆ ಪಾರಸ್ಪರಿಕ-ರಕ್ಷಣವೆಂಬುದು ಮುಖ್ಯ. ಅದೆಲ್ಲವೂ ಹಾಗೆ ಆಗುತ್ತಿದೆ ತಾನೆ, ನಿನ್ನ ರಾಜ್ಯದಲ್ಲಿ?

ಪಾನ-ದ್ಯೂತಗಳು, ಎಂದರೆ ಕುಡಿತ-ಜೂಜುಗಳು, ಹಾಗೂ ಕ್ರೀಡೆ-ಸ್ತ್ರೀಸಂಗ- ಇವುಗಳು, ರಾಜರಿಗಂಟತಕ್ಕ ವ್ಯಸನಗಳು (ಚಟಗಳು). ಪೂರ್ವಾಹ್ಣದ ಕಾಲದಲ್ಲಿ ಇಂತಹ ವಿಷಯಗಳನ್ನೊಡ್ಡಿ ನಿನ್ನ ಹಣ-ಸಮಯ ಗಳನ್ನು ಸೇವಕರು ಹಾಳುಮಾಡುತಿಲ್ಲ ತಾನೆ?

ಸೂಚನೆ : 31/8/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.


Saturday, August 30, 2025

ಅಷ್ಟಾಕ್ಷರೀ 88 ಮೂಷಕವಾಹನಮ್ (Astaksari 88)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಗಣಪನ ಹೊರುವವ ಇಲಿಯೇ ಏಕೆ?

ಈಗಷ್ಟೇ ಗೌರಿ-ಗಣೇಶ ಹಬ್ಬಗಳು ಮುಗಿದಿವೆ. ಅವುಗಳತ್ತ ಒಂದು ಹಿನ್ನೋಟವು ಅನುಚಿತವೇನಾಗಲಾರದು.

"ಗಣಪನಿಲ್ಲದ ಗ್ರಾಮವಿಲ್ಲ" ಎಂಬ ಗಾದೆಯೇನೋ ಕನ್ನಡದಲ್ಲಿದೆ. ಇತರ-ದೇವತೆಗಳ ಪೂಜೆಯಂತೆ ಗಣಪತಿ-ಪೂಜೆಯೂ ಮನೆಮನೆಗಳಲ್ಲಷ್ಟೆ ನಡೆಯುತ್ತಿದ್ದದ್ದು. ಅದನ್ನೊಂದು ರಾಷ್ಟ್ರೀಯ ಹಬ್ಬವನ್ನಾಗಿಸಿದವರು ಬಾಲಗಂಗಾಧರತಿಲಕರು. ಆಗ ಹೇಗಿತ್ತು?: ಆಂಗ್ಲರ ದಬ್ಬಾಳಿಕೆ ಮಿತಿಮೀರಿತ್ತು; ಜನರಲ್ಲಿ ದೇಶಭಕ್ತಿ ಕ್ಷೀಣಿಸಿತ್ತು; ಸ್ವಸಂಸ್ಕೃತಿಯ ಅಭಿಮಾನ ನಷ್ಟವಾಗಿತ್ತು; ಆಗ ಗಣೇಶೋತ್ಸವವನ್ನೇ ಬಳಸಿಕೊಂಡು ಜನಜಾಗರಣವನ್ನುಂಟುಮಾಡಿ, ಸ್ವಾತಂತ್ರ್ಯಾಂದೋಳನದ ಕೆಚ್ಚನ್ನು ಹೆಚ್ಚಿಸಿದವರೇ ಲೋಕಮಾನ್ಯರು. 

ಬ್ರಿಟಿಷರನ್ನು ಒದ್ದೋಡಿಸಿದ್ದೇನೋ ಆಯಿತು. ಆದರೆ ಪಾಶ್ಚಾತ್ತ್ಯರನ್ನು ನಾವು ಸಂಪೂರ್ಣವಾಗಿ ತೊಲಗಿಸಲಾಗಿಲ್ಲ. ಹೇಗೆ? ನಮ್ಮ ಪ್ರಾಚೀನ-ಸಾಹಿತ್ಯಗಳಿಗಾಗಲಿ, ಕಲೆ-ಶಿಲ್ಪಗಳಿಗಾಗಲಿ, ಅವರಿತ್ತ ವ್ಯಾಖ್ಯಾನಗಳೇ ಇನ್ನೂ ನಮ್ಮ ತಲೆ ತಿನ್ನುತ್ತಿವೆ. ಅಲ್ಲಿಗೆ, ಭೌತಿಕವಾಗಿ ಅವರನ್ನು ಓಡಿಸಿದ್ದಾಯಿತು, ಬೌದ್ಧಿಕವಾಗಿ ಓಡಿಸಲಾಗಿಲ್ಲ. ಪಾಶ್ಚಾತ್ಯರ ಮಾನಸ-ಪುತ್ರರೇ ಇಂದು ನಮ್ಮ ವಿಶ್ವವಿದ್ಯಾಲಯಗಳಲ್ಲೆಲ್ಲಾ ತುಂಬಿಹೋಗಿದ್ದಾರೆ!

ನಮ್ಮಲ್ಲಿಯ ಪಂಚಾಯತನ-ಪೂಜೆಯಲ್ಲಿ ಒಂದನ್ನು ಪ್ರಧಾನದೇವತೆಯನ್ನಾಗಿಯೂ ಉಳಿದವನ್ನು ಗೌಣದೇವತೆಗಳನ್ನಾಗಿಯೂ ಭಾವಿಸುವುದಿದೆ. ಅಲ್ಲಿಯ ಐದು ದೇವತೆಗಳೆಂದರೆ ಆದಿತ್ಯ, ಅಂಬಿಕೆ, ವಿಷ್ಣು, ಗಣನಾಥ, ಹಾಗೂ ಮಹೇಶ್ವರ. ಸ್ವ-ಸ್ವ-ಸಂಪ್ರದಾಯಾನುಸಾರ ಗೌಣ-ಪ್ರಧಾನಗಳನ್ನು ಗುರುತಿಸಲಾಗುತ್ತದೆ. ಹೀಗೆ ಪೂಜಾಸಂಪ್ರದಾಯದಲ್ಲಿ ಗಣಾಧಿಪನಿಗೆ ಸ್ಥಾನವು ಸ್ಪಷ್ಟವಾಗಿದೆ.

ಈ ವಿಘ್ನರಾಜನ ಸ್ವರೂಪ-ಉಪಾಸನಾಕ್ರಮಫಲಗಳನ್ನು ಪುರಾಣಗಳಲ್ಲಿ ಹೇಳಿದೆ. ಉಪನಿಷತ್ತುಗಳಲ್ಲಿ ಗಜಾನನನ ಗರಿಮೆಯ ಚಿತ್ರಣವಿದೆ. ವೇದಗಳಲ್ಲಿ ಗಣಪತಿಯೆಂಬುದನ್ನು ವಿಶೇಷಣವಾಗಿಯೂ ನಾಮವಾಗಿಯೂ ಬಳಸಿದೆ. ಗೃಹ್ಯಸೂತ್ರ-ಧರ್ಮಸೂತ್ರಗಳಲ್ಲೂ ಗಣೇಶ್ವರನ ವಿಘ್ನಕಾರಿತ್ವವನ್ನೋ ವಿಘ್ನಹಾರಿತ್ವವನ್ನೋ ಹೇಳಿದೆ. ಜೈನ-ಬೌದ್ಧ-ಸಾಹಿತ್ಯಗಳಲ್ಲೂ ವಿನಾಯಕ-ಪೂಜಾ-ಸಂಪ್ರದಾಯದ ಚಿತ್ರಣವಿದೆ.

ಹೀಗಿದ್ದರೂ, ನಮ್ಮ ಲಂಬೋದರನು ಒಬ್ಬ ದ್ರಾವಿಡದೇವತೆಯೆಂದೂ, ಮುಂದೆ ಆರ್ಯಜನಾಂಗದಿಂದ ಸ್ವೀಕೃತನಾದನೆಂದೂ ಪಾಶ್ಚಾತ್ತ್ಯರ ವಾದವಾಗಿದೆ.

ಗಣೇಶನು ಗಣಗಳಿಗೊಡೆಯ. ಗಣಗಳು ವಿಘ್ನಕಾರಿಗಳೋ ವಿಘ್ನಹಾರಿಗಳೋ? - ಎಂಬ ಪ್ರಶ್ನೆಗೆ ಶ್ರೀರಂಗಮಹಾಗುರುಗಳು ಕೊಟ್ಟಿರುವ ಉತ್ತರವು ಸಮಂಜಸವಾಗಿದೆ. "ರುದ್ರನು ಸಂಹಾರಕ್ಕೆ ಅಧಿದೇವತೆ. ಬೇರೆ ಬೇರೆ ಸಮಯಗಳಲ್ಲಿ ಪ್ರಾಣಿಗಳನ್ನು ರಕ್ಷಿಸುವ ಸಾಮರ್ಥ್ಯವೂ ಭಕ್ಷಿಸುವ ಸಾಮರ್ಥ್ಯವೂ ಗಣಗಳಿಗುಂಟು."

ಗಣೇಶನಿಗೆ ಆನೆಯ ತಲೆಯೇ ಏಕೆ? ಮೂಷಕವೇ ವಾಹನವೇಕೆ? – ಎಂಬ ಪ್ರಶ್ನೆಗಳ ಉತ್ತರವು ಲೌಕಿಕವಾದ ಊಹೆಗಳಿಂದ ದಕ್ಕುವುದಲ್ಲ.

ಇಲಿಯು ದವಸ-ಧಾನ್ಯಗಳನ್ನು ತಿಂದುಬಿಡುವುದು; ಆನೆಗಳು ಹೊಲ-ಗದ್ದೆಗಳಿಗೆ ನುಗ್ಗಿ ಸಸ್ಯರಾಶಿಯನ್ನು ಹಾಳುಮಾಡುವುವು.  ಈ ತೊಂದರೆಗಳನ್ನು ಕೊನೆಗಾಣಿಸಲೆಂದೇ ಗಜಮುಖವನ್ನೂ ಮೂಷಕವಾಹನವನ್ನೂ ಉಳ್ಳ ದೇವರನ್ನು ರೈತರು ಸೃಷ್ಟಿಸಿಕೊಂಡರು - ಎಂದು ವಿವರಿಸುವವರುಂಟು.

ಹಾಗೆಯೇ, ಆನೆಯು ಬೃಹತ್ತಾದ ಪ್ರಾಣಿ, ಇಲಿಯು ಕಿರಿದಾದದ್ದು - ಎರಡು ಬಗೆಗಳಿಂದಲೂ ನುಗ್ಗಲೋ ನುಸುಳಲೋ ಆಗುವಿಕೆಯನ್ನು ಮೇಲೂ ಕೆಳಗೂ ಇರುವ ಈ ಪ್ರಾಣ್ಯಂಗಗಳು ಸೂಚಿಸುತ್ತವೆ - ಎಂದೂ ವಿವರಿಸಲು ಯತ್ನಿಸುವವರುಂಟು.

ಇವುಗಳೆಲ್ಲವೂ ಸ್ವಕಪೋಲಕಲ್ಪಿತಗಳೇ - ಎಂದರೆ ಬರೀ ಊಹೆಗಳೇ. ಹಾಗಾದರೆ ಸೊಳ್ಳೆ-ತಿಗಣೆಗಳ ಕಾಟಕ್ಕೋ ಜಿಂಕೆ-ಜಿರಲೆಗಳ ಕಾಟಕ್ಕೋ ಒಂದೊಂದು ದೇವರನ್ನೋ ದೇವರ ಆಯುಧ/ವಾಹನಗಳನ್ನೋ ಕಲ್ಪಿಸಬಹುದಿತ್ತಲ್ಲ? ಅವೇಕಿಲ್ಲ?

ಪ್ರಕೃತ, ಗಣೇಶನು ಮೂಷಿಕವನ್ನು ವಾಹನವನ್ನಾಗಿಸಿಕೊಂಡಿರುವುದರ ತತ್ತ್ವವನ್ನು ಮಾತ್ರ ಇಲ್ಲಿ ಪರಿಶೀಲಿಸಿದೆ.  ಇಲಿಗೆ ಮೂಷಕ/ಮೂಷಿಕ ಎಂಬ ಹೆಸರಿದೆಯಷ್ಟೆ? ಇದು ಬಂದಿರುವುದು ಸಂಸ್ಕೃತದ ಮುಷ್ ಎಂಬ ಧಾತುವಿನಿಂದ. ಅದಕ್ಕೆ ಕದಿಯುವುದೆಂಬ ಅರ್ಥ. ಇಂಗ್ಲೀಷಿನ mouse ಎಂಬ ಪದವು ಸಂಸ್ಕೃತಪದಕ್ಕೆ ಜ್ಞಾತಿಪದವೇ ಆಗಿದೆ.

ಮೂಷಕನೊಬ್ಬ ಅಸುರ; ವಿಘ್ನೇಶ್ವರನ ಮೇಲೇ ಯುದ್ಧಮಾಡಿದ; ಸೋತು ಶರಣಾದ; ವಾಹನರೂಪವಾಗಿದ್ದುಕೊಂಡು ನನಗೆ ಸೇವೆಯನ್ನು ಸಲ್ಲಿಸು - ಎಂಬುದಾಗಿ ಅನುಗ್ರಹವನ್ನಾತನಿಗೆ  ಗಣೇಶನು ಮಾಡಿದ - ಎಂಬುದಾಗಿ ಪುರಾಣ-ಕಥೆಯಿದೆ. ನಟರಾಜನು ಅಪಸ್ಮಾರನನ್ನು ಮೆಟ್ಟಿರುವಂತೆಯೇ ಇದೂ.

ಇದರ ವಿವರಣೆಯನ್ನು ಮಹಾಯೋಗಿಗಳಾದ ಶ್ರೀರಂಗಮಹಾಗುರುಗಳು ಹೀಗೆ ಕೊಟ್ಟಿರುವರು:

"ಯಜ್ಞ-ಯಾಗಾದಿಗಳನ್ನು ಆಚರಿಸುವಾಗ ಆಸುರೀಶಕ್ತಿಗಳು ಅಡ್ಡಿಮಾಡಿ ದೇವತೆಗಳಿಗೆ ಸಲ್ಲಬೇಕಾದದ್ದು ಸಲ್ಲದಂತೆ ಮಾಡುವುದುಂಟು. ಯೋಗಮಾರ್ಗದಲ್ಲಿ ಸಾಗುವಾಗ ಚಿತ್ತಚಾಂಚಲ್ಯವೇ ಮುಂತಾದ ಯೋಗವಿಘ್ನಗಳು ಬರುವುದುಂಟು. ಹೀಗೆ ಧ್ಯಾನೋಪಾಸನೆಗಳಲ್ಲಿ ಅಡ್ಡಿಯೊಡ್ಡುವ ದುಷ್ಟಶಕ್ತಿಗಳ ಮೂಲಮೂರ್ತಿಯೇ ಗಣೇಶ-ವಾಹನವಾದ ಈ ಮೂಷಕವೆಂಬುದು. ಅದನ್ನೇ ದಮನ ಮಾಡಿ ತನ್ನನ್ನು ಹೊರುವ ಸೇವೆಗದನ್ನು ನೇಮಿಸಿಕೊಂಡಿರುವವನೇ ಗಣೇಶ. ಆರಂಭದಲ್ಲಿಯೇ ಆತನ ಅನುಗ್ರಹವು ಸಂಪಾದ್ಯ. ಅದಿಲ್ಲದೆ ಯೋಗವಿಘ್ನಗಳನ್ನು ಹತ್ತಿಕ್ಕುವುದು ಮಹಾಕಷ್ಟವೇ ಸರಿ." 

ಎಂದೇ "ನೌಮಿ ಮೂಷಕವಾಹನಮ್" (ಮೂಷಕವಾಹನನನ್ನು ಸ್ತುತಿಸುವೆ) – ಎಂಬ ನುಡಿಯಿರುವುದು.

ಹೀಗೆ, ಉಪಾಸನೆಗೆ ಸಂಬಂಧಪಟ್ಟ ಯೋಗಗಮ್ಯ-ವಿಷಯಗಳ ನೆಲೆಯನ್ನು ತತ್ತ್ವದರ್ಶಿಗಳಾದ ಜ್ಞಾನಿಗಳಿಂದ ಪಡೆಯತಕ್ಕದ್ದೇ ವಿನಾ, ಪೊಳ್ಳಾದ ಟೊಳ್ಳಾದ ಊಹಾಪೋಹಗಳಲ್ಲಿ ನಿರತರಾದವರಿಂದ ಅಲ್ಲ.

ಸೂಚನೆ: 30/8//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ 75 ಎದುರಿಗೆ ಬಂದಿರುವ ಬಾಲಗೋಪಾಲನನ್ನು ಅವಲಂಬಿಸು.(Krishakarnamrta 75)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಶ್ರೀಕೃಷ್ಣನನ್ನು ಕಾಪಾಡೆಂದು ಪ್ರಾರ್ಥಿಸುವ ಈ ಶ್ಲೋಕ ಪ್ರಸಿದ್ಧವಾದದ್ದು. ಶ್ರೀಕೃಷ್ಣಕರ್ಣಾಮೃತದಲ್ಲಿರುವ ಈ ಶ್ಲೋಕವು ಕೆಲವೊಮ್ಮೆ ಬೇರೆ ಸ್ತೋತ್ರಗಳಲ್ಲೂ ಸೇರಿಕೊಂಡಿರುವುದುಂಟು. ಉದಾಹರಣೆಗೆ ಮುಕುಂದಮಾಲಾ-ಸ್ತೋತ್ರದಲ್ಲೂ ಇದು ಕಂಡುಬರುತ್ತದೆ. ಪ್ರಾಚೀನ-ಸ್ತೋತ್ರ-ಸಂಗ್ರಹಗಳಲ್ಲಿ ಕೆಲವೊಮ್ಮೆ ಒಂದೇ ಶ್ಲೋಕವು ಎರಡೋ ಮೂರೋ ಸ್ತೋತ್ರಗಳಲ್ಲಿ ಕಾಣಸಿಗುತ್ತದೆ. ಮತ್ತು ಅದಕ್ಕೆ ಕಾರಣವಾದರೂ, ಬಹಳಷ್ಟು ಸ್ತೋತ್ರಗಳು ಮೌಖಿಕವಾಗಿ ಪ್ರಚಾರದಲ್ಲಿದ್ದುದೇ. ಲಿಖಿತ-ರೂಪದಲ್ಲಿ ಹಸ್ತ-ಪ್ರತಿಗಳಲ್ಲಿ ಸೇರಿಕೊಂಡಾದ ಮೇಲೆ ಒಂದಿಷ್ಟು ಖಚಿತತೆ-ಸ್ಪಷ್ಟತೆಗಳು ಮೂಡುವುವು, ನಿಜವೇ. ಆದರೂ, ಇತಿಹಾಸದಲ್ಲಿ ಸುದೀರ್ಘ-ಕಾಲ ಮೌಖಿಕ-ಪರಂಪರೆಯಲ್ಲಿದ್ದ ಸ್ತೋತ್ರಗಳಲ್ಲಿ ಹೀಗಾಗುವುದಾದರೂ ಸಹಜವೇ ಸರಿ.

ಕೃಷ್ಣನೇ, ನಿನ್ನನ್ನು ಬಿಟ್ಟರೆ ಮತ್ತೊಬ್ಬನನ್ನು ನಾ ಕಾಣೆ - ಎಂದು ಈ ಶ್ಲೋಕದ ಕೊನೆಯ ಸಾಲಿನ ಅರ್ಥ. ಅದರ ಅರ್ಥವನ್ನು ಬೇರೆ ಬಗೆಯಲ್ಲಿಯೂ ಹೇಳಬಹುದು. ಕೃಷ್ಣನೇ, ನಿನಗಿಂತಲೂ ಶ್ರೇಷ್ಠನಾದ ಮತ್ತೊಬ್ಬನನ್ನು ನಾ ಕಾಣೆ - ಎಂದು. ಏಕೆ ಹೀಗೆ ಎರಡರ್ಥಗಳು? ಅದಕ್ಕೆ ಕಾರಣ, 'ಪರ' - ಎಂಬ ಪದಕ್ಕೆ ಇರುವ ಎರಡರ್ಥಗಳು. ಅದಕ್ಕಿರುವ ಎರಡು ವಿರುದ್ಧಾರ್ಥಕ-ಪದಗಳನ್ನು ನೋಡಿದರೆ ಇದು ಗೊತ್ತಾಗುತ್ತದೆ. ಸ್ವ ಎಂದರೆ ತನ್ನ; ಪರ ಎಂದರೆ ಅನ್ಯ. ಅಪರ ಎಂದರೆ ಕೆಳಗಿನದು, ಪರ ಎಂದರೆ ಮೇಲಿನದು.

ಪರತತ್ತ್ವ-ಪರಬ್ರಹ್ಮ-ಪರಭಕ್ತಿ-ಪರಜ್ಞಾನ - ಎಂಬಲ್ಲೆಲ್ಲಾ 'ಪರ' ಎಂಬುದಕ್ಕೆ ಶ್ರೇಷ್ಠ ಎಂಬ ಅರ್ಥ. ಆದರೆ ಪರಪುರುಷ, ಪರಜನ, ಪರಗ್ರಾಮ, ಪರದೇಶ - ಎಂಬಲ್ಲೆಲ್ಲಾ 'ಪರ' ಎಂಬುದಕ್ಕೆ 'ಬೇರೆಯ' ಎಂಬರ್ಥ. ಈ ಶ್ಲೋಕದಲ್ಲಿ ಎರಡೂ ಅರ್ಥಗಳೂ ಸೊಗಯಿಸುತ್ತವೆ. ನಿನ್ನನ್ನಲ್ಲದೆ ಕಾಪಾಡುವವರೆಂಬುದಾಗಿ ಅನ್ಯರನ್ನು ನಾನರಿಯೆ - ಎನ್ನುವಾಗ, ಅನ್ಯನನ್ನು - ಎಂಬ ಅರ್ಥವು ಹೊಂದುತ್ತದೆ. ಹಾಗೆಯೇ, ನಿನಗಿಂತಲೂ ಶ್ರೇಷ್ಠ – ಎಂಬ ಅರ್ಥವೂ ಹೊಂದುವುದೇ. ಕೃಷ್ಣನು ಎಂತಹವನು? - ಎಂಬುದನ್ನು ಹತ್ತು ವಿಶೇಷಣಗಳಿಂದ ತಿಳಿಸಿದೆ. ಆ ಹತ್ತನ್ನೂ ಸಂಬೋಧನೆಯಾಗಿಯೇ ಬಳಸಿದೆ. ಎಂದೇ ಅವಷ್ಟೂ ಪದಗಳೂ ಹೇ ಎಂಬುದರೊಂದಿಗೇ ಬಂದಿವೆ. ಇವುಗಳಲ್ಲಿ ಬಹುತೇಕ ಪ್ರಸಿದ್ಧ-ಪದಗಳೇ. ಎಂದೇ, ಅವುಗಳ ಅರ್ಥದತ್ತ ಒಂದು ಸಂಕ್ಷಿಪ್ತವಾದ ನೋಟವಷ್ಟೇ ಸಾಕು. ಕೃಷ್ಣನು ಗೋ-ಪಾಲಕನೆಂಬುದು ಪ್ರಸಿದ್ಧವೇ. ಜಲನಿಧಿಯೆಂದರೆ ಸಮುದ್ರವಾದ್ದರಿಂದ ಕೃಪಾ-ಜಲನಿಧಿಯೆಂದರೆ ದಯಾ-ಸಾಗರ - ಎಂದರ್ಥ. ಸಮುದ್ರ-ಪುತ್ರಿಯಾದ ಲಕ್ಷ್ಮಿಯನ್ನೇ ಸಿಂಧು-ಕನ್ಯೆಯೆನ್ನುವುದರಿಂದ, ಮತ್ತು ವಿಷ್ಣುವನ್ನು ಅವಳು ವರಿಸಿದುದರಿಂದ, ಸಿಂಧುಕನ್ಯಾ-ಪತಿಯೆಂದರೆ ವಿಷ್ಣುವೇ.

ಅಂತಕನೆಂದರೆ ಯಮ, ಕೊನೆಗಾಣಿಸುವವನು. ಕೃಷ್ಣನನ್ನು ಕಂಸಾಂತಕ - ಎಂದಿದೆ. ಕಂಸನ ಪಾಲಿಗೆ ಯಮನಾದವನು ಕೃಷ್ಣ. ಕಂಸನು ದುರ್ಮಾರ್ಗ-ಚರ, ಅಸುರಾಂಶದಿಂದ ಜನಿಸಿದವನು. ದುಷ್ಟರು ರಾಜರಾದರೆ ಪ್ರಜೆಗಳಿಗೆ ಪಾಡೋ ಪಾಡು. ಎಂದೇ ಅಂತಹವನನ್ನು ಕೊಂದರಷ್ಟೇ ಪ್ರಜೆಗಳಿಗೆ ಕ್ಷೇಮ: ಆಗಲೇ ಧರ್ಮವು ಪ್ರತಿಷ್ಠಿತವಾಗುವುದು. ಕಂಸನ ವಿಷಯದಲ್ಲಿ ಕ್ರೌರ್ಯಕ್ಕೆ ಕಾರಣ ಆತನ ಅಧರ್ಮ-ಪರಾಯಣತೆ. ಆದರೆ ಪರಮ-ಕಾರುಣ್ಯವೇ ಭಗವಂತನಲ್ಲುಂಟು. ಕರುಣೆಯ ಕಡಲಿನ ಆಚೆಯ ದಡವನ್ನು ಮುಟ್ಟಿದವನು ಶ್ರೀಕೃಷ್ಣ. ಅದು ಎಲ್ಲಿ ಗೊತ್ತಾಗುವುದು? - ಎಂದರೆ ಗಜೇಂದ್ರಮೋಕ್ಷ-ಪ್ರಸಂಗದಲ್ಲಿ. "ಕರಿರಾಜ ಕಷ್ಟದಲಿ ಆದಿಮೂಲಾ ಎಂದು ಕರೆಯಲಾಕ್ಷಣ ಬಂದು" ಸಲಹಿದನಲ್ಲವೆ ಆತ?

ಇನ್ನು ಲಕ್ಷ್ಮೀ-ಪತಿಯಾದ್ದರಿಂದ ವಿಷ್ಣುವನ್ನು ಮಾ-ಧವ - ಎನ್ನುವುದುಂಟು. ಏಕೆಂದರೆ ಮಾ ಎಂದರೆ ಲಕ್ಷ್ಮಿ, ಧವನೆಂದರೆ ಗಂಡ. ಕೃಷ್ಣನು ರಾಮನ ತಮ್ಮನೆಂದಾಗ ಬಲರಾಮನ ತಮ್ಮನೆಂಬುದು ಸ್ಪಷ್ಟವೇ. ರಾಘವೇಂದ್ರ-ರಾಮಾನುಜ - ಎಂಬ ಹೆಸರಿನ ಐತಿಹಾಸಿಕ ವ್ಯಕ್ತಿಗಳು ಪ್ರಸಿದ್ಧರಾಗಿದ್ದರೂ ಅವರ ಹೆಸರಿನ ಅರ್ಥಗಳೆಂದರೆ ಮೂಲತಃ (ಕ್ರಮಶಃ) ರಾಮ-ಕೃಷ್ಣ ಎಂದೇ. ಮೂರುಲೋಕಗಳಿಗೂ ಗುರುವೆಂದರೆ ಕೃಷ್ಣನೇ - ಎಂದೇ ಆತನನ್ನೇ ಜಗದ್ಗುರುವೆನ್ನುವುದು. ಕಮಲಗಳನ್ನು ಹೋಲುವ ಕಣ್ಣುಳ್ಳವನು ಪುಂಡರೀಕಾಕ್ಷ . ಮತ್ತು ಕೊನೆಯದಾಗಿ, ಆತನು ವಿಹರಿಸಿದುದು ಗೋ-ಗೋಪ-ಗೋಪೀಜನರ ನಡುವೆ. ಗೋಪಿಯರ ಮನೋವಲ್ಲಭನೆಂದರೆ ಆತನೇ. ಹೀಗೆ ಗೋಪಾಲಕ ಎಂದು ಆರಂಭವಾಗಿ ಗೋಪೀಜನ-ನಾಥ ಎಂದು ಮುಗಿದಿರುವ ಈ ವಿಶೇಷಣಗಳು ಕೃಷ್ಣನ ನಾನಾಮುಖಗಳಿಗೆ ಕನ್ನಡಿ ಹಿಡಿಯುತ್ತವೆ. ಮಾಧವ-ಸಿಂಧುಕನ್ಯಾಪತಿಗಳು ಒಂದೇ ತತ್ತ್ವವನ್ನೇ ಸೂಚಿಸುತ್ತವೆ. ಕೃಪಾಜಲನಿಧಿಯೆಂಬುದರ ನಿರ್ದೇಶನವಾಗಿ ಗಜೇಂದ್ರ-ಪ್ರಸಂಗವಿದೆ. ಆತನ ಸೌಂದರ್ಯ-ಪಾರಮ್ಯ-ಕಾರುಣ್ಯ-ಸೌಲಭ್ಯ - ಮುಂತಾದ ಎಲ್ಲಾ ಕಲ್ಯಾಣ-ಗುಣಗಳನ್ನೂ ಸಂಬೋಧನೆಗಳ ಮೂಲಕವೇ ತಿಳಿಸುವ ಶ್ಲೋಕವಿದು.

ಹೇ ಗೋಪಾಲಕ! ಹೇ ಕೃಪಾ-ಜಲನಿಧೇ! ಹೇ ಸಿಂಧುಕನ್ಯಾ-ಪತೇ!

ಹೇ ಕಂಸಾಂತಕ! ಹೇ ಗಜೇಂದ್ರ-ಕರುಣಾ-ಪಾರೀಣ! ಹೇ ಮಾಧವ! |

ಹೇ ರಾಮಾನುಜ! ಹೇ ಜಗತ್ತ್ರಯ-ಗುರೋ! ಹೇ ಪುಂಡರೀಕಾಕ್ಷ! ಮಾಂ

ಹೇ ಗೋಪೀಜನ-ನಾಥ! ಪಾಲಯ, ಪರಂ ಜಾನಾಮಿ ನ ತ್ವಾಂ ವಿನಾ! ||


ಮತ್ತೊಂದು ಶ್ಲೋಕ:

ಬಾಲಗೋಪಾಲನನ್ನು ನಾನು ಸಂತತವಾಗಿಯೂ ಅವಲಂಬಿಸುವೆ - ಎನ್ನುತ್ತಾನೆ, ಲೀಲಾಶುಕ. ಹೇಗಿರುವ ಬಾಲಗೋಪಾಲ ಹೀಗೆ ಸದಾ ಅವಲಂಬ್ಯ? ಮೂರು ವಿಶೇಷಣಗಳು ಅದನ್ನು ಹೇಳುತ್ತವೆ. ಆತನ ತಲೆಯ ಮೇಲೆ ನವಿಲುಗರಿಯುಂಟು. ಎದ್ದು ಕಾಣುವ ಸುಂದರವಾದ ಆ ಗರಿಯಿರುವುದರಿಂದಲೇ, ದೂರದಿಂದಲೂ ನಾವು ಕೃಷ್ಣನನ್ನು ಗುರುತಿಸಬಲ್ಲೆವು. ಇನ್ನು, ಆತನತ್ತ ಸಾರುತ್ತಲೇ ಕಂಡುಬರುವುದು, ಆತನನ್ನು ಸುತ್ತಿರುವ ವಲ್ಲವೀ-ವಲಯ. ಹಾಗೆಂದರೆ ಗೋಪಿಕೆಯರ ಮಂಡಲ. ಅವರೂ ಎಂತಹವರು? ಸಂಚಿತ-ಸೌಜನ್ಯರು, ಎಂದರೆ ಸುಜನತೆಯನ್ನು ತುಂಬಿಕೊಂಡವರು. ಸುಜನತೆಯೆಂದರೆ ಒಳ್ಳೆಯ ನಡವಳಿಕೆ, ಮಧುರವಾದ ವರ್ತನೆ, ಯಾರೇ ಆದರೂ ಇಷ್ಟಪಡುವಂತಹ ನಡೆ. ಮತ್ತೂ ಹತ್ತಿರ ಸುಳಿಯುತ್ತಿದ್ದಂತೆ  ಗೋಚರವಾಗುವುದು ಆತನ ಕೆಂಪುತುಟಿ, ಮತ್ತು ಅದರ ಮೇಲಿಟ್ಟಿರುವ ಕೊಳಲು. ಆತನ ಕೆಳದುಟಿಯು ಕೆಂಪನೆಯ ಹವಳದ ಹಾಗೆ ಹೊಳೆಯುತ್ತದೆ. ಎಂದೇ ಅದನ್ನು ಅಧರ-ಮಣಿಯೆನ್ನುವುದು. ಹೀಗೆ, ತನ್ನ ಕೆಂದುಟಿಯ ಮೇಲೆ ಕೊಳಲಿಟ್ಟವನು ಬಾಲನವನು. ಇಂತಿರುವ ಗೋಪ-ಬಾಲನೇ ನನ್ನ ಜೀವಿತಕ್ಕೆ ಅವಲಂಬನ. ಅವಲಂಬನವೆಂದರೆ ಆಧಾರ, ಊರುಗೋಲು.

ಅಂಚಿತ-ಪಿಂಛಾ-ಚೂಡಂ/

ಸಂಚಿತಸೌಜನ್ಯ-ವಲ್ಲವೀ-ವಲಯಂ|

ಅಧರ-ಮಣಿ-ನಿಹಿತ-ವೇಣುಂ/

ಬಾಲಂ ಗೋಪಾಲಂ ಅನಿಶಂ ಅವಲಂಬೇ ||


ಮತ್ತೊಂದು ಶ್ಲೋಕ:

ಎಲೆ ಮನಸ್ಸೇ, ಎಚ್ಚರಗೊಳ್ಳು, ಎಚ್ಚರಗೊಳ್ಳು - ಎಂದು ತನ್ನ ಮನಸ್ಸನ್ನೇ ಎಬ್ಬಿಸುತ್ತಿದ್ದಾನೆ, ಲೀಲಾಶುಕ. ಏಕೆ? ಈಗೇನು ವಿಶೇಷ? ವಿಶೇಷವೇ? ಇದೋ, ಚಿರಕಾಲದ ಬಳಿಕ, ಎಂದರೆ ಬಹಳ ಕಾಲದ ಮೇಲೆ, ನಿನಗೆ ಕೃತಾರ್ಥತೆಯುಂಟಾಗುತ್ತಿದೆ. ಕೃತಾರ್ಥತೆಯೆಂದರೆ ಧನ್ಯತೆ. ಯಾವ ತೆರನು ಈ ಧನ್ಯತೆ? ಅದೆಂದರೆ, ಕೃಷ್ಣನ ರೂಪದಲ್ಲಿ ಎದುರಿಗೆ ನಿಂತಿರುವಂತಹುದು. ಯಾವುದದು? ಪೂರ್ಣ-ನಿರ್ವಾಣವೇ ಅದು. ನಿರ್ವಾಣವೆಂದರೆ ಸುಖ. ಪೂರ್ಣ-ನಿರ್ವಾಣವೆಂದರೆ ಪರಮ-ಸುಖವೆಂದರ್ಥ. ಅದು ಕೃಷ್ಣನ ರೂಪದಲ್ಲಿಎದುರಿಗೇ ನಿಂತಿದೆ. ನಿನ್ನ ಕೆಲಸ ಈಗೊಂದೇ, ಓ ಮನಸ್ಸೇ. ಯಾವುದಕ್ಕಾಗಿ ಬಹು-ದೀರ್ಘ-ಕಾಲ ಹಂಬಲಿಸುತ್ತಿದ್ದೆಯೋ, ಅದುವೇ ಇದೋ ಇದೋ ಎದುರಿಗೇ ಸಾಕ್ಷಾತ್ತಾಗಿ ಬಂದು ನಿಂತಿದೆ. ಕೈಗೆ ಸಿಕ್ಕದ್ದನ್ನು ಕಳೆದುಕೊಳ್ಳಬೇಡ. ಎದುರಿಗೇ ಬಂದು ನಿಂತಿರುವ, ಪೂರ್ಣಾನಂದವೇ ಮೈತಾಳಿರುವ ಪರವಸ್ತುವನ್ನು ಕಣ್ತುಂಬ ತುಂಬಿಕೋ, ಪೂರ್ಣವಾಗಿ ಅನುಭವಿಸು, ಚೆನ್ನಾಗಿ ಆಸ್ವಾದಿಸು.

ಜಾಗೃಹಿ ಜಾಗೃಹಿ ಚೇತಃ/

ಚಿರಾಯ ಚರಿತಾರ್ಥತಾ ಭವತಃ|

ಅನುಭೂಯತಾಂ ಇದಂ ಇದಂ/

ಪುರಃ ಸ್ಥಿತಂ ಪೂರ್ಣ-ನಿರ್ವಾಣಂ||

ಸೂಚನೆ : 30/08/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Tuesday, August 26, 2025

ಪ್ರಶ್ನೋತ್ತರ ರತ್ನಮಾಲಿಕೆ 29 (Prasnottara Ratnamalike 29)


ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೨೯. ಸತ್ಯ ಯಾವುದು?

ಉತ್ತರ - ಭೂತಹಿತ.

'ಯಾವುದು ಸತ್ಯ' ? ಎಂಬ ಪ್ರಶ್ನೆ. ಇದಕ್ಕೆ ಉತ್ತರ - 'ಭೂತಹಿತವಾದದ್ದು ಯಾವುದೋ ಅದು ಸತ್ಯ' ಎಂಬುದು. ಅಂದರೆ ಯಾವ ವಿಷಯ ಎಲ್ಲ ಭೂತಕೋಟಿಗಳಿಗೂ ಒಳ್ಳೆಯದನ್ನು ಉಂಟುಮಾಡುತ್ತದೆಯೋ ಅದನ್ನೇ 'ಸತ್ಯ' ಎಂಬುದಾಗಿ ಕರೆಯಲಾಗಿದೆ. ಇಲ್ಲಿ ಹೇಳುತ್ತಿರುವಂತಹ ವಿಷಯಕ್ಕೆ ಭೂತಹಿತವಾಗುವಂತೆ ವರ್ತಿಸುವುದು ಎಂಬುದು ಅರ್ಥವಿದೆ. ಈ ವರ್ತನೆ ಮೂರು ವಿಧದಲ್ಲಿ ಇರುತ್ತದೆ. ಕಾಯಿಕವಾದ ವರ್ತನೆ, ವಾಚಿಕವಾದ ವರ್ತನೆ ಮತ್ತು ಮಾನಸಿಕವಾದ ವರ್ತನೆ ಎಂಬುದಾಗಿ. ಅಂದರೆ ಭೂತಗಳಿಗೆ - ಜೀವಿಗಳಿಗೆ ಈ ಮೂರು ವಿಧದಲ್ಲಿ ಹಿತವನ್ನು ಉಂಟುಮಾಡಲು ಸಾಧ್ಯ ಎಂದರ್ಥ. ಇದೇ ಮೂರು ಸಾಧನಗಳಿಂದ ಜೀವಿಗಳಿಗೆ ಅಹಿತವನ್ನೂ ಉಂಟುಮಾಡಲು ಸಾಧ್ಯ ಎಂಬುದು ಇದರ ಅಭಿಪ್ರಾಯ. ಆದ್ದರಿಂದ ಪ್ರಧಾನವಾದ ಈ ಮೂರು ಸಾಧನೆಗಳಿಂದ ಭೂತಕೋಟಿಗೆ ಸುಖವನ್ನು, ಸುಖಸಂಪತ್ತನ್ನು ಉಂಟುಮಾಡಬೇಕು ಎಂಬ ಬೋಧನೆ ಇಲ್ಲಿದೆ. ಅದಕ್ಕೆ ಒಂದು ಮಾತು ಹೀಗಿದೆ 'ಯದ್ಭೂತಹಿತಂ ತತ್ಸತ್ಯಂ' ಎಂಬುದಾಗಿ. ಸಾಮಾನ್ಯವಾಗಿ ಸತ್ಯ ಎಂಬುದಕ್ಕೆ ಮಾತು ಎಂಬ ಅರ್ಥ ಇದೆ. 'ಸತ್ಯಂ ವದ, ಧರ್ಮಂ ಚರ' ಎಂಬ ಉಪನಿಷತ್ತಿನ ಮಾತು ಮಾತಿನ ಸತ್ಯದ ವಿಚಾರವನ್ನು ಸಾರುತ್ತದೆ. ವಸ್ತುತಃ ಸತ್ಯ ಎಂಬ ಶಬ್ದಕ್ಕೆ ಪರಮಾತ್ಮ ಎಂಬ ಅರ್ಥವಿದೆ. ಮಾತು ಸತ್ಯವಾಗಲು ಮೂಲತಃ ಸತ್ಯಸ್ವರೂಪೀ ಭಗವಂತ ಆ ಮಾತಿನ ಹಿಂದೆ ಇದ್ದಾಗ ಮಾತ್ರ ಸಾಧ್ಯವಾಗುತ್ತದೆ. ಯಾವ ಸತ್ಯವು ಈ ಬ್ರಹ್ಮಾಂಡದಲ್ಲಿ ಅಥವಾ ಪ್ರಪಂಚದಲ್ಲಿ ವಿಸ್ತಾರವಾಗಿದೆಯೋ, ಅದನ್ನೇ ಸತ್ಯ ಎಂಬುದಾಗಿ ಕರೆಯಲಾಗಿದೆ. ಅಂದರೆ ಈ ಸೃಷ್ಟಿಯಲ್ಲಿ ಸತ್ಯವು ಎಲ್ಲೆಲ್ಲೂ ಅಡಗಿದೆ. ಅದನ್ನು ಕಂಡವನು ಮಾತ್ರ ಆ ಸತ್ಯವಾದ ಭಗವಂತನ ಅಂಶವನ್ನು ಎಲ್ಲ ಜೀವಿಗಳಲ್ಲೂ ಕಾಣುತ್ತಾನೆ. ಎಲ್ಲ ಭೂತಗಳಿಗೆ ಹಿತವಾಗುವಂತೆ ಆತ ವರ್ತಿಸುತ್ತಾನೆ. ಹಾಗೆ ವರ್ತಿಸಬೇಕಾದದ್ದು ಪ್ರತಿಯೊಬ್ಬನ ಕರ್ತವ್ಯ ಎಂಬುದನ್ನು ಈ ಪ್ರಶ್ನೋತ್ತರ ಸೂಚಿಸುತ್ತಿದೆ. ಹಾಗಾಗಿ ಯಾರು ಕೂಡ ಇನ್ನೊಂದು ಜೀವಿಯ ಬದುಕಿನಲ್ಲಿ ಅಹಿತವಾಗುವಂತೆ ನಡೆದುಕೊಳ್ಳಬಾರದು. ಅವನು ಮಾತಿನಿಂದ ಕ್ರಿಯೆಯಿಂದ ಅಥವಾ ಮನಸ್ಸಿನ ಆಲೋಚನೆಯಿಂದ ಹೀಗೆ ಮೂರು ರೀತಿಯಿಂದಲೂ ಎಲ್ಲರಿಗೂ ಒಳ್ಳೆಯದನ್ನೇ ಮಾಡಬೇಕು, ಒಳ್ಳೆಯದನ್ನೇ ಮಾತನಾಡಬೇಕು, ಒಳ್ಳೆಯದನ್ನೇ ಆಲೋಚಿಸಬೇಕು. ಈ ರೀತಿಯಾಗಿ ಇದ್ದಾಗ ಮಾತ್ರ ಅದು ಜೀವಹಿತವನ್ನು ಉಂಟುಮಾಡುತ್ತದೆ ಎಂದರ್ಥ.


 ಈ ಪ್ರಪಂಚದಲ್ಲಿ 84 ಲಕ್ಷ ಜೀವಜಾತಿಗಳು ಇವೆ ಎಂಬುದಾಗಿ ನಮ್ಮ ವೇದಾತಿ ಸಾಹಿತ್ಯಗಳು ಸಾರುತ್ತವೆ. ಎಲ್ಲದರಲ್ಲೂ ಭಗವಂತನ ಅಂಶವೆಂಬುದು ಹಾಸುಹೊಕ್ಕಾಗಿ ಇದೆ. ಹಾಗಾಗಿ ಭಗವಂತನನ್ನು ಕಾಣುವ ಅಭಿಲಾಷೆಯುಳ್ಳ ಯಾವುದೇ ವ್ಯಕ್ತಿಯು ಕೂಡ ಇನ್ನೊಂದು ಜೀವಿಯಲ್ಲಿಯೂ ಆ ಸತ್ಯವನ್ನೇ ಕಾಣುತ್ತಾನೆ. ಅವನು ಯಾವುದೇ ಕಾರಣಕ್ಕೂ ಸತ್ಯವಲ್ಲದ್ದನ್ನು ಕಾಣಲಾರನು, ಭಾವಿಸಲಾರನು. ಆಗ ಅವನಿಂದ ಹಿತವೇ ಘಟಿಸುತ್ತದೆ; ಅಹಿತವು ಘಟಿಸಲಾರದು. ಅಂತಹ ಜೀವಹಿತಕ್ಕೋಸ್ಕರ ಜೀವನ ಮಾಡುವಂತಿದ್ದರೆ ಅದುವೇ ಸತ್ಯಜೀವನ. ಅದೇ ಜೀವನದ ಸತ್ಯವಾದ ವಿಷಯ.


ಸೂಚನೆ : 24/8/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 151 ಸೈನ್ಯಪೋಷಣೆ-ಯುದ್ಧಘೋಷಣೆಗಳು – ಏನು, ಎಂತು? ( Vyaasa Vikshita 151)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ರಾಜ್ಯಭಾರದ ಸ್ವರೂಪವನ್ನು ನಾರದರು ಯುಧಿಷ್ಠಿರನಿಗೆ ವಿವರಿಸುತ್ತಿದ್ದಾರೆ.

ಸೇನಾಪತಿಯೆಂದರೆ ಸತ್ಕುಲಜಾತನೂ ಸ್ವಾಮಿಭಕ್ತಿಯುಳ್ಳವನೂ ದಕ್ಷನೂ ಆಗಿರಬೇಕು. ನಿನ್ನ ಸೇನಾಪತಿಗಳು ಹಾಗಿರುವರಷ್ಟೆ? 

ಸೈನ್ಯದ ಮುಖ್ಯಸ್ಥರು (ದಳಪತಿಗಳು) ಸರ್ವಪ್ರಕಾರದ ಯುದ್ಧಗಳಲ್ಲೂ ವಿಶಾರದರಾಗಿರಬೇಕು. ಜೊತೆಗೆ ಧೃಷ್ಟರೂ (ದಿಟ್ಟತನವುಳ್ಳವರೂ), ಶುದ್ಧಚಾರಿತ್ರರೂ, ಪರಾಕ್ರಮಸಂಪನ್ನರೂ ಆಗಿರಬೇಕು. ಹಾಗೂ ಅಂತಹವರನ್ನು ರಾಜನು ಸಂಮಾನಿಸಬೇಕು. ನೀನು ಹಾಗೆ ಮಾಡುತ್ತಿದ್ದೀಯೆ ತಾನೆ?

ಸೈನ್ಯದ ವಿಷಯದಲ್ಲಿ ರಾಜನು ಎರಡು ಎಚ್ಚರಗಳನ್ನು ತೆಗೆದುಕೊಳ್ಳಬೇಕು – ಅವರಿಗೆ ಆಹಾರವನ್ನೂ ವೇತನ(ಸಂಬಳ)ವನ್ನೂ ಯಥೋಚಿತವಾಗಿ ಮತ್ತು ಸರಿಯಾದ ಸಮಯಕ್ಕೆ ನೀಡಬೇಕು. ಅದನ್ನು ನೀನು ಮಾಡುತ್ತಿದ್ದೀಯಷ್ಟೆ? ಎಂದರೆ ವಿಲಂಬ ಮಾಡುತ್ತಿಲ್ಲವಷ್ಟೆ? ಭೋಜನದ ವಿಷಯದಲ್ಲಿ ಹಾಗೂ ಸಂಬಳದ ವಿಷಯದಲ್ಲಿ ಕಾಲಾತಿಕ್ರಮವನ್ನು ಮಾಡಿದರೆ ಭೃತ್ಯರು ಭರ್ತೃ(ಒಡೆಯನ)ವಿನ ಬಗ್ಗೆ ಕೋಪಗೊಳ್ಳುತ್ತಾರೆ. ಹಾಗಾದಲ್ಲಿ ಅದು ಒಂದು ದೊಡ್ಡ ಅನರ್ಥವೇ ಸರಿ.

ಇನ್ನು ಉತ್ತಮಕುಲಗಳಲ್ಲಿ ಜನಿಸಿದ ಕುಲಪುತ್ರರು ಪ್ರಧಾನವಾಗಿ ನಿನ್ನ ವಿಷಯದಲ್ಲಿ ಅನುರಾಗವುಳ್ಳವರು ತಾನೆ? ಎಷ್ಟೆಂದರೆ ಯುದ್ಧಸಂದರ್ಭಗಳಲ್ಲಿ ನಿನಗಾಗಿ ಪ್ರಾಣತ್ಯಾಗ ಮಾಡಲೂ ಅವರು ತಯಾರಿರುವರು ತಾನೆ?

ಯುದ್ಧಕ್ಕೆ ಸಂಬಂಧಿಸಿದಂತೆ ನಾಲ್ಕು ವಿಭಾಗಗಳಿರುವುವಲ್ಲವೆ? ಹಸ್ತಿ-ಅಶ್ವ-ರಥ-ಪಾದಾತ ಎಂಬುದಾಗಿ. ಈ ನಾಲ್ಕಕ್ಕೆ ನಾಲ್ಕು ಮಂದಿ ಅಧಿಪತಿಗಳಿರಬೇಕು. ಎಲ್ಲಕ್ಕೂ ಒಬ್ಬನೇ ಅಧಿಪತಿಯೆಂದಾದರೆ ಅಪಾಯ: ಆತನು ಮನಸ್ಸಿಗೆ ತೋರುವಂತೆಲ್ಲ ವರ್ತಿಸಿಯಾನು; ಶಾಸನಗಳನ್ನು ಉಲ್ಲಂಘಿಸಿಯಾನು. ಹಾಗೆ ಒಬ್ಬನಲ್ಲೇ ಎಲ್ಲವೂ ಕೇಂದ್ರೀಕೃತವಾಗಿಲ್ಲ ತಾನೆ? 

ಕೆಲವು ಅಧಿಕಾರಿಗಳು ಸ್ವಪ್ರಯತ್ನವನ್ನು ವಿಶೇಷವಾಗಿ ಬಳಸಿ ಕೆಲಸವು ಕಳೆಕಟ್ಟುವಂತೆ ಮಾಡುವುದುಂಟು. ಅಂತಹವರಿಗೆ ಅಧಿಕವಾದ ಸಂಮಾನವನ್ನು ಮಾಡತಕ್ಕದ್ದು, ಅಥವಾ ಸಂಬಳವನ್ನು ಹೆಚ್ಚಿಸತಕ್ಕದ್ದು ಯುಕ್ತವಾಗುತ್ತದೆ. ನೀನು ಹಾಗೆ ಮಾಡುತ್ತಿರುವೆ ತಾನೆ? 

ಕೆಲವರು ವಿದ್ಯಾವಿನಯಸಂಪನ್ನರಾಗಿರುತ್ತಾರೆ, ಜ್ಞಾನನಿಪುಣರಾಗಿರುತ್ತಾರೆ: ಅವರ ಗುಣಗಳನ್ನೂ ಗಮನಿಸಿಕೊಳ್ಳಬೇಕು, ಮತ್ತು ಅದಕ್ಕನುಗುಣವಾಗಿ ದಾನವಿತ್ತು ಆದರಿಸಬೇಕು. ನೀನು ಹಾಗೆ ಮಾಡುತ್ತಿರುವೆಯಷ್ಟೆ?

ನಿನಗೋಸ್ಕರವಾಗಿ ಪ್ರಾಣ ತೆತ್ತವರು ಕೆಲವರಿರುತ್ತಾರೆ, ಅಥವಾ ನಿನಗಾಗಿ ಶ್ರಮಿಸಿದ್ದು ಬಳಿಕ ಭಾರೀ ಕಷ್ಟದಲ್ಲಿರುತ್ತಾರೆ. ಅಂತಹವರ ಹೆಂಡತಿ ಮಕ್ಕಳನ್ನು ನೀನು ರಕ್ಷಿಸಿ ಪೋಷಿಸುತ್ತಿರುವೆಯಲ್ಲವೆ?

ಕೆಲವು ಶತ್ರುಗಳು ಭಯಭೀತರಾಗಿ ನಿನ್ನಲ್ಲಿ ಶರಣಾಗತರಾಗಿ ಬಂದಿರುತ್ತಾರೆ. ಅಥವಾ ದಾರಿದ್ರ್ಯದಲ್ಲಿರುತ್ತಾರೆ. ಇಲ್ಲವೇ ಯುದ್ಧದಲ್ಲಿ ಪರಾಜಿತರಾಗಿರುತ್ತಾರೆ. ಅವರನ್ನೆಲ್ಲಾ ನೀನು ಮಕ್ಕಳಂತೆಯೇ ನೋಡಿಕೊಳ್ಳುತ್ತಿರುವೆಯಲ್ಲವೆ?

ಭೂಮಂಡಲದ ಪ್ರಜೆಗಳೆಲ್ಲರೂ ನಿನ್ನನ್ನು ತಾಯಿಯಂತೆಯೂ ತಂದೆಯಂತೆಯೂ ಕಾಣಬೇಕು. ಎಲ್ಲರಿಗೂ ನೀನು ಸಮನಾಗಿರಬೇಕು ಹಾಗೂ ವಿಶ್ವಸನೀಯನಾಗಿರಬೇಕು. ಹಾಗಿರುವೆ ತಾನೆ?

ಶತ್ರುವು ಕೆಲವೊಮ್ಮೆ ಕೆಲವು ವ್ಯಸನಗಳಲ್ಲಿ ಮುಳುಗಿರುತ್ತಾನೆ. (ವ್ಯಸನಗಳೆಂದರೆ ಸ್ತ್ರೀವಿಷಯಕ-ಚಾಪಲ್ಯ, ಜೂಜು, ಮದ್ಯ ಇತ್ಯಾದಿ). ಆತನು ಹಾಗಿರುವನೆಂದು ತಿಳಿದೊಡನೆ ತ್ರಿವಿಧ-ಬಲದೊಂದಿಗೆ ಆತನ ಮೇಲೇರಿ ಹೋಗಬೇಕು (ತ್ರಿಬಲಗಳೆಂದರೆ ಮಂತ್ರಬಲ-ಕೋಷಬಲ-ಹಾಗೂ ಭೃತ್ಯಬಲ). ಅವನ್ನೆಲ್ಲಾ ಕೂಡಿಸಿಕೊಂಡು ಶತ್ರುವಿನ ಮೇಲೆ ದಂಡೆತ್ತಿಹೋಗುವುದು ಒಡನೆಯೇ ಮಾಡಬೇಕಾದ ಕರ್ತವ್ಯ. ನೀನು ಹಾಗೇ ಮಾಡುತ್ತಿದ್ದೀಯಷ್ಟೆ?

ಸರಿಯಾದ ಸಮಯವು ಬಂದೊಡನೆಯೇ ಶತ್ರುವಿನ ಮೇಲೇರಿ ಹೋಗುವುದು ಮುಖ್ಯ. ಇತ್ತ ಶತ್ರುವು ಯಾವುದೋ ಚಟಕ್ಕೆ ಬಿದ್ದಿರುವ ಸಮಯ, ತನ್ನವರು ಅವಕ್ಕೆ ಬಲಿಯಾಗಿಲ್ಲದಿರುವ ಸಮಯ, ಜ್ಯೌತಿಷ್ಕರು ಸೂಚಿಸುವ ಸಮಯ – ಇವುಗಳೆಲ್ಲವುಗಳನ್ನು ಮೇಳೈಸಿಕೊಂಡು ಯುದ್ಧಕ್ಕೆ ಹೋಗಬೇಕು. ಹೊರಡುವ ಮುನ್ನ ಸೈನಿಕರಿಗೂ ಸೇನಾಧಿಕಾರಿಗಳಿಗೂ ಮೊದಲೇ ವೇತನವನ್ನು ಕೊಟ್ಟಿರತಕ್ಕದ್ದು. ಹಾಗೆ ತಾನೆ ಮಾಡುತ್ತಿದ್ದೀಯೆ?

ಸೂಚನೆ : 24/8/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Wednesday, August 20, 2025

ವ್ಯಾಸ ವೀಕ್ಷಿತ 150 ರಾಜನು ಎಂತೆಂತಹವರನ್ನು ನೇಮಿಸಿಕೊಳ್ಳಬೇಕು? (Vyaasa Vikshita 150)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ರಾಜ್ಯಭಾರವನ್ನು ಕುರಿತಾಗಿ ಕುಶಲಪ್ರಶ್ನೆಗಳನ್ನು ಮಾಡುತ್ತಾ, ನಾರದರು ತಮ್ಮ ಮಾತನ್ನು ಮುಂದುವರಿಸಿದರು.

ಶತ್ರುಪಕ್ಷದ ಈ ಹದಿನೆಂಟು ಮಂದಿಯನ್ನೂ ರಾಜನು ಸದಾ ಗಮನಿಸುತ್ತಿರಬೇಕು. ಅವರೆಂದರೆ, ಮಂತ್ರಿ, ಪುರೋಹಿತ, ಯುವರಾಜ; ಸೇನಾಪತಿ, ದ್ವಾರಪಾಲಕ, ಅಂತಃಪುರದ ಒಡೆಯ; ಕಾರಾಗೃಹದ ಅಧ್ಯಕ್ಷ, ಕೋಷಾಧ್ಯಕ್ಷ, ಆರ್ಥಿಕ-ವ್ಯಯಗಳನ್ನು, ಎಂದರೆ ಖರ್ಚುಗಳನ್ನು, ನೋಡಿಕೊಳ್ಳುವ ಸಚಿವ; ಪಹರೆಯವರ ಮೇಲ್ವಿಚಾರಕ, ನಗರಾಧ್ಯಕ್ಷ (ಕೊತ್ವಾಲ), ಶಿಲ್ಪಿಗಳ ಪರಿಚಾಲಕ; ಧರ್ಮಾಧ್ಯಕ್ಷ, ಸಭಾಧ್ಯಕ್ಷ, ದಂಡಪಾಲ; ದುರ್ಗಪಾಲ, ರಾಷ್ಟ್ರಸೀಮಾಪಾಲ, ಮತ್ತು ವನರಕ್ಷಕ.

ಹಾಗೆಯೇ ಸ್ವಪಕ್ಷದ ಹದಿನೈದು ಮಂದಿಯನ್ನೂ ಸದಾ ಗಮನಿಸಿಕೊಳ್ಳುತ್ತಿರಬೇಕು. (ಅವರೆಂದರೆ ರಿಪುಪಕ್ಷದಲ್ಲಿಯ ೧೮ರಲ್ಲಿ ಮೊದಲ ಮೂವರನ್ನು ಬಿಟ್ಟು ಉಳಿದ ಹದಿನೈದು).

ಮೂವರು ಮೂವರು ಗೂಢಚಾರರನ್ನು ನೇಮಿಸಿಕೊಂಡು ಇವರನ್ನೆಲ್ಲಾ ಗಮನಿಸಿಕೊಳ್ಳುತ್ತಿರಬೇಕು.  ನೀನು ಹಾಗೆ ತಾನೆ ಮಾಡುತ್ತಿರುವೆ, ಯುಧಿಷ್ಠಿರ?

ಶತ್ರುವಿಗೇ ತಿಳಿಯದ ರೀತಿಯಲ್ಲಿ ಶತ್ರುಗಳ ಮೇಲೆ ಕಣ್ಣಿಟ್ಟಿರಬೇಕು. ಸರ್ವದಾ ಇದಕ್ಕಾಗಿ ಸಾವಧಾನನಾಗಿರಬೇಕು. ಸಾವಧಾನನೆಂದರೆ ಎಚ್ಚರಿಕೆಯಿಂದಿರುವವನು. ಮತ್ತು ಇದಕ್ಕೆಲ್ಲಾ ಸತತ-ಪ್ರಯತ್ನವೇ ಬೇಕು. ಅಂತಹ ನಿರಂತರ-ಪ್ರಯತ್ನ ನಿನ್ನಲ್ಲಿದೆಯಲ್ಲವೇ?

ರಾಜಪುರೋಹಿತನೆಂದರೆ ಹೇಗಿರಬೇಕು? ಆತನು ವಿನಯ-ಸಂಪನ್ನನಾಗಿರಬೇಕು, ಸದ್ವಂಶ-ಜಾತನಾಗಿರಬೇಕು, ವಿದ್ವಾಂಸನಾಗಿರಬೇಕು, ಅಸೂಯಾಪರನಾಗಿರಬಾರದು, ಹಾಗೂ ಶಾಸ್ತ್ರವಿಷಯಕ-ಚರ್ಚೆಗಳಲ್ಲಿ ಕುಶಲನಾಗಿರಬೇಕು. ಅಂತಹವನನ್ನು ರಾಜನೂ ಆದರಿಸಬೇಕು. ಅಂತಹ ಪುರೋಹಿತರನ್ನು ನೇಮಿಸಿಕೊಂಡು ಅವರನ್ನು ಆದರಿಸುತ್ತಿರುವೆ ತಾನೆ?

ರಾಜನ ಅಗ್ನಿಹೋತ್ರ-ಕಾರ್ಯಕ್ಕೆಂದು ನಿಯುಕ್ತನಾದವನು ವಿಧಿಜ್ಞನಾಗಿರಬೇಕು - ಎಂದರೆ ಕ್ರಿಯೆಯನ್ನು ಹೇಗೆ ಮಾಡಬೇಕೆಂದು ಅರಿತವನಾಗಿರಬೇಕು. ಆತನು ಧೀಮಂತನೂ ಸರಳ-ಸ್ವಭಾವದವನೂ ಆಗಿರಬೇಕು. ಈಗಾಗಲೇ ಹೋಮ ಮಾಡಿರುವುದನ್ನಾಗಲಿ ಮುಂದೆ ಮಾಡಬೇಕಾದ ಹೋಮವನ್ನಾಗಲಿ ಕಾಲಕಾಲಕ್ಕೆ ತಿಳಿಸುತ್ತಿರಬೇಕು. ಅಂತಹವರು ನಿನ್ನೊಂದಿಗಿದ್ದಾರಷ್ಟೆ? ನಿನ್ನಲ್ಲಿರುವ ದೈವಜ್ಞರು, ಎಂದರೆ ಜ್ಯೋತಿಷ್ಕರು, ವೇದಾಂಗಗಳಲ್ಲಿ ಪಳಗಿರುವರಲ್ಲವೆ?

ಯಾರಿಗೆ ಯಾವ ಕೆಲಸ ತಕ್ಕುದೋ ಅವರಿಗೆ ಅದನ್ನು ವಿನಿಯೋಜಿಸಬೇಕು. ಮುಖ್ಯರಾದವರನ್ನು ಮಹಾಕಾರ್ಯಗಳಲ್ಲಿ ತೊಡಗಿಸಬೇಕು; ಮಧ್ಯಮರಾದವರನ್ನು ಮಧ್ಯಮ-ಕಾರ್ಯಗಳಲ್ಲಿ; ಸಾಧಾರಣರನ್ನು ಸಾಧಾರಣ-ಕಾರ್ಯಗಳಲ್ಲಿ ತೊಡಗಿಸಬೇಕು. ನೀನು ಹಾಗೆ ಮಾಡುತ್ತಿದ್ದೀಯೆ ತಾನೆ?

ಅಮಾತ್ಯರೆಂದರೆ ಹೇಗಿರಬೇಕು? ರಾಜನೊಂದಿಗೆ ಕಪಟವಿಲ್ಲದೆ ವರ್ತಿಸುವವರಾಗಿರಬೇಕು. ವಂಶ-ಪಾರಂಪರ್ಯದಲ್ಲಿ ಬಂದವರಾಗಿರಬೇಕು. ಶುದ್ಧವಾದ ನಡೆಯುಳ್ಳವರಾಗಿರಬೇಕು. ಮತ್ತು ಅಂತಹವರನ್ನು ಶ್ರೇಷ್ಠ-ಕಾರ್ಯಗಳಲ್ಲೇ ನಿಯೋಜಿಸಬೇಕು. ಹಾಗೆ ತಾನೆ ನೀನು ಮಾಡುತ್ತಿರುವುದು?

ರಾಜನು ಉಗ್ರ-ದಂಡನಾಗಬಾರದು. ಎಂದರೆ ಸಣ್ಣಸಣ್ಣ ತಪ್ಪಿಗೂ ದೊಡ್ಡದೊಡ್ಡ ಶಿಕ್ಷೆಗಳನ್ನು ಕೊಡುವವನಾಗಬಾರದು. ಹಾಗೇನಾದರೂ ಉಗ್ರ-ದಂಡನಾದರೆ ಪ್ರಜೆಗಳು ಬಹಳವೇ ಉದ್ವೇಗವನ್ನು ಹೊಂದುವರು, ಭೀತರಾಗುವರು. ಹಾಗಾಗದ ರೀತಿಯಲ್ಲಿ ಮಂತ್ರಿಗಳು ಶಾಸನ ಮಾಡಬೇಕು. ನಿನ್ನ ರಾಜ್ಯದಲ್ಲಿ ಅದು ಹಾಗೆಯೇ ಇರುವುದಷ್ಟೆ?

ರಾಜನು ಕರವನ್ನು ವಸೂಲಿ ಮಾಡುವುದರಲ್ಲಿ ನ್ಯಾಯ-ಬದ್ಧನಾಗಿರಬೇಕು, ತೀಕ್ಷ್ಣನಾಗಬಾರದು. ಹಾಗೇನಾದರೂ ಆದಲ್ಲಿ ಪ್ರಜೆಗಳು ರಾಜನ ವಿಷಯದಲ್ಲಿ ಅವಜ್ಞೆಯನ್ನು ತಾಳುತ್ತಾರೆ - ಎಂದರೆ ತಿರಸ್ಕಾರವುಳ್ಳವರಾಗುತ್ತಾರೆ.

ಯಜ್ಞವನ್ನು ಮಾಡುವವನು ಯಜಮಾನ; ಮಾಡಿಸುವವನು ಯಾಜಕ. ಯಜಮಾನನು ಭ್ರಷ್ಟನಾಗಿದ್ದರೆ ಯಾಜಕನಿಗೆ ಅವನ ಬಗ್ಗೆ ತಿರಸ್ಕಾರ ಮೂಡುವುದು. ಹಾಗೆಯೇ ಕಾಮವಶನಾಗಿ ಲಂಪಟನಾದ ಪತಿಯ ಬಗ್ಗೆ ಆತನ ಪತ್ನಿಗೂ ತಿರಸ್ಕಾರವಿರುವುದು. ಹಾಗೆ ರಾಜನು ತಿರಸ್ಕಾರಕ್ಕೆ ಪಾತ್ರನಾಗಬಾರದಲ್ಲವೆ? ಆ ಎಚ್ಚರದಲ್ಲಿ ನೀನು ಇರುವೆಯಷ್ಟೆ?

ಸೇನಾಪತಿಯಾದವನು ಹರ್ಷೋತ್ಸಾಹಗಳಿಂದ ಕೂಡಿರಬೇಕು. ಶೂರನೂ ಧೀಮಂತನೂ ಆಗಿರಬೇಕು. ಧೈರ್ಯಶಾಲಿಯೂ ಶುದ್ಧನೂ ಆಗಿರಬೇಕು.

ಸೂಚನೆ : 2/08/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಸೂಚನೆ : 17/8/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ 87 ಜಿಹ್ವೇ ಕೀರ್ತಯ ಕೇಶವಂ (Astaksari 87)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ನಾಲಿಗೆಯೇ ಕೇಶವನನ್ನು ಸ್ತುತಿಸು

ಆಧ್ಯಾತ್ಮಿಕಜೀವನಮಾಡುವುದೆಂದರೆ ಎಲ್ಲವನ್ನೂ ತೊರೆದು ಸಂನ್ಯಾಸಿಗಳ ಹಾಗಿರಬೇಕು – ಎಂದು ಕೆಲವರು ಎಣಿಸುತ್ತಾರೆ. ಅಂತಹ ಜೀವನವು ಶ್ರೇಷ್ಠವೆನಿಸಬಹುದಾದರೂ, ನಮ್ಮ ಪರಂಪರೆಯು ಅದೊಂದೇ ಮಾರ್ಗವೆಂದಿಲ್ಲ.

ಯಾವುದಾದರೂ ಸಣ್ಣ ಪ್ರಾಣಿಯೋ ಕೀಟವೋ ಬದುಕಿರುವುದೋ ಇಲ್ಲವೋ ಎಂಬ ಸಂಶಯ ಬಂದರೆ, ಅದನ್ನು ಕೈಯಿಂದಲೋ ಕಡ್ಡಿಯಿಂದಲೋ ಸ್ಪರ್ಶಿಸಿ ನೋಡುವುದುಂಟು. ಏಕೆ? ಹಾಗೆ ಮಾಡಿದೊಡನೆ ಅದು ಸ್ವರಕ್ಷಣೆಗಾಗಿ ಚಲಿಸಲಾರಂಭಿಸುತ್ತದೆ. ಚಲನವು ಕರ್ಮೇಂದ್ರಿಯದ ಕೆಲಸ.

ಕೈಕಾಲುಗಳು ಕರ್ಮೇಂದ್ರಿಯಗಳು. ಅವಾದರೂ ಏನಾದರೂ ಕೆಲಸವನ್ನು ಮಾಡುತ್ತಲೇ ಇರುತ್ತವೆ. ಕೈಕಾಲುಗಳನ್ನಾಡಿಸದಿರು - ಎನ್ನುವುದೇ ಮಕ್ಕಳಿಗೊಂದು ದೊಡ್ಡಶಿಕ್ಷೆಯಾದೀತು!

ಪಾಣಿ-ಪಾದಗಳಲ್ಲದೆ, ಮೂತ್ರದ್ವಾರ-ಮಲದ್ವಾರಗಳೂ ಕರ್ಮೇಂದ್ರಿಯಗಳೇ. ಮಾತನಾಡಲು ಬೇಕಾದ ನಾಲಿಗೆಯೂ ಕರ್ಮೇಂದ್ರಿಯವೇ. ಹೀಗೆ ಐದು ಕರ್ಮೇಂದ್ರಿಯಗಳು. ಪಂಚಕರ್ಮೇಂದ್ರಿಯಗಳಲ್ಲದೆ, ಪಂಚಜ್ಞಾನೇಂದ್ರಿಯಗಳೂ ಉಂಟು: ಕಣ್ಣು-ಕಿವಿ-ಮೂಗು-ಚರ್ಮ-ನಾಲಿಗೆಗಳು.

ಹೀಗೆ ನಾಲಿಗೆಯೆಂಬುದು ಜ್ಞಾನೇಂದ್ರಿಯವೂ ಹೌದು, ಕರ್ಮೇಂದ್ರಿಯವೂ ಹೌದು. ಜ್ಞಾನೇಂದ್ರಿಯ-ಕರ್ಮೇಂದ್ರಿಯಗಳೆರಡಕ್ಕೂ ಮನಸ್ಸು ಒಡೆಯ. ಮನಸ್ಸೂ ಇತ್ತ ಜ್ಞಾನೇಂದ್ರಿಯವೆಂದೂ ಹೌದು, ಕರ್ಮೇಂದ್ರಿಯವೂ ಹೌದು. ಹೀಗಾಗಿ ನಾಲಿಗೆಯನ್ನೂ ಮನಸ್ಸನ್ನೂ ಉಭಯಾತ್ಮಕವೆಂದು ಚಿತ್ರಿಸಲಾಗಿದೆ.

ಎಂದೇ ನಾಲಿಗೆಯೇನನ್ನು ನುಡಿಯುತ್ತಿದೆ, ಅದರ ಹಿಂದಿದ್ದು ಅದನ್ನಾಡಿಸುವ ಮನಸ್ಸೇನನ್ನು ಚಿಂತಿಸುತ್ತಿದೆ - ಎಂಬುದರ ಬಗ್ಗೆ ಗಮನಕೊಡುವುದು ಮುಖ್ಯವಾಗುತ್ತದೆ.

ದುಷ್ಟಸಂಸ್ಕಾರಗಳನ್ನುಳ್ಳವರಿಗೆ ದುಷ್ಟವಾದ ಆಲೋಚನೆಗಳೂ ಅವನ್ನನುಸರಿಸಿದ ನುಡಿಗಳೂ ಬರತಕ್ಕವೇ. ಎಂದೇ ಮಾತನ್ನು ಕುರಿತಾದ ಎಚ್ಚರ, ಜೊತೆಗೇ ಮನಸ್ಸನ್ನು ಕುರಿತಾದ ಎಚ್ಚರ - ಇವು ಅವಶ್ಯವೆನಿಸುವುವು.

ಎಂದೇ ಕುಲಶೇಖರ ಆಳ್ವಾರರು, ಕೃಷ್ಣನನ್ನು ಕುರಿತಾದ  ತಮ್ಮ ಪ್ರಸಿದ್ಧ-ಸ್ತೋತ್ರವಾದ ಮುಕುಂದಮಾಲೆಯ ಶ್ಲೋಕವೊಂದರಲ್ಲಿ, ಮೊದಲು ನಾಲಿಗೆಯನ್ನೂ, ಜೊತೆಗೇ ಮನಸ್ಸನ್ನೂ, ಸಂಬೋಧಿಸಿ ಹಿತವಚನಗಳನ್ನು ಹೇಳಿದ್ದಾರೆ.

ನಾಲಿಗೆಗೆ ಅವರು ಹೇಳಿರುವ ಮಾತೇ "ಜಿಹ್ವೇ ಕೀರ್ತಯ ಕೇಶವಂ": "ನಾಲಿಗೆಯೇ, ಕೇಶವನನ್ನು ಕೀರ್ತಿಸು" ಎಂದು; ಜೊತೆಗೇ ಮನಸ್ಸಿಗೆ "ಮನಸ್ಸೇ, ಶ್ರೀಧರನನ್ನು ಭಜಿಸು" ಎಂದು. ಇವುಗಳೊಂದಿಗೆ ಮಿಕ್ಕ ಇಂದ್ರಿಯಗಳೂ ಸಹಕರಿಸಿ, ಕ್ರಮೇಣ ಧ್ಯಾನದಲ್ಲಿ ನಿಲ್ಲುವಂತಾಗಬೇಕು.

ಧ್ಯಾನಾವಸ್ಥೆಯು ಒಂದರ್ಥದಲ್ಲಿ ನಿದ್ರಾವಸ್ಥೆಯಂತೆಯೇ. ಆಗಲೂ ಕಣ್ಣು ಮುಚ್ಚಿರುವುದರಿಂದ ಏನೂ ಕಾಣದು, ತನ್ಮಯತೆಯೇ ಇದ್ದರೆ ಏನೂ ಕೇಳಿಸದು ಕೂಡ. ಕಣ್ಣು-ಕಿವಿಗಳೇ ಕೆಲಸ ಮಾಡವೆಂದಮೇಲೆ ಇನ್ನು ಮಿಕ್ಕ ಇಂದ್ರಿಯಗಳ ಬಗ್ಗೆ ಹೇಳಲೇಬೇಕಿಲ್ಲ.

ನಿದ್ರೆಗೂ ಧ್ಯಾನಾವಸ್ಥೆಗೂ ವ್ಯತ್ಯಾಸವೇನು? ಎರಡರಲ್ಲೂ ಸುಖಾನುಭವವೇ ಆದರೂ ನಿದ್ರೆಯಲ್ಲಿ ದೊರಕುವ ಸುಖವು ಜಾಡ್ಯವುಳ್ಳದ್ದು. ಧ್ಯಾನಲಭ್ಯವಾದ ಸುಖವು ಸಾತ್ತ್ವಿಕಸುಖ. ನಿದ್ರಾಸುಖವು ಎಲ್ಲರಿಗೂ ನಿತ್ಯವೂ ಬೇಕಾದದ್ದೇ. ಧ್ಯಾನಸುಖವೂ ಆಸೆಪಡಬೇಕಾದದ್ದೇ.

ಧ್ಯಾನಕ್ಕೆಂದು ಕುಳಿತರೆ ಸಾಕು, ಎಲ್ಲ ಇಂದ್ರಿಯಗಳೂ ಪ್ರತಿಭಟಿಸುವುವು. ಏಕೆ? ಎಲ್ಲ ಇಂದ್ರಿಯಗಳಿಗೂ ಸದಾ ಬಹಿರ್ಮುಖವಾಗಿರುವುದೇ ಅಭ್ಯಾಸವಾಗಿರುವುದರಿಂದ. ಥಟ್ಟನೆ ಅಂತರ್ಮುಖವಾಗೆಂದರೆ ಅವಕ್ಕಾಗದು.

ಅದಕ್ಕೇನು ಮಾಡಬೇಕು? ಬಹಿರ್ಮುಖವಾಗಿ ಮಾಡುವ ಕೆಲಸಗಳಲ್ಲೇ ಏನನ್ನು ಮಾಡಿದರೆ ಧ್ಯಾನಕ್ಕೆ ಅನುಕೂಲಿಸುವಂತಾಗುವುದೋ ಅಂತಹ ಕೆಲಸಗಳನ್ನೇ ಅವಿಂದ ಮಾಡಿಸಬೇಕು.

ನಾಲಿಗೆಗೆ ಅಂತಹ ಒಂದು ಕೆಲಸವೇ ಹೀಗೆ ಭಗವಂತನನ್ನು ಕೀರ್ತಿಸುವುದು - ಎಂಬುದು. ಶ್ರೀರಂಗಮಹಾಗುರುಗಳ ಮಾತಿನಲ್ಲಿ ಹೇಳುವುದಾದರೆ "ನಾಲಿಗೆಯ ಸ್ವಭಾವವೇ ಲೊಟಗುಟ್ಟುವುದು. ಅದಕ್ಕೆ ಸುಮ್ಮನಿರಲಾಗುವುದಿಲ್ಲ. ಅದಕ್ಕೆ ಕೆಲಸ ಬೇಕು. ಆದ್ದರಿಂದ ಅದಕ್ಕೆ ಕೆಲಸವಿರಲಿ: ಏನೇನೋ ಮಾತನಾಡಬೇಡ, ಭಗವಂತನ ವಿಷಯವಾಗಿ ಮಾತನ್ನಾಡು. ಹಾಗೆ ಮಾಡಿದರೆ ಇಂದ್ರಿಯಕ್ಕೆ ಕೆಲಸವೂ ಆಯಿತು, ಜೀವನಿಗೆ ಲಕ್ಷ್ಯನಾದ ದೇವನ ನೆನಪೂ ಆಯಿತು."

ಇದು ಜಿಹ್ವೆಯ ಸಮಾಚಾರವಾಯಿತು. ಮನಸ್ಸಂತೂ ಮೇಲೆ ಹತ್ತಿಯೂ ಸುಲಭವಾಗಿ ಜಾರಿಬಿಡುವುದು! ಎಂದೇ ಎಂದೂ ಜಾರದವನನ್ನು, ಎಂದೂ ಚ್ಯುತಿಯಿಲ್ಲದವನಾದ ಅಚ್ಯುತನನ್ನು, ಭಜಿಸೆಂದು ಮನಸ್ಸಿಗೆ ಉಪದೇಶ.

ಹೀಗೆ ಉಳಿದ ಇಂದ್ರಿಯಗಳಿಗೂ ತಕ್ಕ ಕೆಲಸಗಳು. ಕೈಗಳಿಗೆ ಆತನ ಅರ್ಚನೆ. ಕಿವಿಗಳಿಗೆ ಆತನ ಕಥಾಶ್ರವಣ, ಕಣ್ಣುಗಳಿಗೆ ಆತನ ದರ್ಶನ. ಕಾಲ್ಗಳಿಗೆ ಆತನ ಆಲಯಕ್ಕೆ ನಡೆ. ಮೂಗಿಗೆ ಆತನ ಪಾದ-ತುಲಸಿಯ ಆಘ್ರಾಣನ. ಇವೆಲ್ಲದರಿಂದಾಗಿ, ಮತ್ತು ಇವೆಲ್ಲಕ್ಕೂ ಶಿಖರಪ್ರಾಯವಾಗಿ, ಸಹಜವಾಗಿ ಕೃಷ್ಣಪ್ರಭುವಿಗೆ ತಲೆಬಾಗುವುದಾಗುತ್ತದೆ.

ಹೀಗೆ ಎಲ್ಲ ಇಂದ್ರಿಯಗಳಿಗೂ ತಕ್ಕ ತಕ್ಕ ಕೆಲಸವಿತ್ತು ಭಗವಂತನತ್ತ ಅಭಿಮುಖತೆಯನ್ನು ವ್ಯವಸ್ಥೆಗೊಳಿಸಿದ್ದಾರೆ, ಜ್ಞಾನಿಗಳಾದ ನಮ್ಮ ಪೂರ್ವಜರು. ಇಂತಾದಾಗ ಕ್ರಮೇಣ ಅಂತರ್ಮುಖತೆಯು ಸಿದ್ಧಿಸಿ ಧ್ಯಾನವೇ ಸಾಧಿತವಾಗುವುದು.

ಧ್ಯಾನಯೋಗದಲ್ಲಿಯ ಪ್ರಗತಿಯೇ ಅಧ್ಯಾತ್ಮಕ್ಕೆ ಪೋಷಕವೆನಿಸುವುದಲ್ಲವೇ?

ಸೂಚನೆ: 16/8//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.


ಕೃಷ್ಣಕರ್ಣಾಮೃತ 74 ಎಂತು ಕಳೆಯಲಿ ಕೃಷ್ಣನನ್ನು ಕಾಣದ ದಿನಗಳನ್ನು? (Krishakarnamrta 74)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಕೃಷ್ಣನನ್ನು ಕಾಣಬೇಕೆಂಬ ಹಂಬಲವು ತೀವ್ರವಾದಾಗ ಉಂಟಾಗುವ ವೇದನೆಯನ್ನು ಹೇಳುವುದು ಸುಲಭವಲ್ಲ. ಎಂದೇ ಆತನನ್ನೇ ಕೇಳಿಕೊಳ್ಳುವುದಾಗುತ್ತದೆ: ಅಯ್ಯೋ ಹೇಗಪ್ಪಾ ಕಳೆಯಲಿ ಈ ದಿನಗಳನ್ನು? - ಎಂದು. 

ನನ್ನ ಈ ದಿನಗಳು ಅಧನ್ಯವಾಗಿವೆ. ನಿನ್ನ ದರ್ಶನವೆಂಬುದಿಲ್ಲದೆ ಹೇಗೆ ಕಳೆಯಲಪ್ಪಾ ಇವನ್ನು?

ಗೋಪಿಕೆಯರಿಗೆ ಶ್ರೀಕೃಷ್ಣನು ಅತ್ಯಂತ ಪ್ರೀತಿಪಾತ್ರನಾದವನು. ಅವನಿಲ್ಲದ ಒಂದೊಂದು ಕ್ಷಣವೂ ಅವರಿಗೆ ಒಂದೊಂದು ಯುಗದಂತೆ ಭಾಸವಾಗುತ್ತಿತ್ತಂತೆ! 

ನಮ್ಮ ಸುಖ-ದುಃಖಗಳನ್ನು ವಿಚಾರಿಸುವ ಹಿರಿಯರು ಯಾರಾದರೂ ಇರಬೇಕು. ಅಂತಹವರು ಯಾರೂ ಇಲ್ಲದಿರುವವರನ್ನೇ ಅನಾಥರೆನ್ನುವುದು. ಹಾಗಿರುವವ ರಿಗೆಲ್ಲ ಕೃಷ್ಣನೇ ಬಂಧು.ಕೃಷ್ಣನೇಕೆ ಅನಾಥಬಂಧುವಾಗಿದ್ದಾನೆ? ಏಕೆಂದರೆ ಆತನು ಕರುಣಾಸಮುದ್ರನಲ್ಲವೇ?

ವಿರಹವೇದನೆಯು ಉತ್ಕಟವಾದಾಗ ಕಾಲಕಳೆಯುವುದೇ ಕಡುಕಷ್ಟ! ದಿನಗಳೆರಡರ ನಡುವಣ ಭಾಗವೆಂದರೆ ರಾತ್ರಿಯೇ ಸರಿ. ದಿನಗಳು ಹೇಗೋ ಕಳೆದುಹೋಗುತ್ತವೆ - ಏನೇನೋ ಕೆಲಸಗಳಲ್ಲಿ. ಆದರೆ ರಾತ್ರಿಗಳನ್ನು ಕಳೆಯುವುದೇ ಕಷ್ಟ. ಎಲ್ಲರೂ ನಿದ್ರಿಸುತ್ತಿರಲು ತನಗೆ ನಿದ್ರೆ ಬಾರದೆ, ಕೃಷ್ಣನಿಗಾಗಿ ಹಂಬಲಿಸುವುದಷ್ಟೇ ಆಗು(ತ್ತಿರು)ವುದು! ಹೀಗಿರಲು ಆ ಕಾಲವನ್ನು ನಾನು ಹೇಗೆ ಕಳೆಯಲೆಂಬುದನ್ನು ನೀನೇ ಹೇಳಬೇಕು.

ಹಾ, ಹಂತ - ಎಂಬ ಸಂಸ್ಕೃತ-ಪದಗಳು ಖೇದ-ವಿಷಾದಗಳನ್ನು ತಿಳಿಸುತ್ತವೆ. ದುಃಖವು ತೀವ್ರವಾದಾಗ ಆ ಪದಗಳನ್ನೇ ಎರಡೆರಡು ಬಾರಿ ಹೇಳುವುದು.  

ನಮ್ಮ ಚಿತ್ತವನ್ನು ಅಪಹರಿಸಿರುವ ನೀನೇ ನಮ್ಮ ಚಿತ್ತದ ನೋವನ್ನು ಪರಿಹರಿಸಬೇಕು – ಎಂಬ ಭಾವ. ಶ್ಲೋಕ ಹೀಗಿದೆ:

ಅಮೂನ್ಯಧನ್ಯಾನಿ ದಿನಾಂತರಾಣಿ/

ಹರೇ ತ್ವದಾಲೋಕನಂ ಅಂತರೇಣ |

ಅನಾಥ-ಬಂಧೋ! ಕರುಣೈಕ-ಸಿಂಧೋ!/

ಹಾ ಹಂತ ಹಾ ಹಂತ! ಕಥಂ ನಯಾಮಿ? ||

 ***

ಗೋಪಿಕೆಯೊಬ್ಬಳ ಹೃದಯವೇದನೆಯನ್ನು ಕವಿಯು ಬಿಂಬಿಸುತ್ತಾನೆ. "ಏನು ಮಾಡೋಣ, ಯಾರಲ್ಲಿ ಹೇಳಿಕೊಳ್ಳೋಣ? ಸಾಕೀ ಆಸೆ. ಕೃಷ್ಣನನ್ನು ಬಿಟ್ಟು ಬೇರಿನ್ನಾವುದಾದರೂ ಮಾತನ್ನಾಡಿ" ಎಂದು ಹಲುಬುತ್ತಿದ್ದಾಳೆ, ಆಕೆ. 

ಎಂತಹ ಆಸೆಯನ್ನಿಟ್ಟುಕೊಳ್ಳಬೇಕು? ಇಂದೋ ನಾಳೆಯೋ ತೀರುವಂತಹುದನ್ನು. ಆದರೆ ಕೃಷ್ಣನನ್ನು ಪಡೆಯಬೇಕೆಂಬ ಆಸೆ ಈಡೇರುವುದೋ ಇಲ್ಲವೋ ಬಲ್ಲೆವೇ? 

ಕೃಷ್ಣನ ಕಥೆ ಬೇಡವೆನ್ನುತ್ತಲೂ, ಮತ್ತೆ ಕೃಷ್ಣನತ್ತಲೇ ಆಕರ್ಷಣೆ! ಈ ಕೃಷ್ಣನು ನನ್ನ ಹೃದಯದಲ್ಲೇ ಹುದುಗಿರುವನು! ಆತನ ಆಕಾರವದೆಂತಹುದು! ಮುಗುಳ್ನಗೆಯಿಂದ ಕೂಡಿರುವುದು. ಎಂದೇ ಮಧುರಮಧುರವಾಗಿರುವಂತಹುದು! ಎಂದರೆ  ಅತಿಶಯಿತವಾಗಿ ಮಧುರವಾಗಿರುವುದು. 

ಹೀಗೆ ಕಂಗೊಳಿಸುವ ಕೃಷ್ಣನು ಮನೋನಯನೋತ್ಸವನಾಗಿರುವನು. ಎಂದರೆ ಮನಸ್ಸಿಗೂ ಹಬ್ಬ, ಕಣ್ಣುಗಳಿಗೂ ಹಬ್ಬವಾಗಿರುವನು.ಅಂತಹ ಕೃಷ್ಣನಲ್ಲಿಯೇ ನನ್ನ ಮನಸ್ಸು ಅಂಟಿಕೊಳ್ಳುತ್ತಿದೆ. ಎಂದರೆ ಅದನ್ನೆನ್ನ ಮನಸ್ಸಿನಿಂದ ದೂಡಲಾಗದು. ನನ್ನ ಹಂಬಲಿಕೆಯೋ ಎಷ್ಟು ಉತ್ಕಟವೆಂದರೆ ಎಷ್ಟು ಕೊಟ್ಟರೂ  ಮತ್ತೂ ಬೇಕೆನಿಸುತ್ತಿರುವಂತಹುದು. 

ಸಿಗದವನು ಅವನು - ಎಂದು ಲೆಕ್ಕ ಹಾಕಿ ಮನಸ್ಸಿನಿಂದ ದೂಡಬೇಕೆಂದುಕೊಂಡರೂ, ಆತನು ಕಣ್ಣಿಗೆ ಕಟ್ಟಿದ್ದಾನೆ, ಮನಸಿಗೆ ಗಂಟುಬಿದ್ದಿದ್ದಾನೆ!

ಕಿಮಿಹ ಶೃಣುಮಃ, ಕಸ್ಯ ಬ್ರೂಮಃ, ಕಥಂ ಕೃತಮಾಶಯಾ /

ಕಥಯತ ಕಥಾಮನ್ಯಾಂ ಧನ್ಯಾಂ ಅಹೋ  ಹೃದಯೇಶಯಃ |

ಮಧುರ-ಮಧುರ-ಸ್ಮೇರಾಕಾರೇ ಮನೋ-ನಯನೋತ್ಸವೇ /

ಕೃಪಣ-ಕೃಪಣಾ ತೃಷ್ಣಾ ಕೃಷ್ಣೇ ಚಿರಂ ಬತ ಲಂಬತೇ ||

***

ಕೃಷ್ಣಾ, ನೀನದೆಂದು ನನ್ನ ಕಣ್ಗಳಿಗೆ ಕಾಣಿಸಿಕೊಳ್ಳುವೆ? - ಎಂದಿಲ್ಲಿ ಕೇಳಿದೆ. ಕೃಷ್ಣನನ್ನು ಎಂಟು ಪದಗಳಿಂದ ವಿಶೇಷಿಸಿದೆ. ಪ್ರತಿಯೊಂದಕ್ಕೂ ಒಂದು ವಿಶೇಷವಾದ ಅರ್ಥವಿದೆ. 'ಹೇ' ಎಂಬ ಸಂಬೋಧನೆಯು ಒಂಭತ್ತು ಬಾರಿ ಬಂದಿದೆ.

ಹೇ ದೇವ! ಎಂಬುದೇ ಮೊದಲನೆಯ ಸಂಬೋಧನೆ. ಯಾರು ದೇವನೆಂದರೆ? ಯಾವನು ಹೊಳೆಯುವನೋ ಅವನೇ ದೇವ. ದೇವತೆಗಳೆಲ್ಲರೂ ತೇಜೋವಿಶೇಷದಿಂದ ಕೂಡಿರುವವರು. ಆಡುವವನು - ಎಂಬ ಅರ್ಥವೂ ಯುಕ್ತವೇ. ಕ್ರೀಡಾಪರನಾಗಿರುವ ಲಕ್ಷಣವೂ ಕೃಷ್ಣನಿಗೆ ಸಲ್ಲುತ್ತದೆ. ಸಂತೋಷಪಡುವುದೂ ದೇವತೆಗಳ ಒಂದು ಲಕ್ಷಣ. ದೇವತೆಗಳಿಗಾಗುವ ಸಂತೋಷದ ಮಟ್ಟವೇ ಸಾಕಷ್ಟು ಹಿರಿದೆಂಬ ಲೆಕ್ಕವಿದೆ. ಮಾನುಷಾನಂದಕ್ಕೂ ಮಿಗಿಲಾದುದಲ್ಲವೇ ದೇವಾನಂದ?

ದೇವ - ಎನ್ನುವುದು ಸಂಸ್ಕೃತಪದ. ಸಂಸ್ಕೃತಪದಗಳು ಧಾತುಗಳಿಂದ ನಿಷ್ಪನ್ನವಾಗತಕ್ಕವು. ಧಾತುಗಳಿಗೆ ನಾನಾರ್ಥಗಳು ಇರುವುದುಂಟು. ತದನುಸಾರ ನಾಮಪದಗಳಿಗೂ ಹಲವು ಅರ್ಥಗಳು ಸಂಭವಿಸುವುವು. ಹೀಗಾಗಿ ಕಾಂತ್ಯರ್ಥ-ಕ್ರೀಡಾರ್ಥ-ಮೋದಾರ್ಥಗಳು ವಿಶೇಷವಾಗಿ ಕೃಷ್ಣನಿಗೆ ಅನ್ವಯಿಸುವುವು. 

ಹೇ ದಯಿತ! ಎಂದೂ ಕರೆದಿದೆ. ದಯಿತನೆಂದರೆ ಅತಿ ಪ್ರಿಯ ಎಂದರ್ಥ. ದಯೆತೋರುವವನು ಎಂಬರ್ಥವೂ ಆಗಬಹುದು. 

ಇನ್ನು ಆತನು ಭುವನೈಕಬಂಧು. ಬಂಧುವೆಂದರೆ ಹಿತಕಾರಿ. ಸಾಮಾನ್ಯವಾಗಿ ನಮಗೆಲ್ಲ ಮೊಟ್ಟ ಮೊದಲ ಬಂಧುಗಳೆಂದರೆ ಅಮ್ಮ-ಅಪ್ಪ. ಅಣ್ಣತಮ್ಮಂದಿರೂ ಅಕ್ಕತಂಗಿಯರೂ ಬಂಧುಗಳೇ; ಬೇರೆಯವರೂ ಉಂಟು. ಭಗವಂತನನ್ನು "ತ್ವಮೇವ ಮಾತಾ ಚ ಪಿತಾ ತ್ವಮೇವ" ಎನ್ನುವಲ್ಲಿ, ಆತನಲ್ಲಿಯ ತಾಯ್ತನ-ತಂದೆತನಗಳು ವ್ಯಕ್ತವಾಗುತ್ತವೆ. ಲೌಕಿಕಜೀವನದಲ್ಲಿ ಅಪ್ಪಅಮ್ಮಂದಿರೇ ಕೆಲವೊಮ್ಮೆ ದಯಾಹೀನರಾಗಿ ವರ್ತಿಸುವುದೂ ಇಲ್ಲದಿಲ್ಲ. ಆದರೆ ನಿಜವಾದ ಬಂಧುವೆಂದರೆ ಮೂರು ಲೋಕಗಳಲ್ಲಿಯೂ ಈತನೊಬ್ಬನೇ. ಇವನನ್ನೇ ನೆಚ್ಚಬಹುದಾದುದು.

ಕೃಷ್ಣ ಎಂಬುದನ್ನು ಸಹ ವಿಶೇಷಣವೆಂದೇ ಪರಿಗಣಿಸಬಹುದು. ಯಾರು ಎಲ್ಲರನ್ನೂ ಆಕರ್ಷಿಸುವನೋ ಆತನೇ ಕೃಷ್ಣ. ಇದು "ಕೃಷ್ಣ"ಪದದ ಧಾತುವಿನಿಂದಲೂ ಗೊತ್ತಾಗುತ್ತದೆ. ಕೃಷ್ಣನ ಕಥೆಯಿಂದಲೂ ಗೊತ್ತಾಗುತ್ತದೆ. 

ಕೃಷ್ಣನನ್ನು ಚಪಲ ಎಂದು ಪ್ರೀತಿಯ ಬೈಗುಳವಾಗಿಯೂ ಹೇಳಬಹುದು. ನನ್ನನ್ನು ಬಿಟ್ಟು ಬೇರೆಯವರೊಂದಿಗೂ ಸೇರುವೆಯೆಲ್ಲಾ? - ಎಂಬ ಅಸೂಯೆ ಇಂತಹ ಮಾತನ್ನು ಬರಿಸುತ್ತದೆ.  

ಇವಕ್ಕೂ ಮಿಗಿಲಾದುದು ಆತನು ಕರುಣೈಕಸಿಂಧುವೆಂಬುದು. ಆತನು ಕೃಪಾಸಾಗರ. ಆತನಲ್ಲಿ ಆಗೊಮ್ಮೆ ಈಗೊಮ್ಮೆ ಬೇರೆ ಭಾವಗಳು ಕಂಡರೂ, ಅವೆಲ್ಲದರ ಹಿಂದೆ ಆಡುವುದು ಆತನ ದಯೆಯೊಂದೇ. ಆಳವಾಗಿ ನೋಡಿದರಷ್ಟೆ ಇದು ಗೊತ್ತಾಗುವುದು.

ಲೋಕದಲ್ಲಿ ದಯಾಮಯರು ಎಷ್ಟೋ ಮಂದಿ ಇರಬಹುದು. ದಯೆಯ ಜೊತೆಗೆ ಸಾಮರ್ಥ್ಯವಿಲ್ಲದಿದ್ದರೆ ಪ್ರಯೋಜನವೇನು? ಕೃಷ್ಣನೋ ತ್ರಿಲೋಕದೊಡೆಯ. ಎಂದೇ ಸರ್ವಸಮರ್ಥ. ಅಂತಹವನ ದಯೆಗೇ ಬೆಲೆ. 

ಇನ್ನು ನಾಥ ಎಂದರೆ ಪ್ರಭು ಎಂದರ್ಥ. ತನ್ನ ಅಧೀನದಲ್ಲಿರುವವರ ಬಗ್ಗೆ ಸದಾ ಕಾಳಜಿ ವಹಿಸಿ ಅವರ ಬೇಡಿಕೆ-ಅಪೇಕ್ಷೆಗಳನ್ನು ತುಂಬಿಸಿಕೊಡುವವನನ್ನೇ ನಾಥನೆನ್ನುವುದು. ಕೃಷ್ಣನು ಅಂತಹವನೇ.

ರಮಣನೆಂದರೆ ಚಿತ್ತಕ್ಕೆ ಆನಂದವನ್ನು ಉಂಟುಮಾಡುವವನು. ಆತನೇಕೆ ರಮಣ? ಆತನು ನಯನಾಭಿರಾಮನಾದ್ದರಿಂದಲೇ. ಹಾಗೆಂದರೆ ನಯನಗಳಿಗೆ ನಲಿವನ್ನು ಉಂಟಮಾಡತಕ್ಕವನು.

ಹಾ! ಹಾ! ಎಂದು ಕೊನೆಯಲ್ಲಿ ಎರಡು ಬಾರಿ ಹೇಳಿರುವುದು ಅತಿಖೇದವನ್ನು ಸೂಚಿಸುತ್ತದೆ: ಕೃಷ್ಣನು ಕಣ್ಣುಗಳಿಗೆ ಕಾಣಬೇಕು. ಅಲ್ಲಿಯ ತನಕ ಮನಸ್ಸಿಗೆ ನೆಮ್ಮದಿಯಿಲ್ಲ, ತುಡಿತಕ್ಕೆ ನಿಲುಗಡೆಯಿಲ್ಲ, ಮೊರೆಗೆ ಮುಗಿತಾಯವಿಲ್ಲ. 

ಎಂದೇ ಅದಕ್ಕಾಗಿಯೇ ಇಲ್ಲಿ ಹಂಬಲಿಸಿದೆ:

ಹೇ ದೇವ ಹೇ ದಯಿತ ಹೇ ಭುವನೈಕ-ಬಂಧೋ/

ಹೇ ಕೃಷ್ಣ ಹೇ ಚಪಲ ಹೇ ಕರುಣೈಕ-ಸಿಂಧೋ |

ಹೇ ನಾಥ ಹೇ ರಮಣ ಹೇ ನಯನಾಭಿರಾಮ/

ಹಾ ಹಾ ಕದಾ ನು ಭವಿತಾಸಿ ಪದಂ ದೃಶೋರ್ಮೇ? ||

ಸೂಚನೆ : 16/08/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.