Sunday, July 7, 2024

ವ್ಯಾಸ ವೀಕ್ಷಿತ 94 ಎಲ್ಲರ ಕಣ್ಮನ ಸೆಳೆದ ತಿಲೋತ್ತಮೆ (Vyasa Vikshita 94 Ellara Kanmana Seleda Tilottame)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಸುಂದೋಪಸುಂದರೆಂಬ ಅಸುರರನ್ನು ನಿಗ್ರಹಿಸಲು ಸನ್ನಾಹವಾಗಿದೆ. ಅದಕ್ಕಾಗಿ ಅತ್ಯಂತಸುಂದರಿಯಾದ ನಾರಿಯನ್ನು ಸೃಷ್ಟಿಸಲಾಯಿತು. ಎಲ್ಲರ ಕಣ್ಣುಗಳನ್ನೂ ಮನಸ್ಸುಗಳನ್ನೂ ಸೆಳೆದಳು ಅವಳು. ರತ್ನಗಳಲ್ಲಿಯ ಎಳ್ಳೆಷ್ಟೆಳ್ಳಷ್ಟು ಅಂಶಗಳನ್ನೂ ಬಿಡದೆ ತೆಗೆದುಕೊಂಡು ಆಕೆಯು ನಿರ್ಮಿತಳಾದಳಲ್ಲವೆ? ಅದೇ ಕಾರಣಕ್ಕಾಗಿ ಬ್ರಹ್ಮನು ಆಕೆಗೆ ತಿಲೋತ್ತಮಾ ಎಂದೇ ಹೆಸರಿಟ್ಟನು. ತಿಲವೆಂದರೆ ಎಳ್ಳು.


ಹೀಗೆ ನಿರ್ಮಿತಳಾದ ಆಕೆಯು ಬ್ರಹ್ಮನಿಗೆ ನಮಸ್ಕಾರವನ್ನು ಮಾಡಿದಳು. ಕೈಜೋಡಿಸಿ, ಹೀಗೆ ಕೇಳಿಕೊಂಡಳು: "ಪ್ರಜಾಪತಿಯೇ, ಯಾವ ಕಾರಣಕ್ಕಾಗಿ ನಾನು ಈಗ ಇಲ್ಲಿ ಸೃಷ್ಟಳಾಗಿದ್ದೇನೆ?"


ಅದಕ್ಕೆ ಪಿತಾಮಹನು, "ಓ ತಿಲೋತ್ತಮೇ! ಸುಂದ ಮತ್ತು ಉಪಸುಂದ - ಎಂಬ ಅಸುರರಿಬ್ಬರು ಇರುವರಲ್ಲವೇ? ಅವರಲ್ಲಿಗೆ ನೀನು ಹೋಗು - ಅತ್ಯಂತ ಕಮನೀಯವಾದ ರೂಪದೊಂದಿಗೆ. ಹಾಗೂ ಅವರಿಗೆ ಪ್ರಲೋಭನವನ್ನುಂಟುಮಾಡಿಬಿಡು" ಎಂದನು.


ಕಥೆಯನ್ನು ಮುಂದುವರೆಸುತ್ತ ನಾರದರು ಹೇಳಿದರು. "ಹಾಗೆಯೇ ಆಗಲಿ" ಎಂದು ಅವಳು ಹೇಳಿದಳು. ಬ್ರಹ್ಮನಿಗೆ ನಮಸ್ಕರಿಸಿದಳು. ದೇವತಾ-ಮಂಡಲಕ್ಕೆ ಪ್ರದಕ್ಷಿಣೆ ಮಾಡಿದಳು. ಬ್ರಹ್ಮನ ದಕ್ಷಿಣ-ಭಾಗಕ್ಕೆ ಪೂರ್ವಾಭಿಮುಖನಾಗಿ ಮಹೇಶ್ವರನು ಕುಳಿತಿದ್ದನು. ಉತ್ತರ-ಭಾಗಕ್ಕೆ ದೇವತೆಗಳು ಇದ್ದರು. ಋಷಿಗಳಂತೂ ಸುತ್ತಲೂ ಇದ್ದರು. ದೇವತಾ-ಮಂಡಲಕ್ಕೆ ಪ್ರದಕ್ಷಿಣೆಯನ್ನು ಅವಳು ಮಾಡುತ್ತಿರಲು, ಇಂದ್ರನೂ ಶಿವನೂ ಸ್ವಸ್ಥಾನದಲ್ಲಿ ಸ್ಥಿರವಾಗಿ ಕುಳಿತಿದ್ದರು. ಆದರೆ ಅವಳು ಯಾವಾಗ ದಕ್ಷಿಣಭಾಗಕ್ಕೆ ಬಂದಳೋ, ಆಗ ಅವಳನ್ನು ನೋಡಲೆಂದು ಶಂಕರನ ದಕ್ಷಿಣ-ಭಾಗದಲ್ಲಿ ಕಮಲದಂತಿರುವ ಕಣ್ಣುಳ್ಳ ಮುಖವೊಂದು ಪ್ರಕಟವಾಯಿತು. ಅವಳು ಹಿಂಭಾಗಕ್ಕೆ ಬರುತ್ತಿದ್ದಂತೆ ಪಶ್ಚಿಮ-ಮುಖವು ಪ್ರಕಟವಾಯಿತು. ಅವಳು ಉತ್ತರಕ್ಕೆ ಬಂದಂತೆ ಉತ್ತರದಲ್ಲೊಂದು ಮುಖವು ಪ್ರಕಟವಾಯಿತು. ಇಂದ್ರನಿಗಂತೂ ಹಿಂದೆ, ಪಕ್ಕಗಳಲ್ಲಿ, ಹಾಗೂ ಎದುರಿಗೆ - ಎಲ್ಲೆಡೆ ಸಾವಿರ ಕಣ್ಣುಗಳು - ಅಂಚಿನಲ್ಲಿ ಕೆಂಪಡರಿದ ಕಣ್ಣುಗಳು ಉಂಟಾಗಿಬಿಟ್ಟವು!  ಶಂಕರನಿಗೆ ನಾಲ್ಕು ಮುಖಗಳೆಂದೂ, ಇಂದ್ರನಿಗೆ ಸಹಸ್ರ-ನೇತ್ರಗಳೆಂದೂ ಆದದ್ದು ಹೀಗೆ. ಎತ್ತೆತ್ತ ತಿಲೋತ್ತಮೆಯು ಹೆಜ್ಜೆಯಿಟ್ಟಳೋ ಅತ್ತತ್ತ ತಿರುಗಿತು ದೇವತೆಗಳ ಹಾಗೂ ಮಹರ್ಷಿಗಳ ಮುಖಗಳು! ಬ್ರಹ್ಮದೇವನೊಬ್ಬನನ್ನು ಬಿಟ್ಟರೆ ಅಲ್ಲಿದ್ದ ಮಹಾನುಭಾವರೆಲ್ಲರ ದೃಷ್ಟಿಯೂ ಅವಳ ಶರೀರದ ಮೇಲೇ ನೆಟ್ಟಿತು - ಅವಳ ರೂಪ-ಸಂಪತ್ತಿನಿಂದಾಗಿ. ಅವಳು ಅತ್ತ ಸಾಗಲು, ಸೃಷ್ಟಿ-ಕರ್ತನಾದ ಬ್ರಹ್ಮನು ಸರ್ವ-ದೇವತೆಗಳನ್ನೂ ಋಷಿ-ಸ್ತೋಮವನ್ನೂ ಸ್ವ-ಸ್ವ-ಧಾಮಗಳಿಗೆ ಕಳುಹಿಸಿಕೊಟ್ಟನು.


ಕಥೆಯನ್ನು ಮುಂದುವರೆಸುತ್ತಾ ನಾರದರು ಹೇಳಿದರು: ಭೂಮಿಯನ್ನು ಗೆದ್ದು, ಶತ್ರುಗಳೇ ಇಲ್ಲವೆಂದಾಗಿರಲು, ವ್ಯಥಾ-ರಹಿತರಾದ ಆ ಇಬ್ಬರು ದೈತ್ಯರು ಮೂರೂ ಲೋಕಗಳನ್ನು ಸಂಪೂರ್ಣವಾಗಿ ವಶಕ್ಕೆ ತಂದುಕೊಂಡವರಾಗಿ ಕೃತ-ಕೃತ್ಯರಾಗಿದ್ದರು. ದೇವತೆಗಳು, ಗಂಧರ್ವರು, ಯಕ್ಷರು, ನಾಗರು, ಮನುಷ್ಯರು, ರಾಕ್ಷಸರು - ಇವರುಗಳ ರತ್ನಗಳನ್ನೆಲ್ಲವನ್ನೂ ಕಿತ್ತುಕೊಂಡು ಮಹಾ-ಹರ್ಷವನ್ನು ಅವರಿಬ್ಬರು ಹೊಂದಿದ್ದರು. ಅವರಿಗೆ ಪ್ರತಿಷೇಧಮಾಡಲು, ಎಂದರೆ ಅಡ್ಡ ಹಾಕಲು, ಎಲ್ಲೂ ಯಾರೂ ಇಲ್ಲವೆಂದಾಗಿಹೋಯಿತಲ್ಲವೇ? ಎಂದೇ ಮಾಡಲಿಕ್ಕೂ ಇನ್ನೇನೂ ಅವರಿಗೆ ಉಳಿದಿರಲಿಲ್ಲವಾಯಿತು. ದೇವತೆಗಳ ಹಾಗೆ ವಿಹರಿಸುತ್ತಿರುವುದೆಷ್ಟೋ ಅಷ್ಟೇ ಉಳಿಯಿತು. ಸುಂದರ-ನಾರಿಯರೇನು, ಮನೋಹರ-ಮಾಲೆಗಳೇನು, ಸುಗಂಧ-ದ್ರವ್ಯಗಳೇನು, ಅತಿ-ಪುಷ್ಕಲವಾದ, ಎಂದರೆ ತುಂಬಿ ತುಂಬಿ ಬಂದ, ಭಕ್ಷ್ಯ-ಭೋಜ್ಯಗಳೇನು, ಬಗೆಬಗೆಯಾದ ಹೃದ್ಯವಾದ ಪೇಯಗಳೇನು - ಇವೆಲ್ಲದರಿಂದಲೂ ಮಹಾ-ಸಂತೋಷವನ್ನೇ ಅವರಿಬ್ಬರೂ ಅನುಭವಿಸಿದರು. ಅಂತಃಪುರಗಳ ಕಾಡುಗಳಲ್ಲೂ ಉದ್ಯಾನಗಳಲ್ಲೂ, ಪರ್ವತಗಳಲ್ಲೂ, ವನಗಳಲ್ಲೂ - ಇಷ್ಟಬಂದೆಡೆಗಳಲ್ಲೆಲ್ಲಾ ಅಮರರ ಹಾಗೆ ವಿಹರಿಸಿದರು.


ಸೂಚನೆ : 7/7/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ 97(Yaksha prashne 97)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ –  96 ಧೈರ್ಯವೆಂದರೆ ಯಾವುದು ?

ಉತ್ತರ - ಇಂದ್ರಿಯನಿಗ್ರಹ. 

ಧೈರ್ಯವು ಹೇಗೆ ಉಂಟಾಗುತ್ತದೆ? ಎಂಬುದು ಇಲ್ಲಿನ ಪ್ರಶ್ನೆಯ ಅಭಿಪ್ರಾಯವಾಗಿದೆ. ಆತ್ಮದ ಸ್ಥಿರತೆಯನ್ನು ಕಾಪಾಡಿಕೊಳ್ಳುವುದೇ ಪ್ರತಿಯೊಬ್ಬ ಮಾನವನ ಮುಖ್ಯ ಉದ್ದೇಶವಾಗಿದೆ. ಆತ್ಮದ ಸ್ಥಿರತೆಯು ಉಳಿದ ಅಂಗಗಳ ಸ್ಥಿರತೆಯಿಂದ ಮಾತ್ರ ಸಾಧ್ಯ. ಕೇವಲ ಆತ್ಮದ ಸ್ಥಿರತೆಯನ್ನು ಮಾತ್ರ ಸಾಧಿಸಲು ಸಾಧ್ಯವಿಲ್ಲ. ಅದಕ್ಕೆ ಪೂರಕವಾಗಿ ಮನಸ್ಸು ಇಂದ್ರಿಯಗಳನ್ನು ಪಳಗಿಸಬೇಕು. ಇದನ್ನೇ ಇಂದ್ರಿಯನಿಗ್ರಹ ಎನ್ನುತ್ತಾರೆ. 

ಇಂದ್ರಿಯನಿಗ್ರಹ ಅಥವಾ ಇಂದ್ರಿಯಜಯ ಮುಂತಾದ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಯೋಗಶಾಸ್ತ್ರದ ಮೊರೆಹೊಗಬೇಕು. ಪಾತಂಜಲ ಯೋಗಸೂತ್ರದಲ್ಲಿ ಇಂದ್ರಿಯನಿಗ್ರಹವನ್ನು ಮಾಡುವ ವಿಧಾನವನ್ನು ತಿಳಿಸಲಾಗಿದೆ. ಯೋಗಸೂತ್ರ ಈ ರೀತಿಯಾಗಿದೆ " ಸ್ವವಿಷಯಾಸಂಪ್ರಯೋಗೇ ಚಿತ್ತಸ್ವರೂಪಾನುಕಾರಃ ಇವ ಇಂದ್ರಿಯಾಣಾಂ ಪ್ರತ್ಯಾಹಾರಃ" ಎಂದು.  ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ ಎಂಬುದಾಗಿ ಐದು ಜ್ಞಾನೇಂದ್ರಿಯಗಳಿವೆ. ಈ ಇಂದ್ರಿಯಗಳಿಂದ ರೂಪ, ಶಬ್ದ, ಗಂಧ, ರಸ ಮತ್ತು ಸ್ಪರ್ಶ ಎಂಬ ವಿಷಯಗಳ ಜ್ಞಾನವು ಬರುತ್ತದೆ. ಈ ಜ್ಞಾನಗಳು ಬೇಡವೆಂಬ ತಾತ್ಪರ್ಯವಲ್ಲ. ಯಾವ ಜ್ಞಾನವು ಮನಸ್ಸಿನ ಒಳಹರಿವಿಗೆ ಪೂರಕವಾಗುತ್ತದೆಯೋ ಅಂತಹ ಜ್ಞಾನವನ್ನು ಪಡೆಯುವಂತಾಗಬೇಕು. ಉಳಿದವು ಒಳಹರಿವಿಗೆ ಅನುಕೂಲಿಸಲಾರವು. ಈ ಶರೀರವನ್ನು 'ಯೋಗಭೋಗಾಯತನಂ ಶರೀರಂ' ಎಂದು ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು. ಶರೀರವನ್ನು ಕೇವಲ ನಿವೃತ್ತಿಮಾರ್ಗಕ್ಕೆ ಮಾತ್ರ ಬಳಸಿಕೊಳ್ಳದೇ ಪ್ರವೃತ್ತಿಮಾರ್ಗಕ್ಕೂ ಬಳಸಿಕೊಳ್ಳಬೇಕು ಎಂಬ  ಮಾತನ್ನೂ ಹೇಳುತ್ತಿದ್ದರು. ಇದೇ ಶರೀರದಲ್ಲೇ ಜ್ಞಾನೇಂದ್ರಿಯಗಳು ಕರ್ಮೇಂದ್ರಿಯಗಳೂ ಇವೆ. ಇದಕ್ಕರ್ಥ ಇಷ್ಟೇ ಈ ಶರೀರದಲ್ಲಿರುವ ಇಂದ್ರಿಯಗಳು ಯೋಗಕ್ಕೂ ಭೋಗಕ್ಕೂ ಸಾಧನವೆಂದು. ಇದೇ ವಸ್ತುತಃ ಇಂದ್ರಿಯನಿಗ್ರಹ. ತಿನ್ನಲೇಬಾರದು ಎಂಬ ವಿಷಯವಿಲ್ಲ. ಎಷ್ಟು ತಿನ್ನಬೇಕು? ಯಾವಾಗ ತಿನ್ನಬೇಕು? ಹೇಗೆ ತಿನ್ನಬೇಕು? ಯಾವುದನ್ನು ತಿನ್ನಬೇಕು? ಎಂಬ ನಿಯಮವು ಯಾವ ರೀತಿಯಾಗಿ ನಾಲಗೆಯ ನಿಗ್ರಹವೋ ಅಂತೆಯೇ ಎಲ್ಲಾ ಇಂದ್ರಿಯಗಳಿಗೂ ಇಂತಹದ್ದೇ ನಿಯಮಗಳಿರುತ್ತವೆ. ವಸ್ತುತಃ ನಿಯಮವೇ ನಿಗ್ರಹ.  ಹಿತವೂ ಮಿತವೂ ಆಗಿರುವಂತಹದ್ದೇ ನಿಗ್ರಹ. ಶಬ್ದಾದಿ ವಿಷಯಗಳಲ್ಲಿ ಆಸಕ್ತಿ ಹೊಂದದಿರುವುದು, ರಾಗ ಅಥವಾ ಅಂಟು ಇಲ್ಲದಿರುವುದು. ವೇದವಿಹಿತವಾದ ಅಥವಾ ಶಾಸ್ತ್ರಕ್ಕೆ ಅವಿರೋಧವಾದ ಶಬ್ದಾದಿ ವಿಷಯಾಸಕ್ತಿಯನ್ನೂ ಇಂದ್ರಿಯ ನಿಗ್ರಹ ಎಂದೇ ಕರೆಯುತ್ತಾರೆ. ಯಾವುದು ಮನಸ್ಸಿನ ಏಕಾಗ್ರತೆಗೆ ಕಾರಣಬಾಗ್ಯೇ ವಸ್ತುತಃ ಇಂದ್ರಿಯ ನಿಗ್ರಹ ಎನ್ನಬಹುದು. ಎಲ್ಲಾ ನಿಗ್ರಹಕ್ಕಿಂತಲೂ ಶ್ರೇಷ್ಠನಿಗ್ರಹ ಯಾವುದು ? ಎಂದರೆ ಯೋಗಸೂತ್ರ "ತತಃ ಪರಮವಶ್ಯತಾ ಇಂದ್ರಿಯಾಣಾಮ್" ಎಂದು ಹೇಳಿದೆ. ಶಬ್ದಾದಿ ವಿಷಯಗಳು ಗುಣಗಳು. ಅವು ಯಾವುದೋ ಒಂದು ದ್ರವ್ಯವನ್ನು ಆಶ್ರಯಿಸಿಯೇ ಇರಬೇಕಾಗುತ್ತದೆ. ಅಂದರೆ ಶಬ್ದಾದಿ ವಿಷಯಗಳ ಅಂಟು ಇಲ್ಲದಿದ್ದಾಗ ಅವುಗಳ ಆಶ್ರಿರವಾದ ಪದಾರ್ಥಗಳ ಬಗೆಗಿನ ಅಂತೂ ದೂರವಾಗುತ್ತಾದೆ. ಅದರ ಪರಿಣಾಮವಾಗಿ ಮನಸ್ಸು ಬಾಹ್ಯಮುಖವನ್ನು ಬಿಟ್ಟು ಅಂತರ್ಮುಖವಾಗುತ್ತದೆ. ಬಾಹ್ಯ ಮತ್ತು ಆಂತರ ಎಂಬುದಾಗಿ ಎರಡು ಬಗೆಯ ಇಂದ್ರಿಯಗಳಿವೆ.  ಮನಸ್ಸನ್ನು ಅಂತರಿಂದ್ರಿಯ, ಬಾಹ್ಯ ಇಂದ್ರಿಯಗಳು ಕಣ್ಣು ಕಿವಿ ಇತ್ಯಾದಿ ಐದು. ಇವೆರಡರ ನಿಯಮನವೇ ಇಂದ್ರಿಯನಿಗ್ರಹ. ಇದರಿಂದ ಇಂದ್ರಿಯಗಳು ಮನಸ್ಸಿನಲ್ಲಿ ಲಯಗೊಳ್ಳುತ್ತವೆ. ಮನಸ್ಸು ಮನಸಸ್ಪತಿಯಲ್ಲಿ ಲಯಗೊಳ್ಳುತ್ತದೆ.

ಸೂಚನೆ : 7/7/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಸ ಶೋಚತಿ ಫಲಾಗಮೇ (Astaksari 62 Sa Shochati Phalagame)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)






ಆಧುನಿಕ ವಿಜ್ಞಾನದ ವಿಷಯದಲ್ಲಿ ಜನರಿಗೆ ವಿಶೇಷವಾದ ನೆಚ್ಚಿಕೆ. ಅದರಲ್ಲಿ ಆಷ್ಟು ನಂಬಿಕೆ ಹುಟ್ಟಿಕೊಳ್ಲಲು ಕಾರಣವೇನು? - ಎಂದರೆ, ಅದರಲ್ಲಿಯ ಕಾರ್ಯ-ಕಾರಣ-ಭಾವದ ಪ್ರಸಿದ್ಧಿಯೇ ಸರಿ.


ಏನು ಕಾರ್ಯ-ಕಾರಣ-ಭಾವವೆಂದರೆ? ಯಾವುದೇ ಕಾರ್ಯದ ಹಿಂದೆಯೂ ಒಂದು ಕಾರಣವಿರಬೇಕು; ಹಾಗೂ ಕಾರಣವೆಂಬುದು ಇದ್ದ ಮೇಲೆ ಕಾರ್ಯವು ಹುಟ್ಟಿಕೊಳ್ಳಲೇಬೇಕು - ಎಂಬ ಲೆಕ್ಕವೇ ಕಾರ್ಯ-ಕಾರಣ-ಭಾವ.


ಹಾಗೆ ಹೇಳಿದ ಮಾತ್ರಕ್ಕೆ ಒಂದು ಕಾರ್ಯಕ್ಕೆ ಒಂದೇ ಕಾರಣವಿರುತ್ತದೆಂದಾಗಲಿ, ಒಂದು ಕಾರಣದಿಂದ ಒಂದೇ ಕಾರ್ಯವು ಘಟಿಸುತ್ತದೆಂದಾಗಲಿ, ಅರ್ಥವಲ್ಲವಷ್ಟೆ. ಮಾವಿನ ಹಣ್ಣು ಕಾರ್ಯವೆಂದರೆ, ಅದಕ್ಕೆ ಮಾವಿನ ಬೀಜವು ಕಾರಣ - ಎನ್ನುವುದು ಸರಿಯೇ. ಆದರೆ ಬೀಜವು ತಾನೇ ಹಣ್ಣಾಗಿಬಿಡುವುದೇ? ಬೀಜದೊಂದಿಗೆ ಮಣ್ಣು, ನೀರು, ಗೊಬ್ಬರ, ಸೂರ್ಯ-ತಾಪ ಇತ್ಯಾದಿಗಳೆಲ್ಲವೂ ಸೇರಿ ತಾನೆ ಕಾರಣ-ಸಾಮಗ್ರಿಯೆನಿಸಿಕೊಳ್ಳುವುದು?


ಮತ್ತು ಈ ಸಮಗ್ರತೆಯಿಂದಾಗಿ ಹಣ್ಣೊಂದೇ ಬಿಡುವುದೆಂದೂ ಅಲ್ಲ; ಕಾಂಡವೇನು, ನೂರಾರು ಎಲೆಗಳೇನು, ಹೂಗಳೇನು - ಇವೆಲ್ಲವೂ ಕಾರ್ಯ-ಸಾಮಗ್ರಿ.


ಫಲಾಪೇಕ್ಷೆಯಿದ್ದಲ್ಲಿ ಮೊದಲು ಹುಟ್ಟಿಕೊಳ್ಳಬೇಕಾದದ್ದು ಬೀಜಾಪೇಕ್ಷೆ. ಯಾವುದೋ ಫಲಕ್ಕೆ ಯಾವುದೋ ಬೀಜವೆಂಬುದು ನಡೆಯುತ್ತದೆಯೇ? ಮಾವಿನ ಹಣ್ಣು ಯಥೇಚ್ಛವಾಗಿ ಬೇಕೆನಿಸಿ, ಬೇವಿನ ಬೀಜವನ್ನು ಬಿತ್ತಿದರಾದೀತೇ?


ಮಾವಿನ ಬೀಜ-ಹಣ್ಣುಗಳು, ಬೇವಿನ ಬೀಜ-ಎಲೆಗಳು - ಇವೆಲ್ಲವೂ ಲೋಕ-ಪ್ರಸಿದ್ಧವಾದವುಗಳು. ಪ್ರತ್ಯಕ್ಷದ ಲೆಕ್ಕಕ್ಕೇ ಸಿಕ್ಕತಕ್ಕವು. ಆದರೆ ಲೋಕ-ವ್ಯವಹಾರದಲ್ಲಿ ಸಹ ಎಲ್ಲೆಡೆ ಬರೀ ಪ್ರತ್ಯಕ್ಷವೇ ನಡೆಯುವುದೇ? ಮಾವಿನ ಬೀಜ, ಮಾವಿನ ಹಣ್ಣುಗಳನ್ನೇ ತೆಗೆದುಕೊಳ್ಳಿ. ಬೀಜವು ವೃಕ್ಷವಾಗುವುದು ಹೇಗೆ? - ಎಂಬುದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆಂದು ವಿಜ್ಞಾನಿಗಳಾದರೂ ಎದೆತಟ್ಟಿಕೊಂಡು ಹೇಳಬಲ್ಲರೇ?


ಹೀಗೆ ಪ್ರತ್ಯಕ್ಷವಾದ ವಿಷಯಗಳಲ್ಲೂ ನಿಗೂಢತೆಯೆಂಬುದು ಇದ್ದೇ ಇರುತ್ತದೆ. ಸಂಶೋಧನೆ ಮುಂದುವರೆಯುತ್ತಿದ್ದಂತೆ ಹೆಚ್ಚು ಹೆಚ್ಚು ವಿಷಯಗಳು ತಿಳಿದುಬರು(ತ್ತಿರು)ತ್ತವೆಯೆನ್ನುವುದಾದರೂ ಎಲ್ಲವನ್ನೂ ಅರಿತಾಯಿತೆಂಬ ಕಾಲ ಬಂದಿದೆಯೆನ್ನಲಾದೀತೇ? ಅದನ್ನು ವಿಜ್ಞಾನಿಗಳೂ ಇಂದೂ ಮುಂದೂ ಸುಲಭವಾಗಿ ಅಲ್ಲಗಳೆಯಲಾರರಷ್ಟೆ?


ಈ ಕಾರ್ಯ-ಕಾರಣ-ಭಾವವು ಭೌತಿಕ-ಕ್ಷೇತ್ರಕ್ಕೇ ಸೀಮಿತವಾದುದೆಂದೂ ಹೇಳಲಾಗದು. ಅಭೌತವಾದ ಎಡೆಗಳಲ್ಲೂ ಅದಿರುವುದೇ. ಅದಂತೂ ಮತ್ತೂ ಸೂಕ್ಷ್ಮವೇ ಸರಿ. ಯಾವುದು ಆ ಕ್ಷೇತ್ರ? ಧರ್ಮ-ಕರ್ಮಗಳ ಕ್ಷೇತ್ರ. ಕರ್ಮಸಿದ್ಧಾಂತದ ಸಾರಕ್ಕೆ "ಮಾಡಿದ್ದುಣ್ಣೋ ಮಹರಾಯ" ಎಂಬ ಕನ್ನಡದ ನಾಣ್ಣುಡಿಯು ಕನ್ನಡಿ ಹಿಡಿಯುತ್ತದಲ್ಲವೇ? ಸತ್ಕರ್ಮಗಳಿಂದ ಸತ್ಫಲ, ದುಷ್ಕರ್ಮಗಳಿಂದ ದುಷ್ಫಲ - ಎಂಬುದೇ ಕರ್ಮಸಿದ್ಧಾಂತ. ಸತ್ಫಲ-ದುಷ್ಫಲಗಳೆಂದರೆ ಸುಖ- ದುಃಖಗಳೇ.


ಸತ್ಕರ್ಮಗಳೂ ದುಷ್ಕರ್ಮಗಳೂ ಬೀಜದಂತೆ. ಅವುಗಳಿಗೂ ಫಲಬಿಡಲು ಬೇಕಾದ ಸಾಮಗ್ರಿಯು ಒದಗಿ ಬಂದರೆ ಫಲ ಬಿಟ್ಟೇಬಿಡುತ್ತವೆ. ನಾವೆಲ್ಲರೂ ಸುಖವೆಂಬ ಫಲವನ್ನು ಬಯಸುವವರೇ. ಅದಕ್ಕೆ ಅನುಗುಣವಾದ ಕ್ರಿಯೆಯು ನಮ್ಮಲ್ಲಿರಬೇಕಷ್ಟೆ?


ಎಳೆಯ ಮಕ್ಕಳಿಗೂ ಅರ್ಥವಾಗುವ ಈ ಉದಾಹರಣೆಯನ್ನು ಶ್ರೀರಂಗ-ಮಹಾಗುರುಗಳು ಒಮ್ಮೆ ಕೊಟ್ಟಿದ್ದರು: "ಬಾಳೆಯ ಹಣ್ಣು ಬೇಕೆಂಬ ಆಸೆ; ಅದರೆ ಅದರ ವ್ಯವಸಾಯದಲ್ಲಿ ಇಷ್ಟವಿಲ್ಲ - ಎಂಬಂತೆ, ಲೋಕದ ಜೀವ-ಕೋಟಿಗೆ ಧರ್ಮದ ಆಚರಣೆ ಬೇಡವಾಗಿದೆ, ಆದರೆ ಧರ್ಮದ ಫಲ ಬೇಕು" ಎಂದು. ಮತ್ತೊಂದು ಸಂದರ್ಭದಲ್ಲಿ, "ಮರ ಕಡಿದು ಫಲ ಕೇಳಿದರೆ ಸಿಕ್ಕುವುದಿಲ್ಲ. ಧರ್ಮವಿದ್ದರೆ ಉಳಿದದ್ದು" ಎಂದೂ ಎಚ್ಚರಿಸಿದ್ದಾರೆ.


ಕರ್ಮ-ಸಿದ್ಧಾಂತದ ತತ್ತ್ವವನ್ನು ನಿರೂಪಿಸುವಾಗ ಶಾಸ್ತ್ರಕಾರರು ಮಾತ್ರವಲ್ಲ, ಸಾಧಾರಣರ ಸಂಭಾಷಣೆಯಲ್ಲಿಯೂ ಈ ಬೀಜ-ವೃಕ್ಷ-ನ್ಯಾಯವನ್ನು ಬಳಸುವುದಿದೆ. ರಾಮಾಯಣದಲ್ಲಿ ದಶರಥನು ಶೋಕಾತಿರೇಕದಲ್ಲಿ ಮುಳುಗಿರುವಾಗಲೂ ಇದೇ ಉದಾಹರಣೆಯನ್ನೇ ಕೊಡುವುದನ್ನು ನೋಡಬಹುದು.


ದಶರಥನ ಮಾತಿದು: "ಯಾವನಾದರೂ ಮಾವಿನ ತೋಪನ್ನು ಕಡಿದು, ಮುತ್ತುಗದ ಮರಕ್ಕೆ ನೀರೆರೆದು, ಹೂಬಿಟ್ಟಿತಲ್ಲಾ, ಇನ್ನೇನು ಹಣ್ಣುಬಿಡುವುದು! - ಎಂದುಕೊಂಡರೆ ಆದೀತೇ?"


ಮಾತಿನ ಸಂದರ್ಭವಿದು: ರಾಮನು ಸೀತಾ-ಲಕ್ಷ್ಮಣರೊಂದಿಗೆ ಕಾಡಿಗೆ ಹೊರಟು ಆರು ದಿನಗಳು ಕಳೆದಿವೆ. ನಡುರಾತ್ರಿಯೆದ್ದ ದಶರಥನು ಕೌಸಲ್ಯೆಯೊಂದಿಗೆ ತನ್ನ ಹಿಂದಿನ ಕರ್ಮವನ್ನು ತೋಡಿಕೊಳ್ಳುತ್ತಾನೆ: ಹಿಂದೊಮ್ಮೆ ಋಷಿ-ಕುಮಾರನೊಬ್ಬನನ್ನು ಶಬ್ದ-ವೇಧಿ-ಬಾಣದಿಂದ ಕೊಂದು, "ನೀನೂ ಪುತ್ರ-ಶೋಕದಿಂದ ಮರಣ ಹೊಂದು" ಎಂಬ ಶಾಪವನ್ನು ಆತನ ತಂದೆ-ತಾಯಿಗಳಿಂದ ಪಡೆದೆ. ಅದಕ್ಕೇ ಈಗೀ ಶೋಕ! ರಾಮನು ಅಭಿಷಿಕ್ತನಾಗುವುದನ್ನು ಕಣ್ತುಂಬ ನೋಡಿ ಸಂತೋಷಿಸಬೇಕೆಂಬ ಫಲದಿಂದ ವಂಚಿತನಾದೆ. ನನ್ನ ದುಷ್ಕರ್ಮದ ಫಲವಿದು: ವೃಕ್ಷಕ್ಕೆ ಅಪಚಾರವೆಸಗಿದವನು ಫಲಾಗಮ-ಸಮಯದಲ್ಲಿ ಹಲುಬುತ್ತಾನೆ (ಸ ಶೋಚತಿ ಫಲಾಗಮೇ) ಎನ್ನುತ್ತಾನೆ.

ನಮಗಿಲ್ಲಿ ಪಾಠವಿಲ್ಲವೇ?


ಸೂಚನೆ: 06/07/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

ಭಗವಂತ ಕರುಣಾಮಯನೇ ? ಭಾಗ-೨ (Bhagavanta Karunamayane? Bhaga-2)

 

ಹಿಂದಿನ ಸಂಚಿಕೆಯಲ್ಲಿ ಭಗವಂತನ ಕರುಣೆಯ ಬಗ್ಗೆ ಆಲೋಚಿಸಿದೆವು. ಹಾಗಾದರೆ ನಮ್ಮ ದುಃಖ ದೈನ್ಯಗಳಿಗೆ ಕಾರಣವೇನು ಎಂದು ವಿಚಾರ ಮಾಡೋಣ.


ನಮ್ಮ ಕರ್ಮಗಳ ದೋಷವನ್ನು ಮೇಲಿನವನ ಮೇಲೆ ಹೇಳುತ್ತಿದ್ದೆವೆಯೇ?:

 

ಒಬ್ಬ ಅಜ್ಞಾನಿ ಬೆಂಗಳೂರಿನ ರಸ್ತೆಯಲ್ಲಿ ನಡೆದುಹೋಗುತ್ತಿದ್ದ. ಗೊತ್ತಾಗದೇ ದಾರಿಯಲ್ಲಿನ ಸಗಣಿಯನ್ನು ತುಳಿದ. ಸ್ವಲ್ಪಹೊತ್ತಿನ ನಂತರ ಮಳೆ ಆರಂಭವಾಯಿತು. ಮಳೆಯಿಂದ ರಕ್ಷಣೆ ಪಡೆಯಲು ತನ್ನ ಕಾಲಿನ ಚಪ್ಪಲಿಯನ್ನು ತಲೆಯ ಮೇಲಿಟ್ಟು ನಡೆದ. ಮಳೆಯ ನೀರಲ್ಲಿ ಕರಗಿ ಅವನೇ ತುಳಿದ ಸಗಣಿ ಮೈಗೆಲ್ಲಾ ಇಳಿಯಿತು. ಅದನ್ನು ನೋಡಿ ಅವನು ಈ ಊರಿನಲ್ಲಿ ಸಗಣಿಯ ಮಳೆ ಬರುತ್ತದೆ ಎಂದನಂತೆ. ಕಥೆಯ ತಮಾಷೆ ಒಂದು ಭಾಗ. ಇಲ್ಲಿ ಮಳೆಯ ದೋಷವೇನೂ ಇಲ್ಲದೇ ಶುದ್ಧವಾಗಿ ಸುರಿಯುತ್ತಿದ್ದರೂ  ಅವನು ತನ್ನ ಅವಿವೇಕದಿಂದ ಆದ ಪರಿಣಾಮವನ್ನು ಮೇಲಿಂದ ಬೀಳುವ ಮಳೆಯಮೇಲೆ ಹೇಳಿದ. ಪ್ರಾಯಃ ನಾವೂ ಸಹ ನಮ್ಮ ಕರ್ಮಗಳಿಂದಾದ ದೋಷಗಳನ್ನು , ನಮ್ಮ ಇಂದ್ರಿಯಗಳಿಂದ ನಮ್ಮ ಅಜ್ಞಾನದ ಪರಿಣಾಮವಾಗಿ ಆಗಿರುವ ದೋಷಗಳನ್ನು ಇಂದ್ರಿಯಾತೀತನಾಗಿ ಮೇಲೆ ಬೆಳಗುವ ಭಗವಂತನ ಮೇಲೆ ಹಾಕುತ್ತಿದ್ದೇವೆ. 

 

ನಮ್ಮ ದುಷ್ಕರ್ಮಗಳೇ ನಮ್ಮ ದುಃಖಕ್ಕೆ ಕಾರಣ:

 

ಮನಸ್ಸಿನ ಕಡಿವಾಣವಿಲ್ಲದ ನಮ್ಮ ಅತಿಯಾದ ಇಂದ್ರಿಯ ಲಾಲಸೆ ಈ ಎಲ್ಲಾ ಕಷ್ಟಗಳಿಗೆ ಕಾರಣವಾದ ದುಷ್ಕರ್ಮಗಳನ್ನು ನಮ್ಮಿಂದ ಮಾಡಿಸಿತು.ಈ ಇಂದ್ರಿಯಗಳೆಲ್ಲವನ್ನು ಅವನು ನಮ್ಮ ಸುಖ ಸಂತೋಷಗಳಿಗಾಗಿಯೇ ಕೊಟ್ಟಿದ್ದಾನೆ. ಆದರೆ ಅವುಗಳ ಅನುಭವಕ್ಕೆ ಧರ್ಮ-ಮೋಕ್ಷಗಳ ಸೀಮೆ ಇದ್ದರೆ ಮಾತ್ರ ಅವುಗಳ ಪೂರ್ಣ ಆನಂದವನ್ನು ಅನುಭವಿಸಿ ಸುಖ ಪಡಬಹುದು ಎಂಬ ವಿಜ್ಞಾನ, ಋಷಿದೃಷ್ಟಿ ನಮ್ಮಲ್ಲಿ ಮರೆಯಾಯಿತು. ನಮ್ಮ ಮನಸ್ಸು ಇಂದ್ರಿಯ ನಿಗ್ರಹ ಮಾಡುವ ಬದಲು ತಾನೇ ಇಂದ್ರಿಯಗಳಿಗೆ ವಶವಾಗಿ ಆತ್ಮನ ಸುಖವನ್ನು ಮರೆಯಿತು. ಅತಿಯಾದ ಇಂದ್ರಿಯ ಸುಖಗಳ ಅಪೇಕ್ಷೆಯೇ ಹೀಗೆ ಮರೆಯುವಂತೆ ಮಾಡಿತು. ಹಸಿವಿದೆ. ಹಾಗೆಯೇ ರುಚಿಯೂ ಇದೆ. ಹಾಗೆಂದು ಅತಿಯಾಗಿ ದೇಹಾರೋಗ್ಯಕ್ಕೆ ಸಲ್ಲದಿರುವುದನ್ನು ತಿಂದರೆ ಅದರ ಕಹಿಯನ್ನು ಅನುಭವಿಸಬೇಕಲ್ಲವೇ?

 

ಎಂದೋ ಮಾಡಿದ್ದು ಇನ್ನೆಂದೋ ಅನುಭವಿಸಬೇಕು:


ಕೆಲವೊಮ್ಮೆ ಇಂದು ತಿಂದ ಅಂತಹ ಆಹಾರಗಳು ಬಹಳ ಕಾಲದ ನಂತರ  ದುಷ್ಪರಿಣಾಮ ಮಾಡಬಹುದು. ನಮಗೆ ನಾವು ತಿಂದದ್ದು ಮರೆತುಹೋಗಲೂ ಬಹುದು. ಹಾಗೆಂದು ಒಳಗೆ ಹೋದ ಆಹಾರ ತನ್ನ ಪ್ರಭಾವ ಬೀರದೇ ಬಿಡದು. ಹಾಗೆಯೇ ನಮ್ಮ ಅನ್ಯಾನ್ಯ ದುಷ್ಕರ್ಮಗಳು ಜನ್ಮಾನ್ತರಗಳಿಂದ ಸಂಚಿತವಾಗಿವೆ. ನಮಗೆ ಅವೆಲ್ಲ "ಅದೃಷ್ಟ" ವಾಗಿರಬಹುದು. ಅದೃಷ್ಟ ಎಂದರೆ ಕಾಣದಿರುವುದು. ಅವೆಲ್ಲವೂ ಇಂದು ಫಲಕೊಡಲು ಆರಂಭಿಸುವ ಸಾಧ್ಯತೆ ಇರುತ್ತದೆ.


ಕರ್ಮ ವ್ಯವಸ್ಥೆಯೇ ಭಗವಂತನ ಕರುಣೆ:

 

ಭಗವಂತನ ಸೃಷ್ಟಿಯಲ್ಲಿ ಈ ಕರ್ಮಫಲಾನುಭವ ಇರುವುದರಿಂದಲೇ ಜೀವಲೋಕ ತನ್ನೆಲ್ಲಾ ಪಾಪ ಕರ್ಮಗಳನ್ನು ತೊಳೆದುಕೊಂಡು ಮತ್ತೆ ಸುಖಾನುಭವ ಮಾಡುವ ಸ್ಥಿತಿಗೆ ಬರುವಂತಾಗುವುದು. ಅವನ ಈ ವ್ಯವಸ್ಥೆಯೂ ಜೀವಲೋಕದ ಮೇಲಿನ ಕರುಣೆಯಿಂದಲೇ ಇದೆ. ಹೀಗೆ ನಮ್ಮ ದುಷ್ಕರ್ಮಗಳಿಂದಲೇ ಎಲ್ಲಾ ಸುಖಗಳಿಗೂ ಮಿಗಿಲಾದ ಆತ್ಮ ಸುಖವನ್ನು ನಾವು ದೂರಮಾಡಿಕೊಂಡೆವು.ನಮ್ಮ ಅಸಾವಧಾನತೆಯಿಂದ ಕರ್ಮಪರಂಪರೆಯನ್ನೇ ಹೆಣೆದೆವು.ಇವೆಲ್ಲದರ ಪರಿಣಾಮವಾಗಿ ಬಂದ ದುಃಖ ದೈನ್ಯಗಳಿಗೆ ಕಡೆಯಲ್ಲಿ ದಯಾಮಯನಾದ ಭಗವಂತನೇ ಕಾರಣ ಎಂದುಬಿಟ್ಟೆವು.

 

ಅವನ ಸೃಷ್ಟಿ ಸಂಕಲ್ಪವೇ ಎಲ್ಲದಕ್ಕೂ ಕಾರಣವೇ?:

 

ಅವನ ಸೃಷ್ಟಿಯ ಕಾರಣದಿಂದಲೇ ಇಷ್ಟೆಲ್ಲಾ ಸಮಸ್ಯೆಗಳಾದುವು. ಅವನು ಸೃಷ್ಟಿಯನ್ನೇ ಮಾಡಬಾರದಿತ್ತು. ಎಂದು ಕೆಲವೊಮ್ಮೆ ಅನ್ನಿಸಿಬಿಡುತ್ತದೆ. ತೆಂಗಿನ ಗಿಡ ಎಂದು ಇದ್ದಿದ್ದರಿಂದಲೇ ಹಳದಿ ರೋಗ ಬರುವಂತಾಯಿತು. ಅದೇ ಇರಬಾರದಿತ್ತು ಎಂದರೆ ಹೇಗೆ? ರೋಗರಹಿತವಾದ ತೆಂಗಿನ ಗಿಡದ ಎಳನೀರು, ಕಾಯಿ ಎಲ್ಲವನ್ನೂ ನಾವು ಚಪ್ಪರಿಸಿ ಸವಿದು ಆನಂದಿಸಲಿಲ್ಲವೇ? ಆಗ ಅದು ಬೇಡವೆಂದು ನಮಗೆ ಅನ್ನಿಸಿತ್ತೆ? ನಮ್ಮ ಹ್ರಸ್ವ ದೃಷ್ಟಿಯೇ ಇಂತಹ ಆಲೋಚನೆಗಳಿಗೆ ಕಾರಣವೇ ಹೊರತು ಭಗವಂತನ ಸೃಷ್ಟಿಯಲ್ಲ ಎಂಬುದು ಗಮನಿಸಬೇಕಾದ ವಿಷಯ. 

 

ಜೀವಲೋಕದ ಹಿತಕ್ಕಾಗಿಯೇ ಸೃಷ್ಟಿ:

 

ಸಾವಿರಾರು ಜನಗಳಿಗೆ ಜೀವನೋಪಾಯವಾದ ಒಂದು ಕಾರ್ಖಾನೆ ಇದೆ. ಅಲ್ಲಿ ಬಗೆ ಬಗೆಯ ಯಂತ್ರಗಳಿವೆ. ಅದರ ಸದುಪಯೋಗದಿಂದ ನಮಗೆ ಬೇಕಾದ ವಸ್ತುಗಳನ್ನು ಪಡೆಯಬಹುದಾಗಿದೆ. ಆದರೆ ಯಾರೋ ತಮ್ಮ ಅಸಾವಧಾನತೆಯಿಂದ ಒಂದು ಯಂತ್ರದ ಒಳಗೆ ತನ್ನ ಕೈ ಇಟ್ಟು  ಕೈ ಕಳೆದುಕೊಳ್ಳುತ್ತಾನೆ. ಹಾಗೆಂದು ಕಾರ್ಖಾನೆ ಪ್ರಾರಂಭಿಸಿದ್ದರಿಂದಲೇ ಅವನ ಕೈ ಹೋಯಿತು ಎನ್ನೋಣವೇ? ಹಾಗಲ್ಲ. ಅವನ ಅಸಾವಧಾನತೆಯಿಂದ ಕೈ ಕಳೆದುಕೊಂಡ ಎನ್ನುವುದೇ ಸರಿಯಾದುದು. ಹಾಗೆಯೇ ಭಗವಂತನ ಈ ಸೃಷ್ಟಿಯಲ್ಲಿ ಸ್ವರೂಪತಃ ಕೆಡುಕಾದುದು ಯಾವುದೂ ಇಲ್ಲ. ಎಲ್ಲವೂ ಅವವುಗಳ ವಿಜ್ಞಾನದೊಂದಿಗೆ ನಮ್ಮ ಉಪಯೋಗಕ್ಕಾಗಿಯೇ ಸೃಷ್ಟಿಯಾಗಿದೆ.ಎಲ್ಲವೂ ತಮ್ಮ ತಮ್ಮ ಧರ್ಮದೊಂದಿಗೆ ಬಂದಿವೆ. ಅದರದರ ಧರ್ಮ ವಿಶೇಷವನ್ನು ಅರ್ಥ ಮಾಡಿಕೊಂಡು ಬಳಸಿದರೆ ಜೀವನ ಅತ್ಯಂತ ಸುಖಮಯ. ಹರಿತವಾದ ಕತ್ತಿ ಇದೆ. ಅದು ತರಕಾರಿ ಕತ್ತರಿಸುವಾಗ ಹರಿತವಾಗಿದ್ದು, ನಾವು ಗೊತ್ತಾಗದೇ ಕೈ ಇಟ್ಟಾಗ ಮೊಂಡಾಗುವಂತೆ ಅದನ್ನು ಸೃಷ್ಟಿಸಲಾಗದು. ಹಾಗೆ ಅದು ಕೈ ಕತ್ತರಿಸಿದಾಗ ಕತ್ತಿಯನ್ನು ತಯಾರಿಸಿದ್ದೇ ತಪ್ಪು ಎನ್ನುವ ಮೂರ್ಖತನದಂತೆ ಭಗವಂತನ ಸೃಷ್ಟಿಯನ್ನು ಹಳಿಯುವುದೂ ಸಹ.


ಈ ಮಾನವ ದೇಹ-ಭಗವಂತನ ಕರುಣೆಯ ಪರಿಣಾಮವೇ:

 

ಜಾಗ್ರತ್,ಸ್ವಪ್ನ,ಸುಷುಪ್ತಿ,ತುರೀಯ ಗಳೆಂಬ ನಾಲ್ಕೂ ಸ್ಥಿತಿಗಳನ್ನು ಅನುಭವಿಸಿ ಆನಂದಮಯವಾಗಿ ಬಾಳುವ ಪೂರ್ಣ ವ್ಯವಸ್ಥೆಯುಳ್ಳ  ಮಾನವ ದೇಹವಿದು. ಅದು ಜೀವಿಗಳ ಮೇಲಿನ ಕರುಣೆಯಿಂದಲೇ ಅವನು ದಯಪಾಲಿಸಿರುವುದು.ಅದನ್ನು ನಾವು ಹಾಗೆ ಬಳಸದೇ ಹಾಳುಮಾಡಿಕೊಂಡಿದ್ದೇವೆ. ನಮ್ಮ ಸಹಜ ಸ್ಥಿತಿ ನಮಗೀಗ ಇಲ್ಲವಾಗಿದೆ.ಖಾಯಿಲೆ ಎಷ್ಟು ಉಲ್ಬಣಗೊಂಡಿದೆ ಎನ್ನುವುದಕ್ಕೆ ಯಾರ ಮಾತು ಪ್ರಮಾಣ? ಖಾಯಿಲೆಯಲ್ಲಿ ಬಳಲುವ ರೋಗಿಯದೋ ಅಥವಾ ಅವನ ಚಿಕಿತ್ಸೆ ಮಾಡುತ್ತಿರುವ ವೈದ್ಯನದೋ? ಹಾಗೆಯೇ ನಾವೆಲ್ಲಾ ರೋಗಿಗಳು. ಭಗವಂತ ವೈದ್ಯ.ಅವನ ಕರುಣೆಯ ವಿಷಯ ನಮಗೆ ನಾವು ಗುಣಮುಖರಾಗುವವರೆಗೂ ಗೊತ್ತಾಗದು. ವೈದ್ಯರು ಆಪರೇಷನ್ ಎಂದು ಹೊಟ್ಟೆ ಕೊಯ್ಯುವುದೇ? ಎಂತಹ ನಿಷ್ಕರುಣಿ! ಎಂದಂತೆ ನಾವೂ ಭಗವಂತನನ್ನು ಕರುಣೆಯಿಲ್ಲದವನು ಎನ್ನುವುದೂ ಸಹ. ಹೀಗೆ ನಮ್ಮ ದುಃಖಗಳಿಗೆಲ್ಲ ಕಾರಣ ಅವನು ಕೊಟ್ಟ ಮನಸ್ಸು ಬುದ್ಧಿಗಳನ್ನು ದುರುಪಯೋಗ ಮಾಡಿರುವುದೇ ಆಗಿದೆ. 


ಭಗವಂತನ ಸಂಹಾರಕಾರ್ಯ, ಮರೆವು  ಕರುಣೆ ಹೇಗಾದೀತು? ಜೀವಲೋಕದ ಮೇಲೆ ಕರುಣೆ ಮುಂದಿನ ಸಂಚಿಕೆಯಲ್ಲಿ ನೋಡೋಣ

 

ಮುಂದುವರೆಯುವುದು

ಸೂಚನೆ : 06/07/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ  ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ - 21 ಮೋಹಕತೆಯ ಹಿಂದಿರುವ ಕಾರಣಗಳಾರು((Krishnakarnamrta -21 Mohakateya Hindiruva Karanagalaru)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ಮೋಹಿನೀ ಎಂದ ಕೂಡಲೇ ಅನೇಕ ಮಂದಿಗೆ ಜ್ಞಾಪಕ ಬರುವುದು ಅದೊಂದು ಬಗೆಯ ಪಿಶಾಚಿ ಎಂಬುದು. ಕಗ್ಗತ್ತಲಿನಲ್ಲಿ ನಿರ್ಜನವಾದ ಬಯಲಿನಲ್ಲಿ ಹೋಗುತ್ತಿರುವಾಗ ಕಾಣಿಸಿಕೊಳ್ಳುವ ಅದನ್ನು ಕಂಡರಾಯಿತು, ಮೈ ಜುಮ್ಮೆನಿಸಿ ಅದರ ಸೆಳೆತಕ್ಕೆ ಸಿಕ್ಕಿ, ಅದರ ಹಿಂದೆ ಹೋಗುವಂತೆಯೂ, ಕೊನೆಗೆ ಮೈಗೆ ನಾಲ್ಕಾರು ದಿನ ಜ್ವರ ಬಂದು ಮಲಗುವಂತೆಯೂ, ಹಳ್ಳಿಯ ಜನಗಳು ಹೇಳುವ ಕಥೆಗಳನ್ನು ಅನೇಕರು ಕೇಳಿರಬಹುದಲ್ಲವೆ?

ಮೋಹಿನಿಯೆಂದರೆ ಹೀಗೇನೋ ಕೆಟ್ಟದ್ದೇ ಎಂದೇನಿಲ್ಲ. ಯಾರು ನಮಗೆ ಮೋಹವುಂಟುಮಾಡುತ್ತಾರೋ ಅವರು ನಮ್ಮ ಪಾಲಿಗೆ ಮೋಹಕರೆನಿಸುತ್ತಾರೆ. ಮೋಹಕ-ಮೋಹನಗಳೆರಡಕ್ಕೂ ಒಂದೇ ಅರ್ಥ.

ಕೃಷ್ಣನ ರೂಪವು ಲೋಕೋತ್ತರವಾದದ್ದು. ಎಂದೇ ಅದರ ಸೆಳೆತಕ್ಕೆ ಸಿಕ್ಕದ್ದೇ ಆದರೆ ಮಿಕ್ಕಾವ ರೂಪಗಳೂ ಸೆಳೆಯ(ಲಾರ)ವು. ಅಂತಹ ಮೋಹಕಾರಿ ಆತನೇ ಸರಿ. ಎಂದೇ ಮೋಹನನೆಂದರೆ ಆತನೇ. ಎಂದೇ, ಮೋಹನನೆಂಬ ಹೆಸರು ಎಷ್ಟು ಪ್ರಚುರ, ಅಲ್ಲವೇ?

ಕೃಷ್ಣನು ಜಗನ್ಮೋಹನ: ಒಬ್ಬಿಬ್ಬರನ್ನಲ್ಲ,  ಜಗತ್ತನ್ನೆಲ್ಲಾ ಮೋಹಗೊಳಿಸುವ ಸೊಬಗು ಆತನದು. ಮೋಹವುಂಟುಮಾಡುವ ವ್ಯಕ್ತಿ ಸ್ತ್ರೀಯಾದರೆ ಅವಳು ಮೋಹಿನಿಯೆನಿಸುತ್ತಾಳೆ.

ವ್ಯಕ್ತಿಯೇ ಆಗಬೇಕಿಲ್ಲ, ಮೋಹಿನಿಯೆನ್ನಲು. ಸ್ತ್ರೀಲಿಂಗದ ಪದವಾದರೂ ಸರಿಯೇ; ಅದಕ್ಕೆ ವಿಶೇಷಣವಾಗುವುದಾದರೆ ಮೋಹಿನಿಯೆಂದೇ ಹೇಳಬೇಕು. ಇಂತಹ ನಿಯಮ ಸಂಸ್ಕೃತದಲ್ಲಿ ಮಾತ್ರವಲ್ಲ, ಹಿಂದಿಯಲ್ಲೂ ಇದೆ. ವ್ಯಾಕರಣದ ವಿಷಯವನ್ನು ಹೆಚ್ಚು ವಿಸ್ತರಿಸಿ ಇಲ್ಲಿ ಹೇಳಬೇಕಿಲ್ಲ. ಎಂದೇ ಕೃಷ್ಣನ ಮೂರ್ತಿಯನ್ನು ಇಲ್ಲಿ ಜಗನ್ಮೋಹಿನಿಯೆಂದಿರುವುದು. ಇದಕ್ಕೆ ಕಾರಣ, ಮೂರ್ತಿಯೆಂಬ ಪದವು ಸಂಸ್ಕೃತದಲ್ಲಿ ಸ್ತ್ರೀಲಿಂಗ. ಮೂರ್ತಿಯೆಂದರೆ ಮೈ. ವಿಗ್ರಹವನ್ನೂ ಮೂರ್ತಿಯೆನ್ನುವುದುಂಟು.

ಪ್ರಕೃತ-ಶ್ಲೋಕದಲ್ಲಿ, ಆರು ಕಾರಣಗಳನ್ನಿತ್ತು ವ್ರಜ-ಶಿಶುವಾದ ಕೃಷ್ಣನ ಮೂರ್ತಿಯು ಜಗನ್ಮೋಹಿನಿಯೆಂದು ಹೇಳಿದೆ. ನಂದ-ಗೋಪನ ರಾಜಧಾನಿಗೆ ವ್ರಜವೆಂದು ಹೆಸರು. ಗೋಕುಲವೆಂದರೂ ಅದೇ. ಅಲ್ಲಿಯ ಪ್ರಸಿದ್ಧ ಶಿಶುವೆಂದರೆ ಮತ್ತಾರು? ಶ್ರೀಕೃಷ್ಣನೇ.

ಯಾವುವು ಆ ಕಾರಣಗಳು? ಯಾರನ್ನಾದರೂ ಕಂಡಾಗ ಮೊಟ್ಟಮೊದಲು ಗಮನಿಸುವುದು ಅವರ ಮುಖವನ್ನು. ಮುಖದಲ್ಲೂ ವ್ಯಕ್ತಿಯ ಅಚ್ಚನ್ನು ಹೇಳತಕ್ಕವೆಂದರೆ ಹುಬ್ಬು ಹಾಗೂ ಕಣ್ಣುಗಳೇ ಸರಿ. ಎಂದೇ, ಒಬ್ಬ ವ್ಯಕ್ತಿಯ ಗುರುತನ್ನು ಮರೆಮಾಚುವುದೆಂದರೆ ಅವರ ಚಿತ್ರದಲ್ಲಿ/ಫೋಟೋವಿನಲ್ಲಿ ಹುಬ್ಬು ಹಾಗೂ ನೇತ್ರಗಳ ಮೇಲೆ ಒಂದು ಪಟ್ಟಿಯನ್ನು ಎಳೆದಂತೆ ತೋರಿಸುವುದೇ ಸರಿ.

ಎಂದೇ ಇಲ್ಲಿ ಮೊದಲು ಕೃಷ್ಣನ ಹುಬ್ಬನ್ನು ಕುರಿತೇ ಹೇಳಿದೆ. ಮೇಲೆ ಸೂಚಿಸಿದ ಆರು ಕಾರಣಗಳಲ್ಲಿ ಮೊದಲನೆಯದು ಎಂದರೆ ಆತನ ಅಸಿತವಾದ, ಎಂದರೆ ಕಪ್ಪಾದ, ಹುಬ್ಬುಗಳನ್ನುಳ್ಳದ್ದು ಆ ಮೂರ್ತಿ - ಎಂಬುದು. ಮೂರ್ತಿಯೆಂದರೆ ಮೈ. ಅಲ್ಲಿಗೆ, ಕೃಷ್ಣನ ಶರೀರದಲ್ಲಿ ಎದ್ದು ತೋರುವ ಹುಬ್ಬುಗಳು ಕಪ್ಪಗಿವೆ, ಎಂದರ್ಥ.

ಕೃಷ್ಣನು ಸ್ವತಃ ಕಪ್ಪೇ. ಆದರೂ ಆ ಹಿನ್ನೆಲೆಯಲ್ಲೂ ಇವು ಕಪ್ಪಗೆ ತೋರುತ್ತಿವೆಯೆಂದರೆ ಅವುಗಳ ಕೃಷ್ಣ-ವರ್ಣವನ್ನು, ಎಂದರೆ ಕಪ್ಪು ಬಣ್ಣವನ್ನು, ಊಹಿಸಿಕೊಳ್ಳಬಹುದು!

ಜೊತೆಗೆ, ಒಂದಿಷ್ಟು ಬಾಗಿವೆ, ಅವು. ಹುಬ್ಬು ಸರಳರೇಖೆಯಂತೆ ಇದ್ದರೆ ಅದರಲ್ಲೇನು ಸೊಗಸು? ಎಂದೇ ಅದು ಆನಮ್ರವಾಗಿರಬೇಕು, ಎಂದರೆ ಕೊಂಚ ಡೊಂಕಾಗಿರಬೇಕು.

ಸಂಸ್ಕೃತದ ಭ್ರೂ ಎಂಬುದರಿಂದಲೇ ಇಂಗ್ಲೀಷಿನ ಬ್ರೋ brow ಬಂದಿರುವುದು - ಎನ್ನುವುದನ್ನೂ ಇಲ್ಲಿ ಜ್ಞಾಪಿಸಿಕೊಳ್ಳಬಹುದು.  ಕೃಷ್ಣನ ಎರಡೂ ಹುಬ್ಬುಗಳನ್ನು ಜೋಡಿಯಾಗಿ ನೋಡಿದರೆ ಒಂದು ಬಿಲ್ಲಿನ ಆಕಾರವು ತೋರುವುದನ್ನು ವ್ಯಾಖ್ಯಾನಕಾರರು ಗುರುತಿಸಿದ್ದಾರೆ. ಡೊಂಕೆಂದರೆ ಹೀಗಿದ್ದರೇ ಚಂದ, ಹುಬ್ಬುಗಳಿಗೆ.

ಹುಬ್ಬಿನ ಸೌಂದರ್ಯವನ್ನು ಹೇಳಿದ ಮೇಲೆ ಹೇಳಬೇಕಾದದ್ದು ಕೃಷ್ಣನ ಕಣ್-ರೆಪ್ಪೆ. ಎವೆಯೆಂದರೂ ಪಕ್ಷ್ಮವೆಂದರೂ ರೆಪ್ಪೆಯೇ. ಆ ಎವೆಗೂದಲುಗಳು ಅಂಕುರಗಳಂತಿವೆ, ಎಂದರೆ ಮೊಳಕೆಗಳಂತೆ. ಅಲ್ಲದೆ, ಅವು ಅಕ್ಷೀಣವಾಗಿವೆ. ಎಂದರೆ ದಟ್ಟವಾಗಿವೆ.

ಅಷ್ಟೇ ಅಲ್ಲ. ಅವು ಉಪಚಿತವಾಗಿವೆ ಸಹ. ಅರ್ಥಾತ್ ಉದ್ದುದ್ದವಾಗಿವೆ. ಇಂತಹ ರೆಪ್ಪೆಗೂದಲುಗಳಿದ್ದರೆ ಮುಖವೇ ಮೋಹಕವಾಗಿರುವುದರಲ್ಲಿ ಸಂಶಯವಿಲ್ಲ.

ಹುಬ್ಬು-ರೆಪ್ಪೆಗಳಾದ ಮೇಲೆ ಇನ್ನು ಕಣ್ಣುಗಳ ಮೋಹಕತೆ. ಕೃಷ್ಣನ ಕಣ್ಣುಗಳು ಅನುರಾಗಿಗಳು. ಏನು ಹಾಗೆಂದರೆ? ಅನುರಾಗವುಳ್ಳವುಗಳು ಅನುರಾಗಿಗಳು. ಅನುರಾಗವೆಂದರೇನು? ಹೆಚ್ಚು ಕಡಿಮೆ ಸದಾಕಾಲವೆನ್ನುವಷ್ಟು ನೋಡುತ್ತಲೇ ಇದ್ದರೂ ಅದೇನೋ ಪ್ರಿಯತೆಯು ಮತ್ತೆ ಮತ್ತೆ ಗೋಚರವಾಗುತ್ತಿದ್ದು,  ರಾಗವು, ಎಂದರೆ ಆಕರ್ಷಣೆಯು, ನವನವವಾಗಿ ಆಗುತ್ತಲೇ ಇದ್ದರೆ - ಅದು ಅನುರಾಗವೆನಿಸುತ್ತದೆ. ಎಂದರೆ ಕುಂದದ ಆಕರ್ಷಣೆಯಿಂದ ಕೂಡಿರತಕ್ಕದ್ದು ಅನುರಾಗಿ. ಅಂತೂ ಇಂತಹ ಕಣ್ಣುಗಳು ಕೃಷ್ಣನವು.

ಅಷ್ಟು ಮಾತ್ರವಲ್ಲ. ಅವುಗಳ ಸೊಬಗನ್ನು ಇಮ್ಮಡಿಗೊಳಿಸಿರುವುದು ಅವುಗಳ ಆಲೋಲತೆ, ಎಂದರೆ ಅತ್ತಿತ್ತ ನೋಡುತ್ತಿದ್ದರೂ (ನನ್ನತ್ತಲೇ) ಮತ್ತೆ ಮತ್ತೆ ನೋಡುವ ಚಪಲತೆ - ಅದನ್ನೂ ಹೊಂದಿವೆ, ಆ ಕಣ್ಣುಗಳು.

ಹೀಗೆ ಹುಬ್ಬು-ರೆಪ್ಪೆ-ಕಣ್ಣುಗಳಿಂದಾದ ಮೋಹಕತೆ - ಎಂಬ ಮೂರು ಕಾರಣಗಳನ್ನು ಹೇಳಿದ್ದಾಯಿತು. ಇನ್ನು ಮೂರೆಂದರೆ ಆತನ ಮಾತು, ಆತನ ತುಟಿ, ಆತನ ವೇಣುಧ್ವನಿಗಳು.

ಆತನ ಮೃದು-ಜಲ್ಪಿತಗಳು ಎಂದರೆ ಮೆದುನುಡಿಗಳು ಮೋಹವನ್ನುಂಟುಮಾಡುವುವು. ಸಹಜ-ಸುಕುಮಾರವಾದ ಅಕ್ಷರಗಳಿಂದ ಕೂಡಿದ ಉಲಿ ಆತನದು. ಮಾತಿನಲ್ಲಿ ಮಾರ್ದವವು ಇದ್ದರಷ್ಟೆ ಸಾಲದು. ಅದರಲ್ಲೊಂದು ಆರ್ದ್ರತೆಯಿರಬೇಕು. ಆರ್ದ್ರತೆಯೆಂದರೆ ಸ್ನಿಗ್ಧತೆ, ಸ್ನೇಹದಿಂದ ಕೂಡಿರುವಿಕೆ. ಬಾಯಿಂದ ಬಿರುನುಡಿಗಳೇ ಬರುವಲ್ಲಿ ಅದನ್ನು ಬಯಸಲಾದೀತೇ? ಸರಸವಾದ ಮಾತು ತಾನೆ ಆಸ್ವಾದ್ಯ? ಕೃಷ್ಣನ ಬಾಯಿಂದ ಬರತಕ್ಕವು ಎಂತಹ ನುಡಿಗಳು!

ಇನ್ನು ಆತನ ಅಧರ - ಎಂದರೆ ಕೆಳತುಟಿಯಂತೂ ಆತಾಮ್ರ - ಎಂದರೆ ಒಳ್ಳೆಗೆಂಪು. ಆ ಅಧರವಾದರೂ ಅಮೃತಕ್ಕೆ ಆಗರವಾದದ್ದು.

ಕೃಷ್ಣನ ಮಾತೆಷ್ಟು ಸೊಗಸೋ ತುಟಿಯೆಂತು ಚೆಂದವೋ, ಅಷ್ಟೇ ಆಸ್ವಾದ್ಯ ಆತನ ಕೆಂದುಟಿಯ ಮೇಲಿಟ್ಟ ವಂಶೀ-ಸ್ವನ, ಎಂದರೆ ಕೊಳಲ ದನಿ. ಆ ಕೊಳಲಿನಿಂದ ಹೊಮ್ಮತಕ್ಕ ಧ್ವನಿಗಳು ಬಗೆಬಗೆಯಾದವು.

ಒಳಗೆ ಭಾವ ತುಂಬಿ ಬರದಿದ್ದಾಗ ನಾವಾಡುವ ಮಾತೋ, ನುಡಿಸಿದ ವೇಣು-ಧ್ವನಿಯೋ ಒಣಕಲಾಗಿರುವುದು. ಹಾಗೆ ಶುಷ್ಕವಾದರೆ ಕೇಳಲೇನು ಹಿತವೇ? ಒಳಗೆ ಹರ್ಷವಿದ್ದು ಅದು ವಾದ್ಯದ ದ್ವಾರಾ ಹೊಮ್ಮುವುದಾದರೆ ಅದು ಮದ-ಕಲವೆನಿಸುತ್ತದೆ, ಎಂದರೆ ಮಾಧುರ್ಯ-ಭರಿತವಾದುದಾಗಿರುತ್ತದೆ.

ಹಾಡುವಾಗಾಗಲಿ ಮಾತಾಡುವಾಗಾಗಲಿ ಅಕ್ಷರಗಳೋ ಸ್ವರಗಳೋ ಮ್ಲಿಷ್ಟವಾಗಬಾರದು, ಎಂದರೆ ಅದೇನೋ ಸಾಂಕರ್ಯವಾಗುವುದೋ, ಒಂದರ ಬದಲು ಮತ್ತೊಂದು ಬರುವುದೋ ಆಗಬಾರದು. ಗಾನದಲ್ಲಂತೂ ಸ್ವರಸ್ಥಾನಗಳನ್ನು ಸರಿಯಾಗಿ ಮುಟ್ಟಿ ಹಾಡಿರಬೇಕು. ಹೀಗೆ ಅಕ್ಷರಸ್ಪಷ್ಟತೆ-ಸ್ವರಸ್ಪಷ್ಟತೆಗಳು ವಾಕ್ಕು-ವಾದನಗಳಲ್ಲಿರಬೇಕಾದದ್ದು. ಕೃಷ್ಣನ ವೇಣುಗಾನದಲ್ಲಿ ರಸವಿದೆ, ಮಾಧುರ್ಯವಿದೆ.

ಹೀಗೆ ಆ ಆರಂಶಗಳೂ ಎಂದರೆ ಹುಬ್ಬು-ಕಣ್ಣೆವೆ-ನೇತ್ರಗಳು, ವಾಕ್ಕು-ಅಧರ-ವೇಣುಧ್ವನಿಗಳು - ಇವೆಲ್ಲವೂ ಇರುವುದು ಕೃಷ್ಣನ ಮೂರ್ತಿಯಲ್ಲಿ. ಅಂತಹ ಮೂರ್ತಿಯನ್ನು ವಿಶ್ವ-ಮೋಹಿನಿಯೆನ್ನದವರಾರು?

ಆನಮ್ರಾಂ ಅಸಿತ-ಭ್ರುವೋರ್, ಉಪಚಿತಾಂ ಅಕ್ಷೀಣ-ಪಕ್ಷ್ಮಾಂತರೇ-

-ಷ್ವಾಲೋಲಾಂ ಅನುರಾಗಿಣೋರ್ ನಯನಯೋರ್, ಆರ್ದ್ರಾಂ ಮೃದೌ ಜಲ್ಪಿತೇ |

ಆತಾಮ್ರಾಂ ಅಧರಾಮೃತೇ, ಮದ-ಕಲಾಂ ಅಮ್ಲಾನ-ವಂಶೀ-ಸ್ವನೇ-

-ಷ್ವಾಶಾಸ್ತೇ ಮಮ ಲೋಚನಂ ವ್ರಜ-ಶಿಶೋರ್ ಮೂರ್ತಿಂ ಜಗನ್ಮೋಹಿನೀಂ ||

ಸೂಚನೆ : 06/07/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ  ಪತ್ರಿಕೆಯಲ್ಲಿ ಪ್ರಕಟವಾಗಿದೆ.

Friday, July 5, 2024

ಯುದ್ಧವಿಲ್ಲದ ಅ-ಯೋಧ್ಯೆಯೆಲ್ಲಿದೆ ? (Yuddhavillada A-Yodhyeyellide?)

ಮೋಕ್ಷದಾಯಿನಿಯಾಗಿ  ಪ್ರಸಿದ್ಧಿಪಡೆದಿರುವ ಏಳು ತೀರ್ಥ ಕ್ಷೇತ್ರಗಳಲ್ಲಿ, ಅಯೋಧ್ಯೆಯು ವಿಷ್ಣುವಿನ ಆದಿಪುರಿ.  ಸ್ಕಾಂದ ಪುರಾಣವು ಕೊಂಡಾಡುವ, ಪವಿತ್ರವಾದ ಶ್ರೀರಾಮನ ಜನ್ಮಸ್ಥಳ. ಮೋಕ್ಷವೇನೆಂದು ಅರಿಯದಿದ್ದರೂ ತೀರ್ಥಯಾತ್ರೆಯನ್ನಂತು  ಮಾಡಿ, ಶ್ರೀರಾಮನ ಪ್ರತಿಷ್ಠಿತ ಮೂರ್ತಿಯನ್ನು ದರ್ಶನಮಾಡಿ ಧನ್ಯರಾಗಬೇಕೆಂಬುದು ನಮ್ಮ ಸಂಸ್ಕೃತಿಯಲ್ಲಿರುವ  ಧೃಡವಾದ ನಂಬಿಕೆ. ಈ ನಂಬಿಕೆಗಳನ್ನು ಕುರಿತು ಆಧುನಿಕ ವಿಜ್ಞಾನದಿಂದ  ಶಿಕ್ಷಿತವಾಗಿರುವ ಬುದ್ಧಿಗಳಿಗೆ ಪ್ರಶ್ನೆಗಳು ಏಳದಿಲ್ಲ. ಮೂರ್ತಿಯನ್ನು ಚಿತ್ರಿಸಿದವರಾರು? ಅವರು ಶ್ರೀರಾಮನನ್ನು  ದರ್ಶನ ಮಾಡಿದವರೇ? ಕಲಿಯುಗದಲ್ಲಿ ತ್ರೇತಾಯುಗದ ರಾಮನನ್ನು ನೋಡಲು ಸಾಧ್ಯವೇ? ದರ್ಶನ ಮಾಡಿದವರೆಲ್ಲರಿಗೂ ಮೋಕ್ಷ ಕಟ್ಟಿಟ್ಟಬುತ್ತಿಯೇ? ಇತ್ಯಾದಿ

ತುಲಸೀದಾಸ್, ಭದ್ರಾಚಲ ರಾಮದಾಸ್, ತ್ಯಾಗರಾಜಾದಿ ಸಂತರು,  ನರೋತ್ತಮನಾಗಿ ಅವತರಿಸಿದ ರಾಮನನ್ನು, ಕಲಿಯುಗದಲ್ಲಿಯೂ ದರ್ಶನ ಮಾಡಿದವರು! ಹೇಗೆ ಸಾಧ್ಯ?  ಎಂದರೆ, ತ್ಯಾಗರಾಜರೇ 'ಕನುಗೊನುಸೌಖ್ಯಮು' ಎಂಬ  ಕೃತಿಯಲ್ಲಿ ಹೇಳುವಂತೆ – "ರಾಮನ ದರ್ಶನವಾಗಬೇಕಾದರೆ ಭಗವದನುಗ್ರಹದಿಂದ ಮಾತ್ರವೇ ಸಾಧ್ಯ". ತೊಂಬತ್ತಾರು ಕೋಟಿ ರಾಮ ನಾಮವನ್ನು ಜಪಿಸಿ, ಪ್ರತಿ ಕೋಟಿಯ ಜಪಕ್ಕೂ ಶ್ರೀರಾಮನ ದರ್ಶನವನ್ನು ಪಡೆಯುತ್ತಿದ್ದರು.  ರಾಮದರ್ಶನ ಮಾಡಲು ಅಯೋಧ್ಯೆಗೆ ಹೊರಟ ಭಕ್ತರನ್ನು ಕುರಿತು 'ನಡಚಿ ನಡಚಿ' ಎಂಬ  ಕೃತಿಯಲ್ಲಿ ಹಾಡುತ್ತಾರೆ (ಆದಿಯಲ್ಲಿ  ಕಾಲು ನಡಿಗೆಯಲ್ಲಿಯೇ ಯಾತ್ರೆ ಮಾಡಲಾಗುತ್ತಿತ್ತು) -"ಅಯೋಧ್ಯಾ  ನಗರಕ್ಕೆ ನಡೆದು ನಡೆದು, ಎಲ್ಲಿ ಹುಡುಕಿದರೂ  ರಾಮನು ಕಾಣಲಿಲ್ಲ.  ಯೋಗ ಶಾಸ್ತ್ರ  ತಳಿಸುವಂತೆ, ಕಣ್ಣುಗಳನ್ನು ಭ್ರೂ ಮಧ್ಯಕ್ಕೆ ಕೇಂದ್ರೀಕರಿಸಿ, ಕಟ್ಟೆಯಂತೆ  ಕುಳಿತು, ಜಪಮಾಲೆ ಹಿಡಿದು, ಆತ್ಮಾರಾಮನಲ್ಲಿ ಒಂದಾಗಲು ಹೊರಟ ಸಾಧಕರಿಗೂ ರಾಮ ಕಾಣಲಿಲ್ಲ".  ಪ್ರವೃತ್ತಿ-ನಿವೃತ್ತಿ ಮಾರ್ಗಗಳೆರಡರಲ್ಲೂ  ದಾರಿತಪ್ಪಿದ ಭಕ್ತರಿಗೆ ಮಾರ್ಗದರ್ಶನ– "ಹುಟ್ಟು ಸಾವಿಲ್ಲದ ಅವನ ನಿಜವಾದ ವಾಸಸ್ಥಳವನ್ನು ತಿಳಿಯಬೇಕು".

ಹುಟ್ಟು ಸಾವು ಇಲ್ಲದ ಸ್ಥಳವೆಲ್ಲಿದೆ?

ಅಥರ್ವವೇದವು ಹೇಳುವಂತೆ  - ಅಷ್ಟ ಚಕ್ರ(ಶಕ್ತಿಕೇಂದ್ರಗಳು), ನವ ದ್ವಾರಗಳಿಂದ  ಕೂಡಿರುವ ಈ ಮಾನವ ದೇಹವೆಂಬ ಪುರದಲ್ಲಿರುವ ಅ-ಯೋಧ್ಯಾ  ಸ್ಥಾನದಲ್ಲಿ ಆತ್ಮನು ವಾಸಿಸುತ್ತಾನೆ. ಅ-ಯೋಧ್ಯಾ  ಎಂದರೆ ಯುದ್ಧದಿಂದ ಗೆಲ್ಲಲಾಗದ ಸ್ಥಾನ. ಯಾವ ಯುದ್ಧ? 

 ಸೃಷ್ಟಿಯ ವಿಕಾಸದಲ್ಲಿ,  ಭಗವಂತನ ಮೂಲ ರೂಪದ ಮೂರು ಸ್ವರೂಪಗಳಾದ ಬ್ರಹ್ಮ-ವಿಷ್ಣು-ಮಹೇಶ್ವರರೆಂಬ ತ್ರಿಮೂರ್ತಿಗಳು, ಮೊದಲ ಹೆಜ್ಜೆಗಳು. ಈ ಶಕ್ತಿಗಳು ದೇಹ ಪ್ರಕೃತಿಯಲ್ಲಿ ಕ್ರಮವಾಗಿ ರಜಸ್ಸು, ಸತ್ವ ಹಾಗೂ ತಮೋಗುಣಗಳಾಗಿ ವಿಕಾಸ ಗೊಳ್ಳುತ್ತವೆ. ನಮ್ಮ ಇಹ-ಪರ ಜೀವನಗಳಿಗೆ ಆಶ್ರಯ. ಈ ಮೂವರ ಪೋಟಿಯ ಕಾರಣ ತ್ರಿಗುಣಗಳಲ್ಲಿ ನಿರಂತರ ಯುದ್ಧವೇ! ಭಗವಂತನು ತನ್ನನ್ನು ಮರೆಸಿಕೊಂಡು, ನಮ್ಮನ್ನು ಪ್ರಕೃತಿಯೊಂದಿಗೆ ಕಟ್ಟಿಹಾಕಿರುವ ಪಾಶವೇ ಈ  ತ್ರಿಗುಣಗಳು. ತಮೋಗುಣವಿಲ್ಲದೆ ನಿದ್ರೆಬಾರದು,  ರಜೋ ಗುಣವಿಲದೇ ಚಟುವಟಿಕೆಗಳಾಗದು. ಚಟುವಟಿಕೆ-ನಿದ್ರೆ ನಿತ್ಯಜೀವನಕ್ಕೆ ಅನಿವಾರ್ಯ. ಈ ಅಂಟುಗಳಿಲ್ಲದ, ತ್ರಿಗುಣಾತೀತವಾದ, ಯುದ್ಧವಿಲ್ಲದ  ಸ್ಥಳವೇ  ಹುಟ್ಟು-ಸಾವು ಇಲ್ಲದ ಭಗವಂತನ ಪರಮಪದ ಸ್ಥಾನ. ಅಲ್ಲಿಗೆ ತಲುಪಲು ಅತ್ಯವಶ್ಯಕವಾದದು ಸತ್ವಗುಣವೊಂದೇ.

ತ್ಯಾಗರಾಜರ  ಕೃತಿಗಳ ಅಂತರಾಳವನ್ನು  ಅಳೆಯಬಲ್ಲವರಾಗಿದ್ದ   ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು – "ತ್ರಿಗುಣಗಳ ತೆರೆಯನ್ನು ತೆರೆದಾಗ ತಾನೇ ಭಗವಂತನ ದರ್ಶನವಾಗುತ್ತೆ. ಅದಕ್ಕಾಗಿಯೇ ದೇವಾಲಯಗಳಲ್ಲಿ ಭಗವಂತನ ಪ್ರತಿನಿಧಿಯಾದ ಅರ್ಚಕನು ದೇವರ ಮುಂದೆ ಹಾಕಿರುವ ಮೂರು ಬಣ್ಣದ ತೆರೆಯನ್ನು  ತೆರೆದು, ದೇವತಾಮೂರ್ತಿಯ ದರ್ಶನವನ್ನು ಮಾಡಿಸುವ ಸಂಪ್ರದಾಯ ಬಂದಿದೆ" ಎಂದು. 

ರಾಮ ದರ್ಶನದತ್ತ ..

ತ್ರಿಗುಣಾತ್ಮಕವಾದ ಪ್ರಕೃತಿಯಿಂದ ಮುಕ್ತರಾಗಿ ಒಳನಗರವಾದ ಅ-ಯೋಧ್ಯೆಯನ್ನು ಭಾರತದ  ಮಹರ್ಷಿಗಳು  ಧ್ಯಾನದಿಂದ ಮುಟ್ಟಿದರು. ಅಂತರಂಗದಲ್ಲಿ ದೇವತೆಗಳನ್ನು, ತ್ರಿಮೂರ್ತಿಗಳನ್ನು  ಅವರವರ ಕ್ಷೇತ್ರಗಳಲ್ಲಿ ದರ್ಶನ ಮಾಡಿದರು.  ಯುದ್ಧದ ಮಾತಿಲ್ಲದ, ಹೃದಯಗಹ್ವರದ ಅ-ಯೋಧ್ಯೆಯಲ್ಲಿ , ಆತ್ಮಾರಾಮನ್ನು ದರ್ಶನಮಾಡಿದರು. ಭಾರತಮಾತೆಯ ಹೃದಯ ಸ್ಥಾನದಲ್ಲಿರುವ ಹೊರನಗರಕ್ಕೆ ಅದೇ ಹೆಸರನ್ನಿಟ್ಟು, ಅಂತರ್ದರ್ಶನದ ಪ್ರತಿನಿಧಿಯಾಗಿ ಗುರುತಿಸಿದರು. ದೇವಾಲಯದ ಮೂರ್ತಿಯನ್ನೂ ವಿಧಿವತ್ತಾಗಿ ಸ್ಥಾಪಿಸಿ, ಪೂಜಾ ಕ್ರಮವನ್ನೂ ವಿಧಿಸಿದರು. ಅಂತೆಯೇ ಸಂತರು ಗಾನ ಮಾಡಿದ ಕೃತಿಗಳೂ ಅಂತರ್ದರ್ಶನದ ಹೊರಗಿನ ರೂಪಗಳೇ.

 ಪೂಜೆ, ಧ್ಯಾನ, ನಾಮಸಂಕೀರ್ತನೆ ಇತ್ಯಾದಿ ಆತ್ಮಕಲ್ಯಾಣಕ್ಕಾಗಿ ಬೇಕಾದ ಶಾಸ್ತ್ರ ಸಂಪ್ರದಾಯಗಳೆಲ್ಲವೂ ಒಟ್ಟುಗೂಡಿರುವ ಜಾಗವೇ ದೇವಾಲಯ. ದೇವತಾಮೂರ್ತಿಯ ದರ್ಶನ ಭಗವದನುಗ್ರಹವನ್ನು ಕೂಡಿಕೊಳ್ಳುವ ಸಾಂಪ್ರದಾಯಿಕ ವಿಧಿ. ಎಲ್ಲರಿಗೂ ಅಧಿಕಾರವಿರುವ. ಭಕ್ತಿಮಾರ್ಗವನ್ನಪ್ಪಿದರೆ, ಪ್ರಕೃತಿಯ ಪರಿಷ್ಕರಣದಿಂದ ಅಂತರಂಗದ ಮೋಕ್ಷಮಾರ್ಗ ತೆರೆಯುವುದೆಂಬುದೇ ಸಂತರ ಒಟ್ಟಾರೆ ಅಭಿಪ್ರಾಯ. (ರಾಮಲಲ್ಲನ) ಬಾಲರಾಮನ ದರ್ಶನಕ್ಕಾಗಿ ಪಾದಬೆಳೆಸೋಣ. ಕ್ಯಾಮರ ಚಿತ್ರವನ್ನು ಹಿಡಿಯುವಂತೆ, ದೇವತಾಮೂರ್ತಿಯ ಚಿತ್ರವನ್ನು ಮನಸ್ಸಿನಲ್ಲಿ ಶುಭಾವಲಂಬನೆಯಾಗಿ ನಿಲ್ಲಿಸಿಕೊಂಡು, ಸಾತ್ವಿಕಗುಣವನ್ನು ಅನುಗ್ರಹಿಸುವಂತೆ ಪ್ರಾರ್ಥಿಸೋಣ.

ಸೂಚನೆ: 4/07/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.

ವಿವಾಹದಪೂರ್ವದಲ್ಲಿ ಮಾಡುವ ‘ಕಾಶೀಯಾತ್ರೆ’ ಯ ವಿಶೇಷತೆ (Vivahadapurvadalli Maduva Kasiyatreya Visheshate)

ಗುರುಕುಲದಲ್ಲಿ ವೇದ ಮತ್ತು ಅದರ ಮರ್ಮವನ್ನು ಅರಿತು, ಅಂತರಂಗದಲ್ಲಿ ಭಗಂವಂತನನ್ನು ಸಾಕ್ಷಾತ್ಕರಿಸಿಕೊಳ್ಳಬಲ್ಲ ಒಬ್ಬ ಋಷಿತುಲ್ಯನಾದ ವರನು ವಿವಾಹಕ್ಕೆ ಮುಂದಾಗುತ್ತಾನೆ. ವಿವಾಹದ ಅನೇಕ ಘಟ್ಟಗಳಲ್ಲಿ ಕಾಶೀಯಾತ್ರೆಯ ಒಂದು ಸಂದರ್ಭ. ಇಲ್ಲಿ ವರನು ಕಾಶಿಗೆ ಹೋಗುತ್ತಾನೆ. ಆಗ ಒಬ್ಬ ಕನ್ಯಾಜನಕನು ಅವನನ್ನು ತಡೆಯುತ್ತಾನೆ. 'ನೀನು ಒಬ್ಬನೇ ಹೋಗುವುದು ಬೇಡ. ನನ್ನ ಮಗಳನ್ನು ವಿವಾಹ ಮಾಡಿಕೊಂಡು ಸಭಾರ್ಯನಾಗಿ ಕಾಶಿಗೆ ಹೋಗಿ ನನ್ನ ಮಗಳನ್ನು ಉದ್ಧರಿಸು' ಎಂದು ಆ ಹುಡುಗನನ್ನು ತಡೆದು ತನ್ನ ಕನ್ಯೆಯನ್ನು ಅವನಿಗೆ ಧಾರೆ ಎರೆದು ಕೊಡುವ ಪದ್ಧತಿ ಇದೆ. ಇಲ್ಲಿ ಕಾಶೀ ಎಂದರೆ ನಾವು ಹೊರಗಡೆ ಕಾಣುವ ಒಂದು ಪವಿತ್ರ ಕ್ಷೇತ್ರ ಮಾತ್ರವಲ್ಲ. ಯಾವ ಭ್ರೂಮಧ್ಯಸ್ಥಾನವನ್ನು 'ಕಾಶೀ' ಎಂದು ಕರೆಯುತ್ತಾರೋ ಅಂತಹ ಕಾಶಿಯಲ್ಲಿರುವ ವಿಶ್ವನಾಥನನ್ನು ದರ್ಶನ ಮಾಡಿದ ವರನು ತನ್ನ ವಿದ್ಯಾಬಲದಿಂದ ತಾನು ತನ್ನ ಯಾವ ಜೀವನದ ಪರಾಕಾಷ್ಠೆಯನ್ನು ತಲುಪಿರುತ್ತಾನೋ ಅಂತಹ ಸ್ನಾತಕನಿಗೆ ಕನ್ಯೆಯನ್ನು ಉದ್ವಹಿಸಿ ಅವಳಿಗೂ ಕಾಶಿಯನ್ನು-ವಿಶ್ವನಾಥನನ್ನು ತೋರಿಸು ಎಂದು ಕೇಳಿಕೊಳ್ಳುವ ಒಂದು ವಿಧಾನ. ಇದೂ ಕೂಡಾ ಯಾವುದೋ ಕಾಲಘಟ್ಟದ ವಿಷಯ. ಇತ್ತೀಚಿನ ದಿನಗಳಲ್ಲಿ ಈ ಕಾಶಿಯಾತ್ರೆಯನ್ನು ನಾಟಕದಲ್ಲಿ ಒಂದು ಅಂಕವನ್ನು ತೋರಿಸುವಂತೆ ಮಾಡಿ ತೋರಿಸುವ ಪರಿ ಬಂದಿದೆ.


ಒಂದು ಕಾಲದಲ್ಲಿ ಭಾರತದಲ್ಲಿ ವೇದವೆಂಬುದು ಯಾವ ಅರ್ಥ ಮತ್ತು ಗಾಂಭೀರ್ಯದಿಂದ ಕೂಡಿತ್ತೋ ಅದು ಇಂದು ಕೇವಲ ಚೇಷ್ಟೆಯಾಗಿ, ಸ್ವಾರ್ಥಕ್ಕಾಗಿ, ಅಥವ ಕೇವಲ ಧನಾಕಾಂಕ್ಷೆಗೆ ಸೀಮಿತವಾಗಿ ಅರ್ಥವನ್ನು ಕಳೆದುಕೊಳ್ಳುತ್ತಿದೆ. ಈ ವೇದದಿಂದಾಗಿಯೇ ನಮ್ಮ ದೇಶ 'ಭಾರತ' (ಭಾ-ಬೆಳಕು, ರತ-ತಲ್ಲೀನರಾದವರು) ಎಂದು ಅನ್ನಿಸಿಕೊಂಡಿದೆ. ಭಾರತದ ಋಷಿಮಹರ್ಷಿಗಳು ವೇದಕ್ಕಾಗಿ ತಮ್ಮ ಜೀವನವನ್ನು ಧಾರೆ ಎರೆದರು. ಅದರಿಂದಲೇ ತಮ್ಮ ಜೀವನದ ಸಾರ್ಥಕತೆಯನ್ನು ಕಂಡುಂಡರು. ತಾವು ಈ ವೇದವಿದ್ಯೆಯಿಂದ ಯಾವ ಪರಮಾನಂದವನ್ನು ಕಂಡರೋ ಅದನ್ನು ತಾವು ಮಾತ್ರ ಅನುಭವಿಸದೇ ಲೋಕಕಾರುಣ್ಯದಿಂದ ಹಾಗೇ ನಮಗೆ ಉಣಿಸಿದರು. ಈ ಪರಂಪರೆ 'ಗುರುಕುಲ' ಎಂಬ ಶಿಸ್ತುಬದ್ಧವಾದ ಶಿಕ್ಷಣದಿಂದ ಇತ್ತೀಚಿನ ದಿನಗಳ ವರೆಗೆ ಮುನ್ನಡೆ ಇಟ್ಟುಕೊಂಡು ಬಂದಿತ್ತು. ಒಂದು ಕಾಲದವರೆಗೆ ಈ ವೇದಾಧ್ಯಯನಪರಂಪರೆ ಅತ್ಯಂತ ಉಚ್ಛ್ರಾಯಸ್ಥಿತಿಯಲ್ಲಿತ್ತು. ಅಧಿಕಾರಿಯಾದವನು ವೇದಾಧ್ಯಯನವನ್ನು ಮಾಡುವುದು ತನ್ನ ಕರ್ತವ್ಯವೆಂದು ಭಾವಿಸಿದ್ದ. "ನಿಷ್ಕಾರಣಃ ಷಡಂಗೋ ವೇದೋ ಅಧ್ಯೇತವ್ಯೋ ಜ್ಞೇಯಶ್ಚ" ಎಂಬಂತೆ ಯಾವುದೇ ಲೌಕಿಕಕಾಮನೆಗಳ ಪೂರ್ತಿಗಾಗಿ ವೇದಾಧ್ಯಯನವನ್ನು ಮಾಡದೇ ವೇದವನ್ನು ಮರ್ಮಸಹಿತ ತಿಳಿದುಕೊಳ್ಳಬೇಕೆಂಬ ಏಕೈಕಧ್ಯೇಯದಿಂದ ಪ್ರತಿಯೊಬ್ಬ ಅಧಿಕಾರಿಯೂ ಪ್ರವೃತ್ತನಾಗುತ್ತಿದ್ದ. ಎಂತಹ ಮೌಲ್ಯಯುತವಾದ ವಸ್ತುವೂ ಎರಡು ಕಾರಣಗಳಿಂದ ಕ್ರಮೇಣ ಮರೆಯಾಗುವ ಸಂದರ್ಭ ಇದೆ. ಒಂದು ಅಧಿಕಾರಿಯಾದವನು ಅದನ್ನು ಬಳಸದಿದ್ದಾಗ, ಮತ್ತು ಅನಧಿಕಾರಿಯಾದವನು ಅದನ್ನು ಬಳಸಿದಾಗ. ವೇದಗಳಲ್ಲೆವೂ ಇಂದು ಕ್ಷೀಣಿಸಿ, ಬರಡಾಗಿ, ಸಾರವನ್ನು ಕಳೆದುಕೊಂಡ ಶುಷ್ಕವೃಕ್ಷವಾಗಿ ನಮ್ಮೆದುರಿಗೆ ಕೆಲವು ಮಾತ್ರ ನಿಂತಿವೆ. ಇನ್ನು ಎಷ್ಟೋ ಬಿದ್ದು ಪ್ರಕೃತಿಯಲ್ಲಿ ಲೀನವಾಗಿವೆ. ಯಾವುವು ನಮ್ಮೆದುರಿಗೆ ಒಣಕಲಾಗಿ ಸಾರವನ್ನು ಕಳೆದುಕೊಂಡಿವೆಯೋ ಅವುಗಳಿಗೆ ಜೀವವನ್ನು ತುಂಬುವ ಕಾರ್ಯ ಮೊದಲಾಗಬೇಕು. ಅನಂತರದಲ್ಲಿ ಯಾವೆಲ್ಲಾ ವೇದಗಳು ಈ ಸೃಷ್ಟಿಯಲ್ಲಿ ಅಡಗಿವೆಯೋ ಅವುಗಳನ್ನು ಮೇಲಕ್ಕೆತ್ತುವ ಕಾರ್ಯ ಆರಂಭವಾಗಬೇಕು. ಆದರೆ ಇದು ಕೆರೆಯ ಊಳೆತ್ತುವ ಕಾರ್ಯದಷ್ಟು ಸುಲಭಸಾದ್ಯವಲ್ಲ. ಇದಕ್ಕೆ ಬೇಕು ಕಾರ್ಯದಲ್ಲಿ ಏಕಾಗ್ರತೆ, ನಿಷ್ಠೆ. ನಮ್ಮ ಪೂರ್ವಿಕರು ವೇದಗಳನ್ನು ಸಂರಕ್ಷಿಸಲು ಹೇಗೆಲ್ಲ ಪಣತೊಟ್ಟರೋ  ಅದಕ್ಕಿಂತಲೂ ಹೆಚ್ಚು ಪರಿಶ್ರಮ ಇಂದು ಬೇಕಾಗಿದೆ. ಹಿಂದೊಮ್ಮೆ ಈ ಕಾರಣಕ್ಕಾಗಿಯೇ ವಿಶ್ವದ ಜನರನ್ನು ಭಾರತ ಆಕರ್ಷಿಸುತ್ತಿತ್ತು. ಆದರೆ ಇಂದಿನ ಜನಾಂಗ ಇವುಗಳನ್ನೆಲ್ಲ ಮರೆತು ಭಾರತವನ್ನು ಬಿಟ್ಟು ಬೇರೆ ಕಡೆ ಸುಖದ ತಾಣಕ್ಕಾಗಿ ಪರಿತಪಿಸುತ್ತಿದೆ. ಆದರೆ ನಿಜವಾದ ಸುಖ ಭಾರತೀಯ ವಿದ್ಯೆ ಕಲೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಾಧ್ಯ. 


ಇಂತಹ ವೇದ ಮತ್ತು ಅದರ ಶಾಖೆಗಳನ್ನು ಆಮೂಲಾಗ್ರವಾಗಿ ಅಧ್ಯಯನವನ್ನು ಮಾಡಿ ಅದರ ತತ್ತ್ವವನ್ನು ತಿಳಿದವನು ಮಾತ್ರ ಅಧ್ಯಯನಸಂಪನ್ನ ಎನಿಸಿಕೊಳ್ಳುತ್ತಾನೆ. ಅವನು ಶ್ರೇಷ್ಠನೂ, ಜ್ಞಾನಿಯೂ, ಅಗ್ರಗಣ್ಯನೂ ಮತ್ತು ವರನೂ ಆಗಿರುತ್ತಾನೆ. ವರ ಎಂಬ ಪದಕ್ಕೆ ಶ್ರೇಷ್ಠ ಎಂಬ ಅರ್ಥ ಈ ಬಗೆಯ ಅಧ್ಯಯನ ಸಂಪತ್ತಿನಿಂದ ಅನ್ವಿತವಾಗುತ್ತದೆ. ಆತನು ಮಾತ್ರ ತನ್ನ ಮುಂದಿನ ಗೃಹಸ್ಥಜೀವನದ ಭವ್ಯವಾದ ಭವಿತವ್ಯವನ್ನು ಕಾಣಲು ಸಾಧ್ಯ.


ಸೂಚನೆ: 4/07/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.

Tuesday, July 2, 2024

ಋಷಿ-ಪ್ರಾರ್ಥನೆ: ಸ್ತ್ರೀರತ್ನ-ಸೃಷ್ಟಿ (Rshi Prarthane: Striratna-Srishti)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ಅಲ್ಲಿಗೆ ಯಜ್ಞಗಳು ನಿಂತವು. ಸ್ವಾಧ್ಯಾಯವು ನಿಂತಿತು. ರಾಜರು ಕೊಲೆಯಾದರು. ಬ್ರಾಹ್ಮಣರು ಹತರಾದರು. ಭೂಮಿಯ ಮೇಲೆ ಉತ್ಸವಗಳೂ ಯಜ್ಞಗಳೂ ಉತ್ಪಾಟಿತವಾದವು, ಎಂದರೆ ಕಿತ್ತೊಗೆಯಲ್ಪಟ್ಟವು. ಎಲ್ಲ ಕಡೆಯೂ ಹಾಹಾಕಾರ, ಭಯ-ಭೀತತೆಗಳು ಉಂಟಾದವು.

ಅಂಗಡಿಗಳಲ್ಲಿ ಕೊಳ್ಳುವುದು-ಮಾರುವುದುಗಳೂ ಕುಲಗೆಟ್ಟವು. ದೇವ-ಕಾರ್ಯಗಳು ನಿಂತುಹೋದವು. ಪುಣ್ಯ-ವಿವಾಹಗಳೂ ಇಲ್ಲವಾದವು. ಕೃಷಿಯು ಕೆಟ್ಟಿತು. ಗೋರಕ್ಷೆಯು ಹಾಳಾಯಿತು. ನಗರಗಳೂ ಆಶ್ರಮಗಳೂ ಧ್ವಂಸಗೊಂಡವು. ಎಲ್ಲಿ ನೋಡಿದರಲ್ಲಿ ಮೂಳೆಗಳು, ಅಸ್ಥಿಪಂಜರಗಳು ಚೆಲ್ಲಾಡಿದ್ದು, ಭೂಮಿಯೇ ಉಗ್ರ-ದರ್ಶನವಾಯಿತು. ಇನ್ನು ಪಿತೃ-ಕಾರ್ಯವೆಂಬುದೆಲ್ಲುಳಿಯಿತು? ವಷಟ್ಕಾರ-ಮಂಗಳಗಳು ಮುಗಿದವು. ಜಗತ್ತೆಲ್ಲವೂ ಭಯಾನಕವಾಗಿಬಿಟ್ಟು ನೋಡಲೇ ಆಗದಂತಾಯಿತು.

ಸುಂದ-ಉಪಸುಂದರ ಆ ದುಷ್ಕೃತ್ಯಗಳನ್ನು ಕಂಡು ಸೂರ್ಯ-ಚಂದ್ರರೇ ಖಿನ್ನರಾದರು. ಗ್ರಹಗಳು, ತಾರೆಗಳು, ನಕ್ಷತ್ರಗಳು, ದೇವತೆಗಳು - ಇವರೂ ಖಿನ್ನರಾದರು. ಹೀಗೆ ತಮ್ಮ ಕ್ರೂರ-ಕಾರ್ಯಗಳಿಂದ ಎಲ್ಲಾ ದಿಕ್ಕುಗಳನ್ನು ಗೆದ್ದು, ಆ ದೈತ್ಯರಿಬ್ಬರು ಶತ್ರು-ರಹಿತರೇ ಆಗಿಬಿಟ್ಟು ಕುರುಕ್ಷೇತ್ರವನ್ನೇ ತಮ್ಮ ನಿವಾಸ-ಸ್ಥಾನವನ್ನಾಗಿ ಮಾಡಿಕೊಂಡುಬಿಟ್ಟರು.

ಸುಂದೋಪಸುಂದರಿಂದಾದ ಉಪಟಳ ತೀವ್ರವಾಯಿತು. ಅದನ್ನು ಕಂಡ ಎಲ್ಲ ದೇವರ್ಷಿಗಳು, ಸಿದ್ಧರು, ಪರಮರ್ಷಿಗಳು - ಇವರಿಗೆಲ್ಲಾ ಉತ್ಕಟವಾದ ಖೇದವಾಯಿತು. ಅವರುಗಳೆಲ್ಲರೂ ಜಿತ-ಕ್ರೋಧರು, ಜಿತಾತ್ಮರು, ಜಿತೇಂದ್ರಿಯರು. ಎಂದರೆ ಕೋಪವನ್ನು ಗೆದ್ದವರು, ಮನಸ್ಸನ್ನು ಗೆದ್ದವರು, ಇಂದ್ರಿಯಗಳನ್ನು ಗೆದ್ದವರು. ಆದರೂ ಜಗತ್ತಿನ ಬಗ್ಗೆ ಅವರಿಗೆ ದಯೆಯು ಉಕ್ಕಿ ಬಂದಿತು. ಎಂದೇ ಬ್ರಹ್ಮನ ಭವನಕ್ಕೆ ಅವರೆಲ್ಲರೂ ಹೋದರು. ಅಲ್ಲಿ ಪಿತಾಮಹನನ್ನು, ಎಂದರೆ ಬ್ರಹ್ಮನನ್ನು, ಕಂಡರು. ಆಸೀನನಾಗಿದ್ದ ಆತನ ಸುತ್ತಲೂ ದೇವತೆಗಳು, ಬ್ರಹ್ಮರ್ಷಿಗಳು, ಸಿದ್ಧರು ಇದ್ದರು.

ಅಲ್ಲಿಯೇ ಮಹಾದೇವನೂ, ಅಗ್ನಿ-ವಾಯುಗಳೂ, ಚಂದ್ರ-ಸೂರ್ಯರೂ, ಇಂದ್ರ-ಪರಮೇಷ್ಠಿಗಳೂ ಇದ್ದರು. ವೈಖಾನಸರು, ವಾಲಖಿಲ್ಯರು, ಮುಂತಾದ ಮಹರ್ಷಿಗಳು ದೀನರಾಗಿ ಅಲ್ಲಿಗೆ ಆಗಮಿಸಿದರು. ಸುಂದೋಪಸುಂದರ ಕೃತ್ಯಗಳನ್ನೆಲ್ಲವನ್ನೂ ಹೇಳಿದರು. ಅವರಿಬ್ಬರು ಮಾಡಿದ ಸೂರೆ, ಎಸಗಿದ ದುಷ್ಕೃತ್ಯಗಳು, ಅದನ್ನು ಮಾಡಿದ ಕ್ರಮ - ಇದೆಲ್ಲವನ್ನೂ ಪಿತಾಮಹನಿಗೆ ತಿಳಿಸಿದರು.

ಆಗ ದೇವತೆಗಳೂ ಪರಮರ್ಷಿಗಳೂ ಅದೇ ವಿಷಯವನ್ನೇ ಮುಂದಿಟ್ಟುಕೊಂಡು ಬ್ರಹ್ಮನನ್ನು ಪ್ರೇರಿಸಿದರು.ಆಗ ಬ್ರಹ್ಮನು ಅವರೆಲ್ಲರ ಮಾತನ್ನು ಕೇಳಿದನು. ಕ್ಷಣಕಾಲ ಯೋಚಿಸಿದನು. ತನ್ನ ಕರ್ತವ್ಯವನ್ನು ನಿಶ್ಚಯಿಸಿದನು. ಅವರಿಬ್ಬರ ಸಂಹಾರವನ್ನು ಕುರಿತಾಗಿ ಚಿಂತಿಸಿದನು; ವಿಶ್ವಕರ್ಮನನ್ನು ಬರಮಾಡಿಕೊಂಡನು. ವಿಶ್ವಕರ್ಮನು ಬರಲಾಗಿ, ಬ್ರಹ್ಮನು ಆತನಿಗೆ ಆದೇಶವಿತ್ತನು. "ಮನಸ್ಸನ್ನು ಸೂರೆಗೊಂಡುಬಿಡುವಂತಹ ತರುಣಿಯೊಬ್ಬಳನ್ನು ಸೃಷ್ಟಿಮಾಡು" - ಎಂದನು.

ಆಗ ಆ ವಿಶ್ವಕರ್ಮನು ಹಾಗೆಯೇ ಮಾಡಿದನು. ಮೂರೂ ಲೋಕಗಳಲ್ಲಿ ಸ್ಥಾವರವೋ ಜಂಗಮವೋ, ಎಂದರೆ ಚಲನವಿಲ್ಲದವೋ, ಚಲನವುಳ್ಳವೋ, ಅದಾವುದೇ ಜೀವಿಯಿರಲಿ, ಅವಲ್ಲಿ ಯಾವಯಾವದು ದರ್ಶನೀಯವೋ, ಅದದೆಲ್ಲವನ್ನೂ ಈ ಶರೀರದಲ್ಲಿ ಸಂಗ್ರಹ ಮಾಡಿಟ್ಟನು. ಅವಳ ಶರೀರದಲ್ಲಿ ಕೋಟಿಗಟ್ಟಲೆ ರತ್ನಗಳನ್ನು ಸಮಾವೇಶಗೊಳಿಸಿದನು. ಸರ್ವ-ರತ್ನ-ರಾಶಿಮಯಿಯಾದ ಆ ನಾರಿಯನ್ನು ದೇವ-ರೂಪಿಣಿಯಾಗಿ ಸೃಷ್ಟಿಸಿದನು. ಮಹಾ-ಪ್ರಯತ್ನದಿಂದ ವಿಶ್ವಕರ್ಮನು ಅವಳನ್ನು ಸೃಷ್ಟಿಸಿದನಲ್ಲವೇ? ಎಂದೇ, ಮೂರೂ ಲೋಕಗಳ ನಾರಿಯರಲ್ಲಿ ಅವಳು ಅಪ್ರತಿಮಳೆನಿಸಿದಳು. ಅವಳ ಶರೀರದಲ್ಲಿ ರೂಪ-ಸಂಪತ್ತಿನಿಂದ ಕೂಡಿರದ ಒಂದು ಸೂಕ್ಷ್ಮವಾದ ಎಡೆಯೂ ಇರಲಿಲ್ಲ.

ಹಾಗೂ ಅವಳತ್ತ ಎಲ್ಲಿಯೇ ದೃಷ್ಟಿಬೀರಿದರೂ ಅದು ಅಲ್ಲಿ ನೆಡದಿರುವಂತಿರಲಿಲ್ಲ. ಕಾಮರೂಪಳಾದ, ಎಂದರೆ ಇಷ್ಟಪಟ್ಟ ರೂಪವನ್ನು ಧರಿಸಬಲ್ಲ, ಲಕ್ಷ್ಮಿಯೇ ಮೈತಾಳಿಬಂದಂತಿದ್ದಳು, ಆಕೆ!

ಸೂಚನೆ : 30/6/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ96 (Yaksha prashne 96)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ –  95 ಋಷಿಗಳು ಹೇಳಿದ ಸ್ಥೈರ್ಯ ಯಾವುದು ?

ಉತ್ತರ - ಸ್ವಧರ್ಮದಲ್ಲಿ ಇರುವುದೇ ಸ್ಥೈರ್ಯ. 

ಈ ಪ್ರಶ್ನೆಯಲ್ಲಿ ಯಕ್ಷನು ಸ್ಥೈರ್ಯ ಅಥವಾ ಧೈರ್ಯ ಎಂದರೇನು ? ಎಂಬ ಬಗ್ಗೆ ವಿವರಣೆಯನ್ನು ಕೇಳಿದಂತಿದೆ. ಅದಕ್ಕೆ ಧರ್ಮಜ ಉತ್ತರ ಸ್ಪಷ್ಟವಾಗಿದೆ. ಸ್ವಧರ್ಮದಲ್ಲಿ ಇರುವುದೇ ಧೈರ್ಯ ಎಂಬುದು. ಹಾಗಾಗಿ ಇಲ್ಲಿ ನಾವು ಅತಿಮುಖ್ಯವಾಗಿ ಗಮನಿಸಬೇಕಾದುದು ಸ್ವಧರ್ಮದ ವಿಷಯವನ್ನು. 'ಸ್ವಧರ್ಮ' ಎಂಬ ವಿಷಯ ಅರ್ಥವಾದರೆ ಅದರಿಂದ ಧೈರ್ಯ ಹೇಗೆ ಸಾಧ್ಯವಾಗಬಹುದು ಎಂಬುದೂ ಅರಿವಿಗೆ ಬರುತ್ತದೆ. ಹಾಗಾದರೆ ಸ್ವಧರ್ಮ ಎಂದರೇನು? 

ಸ್ವಧರ್ಮ ಎಂದರೆ ಅದರದರ ಧರ್ಮ ಎಂದರ್ಥ. ಇಲ್ಲಿ ಧರ್ಮ ಎಂಬ ಶಬ್ದಕ್ಕೆ ಅದರದರ ನೈಜಸ್ವಭಾವ ಅಥವಾ ಸ್ವರೂಪ ಅಥವಾ ಕಂಡೀಶನ್. ಆದ್ದರಿಂದ ಪ್ರತಿಯೊಂದು ಪ್ರದಾರ್ಥ ಅಥವಾ ವಸ್ತುವಿನ ಸ್ವಭಾವದ ಪರಿಚಯವಾಗಬೇಕಾದುದು ಅನಿವಾರ್ಯವಷ್ಟೆ. ಪದಾರ್ಥವನ್ನು ಸೃಷ್ಟಿ ಮಾಡುವಾಗ ಪದಾರ್ಥಕ್ಕೆ ಯಾವ ಉದ್ದೇಶವಿತ್ತೋ, ಅದನ್ನು ಪೂರ್ಣ ಮಾಡುವಂತಿದ್ದರೆ ಅದು ಅದರದರ ಸಹಜತೆಯಲ್ಲಿದೆ ಎಂದರ್ಥ. ಹಾಗಿದ್ದಾಗ ಮಾತ್ರ ಆ ವಸ್ತುವಿನಿಂದ ನಮ್ಮ ಉದ್ದೇಶಿತವಾದ ಕಾಮನೆ ಈಡೇರುತ್ತದೆ. ಇದಕ್ಕೆ ಕಾರಣವಿಷ್ಟೇ ಅದು ಸ್ವಧರ್ಮದಲ್ಲಿ ಎಂಬುದು. 

ಋಷಿಗಳು ಯಾವ ಬಗೆಯ ಸ್ವಧರ್ಮವನ್ನು ಯಾವುದಕ್ಕೆ ಹೇಳಿದ್ದಾರೆ? ಎಂಬುದಕ್ಕೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಮಾತು ಪುಷ್ಟಿಯನ್ನು ಕೊಡುತ್ತದೆ. "ಶ್ರೇಯಾನ್ ಸ್ವಧರ್ಮಃ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್" - ತನ್ನ ತನ್ನ ಧರ್ಮವನ್ನು ಆಚರಿಸುವುದರಲ್ಲಿ ಉಂಟಾಗುವ ಸ್ವಲ್ಪ ದೋಷವಾದರೂ ಪರಧರ್ಮದ ಆಚರಣೆಯ ಬಹುಗುಣಕ್ಕಿಂತಲೂ ಉತ್ತಮ" ಎಂಬುದಾಗಿ. ಮಾನವನ ಮುಖ್ಯಧ್ಯೇಯವೆಂದರೆ ಮೋಕ್ಷ. ಇದಕ್ಕೆ ಸಾಧನೀಭೂತವಾದ ಯಾವೆಲ್ಲ ವಿಷಯಗಳಿವೆಯೋ ಅವೆಲ್ಲವೂ ಅದದರ ಸಹಜತೆಯಲ್ಲಿ ಇರಬೇಕಾಗುತ್ತದೆ. ಅತ್ಯಂತ ಮುಖವಾದ ಸಾಧನವೆಂದರೆ ನಮ್ಮ ಶರೀರವಾಗಿದೆ. ಮಾನವಶರೀರವನ್ನೇ ಬಳಸಿಕೊಂಡು ಇದೇ ಜನ್ಮದಲ್ಲೇ ಮೋಕ್ಷವನ್ನು ಸಾಧಿಸಬೇಕಾಗಿದೆ.  ಹಾಗಾಗಿ ಈ ಶರೀರವು ಅದರ  ಕಂಡೀಶನ್ನಲ್ಲಿ ಇರುವುದರ ಬಗ್ಗೆ ವಿವರಣೆಯನ್ನು ಕೊಟ್ಟಿದ್ದನ್ನು ಶ್ರೀರಂಗ ಮಹಾಗುರುಗಳು ಆಯುರ್ವೇದದಲ್ಲಿ ಹೇಳಿರುವ ಒಂದು ಶ್ಲೋಕವನ್ನು ಹೇಳುತ್ತಿದ್ದರು. ಅದಾವುದೆಂದರೆ " ಸಮದೋಷಃ ಸಮಾಗ್ನಿಶ್ಚ ಸಮಧಾತುಮಲಕ್ರಿಯಃ । ಪ್ರಸನ್ನಾತ್ಮೇಂದ್ರಿಯಮನಾಃ ಸ್ವಸ್ಥ ಇತ್ಯಭಿಧೀಯತೇ" ಎಂದು. ವಾತ ಪಿತ್ತ ಕಫಗಳೆಂಬ ಮೂರು ಬಗೆಯ ದೋಷಗಳಿಂದ ಕೂಡಿದೆ ಈ ದೇಹ. ಈ ಮೂರರ ಯಾವುದೋ ಬಗೆಯ ಕಾಂಬಿನೇಶನ್ ಇದ್ದರೆ ಮಾತ್ರ ಆ ವ್ಯಕ್ತಿ ಆರೋಗ್ಯವಾಗಿರುತ್ತಾನೆ. ಇವುಗಳಲ್ಲಿ ಯಾವುದೊಂದು ವ್ಯತ್ಯಯವಾದರೂ ಅನಾರೋಗ್ಯ ಉಂಟಾಗುತ್ತದೆ. ವಾತ ಪಿತ್ತ ಕಫದಿಂದ ಬರುವ ರೋಗಗಳು ಶರೀರದ ಆರೋಗ್ಯದ ಸ್ಥಿತಿಯನ್ನು ಹಾನಿ ಮಾಡುತ್ತದೆ. ಅಷ್ಟೇ ಅಲ್ಲ ಮಾನಸಿಕ ಆರೋಗ್ಯವನ್ನೂ ನಾಶ ಮಾಡುತ್ತದೆ. ಶರೀರರವೇ ಧರ್ಮಸಾಧನೆಗೆ ಅತಿಮುಖ್ಯವಾದ ಸಲಕರಣೆ ತಾನೆ! ಶರೀರವು ಮನಸ್ಸು ಇಂದ್ರಿಯ ಬುದ್ಧಿ ಆತ್ಮ ಇವೆಲ್ಲದರ ಸಮಷ್ಟಿರೂಪವಾದುದು. ಇವೆಲ್ಲದರ ಸ್ವಧರ್ಮಸ್ಥಿತಿಯೇ ಆರೋಗ್ಯ ಎನ್ನಲಾಗಿದೆ.  ಯಾವ ವ್ಯಕ್ತಿ ಆರೋಗ್ಯವಂತನಾಗಿರುತ್ತಾನೋ ಆತ ಯಾವ ಕಾರ್ಯವನ್ನು ಬೇಕಾದರೂ ಮಾಡಬಹುದು. ಆ ಕಾರ್ಯಕ್ಕೆ ಬೇಕಾದ ಎಲ್ಲಾ ಬಗೆಯ ಅನುಕೂಲತೆಗಳು ಒದಗಿಬರುತ್ತವೆ. ಆಗ ತಾನೆ ಧೈರ್ಯವು ಬರುತ್ತದೆ. ಧೈರ್ಯವೆಂದರೆ ಸ್ಥಿರವಾದ ಬುದ್ಧಿಯಷ್ಟೇ. ಆರೋಗ್ಯವೇ ಸ್ಥಿರತೆ. ಸ್ವಧರ್ಮವೇ ಸ್ಥಿರತೆ. 

ಸೂಚನೆ : 30/6/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.