Saturday, September 6, 2025

ಅನಂತಪದ್ಮನಾಭ ವ್ರತ ವೈಶಿಷ್ಟ್ಯ - ಆಚರಣೆ (Anantapadmanabha Vrata Vaisisṭya - Acaraṇe)

ಲೇಖಕರು : ವಿದ್ವಾನ್ ಅನಂತ ಬಿ.ಜಿ.

ಪ್ರತಿಕ್ರಿಯಿಸಿರಿ (lekhana@ayvm.in)





ಭಾರತೀಯರು ಬಹು ಶ್ರದ್ಧೆಯಿಂದಲೂ ಆದರದಿಂದಲೂ ಆಚರಿಸುವ ವ್ರತಗಳಲ್ಲಿ ಅನಂತಪದ್ಮನಾಭನ ಚತುರ್ದಶಿ ವ್ರತವೂ ಒಂದು.  ಇದನ್ನು ಸಂಕ್ಷೇಪದಲ್ಲಿ ಅನಂತನ ಚತುರ್ದಶೀ ಅನಂತನ ಹಬ್ಬ ಎಂಬ ಹೆಸರುಗಳಲ್ಲಿಯೂ ಕರೆಯುವುದು ರೂಢಿಯಲ್ಲಿದೆ. ಅನಂತ ಎಂಬ ಪದಕ್ಕೆ ಮಹಾವಿಷ್ಣುವು ಪವಡಿಸಿರುವ ಸರ್ಪರಾಜನಾದ ಆದಿಶೇಷ, ಭೂಮಿಯನ್ನು ತನ್ನ ಹೆಡೆಯ ಮೇಲೆ ಧರಿಸಿರುವ ಶೇಷನಾಗ ಎಂದು ತಾತ್ಪರ್ಯ.ಭಗವಂತನ ಅನಂತ ಶಕ್ತಿಯುಳ್ಳ ಪ್ರಾಣಶಕ್ತಿ ;ಕುಂಡಲಿನೀ ಸ್ವರೂಪನಾದುದರಿಂದ ಆದಿಶೇಷನಿಗೆ ಈ ಹೆಸರು, ಹಾಗೆಯೇ ಈ ಅನಂತನಾದ ಶೇಷನಾಗನಿಗೂ ಆಧಾರಭೂತನಾಗಿ ಆತನನ್ನು ಹಾಸಿಗೆಯನ್ನಾಗಿಯೂ, ಆಸನವನ್ನಾಗಿಯೂ, ಅಲಂಕಾರವನ್ನಾಗಿಯೂ, ಬೆಳ್ಗೊಡೆಯನ್ನಾಗಿಯೂ, ಮಣಿ ದೀಪವನ್ನಾಗಿಯೂ, ಪಾದುಕೆಯನ್ನಾಗಿಯೂ ನೇಮಿಸಿಕೊಂಡಿರುವ ಮಹಾಪ್ರಭುವಾದ ಆದಿನಾರಾಯಣನಿಗೂ ಅನಂತನೆಂಬ ನಾಮಧೇಯವಿದೆ. ನಮೋಸ್ತು ಅನಂತಾಯ ಸಹಸ್ರ ಮೂರ್ತಯೇ ಎಂದು ವಿಷ್ಣು ಸಹಸ್ರನಾಮದಲ್ಲಿ ಬರುತ್ತದೆಯಲ್ಲವೇ ? ಈತನ ರೂಪಗಳು ಗುಣಗಳು ಶಕ್ತಿಗಳು ವಿಭೂತಿಗಳು ಎಲ್ಲವೂ ಅಂತರಹಿತವಾಗಿರುವುದರಿಂದ ಆ ಮಹಾಪ್ರಭುವಿಗೆ ಈ ಹೆಸರು ಬಹಳವಾಗಿ ಒಪ್ಪುತ್ತದೆ.  ಇನ್ನು ಅನಂತನಾಗನನ್ನು ಶಯನವನ್ನಾಗಿ ಹೊಂದಿರುವುದರಿಂದ ಅನಂತಶಯನ ಎಂಬುದಾಗಿಯೂ, ಬ್ರಹ್ಮದೇವರಿಗೆ ಉತ್ಪತ್ತಿ ಸ್ಥಾನವಾಗಿರುವ ಪದ್ಮವನ್ನು ನಾಭಿನ್ನಾಗಿ ಹೊಂದಿರುವುದರಿಂದ ಅನಂತಪದ್ಮನಾಭನೆಂದೂ ಕರೆಯಲ್ಪಡುವ ದೇವನಾದ ನಾರಾಯಣನಿಗೂ ಅನಂತ ಎಂಬುದು ಸಂಕ್ಷಿಪ್ತ ರೂಪದ ಹೆಸರು. 

ಅನಂತಪದ್ಮನಾಭನ ಸ್ವರೂಪ.
ಈ ಮೂರ್ತಿಗೆ ಎರಡು ಬಾಹುಗಳಿವೆ. ಅವುಗಳಲ್ಲಿ ಮೇಲಿರುವ ಎಡಗೈಯಲ್ಲಿ ಕೆಳಮುಖವಾದ ಒಂದು ಕಮಲವನ್ನು ತನ್ನ ಕಂಠದ ನೇರಕ್ಕೆ ಹಿಡಿದುಕೊಂಡಿದ್ದಾನೆ. ಕೆಳಗೆ ಚಾಚಿರುವ ಬಲಗೈಯಿಂದ ಶಿವಲಿಂಗವನ್ನು ಮುಚ್ಚಿಕೊಂಡಂತೆ ಕಾಣುತ್ತದೆ. ಹತ್ತಿರದಲ್ಲಿ ತನಗೆ ಸುಪ್ರಭಾತವನ್ನು ಬಯಸುತ್ತಿರುವ ಋಷಿಗಳನ್ನು ಮತ್ತು ಅನೇಕ ದೇವತೆಗಳನ್ನು ತನ್ನ ಯೋಗ ನಿದ್ರೆಯಿಂದ ಎಚ್ಚರಗೊಂಡಿರುವ ವಿಶಾಲವಾದ ಕಣ್ಣುಗಳಿಂದ ಅನುಗ್ರಹಿಸುತ್ತಿರುವ ಭಂಗಿಯಲ್ಲಿ ಸ್ವಾಮಿಯು ವಿರಾಜಿಸಿದ್ದಾನೆ. ನಾಭಿಯ ಪದ್ಮದಲ್ಲಿ ಚತುರ್ಮುಖ ಬ್ರಹ್ಮನು ಬೆಳಗುತ್ತಿದ್ದಾನೆ.  ಈ ದಿವ್ಯವಾದ ಮೂರ್ತಿಯನ್ನು ಶ್ರೀ ಕ್ಷೇತ್ರ ತಿರುವನಂತಪುರದಲ್ಲಿ ಸಂದರ್ಶಿಸಬಹುದಾಗಿದೆ. 

ವ್ರತದ ಕಾಲ.
ದಕ್ಷಿಣಾಯನದಲ್ಲಿ ಬರುವ ಭಾದ್ರಪದ ಶುದ್ಧ ಚತುರ್ದಶಿಯಂದು ಈ ವ್ರತವನ್ನು ಆಚರಿಸಬೇಕು. ಈ ಬಾರಿ ಇದು ಇದೇ ಸೆಪ್ಟೆಂಬರ್ 6ನೇ ತಾರೀಖಿನಂದು ಒದಗಿ ಬಂದಿದೆ. ಈ ಹಬ್ಬದ ಮಾರನೆಯ ದಿವಸ ಬರುವ ಹುಣ್ಣಿಮೆಯನ್ನು ಅನಂತನ ಹುಣ್ಣಿಮೆ ಎಂಬ ಹೆಸರಿನಿಂದ ಕರೆಯುವುದುಂಟು. 

ಆಚರಣೆಯ ಕ್ರಮ.
ಅಂದು ಬೆಳಿಗ್ಗೆ ಸ್ನಾನ, ನಿತ್ಯಕರ್ಮಗಳ ಅನಂತರ ದಂಪತಿಗಳು ಕೆಂಪು ವಸ್ತ್ರವನ್ನುಟ್ಟು ಆಚಮನವನ್ನು ಮಾಡಿ ಅನಂತ ವ್ರತವನ್ನು ಆಚರಿಸಲು ಸಂಕಲ್ಪ ಮಾಡಬೇಕು. ಈ ವ್ರತದ ಅಂಗವಾಗಿ ಯಮುನಾ ದೇವಿಯ ಪೂಜೆಯನ್ನು ಮಾಡುವುದು ಒಂದು ವಿಶೇಷ. 
ಎರಡು ಕಳಶಗಳನ್ನು ಸ್ಥಾಪಿಸಿ ಎರಡರಲ್ಲಿಯೂ ಅನಂತದೇವನನ್ನು ಆವಾಹನೆ ಮಾಡಿ ಕಲ್ಪೋತ್ತವಾಗಿ ಪೂಜಿಸಬೇಕು. ಕಳಶ ಪೂಜೆ, ಪ್ರಾಣಪ್ರತಿಷ್ಠೆ, ದ್ವಾರಪಾಲಾದಿ ಪರಿವಾರದ ಪೂಜೆ, ದಿಕ್ಪಾಲಕರ ಪೂಜೆ, ಅಂಗಪೂಜೆ, ಪತ್ರ -ಪುಷ್ಪಗಳಿಂದ ಪೂಜೆ, ದರ್ಭೆಯಲ್ಲಿ ಮಾಡಿದ ಐದು ಅಥವಾ ಏಳು ಹೆಡೆಗಳ ಶೇಷನಾಗನ ಪೂಜೆ, ದೋರಗ್ರಂಥಿಗಳ ಪೂಜೆ, ಅನಂತನ ಅಷ್ಟೋತ್ತರ ಶತನಾಮಾವಳಿ ಅಂತೆಯೇ  ಸಹಸ್ರನಾಮಾರ್ಚನೆ, ಧೂಪ ದೀಪ ನೈವೇದ್ಯ, ಪ್ರಾರ್ಥನೆಗಳು ಕ್ರಮವಾಗಿ ನಡೆಯಬೇಕು. 

ಅನಂತಪದ್ಮನಾಭನನ್ನು ಕುಂಭಗಳಲ್ಲಿ ಮಾತ್ರವಲ್ಲದೆ ಮಂಡಲದಲ್ಲಿ ಮೂರ್ತಿಯಲ್ಲಿ ಮತ್ತು ಚಿತ್ರಪಟದಲ್ಲೂ ಪೂಜಿಸಬಹುದು. ಅನಂತಪದ್ಮನಾಭನ ವ್ರತದ ವಿಷಯದಲ್ಲಿ ಗಮನಿಸಬೇಕಾದ ಒಂದು ಮುಖ್ಯವಾದ ವಿಷಯ ಎಂದರೆ 14 ಎಂಬ ಸಂಖ್ಯೆ ಆತನ ವ್ರತದ ತಿಥಿಯು ಚತುರ್ದಶೀ ಆತನ ಪೂಜೆಯಲ್ಲಿ ಕೈಗೆ ಕಟ್ಟಿಕೊಳ್ಳುವ ಸೂತ್ರದ ಗ್ರಂಥಿಗಳು 14.  ಆವರಣ ಪೂಜೆಯ ದೇವತೆಗಳು 14. ಆತನಿಗೆ ಸಮರ್ಪಿಸುವ ಪತ್ರಗಳ ಪುಷ್ಪಗಳ ಮತ್ತು ನೈವೇದ್ಯಗಳ ಸಂಖ್ಯೆ 14, ವ್ರತದ ಉದ್ಯಾಪನೆಯನ್ನು 14 ವರ್ಷದ ನಂತರ ಮಾಡಬೇಕು, 14 ಲೋಕಗಳಿಂದ ಕೂಡಿದ ಸಮಸ್ತ ವಿಶ್ವವೂ ಆತನ ಅಖಂಡವಾದ ಆಧಿಪತ್ಯಕ್ಕೆ ಸೇರಿದೆ ಎಂಬ ವಿಷಯಕ್ಕೆ ಈ ವಿಶಿಷ್ಟ ಸಂಖ್ಯೆಯು ಸಂಕೇತವಾಗಿದೆ. 

ಅನಂತನ ದಾರ ಮತ್ತು ಗೋಧಿಯಿಂದ ಮಾಡಿದ ಸಜ್ಜಪ್ಪವೆಂಬ ಸಿಹಿಯಾದ ಭಕ್ಷ್ಯವು ಈ ವ್ರತದ ವಿಶೇಷಗಳಲ್ಲಿ ಸೇರುತ್ತದೆ. ಅಂತೆಯೇ ಅನಂತನಿಗೆ ಪ್ರಿಯವಾದ ವರ್ಣ . ಕೆಂಪು ಬಣ್ಣ, ಆದ್ದರಿಂದಲೇ ಅಂದು ವ್ರತವನ್ನು ಆಚರಿಸುವವರು ಕೆಂಪು ಬಣ್ಣದ ವಸ್ತ್ರಗಳನ್ನು ಧರಿಸಬೇಕು. ಅನಂತನ ದಾರದ ಬಣ್ಣವು ಕೆಂಪು, ರಕ್ತ ಚಂದನದಿಂದ ಅವನಿಗೆ ಲೇಪನ, ಜೊತೆಗೆ ಅನಂತನ ಗೊಂಡೆ ಎಂಬ ಹೆಸರಿನ ಕೆಂಪಾದ ಹೂವುಗಳು ಕೂಡ ಅನಂತನಿಗೆ ಪ್ರಿಯವಾದವು. 
ಅನಂತಪದ್ಮನಾಭ ಮೂರ್ತಿಯ ಮತ್ತೊಂದು ವಿಶೇಷವೆಂದರೆ ಅವನ ಸುತ್ತ ನೆರೆದಿರುವ ಭಕ್ತಗಣण् ಅವರಲ್ಲಿ ಋಷಿಗಳಿದ್ದಾರೆ, ಕಿನ್ನರರಿದ್ದಾರೆ, ಕೆಂಪುರುಷರಿದ್ದಾರೆए ದೇವತೆಗಳೂ ಇದ್ದಾರೆ, ಅವರೆಲ್ಲರೂ ಏತಕ್ಕಾಗಿ ಸೇರಿದ್ದಾರೆ. ಎಂದರೆ ಯೋಗ ನಿದ್ರೆಯಲ್ಲಿ ಮುಳುಗಿ ಕಣ್ಣುಗಳನ್ನು ಮುಚ್ಚಿಕೊಂಡಿರುವ ಸ್ವಾಮಿಯು ಯಾವಾಗ ಲೋಕವನ್ನು ಅನುಗ್ರಹಿಸಲು ಕಣ್ಣುಗಳನ್ನು ತೆರೆಯುತ್ತಾನೆಯೋ, ಯಾವಾಗ ಯೋಗದ ಅನುಭವಗಳಿಂದ ತುಂಬಿದ ಅವನ ಕಮಲದ ಕಣ್ಣುಗಳನ್ನು ನೋಡುತ್ತೇವೆಯೋ, ಯಾವಾಗ ಅವನ ದೃಷ್ಟಿ ಪ್ರಸಾದವನ್ನು ಪಡೆಯುತ್ತೇವೆಯೋ ಎಂದು ಕಾತರದಿಂದ ಕಾದಿದ್ದಾರೆ. 

ಹೀಗೆ ಸೇರಿದ ಗುಂಪಿನಲ್ಲಿ ಸ್ವಾಮಿಯ ಹಾಸಿಗೆ ಯಾಗಿರುವ ಆದಿಶೇಷನೂ ಇದ್ದಾನೆ, ಸ್ವಾಮಿಗೆ ವಾಹನವಾಗಿರುವ ಗರುಡನೂ ಇದ್ದಾನೆ, ಇವರಿಬ್ಬರೂ ಪರಸ್ಪರ ಶತ್ರುಗಳಲ್ಲವೇ ? ಎಂದರೆ, ಪ್ರಸ್ತುತ ಭಗವಂತನ ಸನ್ನಿಧಿಯಲ್ಲಿ ಅವರಿಬ್ಬರೂ ತಮ್ಮ ಸಹಜ ವೈರವನ್ನು ಮರೆತು ಭಗವಂತನಲ್ಲಿಯೇ ನೆಟ್ಟ ಮನಸುಳ್ಳವರಾಗಿದ್ದಾರೆ.  ಭಗವಂತನ ಸನ್ನಿಧಿಯಲ್ಲಿ ನಮ್ಮ ನಮ್ಮ ಪ್ರಕೃತಿಯ ಚೇಷ್ಟೆಗಳಿಗೆ ಅವಕಾಶವಿರುವುದಿಲ್ಲಪ್ಪ ಎಂಬ ರಹಸ್ಯವನ್ನು ಶ್ರೀರಂಗ ಹಾಗುರುಗಳು ತಿಳಿಸಿಕೊಟ್ಟಿರುತ್ತಾರೆ. 

ಯೋಗ ಭೋಗಗಳೆರಡನ್ನೂ ಅನುಗ್ರಹಿಸಿ ಕೊಡುವ ಅನಂತಪದ್ಮನಾಭನ ಚತುರ್ದಶಿಗೆ ಸಿದ್ಧರಾಗೋಣ. 

Monday, September 1, 2025

ಪ್ರಶ್ನೋತ್ತರ ರತ್ನಮಾಲಿಕೆ 30 (Prasnottara Ratnamalike 30)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೩೦. ಪ್ರಿಯ ಯಾವುದು?

ಉತ್ತರ - ಪ್ರಾಣಿಗಳಿಗೆ ಕಲ್ಯಾಣ.


ಈ ಮುಂದಿನ ಪ್ರಶ್ನೆ ಹೀಗಿದೆ - 'ಪ್ರಿಯ ಯಾವುದು?' ಎಂಬುದಾಗಿ. ಅದಕ್ಕೆ ಉತ್ತರ - 'ಪ್ರಾಣಿಗಳಿಗೆ ಕಲ್ಯಾಣವಾದದ್ದು' ಯಾವುದೋ ಅದನ್ನು ಪ್ರಿಯ ಎಂಬುದಾಗಿ ಕರೆಯಲಾಗುತ್ತದೆ. ಅಂದರೆ ಪ್ರಾಣಿಗಳಿಗೆ, ಅಥವಾ ಸೃಷ್ಟಿಯಲ್ಲಿ ಇರುವ ಪ್ರತಿಯೊಂದು ಜೀವಿಗೆ ಪ್ರಿಯವಾಗುವಂತೆ ಇರುವುದು; ಅವುಗಳಿಗೆ ಒಳ್ಳೆಯದಾಗುವಂತೆ ಅಥವಾ ಕಲ್ಯಾಣವಾಗುವಂತೆ ನಡೆದುಕೊಳ್ಳುವಿಕೆಯನ್ನೇ 'ಪ್ರಿಯ' ಎಂಬುದಾಗಿ ಇಲ್ಲಿ ಹೇಳಲಾಗಿದೆ. ಹೀಗೊಂದು ಮಾತಿದೆ - "ನ ಹಿ ಕಸ್ಯ ಪ್ರಿಯಃ ಕೋ ವಾ ವಿಪ್ರಿಯಃ ವಾ ಜಗತ್ತ್ರಯೇ । ಕಾಲೇ ಕಾರ್ಯವಶಾತ್ ಸರ್ವೇ ಭವಂತ್ಯೇವ ಅಪ್ರಿಯಾಃ ಪ್ರಿಯಾಃ ॥" ಯಾರಿಗೆ ಯಾರೂ ಪ್ರಿಯನು ಅಲ್ಲ ಅಪ್ರಿಯನೂ ಅಲ್ಲ. ಯಾವುದೋ ಕಾಲದಲ್ಲಿ, ಯಾವುದೋ ಕಾರ್ಯಕ್ಕೆ ಅನುಗುಣವಾಗಿ ಅವನು ಪ್ರಿಯ ಅಥವಾ ಅಪ್ರಿಯ ಎಂಬುದಾಗಿ ಪರಿಗಣಿತವಾಗುತ್ತಾನೆ ಎಂಬುದಾಗಿ. ಅಂದರೆ ವಸ್ತುವು ಅಥವಾ ಪ್ರಾಣಿಯು ನಮಗೆ ಪ್ರಿಯವಾಗಬೇಕಾದರೆ ಅದೊಂದು ಕಾಲದ ಸನ್ನಿವೇಶದಲ್ಲಿ ನಮಗೆ ಸಂಬಂಧಿಸಿದ್ದಾದಾಗ ಮಾತ್ರ ಆಗುತ್ತದೆ. ಹಾಗಾಗಿ ಆ ಸಂದರ್ಭದಲ್ಲಿ ಆ ಪ್ರಾಣಿಗೆ ನಾವು ಒಳ್ಳೆಯದನ್ನು ಉಂಟುಮಾಡಿದರೆ ಅದನ್ನು 'ಪ್ರಿಯ' ಎಂಬುದಾಗಿ ಕರೆಯಬೇಕು. ಮಾನವನಾದ ನಾವುಗಳು ಅತ್ಯಂತ ವಿವೇಕಿಯಾಗಿ ಎಲ್ಲ ಪ್ರಾಣಿಗಳಿಗೆ ಕಲ್ಯಾಣವಾಗಬೇಕು ಎಂಬುದನ್ನು ಬಯಸಬೇಕು. ಅಂದರೆ ಎಲ್ಲ ಪ್ರಾಣಿಗಳು ಈ ಪ್ರಪಂಚದಲ್ಲಿ ಬದುಕಬೇಕು; ಆ ಬದುಕು ಅವುಗಳಿಗೆ ಸಾರ್ಥಕತೆಯನ್ನು ಕೊಡುವಂತಿರಬೇಕು; ಕೇವಲ ಆಹಾರ ನಿದ್ರಾ ಭಯಗಳಿಂದ ಕೂಡಿದ ಜೀವಿಕೆ ಅವುಗಳದ್ದು. ಆದರೂ ಕೂಡ ಅವುಗಳು ಇವೆಲ್ಲವನ್ನೂ ದಾಟಿ ಮುಂದೆ ಆ ಜೀವವು ಸನ್ಮಾರ್ಗದತ್ತ ನಡೆಯುವಂತಾಗಬೇಕು. ಕರ್ಮಸಿದ್ಧಂತದ ಅನುಗುಣವಾಗಿ ಪ್ರತಿಯೊಂದು ಜೀವವೂ ಅದರ ಕರ್ಮಕ್ಕೆ ಅನುಗುಣವಾಗಿ ಆ ಕರ್ಮಫಲವನ್ನು ಸವೆಸಲು ಆ ಜನ್ಮವನ್ನು ಪಡೆದಿರುತ್ತದೆ. ಅದಕ್ಕೆ ಪ್ರತಿಯೊಬ್ಬರೂ ಕೂಡ ಸಹಕರಿಸಬೇಕಾಗುತ್ತದೆ. ಹಾಗಾಗಿ ಇಂತಹ ಕಲ್ಯಾಣದ ಮನೋಭಾವನೆ ಇರುವಂತಹದ್ದನ್ನು 'ಪ್ರಿಯ' ಎಂಬುದಾಗಿ ಕರೆಯಲಾಗಿದೆ. ಜೀವಕಲ್ಯಾಣವುಂಟಾಗುವಂತೆ ಬದುಕನ್ನು ಸಾಗಿಸಲು ಜ್ಞಾನವನ್ನು ಸಂಪಾದಿಸಬೇಕು. ಅದರ ಹಿನ್ನೆಲೆಯಲ್ಲಿ ಮುಂದಿನ ಹೆಜ್ಜೆಗಳಾದ ಇಚ್ಛೆ ಮತ್ತು ಕ್ರಿಯೆಗಳು ನಡೆಯುವಂತಾಗಬೇಕು. 


ಈ ಹಿಂದಿನ ಲೇಖನದಲ್ಲಿ ಜ್ಞಾಪಿಸಿಕೊಂಡಂತೆ ಹೇಗೆ ಸತ್ಯವು ಕಾಯಿಕ, ವಾಚಿಕ ಮತ್ತು ಮಾನಸಿಕ ಎಂಬುದಾಗಿ ಮೂರು ವಿಧವಿದೆಯೋ, ಅಂತಯೇ ಈ ಪ್ರಿಯವೂ ಕೂಡ ಮೂರು ವಿಧವಾಗಿದೆ. ಜೀವಕ್ಕೆ ಕಲ್ಯಾಣವನ್ನು ಈ ಮೂರು ಬಗೆಯಲ್ಲೂ ಕೂಡ ಮಾಡಲು ಸಾಧ್ಯ. ಸಾಮಾನ್ಯವಾಗಿ ಮನಸ್ಸಿಗೆ ಯಾವುದು ಮುದವನ್ನು ಕೊಡುತ್ತದೆಯೋ ಅದು ಪ್ರಿಯ ಎಂಬುದಾಗಿ ಹೇಳಲಾಗುತ್ತದೆ. ಪ್ರಿಯವಾದದ್ದೆಲ್ಲವೂ ಹಿತವಾಗುವುದಿಲ್ಲ. ಹಿತವಾದದ್ದೆಲ್ಲವೂ ಪ್ರಿಯವಾಗಬೇಕೆಂದು ಇಲ್ಲ ಆದರೆ ಯಾವುದು ಹಿತವೂ ಮತ್ತು ಪ್ರಿಯವೂ ಆಗಿರುತ್ತದೆಯೋ, ಅದುವೇ ಜೀವಕ್ಕೂ ಹಿತ ಮತ್ತು ಪ್ರಿಯ ಎಂಬ ಮಾತನ್ನು ಶ್ರೀರಂಗ ಮಹಾಗುರುಗಳು ಹೇಳಿದ್ದನ್ನು ಜ್ಞಾಪಿಸಿಕೊಳ್ಳಬಹುದು. ಹಾಗಾಗಿ ಪ್ರತಿಯೊಂದು ಜೀವವೂ ಅದರ ಸಹಜತೆಯಲ್ಲಿ ಬದುಕಿದರೆ ಮಾತ್ರ ಆಗ ಎಲ್ಲ ಜೀವಿಗಳಿಗೆ ಶುಭ ಅಥವಾ ಕಲ್ಯಾಣ ಉಂಟಾಗುತ್ತದೆ. ಅದುವೇ ಪ್ರಿಯವಾದ ಬದುಕು. ಹಾಗೆ ಬದುಕ ಸಾಗಿಸಬೇಕು ಎಂಬ ಉಪದೇಶ ಈ ಪ್ರಶ್ನೋತ್ತರದಲ್ಲಿ ಕಾಣುತ್ತದೆ.


ಸೂಚನೆ : 31/8/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 152 ಯುದ್ಧಕ್ಕೆ ಮೊದಲಿರಬೇಕಾದ ಸಿದ್ಧತೆಗಳೇನು? (Vyaasa Vikshita 152)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಯುದ್ಧಕ್ಕೆ ಮುನ್ನಾ ಸಿದ್ಧತೆಗಳೇನು?


ರಾಜನು ತನ್ನ ದೇಶವನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬುದನ್ನು ನಾರದರು ಯುಧಿಷ್ಠಿರನಿಗೆ ವಿವರಿಸಿ ಹೇಳುತ್ತಿದ್ದಾರೆ.

ಶತ್ರುರಾಷ್ಟ್ರದ ಸೇನಾಮುಖ್ಯಾಧಿಕಾರಿಗಳಿಗೆ ಗುಟ್ಟಾಗಿ ಯೋಗ್ಯತಾನುಸಾರಿಯಾಗಿ ರತ್ನಗಳನ್ನು ಕೊಟ್ಟು ವಶದಲ್ಲಿಟ್ಟುಕೊಂಡಿರಬೇಕು. ಹಾಗೆ ಮಾಡುತ್ತಿದ್ದೇಯೆ ತಾನೆ?

ರಾಜನು ಮೊಟ್ಟಮೊದಲು ತನ್ನನ್ನು ತಾನೇ ಜಯಿಸಿಕೊಂಡಿರಬೇಕು. ಅದನ್ನು ಸಾಧಿಸಿ ಜಿತೇಂದ್ರಿಯನಾಗಿರಬೇಕು. ಪ್ರಮತ್ತರಾಗಿರುವ ಹಾಗೂ ಗರ್ವಭರಿತರಾದ ಶತ್ರುಗಳನ್ನು ಜಯಿಸಲು ಆಗಲೇ ಸಾಧ್ಯವಾಗುವುದು. ನೀನು ಹಾಗೆ ಮಾಡುತ್ತಿರುವೆ ತಾನೆ?

ಶತ್ರುವಿನ ಮೇಲೆ ದಂಡೆತ್ತಿಹೋಗುವುದೆಂದರೆ ಮೊಟ್ಟಮೊದಲು ಸಾಮ-ದಾನ-ಭೇದಗಳನ್ನು ಪ್ರಯೋಗಿಸಿ ನೋಡಿಯಾಗಿರಬೇಕು. ಹಾಗೆ ಅವನ್ನು ಪ್ರಯೋಗಿಸಿದ ಬಳಿಕವೇ ಯುದ್ದಮಾಡಬಹುದು, ಮುಂಚೆ ಅಲ್ಲ.

ಶತ್ರುಗಳ ಮೇಲೆ ದಂಡೆತ್ತಿ ಹೋಗುವ ಮೊದಲು ಮಾಡಬೇಕಾದ ಕೆಲಸವೊಂದಿದೆ. ಅದೆಂದರೆ ಮೂಲವನ್ನು ದೃಢಪಡಿಸಿಕೊಳ್ಳುವುದು - ಅರ್ಥಾತ್ ನಿನ್ನ ರಾಜ್ಯವೇ ಗಟ್ಟಿಯಾಗಿ ಉಳಿದಿದೆಯೇ? - ಎಂದು ಪರೀಕ್ಷಿಸಿಕೊಳ್ಳುವುದು; ಆನಂತರವೇ ಶತ್ರುಗಳ ಮೇಲೇರಿಹೋಗತಕ್ಕದ್ದು; ಹಾಗೂ ಗೆದ್ದದ್ದನ್ನು ರಕ್ಷಿಸಿಕೊಳ್ಳಲಾಗುವುದು. ರಾಜನೇ, ನೀನು ಹಾಗೆ ಮಾಡುತ್ತಿರುವೆ ತಾನೆ?

ಸೈನ್ಯಕ್ಕೆ ಎಂಟು ಅಂಗಗಳಿರುವುವು: ಧನ-ರಕ್ಷಕ, ದ್ರವ್ಯ-ಸಂಗ್ರಾಹಕ, ಚಿಕಿತ್ಸಕ, ಗುಪ್ತಚರ, ಪಾಚಕ, ಸೇವಕ, ಲೇಖಕ ಹಾಗೂ ಪ್ರಹರೀ - ಎಂಬುದಾಗಿ. ಹಾಗೆಯೇ ಅದಕ್ಕೆ ನಾಲ್ಕು ಬಲಗಳುಂಟು - ಹಸ್ತಿ(ಗಜ), ಅಶ್ವ, ರಥ, ಪದಾತಿ - ಎಂಬುದಾಗಿ. ಹೀಗೆ ಅಷ್ಟಾಂಗಗಳಿಂದಲೂ ಚತುರ್ಬಲಗಳಿಂದಲೂ ಕೂಡಿರುವ ಸೈನ್ಯಕ್ಕಿರುವ ಅಧಿಪತಿಗಳು ಸೈನ್ಯವನ್ನು ಚೆನ್ನಾಗಿ ಮುನ್ನಡೆಸಬಲ್ಲವರಾಗಿರಬೇಕು, ಹಾಗೂ ಶತ್ರುಗಳನ್ನು ಕೆಡವಲು ಸಮರ್ಥರಾಗಿರಬೇಕು. ನಿನ್ನ ಸೈನ್ಯ-ಸೇನಾಧಿಪತಿಗಳು ಹೀಗೇ ಇರುವುದಲ್ಲವೆ?

ಶತ್ರುರಾಜ್ಯದಲ್ಲಿ ಕ್ಷಾಮ ಬಂದಿರುವ ಸಮಯ, ಪೈರುಗಳ ಕೊಯಿಲಿನ ಕಾಲ - ಇವುಗಳನ್ನು ಗಣಿಸದೇ ಶತ್ರುಗಳನ್ನು ಸಂಹರಿಸತಕ್ಕದ್ದು. ನೀನು ಹಾಗೆ ಮಾಡುತ್ತಿರುವೆಯಷ್ಟೆ?

ಅನ್ಯರಾಷ್ಟ್ರಗಳನ್ನು ಗೆದ್ದಾಗ ಅಲ್ಲಿ ತನ್ನ ಅಧಿಕಾರಿಗಳನ್ನು ರಾಜನು ನೇಮಿಸುವವಷ್ಟೆ? ಅವರೂ, ಸ್ವರಾಷ್ಟ್ರದಲ್ಲಿಯೇ ನೇಮಕಗೊಂಡ ಅಧಿಕಾರಿಗಳೂ, ರಾಜಾದಾಯವನ್ನು ಸಂಗ್ರಹಿಸುತ್ತಾ ಇದ್ದು, ಪರಸ್ಪರ ಹೊಂದಿಕೊಂಡಿದ್ದು ರಾಜ್ಯರಕ್ಷಣೆಯನ್ನು ಮಾಡುತ್ತಿರಬೇಕು. ನಿನ್ನ ಅಧಿಕಾರಿವರ್ಗದವರೆಲ್ಲ ಹಾಗಿರುವರು ತಾನೆ?

ರಾಜನು ಸೇವಿಸುವ ಆಹಾರ-ಪದಾರ್ಥ, ಧರಿಸುವ ವಸ್ತ್ರಗಳು, ಸುಗಂಧ-ದ್ರವ್ಯಗಳು - ಇವನ್ನು ರಾಜನು ನೆಚ್ಚುವ ಅಧಿಕಾರಿಗಳೇ ರಕ್ಷಿಸತಕ್ಕದ್ದು. ನಿನ್ನ ರಾಜ್ಯದಲ್ಲಿ ಈ ಪ್ರಕಾರವಾಗಿಯೇ ನಡೆಯುತ್ತಿದೆಯಷ್ಟೆ? (ಭಾರತದ ಹಿಂದಿನ ಪ್ರಧಾನಿಯೊಬ್ಬರು ವಿದೇಶದಲ್ಲಿ ಮರಣಹೊಂದಿದಾಗ ಅವರ ಆಹಾರದಲ್ಲೇ ವಿಷ-ಮಿಶ್ರಣವಾಗಿದ್ದರೂ, ಅವರ ಆಹಾರ-ಪರಿಚಾರಕನ ಮೇಲೆಯೇ ಸಂಶಯವು ಪ್ರಬಲವಾಗಿದ್ದರೂ, ಅದನ್ನೆಲ್ಲ ಮುಚ್ಚಿಹಾಕಲಾಯಿತಷ್ಟೆ?).

ರಾಜನ ಬೊಕ್ಕಸ, ವಾಸ-ಸ್ಥಳ, ವಾಹನ (ಗಜಶಾಲೆ-ಅಶ್ವಶಾಲೆಗಳು), ದ್ವಾರಗಳು, ಆಯುಧಾಗಾರ - ಇವೆಲ್ಲೆಡೆ ನಿನ್ನ ಕ್ಷೇಮವನ್ನೇ ಸಾಧಿಸತಕ್ಕವರೂ ನಿನ್ನಲ್ಲಿಯೇ ಭಕ್ತಿಯುಳ್ಳವರೂ ಆದವರೇ ಮೇಲ್ವಿಚಾರಕರಾಗಿರುವರಷ್ಟೆ?

ಅರಮನೆಯ ಒಳನೆಲೆಗಳಲ್ಲಿ ಕೆಲಸಮಾಡುವ ಪಾಚಕರೇ ಮೊದಲಾದವರೂ, ಹತ್ತಿರದ ನೆಲೆಗಳಲ್ಲಿರುವ ಮಂತ್ರಿ-ಸೇನಾಪತಿ-ರಾಜಪುತ್ರ ಮೊದಲಾದವರೂ ಸುರಕ್ಷಿತರಾಗಿರತಕ್ಕದ್ದು. ಇವರುಗಳಿಂದ ತನ್ನ ರಕ್ಷಣೆಯನ್ನು ಸಾಧಿಸುವುದು, ಹಾಗೂ ಇವರುಗಳಿಗೆ ತಾನು ರಕ್ಷಣೆಯನ್ನು ಸಾಧಿಸುವುದು - ಹೀಗೆ ಪಾರಸ್ಪರಿಕ-ರಕ್ಷಣವೆಂಬುದು ಮುಖ್ಯ. ಅದೆಲ್ಲವೂ ಹಾಗೆ ಆಗುತ್ತಿದೆ ತಾನೆ, ನಿನ್ನ ರಾಜ್ಯದಲ್ಲಿ?

ಪಾನ-ದ್ಯೂತಗಳು, ಎಂದರೆ ಕುಡಿತ-ಜೂಜುಗಳು, ಹಾಗೂ ಕ್ರೀಡೆ-ಸ್ತ್ರೀಸಂಗ- ಇವುಗಳು, ರಾಜರಿಗಂಟತಕ್ಕ ವ್ಯಸನಗಳು (ಚಟಗಳು). ಪೂರ್ವಾಹ್ಣದ ಕಾಲದಲ್ಲಿ ಇಂತಹ ವಿಷಯಗಳನ್ನೊಡ್ಡಿ ನಿನ್ನ ಹಣ-ಸಮಯ ಗಳನ್ನು ಸೇವಕರು ಹಾಳುಮಾಡುತಿಲ್ಲ ತಾನೆ?

ಸೂಚನೆ : 31/8/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.